Wednesday, August 6, 2014

ಇಂತಿ ನಮಸ್ಕಾರಗಳು - ನಟರಾಜ್ ಹುಳಿಯಾರ್ ಅವರ ಪುಸ್ತಕದಲ್ಲಿ ಇಷ್ಟವಾದದ್ದು.

ನಟರಾಜ್ ಹುಳಿಯಾರ್ ಅವರ ‘ಇಂತಿ ನಮಸ್ಕಾರಗಳು’ ಲಂಕೇಶ್ ಮತ್ತು ಡಿ.ಆರ್. ನಾಗರಾಜ್ ಅವರ ಬಗೆಗಿನ, ಅವರ ಆಲೋಚನೆಗಳ ಬಗೆಗಿನ ವಿವರಣೆಯನ್ನು ನೀಡುವ ಪುಸ್ತಕ. ಎಲ್ಲಾ ಹಿರಿ, ಮರಿ, ಕಿರಿ ಸಾಹಿತಿಗಳು ಓದಬೇಕಾದದ್ದು. ಕೆಲವು ವಾಕ್ಯಗಳಂತೂ ಸಿಕ್ಕಾಪಟ್ಟೆ ಇಷ್ಟವಾಗಿಬಿಡುತ್ತವೆ. ಅವುಗಳಲ್ಲಿ ಬಹುಮುಖ್ಯವೆನೆಸಿದ್ದು Especially FB ಭಟ್ಟಂಗಿಗಳಿಗೆ ಅನ್ವಯಿಸುವುದು

೧. ಯಾಜಮಾನ್ಯ ತನ್ನ ಭಟ್ಟಂಗಿಗಳನ್ನು ತಾನೇ ಸೃಷ್ಟಿಸಿಕೊಳ್ಳುತ್ತಿರುತ್ತದೆ. ರಾಜರುಗಳು ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು, ತಮ್ಮನ್ನು ಜನಪ್ರಿಯಗೊಳಿಸಿಕೊಳ್ಳಲು ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ತುಂಬಿಕೊಳ್ಳಲು ಕೂಡ ಭಟ್ಟಂಗಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಜೊತೆಗೆ ಕೀಳರಿಮೆಯಿಂದಾಗಿ ಕೂಡ ಭಟ್ಟಂಗಿಗಳನ್ನು ನೇಮಿಸಿಕೊಳ್ಳುತ್ತಿರುತ್ತಾರೆ. ಈ ಭಟ್ಟಂಗಿಗಳು ರಾಜನ ಪ್ರತ್ಯೇಕ ಸಂಸ್ಥೆಯಾಗಿಯೂ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಆತ್ಮವಿಶ್ವಾಸದ ಕೊರತೆಯಿಂದಾಗಿ ಆಳುವವರು ಮತ್ತು ಆಳುಗಳಿಬ್ಬರಿಗೂ ಈ ಭಟ್ಟಂಗಿತನ ಅನಿವಾರ್ಯವಾಗುತ್ತದೆ. ಪ್ರಭುತ್ವಕ್ಕೆ ಹೊಗಳಿಕೆ ಬೇಕಾದ್ದರಿಂದ, ಅದರ ಅಧೀನದಲ್ಲಿರುವವರಿಗೂ ಭಟ್ಟಂಗಿತನ ತಮ್ಮ ಜೀವನ ನಿರ್ವಹಣೆಯ ಸಲೀಸು ಮಾರ್ಗವಾಗಿಬಿಡುತ್ತದೆ.

೨. ಹೊಗಳದಿದ್ದರೆ ಅಭದ್ರತೆ, ಹೊಗಳಿದರೆ ಅನುಮಾನ ... ಈ ಎರಡೂ ಪ್ರವೃತ್ತಿಗಳು ನಮ್ಮಲ್ಲಿರುತ್ತವೆ. ಆದರೆ ನಾವು ಸೂಕ್ಷ್ಮವಾಗಿದ್ದರೆ, ಇನ್ನೊಬ್ಬ ನಮ್ಮನ್ನು ಹೊಗಳಲಾರಂಭಿಸಿದ ತಕ್ಷಣ ನಮ್ಮ ದೌರ್ಬಲ್ಯಗಳೇ ಹೆಚ್ಚು ಗೋಚರಿಸತೊಡಗುತ್ತವೆ. ಅಭದ್ರ ಮನಸ್ಥಿತಿಯಲ್ಲಿರುವ ಒಬ್ಬ ಯಜಮಾನನೇ ಭಟ್ಟಂಗಿಗಳನ್ನು ಸೃಷ್ಟಿಸಿಕೊಳ್ಳಬಹುದು. ಮನುಷ್ಯನ ಕೀಳರಿಮೆಯಿಂದ, ಲಾಭದಾಸೆಯಿಂದ ಅಥವಾ ಇನೊಬ್ಬನನ್ನು ಸಂತೋಷವಾಗಿಡಲು ಬಯಸುವ ಸರಳವಾದ ಒಳ್ಳೆಯತನದಿಂದಲೂ ಹೊಗಳಿಕೆ ಹುಟ್ಟಿರಬಹುದು. ಕೆಲ ಬಗೆಯ ಓದುಗರು ಲೇಖಕನೊಬ್ಬನನ್ನು ಗ್ರಹಿಸಲು ಶ್ರಮಪಡುವುದರ ಬದಲಿಗೆ ಅವನನ್ನು ಸುಮ್ಮನೆ ಹೊಗಳುವ ಸುಲಭ ಮಾರ್ಗ ಹಿಡಿಯುವುದನ್ನು ಕಂಡು ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಉರಿದು ಬೀಳುತ್ತಿದ್ದನಂತೆ.
(ಆದರೆ ಐರನಿ ನೋಡಿ, ಇದೇ ಬ್ರೆಕ್ಟ್, ಲಂಕೇಶ್, ಡಿ.ಆರ್ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಅನೇಕ ಮಂದಿ, ಒಬ್ಬರು ಮತ್ತೊಬ್ಬರ ಭಟ್ಟಂಗಿಗಳಾಗಿರುವುದು!  )

೪.  ಭಟ್ಟಂಗಿಗಳ ಸುಳ್ಳುಗಳಲ್ಲಿ ಲೇಖಕ ಸತ್ಯಕ್ಕಾಗಿ ತಡಕಾಡುವಂತಾಗುತ್ತದೆ. (ಫೇಸ್ ಬುಕ್ಕಿನಲ್ಲಂತೂ ಸಿಕ್ಕಾಪಟ್ಟೆ ತಡಕಬೇಕಾಗುತ್ತದೆ)

೫.  ಬರೆಯುವವನಿಗೆ ಹೊರಗಣ್ಣಿಗಿಂತ ಒಳಗಣ್ಣು ಮುಖ್ಯ

೬.  ಗೊತ್ತಿದ್ದೋ ಗೊತ್ತಿಲ್ಲದೆಯೋ ಸುಳ್ಳು, ಅರೆ ಸುಳ್ಳು ಬರೆಯುವ, ಮಾತನಾಡುವ ಎಲ್ಲರೂ ತಮ್ಮೊಳಗೆ ನರಕ ಸೃಷ್ಟಿಸಿಕೊಳ್ಳುತ್ತಲೇ ಸುತ್ತಲಿನ ನರಕವನ್ನು ಆಳವಾಗಿಸುತ್ತಾ ಹೋಗುತ್ತಾರೆ. 

೭. ವ್ಯಕ್ತಿಯೊಬ್ಬನ ನಿರ್ಗಮನದ ನಾಲ್ಕಾರು ವರ್ಷಗಳಲ್ಲೇ ನಾವು ನೋಡುವ ಕಣ್ಣು ಹೇಗೆ ಬದಲಾಗುತ್ತಿರುತ್ತದೆ! ಅವನ ಬಗೆಗಿನ ಪೂರ್ವಾಗ್ರಹಗಳು, ಅನಗತ್ಯ ಮೆದುತನ, ಇವನು ನಮ್ಮವನೆಂದು ಸುಮ್ಮನೆ ಉಕ್ಕುವ ಪ್ರೀತಿ, ಅತಿ ನಿಕಟತೆಯಿಂದ ಒಸರತೊಡಗುವ ಅಸಹನೆ... ಇವೆಲ್ಲ ಕಡಿಮೆಯಾಗಿ ಒಂದು ಬಗೆಯ ನಿರ್ಲಿಪ್ತ ದೃಷ್ಟಿ ನಿರ್ಮಾಣವಾಗತೊಡಗುತ್ತದೆ. 

೮.  ಲಂಕೇಶ ಬಯ್ದಂತೆ ತಾವೂ ಬಯ್ಯಬಹುದೆಂದು ಹೊರಟ ಪತ್ರಕರ್ತರು ಎಲ್ಲೆಡೆ ಭಂಡ ಪತ್ರಿಕೋದ್ಯಮವನ್ನು ಸೃಷ್ಟಿಸತೊಡಗಿದರು.
ಲಂಕೇಶರನ್ನು ಅನುಕರಿಸುವ ಅನೇಕರು ಅವರ ತಾತ್ವಿಕ ಆಳವಿಲ್ಲದೆ, ನೈತಿಕ ರೋಷವನ್ನು ಆರೋಪಿಸಿಕೊಂಡು ಬರೆಯುವುದರಿಂದಲೇ ಅಂಥವರು ಹುಸಿಯಾಗಿ ಕಾಣುತ್ತಾರೆ ಹಾಗೂ ಅವರ ಬರಹಗಳು ತೆಳುವಾಗಿ ಕಾಣತೊಡಗುತ್ತವೆ. (ಹ್ಮ್, ಈಗಲೂ ಇದು ತಪ್ಪಿಲ್ಲ  ಎಷ್ಟೇ ಕುಣಿದರೂ ಕೆಂಬೂತ ........... ಆಗುತ್ಯೇ? :))

೯.  ದೊಡ್ಡ ಲೇಖಕನೊಬ್ಬ ಗಂಭೀರ ಸಾಹಿತ್ಯ ವಿಮರ್ಶಕನೂ, ಮತ್ತೆ ಮತ್ತೆ ತನ್ನ ಕಲೆಯನ್ನು ಪರೀಕ್ಷಿಸಿಕೊಳ್ಳುವ ವಿದ್ಯಾರ್ಥಿಯೂ ಆಗಿರುತ್ತಾನೆ ಮತ್ತು ಆಗಿರಲೇಬೇಕು

೧೦.  ಸಾಹಿತ್ಯಸಂಸ್ಥೆಗಳ ವಿಮರ್ಶಾ ತೀರ್ಮಾನಗಳ ಬಗ್ಗೆ ಲಂಕೇಶರಿಗೆ ಅಷ್ಟೇನೂ ನಂಬಿಕೆಯಿರಲಿಲ್ಲ. "ಈ ಅಕಾಡೆಮಿ ಥರದ ಸಂಸ್ಥೆಗಳಲ್ಲಿ ಮೂರನೆಯ ದರ್ಜೆಯ ನಾಟಕಕಾರನೊಬ್ಬನಿಗೆ, 'ನಿನ್ನ ನಾಟಕ ಚೆನ್ನಾಗಿಲ್ಲ' ಎಂದು ಹೇಳಿದರೆ, 'ನಿನ್ನ ನಾಟಕ ಚೆನ್ನಾಗಿದೆಯಾ?' ಎಂದು ಕೇಳುತ್ತಾನೆ. ಇಂಥ ಕಡೆ ಅಭಿರುಚಿ, ಆಯ್ಕೆಗಳು ಶ್ರೇಷ್ಠ ಮಟ್ಟದ್ದಾಗುವುದು ಕಷ್ಟ


Evil ಬಗ್ಗೆ ಲಂಕೇಶ್ ಬರೆದದ್ದು!

‘ಮನುಷ್ಯ ಮೂಲತಃ ಈವಿಲ್’ ಎಂದವರು ಲಂಕೇಶ್. 

ಲಂಕೇಶ್ ರ ‘ಸಂಕ್ರಾಂತಿ’ ದಲಿತ, ಬಂಡಾಯ, ಪ್ರಗತಿಪರ ಸಾಹಿತ್ಯದಲ್ಲಿ ವ್ಯಾಪಕವಾಗಿ ಕಂಡ ಪ್ರಭುತ್ವ ಕುರಿತ ಅನೇಕ ಪ್ರಶ್ನೆಗಳನ್ನು ಎಪ್ಪತ್ತರ ದಶಕದ ಆರಂಭದಲ್ಲೇ ಧ್ವನಿಪೂರ್ಣವಾಗಿ ಮಂಡಿಸಿದೆ. ವೈದಿಕ ಧರ್ಮ, ಜೈನ ಧರ್ಮ, ಶರಣ ಧರ್ಮ ಎಲ್ಲವೂ ಇಲ್ಲಿ ಪರೀಕ್ಷೆಗೆ ಒಳಗಾಗುತ್ತವೆ. ಇಲ್ಲಿನ ಬಿಜ್ಜಳ-ಬಸವಣ್ಣರ ಮುಖಾಮುಖಿ ತಾತ್ವಿಕ, ಸಾಮಾಜಿಕ ಹಾಗೂ ವ್ಯಕ್ತಿಗತ ಮುಖಾಮುಖಿಗಳನ್ನು ಒಟ್ಟಿಗೇ ಗ್ರಹಿಸಬಲ್ಲ ಬಹು ಸೂಕ್ಷ್ಮ ಮಾದರಿಯೊಂದನ್ನು ರೂಪಿಸಿದೆ. ಬಸವಣ್ಣ ಬಿಜ್ಝಳನ ಅಧಿಕಾರದ ಶಿಥಿಲತೆ ಹಾಗೂ ಭ್ರಮೆಗಳನ್ನು ಟೀಕಿಸುತ್ತಾನೆ. ಬಿಜ್ಜಳ ‘ನೀನು ಬ್ರಾಹ್ಮಣ, ಒಂದು ಕಾಲದಲ್ಲಿ ಸಂಸ್ಕೃತ ಭಾಷೆಯನ್ನು ಬಳಸಿಕೊಂಡು ಕೆಳಜಾತಿಯವರನ್ನು ಶೋಷಿಸುತ್ತಿದ್ದೆ. ಈಗ ಕನ್ನಡ ಭಾಷೆಯನ್ನು ಬಳಸಿ ಅದೇ ಕೆಲಸ ಮಾಡುತ್ತಿದ್ದೀಯಾ’ ಎಂದು ಬಸವಣ್ಣನನ್ನು ಛೇಡಿಸುತ್ತಾನೆ.

‘ಸಂಕ್ರಾಂತಿ’ಯ ಬಿಜ್ಜಳ ಹೇಳುತ್ತಾನೆ : ‘ಪ್ರೇಮ, ಕಾಮ, ಅತ್ಯಾಚಾರ, ವ್ಯಕ್ತಿಪ್ರೇಮ, ಜಾತಿಪ್ರೇಮ, ನಿಷ್ಕಾಮ ಪ್ರೇಮ - ಯಾವುದನ್ನು ಮಾಡಲು ಹೋಗಿ ಯಾವುದನ್ನು ಮಾಡುತ್ತೇವೋ ದೇವರೇ ಬಲ್ಲ...’

ಕವನವೊಂದನ್ನು ಸಾಲುಗಳ ಮಧ್ಯೆ ಓದಬೇಕೆಂದು ರೂಪನಿಷ್ಠ ವಿಮರ್ಶಕರು ಹೇಳುವ ಹಾಗೆ, ಲಂಕೇಶರಂಥ ಲೇಖಕರು ಮನುಷ್ಯರನ್ನು ಕೂಡ ಹಾಗೇ ಗ್ರಹಿಸಬೇಕೆಂದು ನಮಗೆ ನೆನಪಿಸುತ್ತಿರುತ್ತಾರೆ. ಆದ್ದರಿಂದಲೇ ಎಲ್ಲೆಡೆ ಇರುವ ಕೇಡು ನಾಯಕಪಾತ್ರಗಳಲ್ಲೂ ಇರುತ್ತದೆ ಎಂಬುದನ್ನು ಕಾಣಲು, ಕಾಣಿಸಲು ಈ ಬಗೆಯ ಲೇಖಕರು ಹಿಂಜರಿಯುವುದಿಲ್ಲ.

ಮನುಷ್ಯನ ಕೇಡಿನ ಪ್ರವೃತ್ತಿ ಕತ್ತಿಯ ಮೊನೆಯಲ್ಲಿ ವ್ಯಕ್ತವಾದರೆ ಅದನ್ನು ಗುರುತಿಸುವುದು ಸುಲಭ. ಆದರೆ ಅದು ನಾವು ಸಾಮಾನ್ಯವಾಗಿ ಸಂದೇಹಿಸದಂಥ ಮಾನವವರ್ತನೆಗಳ ಹಿಂದೆಯೂ ಇದ್ದರೆ?

ಈವಿಲ್ ಗೆ ಇನ್ನೊಂದು ಈವಿಲ್ ಅನ್ನು ಕೇವಲ ಸೋಲಿಸಿದ ಮಾತ್ರಕ್ಕೆ ಆನಂದವಿಲ್ಲ. ಬದಲಿಗೆ, ಮುಗ್ಧವಾದದ್ದನ್ನು ಹೊಸಕಿ ಹಾಕಿದಾಗಲೇ ಅದಕ್ಕೆ ತೃಪ್ತಿ’ ಎಂದು ಬಸವರಾಜ ಅರಸು ಹೇಳಿದ್ದರು.

ನಮ್ಮ ಓದು, ತರಬೇತಿಗಳು ನಮ್ಮ ಆಳದ ಕೇಡನ್ನು ಆಗಾಗ ಸ್ಪರ್ಶಿಸಿದರೂ ಅದನ್ನು ಸಂಪೂರ್ಣವಾಗಿ ಕದಲಿಸದೆ ಸೋತುಬಿಡುತ್ತವೆಯೇ? ಹಾಗಾದರೆ ಯಾವ ಮನುಷ್ಯನೂ ಮೂಲಭೂತವಾಗಿ ಬದಲಾಗಲಾರನೆ?

ಇನ್ನೊಬ್ಬ ವ್ಯಕ್ತಿಯ ಆಳಕ್ಕೆ ಹೋಗುವುದು ನಮ್ಮ ಆಳಕ್ಕೆ ಹೋಗುವ ಮೂಲಕ ಮಾತ್ರ ಸಾಧ್ಯ.

ಮನುಷ್ಯನಿಗೆ ಇನ್ನೊಬ್ಬರನ್ನು ಹಿಂಸಿಸುವುದರಲ್ಲಿ, ವಂಚಿಸುವುದರಲ್ಲಿ ಆನಂದವಿದೆ.

ಈವಿಲ್ ಗೆ ಇರುವ ವಿಚಿತ್ರ ಚಾಲಕಶಕ್ತಿ ಹಾಗೂ ಅದರ ಆಕರ್ಷಣೆ ಎಷ್ಟು ಆಳವಾದದ್ದು ಎಂಬುದನ್ನು ಅರಿಯದ ಲೇಖಕ ಭೋಳೆಯಾಗಿಬಿಡಬಲ್ಲ. ಕೇಡು ಅದೆಷ್ಟು ಆಕರ್ಷಕವಾಗಿರಬಲ್ಲದೆಂದರೆ, ಬರೆಯುತ್ತಾ, ಬರೆಯುತ್ತಾ ಲೇಖಕನೇ ಅದರ ಸ್ವರೂಪಕ್ಕೆ ಬೆರಗಾಗಿ ಅದರ ಮೋಹಕ್ಕೆ ಒಳಗಾಗಬಲ್ಲ.

ಈವಿಲ್ ಏಕಮನಸ್ಸಿನಿಂದ ಕೆಲಸ ಮಾಡುತ್ತಿರುತ್ತದೆ. ಅದಕ್ಕೆ ವಿನಾಶ ಮಾಡುವುದು ಹಾಗೂ ಗೆಲ್ಲುವುದು ಬಿಟ್ಟರೆ ಬೇರೆ ಕೆಲಸವೇ ಇಲ್ಲ. ಆದರೆ ಒಳಿತು ಹಾಗಲ್ಲ. ಕೇಡು ಹೆಚ್ಚಿಗೆ ಇರುವ ಜನ ಏನಾದರೂ ಮಾಡಿ ಸುಳ್ಳು, ಮೋಸ ಎಲ್ಲ ಬೆರೆಸಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಯತ್ನಿಸುತ್ತಾರೆ; ಆದರೆ ಒಳ್ಳೆಯತನ ಹೆಚ್ಚಿಗೆ ಇರುವ ಸಂಕೋಚ ಸ್ವಭಾವದವರು ಹಿಂದೆ ಸರಿದುಬಿಡುತ್ತಾರೆ.

ಮನೋವಿಜ್ಞಾನಿ ರೊಲೋ ಮೇ ಎರಡು ಬಗೆಯ ಮುಗ್ಧತೆಗಳನ್ನು ಗುರುತಿಸುತ್ತಾನೆ. ಒಂದು, ಭೋಳೆ ಮುಗ್ಧತೆ; ಇನ್ನೊಂದು, ಪ್ರಾಮಾಣಿಕ ಮುಗ್ಧತೆ. ಅವನ ಪ್ರಕಾರ ‘ಯಾವುದು ಕೇಡಿನ ಸ್ವರೂಪ ಹಾಗೂ ಶಕ್ತಿಯನ್ನು ಅರಿತಿರುವುದಿಲ್ಲವೋ ಅದು ಭೋಳೆ ಮುಗ್ಧತೆ; ಕೇಡನ್ನು ಅರಿತು ತನ್ನ ಮುಗ್ಧತೆಯನ್ನು ಉಳಿಸಿಕೊಳ್ಳುವುದೇ ಪ್ರಾಮಾಣಿಕ ಮುಗ್ಧತೆ’.

No comments:

Post a Comment