Thursday, November 27, 2014

ಹಾಗೆ ಸುಮ್ಮನೆ - ಎರಡು ಕಾರ್ಯಕ್ರಮಗಳ ಬಗ್ಗೆ

ಒಂದು ಆಡಿಯೋ ಪುಸ್ತಕ ಬಿಡುಗಡೆ, ಮತ್ತೊಂದು ಹೊಸ ಸಿನೆಮಾ ಪ್ರೀಮಿಯರ್ ಶೋ. ಒಂದು ಸಮಾಜ ಸೇವೆಗಾಗಿ, ಮತ್ತೊಂದು ಪ್ಯಾಷನ್ ಗಾಗಿ. ಎರಡರಲ್ಲೂ ಹೊಸ ಮುಖಗಳೇ ಹೆಚ್ಚು. ಎರಡೂ ತಂಡಗಳ ನಿರ್ದೇಶಕರು ಹೊಸಬರು. ಎರಡೂ ಕಾರ್ಯಕ್ರಮಗಳು ಹೇಗಿದ್ದವು?

ಮೊದಲ ಕಾರ್ಯಕ್ರಮದಲ್ಲಿ ಪ್ರಾಜೆಕ್ಟ್ ನ ಸಾರಥ್ಯ ವಹಿಸಿದ ವ್ಯಕ್ತಿಯೇ ಎಲ್ಲೆಲ್ಲೂ ಕಾಣುತ್ತಿದ್ದರೆ, ಎರಡನೇ ಕಾರ್ಯಕ್ರಮದಲ್ಲಿ ನಿರ್ದೇಶಕ  ಚಿತ್ರತಂಡವನ್ನು ಮುಂದಿಟ್ಟು ವಿನಯದಿಂದ ಹಿಂದೆ ನಿಂತಿದ್ದರು. ಮೊದಲನೆಯದರಲ್ಲಿ ಆ ಕ್ಷಣಕ್ಕೆ  ತಮಗೆ ಮುಖ್ಯವಾದವರನಷ್ಟೇ (ಪ್ರಾಜೆಕ್ಟ್ ಗಲ್ಲಾ) ಆಗಾಗ ನೆನಪಿಸಿಕೊಳ್ಳುತ್ತಿದ್ದರೇ, ಎರಡನೆಯ ಕಾರ್ಯಕ್ರಮದ ಕೊನೆಯಲ್ಲಿ ಮಾತಾಡಿದ ನಿರ್ದೇಶಕ, ತನ್ನಿಡೀ ಜೀವನದಲ್ಲಿ, ಕನಸಿನಲ್ಲಿ ಸಹಕರಿಸಿದವರನ್ನು, ಜೊತೆಯಲ್ಲಿದ್ದವರನ್ನು ಸ್ಮರಿಸಿ 'ಎಂದರೋ ಮಹಾನುಭಾವಲು' ಎಂದು ಎಲ್ಲರಿಗೂ ವಂದಿಸಿದರು.

ಮೊದಲನೆಯ ಕಾರ್ಯಕ್ರಮದಲ್ಲಿ ಕೊನೆಯವರೆಗೂ ತಂಡದವರ್ಯಾರು ಒಟ್ಟಿಗೆ ಫೋಟೋ ತೆಗೆಸಿಕೊಳ್ಳುವುದು ಅಥವಾ ಸ್ಟೇಜ್ ಹತ್ತುವುದಿರಲಿ, ಅವರ ಹೆಸರುಗಳು ಕೂಡ ಬಂದವರಾರಿಗೂ ತಿಳಿಯಲಿಲ್ಲ.  ಎರಡನೆಯ ಕಾರ್ಯಕ್ರಮದಲ್ಲಿ ತಂಡದ ಪ್ರತಿಯೊಬ್ಬರೂ ಬಂದಿದ್ದ ಮೀಡಿಯಾಗಳೊಟ್ಟಿಗೆ ತಮ್ಮ ಅನುಭವ ಹಂಚಿಕೊಳ್ಳುತ್ತಾ, ಆನಂದ ಅನುಭವಿಸುತ್ತಿದ್ದರು. ಮೊದಲ ಕಾರ್ಯಕ್ರಮದ ಸಾರಥ್ಯ ವಹಿಸಿದ ವ್ಯಕ್ತಿಯ ಹೆಸರು ಮಾಡುವ ಹಪಾಹಪಿಯನ್ನು ನೋಡಿ ಕಿರಿಕಿರಿಯಾದರೆ, ಮತ್ತೊಂದರ ಕಾರ್ಯಕ್ರಮದ ಸಾರಥ್ಯ ವಹಿಸಿದ ವ್ಯಕ್ತಿ ಮೌನವಾಗಿ ತನ್ನ ಕನಸು ಈಡೇರಿದ ಧನ್ಯತೆ ಅನುಭವಿಸುತ್ತಿದ್ದನ್ನು ನೋಡಿ ಖುಷಿಯಾಯಿತು.

ಎರಡನೆಯ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದವರಿಗೆ, ಅವರ ಸಮಯಕ್ಕೆ ಸಂಭಾವನೆ ನೀಡಿದೆಯೋ ಇಲ್ಲವೋ? ತಿಳಿದಿಲ್ಲ. ಆದರೆ ಅವರು ಮಾಡಿರುವ ಕೆಲಸದ ಬಗ್ಗೆ ಹೆಮ್ಮೆಯಂತೂ ನಿರ್ದೇಶಕನ ಮುಖದಲ್ಲಿ ಕಾಣುತ್ತಿತ್ತು. ಮೊದಲನೆಯ ಪ್ರಾಜೆಕ್ಟ್ ಸಮಾಜಸೇವೆಯ ಉದ್ಧೇಶದಿಂದ ಕೂಡಿದ್ದರಿಂದ, ಅದಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರೂ ಹಣ ತೆಗೆದುಕೊಳ್ಳದೇ ಮಾಡಿದ್ದರು. ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲೇಬೇಕಾಗಿದ್ದುದು ತಂಡದ ನಿರ್ದೇಶಕನ ಕರ್ತವ್ಯವಾಗಿತ್ತು. ಆದರೆ ಆ ಕೆಲಸವಾಗಲೇ ಇಲ್ಲ. ತಂಡದ ಪ್ರತಿಯೊಬ್ಬರೂ ತಮ್ಮ ಅತ್ಯಮೂಲ್ಯ ಸಮಯವನ್ನು ಇದಕ್ಕಾಗಿ ನೀಡಿದ್ದಾರೆ ಎಂಬ ಅರಿವೇ ಇಲ್ಲದಂತಾಡುತ್ತಿದ್ದದ್ದು ಬೇಸರದ ಸಂಗತಿ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅಲ್ಲವೇ? 

ಇವೆರಡನ್ನೂ ದಾಖಲಿಸದೇ ಸುಮ್ಮನಿರಬಹುದಿತ್ತು. ಆದರೆ ಮುಖವಾಡಗಳನ್ನು ಕಳಚುವುದು ಹೇಗೆ?

Thursday, November 6, 2014

ಪ್ರೇಮವು ಆತ್ಮದಾ ‘ಹರಿವು’, ಇರುವಿಗೆ ಅರಿವಿನ ಮರೆವು - ಹರಿವು ಕನ್ನಡ ಚಲನಚಿತ್ರ.

ತಾಯಿಯ ಮಡಿಲಲ್ಲಿ, ತಾಯಿಯೇ ನನ್ನ ದೇವರು, ಹೀಗೆ ಅಮ್ಮ ಮಕ್ಕಳ ಸೆಂಟಿಮೆಂಟ್ಸ್ ನಲ್ಲಿ ಬಂದಷ್ಟು ಚಿತ್ರಗಳು, ಅಪ್ಪ ಮಗನದು ಬಂದಿರುವುದು ಬಹಳ ಕಡಿಮೆ. ನಮ್ಮ ಚಿತ್ರಗಳಲ್ಲಿಯೂ, ಮನೆಗಳಲ್ಲಿಯೂ  ‘ಅಪ್ಪ’ ‘ಯಜಮಾನ’ನಾಗಿರುವುದೇ ಹೆಚ್ಚು.  ಹಿಂದೆ ಭಾವನಾತ್ಮಕವಾಗಿ ಚಿತ್ರಿಸಲೋ ಅಥವಾ ಹೆಂಗಳೆಯರನ್ನು ಸೆಳೆಯಲೋ ರಚಿತವಾಗುತ್ತಿದ್ದ ಕಣ್ಣೀರಿನ ಅಮ್ಮ ಈಗೀಗ ಕಾಣೆಯಾಗುತ್ತಿದ್ದಾಳೆ. ಕುಟುಂಬಗಳು ಸಣ್ಣದಾಗುತ್ತಿರುವುದರಿಂದಲೋ ಅಥವಾ ಅಮ್ಮ ಕೂಡ ಹೊರಗೆ ದುಡಿಯುವ ಕಾರಣದಿಂದಲೋ, ಇತ್ತೀಚಿನ ದಿನಗಳಲ್ಲಿ 'ಅಪ್ಪ' ಕೂಡ ಸಮಾಜದ ಭಾವನಾತ್ಮಕ ಕೇಂದ್ರವಾಗುತ್ತಿದ್ದಾನೆ.  ‘ಅಪ್ಪ’ನನ್ನು ಒರಟು ಮನುಷ್ಯನಂತೆಯೋ, ಶಿಸ್ತಿಯ ಸಿಪಾಯಿಯಂತೆಯೋ ಅಥವಾ ಕುಡುಕನಾಗಿ ಮನೆ ಮಕ್ಕಳನ್ನು ಬೀದಿಗೆ ಬೀಳುವಂತೆ ಮಾಡುವ ವ್ಯಕ್ತಿಯಾಗಿಯೋ ಚಿತ್ರಿಸದಂತೆ, ‘ಅಪ್ಪ’ ನೇ ಮಕ್ಕಳ ‘ಅಮ್ಮ’ ಕೂಡ ಆಗಿ ಸಲಹುವಂತಹ ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ‘ಏಕಾಂಗಿ’ ಯಲ್ಲಿ, ಯಾರ ಹಂಗೂ ಇಲ್ಲದಂತೆ ಒಂಟಿಯಾಗಿಯೇ, ಸಮಾಜದ ಸಂಪರ್ಕವೇ ಇಲ್ಲದಂತೆ, ಶಿಸ್ತಿನಿಂದ ಬೆಳೆಯುವಂತೆ ಪ್ರೇರೇಪಿಸುವ ‘ಅಪ್ಪ’ನಿದ್ದರೆ, ‘ಪರಮಾತ್ಮ’ ದಲ್ಲಿ ‘ಅಪ್ಪ’ ತಾನೇ ‘ಅಮ್ಮ’ ಕೂಡ ಆಗಿ ಮಗನನ್ನು ಬೆಳೆಸುತ್ತಾನೆ.  ನಂತರ ಆ ಮಗ ಕೂಡ ತಾನು  ‘ಅಪ್ಪ’ನಾದಾಗ ತನ್ನ ಮಗನಿಗೆ ‘ಅಮ್ಮ’ ಕೂಡ ಆಗಬೇಕಾಗುತ್ತದೆ.  ಹೀಗೆ ಏಕಾಂಗಿಯಾಗಿ ‘ಅಪ್ಪ’ ನೇ ‘ಅಮ್ಮ’ ನ ಪಾತ್ರವನ್ನು ನಿರ್ವಹಿಸುತ್ತಿದ್ದಾನೆ.  



ಈ ನಿಟ್ಟಿನಲ್ಲಿ ಬಂದಂತ ಮತ್ತೊಂದು ಚಿತ್ರ ‘ಹರಿವು’. ಮಾತಾಡುವ ಮಗ-ಅಪ್ಪ ಹಾಗೂ ಮೌನದ ಅಪ್ಪ-ಮಗ ಈ ಎರಡು ಕಥೆಗಳನ್ನು ಹೊತ್ತು ಸಾಗುವ ಹರಿವು. ಮಾತಾಡುವ ಮಗ-ಅಪ್ಪನ ಜೋಡಿಗಿಂತ ಮಾತಾಡದೇ ಇರುವ, ಫ್ರೀಜ್ ಆಗಿಬಿಡುವ, ಆಗಾಗ ಸ್ಟಾಚ್ಯು ಆಗುವ ಅಪ್ಪ-ಮಗನ ಸಂಬಂಧ ವೀಕ್ಷಕರ ಮನಸ್ಸನ್ನು ಕಲಕಿಬಿಡುತ್ತದೆ. ಹಿಂದೆಲ್ಲಾ ಮನುಷ್ಯ ಸಂಬಂಧಗಳು ಶ್ರೀಮಂತ ವರ್ಗದಲ್ಲಿ ಮಾತ್ರ ತೆಳುವಾಗಿದ್ದದ್ದು, ಈಗೀಗ ಮಧ್ಯಮ ವರ್ಗಗಳಲ್ಲೂ ಹದಗೆಡುತ್ತಿರುವುದು, ಸಮಯದ ಅರಿವಿಲ್ಲದೆ, ನಾವೇನನ್ನೂ ಕಳೆದುಕೊಳ್ಳುತ್ತಿದ್ದೇವೆ ಎಂಬ ಪರಿವೆಯೇ ಇಲ್ಲದೆ ಹಣಕ್ಕಾಗಿ, ಎಡಬಿಡದೆ ದುಡಿಯುವುದಕ್ಕಾಗಿ ನಾಗಲೋಟದಿಂದ ಓಡುತ್ತಿರುವ ಮಧ್ಯಮ ವರ್ಗದ ಜನರ ಹತಾಶೆ, ಕಿರಿಕಿರಿ, ಅಸಹಾಯಕತೆಯನ್ನು ಮಾತಾಡುವ ಮಗ-ಅಪ್ಪನ ಮೂಲಕ ‘ಹರಿವು’ ಮಾತಾಡುತ್ತದೆಯಾದರೂ, ಮೌನದ ಅಪ್ಪ-ಮಗನ ಜೋಡಿ ಮಾಡುವ ಮೋಡಿಯ ಮುಂದೆ ಪೇಲವ ಅನಿಸಿಬಿಡುವುದು ಸುಳ್ಳಲ್ಲ. ಅಂತೆಯೇ ಮೌನಕ್ಕಿರುವ ತಾಕತ್ತನ್ನು ಎತ್ತಿ ತೋರಿಸುತ್ತದೆ. ಕನ್ನಡ ಚಲನಚಿತ್ರಗಳು ಮಾತುಗಳಲ್ಲಿಯೇ ಗೆಲ್ಲಬೇಕಾದ ಅವಶ್ಯಕತೆಯಿಲ್ಲ, ಮೌನದಲ್ಲೂ ಗೆಲ್ಲಬಹುದು ಎಂಬ ಭರವಸೆಯನ್ನು ಮೂಡಿಸುವಂತಹ ಚಿತ್ರ ‘ಹರಿವು’.

ಚಿತ್ರದ ಮತ್ತೊಂದು ಎಳೆ, ಮೌನವಾಗಿರುವ ಅಪ್ಪ-ಮಗನ ಜೋಡಿಯ ಕಥೆ. ಪ್ರಜಾವಾಣಿಯಲ್ಲಿ ವೈದ್ಯರೊಬ್ಬರು ತಮ್ಮ ಅಂಕಣದಲ್ಲಿ ವರದಿ ರೂಪದಲ್ಲಿ ಬರೆದಿದ್ದ ನೈಜ ಕಥೆಯಾಧಾರಿತವಾದದ್ದು. ಎಂದೂ ಬೆಂಗಳೂರು ನೋಡದೆ ಇದ್ದ ಉತ್ತರ ಕರ್ನಾಟಕದ ಹಳ್ಳಿಯ ಬಡರೈತನೊಬ್ಬ, ತನ್ನ ಏಕೈಕ ಮಗನ ಚಿಕಿತ್ಸೆಗಾಗಿ, ಅವನನ್ನು ಉಳಿಸಿಕೊಳ್ಳುವ ಸಲುವಾಗಿ ಬರುವ ಕಥೆ.  ನಗರಗಳಲ್ಲಿ ಈಗೀಗ ಮಧ್ಯಮ ವರ್ಗದವರಲ್ಲಿ ಆರೋಗ್ಯ ಕಾಳಜಿಯಿಂದಾಗಿ, ಆರೋಗ್ಯದಲ್ಲಿ ಒಂದಿಷ್ಟು ಹೆಚ್ಚುಕಮ್ಮಿಯಾದರೂ ಕೈಗೊಬ್ಬ, ಕಾಲಿಗೊಬ್ಬ ವೈದ್ಯರು ಸಿಗುವಾಗ, ಜೊತೆಗೆ ಆರೋಗ್ಯ ವಿಮೆ ಯಂತಹ ಸೌಲಭ್ಯಗಳ ಅರಿವು, ಜೊತೆಗೆ ಮನೆಯ ಪ್ರತಿಯೊಬ್ಬರೂ ಎಡಬಿಡದೆ ದುಡಿಯುವುದರಿಂದ ಇಂತಹ ಕಾಯಿಲೆಗಳು ಬಂದಾಗ ತಮ್ಮ ಕೈಗೆಟಕುವ ದರದಲ್ಲಿ ಸಿಗುವ ವೈದ್ಯಕೀಯ ಚಿಕಿತ್ಸೆಗಳಿಂದ ನಮ್ಮವರನ್ನು ಕಾಪಾಡಿಕೊಳ್ಳಲುಬಹುದು ಎಂಬ ಆಶಾದಾಯಕ ವಾತಾವರಣವಿರುತ್ತದೆ. ಆದರೆ ಯಾವ ಸೌಲಭ್ಯವೂ ಇರದ, ಹಳ್ಳಿಯ ಅವಿದ್ಯಾವಂತ ಕಡುಬಡವರಿಗೆ ಯಾವುದಾದರೂ ಕಾಯಿಲೆ ಬಂದರೆ? ಹೊಟ್ಟೆಬಟ್ಟೆಗೆ ದುಡ್ಡಿಲ್ಲದ ಬಡ ರೈತ ಹೇಗೆ ಬಾಳಿಯಾನು?  ಅದೂ ಕೂಡ ಚಿಕಿತ್ಸೆಗಾಗಿ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಾಗ, ಅಲ್ಲಿಯೇ ತಿಂಗಳಾನುಗಟ್ಟಲೆ ಇರಬೇಕಾದ ಪರಿಸ್ಥಿತಿ ಉಂಟಾದರೆ?  ಹೇಗಿದ್ದಾನು?  ತಾನಾಯಿತು, ತನ್ನ ಸಂಸಾರವಾಯಿತು ಎಂಬಂತಿದ್ದ ರೈತನ ಬಾಳು, ಆತನ ಮಗನ ಕಾಯಿಲೆಯಿಂದ ಹೇಗೆ ಮೂರಾಬಟ್ಟೆಯಾಗುತ್ತದೆ? ಎಂಬುದನ್ನು ಅತಿ ಕಡಿಮೆ ಮಾತುಗಳಲ್ಲಿ, ದೃಶ್ಯಗಳಲ್ಲಿ ಕಥೆ ಹೇಳುತ್ತಾ ಹೋಗುತ್ತಾರೆ ನಿರ್ದೇಶಕ ಮಂಸೋರೆ.

ಪ್ರಕೃತಿ ಸಹಜವಾಗಿಯೇ, ಹೊಸ ಚಿಗುರಿಗಿರುವ ಪ್ರಾಮುಖ್ಯತೆ, ಜೀವಂತಿಕೆ, ಹಣ್ಣೆಲೆಗಳಿಗಿರುವುದಿಲ್ಲ. ತನ್ನ ಜೀವನವನ್ನು ಭದ್ರಪಡಿಸಿಕೊಳ್ಳುವಲ್ಲಿ ನಿರತನಾಗಿರುವ ಮಗನಿಗೆ, ಅಪ್ಪನ ಕಾಯಿಲೆ ಅಂತಹ ಗಾಬರಿಯನ್ನುಂಟು ಮಾಡದಿರುವುದು ಆಶ್ಚರ್ಯವೇನಲ್ಲ. ಅಂತೆಯೇ ತನ್ನ ಪೀಳಿಗೆಯನ್ನು ಮುಂದುವರೆಸಬೇಕಾದ ಮಗನಿಗೆ ಮಾರಣಾಂತಿಕ ಕಾಯಿಲೆಯಾದರೆ, ಅಪ್ಪ, ಅಮ್ಮನಿಗೆ ಬದುಕೇ ಇಲ್ಲದಂತಾಗಿಬಿಡುವುದು ಕೂಡ ಸಹಜ ಪ್ರಕ್ರಿಯೆಯೇ ಹೌದು. ಬದುಕೇ ಹಾಗೇ.  ಮಕ್ಕಳಂತೆಯೇ ವಯಸ್ಸಾದವರು ಕೂಡ ನಿಸ್ಸಹಾಯಕರು ಎಂಬ ಸತ್ಯದ ಅರಿವಿದ್ದರೂ ಕೂಡ, ಯೌವ್ವನದಲ್ಲಿ ತಮ್ಮ  ಬದುಕೇ ಮುಖ್ಯವಾಗಿಬಿಡುವುದು,  ವಯಸ್ಸಾದವರ ನಡವಳಿಕೆಗಳಿಂದ ಕಿರಿಕಿರಿ ಅನುಭವಿಸುವುದು ಜೀವನದ ಮತ್ತೊಂದು ಮಜಲಷ್ಟೇ.  ನಾವು ಕೂಡ ಮುಂದೇ ವಯಸ್ಸಾದವರ ಪಟ್ಟಕ್ಕೇರಿದಾಗ ನಮ್ಮ ಮಕ್ಕಳಿಂದ ಆಗುವ ನೋವಿನ ಅನುಭವ, ಜೊತೆಗೆ  ಪೋಷಕರು ಮಕ್ಕಳಿಗಾಗಿ ತಮ್ಮ ಬದುಕನ್ನೇ ತೆರಲು ತಯಾರಾಗುವ ಪರಿ, ಎರಡೂ ಕೂಡ ಮನೋಜ್ಞವಾಗಿ ‘ಹರಿವು’ ನಲ್ಲಿ ಚಿತ್ರಿತಗೊಂಡಿದೆ.

ಇವೆರಡೂ ಎಳೆಗಳ ನಡುವೆ ಕಂಡು ಬರುವುದು ನಮ್ಮ ಸರ್ಕಾರಿ ಆಸ್ಪತ್ರೆಗಳ ಚಿತ್ರಣ.  ದಿನವೂ ಸಾವಿರಾರು ರೋಗಿಗಳಿಂದ ಅದ್ರಲ್ಲೂ ಬಡ ರೋಗಿಗಳಿಂದ ತುಂಬಿ ತುಳುಕುವ ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರ ಧೋರಣೆ ಅತ್ಯಂತ ನೈಜವಾಗಿ ಬಿಂಬಿತಗೊಂಡಿದೆ.  ದಿನಾ ಸಾಯೋರಿಗೆ ಅಳೋರ್ಯಾರು?  ಎಂಬಂತೆ, ಅವರಿಗೆ ರೋಗಿಗಳ, ರೋಗಿಗಳ ಸಂಬಂಧಿಕರ ಕಷ್ಟಕಾರ್ಪಣ್ಯಗಳು, ನೋವು ಸಂಕಟಗಳು ನಗಣ್ಯ.  ನಗರಗಳಲ್ಲಿ, (ಬಹುಶಃ ಈಗೀಗ ಹಳ್ಳಿಗಳಲ್ಲೂ ಕೂಡ) ಮಾನವೀಯ ಸಂಬಂಧಗಳು ಮೌಲ್ಯ ಕಳೆದುಕೊಳ್ಳುವುದನ್ನು ತೋರಿಸುತ್ತಾ ಹೋಗುತ್ತಾರೆ.  ರೋಗಿಗಳ ನೋವಿನಲ್ಲೂ, ಸಾವಿನಲ್ಲೂ ವಾರ್ಡ್ ಬಾಯ್ ಮುಂತಾದವರು ತಮ್ಮ ಬದುಕನ್ನು ಕಂಡುಕೊಳ್ಳುವುದನ್ನು ನೋಡಿದಾಗ ಸಂವೇದನೆಯುಳ್ಳವರಿಗೆ ಸಂಕಟವಾಗದಿರದು. ಹಾಗೆಯೇ ಪ್ರಾಕ್ಟಿಕಲ್ ಆಗಿ ಯೋಚಿಸಿದಾಗ, ಅವರಿಗೆ ಬರುವ ಸಂಬಳ, ಸವಲತ್ತುಗಳಿಗೆ, ನಗರದಲ್ಲಿ ವಾಸಿಸುವವರಿಗೆ ಎಷ್ಟೇ ಹಣವಿದ್ದರೂ ಸಾಲದು ಎಂಬ ಸತ್ಯ ಕಣ್ಣಿಗೆ, ಮನಸ್ಸಿಗೆ ರಾಚುತ್ತದೆ.  ಹಣವೇ ಸಂಬಂಧವಾಗಿಬಿಡುವುದು ನಗರವಾಸಿಗಳ ಕರ್ಮಕಾಂಡವಾದರೆ, ಹಣವಿಲ್ಲದಿರುವುದೇ ಹಳ್ಳಿಗರ ನೋವಿಗೆ ಕಾರಣವಾಗಿಬಿಡುವುದು ಬದುಕಿನ ದುರಂತ.  ಸಂಬಂಧ ಮುಖ್ಯವೇ? ಹಣ ಮುಖ್ಯವೇ? ಎಂಬ ತಾಕಲಾಟ ಉಂಟು ಮಾಡಿಬಿಡುತ್ತದೆ ‘ಹರಿವು’.

ಸಾಮಾನ್ಯವಾಗಿ ನಮ್ಮ ಕನ್ನಡ ಚಿತ್ರಗಳಲ್ಲಿ ಸರ್ಕಾರಿ ವೈದ್ಯರನ್ನು ಅಪರಾಧಿಗಳಂತೆ, ಹಣಕ್ಕಾಗಿ ಏನೂ ಬೇಕಾದರೂ ಮಾಡುವವರಂತೆ ಚಿತ್ರಿಸುತ್ತಾರೆ.  ಆದರೆ ‘ಹರಿವು’ ಚಿತ್ರದಲ್ಲಿ ವೈದ್ಯರನ್ನು ಮಾನವೀಯತೆಯುಳ್ಳ, ಹಳ್ಳಿಗರ ಬಗ್ಗೆ ಕನಿಕರವುಳ್ಳವರಂತೆ ಚಿತ್ರಿಸಿರುವುದು ವಿಶೇಷ.  ರೈತನ ಬಳಿ ಹಣವಿಲ್ಲದಿದ್ದರೂ, ದಾಬಾದವ ಆತನಿಗೆ ನೀಡುವ ತಿಂಡಿ, ಚಹಾ ಮತ್ತು ಆತನನ್ನು ಊರಿಗೆ ಕರೆದೊಯ್ಯುವಂತೆ ಪ್ರೇರೇಪಿಸುವುದು ಎಲ್ಲವನ್ನೂ ನೋಡಿದಾಗ ಬಹುಶಃ ಬೆಂಗಳೂರಿನಲ್ಲಿ ನೆಲೆಸಿರುವವರಲ್ಲಿ ಮುಕ್ಕಾಲು ಭಾಗ ಜನ ವಲಸಿಗರಾದ್ದರಿಂದ, ತಮ್ಮ ಹುಟ್ಟೂರಿನ ಬಗ್ಗೆ ಮೋಹವಿರುವುದು, ಹಳ್ಳಿಯೆಂದರೆ ಪ್ರೀತಿಯಿರುವುದು ಎದ್ದು ಕಾಣುತ್ತದೆ.  

ಭಾವನಾತ್ಮಕ / ಕಲಾತ್ಮಕ ಚಿತ್ರಗಳಲ್ಲಿ ಹೆಚ್ಚಾಗಿ ಚಿತ್ರದ ಅಂತ್ಯವನ್ನು ವಿಷಾದದಿಂದಲೇ ಕೊನೆಗಾಣಿಸುವುದು, ನಿರಾಸೆ, ನೋವನ್ನೇ ಎತ್ತಿ ಹಿಡಿಯುವುದು, ಆ ಮೂಲಕ ಪ್ರೇಕ್ಷಕರ ಭಾವನೆಗಳನ್ನು ಹೊಡೆದೆಬ್ಬಿಸುವುದು ನಡೆಯುತ್ತಲೇ ಇರುತ್ತದೆ.  ‘ಹರಿವು’ ನ ವಿಶೇಷವೆಂದರೆ ಚಿತ್ರದಲ್ಲಿನ ಒಂದು ಪಾತ್ರದ ಅಂತ್ಯ, ನೋವನ್ನುಂಟು ಮಾಡುತ್ತದೆಯಾದರೂ, ಅನೇಕರ ಬದುಕನ್ನು ಸರಿಪಡಿಸಿಬಿಡುತ್ತದೆ. ಮತ್ತೂ ಒಂದು ಗಮನಿಸಬೇಕಾದ ವಿಷಯವೆಂದರೆ - ಹಳ್ಳಿಯಿಂದ ಮಗನ ಚಿಕಿತ್ಸೆಗಾಗಿ ಹೊರಡುವ ‘ಅಪ್ಪ’, ನಗರದಲ್ಲಿ ಅಡುಗೆ ಮಾಡಲು ಬೇಕಾದ ಪಾತ್ರೆಪಗಡೆಗಳನ್ನು ಕೊಂಡೊಯ್ದಿರುತ್ತಾನೆ.  ವಾಪಾಸ್ಸು ಬರುವಾಗ, ತನ್ನ ಅತ್ಯಂತ ನೋವಿನ ಕ್ಷಣಗಳಲ್ಲೂ ಆ ಪಾತ್ರೆಪಗಡೆಗಳನ್ನು ಮರೆಯದೇ, ತನ್ನ ಹಳ್ಳಿಗೆ ವಾಪಾಸ್ಸು ತರುವುದು, ಆತನಿಗೂ ಕೂಡ ಆ ನೋವಿನ ಗಳಿಗೆ ಕ್ಷಣ ಕಾಲದ್ದೇ?!  ಬದುಕೇ ಇಲ್ಲವೆಂಬಂತೆ ಆ ಕ್ಷಣ ಭಾಸವಾದರೂ, ತನ್ನ ಮುಂದಿನ ಬದುಕಿಗೆ ಆತ ಅಣಿಯಾಗುತ್ತಿದ್ದಾನೆ ಎಂಬುದನ್ನು ಹೇಳುತ್ತದೆಯೇ? ಎಂಬುದು ಕ್ಷಣಕ್ಷಣಕ್ಕೂ ಕಾಡಿದ್ದಂತೂ ಸುಳ್ಳಲ್ಲ.  ‘ಹರಿವು’ ಚಿತ್ರದ ಟ್ಯಾಗ್ ಲೈನ್ ‘ನಿನ್ನೆಗಳಿರದ ನಾಳೆಗಳೆಡೆಗೆ’ ಕೂಡ ಬದುಕಿನೆಡೆಗಿನ ಪ್ರೀತಿಯನ್ನೇ, ಮನುಷ್ಯ ಎಷ್ಟೇ ನಿರಾಸೆಯಿಂದ ಬಳಲಿದರೂ, ಬದುಕನ್ನು ಪ್ರೀತಿಸುವುದನ್ನೇ ಒತ್ತಿ ಹೇಳುತ್ತದೆ. ಬದುಕಿಗೆ ಹಣವೋ, ಸಂಬಂಧವೋ? ಎಂಬ ಪ್ರಶ್ನೆಗಳಿಗಿಂತ ಬದುಕನ್ನು ಪ್ರೀತಿಯಿಂದ ಬದುಕುವುದಷ್ಟೇ ಮುಖ್ಯ ಎಂಬ ಭಾವನೆ ಉಂಟು ಮಾಡಿಬಿಡುತ್ತದೆ.  

ವಸುಧೇಂದ್ರ ಅವರು ಎಂದೋ ಹೇಳಿದ ಮಾತು, ಕನ್ನಡ ಚಿತ್ರಗಳನ್ನು ನೋಡುವಾಗಲೆಲ್ಲಾ ನೆನಪಾಗುತ್ತಲೇ ಇರುತ್ತದೆ.  "ನಮ್ಮ ಚಿತ್ರಗಳಲ್ಲಿ ಮಾತುಗಳನ್ನು ಕೇಳಿಸಿಕೊಂಡು ಸಾಕಾಗಿದೆ, ಒಂದಿಷ್ಟು ಮೌನ ಬೇಕು.  ಆ ಮೌನ ಉಂಟು ಮಾಡುವ ಅನುಭವವನ್ನು, ಮೌನದಿಂದ ಆಸ್ವಾದಿಸಿದಾಗಲಷ್ಟೇ ವೀಕ್ಷಕ ತೃಪ್ತಿಯಾಗುತ್ತಾನೆ" ಎಂದಿದ್ದರು. ಅಂತಹ ಕ್ಷಣಗಳು ಹೇರಳವಾಗಿ ‘ಹರಿವು’ ನಲ್ಲಿ ತುಂಬಿವೆ.  ಬಹುಶಃ ನಿರ್ದೇಶಕ ಮಂಸೋರೆ, ಕಲಾಶಾಲೆಯಿಂದ ಕಲಿತು ಬಂದದಕ್ಕೋ ಏನೋ? ಕಥೆ ಏನನ್ನೋ ಹೇಳುತ್ತಿದ್ದರೂ ಕೂಡ, ಸಣ್ಣ, ಸಣ್ಣ ದೃಶ್ಯಗಳು, ಶಾಟ್ಸ್ ಗಳು ಮತ್ತೇನನ್ನೋ ಹೇಳುತ್ತಿರುತ್ತವೆ. ನೋಡುವ ಸೂಕ್ಷ್ಮತೆ ವೀಕ್ಷಕನಿಗಿರಬೇಕಷ್ಟೇ!  ಅದ್ಭುತ ಛಾಯಾಗ್ರಹಣ, ಅದ್ರಲ್ಲೂ ಚಿತ್ರದುರ್ಗದ ಗಾಳಿಯಂತ್ರಗಳು, ಹೊಸಪೇಟೆಯತ್ತ ತಿರುಗುವ ದಾರಿ, ವೈದ್ಯರ ಮುಖ ‘ಅಪ್ಪ’ನ ಮುಖಕ್ಕೆ ಬದಲಾಗುವುದು, ಪುಸ್ತಕ ಓದುವಾಗ ಅದ್ರಲ್ಲಿ ಬದಲಾಗುವ ಚಿತ್ರಗಳು, ಕತ್ತಲಿನಲ್ಲಿ ಕಣ್ಮರೆಯಾಗುವ ವ್ಯಾನಿನ ಲೈಟ್, ಬೆಳದಿಂಗಳಾಗುವ ಪರಿ, ಗುಡಿಸಲಿನಲ್ಲಿ ಕತ್ತಲು ಬೆಳಕಿನ ಮಿಶ್ರಣ ಹೀಗೆ...  ಬಹಳಷ್ಟು ದೃಶ್ಯಗಳು ಮನಸ್ಸನ್ನು ಹಿಡಿದಿಟ್ಟುಕೊಳ್ಳುತ್ತವೆ.

ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸಂಚಾರಿ’ ವಿಜಯ್ ನಟನೆಯಂತೂ ಅತ್ಯದ್ಭುತ.   ಪಾತ್ರವೇ ತಾನಾಗಿಬಿಡುವುದು ಅವರಿಗೆ ಸಿದ್ಧಿಸಿದೆ. ಹೆಂಡತಿಯ ಪಾತ್ರಧಾರಿ, ಚಿತ್ರದ ಕ್ಲೈಮಾಕ್ಸ್ ನಲ್ಲಿ ನಟನೆಯಲ್ಲಿ ವಿಜಯ್ ಅವರನ್ನು ಮೀರಿಸಿಬಿಡುತ್ತಾರೆ. ಬಾಲಕನ ಪಾತ್ರಧಾರಿ ನೈಜವಾಗಿ ನಟಿಸಿ, ಎಲ್ಲರ ಮನಸೂರೆಗೊಳ್ಳುತ್ತಾನೆ.  ಚಿತ್ರದ ಕೊನೆಯಲ್ಲಿ ಬರುವ ಹಾಡಂತೂ ಇಡೀ ಚಿತ್ರದ ಕಥೆಯನ್ನು ಕ್ಷಣ ಮಾತ್ರದಲ್ಲಿ ಹೇಳಿಬಿಡುತ್ತದೆ.  ಅದ್ಭುತ ಸಾಲುಗಳು, ಅದಕ್ಕೆ ಸರಿಯಾಗಿ ಹೊಂದುವ ದೃಶ್ಯಗಳು, ಸಂಗೀತ ಮತ್ತು ಅದನ್ನು ಹಾಡಿರುವ ಪರಿ ಒಂದೊಳ್ಳೆ ಭಾವಚಿತ್ರವನ್ನು ಮೂಡಿಸಿಬಿಡುತ್ತದೆ.  

ಕೊನೆ ಮಾತು - ಅದದೇ ನಿರ್ದೇಶಕರ ಹೆಸರುಗಳನ್ನು ಪ್ರಶಸ್ತಿಯ ಪಟ್ಟಿಯಲ್ಲಿ ನೋಡಿರುವ ಕನ್ನಡ ವೀಕ್ಷಕರಿಗೆ, ಇನ್ನು ಮುಂದೆಯಾದರೂ ಹೊಸ ಹೆಸರುಗಳು ಕಾಣಿಸಬಹುದು ಎಂಬ ಆಶಾಭಾವನೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ ‘ಹರಿವು’.

Wednesday, August 6, 2014

ಹೀಗೊಂದು Disclaimer!

ಹೀಗೊಂದು Disclaimer

ಒಂದಷ್ಟು ತಿಂಗಳುಗಳ ಹಿಂದೆ ಯಾವುದೋ ತರಬೇತಿ ಕಾರ್ಯಕ್ರಮಕ್ಕೆ ಹೋಗಿ ಬಂದಾಗ, ಮುಖತಃ ಪರಿಚಯವಾದ ಒಂದಷ್ಟು ವ್ಯಕ್ತಿಗಳು, ಅವರವರೇ ಪುಸ್ತಕ ರಿಲೀಸ್ ಮಾಡುವುದರಿಂದ ಹಿಡಿದು ದೂರದರ್ಶನ ಅಥವಾ ಇನ್ನಿತರ ಖಾಸಗಿ ಚಾನೆಲ್ ಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದದ್ದು, ಒಬ್ಬರನ್ನೊಬ್ಬರು ‘ಪ್ರೊಮೋಟ್’ ಮಾಡಿಕೊಳ್ಳುತ್ತಿದ್ದರಿಂದ ಬೇಸತ್ತು, ಯಾರನ್ನೂ ಟ್ಯಾಗ್ ಮಾಡದೇ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದೆ.  ನನ್ನ ಆ ಸ್ಟೇಟಸ್ ನಿಂದ ನೊಂದ ಅವರೆಲ್ಲರೂ ತಮ್ಮ, ತಮ್ಮ ವಾಲ್ ಗಳಲ್ಲಿ ಅನಾವಶ್ಯಕ ನನ್ನನ್ನು ‘ಟ್ಯಾಗ್’ ಮಾಡಿ, ಬೈದುಕೊಂಡಿದ್ದರು. ಮಾಧ್ಯಮಗಳು ಮತ್ತು ಫೇಸ್ ಬುಕ್ಕಿನಲ್ಲಿ ಈಗಾಗಲೇ ಚಿರಪರಿಚಿತರಾಗಿದ್ದುದರಿಂದ, ಅವರ ಒಂದಷ್ಟು ಬೆಂಬಲಿಗರು (ಈ ಲಿಸ್ಟಿನಲ್ಲಿ ಖ್ಯಾತ ಲೇಖಕ, ಲೇಖಕಿಯರ ಜೊತೆಗೆ ನನ್ನಂಥ ಒಂದಷ್ಟು ಅನಾಮಧೇಯರು ಇದ್ದರು)  ಬಾಯಿಗೆ ಬಂದದ್ದು ಮಾತನಾಡಿದಾಗಲೇ, ‘ಓಹೋ! ನಾನೊಂದು ದೊಡ್ಡ ಹುತ್ತಕ್ಕೆ ಕೈ ಹಾಕಿದ್ದೇನೆ!’ ಎಂಬುದು ತಿಳಿದದ್ದು!

ಆದರೆ ನನ್ನಲ್ಲಿ ಪ್ರಾಮಾಣಿಕತೆ ಇದ್ದುದರಿಂದಲೋ ಅಥವಾ ಯಾವುದೇ ಹಿಡನ್ ಅಜೆಂಡಾ ಇಲ್ಲದಿದುದರಿಂದಲೋ ಅಥವಾ ಅವರ ಇನ್ಯಾವುದಾದರೂ ‘ಹುನ್ನಾರ’ವೋ ಅಥವಾ ನಾನೊಂದು ಯಕಶ್ಚಿತ್ ‘ಸಾಮಾನ್ಯ’ಳು ಎನ್ನಿಸಿದುದರಿಂದಲೋ ಅಥವಾ ನನ್ನ ವಾದ ವೈಖರಿಯಿಂದಲೋ! ನನ್ನನ್ನು ಬ್ಲಾಕ್ ಮಾಡಲಾಯಿತು. ಮತ್ಯಾರೋ ಬೇಕೆಂದೇ ನನ್ನನ್ನು ‘ಅನ್ ಫ್ರೆಂಡ್’ ಮಾಡಿ, ನಾನೇ ‘ಅವರನ್ನು’ ಅನ್ಫ್ರೆಂಡ್ ಮಾಡಿದೆ’ ಎಂದು ಹಬ್ಬಿಸಿದರು.  ನನ್ನನ್ನು ‘ಬ್ಲಾಕ್’ ಮಾಡಿದ ಮೇಲೂ, ನನ್ನ ಮೇಲಿನ ವೈಯಕ್ತಿಕ ಪ್ರಹಾರಗಳು ನಡೆದೇ ಇದ್ದವು. ಆದರೆ ಉತ್ತರಿಸಲು ‘ಬ್ಲಾಕ್’ ಆಗಿದ್ದೆಯಾದ್ದರಿಂದ ಸಾಧ್ಯವಾಗಿರಲಿಲ್ಲ.  ಇದು ಕೂಡ ದೌರ್ಜನ್ಯವೇ ಅಲ್ಲವೇ? ಇರಲಿ.

ರಾತ್ರೋರಾತ್ರಿ ನನ್ನ ಈ ಒಂದು ಸ್ಟೇಟಸ್, ಜೊತೆಗೆ ಒಂದಷ್ಟು ಕಮೆಂಟ್ಸ್ ಬಹಳಷ್ಟು ಗೆಳೆಯರನ್ನು (ಕಂಡರಿಯದ/ಕೇಳರಿಯದ) ಗಿಟ್ಟಿಸಿತು. ಇನ್ ಬಾಕ್ಸಿನಲ್ಲಿ ಅನುಕಂಪದ ಮಾತುಗಳು ಬಂದು ಮುಟ್ಟಿದವು.  ನಾವಿದ್ದೇವೆ, ನಿನ್ನ ಜಗಳವನ್ನು ಮುಂದುವರೆಸೆಂದು ಹುರಿದುಂಬಿಸುವ ಮಾತುಗಳು ಬಂದವು.  ಆದರೆ ನನ್ನ ಸ್ಟೇಟಸ್ ‘ಗುಂಪುಗಾರಿಕೆ’ಯ ವಿರುದ್ಧವಾಗಿತ್ತು. ಹಾಗಾಗಿ ನನ್ನನ್ನು ಯಾವುದೇ ‘ಗುಂಪಿಗೆ’ ಸೇರಿಸಿಕೊಳ್ಳುವ ಅವರ ಪ್ರಯತ್ನ ಸಫಲವಾಗಲಿಲ್ಲ.  ನನ್ನಲ್ಲಿ ಪ್ರಾಮಾಣಿಕತೆ ಇತ್ತು, ಕಳಕಳಿ ಇತ್ತು ಹಾಗೂ ನನ್ನ ಸ್ಟೇಟಸ್ ಯಾವುದೇ ವ್ಯಕ್ತಿಗತ ದ್ವೇಷವಾಗಿರಲಿಲ್ಲ. ಆದರೂ ಕೂಡ ಸಿಕ್ಕಿದವರೆಲ್ಲರಿಗೂ, ಕೇಳಿದವರೆಲ್ಲರಿಗೂ ‘ಜಸ್ಟಿಫೈ’ ಮಾಡುವಂತ ಪರಿಸ್ಥಿತಿ ಬಂದೊದಗಿತು.

ಕೊನೆಗೊಮ್ಮೆ ನಾವು ಇಂತಹದೊಂದು ಸ್ಟೇಟಸ್ ಹಾಕಿಕೊಂಡಿಲ್ಲವೆಂಬಂತೇ / ಇಂತಹದೊಂದು ಪ್ರಕರಣವೇ ಆಗಿಲ್ಲವೆಂಬಂತೇ, ಎಲ್ಲರೂ ತಮ್ಮ, ತಮ್ಮ ಸ್ಟೇಟಸ್ ಗಳನ್ನೂ, ಕಾಮೆಂಟುಗಳನ್ನು ‘ಡಿಲೀಟ್’ ಮಾಡಿ ಸುಮ್ಮನಾಗಿಬಿಟ್ಟರು.  ಆದರೆ ನನಗೆ ಮಾತ್ರ ಈ ಘಟನೆ, ಮಾಧ್ಯಮದವರ ಅಥವಾ ಸ್ವಘೋಷಿತ ಕವಿ/ಬರಹಗಾರರ ಅಥವಾ ಅವರ ಬೆಂಬಲಿಗರ ಮತ್ತು ಈ ಘಟನೆಯನ್ನು ತಮ್ಮ ಬೇಳೆ ಬೇಯಿಸಿಕೊಳ್ಳುವುದರ ಕಡೆ ತಿರುಚುವ ರಾಜಕೀಯ ವ್ಯಕ್ತಿಗಳ ಮುಖವಾಡವನ್ನು ತೆರೆದಿಟ್ಟಿತು. ನನ್ನವರು ಎಂದೇ ತಿಳಿದಿದ್ದ ಅನೇಕರು ಕೂಡ ‘ಸಾಂಸ್ಕೃತಿಕ ರಂಗದಲ್ಲಿ ಸಿಕ್ಕಾಪಟ್ಟೆ ರಾಜಕೀಯವಿದೆ. ಅವರ ಸುದ್ಧಿಗೆ ಯಾಕೆ ಹೋದೆ?’ ಎಂದು ನನಗೆ ಬುದ್ಧಿ ಹೇಳಿದರು. ಅಂದಿನಿಂದ ನಾನು ಅಕ್ಷರಶಃ ಈ ಫೇಸ್ ಬುಕ್ಕಿನಲ್ಲಿ ಏಕಾಂಗಿಯಾದೆ.  ಯಾರೊಂದಿಗೂ ಚಾಟ್ ಮಾಡುವುದು ಸಲ್ಲ! ಎಂದರ್ಥ ಮಾಡಿಕೊಂಡೆ. ನನಗೆ ಸಹಾಯ ಮಾಡಲೆಂದು ಬರುವವರನ್ನು ದೂರವಿಟ್ಟೆ.  ಇದರ ಹಿಂದೆ ಮತ್ತ್ಯಾವುದೋ ‘ಹುನ್ನಾರ’ವಿರಬಹುದೆಂಬುದನ್ನು ಅರ್ಥ ಮಾಡಿಕೊಂಡೆ.  ಇದು ನಾನು ಕಲಿತ ಪಾಠ.

ಇಷ್ಟೆಲ್ಲಾ ಈಗೇಕೆ?  ಮೊನ್ನೆಯ ‘ಪ್ರಭಾ’ ಮತ್ತು ‘ವಿ.ಆರ್. ಭಟ್’ ಅವರ ಪ್ರಕರಣ.  ಅಲ್ಲಿ ನಾನು ಹಾಕಿದ ಸ್ಟೇಟಸ್ ಉಂಟು ಮಾಡಿದ ಕಿರಿಕಿರಿ! ಈ ಇಬ್ಪರ ಹೆಸರನ್ನು ಅದುವರೆವಿಗೂ ಕೇಳೇ ಇರಲಿಲ್ಲ. ಅವರಿಬ್ಬರ ಬೆಂಬಲಿಗರಂತೂ ಗೊತ್ತೇ ಇರಲಿಲ್ಲ. ಪ್ರಭಾ ಅವರು ಅರ್ಥವಿಲ್ಲದ / ಚರ್ವಿತಚರ್ವಣ / ಹಳಸಲಾದ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದರು. ಅದರ ಬಗ್ಗೆ ನನಗೆ ತರ್ಕ ಮಾಡಲು ಇಷ್ಟವೂ ಇಲ್ಲ ಹಾಗೂ ಜಾತಿಯ ಬಗ್ಗೆ ಮಾತಾಡುವುದೇ ಅಸಹ್ಯ ಎಂಬ ಮನಸ್ಥಿತಿ ನನ್ನದಾದ್ದರಿಂದ ಈ ಬಗ್ಗೆ  ಮಾತಾಡುವುದಿಲ್ಲ.  ವಿಆರ್ ಭಟ್ ಅವರ ವೈಯಕ್ತಿಕ ಪ್ರೊಫೈಲ್ ಎಷ್ಟೇ ಗಟ್ಟಿಯಾಗಿರಲಿ, ಪತ್ರಕರ್ತನಾಗೇ ಇರಲಿ ಆದರೆ ಅವರು ಮಾಡಿದ್ದು ಅಕ್ಷಮ್ಯ ಅಪರಾಧ.  ‘ಹೆಣ್ಣೊಬ್ಬಳ’ ಬಗ್ಗೆ ಅಷ್ಟು ಕೆಟ್ಟದಾಗಿ ಯಾರೂ ಕೂಡ ಮಾತಾಡಬಾರದು. ಗಾಯವಾದ ಭಾಗಕ್ಕೆ ಸೂಜಿಯಿಂದ ತಿವಿದಂತಿತ್ತು ಅವರ ಮಾತುಗಳು.  ಹಾಗಾಗಿ ಅವರಿಗೆ ಶಿಕ್ಷೆಯಾಗಬೇಕು. ಇದರಲ್ಲಿ ಎರಡು ಮಾತಿಲ್ಲ.

ಪ್ರಭಾ ಅವರು ನಾನೊಬ್ಬಳು ನೊಂದಿರುವ ‘ಹೆಣ್ಣು’, ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು ಎಂದು ಹೋರಾಟಕ್ಕೆ ನಿಂತರು. ವಿ.ಆರ್ ಮೇಲೆ ಕೇಸ್ ಹಾಕಿದರು. ಎಲ್ಲವೂ ಸರಿ. ಆದರೆ ಅದೇ ರೀತಿ ಅವರ ಸ್ಟೇಟಸ್ ಗಳಲ್ಲಿ ಇನ್ನಿತರರು ಪ್ರಭಾ ಅವರನ್ನು ಬೆಂಬಲಿಸುವ ಭರದಲ್ಲಿ ವಿ.ಆರ್ ಅವರ ಮನೆಯ ಹೆಣ್ಣುಮಕ್ಕಳ ಮೇಲೆ ಅಸಭ್ಯವಾಗಿ ಮಾತಾಡಿದರು.  ವಿ.ಆರ್ ಭಟ್ ಅವರನ್ನು ಕಡಿದು, ಕೊಚ್ಚುವ ಮಾತುಗಳನ್ನು ಆಡಿದರು. ಮಚ್ಚು, ಲಾಂಗು ತೆಗೆದುಕೊಂಡು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ! ನಮ್ಮದು ಕನ್ನಡ ಚಿತ್ರಗಳಲ್ಲ, ಬದುಕು ಎಂದರಿಯದಷ್ಟು ದಡ್ಡರು ಯಾರೂ ಅಲ್ಲಿ ಇರಲಿಲ್ಲ. ಅತ್ಯಾಚಾರ ಪ್ರಚೋದನೆ ತಪ್ಪಾದರೆ, ಕೊಲೆಯ ಪ್ರಚೋದನೆ ಕೂಡ ತಪ್ಪೇ ಅಲ್ಲವೇ?

ಶತಶತಮಾನಗಳಿಂದ ಬಾಯಿ ಮುಚ್ಚಿ ಕುಳಿತಿದ್ದ, ಗ್ಲಾಮರ್ ಗಷ್ಟೇ, ಗಾಸಿಪ್ ಗಷ್ಟೇ ಸೀಮಿತವಾಗಿದ್ದ ನಮ್ಮ ಹೆಣ್ಣುಮಕ್ಕಳು, ಇತ್ತೀಚಿಗಿನ ದಿನಗಳಲ್ಲಿ ಮುಕ್ತವಾಗಿ ಮಾತಾಡಲು ಶುರುಮಾಡಿದ್ದಾರೆ.  ಅವರನ್ನು ಪುರುಷಧೋರಣೆ ನಿಂದಿಸಿದಾಗಲೆಲ್ಲಾ, ನನ್ನಲ್ಲಿನ ‘ಹೆಣ್ಣು’ ಜಾಗೃತಳಾಗಿದ್ದಾಳೆ. ನನ್ನ ಗುಂಪುಗಾರಿಕೆ ಸ್ಟೇಟಸ್ ನ ವಿರುದ್ಧ, ನನ್ನ ವಿರುದ್ಧ ಹೋರಾಡಿದ್ದ ವ್ಯಕ್ತಿಗೆ, ಹಲವರು ಅಸಹ್ಯವಾಗಿ, ಹೊಲಸಾಗಿ ನಿಂದಿಸಿದಾಗಲೂ ನಾನು ಆಕೆಯನ್ನು ಸಪೋರ್ಟ್ ಮಾಡಿದ್ದೇನೆ. ಈಗ ವಿಆರ್ ಭಟ್ ಅವರ ಮೇಲೆ ಕೇಸ್ ಹಾಕಿ ಕೋಮು ಸೌಹಾರ್ದದ ಜೊತೆಗೆ ನೊಂದ ಹೆಣ್ಣುಮಕ್ಕಳ ಪರವಾಗಿ ನಿಂತಿರುವ ಪತ್ರಿಕೆಯ ಮಾಲಕಿ, ತಮ್ಮ ಪತ್ರಿಕೆಯಲ್ಲಿ ಹಲವಾರು ಹೆಣ್ಣುಮಕ್ಕಳ ವೈಯಕ್ತಿಕ ಘನತೆಗೆ ಧಕ್ಕೆ ತಂದಾಗ ಅಸಹ್ಯಿಸಿದ್ದೇನೆ.  ಅದನ್ನು ಖಂಡಿಸಿಯೂ ಇದ್ದೇನೆ.  ಕಾನೂನಿನ ಮೂಲಕ ಹೋರಾಡುತ್ತೇವೆಯೆಂದು ಆ ಹೆಣ್ಣುಮಕ್ಕಳು ಸ್ಟೇಟಸ್ ಹಾಕಿಕೊಂಡಾಗ ಸಂತೋಷಪಟ್ಟಿದ್ದೇನೆ.

ಪುರುಷಧೋರಣೆಯನ್ನು ಖಂಡಿಸಿ ಹೋರಾಟ ನಡೆಸಲು ಮುಂದಾದ  ಪ್ರಭಾ, ತನ್ನಂತೇ ಇನ್ನಿತರ ಹೆಣ್ಣುಮಕ್ಕಳು ಬೈಗಳಕ್ಕೆ ಈಡಾದಾಗ, ಅದು ಕೂಡ ಅವರ ಸ್ಟೇಟಸ್ ನಲ್ಲಿಯೇ, ಒಂದಿಷ್ಟು ಖಂಡಿಸದೇ ಇದ್ದದ್ದು, ನಿಜವಾಗಿಯೂ ನನಗೆ ನೋವಾಯಿತು.  ನಾನವರ ಗಮನಕ್ಕೆ ತಂದ ಮೇಲೂ ಕೂಡ ಅವರದನ್ನು ‘ನೆಗ್ಲೆಕ್ಟ್’ ಮಾಡಿದ್ದು ಯಾವ ಮನಸ್ಥಿತಿ?  ಸಂತ್ರಸ್ಥೆಗಲ್ಲದೆ ಬೇರೆಯವರಿಗೆ ಆ ನೋವು ಅರ್ಥವಾಗುವುದೇ? ಟಿವಿ ಸಂದರ್ಶನದಲ್ಲಿ  ಆಂಕರ್ ಕೇಳಿದ ಈ ಪ್ರಶ್ನೆಗೆ ‘ಕೋಪದ ಭರದಲ್ಲಿ ಮಾತಾಡ್ತಾರೆ! ಏನೂ ಮಾಡಲಾಗುವುದು? ಎಂಬಂತ ಬೇಜವಾಬ್ದಾರಿ ಹೇಳಿಕೆ ನೀಡಿದರೆ, ಪ್ರಭಾ ಅವರು ‘ಹೆಣ್ಣು’ ಎಂದೇ ಸಪೋರ್ಟ್ ಮಾಡಿದ್ದ ನನ್ನಂತವರಿಗೆ ಬೇಸರವಾಗಬಾರದೇ? ಪುರುಷಧೋರಣೆ ವಿರುದ್ಧ ಹೋರಾಡುವ ‘ಹೆಣ್ಣು’ ಪಕ್ಷಾತೀತಳಾಗಿ ಇರಬೇಕಲ್ಲವೇ?  ಶೇಕಡಾವಾರು ಲೆಕ್ಕದಲ್ಲಿ ಹೇಳುವುದಾದರೆ, ವಿಆರ್ ಭಟ್ ಮಾತುಗಳಿಗೆ ಅಸಹ್ಯಿಸಿದವರೇ ಬಹಳ ಮಂದಿ. ಯಾವ ಹೆಣ್ಣು ಕೂಡ ವಿಆರ್ ಭಟ್ ನನ್ನು ಸಪೋರ್ಟ್ ಮಾಡಲಿಲ್ಲ.

ನನ್ನ ಮುಂದಿರುವ ಪ್ರಶ್ನೆ - ಪ್ರಭಾ ಅವರು ಹೋರಾಡುತ್ತಿರುವುದು ಯಾರ ವಿರುದ್ಧ? ಪುರೋಹಿತಶಾಹಿಗಳ ವಿರುದ್ಧವೇ?  ಹೆಣ್ಣನ್ನು ಚೀಪಾಗಿ ನೋಡಿದ ಪುರುಷ ಧೋರಣೆಯ ವಿರುದ್ಧವೇ? ಇದರ ಕ್ಲಾರಿಟಿ ಅವರಿಗಿದ್ದರೆ ನಂತರದ ಹೋರಾಟದ ನಡೆಯನ್ನು ತೀರ್ಮಾನಿಸಬಹುದು.  ಬ್ರಾಹ್ಮಣ್ಯದ ವಿರುದ್ಧದ ಹೋರಾಟವಾದರೆ, ಬ್ರಾಹ್ಮಣರು ಕೂಡ ಕೇಸ್ ಹಾಕುತ್ತಾರೆ ಅವರಿಗಿಷ್ಟವಿದ್ದರೆ. ಅದು ಅವರ ಹಕ್ಕಿನ ಪ್ರಶ್ನೆ ಕೂಡ. ಇವರ ಮಾತುಗಳಿಗೆ ಇವರೇ ಜವಾಬ್ದಾರರು. ಇವರು ಅದನ್ನು ಎದುರಿಸಬೇಕು.  ಪುರುಷಧೋರಣೆಯ ವಿರುದ್ಧವಾದರೆ, ಈಗಾಗಲೇ ಎಲ್ಲಾ ಹೆಣ್ಣುಮಕ್ಕಳು ಪ್ರಭಾರನ್ನು ಈ ವಿಷಯದಲ್ಲಿ ಸಪೋರ್ಟ್ ಮಾಡಿದ್ದಾರೆ.  ಮಾಡುತ್ತಾರೆ.

ಇಷ್ಟಾದರೂ ‘ಪ್ರಭಾ’ ಅವರನ್ನು ಬೆಂಬಲಿಸುತ್ತಿರುವ ಮಂದಿ, ಅದನ್ನು ಮೌನವಾಗಿಯೇ ಒಪ್ಪುತ್ತಿರುವ ‘ಪ್ರಭಾ’ ಹೇಳುತ್ತಿರುವುದಾದರೂ ಏನು?  ಕೆಲವು ‘ಜಾಗೃತ’ ಹೆಣ್ಣುಮಕ್ಕಳು ವಿಆರ್ ಭಟ್ ರನ್ನು ಬೆಂಬಲಿಸುತ್ತಿದ್ದಾರೆ, ಅವಳು RSS ನವಳು, ಅದಕ್ಕೆ ವಿಆರ್ ಭಟ್ ಮನೆಯವರನ್ನು ಸಪೋರ್ಟ್ ಮಾಡುತ್ತಿದ್ದಾಳೆ!  ಇತ್ಯಾದಿ.  ಇಲ್ಲಿ ಪಕ್ಷ ಏನು ಬಂತು?  ನೊಂದ ಹೆಣ್ಣು ಎಂದ ಮೇಲೆ ಇತ್ತ ಕಡೆಯೂ ಅದೇ, ಅತ್ತ ಕಡೆಯೂ ಅದೇ. ಕೇವಲ ‘ಭಟ್’ ಎಂಬುದಕ್ಕಾಗಿ ಇವರ ಹೋರಾಟವಾದರೆ, ‘ನನ್ನ’ ಸಪೋರ್ಟ್ ಇರದು.  ಆದರೆ ನೊಂದ ‘ಹೆಣ್ಣು’ಮಕ್ಕಳ ಪರವಾದರೆ, ಎಲ್ಲಾ ‘ಹೆಂಗಸರು’ ಎದ್ದು ನಿಂತಾರು! ಇಡೀ ಪ್ರಕರಣವನ್ನು ರಾಜ್ಯದ ಅತ್ಯಂತ ಸೆನ್ಸೇಷನಲ್ ನ್ಯೂಸ್ ಎಂಬುದಾಗಿ ಪ್ರಕಟಿಸಿದ ಮಾಧ್ಯಮದವರಾಗಬಹುದು ಅಥವಾ ಪ್ರತಿಭಟಿಸಿದವರಾಗಬಹುದು, ಇವರ ವೈಯಕ್ತಿಕ ಹಿತಾಸಕ್ತಿಗಳೇನಿರಬಹುದು? ಎಂಬುದನ್ನೆಲ್ಲಾ   ನೋಡುತ್ತಾ, ಯೋಚಿಸುತ್ತಾ ಕುಳಿತಿದ್ದ ನನ್ನಂತಹವರಿಗೆ ನಿಜವಾಗಿಯೂ ಸಮಾಜದ ದುರ್ವ್ಯವಸ್ಥೆಗೆ ಬೇಸರವಾಗದಿರದು. 

ಇಷ್ಟೆಲ್ಲಾ ನಡೆಯುತ್ತಿರುವಾಗ, ನಾನು ವಿಆರ್ ಭಟ್ ಅವರನ್ನು ಸಪೋರ್ಟ್ ಮಾಡಿದ್ದೇನೆಂದು ಬಹಳ ಮಂದಿ ನನ್ನನ್ನು ಹೀಯಾಳಿಸಿದರು (ಡಿಪ್ಲೋಮಾಟಿಕ್ ಆಗಿ). ಕೆಲವರು ಇನ್ ಬಾಕ್ಸಿಗೆ ಬಂದು ಈ ಹೋರಾಟ ಯಾವ ಸ್ವರೂಪ ಪಡೆಯುತ್ತದೆ? ಎನ್ನುವುದನ್ನು ವಿವರಿಸಿದರು. ಇನ್ನೊಂದಿಷ್ಟು ಮಂದಿ ಮೊಸಳೆ ಕಣ್ಣೀರು ಸುರಿಸುತ್ತಾ ಬಂದು ‘ನನ್ನ ಜಾತಿ’ ಯ ಬಗ್ಗೆ ವಿವರಣೆ ಪಡೆದರು. ಕಮೆಂಟುಗಳಲ್ಲಿ ಇನ್ಯಾರೋ ‘Read between the lines' ಎಂದು ಪಾಠ ಮಾಡಿದರು.  ಪಾಠ ಕಲಿತ ‘ನಾನು’ ಅವರ ಪೋಸ್ಟ್ ಗಳನ್ನು, ಕಮೆಂಟುಗಳನ್ನು ಕೂಡ ಹಾಗೇಯೇ ಓದುತ್ತೇನೆ ಎಂಬುದನ್ನು ಮರೆತರು. ಪ್ರಭಾ ಅಥವಾ ಇನ್ಯಾರೇ ಇರಬಹುದು ಹೆಣ್ಣು ‘ಅಬಲೆ’ ಎಂದು ಬಿಂಬಿಸುವುದರಲ್ಲಿಯೇ ಎಲ್ಲರ ಮನಸ್ಸು! :( ಒಟ್ಟಿನಲ್ಲಿ ‘ನನ್ನನ್ನು’ ಕೂಡ ಒಂದು ಗುಂಪಿಗೆ ಸೇರಿಸುವ ಹಂಬಲ, ಹುಮ್ಮಸ್ಸು, ಬಯಕೆ ಎಲ್ಲರದೂ. ಅವರಿಗೆಲ್ಲಾ ತಿಳಿಯದ್ದು ವೈಯಕ್ತಿಕ ವಿಷಯಗಳನ್ನು ನಾನೆಂದಿಗೂ ಸಾಮಾಜಿಕ ಜಾಲ ತಾಣಗಳಲ್ಲಿ ಬರೆಯುವಾಗ ಮೂರನೇಯ ವ್ಯಕ್ತಿಯಾಗಿಯೇ ಬರೆಯುತ್ತೇನೆ. ನಾನು ಯಾವುದೇ ಗುಂಪಿನೊಡನೇ ಸೇರಿಕೊಳ್ಳಲು ಇಷ್ಟಪಡುವುದಿಲ್ಲ ಹಾಗೂ ಈಗ ಇಲ್ಲಿ ಬರೆಯುತ್ತಿರುವ ‘ನಾನು’ ನಾನಲ್ಲ ಎಂಬುದು. 

ಹಾಗಾದರೆ ಇಲ್ಲಿ ಬಳಸಿರುವ ‘ನಾನು’ ಯಾರು?  ‘ನಾನು’ ಎಂದರೆ ‘ಅತ್ಯಂತ ಸಾಮಾನ್ಯ ವ್ಯಕ್ತಿ’!. ನಾನು ಯಾರದೋ ರಾಜಕೀಯ ದಾಳಗಳಿಗೆ ಬಲಿಯಾಗುವುದನ್ನು ಒಪ್ಪುವುದಿಲ್ಲ. ನನಗೆ ಯಾವುದೇ ಕಟ್ಟುಪಾಡುಗಳು, ಹುನ್ನಾರಗಳು, ಎಡ, ಬಲ ಎಂಬ ಸಿದ್ದಾಂತಗಳು ಕಾಡುವುದಿಲ್ಲ. ಹೆಸರಿನ ಅಥವಾ ಹಣ ಮಾಡುವ ಬಯಕೆಯಿಲ್ಲ. ನನಗೆ ಮಾಧ್ಯಮಗಳಲ್ಲಿ ಬರುವುದು ಕೂಡ ಬೇಕಿಲ್ಲ. ನನಗೆ ಬೇಕಿರುವುದು ಸಮಾಜದ ಸ್ವಾಸ್ತ್ಯ  ಯಾರದೋ ರಾಜಕೀಯಕ್ಕೆ ಬಲಿಯಾಗುವುದಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ವ್ಯಕ್ತಿತ್ವದ ಅವಶ್ಯಕತೆಯೂ ಇಲ್ಲಾ.  ತಾತ ಮಾಡಿದ ತಪ್ಪಿಗೆ ಮೊಮ್ಮಕ್ಕಳು ಬಲಿಯಾಗುವ ಆಸೆಯಿಲ್ಲ.  ಸಮಾಜದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತುಳಿತಕ್ಕೊಳಗಾಗಿರುವವರು ಬಡವರು, ರೈತರು. ಇವರನ್ನು ಮೇಲಕ್ಕೆತ್ತಬೇಕೆಂಬ ಹಪಾಹಪಿ.  ಎಲ್ಲಾ ಜಾತಿ, ಮತ, ಧರ್ಮಗಳಲ್ಲೂ ಕೊಳಕಿದೆ, ಆದರೆ ಬೆಳೆಸಬೇಕಿರುವುದು ಅದರಲ್ಲಿನ ಪಾಸಿಟಿವ್ ಗುಣಗಳನ್ನಷ್ಟೆ ಎಂಬ ಅರಿವು, ಹೆಣ್ಣು ‘ಅಬಲೆ’ ಯಲ್ಲಾ, ಅವಳು ಗಂಡಿನಷ್ಟೇ ಸರಿಸಮಾನಳು ಎಂಬ ಪ್ರಜ್ಞೆ, ಯಾವುದೇ ಸಮಾಜದ ರೀತಿನೀತಿಗಳು ಮಕ್ಕಳಿಗೆ ಆದರ್ಶಪ್ರಾಯವಾಗಿರಬೇಕು. ನಮ್ಮ ಮಕ್ಕಳು ಚಂದವಾಗಿ, ಸುಂದರವಾಗಿ ಬೆಳೆಯಬೇಕೆಂದು ಅಪೇಕ್ಷೆ ಪಡುವಂತಹ ಮನಸ್ಥಿತಿಯಷ್ಟೇ.  ‘ನನಗೆ’ ಬೇಕಿರುವುದು ನಿಜವಾಗಿಯೂ ‘ಗುಂಪುಗಾರಿಕೆ’ಯಲ್ಲ. ಸಮಾಜವನ್ನು ಬೆಳೆಸುವ, ಕಟ್ಟುವ ಒಂದೊಳ್ಳೆಯ ‘ಟೀಮ್’. 





ಬರವಣಿಗೆ

ಯಾವುದೇ ಓದು ಅಥವಾ ಬರವಣಿಗೆ ಆ ಮನುಷ್ಯನನ್ನು ಇನ್ನಷ್ಟು ವಿನಯವಂತನನ್ನಾಗಿಸದಿದ್ದರೆ, ಆತ ಬರೆದದ್ದು / ಓದಿದ್ದು ವ್ಯರ್ಥ.


ಬರವಣಿಗೆಯೋ / ಇನ್ಯಾವುದೋ ಕಲಾಪ್ರಕಾರಗಳು ಮೊದಲು ಅದರ ರಚನಕಾರನಿಗೆ ಖುಷಿ ನೀಡಬೇಕು, ಅವುಗಳಲ್ಲಿ ಪ್ರಾಮಾಣಿಕತೆ ಇರಬೇಕು, ಹೊಗಳುಭಟರೇ ತುಂಬಿರುವ ಈಗಿನ ಕಾಲದಲ್ಲಿ ತನ್ನ ರಚನೆಗಳನ್ನು ತಾನೇ ಪುನರ್ವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಬಹಳ ಹೆಚ್ಚು. ಜೊತೆಗೆ ಯಾವುದೇ ಕೃತಿ, ಅದರ ಕೃತಿಕಾರನಿಗೆ ತೃಪ್ತಿ ನೀಡಬಾರದು. 

ತನ್ನ ರಚನೆಗಳನ್ನು ತಲುಪುವವರಿಗೆ ತಲುಪಿಸಿದ ನಂತರ, ನಿರಾಳವಾಗಿಬಿಡಬೇಕು, ಅದಕ್ಕೆ ದೊರೆಯುವ ಎಲ್ಲಾ ರೀತಿಯ ಹೊಗಳಿಕೆ / ತೆಗಳಿಕೆ, ಟೀಕೆ, ಟಿಪ್ಪಣಿಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಾಧ್ಯವಿದ್ದರೆ, ಆ ಟೀಕೆಗಳನ್ನು ಮೀರಿ, ತಪ್ಪುಗಳನ್ನು ಸರಿ ಮಾಡಿಕೊಳ್ಳುವತ್ತ ತನ್ನ ಮುಂದಿನ ಹೆಜ್ಜೆಯನ್ನು ಇಡಬೇಕು.



ಹೆಣ್ಣು ಅಬಲೆ! :(


http://bhoothagannadi.blogspot.in/2014/08/blog-post_4.html?m=1 ಈ ಲೇಖನ ಓದಿದಾಗ ಬೇಡಬೇಡವೆಂದರೂ ನಾನು ೧೦ ನೇ ತರಗತಿಯಲ್ಲಿದ್ದಾಗ ನಡೆದ ಕಾವೇರಿ ಗಲಾಟೆ ನೆನಪಾಯಿತು. 

ನಾವು ಆಗ ರಾಜಾಜಿನಗರದಲ್ಲಿದ್ದೆವು. ಪಕ್ಕದ ರಸ್ತೆ ಪ್ರಕಾಶ ನಗರ. ಇತ್ತ ಕಡೆ ಕನ್ನಡಿಗರು, ಅತ್ತ ಕಡೆ ತಮಿಳರು ಹೆಚ್ಚು. ಅಲ್ಲೆಲ್ಲೋ ನಡೆಯುತ್ತಿದ್ದ ಕಾವೇರಿ ಗಲಭೆಯ ಗಾಳಿ ಇಲ್ಲಿಗೂ ಬೀಸಿತು. ಅದುವರೆವಿಗೂ ಒಟ್ಟಿಗೆ ಟೀ ಕುಡಿಯುತ್ತಿದ್ದ, ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುತ್ತಿದ್ದ ಗೆಳೆಯರ ನಡುವೆ ಎರಡು ಬಣಗಳಾದವು. ಕರ್ನಾಟಕ ತಮಿಳುನಾಡು ಬಾರ್ಡರ್ ನಮ್ಮ ಮನೆಯ ಪಕ್ಕದಲ್ಲೇ ರಚಿತವಾಯಿತು. ಎರಡು ಕಡೆಯವರೂ ಆತ್ಮೀಯ ಸ್ನೇಹಿತರೇ. ಆದರೂ ಸೀಮೆಎಣ್ಣೆ ಬಾಟಲುಗಳಿಂದ ಹಿಡಿದು ಚಾಕು, ಚೂರಿ, ಮಚ್ವು, ಲಾಂಗ್ ಎಲ್ಲವೂ ಹೊರ ಬಂದವು. ಎರಡೂ ಕಡೆಯವರು ಬೈದಾಡುತ್ತಿದ್ದರು. ಬಾಟಲುಗಳನ್ನು ಎಸೆಯುತ್ತಿದ್ದರು. ಎರಡೂ ಕಡೆಯವರೂ ಬೈದಾಡುತ್ತಿದ್ದರು. ನಮ್ಮ ಬೈಗುಳಗಳೆಲ್ಲವೂ ಅಮ್ಮ ಮತ್ತು ಅಕ್ಕಂದಿರಿಗೆ ಅಲ್ಲವೇ?  ಪೋಲೀಸರು ಬಂದು ಅಶ್ರುವಾಯು ಸಿಡಿಸಿದರು. ನಮ್ಮ ಮನೆಯೇ ಕಾರ್ನರ್ ಆದ್ದರಿಂದ ಜೊತೆಗೆ ಅಣ್ಣನ ಸ್ನೇಹಿತರು ಒಂದಷ್ಟು ಜನರಿದ್ದರಿಂದ ನಮ್ಮ ಮನೆಯ ಈರುಳ್ಳಿಯೆಲ್ಲವೂ ಖಾಲಿ. ಕರ್ಫ್ಯೂ ಹಾಕಿದರು. ಈ ಗಲಾಟೆಯ ಸಂದರ್ಭವನ್ನು ಉಪಯೋಗಿಸಿಕೊಂಡು, ನಮ್ಮ ಮನೆಯ ಎದುರು ಬಹುಕಾಲದಿಂದ ಎಬ್ಬಿಸಲಾಗದೇ ವಾಸವಾಗಿದ್ದ ಸ್ಲಮ್ / ಮನೆ (ನೆನಪಿಲ್ಲ) ಒಂದಕ್ಕೆ ಬೆಂಕಿ ಹಚ್ಚಲಾಯಿತು. ಪಾಪ! ಆಮೇಲೆ ಆ ಜನರು ಎಲ್ಲಿ ಹೋದರೋ ತಿಳಿಯಲಿಲ್ಲ. 

ಗಲಭೆಗೆ ಸೇರಿದ್ದ ಜನರು ದೂರವಾಗುವಾಗ ಹೇಳಿ ಹೋದದ್ದು ಮಾತ್ರ "ನಿಮ್ಮ ರಸ್ತೆಯಲ್ಲಿ ಓಡಾಡುವ ಯಾವ ಹೆಣ್ಣುಮಕ್ಕಳು ಕೂಡ ಸುರಕ್ಷಿತವಾಗಿ ಮನೆ ಸೇರಲಾರರು!  

ಒಂದಷ್ಟು ದಿವಸಗಳು ನಾನು ಟೈಪಿಂಗ ಕ್ಲಾಸಿಗೆ ಹೋಗುವಾಗ ನನ್ನೊಟ್ಟಿಗೆ ಯಾರಾದರೂ ಬರುತ್ತಿದ್ದರು. ಹೀಗೆ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ! ಯಾವಾಗಲೂ ಅಂದು, ಇಂದು 

ಇಂತಿ ನಮಸ್ಕಾರಗಳು - ನಟರಾಜ್ ಹುಳಿಯಾರ್ ಅವರ ಪುಸ್ತಕದಲ್ಲಿ ಇಷ್ಟವಾದದ್ದು.

ನಟರಾಜ್ ಹುಳಿಯಾರ್ ಅವರ ‘ಇಂತಿ ನಮಸ್ಕಾರಗಳು’ ಲಂಕೇಶ್ ಮತ್ತು ಡಿ.ಆರ್. ನಾಗರಾಜ್ ಅವರ ಬಗೆಗಿನ, ಅವರ ಆಲೋಚನೆಗಳ ಬಗೆಗಿನ ವಿವರಣೆಯನ್ನು ನೀಡುವ ಪುಸ್ತಕ. ಎಲ್ಲಾ ಹಿರಿ, ಮರಿ, ಕಿರಿ ಸಾಹಿತಿಗಳು ಓದಬೇಕಾದದ್ದು. ಕೆಲವು ವಾಕ್ಯಗಳಂತೂ ಸಿಕ್ಕಾಪಟ್ಟೆ ಇಷ್ಟವಾಗಿಬಿಡುತ್ತವೆ. ಅವುಗಳಲ್ಲಿ ಬಹುಮುಖ್ಯವೆನೆಸಿದ್ದು Especially FB ಭಟ್ಟಂಗಿಗಳಿಗೆ ಅನ್ವಯಿಸುವುದು

೧. ಯಾಜಮಾನ್ಯ ತನ್ನ ಭಟ್ಟಂಗಿಗಳನ್ನು ತಾನೇ ಸೃಷ್ಟಿಸಿಕೊಳ್ಳುತ್ತಿರುತ್ತದೆ. ರಾಜರುಗಳು ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು, ತಮ್ಮನ್ನು ಜನಪ್ರಿಯಗೊಳಿಸಿಕೊಳ್ಳಲು ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ತುಂಬಿಕೊಳ್ಳಲು ಕೂಡ ಭಟ್ಟಂಗಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಜೊತೆಗೆ ಕೀಳರಿಮೆಯಿಂದಾಗಿ ಕೂಡ ಭಟ್ಟಂಗಿಗಳನ್ನು ನೇಮಿಸಿಕೊಳ್ಳುತ್ತಿರುತ್ತಾರೆ. ಈ ಭಟ್ಟಂಗಿಗಳು ರಾಜನ ಪ್ರತ್ಯೇಕ ಸಂಸ್ಥೆಯಾಗಿಯೂ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಆತ್ಮವಿಶ್ವಾಸದ ಕೊರತೆಯಿಂದಾಗಿ ಆಳುವವರು ಮತ್ತು ಆಳುಗಳಿಬ್ಬರಿಗೂ ಈ ಭಟ್ಟಂಗಿತನ ಅನಿವಾರ್ಯವಾಗುತ್ತದೆ. ಪ್ರಭುತ್ವಕ್ಕೆ ಹೊಗಳಿಕೆ ಬೇಕಾದ್ದರಿಂದ, ಅದರ ಅಧೀನದಲ್ಲಿರುವವರಿಗೂ ಭಟ್ಟಂಗಿತನ ತಮ್ಮ ಜೀವನ ನಿರ್ವಹಣೆಯ ಸಲೀಸು ಮಾರ್ಗವಾಗಿಬಿಡುತ್ತದೆ.

೨. ಹೊಗಳದಿದ್ದರೆ ಅಭದ್ರತೆ, ಹೊಗಳಿದರೆ ಅನುಮಾನ ... ಈ ಎರಡೂ ಪ್ರವೃತ್ತಿಗಳು ನಮ್ಮಲ್ಲಿರುತ್ತವೆ. ಆದರೆ ನಾವು ಸೂಕ್ಷ್ಮವಾಗಿದ್ದರೆ, ಇನ್ನೊಬ್ಬ ನಮ್ಮನ್ನು ಹೊಗಳಲಾರಂಭಿಸಿದ ತಕ್ಷಣ ನಮ್ಮ ದೌರ್ಬಲ್ಯಗಳೇ ಹೆಚ್ಚು ಗೋಚರಿಸತೊಡಗುತ್ತವೆ. ಅಭದ್ರ ಮನಸ್ಥಿತಿಯಲ್ಲಿರುವ ಒಬ್ಬ ಯಜಮಾನನೇ ಭಟ್ಟಂಗಿಗಳನ್ನು ಸೃಷ್ಟಿಸಿಕೊಳ್ಳಬಹುದು. ಮನುಷ್ಯನ ಕೀಳರಿಮೆಯಿಂದ, ಲಾಭದಾಸೆಯಿಂದ ಅಥವಾ ಇನೊಬ್ಬನನ್ನು ಸಂತೋಷವಾಗಿಡಲು ಬಯಸುವ ಸರಳವಾದ ಒಳ್ಳೆಯತನದಿಂದಲೂ ಹೊಗಳಿಕೆ ಹುಟ್ಟಿರಬಹುದು. ಕೆಲ ಬಗೆಯ ಓದುಗರು ಲೇಖಕನೊಬ್ಬನನ್ನು ಗ್ರಹಿಸಲು ಶ್ರಮಪಡುವುದರ ಬದಲಿಗೆ ಅವನನ್ನು ಸುಮ್ಮನೆ ಹೊಗಳುವ ಸುಲಭ ಮಾರ್ಗ ಹಿಡಿಯುವುದನ್ನು ಕಂಡು ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಉರಿದು ಬೀಳುತ್ತಿದ್ದನಂತೆ.
(ಆದರೆ ಐರನಿ ನೋಡಿ, ಇದೇ ಬ್ರೆಕ್ಟ್, ಲಂಕೇಶ್, ಡಿ.ಆರ್ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಅನೇಕ ಮಂದಿ, ಒಬ್ಬರು ಮತ್ತೊಬ್ಬರ ಭಟ್ಟಂಗಿಗಳಾಗಿರುವುದು!  )

೪.  ಭಟ್ಟಂಗಿಗಳ ಸುಳ್ಳುಗಳಲ್ಲಿ ಲೇಖಕ ಸತ್ಯಕ್ಕಾಗಿ ತಡಕಾಡುವಂತಾಗುತ್ತದೆ. (ಫೇಸ್ ಬುಕ್ಕಿನಲ್ಲಂತೂ ಸಿಕ್ಕಾಪಟ್ಟೆ ತಡಕಬೇಕಾಗುತ್ತದೆ)

೫.  ಬರೆಯುವವನಿಗೆ ಹೊರಗಣ್ಣಿಗಿಂತ ಒಳಗಣ್ಣು ಮುಖ್ಯ

೬.  ಗೊತ್ತಿದ್ದೋ ಗೊತ್ತಿಲ್ಲದೆಯೋ ಸುಳ್ಳು, ಅರೆ ಸುಳ್ಳು ಬರೆಯುವ, ಮಾತನಾಡುವ ಎಲ್ಲರೂ ತಮ್ಮೊಳಗೆ ನರಕ ಸೃಷ್ಟಿಸಿಕೊಳ್ಳುತ್ತಲೇ ಸುತ್ತಲಿನ ನರಕವನ್ನು ಆಳವಾಗಿಸುತ್ತಾ ಹೋಗುತ್ತಾರೆ. 

೭. ವ್ಯಕ್ತಿಯೊಬ್ಬನ ನಿರ್ಗಮನದ ನಾಲ್ಕಾರು ವರ್ಷಗಳಲ್ಲೇ ನಾವು ನೋಡುವ ಕಣ್ಣು ಹೇಗೆ ಬದಲಾಗುತ್ತಿರುತ್ತದೆ! ಅವನ ಬಗೆಗಿನ ಪೂರ್ವಾಗ್ರಹಗಳು, ಅನಗತ್ಯ ಮೆದುತನ, ಇವನು ನಮ್ಮವನೆಂದು ಸುಮ್ಮನೆ ಉಕ್ಕುವ ಪ್ರೀತಿ, ಅತಿ ನಿಕಟತೆಯಿಂದ ಒಸರತೊಡಗುವ ಅಸಹನೆ... ಇವೆಲ್ಲ ಕಡಿಮೆಯಾಗಿ ಒಂದು ಬಗೆಯ ನಿರ್ಲಿಪ್ತ ದೃಷ್ಟಿ ನಿರ್ಮಾಣವಾಗತೊಡಗುತ್ತದೆ. 

೮.  ಲಂಕೇಶ ಬಯ್ದಂತೆ ತಾವೂ ಬಯ್ಯಬಹುದೆಂದು ಹೊರಟ ಪತ್ರಕರ್ತರು ಎಲ್ಲೆಡೆ ಭಂಡ ಪತ್ರಿಕೋದ್ಯಮವನ್ನು ಸೃಷ್ಟಿಸತೊಡಗಿದರು.
ಲಂಕೇಶರನ್ನು ಅನುಕರಿಸುವ ಅನೇಕರು ಅವರ ತಾತ್ವಿಕ ಆಳವಿಲ್ಲದೆ, ನೈತಿಕ ರೋಷವನ್ನು ಆರೋಪಿಸಿಕೊಂಡು ಬರೆಯುವುದರಿಂದಲೇ ಅಂಥವರು ಹುಸಿಯಾಗಿ ಕಾಣುತ್ತಾರೆ ಹಾಗೂ ಅವರ ಬರಹಗಳು ತೆಳುವಾಗಿ ಕಾಣತೊಡಗುತ್ತವೆ. (ಹ್ಮ್, ಈಗಲೂ ಇದು ತಪ್ಪಿಲ್ಲ  ಎಷ್ಟೇ ಕುಣಿದರೂ ಕೆಂಬೂತ ........... ಆಗುತ್ಯೇ? :))

೯.  ದೊಡ್ಡ ಲೇಖಕನೊಬ್ಬ ಗಂಭೀರ ಸಾಹಿತ್ಯ ವಿಮರ್ಶಕನೂ, ಮತ್ತೆ ಮತ್ತೆ ತನ್ನ ಕಲೆಯನ್ನು ಪರೀಕ್ಷಿಸಿಕೊಳ್ಳುವ ವಿದ್ಯಾರ್ಥಿಯೂ ಆಗಿರುತ್ತಾನೆ ಮತ್ತು ಆಗಿರಲೇಬೇಕು

೧೦.  ಸಾಹಿತ್ಯಸಂಸ್ಥೆಗಳ ವಿಮರ್ಶಾ ತೀರ್ಮಾನಗಳ ಬಗ್ಗೆ ಲಂಕೇಶರಿಗೆ ಅಷ್ಟೇನೂ ನಂಬಿಕೆಯಿರಲಿಲ್ಲ. "ಈ ಅಕಾಡೆಮಿ ಥರದ ಸಂಸ್ಥೆಗಳಲ್ಲಿ ಮೂರನೆಯ ದರ್ಜೆಯ ನಾಟಕಕಾರನೊಬ್ಬನಿಗೆ, 'ನಿನ್ನ ನಾಟಕ ಚೆನ್ನಾಗಿಲ್ಲ' ಎಂದು ಹೇಳಿದರೆ, 'ನಿನ್ನ ನಾಟಕ ಚೆನ್ನಾಗಿದೆಯಾ?' ಎಂದು ಕೇಳುತ್ತಾನೆ. ಇಂಥ ಕಡೆ ಅಭಿರುಚಿ, ಆಯ್ಕೆಗಳು ಶ್ರೇಷ್ಠ ಮಟ್ಟದ್ದಾಗುವುದು ಕಷ್ಟ


Evil ಬಗ್ಗೆ ಲಂಕೇಶ್ ಬರೆದದ್ದು!

‘ಮನುಷ್ಯ ಮೂಲತಃ ಈವಿಲ್’ ಎಂದವರು ಲಂಕೇಶ್. 

ಲಂಕೇಶ್ ರ ‘ಸಂಕ್ರಾಂತಿ’ ದಲಿತ, ಬಂಡಾಯ, ಪ್ರಗತಿಪರ ಸಾಹಿತ್ಯದಲ್ಲಿ ವ್ಯಾಪಕವಾಗಿ ಕಂಡ ಪ್ರಭುತ್ವ ಕುರಿತ ಅನೇಕ ಪ್ರಶ್ನೆಗಳನ್ನು ಎಪ್ಪತ್ತರ ದಶಕದ ಆರಂಭದಲ್ಲೇ ಧ್ವನಿಪೂರ್ಣವಾಗಿ ಮಂಡಿಸಿದೆ. ವೈದಿಕ ಧರ್ಮ, ಜೈನ ಧರ್ಮ, ಶರಣ ಧರ್ಮ ಎಲ್ಲವೂ ಇಲ್ಲಿ ಪರೀಕ್ಷೆಗೆ ಒಳಗಾಗುತ್ತವೆ. ಇಲ್ಲಿನ ಬಿಜ್ಜಳ-ಬಸವಣ್ಣರ ಮುಖಾಮುಖಿ ತಾತ್ವಿಕ, ಸಾಮಾಜಿಕ ಹಾಗೂ ವ್ಯಕ್ತಿಗತ ಮುಖಾಮುಖಿಗಳನ್ನು ಒಟ್ಟಿಗೇ ಗ್ರಹಿಸಬಲ್ಲ ಬಹು ಸೂಕ್ಷ್ಮ ಮಾದರಿಯೊಂದನ್ನು ರೂಪಿಸಿದೆ. ಬಸವಣ್ಣ ಬಿಜ್ಝಳನ ಅಧಿಕಾರದ ಶಿಥಿಲತೆ ಹಾಗೂ ಭ್ರಮೆಗಳನ್ನು ಟೀಕಿಸುತ್ತಾನೆ. ಬಿಜ್ಜಳ ‘ನೀನು ಬ್ರಾಹ್ಮಣ, ಒಂದು ಕಾಲದಲ್ಲಿ ಸಂಸ್ಕೃತ ಭಾಷೆಯನ್ನು ಬಳಸಿಕೊಂಡು ಕೆಳಜಾತಿಯವರನ್ನು ಶೋಷಿಸುತ್ತಿದ್ದೆ. ಈಗ ಕನ್ನಡ ಭಾಷೆಯನ್ನು ಬಳಸಿ ಅದೇ ಕೆಲಸ ಮಾಡುತ್ತಿದ್ದೀಯಾ’ ಎಂದು ಬಸವಣ್ಣನನ್ನು ಛೇಡಿಸುತ್ತಾನೆ.

‘ಸಂಕ್ರಾಂತಿ’ಯ ಬಿಜ್ಜಳ ಹೇಳುತ್ತಾನೆ : ‘ಪ್ರೇಮ, ಕಾಮ, ಅತ್ಯಾಚಾರ, ವ್ಯಕ್ತಿಪ್ರೇಮ, ಜಾತಿಪ್ರೇಮ, ನಿಷ್ಕಾಮ ಪ್ರೇಮ - ಯಾವುದನ್ನು ಮಾಡಲು ಹೋಗಿ ಯಾವುದನ್ನು ಮಾಡುತ್ತೇವೋ ದೇವರೇ ಬಲ್ಲ...’

ಕವನವೊಂದನ್ನು ಸಾಲುಗಳ ಮಧ್ಯೆ ಓದಬೇಕೆಂದು ರೂಪನಿಷ್ಠ ವಿಮರ್ಶಕರು ಹೇಳುವ ಹಾಗೆ, ಲಂಕೇಶರಂಥ ಲೇಖಕರು ಮನುಷ್ಯರನ್ನು ಕೂಡ ಹಾಗೇ ಗ್ರಹಿಸಬೇಕೆಂದು ನಮಗೆ ನೆನಪಿಸುತ್ತಿರುತ್ತಾರೆ. ಆದ್ದರಿಂದಲೇ ಎಲ್ಲೆಡೆ ಇರುವ ಕೇಡು ನಾಯಕಪಾತ್ರಗಳಲ್ಲೂ ಇರುತ್ತದೆ ಎಂಬುದನ್ನು ಕಾಣಲು, ಕಾಣಿಸಲು ಈ ಬಗೆಯ ಲೇಖಕರು ಹಿಂಜರಿಯುವುದಿಲ್ಲ.

ಮನುಷ್ಯನ ಕೇಡಿನ ಪ್ರವೃತ್ತಿ ಕತ್ತಿಯ ಮೊನೆಯಲ್ಲಿ ವ್ಯಕ್ತವಾದರೆ ಅದನ್ನು ಗುರುತಿಸುವುದು ಸುಲಭ. ಆದರೆ ಅದು ನಾವು ಸಾಮಾನ್ಯವಾಗಿ ಸಂದೇಹಿಸದಂಥ ಮಾನವವರ್ತನೆಗಳ ಹಿಂದೆಯೂ ಇದ್ದರೆ?

ಈವಿಲ್ ಗೆ ಇನ್ನೊಂದು ಈವಿಲ್ ಅನ್ನು ಕೇವಲ ಸೋಲಿಸಿದ ಮಾತ್ರಕ್ಕೆ ಆನಂದವಿಲ್ಲ. ಬದಲಿಗೆ, ಮುಗ್ಧವಾದದ್ದನ್ನು ಹೊಸಕಿ ಹಾಕಿದಾಗಲೇ ಅದಕ್ಕೆ ತೃಪ್ತಿ’ ಎಂದು ಬಸವರಾಜ ಅರಸು ಹೇಳಿದ್ದರು.

ನಮ್ಮ ಓದು, ತರಬೇತಿಗಳು ನಮ್ಮ ಆಳದ ಕೇಡನ್ನು ಆಗಾಗ ಸ್ಪರ್ಶಿಸಿದರೂ ಅದನ್ನು ಸಂಪೂರ್ಣವಾಗಿ ಕದಲಿಸದೆ ಸೋತುಬಿಡುತ್ತವೆಯೇ? ಹಾಗಾದರೆ ಯಾವ ಮನುಷ್ಯನೂ ಮೂಲಭೂತವಾಗಿ ಬದಲಾಗಲಾರನೆ?

ಇನ್ನೊಬ್ಬ ವ್ಯಕ್ತಿಯ ಆಳಕ್ಕೆ ಹೋಗುವುದು ನಮ್ಮ ಆಳಕ್ಕೆ ಹೋಗುವ ಮೂಲಕ ಮಾತ್ರ ಸಾಧ್ಯ.

ಮನುಷ್ಯನಿಗೆ ಇನ್ನೊಬ್ಬರನ್ನು ಹಿಂಸಿಸುವುದರಲ್ಲಿ, ವಂಚಿಸುವುದರಲ್ಲಿ ಆನಂದವಿದೆ.

ಈವಿಲ್ ಗೆ ಇರುವ ವಿಚಿತ್ರ ಚಾಲಕಶಕ್ತಿ ಹಾಗೂ ಅದರ ಆಕರ್ಷಣೆ ಎಷ್ಟು ಆಳವಾದದ್ದು ಎಂಬುದನ್ನು ಅರಿಯದ ಲೇಖಕ ಭೋಳೆಯಾಗಿಬಿಡಬಲ್ಲ. ಕೇಡು ಅದೆಷ್ಟು ಆಕರ್ಷಕವಾಗಿರಬಲ್ಲದೆಂದರೆ, ಬರೆಯುತ್ತಾ, ಬರೆಯುತ್ತಾ ಲೇಖಕನೇ ಅದರ ಸ್ವರೂಪಕ್ಕೆ ಬೆರಗಾಗಿ ಅದರ ಮೋಹಕ್ಕೆ ಒಳಗಾಗಬಲ್ಲ.

ಈವಿಲ್ ಏಕಮನಸ್ಸಿನಿಂದ ಕೆಲಸ ಮಾಡುತ್ತಿರುತ್ತದೆ. ಅದಕ್ಕೆ ವಿನಾಶ ಮಾಡುವುದು ಹಾಗೂ ಗೆಲ್ಲುವುದು ಬಿಟ್ಟರೆ ಬೇರೆ ಕೆಲಸವೇ ಇಲ್ಲ. ಆದರೆ ಒಳಿತು ಹಾಗಲ್ಲ. ಕೇಡು ಹೆಚ್ಚಿಗೆ ಇರುವ ಜನ ಏನಾದರೂ ಮಾಡಿ ಸುಳ್ಳು, ಮೋಸ ಎಲ್ಲ ಬೆರೆಸಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಯತ್ನಿಸುತ್ತಾರೆ; ಆದರೆ ಒಳ್ಳೆಯತನ ಹೆಚ್ಚಿಗೆ ಇರುವ ಸಂಕೋಚ ಸ್ವಭಾವದವರು ಹಿಂದೆ ಸರಿದುಬಿಡುತ್ತಾರೆ.

ಮನೋವಿಜ್ಞಾನಿ ರೊಲೋ ಮೇ ಎರಡು ಬಗೆಯ ಮುಗ್ಧತೆಗಳನ್ನು ಗುರುತಿಸುತ್ತಾನೆ. ಒಂದು, ಭೋಳೆ ಮುಗ್ಧತೆ; ಇನ್ನೊಂದು, ಪ್ರಾಮಾಣಿಕ ಮುಗ್ಧತೆ. ಅವನ ಪ್ರಕಾರ ‘ಯಾವುದು ಕೇಡಿನ ಸ್ವರೂಪ ಹಾಗೂ ಶಕ್ತಿಯನ್ನು ಅರಿತಿರುವುದಿಲ್ಲವೋ ಅದು ಭೋಳೆ ಮುಗ್ಧತೆ; ಕೇಡನ್ನು ಅರಿತು ತನ್ನ ಮುಗ್ಧತೆಯನ್ನು ಉಳಿಸಿಕೊಳ್ಳುವುದೇ ಪ್ರಾಮಾಣಿಕ ಮುಗ್ಧತೆ’.

ಎಲ್ಲೆ - ಕಿರುಚಿತ್ರ