Tuesday, August 5, 2014

ಅತ್ಯಾಚಾರ ಅಂದ್ರೆ ಬರೀ ಲೈಂಗಿಕ ಅತ್ಯಾಚಾರ ಮಾತ್ರನಾ?

ಅತ್ಯಾಚಾರ ಅಂದ್ರೆ ಬರೀ ಲೈಂಗಿಕ ಅತ್ಯಾಚಾರ ಮಾತ್ರನಾ?

ಈ ಲೈಂಗಿಕ ಅತ್ಯಾಚಾರವನ್ನು ಅತ್ಯಂತ ಕ್ರೂರಿಯಾಗಿ ಚಿತ್ರಿಸಿ ನಮ್ಮ ಮಕ್ಕಳು ಮತ್ತು ಹೆಂಗಸರನ್ನು ಇನ್ನಷ್ಟು ಭಯ ಪಡಿಸಿ, ಮೂಲೆಯಲ್ಲಿ ಕೂರುವಂತೆ ಮಾಡುತ್ತಿದ್ದೇವೆ.

ಮೊನ್ನೆ ಟೌನ್ ಹಾಲ್ ಬಳಿಯ ಪ್ರತಿಭಟನೆ ಮತ್ತು ಉಷಾ ಆಂಟಿಯವರ ಬುಕ್ ರಿಲೀಸ್ ಎರಡನ್ನೂ ಕಂಬೈನ್ ಮಾಡಿಕೊಂಡು ಒಬ್ಬಳೇ ಹೊರಟಿದ್ದೆ. ಆಗ ಸಮಯ ಸಂಜೆ ೫.೩೦ ಗಂಟೆ. ಟೌನ್ ಹಾಲ್ ನಿಂದ ನಯನ ಸಭಾಂಗಣ (ಇರುವುದು ಕನ್ನಡ ಭವನದೊಳಗೆ) ದ ತನಕ ಹೋಗುವಷ್ಟರಲ್ಲಿ ನನ್ನ ತಲೆಯೊಳಗೆ ಸುಳಿದ ಆಲೋಚನೆಗಳು ಸಾವಿರಾರು. ಎಲ್ಲವೂ ಅತ್ಯಾಚಾರಕ್ಕೆ ಸಂಬಂಧಿಸಿದ್ದೆ. ನನಗೆ ನಯನ ಸಭಾಂಗಣ ಇರುವುದೆಲ್ಲಿ ಎಂದು ಗೊತ್ತಿರಲಿಲ್ಲ. ಸಂಸ ಬಯಲು ರಂಗಮಂದಿರದ ಬಳಿ ೪,೫ ಮಂದಿ ಕುಳಿತಿದ್ದರು. ಅವರ ಬಳಿ ಕೇಳಲು ಭಯ. ಆದರೂ ಕೇಳಿದೆ. ಅವರು ಪಕ್ಕದಲ್ಲಿಯೇ ಮುಂದಕ್ಕೆ ಹೋಗಿ ಎಂದರು. ಸಂಸ ಬಯಲು ಮಂದಿರದಿಂದ ನಯನ ಸಭಾಂಗಣಕ್ಕೆ ಹೋಗುವವರೆಗೂ ನಿರ್ಜನ ಪ್ರದೇಶ. ಆಗಲೇ ಕತ್ತಲು ಮುತ್ತಿಕೊಳ್ಳುತ್ತಿತ್ತು. ಅವರು ಹಿಂದೆ ಬಂದರೆ? ಈಗೇನಾದರೂ ಮಾಡಿದರೆ? ನನ್ನನ್ನು ನಾನು ಹೇಗೆ ಪ್ರೊಟೆಕ್ಟ್ ಮಾಡಿಕೊಳ್ಳುವುದು? ಇದು ನನ್ನ ತಲೆಯಲ್ಲಿ ನಡೆದ ತಾಕಲಾಟ. ಕನ್ನಡ ಭವನದೊಳಗೆ ಪ್ರವೇಶ ಮಾಡಿದೆ. ಅಲ್ಲಿಂದ ಕೆಳ ಮಹಡಿಗಿಳಿದು, ಹೋಗುವಷ್ಟರಲ್ಲಿ ಅಕ್ಷರಶಃ ಹೆದರಿಕೆಯಿಂದ ಬೆವರಿದೆ. ಏಕೆಂದರೆ ಅಲ್ಲಿ ಒಬ್ಬರೂ ಇರಲಿಲ್ಲ. ಆ ಜಾಗದಲ್ಲಿ ಏನೂ ಬೇಕಿದ್ದರೂ ಆಗಬಹುದಿತ್ತು. ಈ ಭಯ ನನಗೆ ಹಿಂದೆಂದೂ ಕಾಡಿರಲಿಲ್ಲ. ನಾನು ರಾತ್ರಿ ಹೊತ್ತು ಒಬ್ಬೊಬ್ಬಳೇ ಓಡಾಡುವಾಗ ‘ಚೈನ್ ಸ್ನಾಚ್’ ಮಾಡುತ್ತಾರೆಂದು ಕಳ್ಳತನಕ್ಕೆ ಹೆದರುತ್ತಿದ್ದೆ ಹೊರತು ‘ರೇಪ್’ ಆಗಬಹುದು ಎಂದು ಹೆದರಿರಲಿಲ್ಲ!  

ಉಷಾ ಆಂಟಿಯವರ ಪುಸ್ತಕಗಳು ರಿಲೀಸ್ ಆದವು. ಎಲ್ಲರೂ ಮಾತಾಡುತ್ತಿದ್ದರು. ಆಗ ನನ್ನ ತಲೆಯಲ್ಲಿ ನಾನು ಹೆದರಿದ ವಿಷಯವೇ! ನನಗೆಂದಿಗೂ ನನಗೆ ಸಿಕ್ಕ ಗೆಳೆಯರು ಈ ಮನಸ್ಥಿತಿಯವರಾಗಿರಲಿಲ್ಲ. ನನ್ನ ಅಣ್ಣಂದಿರು ಈ ಮನಸ್ಥಿತಿಯವರಲ್ಲ. ನನ್ನ ನೆಂಟರಿಷ್ಟರು ಈ ಮನಸ್ಥಿತಿಯವರಲ್ಲಾ. ಇಷ್ಟು ವರ್ಷಗಳೂ ಇಲ್ಲದ ಈ ಭಯ ಈಗ ಹುಟ್ಟಿದ್ದು ಏಕೆ? ನನ್ನ ಮನಸ್ಸನ್ನು ಕಂಟ್ರೋಲ್ ಮಾಡಿಕೊಳ್ಳಲು ನನಗೆ ಸುಮಾರು ಹೊತ್ತು ಬೇಕಾಯಿತು. 

ಈಗ ಯೋಚಿಸಿ , ನನ್ನ ಮನಸ್ಸಿನ ಮೇಲಾದ ಅತ್ಯಾಚಾರಕ್ಕೆ ಯಾರು ಹೊಣೆ? ಸಮಾಜವೇ, ಯಾರೋ ಕೆಲವು ಮಂದಿಗಳೇ? ಗಂಟೆಗೊಂದು, ನಿಮಿಷಕೊಂದು ಅತ್ಯಾಚಾರದ ಮುದ್ರೆಯೊತ್ತಿ (ಆಗಿರುತ್ತದೆಯೋ, ಇಲ್ಲವೋ) ಕೇವಲ ಟಿ ಆರ್ ಪಿ ಗಾಗಿ ನಮ್ಮೆಲ್ಲರನ್ನೂ ಹೆದರಿಸುತ್ತಿರುವ ಮಾಧ್ಯಮದವರೇ? ನೀವೇ? ನಾನೇ? 
ಗಾಡಿ ಕಲಿಯಲು ಹೊರಟಾಗ ಆಕ್ಸಿಡೆಂಟಿನ ಭಯ ನನಗೆ. ಆಗ ನನ್ನ ಗೆಳೆಯನೊಬ್ಬ ಹೇಳಿದ ಮಾತು (ಸುಮಾರು ವರುಷಗಳ ಹಿಂದಿನ ಮಾತು) ಈಗಲೂ ನೆನಪಿದೆ. ಲೆಕ್ಕದಷ್ಟು ಆಕ್ಸಿಡೆಂಟ್ ಗಳು ಆಗುತ್ತವೆ. ಲಕ್ಷಾಂತರ ಮಂದಿ ಸುರಕ್ಷಿತವಾಗಿ ಮನೆ ಸೇರುತ್ತಿರುತ್ತಾರೆ. ನೀನು ಸುರಕ್ಷಿತವಾಗಿ ಮನೆ ಸೇರುತ್ತಿರುವವರನ್ನು ಗಮನಿಸು. ಆಕ್ಸಿಡೆಂಟ್ ಆಗುತ್ತಿರುವವರನಲ್ಲ! ಆಗ ಭಯ ಕಡಿಮೆಯಾಗುತ್ತದೆ. ಗಾಡಿ ಕಲಿಯಲು ಆಗುತ್ತದೆ. 

ನಮ್ಮ ಮಕ್ಕಳನ್ನು ಸುರಕ್ಷಿತವಾಗಿರಲು ಕಲಿಸಬೇಕೇ ಹೊರತು ಜೀವನದ ಗಾಡಿ ಧೈರ್ಯವಾಗಿ ಓಡಿಸುವಂತೆ ಪ್ರೇರೇಪಿಸಬೇಕೇ ಹೊರತು ಈಗಾಗಲೇ ರೇಸ್ ಕುದುರೆಗಳಾಗಿರುವ ಅವರನ್ನು ಖೈದಿಗಳಾಗಿಸುವುದಲ್ಲ ಅಲ್ಲವೇ? ಈಗಷ್ಟೇ ತಮ್ಮ ಸೇಫರ್ ಜ಼ೋನ್ ನಿಂದ ಹೊರ ಬರುತ್ತಿರುವ ಹೆಂಗಸರನ್ನು ಭಯಬೀತರನ್ನಾಗಿಸುವುದು ಅಲ್ಲ ಅಲ್ಲವೇ?

ರೇಪ್ ಅನ್ನೋದು ಒಂದು ಮನಸ್ಥಿತಿ. ಶಿಕ್ಷೆಯಾಗುತ್ತದೆ ನನಗೆ ಎಂದು ಯೋಚಿಸುವ ಗಂಡಸರ್ಯಾರು ರೇಪ್ ಮಾಡುವುದಿಲ್ಲ! ಗಂಡಸರು ಕೂಡ ವಿಕ್ಟಿಮ್ಸ್ ಎಂದು ಏಕೆ ಯೋಚಿಸುವುದಿಲ್ಲ. ಮೊನ್ನೆ ಒಬ್ಬರು ಆರ್ಟಿಕಲ್ ಬರೆದಿದ್ದರು. ಹೆಸರು ಮರೆತಿದ್ದೇನೆ. ಹುಡುಗಿಗೆ ಋತುಸ್ರಾವ ಶುರುವಾದಾಗ ಮನೆಮಂದಿ ಎಲ್ಲರೂ ಆಕೆಯನ್ನು ಕೇರ್ ತೆಗೆದುಕೊಳ್ಳುತ್ತೇವೆ. ಆಕೆಗೆ ವಿವರಿಸುತ್ತೇವೆ. ಹೇಗಿರಬೇಕು? ಎಂಬುದನ್ನೆಲ್ಲಾ ಬಿಡಿಸಿ ಹೇಳುತ್ತೇವೆ. ಹೊರಗೆ ಆಡಲು ಹೋದಾಗಿಂದ ಹಿಡಿದು ಮನೆ ಸೇರುವ ತನಕ ಯಾರಾದರೊಬ್ಬರನ್ನು ಕಾವಲು ಇಡಿಸುತ್ತೇವೆ. ಇಲ್ಲವೇ ನಮ್ಮ ಕಣ್ಣು, ಕಿವಿಗಳೇ ಕಾವಲುಗಾರರಾಗಿರುತ್ತವೆ. ಆದರೆ ಬಾಲಕನೊಬ್ಬ ದೊಡ್ಡವನಾಗುವುದು ನಮಗೆ ತಿಳಿಯುವುದೇ ಇಲ್ಲ! ಆತನ ಬದಲಾವಣೆಯನ್ನು ಗಮನಿಸುವುದೇ ಇಲ್ಲ, ಆತನ ಮನಸ್ಸಿನಲ್ಲಿ ಕೋಲಾಹಲ ನಡೆಯುತ್ತಿರಬಹುದೆಂಬ ಕಲ್ಪನೆಯೇ ಇಲ್ಲ. 
ನನ್ನ ಪುಟ್ಟ ಮಗನ (೭ ವರ್ಷ ಆಗ ಅವನಿಗೆ) ಸ್ಕೂಲ್ ಡೇ ತರಬೇತಿ ನಡೆಯುತ್ತಿತ್ತು. ಒಮ್ಮೆ ಸಿಟ್ಟು ಮಾಡಿಕೊಂಡು ಬಂದ. ನಾನು ಡ್ಯಾನ್ಸ್ ಮಾಡುವುದೇ ಇಲ್ಲ ನಾಡಿದ್ದು ಎಂದ. ವಿಚಾರಿಸಿದ್ದಕ್ಕೆ ತಿಳಿಯಿತು. ಹೆಣ್ಣು ಮಕ್ಕಳಿಗೆಲ್ಲಾ ಡ್ರೆಸ್ ಬದಲಾಯಿಸಲು ಪ್ರೈವಸೀ ಅಂತೆ. ಹುಡುಗರು ಎಲ್ಲರ ಮುಂದೆ ಬದಲಾಯಿಸಬೇಕು. ಆ ಹುಡುಗಿಯರು ನಮ್ಮ ‘ಇನ್ನರ್ ವೇರ್’ ನೋಡಿ ನಗ್ತಾರೆ ಗೊತ್ತಾ? ನಮಗೇನು ಮರ್ಯಾದೆ ಇರೊಲ್ವಾ? ನಮ್ಮ ಪ್ರೈವೇಟ್ ಪಾರ್ಟ್ ಅವರ್ಯಾಕೆ ನೋಡಬೇಕು? ಕೊಟ್ಟರೆ ನಮಗೂ ಪ್ರೈವಸಿ ಕೊಡಬೇಕು. ಹೀಗ್ಯಾಕೆ ಅವರಿಗೊಂದು ರೂಲ್ಸ್, ನಮಗೊಂದು ರೂಲ್ಸ್? ಎಂದ. ಅದಕ್ಕೆ ನನ್ನ ದೊಡ್ಡ ಮಗ ‘ತಣ್ಣಗೆ, ಅಮ್ಮ, ಈ ಹುಡುಗಿಯರೇ ಜಾಸ್ತಿ ಈ ವಿಷಯದಲ್ಲಿ ನಗೋದು. ತಮಾಷೆ ಮಾಡೋದು. ಆಮೇಲೆ ಏನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೆ, ನಮ್ಮ ಮೇಲೆ ಎತ್ತಾಕಿಬಿಡ್ತಾರೆ. ಕೊನೆಗೆ ನಮಗೆ ಟೀಚರ್ಸ್ ಬೈಯೋದು. ಇವರಿಗೂ ಪ್ರೈವಸಿ ಕೊಡೋಕೆ ಟೀಚರ್ ಗೆ ಕನ್ ವಿನ್ಸ್ ಮಾಡಿ. ಅವನು ಹೇಳ್ತಿರೋದರಲ್ಲಿ, ಕೇಳ್ತಿರೋದರಲ್ಲಿ ತಪ್ಪೇನಿದೆ? ಎಂದ. ಆಮೇಲೆ ಆ ವರ್ಷದಿಂದ ಇಬ್ಬರಿಗೂ ಪ್ರೈವಸಿ ಸಿಕ್ಕಿತು.

ಸಮಾಜದಲ್ಲಿ ಯಾವಾಗಲೂ ಪಾಸಿಟಿವ್ ಮೈಂಡ್ ಸೆಟ್ ಶುರು ಮಾಡಬೇಕೇ ಹೊರತು ನೆಗೆಟಿವ್ ನನ್ನು ಎತ್ತಿ ತೋರಿಸುವುದಲ್ಲ. ನಮ್ಮಿಂದ ಸಮಾಜ. ಸಮಾಜದಿಂದ ನಾವಲ್ಲ. ಎರಡು ಉದಾಹರಣೆಗಳು. ೧. ನಮ್ಮ ಮನೆ ಬಹಳ ದೂರವಿದೆ. ಅಕಸ್ಮಾತ್ ರಾತ್ರಿ ತಡವಾಗಿಬಿಟ್ಟರೆ ವಾಪಾಸು ಆಟೋದಲ್ಲೇ ಬರಬೇಕು. ನನಗೆ ಮತ್ತು ಅಮ್ಮನಿಗೆ ಆಗಲೇ ಹೇಳಿದಂತೆ ಕಳ್ಳರ ಭಯವೇ ಹೆಚ್ಚು. (ಚಿನ್ನ ಅಷ್ಟೊಂದು ಹಾಕಿಕೊಳ್ತಿರಾ? ಎಂದು ಕೇಳಬೇಡಿ  ) ಮೊಬೈಲ್ ಕಿತ್ತುಕೊಂಡರೆ? ನಾವು ಹಾಕಿಕೊಂಡಿರೋದು ಚಿನ್ನದಲ್ಲಾ ಅಂತಾ ಅವರಿಗೆ ಹೇಗೆ ಗೊತ್ತಾಗುತ್ತದೆ? ಹೊಡೆದುಬಿಟ್ಟರೆ? ಹೀಗೆಲ್ಲಾ. ಅದಕ್ಕೆ ನಾವಿಬ್ಬರೂ ಕಂಡುಕೊಂಡಿರೋ ಉಪಾಯ. ಆ ಆಟೋದವರನ್ನು ಪರಿಚಯಿಸಿಕೊಳ್ಳುವುದು. ಉದ್ದಕ್ಕೂ ಅವರೊಂದಿಗೆ ಅವರ ಕಷ್ಟ, ನಷ್ಟಗಳನ್ನು ವಿಚಾರಿಸುತ್ತಾ ಬರುವುದು. ನಮ್ಮ ಮನೆಗೆ ಬರುವಷ್ಟರಲ್ಲಿ ಆತ ಪರಿಚಯವಾಗಿಬಿಟ್ಟಿರುತ್ತಾನೆ. ನನಗೆ ಹುಷಾರಾಗಿ ಹೋಗಿ ಮೇಡಮ್ ಎಂದು ನಿರ್ದೇಶಿಸುವಷ್ಟರ ಮಟ್ಟಿಗೆ. Uma Sekhar ಮತ್ತು Anuradha B Rao ಈ ಇಬ್ಬರೂ ಕೂಡ ಹೀಗೆಯೇ. ಆತ್ಮೀಯವಾಗಿ ಆತನೊಂದಿಗೆ ಮಾತಾಡುತ್ತಾ, ತಮಾಷೆಯಾಗಿಯೇ ಜಗಳವಾಡುತ್ತಾ, ಸುರಕ್ಷಿತವಾಗಿ ಮನೆ ತಲುಪುತ್ತಾರೆ. ನಮ್ಮನ್ನು ನಂಬಿದ್ದಾರೆ ಇವರು ಎಂದಾದ ಕೂಡಲೇ ಆ ಅಪರಿಚಿತ ಗಂಡಿನಲ್ಲಿ ನಮ್ಮನ್ನು ಸುರಕ್ಷಿತವಾಗಿ ತಲುಪಿಸಬೇಕು ಎನ್ನುವ ಭಾವ ಹುಟ್ಟಿಬಿಡುತ್ತದೆ. ನನ್ನ ಪ್ರಕಾರ ಇದು ‘ಪಾಸಿಟಿವ್ ಮೈಂಡ್ ಸೆಟ್’ 

ಅದೇ ನನ್ನ ಮಕ್ಕಳ ತರಗತಿಗಳಲ್ಲಿ ಗಂಡು ಮಕ್ಕಳನ್ನು ಪ್ರಚೋದಿಸುತ್ತಲೇ ಅಥವಾ ಅವರನ್ನು ಕಾಡಿಸುತ್ತಲೇ ಇರುವ ಕೆಲವೊಂದು ಹೆಣ್ಣುಮಕ್ಕಳು, ಟೀಚರ್ ಬಂದೊಡನೆಯೇ ಅಥವಾ ಸಿಕ್ಕಿಬಿದ್ದಾಗ ಅಳುತ್ತಾ ನಿಂತುಬಿಡುತ್ತಾರೆಯಂತೆ. ಏನೂ ಮಾದದೇ ಸುಮ್ಮನಿದ್ದ ಗಂಡು ಮಕ್ಕಳಿಗೆ ಬೈಗುಳ. ನನ್ನ ದೊಡ್ಡ ಮಗ ಹೇಳ್ತಾನೆ ‘ಅಬ್ಬಾ! ಈ ಗರ್ಲ್ಸ್ ಭಯಂಕರ ಡೇಂಜರಸ್ ಅಮ್ಮಾ. ಅದೆಲ್ಲಿರುತ್ತೋ? ಕಣ್ಣೀರು. ಪುಳಕ್ ಅಂತಾ ಬಂದುಬಿಡುತ್ತೆ. ನಮಗೆ ಡೌಟ್ ಆಗಿಬಿಡುತ್ತದೆ, ನಾವೇನಾದರೂ ಮಾಡಿದೆವಾ? ಅಂತಾ. ಅವರ ಸುದ್ಧಿಗೆ ಹೋಗೊಲ್ಲಾ ನಾವು’ ಎಂದು ಹೇಳುತ್ತಾನೆ. ಇದು ನನ್ನ ಪ್ರಕಾರ ಈ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ವಿಷಯದಲ್ಲಿ ನೆಗೆಟಿವ್ ನೆಸ್ ಕ್ರಿಯೇಟ್ ಆಗ್ತಿದೆ.
ನಮ್ಮ ಸಮಾಜ ಬೆಳೆಯಲು ನಮಗೆ ಇಬ್ಬರೂ ಬೇಕಲ್ವಾ? ಗಂಡು ಮಕ್ಕಳೆಲ್ಲಾ ರೇಪಿಸ್ಟ್ ಗಳಾಗಿಬಿಡ್ತಾರೆ? ಹೆಣ್ಣು ಮಕ್ಕಳೆಲ್ಲಾ ವಿಕ್ಟಿಮ್ಸ್ ಗಳಾಗಿಬಿಡ್ತಾರೆ? ಅನ್ನೋ ಭಯ ಯಾಕೆ ಹುಟ್ಟು ಹಾಕ್ತಿದ್ದೀವಿ? ಯಾಕೆ ಯಾವುದೊಂದನ್ನೂ ‘ಡೀಪ್’ ಆಗಿ ಯೋಚಿಸೊಲ್ಲ. ಅನುಭವಿಸಿರುವವರಿಗೆ ಸಾಂತ್ವನ ಹೇಳಬೇಕು. ನಿಜ. ಧೈರ್ಯ ನೀಡಬೇಕು. ಅಂತವರಿಗೆ ಶಿಕ್ಷೆ ಆಗಬೇಕು. ಎಲ್ಲವೂ ನಿಜ. ಸರಿ. ಆದರೆ ಹಾಗೆಯೇ ಇಂತಹದೊಂದು ಭೀಕರ ಕೃತ್ಯ ಏಕಾಯಿತು? ಎಂದು ಏಕೆ ಯೋಚಿಸುತ್ತಿಲ್ಲ. ವಿಕ್ಟಿಮ್ಸ್ ಮತ್ತು ಅವರ ಮನೆಯವರಿಗೆ ಕುಳಿತು ಯೋಚಿಸಲು ಸಾಧ್ಯವಾಗುವುದಿಲ್ಲ. ಆದರೆ ಉಳಿದವರು ಅವರಿಗೆ ಬೆಂಬಲ ನೀಡುತ್ತಲೇ, ಈ ಕೆಲಸವನ್ನು ಮಾಡಬಹುದಲ್ವಾ?

ಮೊನ್ನೆ ನಡೆದ ವಿಬ್ಗಯಾರ್ ಶಾಲೆಯ ಪ್ರಕರಣದಲ್ಲಿ ಆರೋಪಿಯಾದ ಟೀಚರ್ ಮಗಳು ಅದೇ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಳಂತೆ. ಅವಳನ್ನೀಗ ಶಾಲೆಯಿಂದ ಬಿಡಿಸಲಾಗಿದೆ. ಆ ಮಗುವಿನ ಭವಿಷ್ಯದ ಕಥೆಯೇನು? ಖೈದಿಗಳ ಮಕ್ಕಳು ಅನುಭವಿಸುತ್ತಿರುವ ಅತ್ಯಾಚಾರಗಳು ಕಡಿಮೆ ಇವೆಯೇ? ಇದಕ್ಕೆಲ್ಲಾ ಪರಿಹಾರ simultaneously ಹುಡುಕಬೇಕು.

ಕಠಿಣ ಶಿಕ್ಷೆ ಮತ್ತೊಂದು ಅಪರಾಧವನ್ನು ತಡೆಯಲಾರದು. ಅಪರಾಧಕ್ಕೆ ಹಲವಾರು ಕಾರಣಗಳಿರುತ್ತವೆ. ಅವುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಖಂಡಿತವಾಗಿಯೂ ವಿಕ್ಟಿಮ್ ಮತ್ತು ಅವರ ಮನೆಯವರು ಹೇಳಲಾಗದಷ್ಟು ನೊಂದಿರುತ್ತಾರೆ. ಅವರಿಗೆ ಸಾಂತ್ವನ ಹೇಳುವುದು ಮನುಷ್ಯರಾದವರೆಲ್ಲರ ಕರ್ತವ್ಯ.


No comments:

Post a Comment