Saturday, July 26, 2014

ಹೆಜ್ಜೆ, ವ್ಯಾಸರಾಯ ಬಲ್ಲಾಳರ ಕಾದಂಬರಿಯಲ್ಲಿ ಇಷ್ಟವಾದದ್ದು


ಸಾವು ಭಿನ್ನತೆಯನ್ನು ಮರೆಸುವ ಸತ್ಯವೂ ಆಗುತ್ತದೆ, ಸ್ವಾರ್ಥವನ್ನು ಅಳಿಸದೆಯೂ ಒರೆಸುವ ಮುಖವಾಡವೂ ಆಗುತ್ತದೆ.

ಕಾರ್ಯಕಾರಣ ಜಿಜ್ಞಾಸೆ ಯಾವಾಗ ಶುರುವಾಗುತ್ತದೆಯೋ ಗೊತ್ತೇ.... ಮನಸ್ಸಿಗೆ ಕಸಿವಿಸಿಯಾಗುವಂತಹ ಯಾವುದೊಂದು ವಿಚಾರ ಸಂಭವಿಸಿದಾಗ. ಈ ಜಿಜ್ಞಾಸೆಗೆ ಉತ್ತರ ದೊರಕುವುದೂ ಮನಸ್ಸು ಕಂಡುಕೊಂಡ ಹಾಗೆ.... ಮನಸ್ಸೇ ಹೇಳುತ್ತೆ ಇದೇ ಕಾರಣ ಅಂತ. ಮನಸ್ಸು ಕಾಣುವ ಸಮಸ್ಯೆಗೆ ಮನಸ್ಸೇ ಕಾರಣ ಹೀಗಿರಬಹುದು ಅಂತ ತಿಳಿದುಕೊಂಡಾಗ ಮನಸ್ಸು ತನಗೆ ಬೇಕಾದ ತೀರ್ಮಾನ ತೊಗೊಳ್ಳತ್ತೆಯೇ ಹೊರತು ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಹಾಗಲ್ಲ.


ಹೆಜ್ಜೆ ' ಯಲ್ಲಿ ಸಂದರ್ಭವೊಂದಿದೆ. ಇಡೀ ಮನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿರುತ್ತವೆ. ಸಂಪ್ರದಾಯ ಮುರಿಯದ ಬ್ರಾಹ್ಮಣನ ಮನೆಯಲ್ಲಿ, ಆತನ ಮಕ್ಕಳು ಎಲ್ಲವನ್ನೂ ಮುರಿಯುತ್ತಾರೆ. 

ಸುಮಾರು ೧೯೩೮ರ ಸಮಯದಲ್ಲಿ ನಡೆಯುವ ಘಟನೆ. ಆಗ ಕಿರಿಯ ಮಗ (ಆತ ಕಮ್ಯುನಿಸ್ಟ್) ತನ್ನ ಹೆಂಡತಿಯ ಬಳಿ (ಆಕೆ ಗಾಂಧೀ ವಾದಿ) ಹೇಳುತ್ತಾನೆ - ಹಿಟ್ಲರ್ ಯುದ್ಧ ಸಾರಿದ, ಇಂಗ್ಲೆಂಡ್ ತಾನೂ ಯುದ್ಧದ ನಿರ್ಧಾರ ತೆಕೊಂಡಿತು. ಈ ನಿರ್ಧಾರ ತನ್ನ ಸಾಮ್ರಾಜ್ಯವನ್ನೇ ಅಲುಗಾಡಿಸೀತು ಎಂದು ಯೋಚನೆ ಅದು ಮಾಡಿಲ್ಲ. ಅಣ್ಣ ಮನೆ ಬಿಟ್ಟು ಹೋದ. ಅವನ ನಿರ್ಧಾರ ಮನೆಯನ್ನು ಯಾವ ರೀತಿ ಬದಲಾಯಿಸುತ್ತೆ ಅಂತಾ ಅವನಿಗೆ ತಿಳಿದಿಲ್ಲ. ಅಕ್ಕ ತಾನು ಯಾವ ನಿರ್ಧಾರ ತೆಗೊಬೇಕು ಅಂತಾ ತಿಳೀದೇ ಒದ್ದಾಡ್ತಿದ್ದಾಳೆ. ನಮಗೆಲ್ಲಾ ಇವು ಸಾಮಾನ್ಯ ಕುಟುಂಬಗಳಿಗೆ ಸಂಬಂಧಿಸಿದ ಪ್ರಶ್ನೆಗಳೂಂತ ಕಾಣತ್ತೆ. ಒಂದಕ್ಕೊಂದು ಹೊಂದಿಕೆ ಇಲ್ಲಾಂತ ಕಾಣುತ್ತೆ. ಆದರೆ ಇದೆಲ್ಲಾ ಒಂದು ಸಾಮಾಜಿಕ ವ್ಯವಸ್ಥೆ ಬದಲಾಗ್ತಾ ಇರೋ ಲಕ್ಷಣಾಂತ ನಮಗೆ ತೋರ್ತಾ ಇಲ್ಲಾ. ನಾವೆಲ್ಲಾ, ನಾವಾಗಲೀ ನಮ್ಮ ಕುಟುಂಬದವರಾಗಲೀ ಭದ್ರವಾಗೋದು ಹೇಗೇಂತ ಯೋಚನೆ ಮಾಡ್ತಾ ಇದ್ದೇವೆ. ಆದರೆ ಇಡಿಯ ಸಮಾಜಕ್ಕೆ, ಅಂದರೆ ಎಲ್ಲರಿಗೂ ನೆಮ್ಮದಿ ತರುವ ವ್ಯವಸ್ಥೆ ಏನಾದರೂ ಸಾಧ್ಯವೇ ಅಂತಾ ಯೋಚನೇನೇ ಮಾಡೊಲ್ಲ.

ಸ್ವಾತಂತ್ರ್ಯ ಪೂರ್ವದ ಮನ, ಮನೆಗಳ ತಾಕಲಾಟಗಳನ್ನು ವ್ಯಾಸರಾಯ ಬಲ್ಲಾಳರು ೨೦೦೦ ಇಸವಿಯಲ್ಲಿ ಬರೆದ ಕಾದಂಬರಿ. 

ಈಗ ನಡೆಯುತ್ತಿರುವ ಅತ್ಯಾಚಾರಗಳು, ಅಧಿಕಾರದ ದುರುಪಯೋಗ, ಹೊಡಿ, ಬಡಿ, ಕೊಲ್ಲು, ಕೊಚ್ಚು ನೋಡಿದಾಗ ಹೀಗೆ ಅನ್ನಿಸುತ್ತಿದೆ. ನಾವೆಲ್ಲಾ ತೀರಾ ಸ್ವಾರ್ಥಿಗಳಾಗುತ್ತಿದ್ದೇವೆ.