Wednesday, September 26, 2012

ಬರ್ಫಿ - ಚಿತ್ರ ವಿಮರ್ಶೆ


ಬರ್ಫಿ - ಆತನೊಬ್ಬ ಕಿವುಡ, ಮೂಗ, ಅವಿದ್ಯಾವಂತ ಹಾಗೂ ಬಡವ. ಇವನ ತಾಯಿ ಈತ ಹುಟ್ಟಿದಾಗಲೇ ಸಾಯುತ್ತಾಳೆ.  ಅಪ್ಪನೇ ಅಮ್ಮನೂ ಆಗಿ ಇವನನ್ನು ಸಾಕುತ್ತಾನೆ.  ಇಷ್ಟೆಲ್ಲಾ ಇದ್ದರೂ ಇವನಲ್ಲಿ ತುಂಟತನಕ್ಕೇನೂ ಕೊರತೆಯಿಲ್ಲ. ತುಂಬಿದ ಜೀವಂತಿಕೆ ಇವನಲ್ಲಿ! ಪದಗಳಲ್ಲಿ ಮಾತನಾಡದಿದ್ದರೂ, ತಾನಾಡಬೇಕೆಂದಿರುವುದನ್ನು ತುಸು ಹೆಚ್ಚೇ ಈತನ ಕಣ್ಣು, ಮೂಗು, ಇನ್ನಿತರ ದೇಹದ ಅಂಗಾಂಗಗಳೆಲ್ಲವೂ ಮಾತನಾಡುತ್ತವೆ. ಸಿಕ್ಕಾಪಟ್ಟೆ ವಾಚಾಳಿ! ರಜೆಗೆಂದು ಇವನ ಊರಿಗೆ ಬಂದ ವಿದ್ಯಾವಂತೆ, ಸುಂದರಿ ಹುಡುಗಿಯೊಬ್ಬಳು, ಈತನ ತುಂಟತನಕ್ಕೆ,  ಈತನಲ್ಲಿನ ಜೀವಂತಿಕೆಗೆ ಮಾರುಹೋಗಿ, ಈಗಾಗಲೇ ಬೇರೊಬ್ಬನೊಟ್ಟಿಗೆ ನಿಶ್ಚಿತಾರ್ಥವಾಗಿದ್ದರೂ, ಈತನನ್ನು ಪ್ರೀತಿಸಲು ಶುರು ಮಾಡುತ್ತಾಳೆ.  ಇಬ್ಬರ ನಡುವೆ ಪ್ರೀತಿ ಅಂಕುರಿಸುತ್ತದೆ. ಮಾತಿಲ್ಲ, ಕಥೆಯಿಲ್ಲ. ಆದರೂ ಇಬ್ಬರೂ ಒಬ್ಬರನ್ನೊಬ್ಬರು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇವಳ ತಾಯಿ, ಇವಳಲ್ಲಿನ ಬದಲಾವಣೆಯನ್ನು ಗುರುತಿಸಿ, ಪ್ರೀತಿ ಮಾಡು ತಪ್ಪಿಲ್ಲ, ಆದರೆ ಮದುವೆ ಮಾತ್ರ ನಿಶ್ಚಿತಾರ್ಥವಾದ  (ಶ್ರೀಮಂತ,  ವಿದ್ಯಾವಂತ ಜೊತೆಗೆ ಈತನಂತೆ ಅಂಗವಿಕಲನಲ್ಲ!) ಹುಡುಗನೊಟ್ಟಿಗೆ ಆಗುವುದು ಒಳ್ಳೆಯದು ಎಂದು ಬುದ್ಧಿಮಾತು ಹೇಳುತ್ತಾಳೆ.  ನಿಶ್ಯಬ್ಧವಾಗಿ ಇಬ್ಬರೂ ಪ್ರೀತಿಸುತ್ತಿದ್ದೀರಿ, ಕೊನೆಗೆ, ನಿಮ್ಮಿಬ್ಬರ ನಡುವಿನ ಈ ನಿಶ್ಯಬ್ದವೇ ನಿಮ್ಮ ಪ್ರೀತಿಯನ್ನು ನುಂಗಿ ಹಾಕುತ್ತದೆ ಎಂಬ ತಾಯಿಯ ಮಾತಿಗೆ ಮರುಳಾಗದಿದ್ದರೂ, ತಂದೆತಾಯಿಯನ್ನು ವಿರೋಧಿಸುವಷ್ಟು ಧೈರ್ಯ ಇಲ್ಲದವಳು ಇವಳು!  ಸಮಾಜದಲ್ಲಿ ಮೇಲು ಸ್ತರದಲ್ಲಿ ಜೀವಿಸಲು ಈತನಲ್ಲಿ ಯಾವುದೇ ಅರ್ಹತೆಗಳು ಇಲ್ಲವೆಂದು ನಂಬಿರುವ ಈ ಹುಡುಗಿಯ ತಂದೆ ತಾಯಿಯ ಬಳಿಯೇ ಹೋಗಿ,  ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ, ಮದುವೆ ಮಾಡಿಕೊಡಿ ಎಂದು ಬೇರೊಬ್ಬರ ಕೈಯಲ್ಲಿ ಬರೆಸಿ ತಂದ ಪತ್ರವನ್ನು ನೀಡುವಷ್ಟು ಧಾರ್ಷ್ಟ್ಯ ಈತನಿಗೆ! ಆಕೆಯ ತಾಯಿ ಬಹು ಜಾಣತನದಲ್ಲಿ ಭಿಕ್ಷೆ ಕೇಳಲು ಬಂದವನೆಂದು ಗಂಡನಲ್ಲಿ ಮರೆಮಾಚುವುದು, ಆಕೆಯ ಮನೆಯಲ್ಲಿನ ವಾತಾವರಣ, ಆಕೆಯ ತಂದೆತಾಯಿಯಷ್ಟು ಸುರಕ್ಷಿತವಾಗಿ ತನಗೆ ನೋಡಿಕೊಳ್ಳಲು ಅಸಾಧ್ಯ ಎಂಬ ಸತ್ಯದ ಅರಿವು, ಆಕೆ ಯಾರನ್ನಾದರೂ ಮದುವೆಯಾಗಲಿ, ಖುಷಿಯಾಗಿದ್ದರೆ ಸಾಕು ಎಂಬ ಮನಸ್ಸು, ತನ್ನ ಪ್ರೀತಿಯನ್ನು ತ್ಯಾಗ ಮಾಡುವಂತೆ ಮಾಡಿಬಿಡುತ್ತದೆ.  ಹಾಗೂ ಆಕೆಯಲ್ಲಿ ಒಳ್ಳೆಯ ಸ್ನೇಹಿತೆಯನ್ನು ಕಾಣಲು ಶುರುಮಾಡಿಬಿಡುತ್ತಾನೆ. ಈಗ ಕಥೆಗೊಂದು ತಿರುವು.  ಅಲ್ಲೊಬ್ಬಳು ಬುದ್ಧಿಮಾಂದ್ಯತೆಯಿರುವ ಹುಡುಗಿ, ಚಿಕ್ಕಂದಿನಿಂದಲೂ ಇವನ ಹಾಗೂ ಆಕೆಯ ನಡುವೆ ಸ್ನೇಹವಿರುತ್ತದೆ.  ಆಕೆಗೊಬ್ಬ ಶ್ರೀಮಂತ ತಾತ.  ಆತ ತೀರಿಹೋದಾಗ, ಇವಳ ಹೆಸರಿಗೆ ಆಸ್ತಿಯೆಲ್ಲವನ್ನೂ ಬರೆದಿರುತ್ತಾನೆ.  ತಾತ ತೀರಿಕೊಂಡ ಮೇಲೆ, ಅಪ್ಪ, ಅಮ್ಮ ಇದ್ದರೂ ಕೂಡ ಅನಾಥಳಾಗುತ್ತಾಳೆ ಇವಳು! ಕಥೆಗೆ ಮತ್ತೊಂದು ತಿರುವು! ಇವನ ತಂದೆ ಕಿಡ್ನಿ ತೊಂದರೆಯಿಂದಾಗಿ ಆಸ್ಪತ್ರೆ ಸೇರುತ್ತಾನೆ. ಈತ ದುಡ್ಡಿಗಾಗಿ ಬ್ಯಾಂಕ್ ದರೋಡೆ ಮಾಡಲು ವಿಫಲನಾಗಿ, ಈ ಬುದ್ಧಿಮಾಂದ್ಯ ಹುಡುಗಿಯನ್ನು ಕಿಡ್ನ್ಯಾಪ್ ಮಾಡುತ್ತಾನೆ.  ಇವಳಲ್ಲಿನ ಮುಗ್ಧತೆಗೆ ಸೋಲುತ್ತಾನೆ.  ತಾತ ತೀರಿಹೋದ ಮೇಲೆ ಅನಾಥ ಪ್ರಜ್ಞೆ ಅನುಭವಿಸುತ್ತಿದ್ದ ಇವಳಿಗೆ ಆಸರೆಯಾಗುತ್ತಾನೆ.  ಹಾ! ಪ್ರೀತಿ ಎಂದರೆ ಹೀಗಿರಬೇಕು ಎನ್ನುವುದಕ್ಕೆ ಇಬ್ಬರೂ ಮಾದರಿಯಾಗುತ್ತಾರೆ. ಗಂಡನನ್ನು ಬಿಟ್ಟು ಬಂದ ಮೊದಲನೇ ನಾಯಕಿ ಮತ್ತೆ ಈತನ ಜೀವನದಲ್ಲಿ ಪ್ರವೇಶ ಪಡೆಯುತ್ತಾಳೆ, ಬುದ್ಧಿಮಾಂದ್ಯತೆಯಿದ್ದರೂ ಪ್ರೀತಿ, ಅಸೂಯೆಗೇನೂ ಕೊರತೆಯಿಲ್ಲ ಇವಳಲ್ಲಿ! ಈತ ಈಗ ಏನು ಮಾಡುತ್ತಾನೆ? ಇದು ಚಿತ್ರದ ಕ್ಲೈಮಾಕ್ಸ್.  

ಆಧುನಿಕ ಅಮ್ಮಂದಿರ ಮನೋಭಾವ ಈ ಚಿತ್ರದಲ್ಲಿ ಚೆಂದವಾಗಿ ನಿರೂಪಿತಗೊಂಡಿದೆ.  ಹಿಂದೆಲ್ಲಾ ಪ್ರೀತಿ ಮಾಡುವುದೇ ತಪ್ಪು, ಅದರಲ್ಲೂ ಅಂಗವಿಕಲ, ಬಡವನನ್ನು ಪ್ರೀತಿ ಮಾಡುವುದು ಅಪರಾಧ, ನಿಶ್ಚಿತಾರ್ಥ ಆದ ಮೇಲೆ ಮದುವೆಯಾದಂತೆಯೇ, ಇನ್ಯಾರನ್ನೂ ಆಕೆ ತಲೆ ಎತ್ತಿ ನೋಡಲು ಕೂಡ ಒಲ್ಲದು!ಎಂಬ ಮನಸ್ಥಿತಿಯಿಂದ, ಪ್ರೀತಿ ಮಾಡು, ತಪ್ಪೇನಿಲ್ಲ, ಜೀವನ ಪೂರ್ತಿ ಅದನ್ನೊಂದು ಸುಂದರ ನೆನಪಾಗಿಟ್ಟುಕೋ, ಆದರೆ ಮದುವೆ ಮಾತ್ರ ಪ್ರಾಕ್ಟಿಕಲ್ ಆಗಿ ಯೋಚಿಸಿ, ನಿನಗೆ ಎಲ್ಲಾ ರೀತಿಯಲ್ಲೂ ಅನುರೂಪನಾದ ಗಂಡನ್ನು ಮಾಡಿಕೋ ಎಂದು ಅಮ್ಮ, ಮಗಳಿಗೆ ತಾನು ಕೂಡ ಹಾಗೇ ಮಾಡಿದ್ದು, ಹಾಗಾಗಿ ಇವತ್ತಿಗೂ ನನ್ನ ಜೀವನ ಸುಂದರವಾಗಿದೆ ಎಂದು ಬುದ್ಧಿ ಹೇಳುತ್ತಾಳೆ.  ಇದನ್ನು ಮಗಳು ಒಪ್ಪದಿದ್ದರೂ ವಿರೋಧವನ್ನು ಕೂಡ ಮಾಡುವುದಿಲ್ಲ. ಈ ಹಿಂದೆ ನಿಶ್ಚಿತಾರ್ಥವಾದ ಹುಡುಗನನ್ನೇ ಮದುವೆಯಾಗುತ್ತಾಳೆ.  ಆದರೆ ಜೀವನ ಅವಳದು ತೀರಾ ಯಾಂತ್ರೀಕೃತವಾಗಿಬಿಡುತ್ತದೆ.  ಗಂಡ, ಹೆಂಡತಿ ಇಬ್ಬರೂ ಕಿವುಡ, ಮೂಗರಲ್ಲದಿದ್ದರೂ ಇಬ್ಬರ ನಡುವೆ ನಿಶ್ಯಬ್ಧ ನೆಲೆಸಿಬಿಡುತ್ತದೆ.  ಈಗಾಗಲೇ ಬರ್ಫಿಯೊಟ್ಟಿಗೆ ಖುಷಿ ಎಂದರೇನು ಎನ್ನುವುದನ್ನು ಕಂಡುಕೊಂಡ ಇವಳಿಗೆ ಬದುಕು ಅಸಹನೀಯವಾಗಿಬಿಡುತ್ತದೆ.  ಅಮ್ಮ ತನ್ನನ್ನು ಟ್ರಾಪ್ ಮಾಡಿದಳು ಎಂಬುದು ಅರ್ಥವಾಗುತ್ತದೆ.  ಯಾವುದೇ ರೀತಿಯ ಕೊರಗಿಲ್ಲದೆ, ಯೋಚಿಸದೆ, ಆರಾಮವಾಗಿ ಗಂಡನನ್ನು ಬಿಟ್ಟು ಬಂದುಬಿಡುತ್ತಾಳೆ. ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು, ಅಪ್ಪ, ಅಮ್ಮನನ್ನು ಎದುರಿಸಿಯಾದರೂ ಪ್ರೀತಿ ಮಾಡಿದವನನ್ನೇ ಮದುವೆಯಾಗಬೇಕು, ಮದುವೆಯಾದರೆ ಮುಗಿಯಿತು, ಇನ್ಯಾವ ಕಾರಣಕ್ಕೂ ಇದು ಬೇರ್ಪಡದ ಸಂಬಂಧ, ಎಂಥ ಸಂದರ್ಭ ಬಂದರೂ ಹೊಂದಿಕೊಂಡು ಹೋಗಬೇಕು,  ಬೇರೆ ಗಂಡನ್ನು ಮದುವೆಯಾದ ಮೇಲೆ ಈ ಹಿಂದೆ ಪ್ರೀತಿಸಿದ ಗಂಡನ್ನು ಯಾವ ಕ್ಷಣದಲ್ಲೂ ನೆನಪಿಗೆ ತಂದುಕೊಳ್ಳುವುದು ಅಕ್ಷಮ್ಯ ಅಪರಾಧ ಎನ್ನುವ ಕಾಲಘಟ್ಟದಿಂದ, ಪ್ರೀತಿ ಯಾರನ್ನೂ / ಎಂಥವರನ್ನೂ ಬೇಕಾದರೂ ಮಾಡಬಹುದು, ಆದರೆ ಮದುವೆಯಾಗುವಾಗ ಮಾತ್ರ ಸೂಕ್ತ ಗಂಡನ್ನು, ಅಪ್ಪ ಅಮ್ಮ ಆರಿಸಿದ ಗಂಡನ್ನು ಮದುವೆ ಮಾಡಿಕೋ, ಮದುವೆಯಾದ ಮೇಲೆ ಇಷ್ಟ ಆಗಲಿಲ್ಲವೇ? ಬಿಟ್ಟು ಬಂದುಬಿಡು, ಎನ್ನುವ ಮನೋಭಾವ ಹುಟ್ಟಿಕೊಂಡಿದೆ ಎಂಬುದು ಯೋಚಿಸಬೇಕಾದ ವಿಷಯ. ಆಧುನಿಕ ಜಗತ್ತಿನಲ್ಲಿ ಆದ್ಯತೆಗಳು ಬದಲಾಗುತ್ತಿವೆ, ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವುದನ್ನು ಚಿತ್ರ ಸೂಚ್ಯವಾಗಿ ತೋರಿಸುತ್ತದೆ. ಅದರಲ್ಲೂ ಸುಶಿಕ್ಷಿತ?! ಯುವ ವರ್ಗ ಇಂತಹ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗದಿರುವಂಥ ಗೊಂದಲದ ವಾತಾವರಣ ಸೃಷ್ಠಿಯಾಗುತ್ತಿದೆ. ಇದಕ್ಕೆ ಆಧುನಿಕ ಮನೋಭಾವದ ಅಪ್ಪ / ಅಮ್ಮಂದಿರು ಕಾರಣವಾಗುತ್ತಿದ್ದಾರೆ. ಒಂದು ಕಡೆ ಹಣಕ್ಕಾಗಿ ಮಗಳನ್ನು ಸಾಯಿಸಿಬಿಡಲು ನಿರ್ಧರಿಸುವ ಅಪ್ಪ / ಅಮ್ಮ , ಮದುವೆಯಾಗಲು ಪ್ರೀತಿ ಮುಖ್ಯವಲ್ಲ ಎನ್ನುವ ಮನೋಭಾವದ ಅಪ್ಪ / ಅಮ್ಮಂದಿರ ಮಧ್ಯದಲ್ಲಿ ಯುವ ವರ್ಗ ಮೂಕವಾಗುತ್ತಿದೆ, ಸರಿಯಾದ ವೇಳೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗದೆ, ಹತಾಶರಾಗುತ್ತಿದ್ದಾರೆ, ಇಷ್ಟೆಲ್ಲದರ ನಡುವೆಯೂ ಯಾವುದೇ ಲೆಕ್ಕಾಚಾರವಿಲ್ಲದೆ, ಮುಗ್ಧತೆಯಿಂದ (ಬುದ್ಧಿಮಾಂದ್ಯರಂತೆ ಕಂಡರೂ) ಜೀವನವನ್ನು ಪ್ರೀತಿಸುವವರಿಗೆ ನೆಮ್ಮದಿ ಇರುತ್ತದೆ, ಸುಖವಾಗಿರುತ್ತಾರೆ ಎಂಬ ಸಂದೇಶದ ಜೊತೆಜೊತೆಗೆ ಪ್ರಸ್ತುತ ಸಮಾಜದಲ್ಲಿ ಸಂಬಂಧಗಳು ತೀರಾ ತೆಳುವಾಗುತ್ತಿದೆಯೇ? ಎಂಬ ಚಿಂತೆಯನ್ನು ಚಿತ್ರವು ಹುಟ್ಟು ಹಾಕುತ್ತದೆ.

ರಣಬೀರ್ ಕಪೂರ್ ಹಾಗೂ ಪ್ರಿಯಾಂಕ ಚೋಪ್ರಾ ಇಬ್ಬರ ಜೀವಮಾನ ಶ್ರೇಷ್ಠ ನಟನೆ.  ಇವರಿಬ್ಬರಿಗೆ ಸರಿಯಾದ ಸಾಥ್ ನೀಡಿರುವುದು ಇಲಿಯಾನ. ಚಾರ್ಲಿ ಚಾಪ್ಲಿನ್ ಚಿತ್ರಗಳಿಂದ ಪ್ರಭಾವಿತಗೊಂಡಂತೆ ಕಂಡುಬಂದರೂ, ಚಾರ್ಲಿ ಚಾಪ್ಲಿನ್ ಚಿತ್ರದ ಅಂತ್ಯದಲ್ಲಿ ವೀಕ್ಷಕರನ್ನು ಕಾಡುವಂಥ ವಿಷಾದ, ಈ ಚಿತ್ರದಲ್ಲಿ ಕಾಡುವುದಿಲ್ಲ. ಇಡೀ ಚಿತ್ರದುದ್ದಕ್ಕೂ ರಣಬೀರ್ ತನ್ನ ನಟನೆಯಿಂದ ಎಲ್ಲರ ಮನಸೆಳೆದುಬಿಡುತ್ತಾರೆ. ಇಂತಹ ಒಬ್ಬ ಪ್ರೇಮಿ ನನಗೆ ಬೇಕು ಎನ್ನುವ ಭಾವ ಮನದಲ್ಲಿ ಮೂಡಿಸಿಬಿಡುತ್ತಾರೆ. ಸ್ವಲ್ಪ ಮಟ್ಟಿಗೆ ಸದ್ಮಾ ಹಾಗೂ ಚಾರ್ಲಿ ಚಾಪ್ಲಿನ್ ಚಿತ್ರಗಳ ಛಾಯೆಯಿದ್ದರೂ ಹಾಗೂ  ಬೇರೆ ಚಿತ್ರಗಳನ್ನು ಕಾಪಿ ಮಾಡಿದ್ದಾರೆಯೋ ಅಥವಾ ಕದ್ದಿದ್ದಾರೆಯೋ ಅಥವಾ ಪ್ರಭಾವಿತಗೊಂಡಿದ್ದಾರೆಯೋ? ಒಟ್ಟಿನಲ್ಲಿ ಎಲ್ಲೂ ಕೂಡ ಈ ಹಿಂದೆ ನಾವು ಈ ಚಿತ್ರಗಳನ್ನು ನೋಡಿದ್ದೇವೆ ಎಂಬುದು ಚಿತ್ರಕಥೆಯ ಓಘದಲ್ಲಿ ನಮಗೆ ಭಾಸವಾಗುವುದೇ ಇಲ್ಲ.  ಅಷ್ಟರಮಟ್ಟಿಗೆ ನಟನೆ, ಚಿತ್ರಕಥೆಯ ನಿರೂಪಣೆ, ನಿರ್ದೇಶನ ಯಶಸ್ವಿಯಾಗಿದೆ.  ಇನ್ನೂ, ಈ ಯಾವುದೇ ಚಿತ್ರಗಳನ್ನು ನೋಡದ ಪ್ರೇಕ್ಷಕನಿಗೆ ಅದ್ಭುತ ಚಿತ್ರವೊಂದು ಅನಾವರಣಗೊಂಡಂತಾಗಿದೆ.  

4 comments:

  1. good review! I have seen the picture so I could enjoy reading it.
    Usha rai

    ReplyDelete
  2. ಬರಹ ಬಹಳ ಚೆನ್ನಾಗಿದೆ ಇಂಚರ ಅವರೆ, ನನಗಂತೂ ಕೊನೆಯ ಪ್ಯಾರ ತುಂಬಾ ಹಿಡಿಸಿತು.

    ReplyDelete