Saturday, January 21, 2017

ಕರ್ನಾಟಕದಲ್ಲಿ ಯಾರಿದ್ದಾರೆ ಅಂತಹವರು?

ಕರ್ನಾಟಕದಲ್ಲಿ ನಡೆಯುತ್ತಿರುವ ತೊಂದರೆಗಳಿಗೆಲ್ಲಾ ಮುಖ್ಯ ಕಾರಣ ಇಲ್ಲಿ ಧೀಮಂತ ನಾಯಕರುಗಳಿಲ್ಲದಿರುವುದು. ಹಾಗೂ ಇಲ್ಲಿಯ ರಾಜಕಾರಣಿಗಳಿಗೆ ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಆಚರಣೆಗಳ ಮೇಲೆ ನಮ್ಮದಿದು ಎಂಬ ಪ್ರೀತಿ ಇಲ್ಲದಿರುವುದು. ಇವರೆಲ್ಲರಿಗೂ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿದೆ. ಸಕ್ರಿಯ ರಾಜಕಾರಣಕ್ಕೆ ಬರುವ ಮುಕ್ಕಾಲು ಪಾಲು ಜನರಿಗೆ ರಾಜಕೀಯ ಎಂಬುದು ಜನಸೇವೆ ಎಂಬುದಕ್ಕಿಂತ ತಮಗೆ ಮತ್ತು ತಮ್ಮ ಕುಟುಂಬ ವರ್ಗಕ್ಕಾಗಿ ಹಣ, ಆಸ್ತಿ ಸಂಪಾದನೆ ಮಾಡವುದೇ ಮೂಲ ಗುರಿಯಾಗಿದೆ.

ಕರ್ನಾಟಕದೊಳಗೆ ಒಂದಿಡೀ ಭಾರತವಿದೆ. ಉತ್ತರ ಕರ್ನಾಟಕದ ಸಂಸ್ಕೃತಿ ಬೇರೆ, ಬೆಂಗಳೂರಿನದೇ ಬೇರೆ, ದಕ್ಷಿಣ ಕನ್ನಡದ್ದು ಮತ್ತೊಂದು ರೀತಿ, ತುಮಕೂರು, ಚಿತ್ರದುರ್ಗ ಮುಂತಾದ ಕಡೆಯೇ ಬೇರೆ ರೀತಿ ಹೀಗೆ .... ಆಹಾರ ಪದ್ಧತಿಯಿಂದ ಹಿಡಿದು ವಸ್ತ್ರ ಧರಿಸುವುದರವರೆಗೂ ಎಲ್ಲದರಲ್ಲಿಯೂ ವೈವಿಧ್ಯವಿದೆ. ಅದರಲ್ಲೂ ಬೆಂಗಳೂರು ಸಿಲಿಕಾನ್ ಸಿಟಿಯಾದ ನಂತರ, ಬೇರೆ, ಬೇರೆ ಕಡೆಗಳಿಂದ ಬಂದು ನೆಲೆಸುವವರು ಹೆಚ್ಚಾಗಿ ಇಲ್ಲಿನ ಮೂಲ ನಿವಾಸಿಗಳು ಮೂಲೆಗುಂಪಾಗಿದ್ದಾರೆ. ಬೆಂಗಳೂರು ಮೆಟ್ರೊ ಸಿಟಿಯಾಗಿ, ಅದರ ಸುತ್ತಮುತ್ತ ಇರುವ ಜಿಲ್ಲೆಗಳ ಮೇಲೂ ಇದರ ಪ್ರಭಾವವಾಗಿ ಎಲ್ಲರ ಮೂಲ ಸಂಸ್ಕೃತಿ ಮಾರ್ಪಾಡಾಗಿದೆ. ಒಟ್ಟಿನಲ್ಲಿ ಎಲ್ಲಾ ಜನರೂ ಇಲ್ಲಿ ನೆಲೆಸುವಂತಾಗಿ ಕರ್ನಾಟಕದ ಜನರ ಸಂಸ್ಕೃತಿ ಒಂದು ರೀತಿಯ ಖಿಚಡಿಯಂತಾಗಿದೆ.

ಇನ್ನೂ ಶಾಲೆಗಳ ಪರಿಸ್ಥಿತಿ ನೋಡಿ. ಕನ್ನಡ ಕಡ್ಡಾಯ ಮಾಡಿದ ಕಾರಣ, ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸಲೆಂದೇ, ಕಷ್ಟವೋ, ಸುಖವೋ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಹಳ್ಳಿಗಳಲ್ಲಿರುವ ಸರ್ಕಾರೀ ಶಾಲೆಗಳು ಕೂಡ ಮಕ್ಕಳಿಲ್ಲದೆ ಬಣಗುಡುತ್ತಿದ್ದರೆ, ಖಾಸಗಿ ಶಾಲೆಗಳು ಮಾತ್ರ ತುಂಬಿ ತುಳುಕಾಡುತ್ತಿವೆ. ಸರ್ಕಾರಿ ಶಾಲೆಗಳಲ್ಲಾದರೂ ಬಿ ಎಡ್ ಮಾಡಿರುವ, ಪ್ರವೇಶ ಪರೀಕ್ಷೆ ಪಾಸ್ ಮಾಡಿ, ಆಯ್ಕೆಯಾಗಿರುವ ಶಿಕ್ಷಕರಿರುತ್ತಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಕೊಡುವ ಕಡಿಮೆ ಸಂಬಳಕ್ಕೆ, ಕೈಗೆ ಸಿಗುವ ಎಲ್ಲರೂ ಕೂಡ ಶಿಕ್ಷಕರೇ! ಹೀಗಿರುವಾಗ ಅವರಾದರೂ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಭಾಷೆಯ ಬಗ್ಗೆ ಪ್ರೀತಿ ಹೇಗೆ ಮೂಡಿಸಿಯಾರು? ಶಾಲಾ ಮಂಡಳಿಯವರು ಶಾಲೆಗಳಲ್ಲಿ ಕ್ರಿಸ್ ಮಸ್ ಆಚರಣೆ, ಹಾಲೋವಿನ್ ಆಚರಣೆ ಮಾಡುವುದನ್ನೇ ದೊಡ್ಡದೆಂದು ಮಕ್ಕಳಲ್ಲಿ ಬಿಂಬಿಸಿದರೆ, ಮಕ್ಕಳಿಗಾದರೂ ನಮ್ಮ ಹಬ್ಬಗಳ ಮಹತ್ವ ಯಾರೂ ಹೇಳಿಕೊಡುತ್ತಾರೆ? ನಮ್ಮ ಮಕ್ಕಳಿಗೆ ನಮ್ಮ ಹಬ್ಬಗಳ ಆಚರಣೆಗಳು ಕೀಳರಿಮೆ ಮೂಡಿಸಿ, ಕ್ರಿಸ್ಮಸ್ ಮುಂತಾದ ಹಬ್ಬಗಳು ಆಕರ್ಷಣೆ ಉಂಟು ಮಾಡುತ್ತಿವೆ.

ಕರ್ನಾಟಕದಲ್ಲಿ ಜಾಗತೀಕರಣ ಉಂಟು ಮಾಡಿದ ಸಮಸ್ಯೆ ಇದು. ಇದಕ್ಕೆ ಹತ್ತಾರು ಸಣ್ಣ ಪುಟ್ಟ ಪ್ರತಿಭಟನೆಗಳನ್ನು ಮಾಡಿದರೆ ಪ್ರಯೋಜನವಿಲ್ಲ. ಸಮರೋಪಾದಿಯಲ್ಲಿ ಕೆಲಸಗಳನ್ನು ಮಾಡಬೇಕಿದೆ. ಮುಖ್ಯವಾಗಿ ಮಕ್ಕಳ ಶಿಕ್ಷಣದಲ್ಲಿ ಮಾರ್ಪಾಡು ತರಬೇಕಿದೆ. ಬೇರೆಯವರದೆಲ್ಲವೂ ಶ್ರೇಷ್ಠ ಎಂಬ ಕೀಳರಿಮೆಯ ಮನೋಭಾವವನ್ನು ಹೋಗಲಾಡಿಸಬೇಕಿದೆ. ಮನೆಗಳಲ್ಲಿ, ಶಾಲೆಗಳಲ್ಲಿ, ಕಚೇರಿಗಳಲ್ಲಿ, ಒಟ್ಟಿನಲ್ಲಿ ಎಲ್ಲಾ ಕಡೆ ನಮ್ಮ ಸಂಸ್ಕೃತಿಯನ್ನು ಮತ್ತೊಮ್ಮೆ ಹೊಸದಾಗಿ ಪರಿಚಯಿಸಬೇಕಿದೆ. ಆದರೆ ಇವೆಲ್ಲಾ ನಡೆಯುವುದು ಮತ್ತೆ ಬರಹದ ಶುರುವಿಗೆ ಬಂದು ನಿಲ್ಲುತ್ತದೆ. ಇದಕ್ಕೆಲ್ಲಾ ಬೇಕಿರುವುದು ಇಚ್ಛಾಶಕ್ತಿಯುಳ್ಳ, ಧೀಮಂತ ವ್ಯಕ್ತಿತ್ವದ ನಾಯಕರುಗಳು. ಕರ್ನಾಟಕದಲ್ಲಿ ಯಾರಿದ್ದಾರೆ ಅಂತಹವರು?