Tuesday, June 25, 2013

ಕನಸುಗಳನು ಕಾಣುವುದ ಕಲಿತೆ!

ವಯಸ್ಸು ೧೬-೧೭ ಇರಬೇಕು.  ಅವನ ಕಣ್ಣಲ್ಲಿ ಅದೇನೋ ಜಗತ್ತನ್ನೇ ಗೆಲ್ಲಬಲ್ಲನೆಂಬ ಅದಮ್ಯವಾದ ಆತ್ಮ ವಿಶ್ವಾಸ, ಹಳೇ ಡ್ರೆಸ್, ಕೆದರಿದ ಕೂದಲು. ಕೆಲಸ ಹುಡುಕಿಕೊಂಡು ಬಂದಿದ್ದ.  ಇವನ ಕೈಯಲ್ಲಿ ಎಂತಹ ಕೆಲಸ ಮಾಡಿಸುವುದು, ಇನ್ನೂ ೧೮ ತುಂಬಿಲ್ಲ.  ಕಾನೂನಿನ ಪ್ರಕಾರ ಅಪರಾಧವಾಗಬಹುದೇನೋ ಎನ್ನುವುದು ನನ್ನ ಚಿಂತೆ.  ಅವನಾದರೋ ‘ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ ಮೇಡಮ್. ದಯವಿಟ್ಟು ನನಗೊಂದು ಕೆಲಸ ಕೊಡಿ, ಎಸ್ ಎಸ್ ಎಲ್ ಸಿ ೮೦% ನಲ್ಲಿ ಪಾಸಾಗಿದ್ದೀನಿ, ತಂದೆ ತೀರಿ ಹೋದರು, ಮನೆಯಲ್ಲಿ ಬಹಳ ಕಷ್ಟ, ನಾನೇ ಮೊದಲ ಮಗ, ಮುಂದೆ ಓದಲು ಸಾಧ್ಯವಾಗುತ್ತಿಲ್ಲ’ ಎಂದೆಲ್ಲಾ ಹೇಳುತ್ತಿದ್ದ.  ನಾನು ಕೂಡ ಕಷ್ಟ ಪಟ್ಟು, ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು,  ಸ್ಕಾಲರ್ ಶಿಪ್ ನಲ್ಲಿ ಓದಿದ್ದರಿಂದ ಮನ ಕರಗಿ ಕೆಲಸ ಕೊಡಲು ಒಪ್ಪಿಕೊಂಡರೂ, ಬೇರೆಯವರೆಲ್ಲರ ವಿರೋಧ.  ‘ಮೇಡಮ್, ಇವನಿಗೆ ಇನ್ನೂ ೧೭ ತುಂಬಿಲ್ಲ, ಎಲ್ಲೂ ಕೆಲಸ ಮಾಡಿದ ಅನುಭವವಿಲ್ಲ. ಅಂತಹವನಿಗೆ ಕ್ಯಾಷಿಯರ್ ಕೆಲಸ ಕೊಡುತ್ತೀರಾ?  ಇವನೇನಾದರೂ ಕಲೆಕ್ಷನ್ ಎತ್ತಿಕೊಂಡು ಓಡಿಹೋದರೆ? ಅವನ ಕಣ್ಣುಗಳಲಿದ್ದ ಆತ್ಮವಿಶ್ವಾಸ ಕಂಡು ಕೊನೆಗೂ ಕ್ಯಾಶಿಯರ್ ಕೆಲಸ ಕೊಟ್ಟೇಬಿಟ್ಟೆ.  ಮೊದಲ ದಿವಸವೇ ಒಳ್ಳೆ ಬಟ್ಟೆ ಕೊಂಡುಕೊಳ್ಳಲು ಹಾಗೂ ಸಂಜೆ ಕಾಲೇಜು ಸೇರಲು ಮುಂಗಡ ಹಣ ಕೂಡ ಕೊಟ್ಟೆ.  
ಮಾರನೇ ದಿವಸ ಇನ್ನೂ ಹೆಚ್ಚಿನ ಆತ್ಮವಿಶ್ವಾಸದಿಂದ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಬಂದ.  ಹೇಳಿಕೊಟ್ಟದನ್ನೆಲ್ಲಾ ಥಟ್ಟನೆ ಕಲಿತುಬಿಡುತ್ತಿದ್ದ.  ಬುದ್ಧಿವಂತ. ಎಷ್ಟೇ ಕಷ್ಟವಾದರೂ ಕಾಲೇಜು ಮಾತ್ರ ಬಿಡದಿರುವಂತೆ ದಿವಸವೂ ಬುದ್ಧಿ ಹೇಳುತ್ತಿದ್ದೆ.  ಬೇಕಿದ್ದರೆ ನಾನೇ ಕಾಲೇಜು ಪುಸ್ತಕಗಳನ್ನೂ ಹಾಗೂ ಫೀಸನ್ನು ಕೊಡುವೆನೆಂದು ಕೂಡ ಭರವಸೆ ಕೊಡುತ್ತಿದ್ದೆ.  ನಾನು ಹಾಗೇ ಕಷ್ಟ ಪಟ್ಟಿದ್ದಕ್ಕೆ ಇಂದೀಗ ಒಂದು ಸಂಸ್ಥೆಯ ಮಾಲೀಕಳಾಗಿದ್ದೇನೆಂದು ಹೇಳುವಾಗ ಆತನ ಕಣ್ಣಲ್ಲಿ ಕೂಡ ಕನಸುಗಳು ಮೂಡುತ್ತಿದ್ದವು.  ಅವನ ಆಸೆಗಳನ್ನೂ, ಮನೆಯಲ್ಲಿನ ಕಷ್ಟಗಳನ್ನೂ ಹೇಳಿಕೊಳ್ಳುತ್ತಿದ್ದ.  ನನಗೆ ಕಂಡಂತಹ ಪರಿಹಾರವನ್ನೂ ನಾನು ನೀಡುತ್ತಿದ್ದೆ.  ಹೀಗೆ ಸುಮಾರು ೮ ತಿಂಗಳು ಕಳೆಯಿತು.  ಒಂದು ದಿವಸ ಹೇಳದೇ ಕೇಳದೇ ಪರಾರಿಯಾದ. ಯಾಕೆಂದು ನನಗೆ ತಿಳಿಯಲೇ ಇಲ್ಲ. ಎಲ್ಲರೂ ನಾವಂದೇ ಹೇಳಿದ್ದೆವೆಂದು, ನಾ ಅವರ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲವೆಂದು ಮೂದಲಿಸಿದರು. ಬೇಸರವಾಯಿತು.  ನಾನು ಅವನನ್ನು ನಂಬಿದ್ದೇ ತಪ್ಪಾಯಿತೇನೋ ಎಂದು ಕೂಡ ಅನ್ನಿಸಿತು.  ಆದರೆ ಒಂದು ಸಮಾಧಾನವೇನೆಂದರೆ ಆತ ಹಿಂದಿನ ದಿನದ ಕಲೆಕ್ಷನ್ ನನಗೆ ಒಪ್ಪಿಸಿ ಹೊರಟು ಹೋಗಿದ್ದ. ದುಡ್ಡು ಕದ್ದಿರಲಿಲ್ಲ.
ಇಂದು ನಾನು ಕೆಲಸದಲ್ಲಿ ಮಗ್ನಳಾಗಿದ್ದೆ.  ಒಬ್ಬ ಯುವಕ (ಮೆಡಿಕಲ್ ರೆಪ್) ಸುಮಾರು ೨೬ ವರ್ಷಗಳಾಗಿರಬಹುದು.  ನನ್ನ ಗಂಡ (ಡಾಕ್ಟರ್) ನನ್ನು ಭೇಟಿ ಮಾಡುವ ಸಲುವಾಗಿ ಬಂದು ಕುಳಿತಿದ್ದ.  ಅವನತ್ತ ನೋಡಿದೆ.  ಯಾಕೋ ಅವನು ನನ್ನ  ಕಣ್ಣುಗಳನ್ನು ತಪ್ಪಿಸುತ್ತಿರುವಂತೆ ಭಾಸವಾಯಿತು.  ಬಹುಶಃ ರಶ್ ಇದ್ದಾಗಲೂ ಡಿಸ್ಟರ್ಬ್ ಮಾಡುವೆನೆಂದು ನಾನು ಹೇಳುತ್ತೇನೆ ಎಂದಿರಬಹುದೇನೋ ಅಂದುಕೊಂಡು ಸುಮ್ಮನಾಗಿಬಿಟ್ಟೆ.  ಒಳಗೆ ಹೋದವನೇ ಅವರನ್ನು ಮಾತನಾಡಿಸಿ, ತಕ್ಷಣ ಹೊರಗೆ ಬಂದು ಒಂದು ಕ್ಷಣವೂ ನಿಲ್ಲದಂತೆ ಹೊರಟುಬಿಟ್ಟ.  ಇವರು ನನ್ನನ್ನು ಒಳಕರೆದು ಅವನು ಅದೇ ಕ್ಯಾಶಿಯರ್ ಕೆಲಸ ಮಾಡುತ್ತಿದ್ದ ಹುಡುಗ, ಯಾಕೆ ಮಾತನಾಡಿಸಲಿಲ್ಲ? ಎಂದರು.  ಓಡಿ ಹೋಗಿ ಮಾತನಾಡಿಸಿದೆ.  ತಕ್ಷಣ ಅಳಲು ಶುರು ಮಾಡಿದ.  ನಂತರ ಸುಧಾರಿಸಿಕೊಂಡು, ಜೀವನದಲ್ಲಿ ನಾನು ಏನನ್ನಾದರೂ ಸಾಧಿಸಿ ನಿಮ್ಮ ಬಳಿಗೆ ಬರುವವನಿದ್ದೆ ಮೇಡಮ್. ನಿಮಗೆ ನನ್ನ ಗುರುತಾಗಲಿಲ್ಲ ಎಂದು ತಿಳಿಯಿತು. ಹಾಗಾಗಿ ಮಾತನಾಡಿಸಲಿಲ್ಲ ಎಂದ.  ನಂತರ ಭಾವುಕನಾಗಿ ಇದುವರೆವಿಗೂ ನಾನೇನಾಗಿದ್ದೇನೆ ಎಲ್ಲದಕ್ಕೂ ನೀವೇ ಕಾರಣ.  ಈಗಲೂ ಅಷ್ಟೇ ಐಎ ಎಸ್ ಪರೀಕ್ಷೆ ಕಟ್ಟಿದ್ದೇನೆ. ಹೊಟ್ಟೆಪಾಡಿಗಾಗಿ ಈ ಕೆಲಸ, ಮನೆಯಲ್ಲಿ ಎಲ್ಲ ಕಷ್ಟಗಳು ನೀಗಿದವು.  ಅಂದು ಮನೆಯಲ್ಲಿ ಆದ ಯಾವುದೋ ಗಲಾಟೆಯಿಂದಾಗಿ ನಿಮಗೂ ಕೂಡ ತಿಳಿಸದಂತೆ ಊರಿಗೆ ಹೊರಟುಬಿಟ್ಟೆ.  ಅಲ್ಲಿಂದ ಬಂದ ನಂತರದ ಮೂರು ವರ್ಷಗಳು ಬಹಳ ಕಷ್ಟವಾಯಿತು.  ಆದ್ರೂ ಎಷ್ಟೇ ಕಷ್ಟವಾದರೂ ಓದನ್ನು ನಿಲ್ಲಿಸಬೇಡ ಎಂದಿದ್ದ ನಿಮ್ಮ ಬುದ್ಧಿ ಮಾತಿನಿಂದಾಗಿ ಓದನ್ನು ಮಾತ್ರ ನಿಲ್ಲಿಸಲೇ ಇಲ್ಲ.  ಗೆಳೆಯರೆಲ್ಲರೂ ನಿನ್ನ ಕೆರಿಯರ್ ರೂಪಿಸಿದ ಅವರನ್ನು ಒಂದು ಬಾರಿ ಭೇಟಿಯಾಗಿ ಕೃತಜ್ಞತೆಯನ್ನು ಹೇಳಿ ಬಾ ಎಂದು ಹೇಳುತ್ತಲೇ ಇದ್ದರು.  ನಾನು ಐ ಎ ಎಸ್ ಪರೀಕ್ಷೆ ಪಾಸ್ ಮಾಡಿದ ದಿವಸ ಬಂದು ಭೇಟಿಯಾಗಿ ಆಶೀರ್ವಾದ ಪಡೆಯಬೇಕೆಂದಿದ್ದೆ.  ಆದರೆ ಇಂದೇ ನಿಮ್ಮ ಭೇಟಿಯಾಗಿಬಿಟ್ಟಿತು. ಸಾಧಿಸಿಯೇ ಸಾಧಿಸುತ್ತೇನೆ ಮೇಡಮ್.  ಬೆಂಗಳೂರಿನಲ್ಲಿ ಕೆಲಸ ಕೊಟ್ಟು ಕನಸುಗಳನ್ನು ಕಾಣುವುದನ್ನು ಕಲಿಸಿದವರು ನೀವು! ಎಂದೆಲ್ಲಾ ಹೇಳುತ್ತಲೇ ಇದ್ದ. ನನ್ನ ಕಣ್ಣಲ್ಲಿ ಮಾತ್ರ ಆನಂದ ಭಾಷ್ಪ.

ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ............. ಲೈಫು ಇಷ್ಟೇನೇ

(ಕನ್ನಡದ ಪ್ರತಿಭಾವಂತ ನಟ, ಚಿತ್ರಕಥೆಗಾರ ಪವನ್ ಕುಮಾರ್ ಇಲ್ಲಿ ತಮ್ಮ ಪಂಚರಂಗಿ ಅನುಭವವನ್ನ ಹಂಚಿಕೊಂಡಿದ್ದಾರೆ. ಇಂಗ್ಲೀಷಿನಿಂದ ಇದನ್ನ ಕನ್ನಡೀಕರಿಸಿದ್ದು ನಾನು)

ನಮ್ಮ ಹೊಸ ಚಲನಚಿತ್ರ ‘ಪಂಚರಂಗಿ’ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಈ ರೀತಿಯ ಪ್ರಚಂಡ ಆರಂಭದ ಯಶಸ್ಸನ್ನು ನಾನಾಗಲೀ, ನಮ್ಮ ತಂಡವಾಗಲೀ ನಿರೀಕ್ಷಿಸಿಯೇ ಇರಲಿಲ್ಲ!   ನಾನು ಪವನ್ ಕುಮಾರ್, ಪಂಚರಂಗಿ ಯ ಕಥೆ, ಚಿತ್ರಕಥೆ ಬರೆದವರಲ್ಲಿ ಒಬ್ಬ!  ಜೊತೆಗೆ ಈ ಚಿತ್ರದ ‘ಲಕಿ’ ಪಾತ್ರಧಾರಿ ಕೂಡ ನಾನೇ.  ನಾವು ಪಂಚರಂಗಿಯನ್ನು ತೆರೆಗೆ ತರುವ ಮುನ್ನಾ ಏನಾಯಿತು, ಹೇಗಾಯಿತು ಎನ್ನುವುದನ್ನು ನಿಮ್ಮ ಮುಂದಿಡಲು ಇಚ್ಚಿಸುತ್ತೇನೆ.

ಮನಸಾರೆ ಚಿತ್ರವು ಸೆಪ್ಟೆಂಬರ್ ೨೦೦೯ ರಲ್ಲಿ ಬಿಡುಗಡೆಯಾಯಿತು.  ಮನಸಾರೆ ಚಿತ್ರದ ಯಶಸ್ಸನ್ನು ಸ್ವಲ್ಪ ಮಟ್ಟಿಗೆ ನಿರೀಕ್ಷಿಸಿದ್ದೆವು ಕೂಡ.  ಈ ಚಿತ್ರಕ್ಕೆ ಸುರಿದ ಪ್ರಶಂಸೆಯ ಸುರಿಮಳೆ, ನನಗೆ ಸ್ವರ್ಗಕ್ಕೆ ಮೂರೇ ಗೇಣು ಎಂದಂತೆ ಭಾಸವಾಗಿದ್ದು ಮಾತ್ರ ಸುಳ್ಳಲ್ಲ.  ಮನಸಾರೆ ಕಥೆ, ಚಿತ್ರಕಥೆ ಬರೆಯುವಾಗಿನ ಕ್ಷಣಗಳು ನನಗೆ ವೈಯಕ್ತಿಕವಾಗಿ ಅತ್ಯಂತ ಖುಷಿ ಕೊಟ್ಟಂತಹ ಕ್ಷಣಗಳು.  ನಾನು ಈ ಚಿತ್ರ ನಿರ್ಮಾಣ ಕಾರ್ಯದಲ್ಲಿ ಅತೀ ಉತ್ಸುಕತೆಯಿಂದ ಭಾಗವಹಿಸಿದ್ದೇನೆ.  ಇದರ ಕಥೆ, ಚಿತ್ರಕಥೆಯಲ್ಲಿನ ಕ್ಷಣಕ್ಷಣದ ಬದಲಾವಣೆಗಳು, ಹಾಸ್ಯ ಮಿಶ್ರಿತ ಫಿಲಾಸಫಿ, ಇದೆಲ್ಲವೂ ನನ್ನನ್ನು ಜೀವಂತಿಕೆಯಲ್ಲಿಟ್ಟಿತ್ತು ಎಂದರೆ ತಪ್ಪಾಗಲಾರದು. ಈ ಚಿತ್ರ ಬಿಡುಗಡೆಯಾದ ನಂತರ ಮತ್ತೇನು?  ನಾನೇನು ಮಾಡಲಿ?  ನನಗೆ ಮತ್ತೆ ಜೀವಂತಿಕೆಯಲ್ಲಿ ಪುಟಿಯುವಂತಹ ಅವಕಾಶ ದೊರೆಯುತ್ತದೆಯೇ?  ಅದು ಅಷ್ಟು ಸುಲಭವೇ?  ಇದೆಲ್ಲವೂ ನನ್ನನ್ನು ಕಾಡುತ್ತಿತ್ತು.  ಮನಸಾರೆ ಚಿತ್ರದ ಪ್ರೊಮೋಷನ್ ಗಾಗಿ ನಾವು ಇಡೀ ಕರ್ನಾಟಕವನ್ನು ಸುತ್ತುತ್ತಿದ್ದೆವು.  ಆ ಸಂದರ್ಭದಲ್ಲಿ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟು ಅಲ್ಲಿನ ಪ್ರೇಕ್ಷಕರನ್ನು ಮಾತನಾಡಿಸಿ, ಅವರ ಅಭಿಪ್ರಾಯಗಳನ್ನು ಕೇಳುತ್ತಿದ್ದೆವು.  ಅವರನ್ನು ನೋಡುತ್ತಿದ್ದರೆ, ನನಗೆ ನಾವು ಅವರನ್ನು ಮೋಸ ಮಾಡುತ್ತಿದ್ದೇವೆ ಎಂದೆನಿಸತೊಡಗಿತು! ನಾವು ಅಂದರೆ ಚಿತ್ರ ನಿರ್ದೇಶಕರು ಅತ್ಯಂತ ಬುದ್ಧಿವಂತಿಕೆಯಿಂದ ಅಥವಾ ನಾವು ಹಾಗೆಂದುಕೊಂಡು! ಮಾಡಿರುವ ಚಲನಚಿತ್ರವು ಆ ಹಳ್ಳಿಯ ಮುಗ್ಧ ಜನರಿಗೆ ತಟ್ಟುವುದೇ? ಅವರಿಗೆ ಬೇಕಾಗಿರುವುದು ಭಾವುಕತೆಯಿಂದ ಕೂಡಿರುವ, ಯಾವುದೂ ಗೂಢಾರ್ಥವಿಲ್ಲದ ತಿಳಿಯಾದ ಚಲನಚಿತ್ರ ಎಂಬುದು ನನಗೆ ಅರಿವಾಗತೊಡಗಿತು.  ಮನಸಾರೆಯಲ್ಲಿ ಬುದ್ಧಿವಂತಿಕೆ ಸ್ವಲ್ಪ ಹೆಚ್ಚಾಗೇ ಮೂಡಿತ್ತು ಎಂದೆನಿಸಿತು. ನಮ್ಮ ಚಲನ ಚಿತ್ರಗಳ ಪ್ರೇಕ್ಷಕರು ಹೆಚ್ಚಾಗಿ ಬೆಂಗಳೂರಿನ ಹೊರಗಡೆ ಇರುವಂತಹ ಜನರಾಗಿರುವುದರಿಂದ,ನಾವಿನ್ನೂ ನಮ್ಮ ಮುಂದಿನ ಚಿತ್ರಗಳಲ್ಲಿ ಚಿಂತನೀಯ ಕ್ಷಣಗಳಿಗಿಂತ ರಂಜನೀಯ ಕ್ಷಣಗಳಿಗೆ ಪ್ರಾಮುಖ್ಯತೆ ಕೊಡಬೇಕು, ಹಾಗೇ, ಹೀಗೇ..... ಇದೇ ಗುಂಗಿನಲ್ಲಿದ್ದ ನಾವಿಬ್ಬರೂ ಅಂದರೆ ಯೋಗರಾಜ್ ಭಟ್ ಹಾಗೂ ನಾನು ನಮ್ಮ ಮುಂದಿನ ಚಿತ್ರ ಶುರು ಮಾಡಿದೆವ

ನಾವಿಬ್ಬರೂ ಸರಿಸುಮಾರು ೨೦ ಚಿತ್ರ ಕಥೆಗಳನ್ನು ಬರೆದಿರಬಹುದು.  ಯಾವುದೂ ಕೂಡ ತೃಪ್ತಿಯೇ ಕೊಡುತ್ತಿಲ್ಲ.  ನಿಧಾನವಾಗಿ ನನಗೆ ನಿರಾಸೆಯಾಗತೊಡಗಿತು. ಹಿಂದಿನ ಭೇಟಿಯಲ್ಲಿ ಆದಂತಹ ಚರ್ಚೆ, ಸರಿ ಎಂದು ಕಂಡಿದ್ದು, ಮರುದಿವಸ ಛೇ! ಸರಿಯಿಲ್ಲ, ಬದಲಾಯಿಸೋಣ, ಹೀಗೇ.. ಇಬ್ಬರೂ ಒಮ್ಮತಕ್ಕೆ ಬರಲೇ ಆಗುತ್ತಿರಲಿಲ್ಲ.  ನಾನಂತು ತೀರಾ ಹತಾಶನಾಗಿಬಿಟ್ಟೆ.  ಈ  ಚಲನಚಿತ್ರರಂಗ ನನ್ನಂತಹವರಿಗಲ್ಲ.  ಆದರೂ ಬಿಟ್ಟುಬಿಡುವುದು ಅಷ್ಟು ಸುಲಭದ ಮಾತಲ್ಲ.  ತಲೆಯೊಳಗಿನ ಆಲೋಚನೆಗಳನ್ನೆಲ್ಲವನ್ನೂ ಕಾರ್ಯರೂಪಕ್ಕೆ ಇಳಿಸಬೇಕೆನ್ನುವಾಗ ಬರುವ ತೊಡಕುಗಳು, ಓಹ್! ಇನ್ನೂ ನನ್ನ ಕೈಯಲ್ಲಿ ಸಾಧ್ಯವಿಲ್ಲ. ಹೀಗೇ ಸುಮಾರು ೩ ತಿಂಗಳುಗಳ ಕಾಲ ಕುಂಟುತ್ತಾ ಸಾಗಿತು. ಸಣ್ಣದೊಂದು ಭೇಟಿ, ಚರ್ಚೆ ಎಲ್ಲವನ್ನೂ ಬದಲಾಯಿಸಿಬಿಟ್ಟಿತು.  ಒಂದು ದಿನ, ಜಯಂತ್ ಕಾಯ್ಕಿಣಿಯವರು ನಮ್ಮ ಆಫೀಸಿಗೆ ಬಂದಿದ್ದರು.  ನಾವು ಕಥೆ ಬರೆಯಲು ಕಷ್ಟ ಪಡುತ್ತಿರುವುದನ್ನು ಸ್ವತಃ ಬರಹಗಾರರಾದ ಅವರು ಅರ್ಥ ಮಾಡಿಕೊಳ್ಳಬಲ್ಲರವರಾಗಿದ್ದರು. ಅಲ್ಲೊಂದು ಅಸಹನೀಯ ಗಾಢ ಮೌನ ಕ್ಷಣ ಕಾಲ ಆವರಿಸಿತು.  ನಂತರ ಮೆಲ್ಲನೆ ಅವರು ಬಾಯ್ಬಿಟ್ಟರು. ಅವರಿಗೇ ಅರಿವಿಲ್ಲದಂತೆ ಅವರೊಂದು ಪದವನ್ನು ಬಳಸಿದರು.  ಅದು ‘ಸಮುದಾಯ’.  ಅವರ ಪ್ರಕಾರ ಮನಸಾರೆ ಜನಸಮುದಾಯಕ್ಕೆ ಬಹಳ ಇಷ್ಟವಾಗಿದ್ದು ಏಕೆಂದರೆ ಅದರಲ್ಲಿ ಪಾತ್ರಗಳು ಹೆಚ್ಚಿದ್ದುವು. ಹಾಗಾಗಿ ಪ್ರೇಕ್ಷಕನಿಗೆ ಇದು ಖುಷಿ ಕೊಡುತ್ತದೆ. ಪಾತ್ರಗಳು ಹೆಚ್ಚಿದ್ದಾಗ, ಆ ಬೇರೆ, ಬೇರೆ ಪಾತ್ರಗಳ ಬೇರೆ ಗುಣ ಲಕ್ಷಣಗಳು, ತಾವು ಕಂಡಂತಹ ಅಥವಾ ತಾವೇ ಆಗಿರಬಹುದಂತಹ ಗುಣಲಕ್ಷಣಗಳನ್ನು ಈ ಪಾತ್ರಗಳಲ್ಲಿ ಹುಡುಕುತ್ತಾರೆ. ಅಂತಹ ಚಲನಚಿತ್ರವು ಅವರಿಗೆ  ಹೆಚ್ಚಿನ ಮಟ್ಟದಲ್ಲಿ ತಲುಪುತ್ತದೆ. ಯಾವುದೇ ಕಥೆ / ಚಿತ್ರಕಥೆ ಜನರಿಗೆ ಮುಟ್ಟಬೇಕಾದರೆ ಅದರಲ್ಲಿ ಒಂದಿಡೀ ಸಮುದಾಯದ ಗುಣ ಲಕ್ಷಣಗಳಿರಬೇಕು. ಹಾಗಾಗಬೇಕಾದರೆ ಪಾತ್ರಗಳು ಹೆಚ್ಚಿರಬೇಕು.  ಅವರು ಹೇಳುತ್ತಲೇ ಇದ್ದರು.  ನಾವಿಬ್ಬರೂ ಸುಮ್ಮನೇ ಕೇಳುತ್ತಾ ಕುಳಿತಿದ್ದೆವು. ಆ ಕ್ಷಣಕ್ಕಂತೂ ನಮ್ಮ ಬುದ್ಧಿ ಬಂದಾಗಿತ್ತು.  ಆದರೆ ಅವರು ನಮ್ಮ ತಲೆಯೊಳಗೆ ಹುಳವನ್ನು ಬಿಟ್ಟಿದ್ದಾಗಿತ್ತು.  ಆ ರಾತ್ರಿಯೆಲ್ಲಾ ನಾನು ನನ್ನ ಇಷ್ಟದ ಸಿನೆಮಾಗಳನ್ನೆಲ್ಲವನ್ನೂ ನೆನಪಿಸಿಕೊಂಡೆ.  ಜಯಂತ್ ಅವರು ಹೇಳಿದ್ದೂ ನೂರಕ್ಕೆ ನೂರು ಸರಿಯಾಗಿತ್ತು.  ಬಹುತೇಕ ಅದ್ಭುತ ಸಿನೆಮಾಗಳಲ್ಲಿ ಪಾತ್ರಗಳ ರಚನೆ ಅದ್ಭುತವಾಗಿತ್ತು.  ಅಂದು ನಾನು ಮನದಲ್ಲೇ ನಿರ್ಣಯಿಸಿಕೊಂಡೆ.  ನಮ್ಮ ಮುಂದಿನ ಚಿತ್ರದಲ್ಲಿ ಪಾತ್ರಗಳ ರಚನೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕು.  ಜಯಂತ್ ಅವರಂದಂತೆ ಇಡೀ ಸಮುದಾಯದ ಫೀಲ್ ಇರಬೇಕು.  ಬೆಳಿಗ್ಗೆ ಎದ್ದೊಡನೆ ಇದೆಲ್ಲವನ್ನೂ ಯೋಗರಾಜ್ ಅವರಿಗೆ ಹೇಳಿದೆ.  ಆದರೆ ಮತ್ತವೇ ಪ್ರಶ್ನೆಗಳು!  ಈ ಸಮುದಾಯದ ಫೀಲ್ ಅಥವಾ ಸೆನ್ಸ್ ಅನ್ನು ಎಲ್ಲಿಂದ ತರುವುದು? ಎಲ್ಲಿದ್ದೆವೋ ಮತ್ತೆ ಅಲ್ಲೇ ಬಂದು ನಿಂತೆವು!

ಸ್ವಲ್ಪ ದಿನಗಳು ಕಳೆದವು.  ನಾವು ಮೊದಲಿಗೆ ಚಿತ್ರಕಥೆಯನ್ನು ಬರೆದು, ನಂತರ ಪಾತ್ರಧಾರಿಗಳನ್ನು ಹುಡುಕುತ್ತಿದ್ದೆವು.  ಆದರೆ ಈ ಸಲ ಮೊದಲಿಗೆ ಪಾತ್ರ ರಚನೆ ಹಾಗೂ ಅದಕ್ಕೆ ಹೊಂದುವ ಪಾತ್ರಧಾರಿಗಳನ್ನು ಆರಿಸಿ, ನಂತರ ಕಥೆಯನ್ನು ಬರೆಯುವ ಯೋಜನೆ ಹಾಕಿಕೊಂಡೆವು. ನಾನೊಂದಷ್ಟು ಪಾತ್ರಗಳನ್ನು ಹಾಗೂ ಅದಕ್ಕೆ ಹೊಂದುವ ನಮ್ಮಿಷ್ಟದ ನಟ ನಟಿಯರ ಹೆಸರುಗಳನ್ನು ಬರೆದುಕೊಂಡ.  ನಂತರ ಈ ಎಲ್ಲ ಪಾತ್ರಗಳನ್ನು ಒಟ್ಟಿಗೆ ಪೋಣಿಸುವುದು ಹೇಗೆ? ಎಂದು ಯೋಚಿಸಲು ಶುರು ಮಾಡಿದೆ. ‘ಮದುವೆ’ ಯ ಘಟನೆ ತೆಗೆದುಕೊಂಡರೆ ಹೇಗೆ? ಬೇಡ, ನಮ್ಮ ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಈ ಮದುವೆ ಯ ಘಟನೆ ಬಂದು ಹಳತಾಗಿದೆ.  ನನಗೆ ಈ ಪಾತ್ರಗಳನ್ನು ಪೋಣಿಸುವ ಘಟನೆಗೆ ಅಷ್ಟೊಂದು ಮಹತ್ವ ಕೊಡುವುದು ಬೇಡವಾಗಿತ್ತು. ನೀನು ಘಟನೆಗೆ ಮಹತ್ವ ಕೊಡದಿದ್ದರೆ ಸಿನೆಮಾದಲ್ಲಿ ಕಥೆ ಯೇ ಇರುವುದಿಲ್ಲ ಎಂದು ಯೋಗರಾಜ್ ಹೇಳಿದರು. ಈ ಐಡಿಯಾವೂ ವೇಸ್ಟಾಯಿತು ಅಂತಂದುಕೊಂಡೆ. ಅಷ್ಟರಲ್ಲಿ ಇಬ್ಬರಿಗೂ ನಾವ್ಯಾಕೆ ಇದನ್ನು ಪ್ರಯೋಗ ಮಾಡಿ ನೋಡಬಾರದು? ಎಂಬ ಭಯಂಕರವಾದ ಆಸೆ ಹುಟ್ಟಿತು! ಸರಿ, ಮತ್ತೆ ಇದರ ಬಗ್ಗೆ ಬಾರಿ, ಬಾರಿ ಚರ್ಚೆಗಳು ನಡೆದವು.  ಕೊನೆಗೊಂದು ಒಮ್ಮತಕ್ಕೆ ಬಂದೆವು. ಅದೇನೆಂದರೆ  ಈ  ಹದಿನಾರು ಪಾತ್ರಗಳ ಸುತ್ತ ಸಣ್ಣದೊಂದು ಕಥೆ, ಆದರೆ ಸವಿಸ್ತಾರವಾದ ಚಿತ್ರಕಥೆಯನ್ನು ರಚಿಸುವುದು. ನೀವು ಈ ಪ್ರಯೋಗವನ್ನು ಗಮನಿಸಿದರೆ ಅರ್ಥವಾಗಬಹುದು, ನಮ್ಮ ಕೆಲಸ ಕಥೆಯನ್ನು ಕಟ್ಟುವುದಲ್ಲ, ಬದಲಿಗೆ ಈ ಪಾತ್ರಗಳ ನಡುವೆ ಕಥೆಯೊಂದನ್ನು ಸೃಷ್ಟಿ ಮಾಡುವುದಾಗಿತ್ತು.  ಆದರೆ  ಈ ನಮ್ಮ ಜೀವನದ ಫಿಲಾಸಫಿಗಳು,  ದಾರ್ಶನಿಕ ತತ್ವಗಳು ,  ನಾವು ನಂಬಿಕೊಂಡಿರುವ ನೀತಿಗಳು, ನಮ್ಮನ್ನು  ಅಷ್ಟು ಬೇಗ ಬಿಟ್ಟು ಬಿಡುವುದೇ?  ಇದರಿಂದ ಬರೀ ರಂಜನೀಯ ಚಿತ್ರವನ್ನು ಮಾತ್ರ ಕೊಡುವುದೆಂದೂ ಆಗಿದ್ದ ನಮ್ಮ ಹೊಸ ನೀತಿಯು ನಿಧಾನವಾಗಿ ಹಾಳಾಗತೊಡಗಿತು.

ಕೊನೆಗೆ ನಮ್ಮ ಶೂಟಿಂಗ್ ಸ್ಕ್ರಿಪ್ಟ್ ನಲ್ಲಿ ೧೫೦ ನಿಮಿಷಗಳ ಚಿತ್ರಕಥೆ ಇತ್ತು.  ಆದರೆ ಕಥೆಯೆಲ್ಲಿ?  ನಮ್ಮ ತಲೆಯೊಳಗೆ ಪರ, ವಿರೋಧಿ ಎರಡು ಬಣಗಳೂ ಕೆಲಸ  ಮಾಡುತ್ತಿದ್ದವು.  ಒಂದು ದಿವಸ ನಾನು ಅತ್ಯಂತ ದೊಡ್ಡ ತಪ್ಪು ಮಾಡುತ್ತಿದ್ದೇನೆ ಎಂದು ನನಗನ್ನಿಸಿದರೆ, ಮತ್ತೊಂದು ದಿವಸ ಯೋಗರಾಜ್ ಅವರಿಗೆ ಅನಿಸುತ್ತಿತ್ತು. ನಾವಿಬ್ಬರೂ ಒಬ್ಬರನ್ನೊಬ್ಬರು ಒಪ್ಪಿಸುತ್ತಿದ್ದೆವು. ಇದೇ ಗೊಂದಲದಲ್ಲಿ ಇಡೀ ಚಿತ್ರದ ಚಿತ್ರೀಕರಣವಾಗುತ್ತಿತ್ತು.  ನಾವಿಬ್ಬರೂ ಯಾವಾಗಲೂ ಏನೋ ದೊಡ್ಡ ಅನಾಹುತ ಮಾಡಿದವರಂತೆ ಚಿಂತಾಕ್ರಾಂತರಾಗೇ ಇರುತ್ತಿದ್ದೆವು.  ಆದರೆ ನಮ್ಮ ಪಾತ್ರಧಾರಿಗಳು, ದೃಶ್ಯಗಳ ಚಿತ್ರೀಕರಣವನ್ನು ಆನಂದಿಸುತ್ತಿದ್ದದನ್ನು ನೋಡಿದಾಗ, ನಮಗೆಲ್ಲೋ ಮನಸ್ಸಿನ ಮೂಲೆಯಲ್ಲಿ ಆಶಾಕಿರಣವೊಂದು ಕಾಣುತ್ತಿತ್ತು.  ಮಂಗಳೂರಿನಲ್ಲಿ ಸುಮಾರು ೧೦೦ ನಿಮಿಷಗಳ ಚಿತ್ರೀಕರಣವನ್ನು ಮುಗಿಸಿದೆವು.  ಇನ್ನೂ ೩೦ ನಿಮಿಷಗಳ ಚಿತ್ರಕಥೆ ಬೆಂಗಳೂರಿನಲ್ಲಿ ಚಿತ್ರೀಕೃತವಾಗಬೇಕಿತ್ತು.  ಬೆಂಗಳೂರಿಗೆ ವಾಪಾಸ್ಸು ಬಂದ ನಾವು, ಇಲ್ಲಿ ಶೂಟಿಂಗ್ ಶೆಡ್ಯೂಲ್ ಅನ್ನು ಪ್ಲಾನ್ ಮಾಡುತ್ತಿದ್ದೆವು.  ಅಷ್ಟರಲ್ಲಿ ತವಕ ತಡೆಯಲಾರದ ಯೋಗರಾಜ್ ಅವರು ಎಡಿಟರ್ ನೊಟ್ಟಿಗೆ ಕುಳಿತು ಮಂಗಳೂರಿನಲ್ಲಿ ಚಿತ್ರೀಕರಣಗೊಂಡ ದೃಶ್ಯಗಳ ಎಡಿಟಿಂಗ್ ಮುಗಿಸಿಬಿಟ್ಟರು.  ಇದಾದ ನಂತರ, ನಮ್ಮ ಮುಂದಿನ ಯೋಜನೆಗಳು ಸಂಪೂರ್ಣ ಬದಲಾಗಿಬಿಟ್ಟಿತು.

ನಾವು, ಜಯಂತ್ ಹಾಗೂ ಅವರ ಮಗ ಎಲ್ಲರೂ ಕುಳಿತು ಈ ನೂರು ನಿಮಿಷಗಳ ಸಿನೆಮಾವನ್ನು ನೋಡಿದೆವು.  ಅವರಿಬ್ಬರಂತೂ ಇಡೀ ಚಿತ್ರವನ್ನು ನೋಡುತ್ತಿದ್ದಾಗ ಬಿದ್ದು, ಬಿದ್ದು ನಗುತ್ತಿದ್ದರು.  ಅಷ್ಟೊಂದು ನಗುವಂತಹದ್ದು ಏನಿದೆ ಈ ಚಿತ್ರದಲ್ಲಿ? ನಮ್ಮ ತಲೆಯಲ್ಲಿ ಪ್ರಶ್ನೆಗಳು ಮೂಡುತ್ತಿದ್ದಂತೂ ನಿಜ.  ನಂತರ ಅವರಿಗೆ ಇನ್ನೂ ೩೦ ನಿಮಿಷಗಳ ಚಿತ್ರೀಕರಣ ಬಾಕಿಯಿದೆ ಎಂದೆವು.  ಆದರೆ ಜಯಂತ್, ಅವರ ಮಗ ಹಾಗೂ ಎಡಿಟರ್ ಈ ಮೂವರ ಪ್ರಶ್ನೆ ಒಂದೇ ಆಗಿತ್ತು.  ಇನ್ನೂ ೩೦ ನಿಮಿಷಗಳ ಚಿತ್ರೀಕರಣದ ಅವಶ್ಯಕತೆ ಇದೆಯೇ?  ಚಿತ್ರ ಕ್ಕೆ ಕಥೆಯ ಚೌಕಟ್ಟನ್ನು ಕೊಡಬೇಕೆಂದರೆ ಈ ೩೦ ನಿಮಿಷಗಳ ಶೂಟಿಂಗ್ ಅವಶ್ಯಕತೆ ಇದೆ ಎಂದು ನಾವಿಬ್ಬರೂ ವಾದಿಸುತ್ತಲೇ ಬಂದೆವು.  ನಮಗಂತೂ ಈ ಚಿತ್ರ ಇಷ್ಟಕ್ಕೆ ತೃಪ್ತಿ ಕೊಟ್ಟಿದೆ.  ಇದಕ್ಕಿಂತ ಹೆಚ್ಚಿನದನ್ನೇನನ್ನು ನೋಡಲು ನಾವು ಬಯಸುವುದಿಲ್ಲ ಎಂದು ಆ ಮೂವರೂ ಹೇಳಿ ಹೊರಟರು.  ಶೂಟಿಂಗ್ ಮಾಡಬೇಕೆಂದಿದ್ದನ್ನು ಸದ್ಯಕ್ಕಂತೂ ನಿಲ್ಲಿಸಿದೆವು.  ಮತ್ತೆ ಎಲ್ಲರೂ ಆಫೀಸಿನಲ್ಲಿ ಸ್ಕ್ರಿಪ್ಟ್ ಹಿಡಿದು ಚರ್ಚೆ ಆರಂಭಿಸಿದೆವು. ಈ ನೂರು ನಿಮಿಷಗಳಲ್ಲಿ ನಿಜವಾಗಿಯೂ ನಾವು ಕಥೆಯನ್ನು ನಿರೂಪಿಸಿದ್ದೇವೆಯೇ?  ಗೊತ್ತಿಲ್ಲ.  ಚಿತ್ರಕಥೆಯ ಮೇಲೆ ಮತ್ತೊಂದಷ್ಟು ಕೆಲಸಗಳು ನಡೆದವು.  ಇಷ್ಟೆಲ್ಲಾ ಆದ ಮೇಲೆ ನಮಗನ್ನಿಸಿದ್ದೇನೆಂದರೆ ನಾವೊಂದು ಅತಿ ಸಣ್ಣ ಎಳೆಯುಳ್ಳ ಕಥೆಯೊಂದನ್ನು, ಪ್ರಬಲ ಪಾತ್ರಗಳೊಂದಿಗೆ ನಿರೂಪಿಸಿದ್ದೇವೆ. ಇದು ಪ್ರೇಕ್ಷಕರಿಗೆ ರಂಜನೆ ಕೊಡಬಲ್ಲುದು ಎಂದೆನಿಸಿತು.  ಅಷ್ಟಕ್ಕೆ ಬಿಡಬೇಕೇ? ಪ್ರೇಕ್ಷಕರಿಗೆ ಕಥೆ ಅಪೂರ್ಣ ಎನಿಸುವುದೇ? ಮತ್ತೆ ೫೦ - ೬೦ ಲಕ್ಷ ರೂಪಾಯಿಗಳನ್ನು ಹಾಕಿ ಉಳಿದ ಕಥೆಯನ್ನು ಚಿತ್ರೀಕರಿಸಬೇಕೆ?  ಮತ್ತೆ ಗೊಂದಲಗಳು, ಪ್ರಶ್ನೆಗಳು! ಬೆಂಬಿಡದೇ ಕಾಡತೊಡಗಿತು. ಕೊನೆಗೆ ಅಂತಃಸ್ಪೂರ್ತಿಯಿಂದ, ಮಾಮೂಲೀ ಸಿದ್ದ ತತ್ವಗಳುಳ್ಳ ಕಥೆಗಿಂತ, ನಾವು ಆನಂದಿಸುತ್ತಿದ್ದ ಈ ಪ್ರಯೋಗವನ್ನೇ ಪ್ರೇಕ್ಷಕರ ಮುಂದಿಡಲು ನಿರ್ಣಯ ತೆಗೆದುಕೊಂಡೆವು.  ಇಂತಹ ಅಪಾಯವನ್ನು ಮೈಮೇಲೆಳೆದುಕೊಳ್ಳಲು ಸಿದ್ದರಾದೆವು.  ನಾಲ್ಕು ಹಾಡುಗಳ ಚಿತ್ರೀಕರಣ ಹಾಗೂ ಈ ಚಿತ್ರಕಥೆಗ ತಾರ್ಕಿಕವಾಗಿ ಬೇಕಾಗಿದ್ದ ಕೆಲವೊಂದು ದೃಶ್ಯಗಳನ್ನು ಶೂಟ್ ಮಾಡಿಕೊಂಡೆವು.  ಇದೆಲ್ಲವೂ ಸೇರಿ ೧೨೮ ನಿಮಿಷಗಳ ಚಿತ್ರವು ಸಿದ್ದವಾಯಿತು.  ನಂತರದ ದಿನಗಳಲ್ಲಿ ಯೋಗರಾಜ್ ಆಗಲೀ ಅಥವಾ ಸುಬ್ರಹ್ಮಣ್ಯ ಅವರಾಗಲೀ ಕಣ್ಣು ಮುಚ್ಚಿ ನಿದ್ರೆ ಮಾಡಲೇ ಇಲ್ಲ.  ನಾನಂತೂ ಚಿತ್ರರಂಗವನ್ನೇ ಬಿಟ್ಟು, ಓಡಿ ಹೋಗುವ ಪ್ಲಾನ್ ಮಾಡುತ್ತಿದ್ದೆ.  ಯಾವುದೋ ನನ್ನ ಕ್ವಾಲಿಫಿಕೇಷನ್ ಗೆ ಒಂದು ಬಿಪಿಒ ಕೆಲಸ ಸಿಕ್ಕಿದರೂ ಸಾಕು, ಹೋಗಿ ಸೇರಿಕೊಂಡುಬಿಡೋಣ ಎಂದು ಯೋಚಿಸುತ್ತಿದ್ದೆ. ಈ ಪ್ರಯೋಗವನ್ನು ನಮ್ಮ ಪ್ರೇಕ್ಷಕರು ಒಪ್ಪಿಕೊಳ್ಳದಿದ್ದರೆ  ನಮ್ಮ ಉದ್ಯೋಗಕ್ಕೆ ಇದರಿಂದ ಸಂಚಕಾರ ಬರುತ್ತಿತ್ತು. ನಾವೇನು ಮಾಡಿದ್ದೇವೆ ಅನ್ನೋದನ್ನು ಯೋಚಿಸುವಷ್ಟರಲ್ಲಿ ಮೊದಲ ಕಾಪಿ ಬಂದುಬಿಟ್ಟಿತು.  ಚಿತ್ರದ ಪ್ರೀಮಿಯರ್ ಶೋ ನಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಚಿತ್ರವನ್ನು ಆನಂದಿಸುತ್ತಿದ್ದರೂ, ನನಗೇನೋ ಆತಂಕ.  ನಮ್ಮ ಮುಗ್ಧ ಪ್ರೇಕ್ಷಕರು ಇದನ್ನು ಹೇಗೆ ಒಪ್ಪಿಕೊಳ್ಳುತ್ತಾರೆ?  ಅದರ ಉತ್ತರ ನಿಮ್ಮ ಮುಂದೆ ಇದೆ. ನನಗೆ ತೃಪ್ತಿಯಾಗಿದೆ.

ಈಗ ಇದೆಲ್ಲವನ್ನೂ ನಾನೇಕೆ ಬರೆಯುತ್ತಿದ್ದೇನೆಂದರೆ, ನಾವೆಲ್ಲರೂ ಚಿತ್ರ ಬಿಡುಗಡೆಯಾದ ನಂತರ ಕೇಳಿದ್ದೇನೆಂದರೆ ಚಿತ್ರ ಚೆನ್ನಾಗಿದೆ, ಆದರೆ ಅದರಲ್ಲಿ ಕಥೆಯಿಲ್ಲ.  ನಾನು ಹೇಳುವುದೇನೆಂದರೆ ಈ ಚಿತ್ರದಲ್ಲಿ ಕಥೆ ಇಲ್ಲವೆಂದೇ ಅದು ಅಷ್ಟು ಚೆನ್ನಾಗಿದೆ.  ಸತ್ಯ ಹೇಳಬೇಕೆಂದರೆ ಈ ಚಿತ್ರದಲ್ಲಿ ಕಥೆಯಿದೆ.  ಒಬ್ಬ ನಿರಾಶಾವಾದಿ ಯುವಕ, ಜೀವನದಲ್ಲಿ ಬೇಸತ್ತವನು, ಇವನನ್ನು ಬದಲಾಯಿಸುವ ಯುವತಿ ಆಶಾವಾದಿ.  ಇವರಿಬ್ಬರೂ ಒಂದು ಘಟನೆಯಲ್ಲಿ ಭೇಟಿಯಾಗುತ್ತಾರೆ.  ಒಬ್ಬರು ಮತ್ತೊಬ್ಬರ ಕಾಲೇಳೆಯಲು ಪ್ರಯತ್ನಿಸುತ್ತಾರೆ.  ಈ ಪ್ರಯತ್ನದಲ್ಲಿ ಪರಸ್ಪರ ಆಕರ್ಷಣೆಗೊಳಗಾಗುತ್ತಾರೆ.  ಇವನ ಗೊಂದಲಗಳಿಗೆ ಪರಿಹಾರವನ್ನು ಸೂಚಿಸುವ ಅವಳು.  ಇದು ಕಥೆ ಅಲ್ಲವೇ?  ಯಾಕೆ ಯಾವಾಗಲೂ ಕಥೆ ಯೆಂದರೆ ದೊಡ್ಡ ದೊಡ್ಡ ದನ್ನೇ ಹುಡುಕುತ್ತೇವೆ ನಾವು?  ಒಂದು ಚಿತ್ರದುದ್ದಕ್ಕೂ ಪಾತ್ರಗಳು ವಿಜೃಂಭಿಸುತ್ತವೆ,  ಅವುಗಳ ಗೊಂದಲ, ಅದಕ್ಕೊಂದು ಪರಿಹಾರ ಇಷ್ಟಿದ್ದರೆ ಸಾಕಲ್ಲವೇ? ನಾನು ನನ್ನ ಕೆಲಸವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿಲ್ಲ.  ಇದರಲ್ಲಿ ತಪ್ಪಿದ್ದರೆ ಖಂಡಿತವಾಗಿಯೂ ತಿದ್ದಿಕೊಳ್ಳಬಯಸುತ್ತೇನೆ.  ಆದರೆ ನಿಮ್ಮೆಲ್ಲರಿಗೂ ಮುಕ್ತ ಮನದಿಂದ ಈ ಬಗ್ಗೆ ಯೋಚಿಸಲು ಹಾಗೂ ಯಾವುದೇ ದೊಡ್ಡ ಕಥೆಯನ್ನು ಹುಡುಕದೇ ಚಲನಚಿತ್ರಗಳನ್ನು ನೋಡಿ ಎಂದಷ್ಟೇ ಹೇಳಬಲ್ಲೆ. ಕೊನೆಯ ಪಕ್ಷ ಪಂಚರಂಗಿಯನ್ನಾದರೂ ಈ ದೃಷ್ಟಿಯಿಂದ ನೋಡಿ  ಎಂದು ಕೇಳಿಕೊಳ್ಳುತ್ತೇನೆ. ನಾವು ಉಳಿದ ೩೦ ನಿಮಿಷಗಳ ಚಿತ್ರೀಕರಣ ಮಾಡಿದಿದ್ದರೆ, ಇದೇ ಪ್ರೇಕ್ಷಕರು ‘ಅದೇ ಹಳೆಯ ಕಥೆ! ಸೆಕೆಂಡ್ ಹಾಫ್ ಬೋರ್, ಹುಡುಗ ಹುಡುಗಿಯನ್ನು ಪ್ರೀತಿಸುತ್ತಾನೆ, ಅವಳನ್ನು ಕಳೆದುಕೊಳ್ಳುತ್ತಾನೆ, ಮತ್ತೆ ಅವಳಿಗಾಗಿ ವಾಪಾಸ್ಸು ಬರುತ್ತಾನೆ’ ಎಂದೆನ್ನುತ್ತಿದ್ದರು. ಈಗ ಸಿಕ್ಕಿದಂತಹ ಸಕರಾತ್ಮಕವಾದ ಪ್ರತಿಕ್ರಿಯಗಳಂತೂ ಖಂಡಿತವಾಗಿಯೂ ಸಿಗುತ್ತಿರಲಿಲ್ಲ.

ದಯವಿಟ್ಟು ಚಿತ್ರವನ್ನು ಆನಂದಿಸಿ, ಅದರಲ್ಲಿನ ತತ್ವಗಳನ್ನು ಆಲೋಚಿಸಿ, ಸುಮ್ಮನೆ ನಕ್ಕುಬಿಡಿ, ನಿಮ್ಮ ಜೀವನವನ್ನು ಮುನ್ನಡೆಸಿ.  ಪಂಚರಂಗಿಯಲ್ಲಿ ಸಾಮಾನ್ಯ ಸಿದ್ದ ಸೂತ್ರವುಳ್ಳ ಕಥೆಯನ್ನು ಹುಡುಕುವ ವ್ಯರ್ಥ ಪ್ರಯತ್ನ ಪಡಬೇಡಿ.  ನಾವು ನಿಜವಾಗಿಯೂ ಜೀವಮಾನದ ಶ್ರೇಷ್ಠ ಚಿತ್ರವನ್ನು ನಿಮ್ಮ ಮುಂದಿಡಲು ಬಯಸಿಲ್ಲ.  ಅದನ್ನು ಮಾಡುವುದು ಹೇಗೆಂಬುದು ಕೂಡ ನಮಗೆ ತಿಳಿದಿಲ್ಲ. ನಿಮ್ಮೆಲ್ಲರನ್ನೂ ಒಂದಷ್ಟು ಕ್ಷಣಗಳು ನಗಿಸಬೇಕು ಹಾಗೂ ನಾವು ಹೇಗೆ ಬದುಕುತ್ತಿದ್ದೇವೆ ಎಂಬ ಸಣ್ಣದೊಂದು ಆಲೋಚನೆಯನ್ನು ಹುಟ್ಟು ಹಾಕುವುದಷ್ಟೇ ನಮ್ಮ ಉದ್ದೇಶ. ಈ ನಮ್ಮ ಉದ್ದೇಶ ನೆರವೇರುತ್ತಿದೆ ಎಂದಷ್ಟೇ ಹೇಳಬಲ್ಲೆ.  ನೀವ್ಯಾಕೆ ಒಂದು ಚಲನಚಿತ್ರವು ಕಥೆಯನ್ನು ಹೇಳಲೇಬೇಕೆಂದು ಪಟ್ಟು ಹಿಡಿಯುತ್ತೀರಿ?

ಆದರೆ ಈ ನಮ್ಮೆಲ್ಲರ ಲೈಫ್ ಹಂಗೇನೇ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ - ಲೈಫು ಇಷ್ಟೇನೇ