Tuesday, May 13, 2014

ಫೇಸ್ ಬುಕ್ ಸ್ಟೇಟಸ್ ಗಳೂ!

ಕೆಲವು ತಿಂಗಳುಗಳ ಹಿಂದೆ ಕಾವ್ಯಕಮ್ಮಟವೆಂದರೆ ಹೇಗಿರಬಹುದು? ಎನ್ನುವ ಕುತೂಹಲ ತಣಿಸಿಕೊಳ್ಳಲು ಹೋಗಿದ್ದೆ. ಅಲ್ಲಿ ನನಗಾದ ಒಂದಿಷ್ಟು ಅನುಭವಗಳನ್ನು, ಹೀಗೆಯೇ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದೆ. ಈ ಫೇಸ್ ಬುಕ್ಕಿನಲ್ಲಿ ಒಂದಷ್ಟು ದಿವಸಗಳಾದ ಮೇಲೆ, ನಮ್ಮೆಲ್ಲಾ ಸ್ಟೇಟಸ್ ಗಳು ತಳ ಕಾಣುವುದರಿಂದ, ಜೊತೆಗೆ ನಾನೆಲ್ಲೂ ಇದನ್ನು ಬರೆದಿಟ್ಟುಕೊಳ್ಳದ್ದರಿಂದ, ನನ್ನ ದೃಷ್ಟಿಯಲ್ಲಿ ನನಗಿವು ಮುಖ್ಯ ಅನ್ನಿಸಿದ್ದರಿಂದ, ಬ್ಲಾಗ್ ಗೆ ಎಲ್ಲವನ್ನೂ ಕಾಪಿ ಮಾಡಿಟ್ಟಿದ್ದೇನೆ.  ಓದಿ ನೋಡಿ! :-)

ಹೀಗೊಂದು ಘೋಷಣೆ!

ನಾನು ಕಾವ್ಯಕಮ್ಮಟದ ಬಗ್ಗೆ ಬರೆದಿರುವುದೆಲ್ಲಾ ನಾ ಕಂಡುಕೊಂಡ ಸತ್ಯ, ಕಾವ್ಯಕಮ್ಮಟದಲ್ಲಿ ಹೇಳಿಕೊಟ್ಟಿರುವುದಲ್ಲಾ ! ಕಾವ್ಯಕಮ್ಮಟಕ್ಕೂ ನನ್ನ ಹೇಳಿಕೆಗಳಿಗೂ ಸಂಬಂಧವಿಲ್ಲ!

೧.  ಗುಂಪುಗಾರಿಕೆ ರಾಜಕಾರಣಿಗಳ ಸ್ವತ್ತು ಎಂದುಕೊಂಡಿದ್ದೆ. ಉಹೂ! ಇದಕ್ಕೆ ಯಾವ ರಂಗದವರು ಹೊರತಲ್ಲ ಸಾಹಿತಿಗಳು / ಹಿರಿತೆರೆ / ಕಿರುತೆರೆ etc., et..... ಅದರಲ್ಲೂ ನಮ್ಮ ಸಾಹಿತಿಗಳೇ (ಸ್ವಘೋಷಿತರು) ರಾಜಕೀಯ ಮಾಡುವುದನ್ನು ನೋಡಿದಾಗ ಅನಿಸಿದ್ದು - ಈಗಿರುವುದು ಎರಡೇ ಜಾತಿಗಳು - ಶ್ರೀಮಂತ, ಬಡವ. ಇದನ್ನರಿತು, ನಮ್ಮ ಹಿರಿ, ಕಿರಿ, ಮರಿ ಸಾಹಿತಿಗಳೆಲ್ಲರೂ ಇನ್ಯಾವುದೇ ಬ್ರಾಹ್ಮಣ, ದಲಿತ, ಬಂಡಾಯ, ಕ್ರಾಂತಿ ಕಡೆಗೆ ಗಮನ ಹರಿಸದೆ, ತಮ್ಮ ಪಾಡಿಗೇ ತಮ್ಮ ಓದು, ಬರಹಗಳಲ್ಲಿ ತೊಡಗಿಸಿಕೊಳ್ಳುವುದು! ರಾಜಕೀಯವನ್ನು ರಾಜಕಾರಣಿಗಳಿಗೆ ಬಿಟ್ಟು ಕೊಡುವುದು! :-)

೨.  ನಮ್ಮ ‘ಲೇಡಿ’ ಸಾಹಿತಿಗಳು ತಮ್ಮ ಸೆಕ್ಶುಯಾಲಿಟಿ ಪ್ರದರ್ಶನ ಮಾಡದೇ ಇಂಟೆಲೆಕ್ಚುಯಾಲಿಟಿಯನ್ನು ತೋರಿಸುವುದು!

೩.  ಹೇಗೆ ನಮ್ಮ ಕಿರಿ, ಮರಿ ಸಾಹಿತಿಗಳು ಹಿಂದಿನ ಪಂಪ, ರನ್ನ, ಕುವೆಂಪು ಇವರನ್ನೆಲ್ಲಾ ಓದಬೇಕಿದೆಯೋ, ಅಷ್ಟೇ ಅವಶ್ಯಕತೆ ನಮ್ಮ ಹಿರಿ ಸಾಹಿತಿಗಳು ಆನ್ಲೈನ್ ಮೀಡಿಯಾಗಳ ಬಗ್ಗೆ ಅಪ್ಡೇಟ್ ಆಗಬೇಕಿರುವುದು!

೪. ಅರ್ಥವಾದದ್ದು! - ಪರಂಪರೆ ಮತ್ತು ಪ್ರತಿಭೆ ಇದ್ದರೆ ಮಾತ್ರ ಕಾವ್ಯಸೃಷ್ಟಿ ಸಾಧ್ಯ.

೫. ಕೇಳಿದ್ದು! - Interpretations are extravagant! :)

೬. ಮನ ಚಿಂತೆಗೀಡಾದದ್ದು! - ಸ್ತ್ರೀವಾದವೆಂದರೆ?.........
     ಸ್ತ್ರೀವಾದವೆಂದರೆ ಗಂಡಿಗೆ ಸಮನಾಗಿ ಕಾಮಿಸುವುದಲ್ಲ!
     ಹೆಣ್ತನವನ್ನು ಗೌರವಿಸುತ್ತಾ ಬದುಕುವುದು!

೭. ಬಹಳ ಬೇಸರವಾಗಿದ್ದು - ಇವತ್ತಿಗೂ ಕೆಲ ಬುದ್ಧಿಜೀವಿಗಳು ಹೆಂಗಸರನ್ನು ಕಮಾಡಿಟಿಯಾಗಿಯೇ ನೋಡುವುದು! ಕೆಲ ಹೆಂಗಸರು ತಾವು ಬುದ್ಧಿಜೀವಿಗಳಾಗಬೇಕೆಂದು, ತಮ್ಮ ಹೆಣ್ತನವನ್ನು ಬಳಸುವುದು. ಇದಕ್ಕೆ ದೊಡ್ಡವರು, ಚಿಕ್ಕವರು ಎಂಬ ವಯಸ್ಸಿನ ಬೇಧಭಾವವಿಲ್ಲ.

೮. ಬುದ್ಧ ಪ್ರೇಮಿ ಬೇಸ್ತು ಬಿದ್ದ ಪ್ರಸಂಗ! - ನನ್ನ ಪ್ರಶ್ನೆಗಳಿಗೆ ವೈಯಕ್ತಿಕವಾಗಿ ಉತ್ತರಿಸಲು, ತೋಳೇರಿಸಿದ ‘ಬುದ್ಧ ಪ್ರೇಮಿ’, ನಾನ್ಯಾರೆಂದು ತಿಳಿಯದೇ ಪೆಚ್ಚಾದದ್ದು! ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ!

೯. ಪಸರಿಸಿದ ಹೊಸ ಘಮಲು! - ಅಮ್ಮನಾದ ಫೇಸ್ ಬುಕ್, ಭಕ್ತಿ ಪರಾಕಾಷ್ಠೆಯಿಂದ ಕಾಮದ ಉತ್ತುಂಗಕ್ಕೇರಿದ ‘ಅಕ್ಕ’!

೧೦. ಕಿರಿಕಿರಿಯಾದದ್ದು! - ಬಿಂಬ ಪ್ರತಿಬಿಂಬ! ಪದಗಳು ಅರ್ಥವಾಗದಿದ್ದದ್ದು!

೧೧. ತಲೆ ಕೆಡಿಸಿದ್ದು! - ವಿಷಯಕ್ಕಿಂತ ಯಾರು, ಯಾವ ಪೊಸಿಷನಲ್ಲಿದ್ದು ಮಾತಾಡ್ತಿದ್ದಾರೆ ಅನ್ನೋದು ಅತಿ ಮುಖ್ಯವಾಗುತ್ತದೆ! ಎಂಬುವುದು

೧೨. ಮರೆತು ಹೋದದ್ದು! - ಒಡೆದು ಕಟ್ಟುವ ಪ್ರಾಸೆಸ್ ನಲ್ಲಿ, ಎಲ್ಲರೂ ಇನ್ನೂ ಒಡೆಯುತ್ತಲೇ ಇರುವುದು ಮತ್ತು ಕಟ್ಟುವ ಉತ್ಸಾಹ ಯಾರಿಗೂ ಇಲ್ಲದಿರುವುದು!

೧೩.  Last but not the least ಕಾವ್ಯಕಮ್ಮಟದಲ್ಲಿ ಜ್ಞಾನೋದಯವಾದದ್ದು / ಗೊಂದಲಗೊಂಡದ್ದು! -
ಓದಿಕೊಂಡವರೆಲ್ಲಾ ಜ್ಞಾನಿಗಳಲ್ಲ!
ಬರೆದವರೆಲ್ಲಾ ಅರಿತವರಲ್ಲಾ!
ಓದುವುದು ಮುಖ್ಯ, ಬರೆಯಲು!
ಬರೆಯುವುದು ಮುಖ್ಯ, ಬರೆಯಲು!

೧೪. ಮೈಕ್ ತುಂಬಾ ಮಾತಾಡುತ್ತೆ, ಮನುಷ್ಯರಿಗಿಂತ.

೧೫.  ತೂಕಬದ್ಧ ಮಾತುಗಳಿಗೆ ಪರಂಪರೆ ಬೇಕು. ಅವನ್ನು ಸುಂದರವಾಗಿ ಹೆಣೆಯಲು ಪ್ರತಿಭೆ ಬೇಕು!

ಉಸ್ಸಪ್ಪಾ! ಮುಗೀತು!

ಸೂರ್ಯೋದಯಕ್ಕೆ ಕಾಯುತ್ತಿರುವಾಗ, ಕಮ್ಮಟದಲ್ಲಿ ಹಿಂದಿನ ದಿವಸ ನಡೆದ ಘಟನೆಗಳನ್ನು ಮೆಲಕು ಹಾಕುತ್ತಾ, ಆಕಾಶದೆಡೆ ನೋಡುತ್ತಾ ಕುಳಿತಾಗ ಹೊಳೆದಿದ್ದು! -

ಹುಟ್ಟಬೇಕಿದೆ ನಮ್ಮಲ್ಲೊಬ್ಬ ಕುವೆಂಪು, ಬೇಂದ್ರೆ, ಅಡಿಗ!

ಹುಟ್ಟಬೇಕಿದೆ ನಮ್ಮಲೊಬ್ಬ ಕುವೆಂಪು, ಬೇಂದ್ರೆ, ಅಡಿಗ!

ನವಿಲುಕಲ್ಲಿನಲ್ಲಿ ನೆಟ್ಟದ್ದು ಶೂನ್ಯ ನೋಟ,
ನಭೋಮಂಡಲದಲ್ಲಿ ತಾರೆಗಳ ಕೂಟ
ಮನದಲ್ಲಿ ಆಲೋಚನೆಗಳ ಮೆರವಣಿಗೆ,
ಪಲ್ಲಕ್ಕಿ ಹೊತ್ತದ್ದು ಜಾತೀಯ, ಜಾಗತಿಕ ಸಮಸ್ಯೆ
ಮರೆತಿದ್ದಾನೆ, ಮನುಷ್ಯ ಜಾತಿ ತಾನೊಂದೇ ವಲಂ,
ಆಗಿರುವನು ಶೂದ್ರ ತಪಸ್ವಿ ಮೌನ,
ಗಾಳಿಯ ಮಾತುಗಳದ್ದೇ ಅಬ್ಬರ

ಬುದ್ಧ, ಬಸವಣ್ಣ, ಗಾಂಧಿ ಅಮರರಾದರು,
ಕಡಲಿನಲೆಯ ಮೊರೆತದಲಿ
ಕ್ಷೀಣವಾದದ್ದು ವಿಶ್ವಮಾನವ ತತ್ವಗಳು,
ಬೇಕೇ ಪಂಪ, ರನ್ನ, ಕುವೆಂಪು?
ಅಹುದಹುದು! ಎಂದೆಯಾ?
ಪಕ್ಕದಲ್ಲಿಯೇ ಅಪ್ಪ ಹಾಕಿದ ಆಲದಮರ!
ದೂರದಲ್ಲೆಲ್ಲೋ ಹಕ್ಕಿಗಳ ಇಂಚರ!

ಅಗೋ ನೋಡಲ್ಲಿ ‘ಉದಯ ರವಿ’
ಮರೆಯಾಗಿರುವ ‘ಪೂರ್ಣಚಂದ್ರ’
ಮನದಲ್ಲಿ ಹೆಪ್ಪುಗಟ್ಟಿರುವ ಹಿಮಾಲಯ
ಕೆಂಪಾದ, ಮಸುಕು ಮಲೆನಾಡು
ಒಡೆದು ಕಟ್ಟಲು ಇದು ಮನೆಯಲ್ಲ
ಸ್ವಾತಿ ಮುತ್ತಾಗಲು ತಾಳ್ಮೆ ಬೇಕು
ಕಲಿಸುವ, ಕಲಿಯುವ ಸಹನೆ ಇಬ್ಬರಿಗೂ ಬೇಕು

ಹುಟ್ಟಬೇಕಿದೆ ನಮ್ಮಲ್ಲೊಬ್ಬ ಕುವೆಂಪು, ಬೇಂದ್ರೆ, ಅಡಿಗ :-)

(ರಾಜಕಾರಣ ಮಾಡುತ್ತಿರುವ ಸಾಹಿತಿಗಳನ್ನು ನೋಡಿದಾಗ ಅನ್ನಿಸಿದ್ದು - ಇವರೆಲ್ಲಾ ರಾಜಕೀಯಕ್ಕೆ ಇಳಿದಿದ್ದರೆ ಈಗಿರುವ ಎಲ್ಲಾ ರಾಜಕಾರಣಿಗಳನ್ನೂ ಬೀಸಿ ಒಗೆಯಬಹುದು. ಅಷ್ಟರ ಮಟ್ಟಿಗೆ ರಾಜಕಾರಣ ಇವರಿಗೆ ಒಲಿದಿದೆ) 

No comments:

Post a Comment