Tuesday, February 12, 2013

ಡ್ರಾಮ ಚಿತ್ರ


ಮುಂಗಾರುಮಳೆ, ಗಾಳಿಪಟ ಚಿತ್ರಗಳಿಂದ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರುಗಳ ಮನ ಗೆದ್ದ ಭಟ್ಟರು, ತಮ್ಮ ಚಿತ್ರಗಳು ಯಾವ ಸೆಂಟರುಗಳಲ್ಲಿ ಓಡಿಲ್ಲವೋ ಆ ಸೆಂಟರುಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮುಂದಿನ ಚಿತ್ರಗಳಲ್ಲಿ ಸಂಭಾಷಣೆ ಬದಲಾಯಿಸುತ್ತಾರೇನೋ ಅನ್ನೋ ಡೌಟು! ;-)  ಮನಸಾರೆ ಮೂಲಕ ಉತ್ತರ ಕರ್ನಾಟಕದವರನ್ನು, ಪಂಚರಂಗಿ ಮೂಲಕ ಮಂಗಳೂರಿನವರನ್ನು ಸೆಳೆದ ಭಟ್ಟರ ‘ಡ್ರಾಮಾ’ ಈ ಬಾರಿ ಮಂಡ್ಯದ ಜನರಿಗಾಗಿ.  ಮಂಡ್ಯದ ಗಂಡು ಅಂಬರೀಶ್ ಚಿತ್ರದ ಸೂತ್ರಧಾರ, ನಾಯಕ ಮತ್ತದೇ ಮಂಡ್ಯದ ಯಶ್! ಜೊತೆಗೆ ಮಂಡ್ಯದ ಭಾಷೆ!  ಆದರೂ ಅಂಬರೀಶ್ ಅವರ ಡೈಲಾಗ್ ಡೆಲಿವರಿ, ರಾಜು ತಾಳಿಕೋಟಿಯವರನ್ನು ನೆನಪಿಗೆ ತರಿಸುತ್ತದೆ, ಯಶ್ ರ ನಟನೆ ನೋಡಿದಾಗ, ಈ ಪಾತ್ರ ಗಣೇಶ್ ಗೆ ಹೆಚ್ಚು ಸೂಕ್ತವಾಗುತ್ತಿತ್ತೇನೋ? ಎಂದೆನಿಸುತ್ತದೆ. ಇಡೀ ‘ಡ್ರಾಮಾ’ ದುದ್ದಕ್ಕೂ ರಾರಾಜಿಸುವುದು ಮಾತ್ರ ನೀನಾಸಂ ಸತೀಶ್, ತಮ್ಮ ಮುಂದಿನ ಚಿತ್ರವಾದ ‘ಲುಸಿಯಾ’ ಗೆ ಈ ಮೂಲಕ ತಳಹದಿ ಹಾಕಿಕೊಂಡಿದ್ದಾರೆ.  ಸುಚೇಂದ್ರ ಪ್ರಸಾದ್ ಅವರಿಗೆ ಬಹಳ ದಿನಗಳ ನಂತರ ಅದ್ಭುತ ಪಾತ್ರ! ಅವರ ಬಾಯಲ್ಲಿ ಶುದ್ಧ ಕನ್ನಡ ಕೇಳಲು ಇಷ್ಟವಾದರೂ, ವೀಕ್ಷಕರಿಗೆ ಅದು ತಲುಪದೇ ಇರುವುದು ಅವರ ಪಾತ್ರರಚನೆಯಲ್ಲಿನ ದೋಷ! ಅಂಬರೀಶ್ ಸೂತ್ರಧಾರನಾಗಿ (ವಯಸ್ಸಿಗೆ ತಕ್ಕಂಥ ಪಾತ್ರ) ಚೆಂದ ಕಾಣುತ್ತಾರೆ. ಭಟ್ಟರು ತಮ್ಮ ಈ ಹಿಂದಿನ ಯಶಸ್ಸಿನ ಎಲ್ಲಾ ಸೂತ್ರಗಳನ್ನು ‘ಡ್ರಾಮಾ’ ದಲ್ಲೂ ಬಳಸಿದ್ದಾರೆ. ಕಥೆಯೇ ಇಲ್ಲದ ಒಳ್ಳೇ ಚಿತ್ರಕಥೆ, ಇಷ್ಟವಾಗುವ ಕಲರ್ ಫುಲ್ ಛಾಯಾಗ್ರಹಣ, ಕೆಲಕಾಲ ಮಾತ್ರ ಪಡ್ಡೇ ಹುಡುಗರಿಗೆ ಇಷ್ಟವಾಗುವ  ಭಟ್ಟರ ಹಾಡುಗಳು, ನಿಧಾನವಾಗಿ ಮೋಡಿ ಮಾಡುವ ಕಾಯ್ಕಿಣಿಯ ಹಾಡುಗಳು! ಹೊರಗೆ ಬಂದ ನಂತರ ನಾವೇನು ನೋಡಿದೆವು? ಎಂಬುದನ್ನು ಮರೆತು ಹೋದರೂ, ಥಿಯೇಟರಿನಲ್ಲಿ ಕೂತಷ್ಟು ಕಾಲ ನಗಿಸುವ ಭಟ್ಟರ ಡೈಲಾಗ್ ಗಳು! ಹ್ಮ್....... ಟೈಮ್ ಪಾಸ್ ಚಿತ್ರ! :-)

No comments:

Post a Comment