Wednesday, April 20, 2016

PF ರಾಮಾಯಣ! ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನೌಕರರ ಮಹಾಭಾರತ!


೧೯೫೨ರಲ್ಲಿ ಕಾರ್ಮಿಕರ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಭವಿಷ್ಯ ನಿಧಿ ಮತ್ತು ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು. ವಯಸ್ಸಿದ್ದಾಗ ಕೆಲಸ ಮಾಡಿ ಹೇಗೋ ಬದುಕು ಸಾಗಿಸುವ ಜನರು, ತಮ್ಮ ವೃದ್ಧಾಪ್ಯದಲ್ಲಿ ನೆಮ್ಮದಿಯಿಂದಿರಲಿ ಎಂಬುವುದು ಈ ಯೋಜನೆಯ ಮೂಲ ಉದ್ಧೇಶ. ನಮ್ಮ ಭಾರತದಲ್ಲಿ ಕಾರ್ಮಿಕರಿಗೆ ಒತ್ತಾಯಿಸದಿದ್ದರೆ ಅಥವಾ ರೂಲ್ ಮಾಡದಿದ್ದರೆ, ತಮ್ಮ ಭವಿಷ್ಯಕ್ಕಾಗಿ, ಯಾವುದಾದರೂ ಅನಪೇಕ್ಷಿತ ಖರ್ಚುಗಳು ಬಂದಾಗ, ಬದುಕು ದುರ್ಬರವಾಗಿಬಿಡುತ್ತದೆ ಎಂಬ ಕಾರಣದಿಂದ ಈ ಭವಿಷ್ಯ ನಿಧಿ, ವಿಮಾ ಮತ್ತು ಪಿಂಚಣಿ ಯೋಜನೆಯನ್ನು ಜಾರಿಗೆ ತಂದರು. ಕಾರ್ಮಿಕರ ವೇತನದಿಂದ ಒಂದಷ್ಟು ಹಣವನ್ನು ಕಡಿತಗೊಳಿಸಿ, ಅಷ್ಟೇ ಹಣವನ್ನು ಕೈಗಾರಿಕೆಗಳ ಮಾಲೀಕರು ಕೂಡ ಸೇರಿಸಿ, ಈ ನಿಧಿಯನ್ನು ಕೂಡಿಡುವುದು. ಈ ಹಣ ಆ ಕೆಲಸಗಾರರ ಭವಿಷ್ಯದಲ್ಲಿ ಬರಬಹುದಾದ ಬಳಕೆಗಾಗಿಯಷ್ಟೆ ಹೊರತು ದೈನಂದಿನ ಆಗುಹೋಗುಗಳ ಖರ್ಚಿಗೆ ಬಳಸಲಲ್ಲ. 

ಪ್ರತಿ ತಿಂಗಳು ಕಾರ್ಮಿಕರ ವೇತನದಿಂದ ೧೨% ಹಣವನ್ನು ಕಡಿತ ಮಾಡಿ, ಜೊತೆಗೆ ಅಷ್ಟೇ ೧೨% ಹಣವನ್ನು ಅವರು ದುಡಿಯುತ್ತಿರುವ ಫ್ಯಾಕ್ಟರಿಗಳ ಮಾಲೀಕರು ಸೇರಿಸಿ, ಒಟ್ಟು ವೇತನದ ಶೇಕಡ ೨೪% ಹಣವನ್ನು ಭವಿಷ್ಯ ನಿಧಿಯಲ್ಲಿ ಕೂಡಿಡಬೇಕಾಗುತ್ತದೆ. ಇದರಲ್ಲಿ ಕಾರ್ಮಿಕರ ವೇತನದಿಂದ ಕಡಿತವಾದ ೧೨% ಹಣ ಸಂಪೂರ್ಣವಾಗಿ ಭವಿಷ್ಯ ನಿಧಿಯಲ್ಲಿಯೇ ಸಂಗ್ರಹವಾದರೆ, ಮಾಲೀಕರು ನೀಡುವ ೧೨% ಹಣದಲ್ಲಿ ಶೇಕಡ ೮.೩೩% ಕಾರ್ಮಿಕರ ಪಿಂಚಣಿ ಯೋಜನೆಗೆ, ಶೇಕಡ .೫೦% ಕಾರ್ಮಿಕರ ವಿಮಾ ಯೋಜನೆಗೆ, ಉಳಿದ ಹಣ ಭವಿಷ್ಯ ನಿಧಿಗೆ ಸಂಗ್ರಹವಾಗುತ್ತದೆ. ಅಂದರೆ ಈ ಭವಿಷ್ಯ ನಿಧಿಗೆಂದು (ಪಿಎಫ್) ಮಾಲೀಕರು ನೀಡುವ ಹಣ ಕೇವಲ ಶೇಕಡ ೩.೧೭% ಅಷ್ಟೆ. ಮಾಲೀಕರು ಪಿಂಚಣಿ ಯೋಜನೆಗೆಂದು ನೀಡುವ ಶೇಕಡ ೮.೩೩% ಜೊತೆಗೆ ಕೇಂದ್ರ ಸರ್ಕಾರವೂ ಕೂಡ ಶೇಕಡ ೧.೧೬% ಹಣವನ್ನು ಪಿಂಚಣಿಗೆಂದು ನೀಡುತ್ತದೆ. ಇಲ್ಲಿ ನಾವು ಮೂರು ಸಂಗತಿಗಳನ್ನು ಗಮನಿಸಬೇಕು.


ಮೊದಲನೆಯದು, ವಿಮಾ ಯೋಜನೆ (Employees Deposit Linked Insurance Scheme). ಮಾಲೀಕರು ನೀಡುವ ೧೨% ಹಣದಲ್ಲಿ ಶೇಕಡ ೦.೫% ರಷ್ಟನ್ನು ಈ ಯೋಜನೆಯ ಅಡಿಯಲ್ಲಿ ಸಂಗ್ರಹಿಸುತ್ತಾರೆ. ಉದ್ಯೋಗ ಮಾಡುತ್ತಿರುವಾಗಲೇ ವ್ಯಕ್ತಿ ತೀರಿಕೊಂಡರೆ, ಆ ವ್ಯಕ್ತಿಯ ಕುಟುಂಬ ವರ್ಗದವರಿಗೆ ಈ ಹಣವನ್ನು ನೀಡುತ್ತಾರೆ. ಸಾಯುವ ಸಮಯದಲ್ಲಿ ಆತನಿಗೆ ದೊರೆಯುತ್ತಿದ್ದ ತಿಂಗಳ ವೇತನದ (ಗರಿಷ್ಟ ಮೊತ್ತ ರೂ ೧೫೦೦೦) ಮೂವತ್ತು ಪಟ್ಟು ಮತ್ತು ಬೋನಸ್ ರೂಪದಲ್ಲಿ ಸುಮಾರು ೧.೫ ಲಕ್ಷ ರೂಗಳನ್ನು ಸೇರಿಸಿ ನೀಡುತ್ತಾರೆ. ಉದಾಹರಣೆಗೆ ಆತ ತೀರಿಕೊಳ್ಳುವ ಸಮಯದಲ್ಲಿ ಆತನ ಮಾಸಿಕ ವೇತನ ೧೫೦೦೦ ರೂಗಳಾಗಿದ್ದರೆ, ರೂ ೧೫೦೦೦ ‌x ೩೦ = ೪,೫೦,೦೦೦ + ಬೋನಸ್ ೧,೫೦,೦೦೦ ಸೇರಿ ಒಟ್ಟು ಆರು ಲಕ್ಷ ರೂ.ಗಳು ಆತನ ಕುಟುಂಬ ವರ್ಗಕ್ಕೆ ಸೇರುತ್ತದೆ. ಈ ಹಣವು ಆತ ತೀರಿಕೊಂಡ ನಂತರವೂ ಆತನನ್ನು ಅವಲಂಬಿಸಿರುವವರು ತಮ್ಮ ಜೀವನವನ್ನು ಸುಗಮವಾಗಿ ನಡೆಸಲು ಸಹಾಯಕವಾಗಿದೆ.


ಎರಡನೆಯದು, ಪಿಂಚಣಿ ಯೋಜನೆ (Employees Pension Scheme, 1995) - ಇದು ಶುರುವಾದದ್ದು ೧೯೯೫ ರಲ್ಲಿ. ಮಾಲೀಕರು ಪಿ ಎಫ್ ಎಂದು ನೀಡುವ ಶೇಕಡ ೧೨% ಹಣದಲ್ಲಿ, ಶೇಕಡ ೮.೩೩% ರಷ್ಟು ಹಣವನ್ನು ಯೋಜನೆಗೆಂದು ಸಂಗ್ರಹಿಸುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಶೇಕಡ ೧.೧೬% ಹಣವನ್ನು ನೀಡುತ್ತದೆ. ಅಂದರೆ ಒಟ್ಟು ಕಾರ್ಮಿಕರ ವೇತನದ ೯.೪೯ % ಹಣ ಪಿಂಚಣಿ ಯೋಜನೆಗಾಗಿ ಇಡುತ್ತಾರೆ. ಈ ಹಣವನ್ನು ನಿವೃತ್ತಿ ಹೊಂದಿದ ಕಾರ್ಮಿಕರಿಗೆ ನೀಡಲಾಗುವುದು. ಇದಕ್ಕಾಗಿ ೧೯೯೫ರ ಮುಂಚಿನಿಂದ ಕೆಲಸ ಮಾಡುತ್ತಿದ್ದವರಿಗೆ ಒಂದು ರೀತಿಯ ನಿಯಮಗಳು, ನಂತರ ಉದ್ಯೋಗಕ್ಕೆ ಸೇರಿದವರಿಗೆ ಮತ್ತೊಂದು ರೀತಿಯ ನಿಯಮಗಳಿವೆ. ನಿವೃತ್ತಿ ಹೊಂದುವ ಸಮಯದಲ್ಲಿ ಆತ ಪಡೆಯುತ್ತಿದ್ದ ೧೨ ತಿಂಗಳ ವೇತನದ ಸರಾಸರಿ ಲೆಕ್ಕ ಹಾಕಿ, ಆತ ಎಷ್ಟು ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಎಂಬುದರೊಟ್ಟಿಗೆ ಗುಣಿಸಿ, ಅದನ್ನು ೭೦ರಲ್ಲಿ ಭಾಗಿಸಿ, ಆ ಹಣವನ್ನು ತಿಂಗಳು, ತಿಂಗಳು ಪಿಂಚಣಿಯಾಗಿ ನೀಡುತ್ತಾರೆ. ಅಕಸ್ಮಾತ್ ಈತ ತೀರಿಕೊಂಡರೆ, ಈತನಿಗೆ ೨೫ ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳಿದ್ದರೆ, ಅವರಿಗೆ ಹಾಗೂ ಈತನ ಪತ್ನಿಗೆ ಈ ಪಿಂಚಣಿ ಹಣ ದೊರೆಯುತ್ತದೆ. 

ಮೂರನೆಯದು, ಇವೆರಡು ಯೋಜನೆಗೆಳಿಗೆ ಅಂದರೆ ಪಿಂಚಣಿ ಮತ್ತು ವಿಮಾ ಯೋಜನೆಗೆ ಕಾರ್ಖಾನೆಯ ಮಾಲೀಕರು ನೀಡಿದ ಹಣವನ್ನು ಕಳೆದು, ಉಳಿದ ಹಣ ಮಾತ್ರ ಅಂದರೆ ಸುಮಾರು ಶೇಕಡ ೩.೧೭ ರಷ್ಟು ಮಾತ್ರ ಭವಿಷ್ಯ ನಿಧಿಗೆಂದು ಹೋಗುತ್ತದೆ. ಈ ಭವಿಷ್ಯ ನಿಧಿಯಲ್ಲಿ ಕಾರ್ಮಿಕರ ವೇತನದಲ್ಲಿ ಕಳೆದ ಶೇಕಡ ೧೨% ಮತ್ತು ಕಾರ್ಖಾನೆಯ ಮಾಲೀಕರು ನೀಡುವ ಶೇಕಡ ೩.೧೭ ರಷ್ಟು ಅಂದರೆ ಒಟ್ಟು ವೇತನದ ಶೇಕಡ ೧೫.೧೭% ರಷ್ಟು ಭವಿಷ್ಯನಿಧಿಯಲ್ಲಿ ಸಂಗ್ರಹವಾಗುತ್ತದೆ. ಇದಕ್ಕೆ ಕಾಲಾನುಕಾಲಕ್ಕೆ ಕೇಂದ್ರ ಸರ್ಕಾರವು ಬಡ್ಡಿಯನ್ನು ಸೇರಿಸಿ, ಕಾರ್ಮಿಕರು ನಿವೃತ್ತಿ ಹೊಂದುವ ಕಾಲದಲ್ಲಿ ನೀಡುತ್ತಾರೆ. ಇಲ್ಲಿ ಕೂಡ ಈ ಹಣವನ್ನು ಆಪತ್ಕಾಲದಲ್ಲಿ ಬಳಸಲು ಅನುಕೂಲಗಳು ಹಾಗೂ ಅನೇಕ ನಿಯಮಗಳು ಇವೆ. ತಮ್ಮ ಮಕ್ಕಳ ಮದುವೆಗೆ, ವಿದ್ಯಾಭ್ಯಾಸಕ್ಕೆ, ಆರೋಗ್ಯ ಸಮಸ್ಯೆಗಳಿಗೆ, ಮನೆ ಕಟ್ಟಲು..... ಮುಂಗಡವಾಗಿ ಪಡೆಯಬಹುದಾಗಿದೆ (ನಿಯಮಗಳಿಗನುಸಾರವಾಗಿ). ಇದನ್ನು ಸಾಲವೆಂದು ಹೇಳುವುದು ತಪ್ಪಾಗುವುದು. ಇದು ಮುಂಗಡ ಹಣವಷ್ಟೆ. ಇದನ್ನು ವಾಪಾಸ್ಸು ತೀರಿಸಬೇಕೆಂಬ ನಿಯಮವಾಗಲೀ, ಇದಕ್ಕೆ ಬಡ್ಡಿ ನೀಡಬೇಕೆಂಬ ರೂಲ್ ಆಗಲೀ ಇಲ್ಲ.


ಈ ಯೋಜನೆಯನ್ನು ಕಾಲಾನುಕಾಲಕ್ಕೆ ಕೇಂದ್ರ ಸರ್ಕಾರವು ಆಯಾ ಕಾಲದ ಪರಿಸ್ಥಿತಿಗನುಗುಣವಾಗಿ ಪರಿಷ್ಕರಿಸುತ್ತಿರುತ್ತದೆ. ಇದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಸಾಮಾನ್ಯ ಜನರೇ ಹೆಚ್ಚು ತುಂಬಿರುವ ದೇಶದಲ್ಲಿ, ಆ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಅವಶ್ಯಕ. ಆ ನಿಟ್ಟಿನಲ್ಲಿ ಈ ಬಾರಿಯ ಕೇಂದ್ರ ಸರ್ಕಾರ ಒಂದಷ್ಟು ನಿಯಮಗಳನ್ನು ಬದಲಾಯಿಸಿತು. ಅವುಗಳಲ್ಲಿ ಮುಖ್ಯವಾದವು Universal Account Number (UAN) - ದೇಶದಾದ್ಯಂತ ಒಬ್ಬ ವ್ಯಕ್ತಿಗೆ ಒಂದೇ ನಂಬರ್ ನೀಡುತ್ತದೆ. ಆತ ಉದ್ಯೋಗ ಬದಲಾಯಿಸಿದರೂ ಕೂಡ ಈ ನಂಬರ್ ಮಾತ್ರ ಬದಲಾಗುವುದಿಲ್ಲ. ಹಾಗಾಗಿ ಪದೇ, ಪದೇ ಹೊಸ ಅಕೌಂಟ್ ಗಳನ್ನು ಮಾಡುವ ತಲೆಬಿಸಿ ಇರುವುದಿಲ್ಲ. ಜೊತೆಗೆ ಆ ನಂಬರ್ ಬಳಸಿ, ಆನ್ಲೈನ್ ನಲ್ಲಿಯೇ ತನ್ನ ಬಳಿ ಪಿ ಎಫ್ ಹಣ ಎಷ್ಟಿದೆ? ಎಂಬ ಲೆಕ್ಕಾಚಾರವನ್ನು ನೋಡಿಕೊಳ್ಳಬಹುದು. ಇದಕ್ಕಾಗಿ ಪದೇ, ಪದೇ ಪಿ ಎಫ್ ಆಫೀಸಿಗೆ ತಿರುಗಾಡುವ ಅವಶ್ಯಕತೆ ಇರುವುದಿಲ್ಲ.


ಇನ್ನುಳಿದಂತೆ ಜನರು ಗಲಾಟೆ ಮಾಡುತ್ತಿರುವ ರೂಲ್ ಗಳಲ್ಲಿ ಹಳೆಯ ರೂಲ್ ಗಳು ಏನಿದ್ದವು? ಹೊಸ ರೂಲ್ ಗಳು ಏನು? ಹಳೆಯ ರೂಲ್ - ಈ ಹಿಂದೆ ಪಿ ಎಫ್ ಸೌಲಭ್ಯವಿದ್ದ ಉದ್ಯೋಗಿ, ೬೦ ದಿನಗಳ ಕಾಲ ನಿರುದ್ಯೋಗಿಯಾಗಿದ್ದರೆ, ಆಗ ತನ್ನ ಪಿ ಎಫ್ ಹಣವನ್ನು (ಕಾರ್ಮಿಕನ ಹಣ + ಮಾಲೀಕನ ಹಣ + ಬಡ್ಡಿ) ಪೂರ್ತಿ ತೆಗೆಯುವ ಸೌಲಭ್ಯವಿತ್ತು. ಹಾಗೂ ಹಾಗೆ ಪೂರ್ತಿ ಹಣ ತೆಗೆದ ಕೂಡಲೇ ಆತನ ಅಕೌಂಟ್ ಮುಚ್ಚಿಹೋಗುತ್ತಿತ್ತು. ನಿವೃತ್ತಿಯ ವಯಸ್ಸನ್ನು ೫೫ ವರ್ಷಗಳಿಗೆ ನಿಗದಿಗೊಳಿಸಲಾಗಿತ್ತು. ಅಕಸ್ಮಾತ್ ಉದ್ಯೋಗಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದರೂ ಕೂಡ, ಆತನಿಗೆ ಸಂಪೂರ್ಣ ಹಣವನ್ನು ಪಡೆಯುವ ಅವಕಾಶವಿತ್ತು. ಆತನಿಗೆ ೫೪ ವರ್ಷ ವಯಸ್ಸಾಗಿದ್ದರೆ ಅಥವಾ ನಿವೃತ್ತಿ ಹೊಂದುವ ಒಂದು ವರ್ಷಕ್ಕೆ ಮುನ್ನವೇ ಪಿಎಫ್ ನಲ್ಲಿ ಸಂಗ್ರಹವಾಗಿರುವ ಶೇಕಡ ೯೦% ರಷ್ಟನ್ನು ಆತ ತೆಗೆಯಬಹುದಿತ್ತು. 


ಬದಲಾಗಿದ್ದ ರೂಲ್ - ಪಿ ಎಫ್ ಸೌಲಭ್ಯವಿದ್ದ ಉದ್ಯೋಗಿ, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಬೇರೆಲ್ಲೂ ಕೆಲಸಕ್ಕೆ ಸೇರದಿದ್ದರೆ ಆತನಿಗೆ ಪಿಎಫ್ ಹಣವನ್ನು ಸಂಪೂರ್ಣವಾಗಿ ಪಡೆಯುವಂತಿಲ್ಲ. ಕೇವಲ ಆತನ ವೇತನದಲ್ಲಿ ಕಡಿತಗೊಂಡ ಹಣ ಮತ್ತು ಅದಕ್ಕೆ ನೀಡುವ ಬಡ್ಡಿಯನ್ನು ಆತ ತೆಗೆದುಕೊಳ್ಳಬಹುದು. ಮಾಲೀಕ ನೀಡಿದ ಹಣ ಅಂದರೆ ಶೇಕಡ ೩.೧೭% ರಷ್ಟು ಹಣವನ್ನು ಆತ ತನಗೆ ೫೮ ವರ್ಷಗಳಾಗುವ ತನಕ ಪಡೆಯುವಂತಿಲ್ಲ. ಹಾಗಾಗಿ ಆತನ ಅಕೌಂಟ್ ಸಂಪೂರ್ಣವಾಗಿ ಮುಚ್ಚಲಾಗದು. ಹಾಗಾಗಿ ಆತನ ಪಿಎಫ್ ಹಣ ಬೆಳೆಯುತ್ತಲೇ ಇರುತ್ತದೆ. ನಿಜವಾಗಿ ಹೇಳಬೇಕೆಂದರೆ ಸಾಮಾನ್ಯ ಜನರಿಗೆ ತಮ್ಮ ನಿವೃತ್ತಿಯ ಸಮಯದಲ್ಲಿ ಒಂದಿಷ್ಟಾದರೂ ನೆಮ್ಮದಿಯಾಗಿರಲು ಇದೊಂದು ಆಕರ್ಷಕ ಕೊಡುಗೆಯಾಗಿತ್ತು. ಪಿ ಎಫ್ ಹಣವನ್ನು ಪಡೆಯಲೆಂದು ಇದ್ದ ನಿವೃತ್ತಿಯ ವಯಸ್ಸನ್ನು ಈಗ ೫೮ ವರ್ಷಗಳಿಗೆ ಏರಿಸಲಾಗಿರುವುದರಿಂದ ಪಿಎಫ್ ನ ಶೇಕಡ ೯೦% ರಷ್ಟು ಹಣವನ್ನು ಕೂಡ ತನ್ನ ೫೭ ನೇ ವಯಸ್ಸಿನಲ್ಲಿ ಪಡೆಯಬಹುದು (ಈ ಹಿಂದೆ ಇದ್ದ ೫೪ ವರ್ಷಗಳ ಬದಲು - ಕೇವಲ ಮೂರು ವರ್ಷಗಳ ಏರಿಕೆಯಷ್ಟೆ). ಹಾಗೂ ಈ ಎಲ್ಲಾ ನಿಯಮಗಳು ಆಗಸ್ಟ್ ಒಂದು, ೨೦೧೬ ರಿಂದ ಜಾರಿಗೆ ಬರುತ್ತಿತ್ತು. ಅದುವರೆವಿಗೂ ಜನರ ಅಭಿಪ್ರಾಯಗಳನ್ನು ತಿಳಿಯಲು ಕೇಂದ್ರ ಸರ್ಕಾರ ಕಾದು ನೋಡುತ್ತಿತ್ತು. ಮತ್ತು ಒಂದು ವಿಷಯವೇನೆಂದರೆ, ನಿಷ್ಕ್ರಿಯಗೊಂಡಿರುವ ಖಾತೆಗಳಿಗೂ ಕೂಡ ಬಡ್ಡಿಯನ್ನು ನೀಡಲು ಕೇಂದ್ರ ಸರ್ಕಾರವು ನಿರ್ಧರಿಸಿದ್ದು, ಈ ನಿರ್ಣಯದಿಂದ ಸುಮಾರು ಒಂಭತ್ತು ಕೋಟಿ ಜನರಿಗೆ ಅನುಕೂಲವಾಗಲಿದೆ. ೨೦೧೧ ರಿಂದ ಇಂತಹ ಖಾತೆಗಳಿಗೆ ಬಡ್ಡಿ ನೀಡುವುದನ್ನು ಆಗಿನ ಕೇಂದ್ರಸರ್ಕಾರ ನಿಲ್ಲಿಸಿತ್ತು!



ಇಷ್ಟೆಲ್ಲಾ ಇದ್ದರೂ ಗಲಭೆಯಾದದ್ದು ಹೇಗೆ? ಯಾಕೆ? ಅದು ಕೂಡ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಮಾತ್ರವೇಕೆ? ಇದು ಸಂಶಯಕ್ಕೆ ಕಾರಣವಾಗುತ್ತಿದೆ. ಇಲ್ಲಿ ಕಾಂಗ್ರೆಸ್ ಆಡಳಿತವಾಗಿದ್ದು, ಕೇಂದ್ರದಲ್ಲಿನ ಮೋದಿ ಸರ್ಕಾರದ ವಿರುದ್ಧ ತಪ್ಪು ಅಭಿಪ್ರಾಯ ಬರುವಂತೆ ಮಾಡಲೆಂದೇ ಹೀಗೆಲ್ಲಾ ಗಲಭೆಯನ್ನು ಸುಮ್ಮನೆ ಹುಟ್ಟು ಹಾಕಲಾಯಿತೇ? ನಿನ್ನೆ, ಮೊನ್ನೆ ಗಾರ್ಮೆಂಟ್ಸ್ ನೌಕರರ ಮುಷ್ಕರವೆಂಬುದು ಯಾರಿಗೂ ಕೂಡ ತಿಳಿದಿರಲಿಲ್ಲವೇಕೇ? ಪೋಲೀಸ್ ರಿಗೆ ಒಂದಿಷ್ಟಾದರೂ ಸುಳಿವು ಸಿಗಬೇಕಿತ್ತಲ್ಲವೇ? ಗಲಭೆಯಾಗುತ್ತಿದ್ದಾಗಲೂ ರಾಜ್ಯದ ಸಚಿವರುಗಳು ಯಾಕೆ ಯಾವುದೇ ಹೇಳಿಕೆಗಳನ್ನು ನೀಡಲಿಲ್ಲ? ಅಲ್ಲಿ ಹೋರಾಟ ಮಾಡುತ್ತಿದ್ದ ಯಾರಿಗೂ ಕೂಡ ಪಿಎಫ್ ನ ಬದಲಾದ ರೂಲ್ ಗಳಿಗೆ ಮಾಹಿತಿಯೇ ಇರಲಿಲ್ಲ. ಹಾಗಿರುವಾಗ ಅವರನ್ನು ಸಂತೈಸುವುದು ರಾಜ್ಯ ಸರ್ಕಾರದ ಆ ಸಮಯದ ಗುರಿಯಾಗಬೇಕಿತ್ತಲ್ಲವೇ? ರಾಜ್ಯದ ಬೊಕ್ಕಸಕ್ಕೆ ಇದರಿಂದಾದ ನಷ್ಟವೆಷ್ಟು? ಅದನ್ನು ತುಂಬಿಸುವ ಬಗೆ ಹೇಗೆ? ಕೇಂದ್ರ ಸರ್ಕಾರದ ನೀತಿಗಳು ಸರಿಯಾಗಿಲ್ಲದಿದ್ದಲ್ಲಿ, ಅದನ್ನು ಕೇಂದ್ರದ ಸಚಿವರ ಗಮನಕ್ಕೆ ತರಬೇಕಾದದ್ದು ಯಾರ ಹೊಣೆ? ಈ ವಿಷಯದಲ್ಲಿ ರಾಜ್ಯ ಕಾರ್ಮಿಕ ಸಚಿವರ ಜವಾಬ್ದಾರಿಗಳೇನು? ಭದ್ರತಾ ವೈಫಲ್ಯಕ್ಕೆ ಕಾರಣವನ್ನು ಯಾರು ಹೊರುತ್ತಾರೆ? ಎರಡು ದಿನಗಳಲ್ಲಿ ಜನ ಸಾಮಾನ್ಯರಿಗೆ ಆದ ತೊಂದರೆಯನ್ನು ಯಾರು ಪರಿಹರಿಸುತ್ತಾರೆ? ಇವಕ್ಕೆಲ್ಲಾ ಉತ್ತರಗಳು ರಾಜ್ಯ ಸರ್ಕಾರದ ಬಳಿ ಇದೆಯೇ? ಆದರೆ ಬೆಂಗಳೂರಿನಲ್ಲಿ ಆದ ಗಲಭೆಯ ಕಾರಣವೋ ಅಥವಾ ಮುಂಬರುವ ಚುನಾವಣೆಗಳಲ್ಲಿ ಇದೇ ವಿಷಯ ತಪ್ಪಾಗಿ ಹರಡಬಾರದೆಂದೋ ಈಗ ಕೇಂದ್ರ ಸರ್ಕಾರ, ಮತ್ತೆ ಹಳೆಯ ನಿಯಮಗಳಿಗೆ ಮರಳಿದೆ. ಭವಿಷ್ಯ ನಿಧಿಯ ಹೆಸರು ಸಾರ್ಥಕವಾಗಬಹುದಾಗಿದನ್ನು ಹಾಳು ಮಾಡಿದ ಕೀರ್ತಿ ಬೆಂಗಳೂರಿನ ಗಾರ್ಮೆಂಟ್ಸ್ ನೌಕರರದ್ದು ಎಂದರೆ ತಪ್ಪಾಗಲಾರದು.






Wednesday, January 20, 2016

ರೋಹಿತ್ ಬದುಕು / ಸಾವಿನ ಸುತ್ತ ಅಸಹ್ಯ ರಾಜಕೀಯ

ರೋಹಿತ್ ವೆಮುಲಾ - ಆತನ ವಯಸ್ಸು ಸುಮಾರು ೨೭ ವರ್ಷ, ಸಮಾಜ ವಿಜ್ಙಾನದಲ್ಲಿ ರಿಸರ್ಚ್ ಸ್ಕಾಲರ್, ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಓದು, ವಿದ್ಯಾರ್ಥಿ ಸಂಘಟನೆಗಳಲ್ಲಿ ಹುರುಪಿನಲ್ಲಿ ಪಾಲ್ಗೊಳ್ಳುತ್ತಿದ್ದವ..... ಇಷ್ಟೆಲ್ಲಾ ಇದ್ದರೂ ಆತ ಆತ್ಮಹತ್ಯೆ ಮಾಡಿಕೊಂಡದ್ದು ಏಕೆ?

೨೦೧೦ ರಲ್ಲಿ ಫೇಸ್ ಬುಕ್ಕಿಗೆ ಪ್ರವೇಶ ಪಡೆದ ಅವನು ಮೊದಮೊದಲಿಗೆ ಸಿನೆಮಾ ವಿಡಿಯೋ ತುಣುಕುಗಳನ್ನು, ಹೊಸ ವರ್ಷದ ಶುಭಾಶಯಗಳನ್ನು ಹಾಕಿಕೊಳ್ಳುತ್ತಿದ್ದವ, ನಂತರ ಪ್ರೀತಿ, ಪ್ರೇಮದ ಬಗೆಗಿನ ಪೋಸ್ಟ್ ಗಳು, ಹೆಣ್ಣುಮಕ್ಕಳನೆಲ್ಲಾ ಮೋಸ ಮಾಡುವ ಕ್ಯಾಟಗೆರಿಗೆ ಸೇರಿಸಿ ತಮಾಷೆ ಮಾಡುವಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದವ, ತೀರಾ ಇತ್ತೀಚಿನ ಪೋಸ್ಟ್ ಗಳಲ್ಲಿ ಕೇವಲ ರಾಜಕೀಯಕ್ಕೆ ಸಂಬಂಧ ಪಟ್ಟ ಪೋಸ್ಟ್ ಗಳನ್ನೇ ಹಾಕಿಕೊಂಡಿರುವುದು ತಿಳಿಯುತ್ತದೆ. ಆತನ ತಂದೆ ಆಸ್ಪತ್ರೆಯೊಂದರಲ್ಲಿ ವಾಚ್ ಮ್ಯಾನ್, ತಾಯಿ ಟೇಲರ್. ಕಡು ಬಡತನದಿಂದ ಬಂದವ ಪಿಹೆಚ್ ಡಿ ಮಾಡಲು ವಿಶ್ವವಿದ್ಯಾಲಯಕ್ಕೆ ಸೇರುವುದು ಹರ ಸಾಹಸವೇ ಸರಿ. ಫೇಸ್ ಬುಕ್ಕಿನಲ್ಲಿ ಆತನ ಮನೆಯ ಫೋಟೋಗಳು, ಷೆಡ್ ನಂತಹ ಮನೆ, ಅದರ ಅಡುಗೆ ಮನೆ, ಅಪ್ಪನ ಯೂನಿ ಫಾರ್ಮ್ ನೇತಾಕಿರುವ ಹಗ್ಗ, ಅಮ್ಮನ ಹೊಲಿಗೆ ಯಂತ್ರದ ಫೋಟೋ, ಇವೆಲ್ಲವುಗಳ ಬಗ್ಗೆ ಅತ್ಯಂತ ಭಾವುಕನಾಗಿ ಬರೆದಿರುವ ರೀತಿ ನೋಡಿದಾಗ ಯಾರಿಗಾದರೂ ಆತನ ಭಾವುಕತೆ ಬಗ್ಗೆ ಅರ್ಥವಾಗುತ್ತದೆ. ತಾನಿದ್ದ ಹಾಸ್ಟೆಲಿನಲ್ಲಿ ವಿವೇಕಾನಂದರ ಫೋಟೋ ಮತ್ತು ಸಂದೇಶವನ್ನು ಹಾಕಿಕೊಂಡಿದ್ದವ, ಇದ್ದಕಿದ್ದಂತೆ ಇತ್ತೀಚೆಗೆ ವಿವೇಕಾನಂದರ ಬಗ್ಗೆ ಕೆಟ್ಟದಾಗಿ ಬರೆದದ್ದನ್ನು ನೋಡಿದರೆ ಈತನದು ಚಂಚಲ ಮನಸ್ಥಿತಿ ಎಂದು ತಿಳಿಯುತ್ತದೆ. ತನ್ನ ಡೆತ್ ನೋಟ್ ಕೂಡ ಕಾವ್ಯಾತ್ಮಕವಾಗಿ ಬರೆದಿದ್ದಾನೆಯೇ ಹೊರತು ತನ್ನ ಮನೆಯವರ ಬಗ್ಗೆ ಕಿಂಚಿತ್ತೂ ಕೂಡ ಯೋಚಿಸಿಲ್ಲ. ಮನಸ್ಸು ದುರ್ಬಲಗೊಂಡು, ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗುತ್ತದೆ. ಆತನ ಫೇಸ್ ಬುಕ್ ಡೈರಿ ಓದಿದಾಗ ಅಮಾಯಕ ಹುಡುಗನೊಬ್ಬನನ್ನು ನಮ್ಮ ರಾಜಕೀಯ ವ್ಯವಸ್ಥೆ (ಎಡ, ಬಲ, ದಲಿತ ಭೇದವಿಲ್ಲದೆ) ತುಳಿದದ್ದು ಅರ್ಥವಾಗುತ್ತದೆ. ಆತನ ಸಾವಿಗೆ ಇಡೀ ರಾಜಕೀಯ ವ್ಯವಸ್ಥೆ ಒಂದು ರೀತಿಯಲ್ಲಿ ಕಾರಣವಾದರೆ, ಅವನ ಅತಿ ಹೆಚ್ಚಿನ ಭಾವುಕತನ ಕೂಡ ಆತ್ಮಹತ್ಯೆಗೆ ಪ್ರೇರೇಪಿಸಿದೆ

ಅವನ ಮೊದಮೊದಲ ಪೋಸ್ಟ್ ಗಳಲ್ಲಿ ಆಡಮ್, ಈವ್ ಇವರನ್ನೆಲ್ಲಾ ಅಪಹಾಸ್ಯ ಮಾಡುತ್ತಾ, ಹೋಲಿ ಗ್ರಂಥಗಳಿಗೆಲ್ಲಾ ತಮಾಷೆ ಮಾಡಿದ್ದಾನೆ. ತೀರಾ ಇತ್ತೀಚೆಗಷ್ಟೆ ಹಿಂದೂ ದೇವರುಗಳ ಬಗ್ಗೆ ತಮಾಷೆ ಮಾಡಿದ್ದಾನೆ. ಬಹಳಷ್ಟು ಕಡೆ ತಾನು ಯಾವ ದೇವರನ್ನು ನಂಬುವುದಿಲ್ಲ, ಯಾವ ಧರ್ಮಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಶ್ರೀ ಅಬ್ದುಲ್ ಕಲಾಮ್ ಅವರು ಸಾಯಿಬಾಬಾನ ಪಾದದ ಬಳಿ ಕುಳಿತು ಮಾತಾಡಿದರು ಎಂಬ ಕಾರಣಕ್ಕಾಗಿ, ಅವರನ್ನು ಇನ್ನು ಮುಂದೆ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಕೂಡ ಹೇಳಿದ್ದಾನೆ. ಆತ ಮೊದಮೊದಲಿಗೆ ಕಾಂಗ್ರೆಸ್ ಪಕ್ಷದಲ್ಲಿನ ವಂಶ ಪಾರಂಪರ್ಯ ಆಡಳಿತದ ಬಗ್ಗೆ ಆಕ್ರೋಶ ತೋರಿಸುತ್ತಾ, ರಾಹುಲ್ ಗಾಂಧಿಯ ಬಗ್ಗೆ ತಮಾಷೆ ಮಾಡುತ್ತಾ, ನಮ್ಮ ಮುಂದಿನ ಪ್ರಧಾನಿ ರಾಹುಲ್ ಗಾಂಧಿಯಾದರೆ ದೇಶದ ಭವಿಷ್ಯವೇನು? ಎಂದು ಚಿಂತಿಸುತ್ತಾ, ಕಾಂಗ್ರೆಸ್ ಪಕ್ಷದ ಅನೇಕ ರಾಜಕಾರಣಿಗಳು ಹೈದರಾಬಾದಿನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಕ್ಕೆ ಕಿರಿಕಿರಿ ವ್ಯಕ್ತ ಪಡಿಸುತ್ತಾ, ಈ ರಾಜಕಾರಣಿಗಳು ವಿಶ್ವವಿದ್ಯಾಲಯದ ಪರಿಸರವನ್ನು ತಮ್ಮ ಕಪ್ಪು ಹಣದಿಂದ ಹಾಳು ಮಾಡುತ್ತಾರೆ, ಇಂತಹವರಿಂದ ವಿದ್ಯಾರ್ಥಿಗಳನ್ನು ರಕ್ಷಿಸಬೇಕು ಎಂದೆಲ್ಲಾ ಬರೆದುಕೊಂಡಿದ್ದಾನೆ! ಇವನಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಅತೀವ ಅಸಹನೆ ಇದ್ದದ್ದು, ಇದ್ದಕಿದ್ದಂತೆ ಈ ಎರಡು ವರ್ಷಗಳಿಂದ ಬಿಜೆಪಿ ವಿರುದ್ಧ, ಮೋದಿಯವರ ವಿರುದ್ಧ ತಿರುಗಿದೆ! ಮೊದಮೊದಲಿಗೆ ಆಪ್ ಮತ್ತು ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದ್ದ ಇವನು, SFI ಯನ್ನು ಬೆಂಬಲಿಸಿದ್ದಾನೆ. ಆಮೇಲೆ SFI ಬಗ್ಗೆ ಕೂಡ ಅಸಹನೆ ಮೂಡಿ ಅಂಬೇಡ್ಕರ್ ಸಂಘಟನೆಯ ಜೊತೆಗೆ ಗುರುತಿಸಿಕೊಂಡಿದ್ದಾನೆ. ತಾನೇಕೆ SFI ಅವರನ್ನು ವಿರೋಧಿಸಿ, ಅಂಬೇಡ್ಕರ್ ಸಂಘಟನೆಗೆ ಸೇರಿದೆ ಎಂದು ಕೂಡ ವಿವರಿಸಿದ್ದಾನೆ. ಈ ವಿಷಯವಾಗಿ ಅನೇಕ ಸಹಪಾಠಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾನೆ. ಕೆಲ ಗೆಳೆಯರಂತೂ ಕೇವಲ ಪುಸ್ತಕಗಳನ್ನು ಓದಿ ಸಿದ್ಧಾಂತಗಳ ಬಗ್ಗೆ, ಹೋರಾಟಗಳ ಬಗ್ಗೆ ಮಾತಾಡಬೇಡ ಎಂದು ಕೂಡ ತಿಳಿ ಹೇಳಿದ್ದಾರೆ. ಇವನು ಈ ASA ಗೆ ಸೇರುವ ಹಂತದಲ್ಲಿ ಬಿಜೆಪಿ, ಮೋದಿ, ABVP ಯ ಬಗ್ಗೆ ಹೀಯಾಳಿಸಿ ಬರೆಯಲು ಶುರು ಮಾಡಿದ್ದಾನೆ.

ಅಂತಹ ಸಮಯದಲ್ಲಿಯೇ ಬಾಬ್ರಿ ಮಸೀದಿಯ ಘಟನೆ ಬಗ್ಗೆ ಮುಸ್ಲಿಮರ ಪರವಾಗಿ, ಯಾಕೂಬ್ ಮೆನನ್ ಗಲ್ಲಿಗೇರುವ ಸಮಯದಲ್ಲಿ ಆತನ ಪರ ವಾದಿಸಿ, ಭಾರತದ ಪ್ರಜಾಪ್ರಭುತ್ವಕ್ಕೆ ಕಪ್ಪು ದಿನವೆಂದು ಘೋಷಿಸಿದ್ದಾನೆ. ಭಗತ್ ಸಿಂಗ್ ನನ್ನು ಆರಾಧಿಸುತ್ತಿದ್ದ ಈ ರೋಹಿತ್, ಯಾಕೂಬ್ ಮೆನನ್ ಪರ ಹೇಗೆ ವಾದಿಸಿದ? ಎಂಬುದೇ ಆಶ್ಚರ್ಯ! ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳೊಂದಿಗೆ ಈ ವಿಷಯವಾಗಿ ವಾಗ್ವಾದವಾಗಿದೆ. ಎಬಿವಿಪಿ ಕಾರ್ಯಕರ್ತನೊಬ್ಬ ಇವರ ASA ಗುಂಪಿನ ಬಗ್ಗೆ ಫೇಸ್ ಬುಕ್ಕಿನಲ್ಲಿ ಕೆಟ್ಟದಾಗಿ ಸ್ಟೇಟಸ್ ಹಾಕಿಕೊಂಡಿರುವುದನ್ನು ನೋಡಿ, ಎಲ್ಲರೂ ಹಾಸ್ಟೆಲ್ಲಿನಲ್ಲಿದ್ದ ಅವನ ರೂಮಿಗೆ ನುಗ್ಗಿ, ಆತನಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡಿದ್ದಾರೆ. ಮರುದಿವಸ ಆತ ಹೋಗಿ ತನ್ನ ಮೇಲೆ ಇವರೆಲ್ಲರೂ ದೈಹಿಕ ಹಲ್ಲೆ ನಡೆಸಿದ್ದಾರೆಂದು ಕಂಪ್ಲೇಂಟ್ ನೀಡಿದ್ದಾನೆ. (ಇದರ ಸತ್ಯಾಸತ್ಯತೆ ತಿಳಿದಿಲ್ಲ, ಈತನ ಪೋಸ್ಟ್ ಪ್ರಕಾರ ಈತ ನಿರಪರಾಧಿ) ಇದು ನಡೆದದ್ದು ಜುಲೈ / ಆಗಸ್ಟ್ ೨೦೧೫ ರಲ್ಲಿ. ಆ ಸಮಯದಲ್ಲಿ ಈ ಘಟನೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ, ಧಾಂಧಲೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂತ್ರಿಯೊಬ್ಬರು ಶ್ರೀಮತಿ ಸ್ಮೃತಿ ಇರಾನಿಯವರಿಗೆ ಪತ್ರ ಬರೆದಿದ್ದಾರೆ. ಶ್ರೀಮತಿ ಸ್ಮೃತಿ ಇರಾನಿಯವರು ಈ ಹುಡುಗರ ಮೇಲೆ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ ಎಂಬುದಕ್ಕೆ ಆಧಾರಗಳು ಈತನ ಫೇಸ್ ಬುಕ್ಕಿನಲ್ಲಂತೂ ಇಲ್ಲ. ನಂತರ ನಡೆದ ಮೀಟಿಂಗ್ ಗಳಲ್ಲಿ ಐದು ಜನ ವಿದ್ಯಾರ್ಥಿಗಳನ್ನು ಹಾಸ್ಟೆಲಿನಿಂದ ಹೊರ ಹಾಕಲು ನಿರ್ಧರಿಸಲು ಸುಮಾರು ಆರು ತಿಂಗಳು ತೆಗೆದುಕೊಂಡಿದ್ದಾರೆ. ಕೊನೆಗೆ ಡಿಸೆಂಬರ್ ನಲ್ಲಿ ಹಾಸ್ಟೆಲ್ ನಿಂದ ಹೊರಹಾಕಿದ್ದಾರೆ. ಈ ಐವರು ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿಯೇ ನಿರಶನ ಶುರು ಮಾಡಿದ್ದಾರೆ. ಇದ್ದಕಿದ್ದಂತೆ ಒಂದು ದಿವಸ ಆತನ ಸ್ನೇಹಿತನ ರೂಮಿಗೆ ಹೋಗಿ ಪತ್ರವೊಂದನ್ನು ಬರೆದಿಟ್ಟು ರೋಹಿತ್ ವೆಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

೨೦೧೦ರಿಂದ ಆತನ ಸಾಮಾಜಿಕ ಕಳಕಳಿಯ ಪೋಸ್ಟ್ ಗಳು ಇದ್ದಕಿದ್ದಂತೆ ಕೇವಲ ಅಂಬೇಡ್ಕರ್ ಮಯವಾದದ್ದು ಏಕೆ? ಭಗತ್ ಸಿಂಗ್ ನನ್ನು ಆರಾಧಿಸುತ್ತಿದ್ದ ಅವನು ಮುಸ್ಲಿಮರ ಪರ ಸಹಾನುಭೂತಿ ಬೆಳೆಸಿಕೊಂಡದ್ದು ಏಕೆ? ಆಪ್ ಪಕ್ಷದ ಪರ ಇದ್ದವನು, ಇದ್ದಕಿದ್ದಂತೆ ಆ ಪಕ್ಷದ ಬಗ್ಗೆ ಮಾತಾಡುವುದು ಬಿಟ್ಟಿದ್ದು ಏಕೆ? ಕಾಂಗ್ರೆಸ್ ಪಕ್ಷದ ವಿರುದ್ಧ, ರಾಹುಲ್ ಗಾಂಧಿಯ ವಿರುದ್ಧ ಕೆಂಡ ಕಾರುತ್ತಿದ್ದ ಅವನು, ಮೋದಿ ಪ್ರಧಾನಿಯಾದ ಮೇಲೆ ಮೋದಿಯವರನ್ನು ವಿರೋಧಿಸಲು ಏಕೆ ಶುರು ಮಾಡಿದ? ಆತನ ಮುಗ್ಧತೆಯನ್ನು, ಅಸಹಾಯಕತೆಯನ್ನು ಅಥವಾ ಆತನ ಜಾತಿಯನ್ನು, ಆರ್ಥಿಕ ಪರಿಸ್ಥಿತಿಯನ್ನು ಯಾವುದಾದರೂ ಪಕ್ಷಗಳು ದಾಳವಾಗಿ ಬಳಸಿಕೊಂಡವೇ? ಎಲ್ಲವೂ ರಾಜಕೀಯ ವಿಷಯಗಳಾಗಿಯೇ ಬದಲಾಗುತ್ತಿರುವ ಈ ಹೊತ್ತಿನಲ್ಲಿ, ಎಲ್ಲವನ್ನೂ ಜಾತೀಯ ವಾದಗಳಿಂದಲೇ ಗುರುತಿಸುತ್ತಿರುವ ಈ ಕಾಲದಲ್ಲಿ, ಕಣ್ಣಿಗೆ ಕಂಡದ್ದು, ಕಾಣದ್ದು ಎಲ್ಲವನ್ನೂ ಈತ ನಂಬಿ ಮೋಸ ಹೋದನೇ? ಈತನ ಆರ್ಥಿಕ ಅಥವಾ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದಾಗ, ಈತನಿಗೆ ಬೆಂಬಲವಾಗಿ ನಿಂತಿರುವವರು ಯಾರೂ ಇಲ್ಲ ಎಂಬುದು ತಿಳಿಯುತ್ತದೆ. ಹಾಗಾಗಿಯೇ ಏಳು ತಿಂಗಳಿನಿಂದ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಘಟನೆಗಳು ಆತನನ್ನು ಹತಾಶೆಗೆ ದೂಡಿರಬಹುದಲ್ಲವೇ? ಆತನ ಪೋಸ್ಟ್ ಗಳನ್ನು ಲೈಕ್ ಮಾಡಿರುವವರು ಕೂಡ ಬಹಳ ಕಡಿಮೆ. ಆದರೆ ಆತ ಕೇವಲ ಹೈದರಾಬಾದ್ ವಿಶ್ವವಿದ್ಯಾಲಯದ ವಿಷಯಗಳನ್ನು ಮಾತ್ರ ಹಂಚಿಕೊಳ್ಳುತ್ತಿರಲಿಲ್ಲ. ದೇಶದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಆತನ ಗಮನವಿತ್ತು. ಕಲ್ಬುರ್ಗಿಯವರ ಸಾವಿನಿಂದ ಹಿಡಿದು ಲೂಸಿಯಾ ಸಿನೆಮಾದವರೆಗೆ, ದೆಹಲಿಯ ಅತ್ಯಾಚಾರದ ಘಟನೆಯಿಂದ ಹಿಡಿದು ದೇಶದ ಈಶಾನ್ಯ ಭಾಗದಲ್ಲಿ ನಡೆದ ಭೂಕಂಪಗಳ ಬಗ್ಗೆ, ಪ್ರತಿಯೊಂದರ ಬಗ್ಗೆಯೂ ತನಗನ್ನಿಸಿದನ್ನು ಬರೆಯುತ್ತಿದ್ದ.

ಆದರೆ ಆತನ ಕೊನೆಯ ಪತ್ರದಲ್ಲಿ ಬರೆದಂತೆ ವಿಜ್ಙಾನದ ಬರಹಗಾರ ಆಗಬೇಕೆಂದಿತ್ತು ಎಂಬುದು ತುಸು ಆಶ್ಚರ್ಯವಾಗಿ ಕಾಣುತ್ತದೆ. ಏಕೆಂದರೆ ಪ್ರಚಲಿತ ಸುದ್ಧಿಗಳಿಗೆ ಕೊಟ್ಟಷ್ಟು ಮಹತ್ವ ಆತ ವಿಜ್ಙಾನದ ವಿಷಯಗಳ ಬಗ್ಗೆ ನೀಡಿಲ್ಲ. ಪ್ರಕೃತಿಯಿಂದ ಮನುಷ್ಯ ದೂರವಾಗಿದ್ದಾನೆ ಎಂದು ತನ್ನ ಪತ್ರದಲ್ಲಿ ದೂರುವ ಈತ, ಪ್ರಕೃತಿಯನ್ನು ಪ್ರೀತಿಸುತ್ತಿದ್ದ ಎಂಬುದು ಕೂಡ ಈತನ ಫೇಸ್ ಬುಕ್ಕಿನಲ್ಲಿ ಕಾಣುವುದಿಲ್ಲ. ವೋಟಿನ ಲೆಕ್ಕಾಚಾರದಲ್ಲಿಯೇ ಮನುಷ್ಯರನ್ನು ಅಳೆಯುತ್ತಾರೆಯೇ ಹೊರತು ಅವರ ಬುದ್ಧಿಮತ್ತೆಯ ಅವಶ್ಯಕತೆ ರಾಜಕೀಯಕ್ಕಾಗಲೀ, ಶಿಕ್ಷಣಕ್ಕಾಗಲೀ, ಬೀದಿಯಲ್ಲಾಗಲೀ, ಬದುಕು / ಸಾವುಗಳಲ್ಲಾಗಲೀ ಇಲ್ಲ. ಮನುಷ್ಯ ಕೇವಲ ಅಂಕಿ ಅಂಶಗಳಾಗಿಯೇ ಉಳಿದುಬಿಟ್ಟಿದ್ದಾನೆ, ವಸ್ತುವಾಗಿ ಬಿಟ್ಟಿದ್ದಾನೆ ಎಂದು ಬೇಸರಿಸಿದ್ದಾನೆ. ನಮ್ಮ ಪ್ರೀತಿ, ಪ್ರೇಮ ಎಲ್ಲವನ್ನೂ ನಾವೇ ಕಟ್ಟಿಕೊಂಡಿದ್ದೇವೆ, ನಮ್ಮ ಭಾವನೆಗಳೆಲ್ಲವೂ ಎರವಲು ಪಡೆದಿರುವುದು, ನಮ್ಮ ನಂಬಿಕೆಗಳೆಲ್ಲಕ್ಕೂ ಬಣ್ಣ ಬಳಿಯಲಾಗಿದೆ, ನಮ್ಮ ಪ್ರಾಮಾಣಿಕತೆಗಿಂತ ಹೆಚ್ಚಿನ ಬೆಲೆ ಕೃತಕತೆಗೆ ಸಿಗುತ್ತದೆ. ನನ್ನ ಹುಟ್ಟೇ ಒಂದು ದುರಂತ ಆಕಸ್ಮಿಕ. ನಾನು ಇಂದಿಗೂ ಚಿಕ್ಕಂದಿನಿಂದ ಕಾಡುತ್ತಿದ್ದ ಒಂಟಿತನದಿಂದ ಹೊರಬಂದಿಲ್ಲ ಎಂದು ಕೊರಗಿದ್ದಾನೆ. ಬದುಕನ್ನು ಅತ್ಯಂತ ಪ್ರೀತಿಸಿದ ನಾನು ಈ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ, ಪ್ರೀತಿ, ಪ್ರೇಮ, ನೋವು, ಸಾವು, ಬದುಕು ಇವೆಲ್ಲವನ್ನೂ ಅರ್ಥೈಸುವಲ್ಲಿ ಬಹುಶಃ ಎಡವಿದೆ ಎಂದು ಪಶ್ಚಾತ್ತಾಪ ಪಟ್ಟಿದ್ದಾನೆ. ಕೆಲವರಿಗೆ ಅವರ ಬದುಕೇ ಒಂದು ಶಾಪವಾಗಿರುತ್ತದೆ. ಈ ಸಮಯದಲ್ಲಿ ನಾನು ಖಾಲಿಯಾಗಿದ್ದೇನೆ ಹೊರತು ಬೇಸರಗೊಂಡಿಲ್ಲ, ಹಾಗಾಗಿಯೇ ಇಂತಹ ಕೆಲಸ ಮಾಡಿದ್ದೇನೆ, ನನ್ನ ಸಾವಿಗೆ ನಾನೇ ಕಾರಣ, ಇನ್ಯಾರೂ ಅಲ್ಲಾ ಎಂದು ಹೇಳಿದ್ದಾನೆ. ಅಪ್ಪಿತಪ್ಪಿಯೂ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ, ತನ್ನ ಜಾತಿಯ ಬಗ್ಗೆ ಅಥವಾ ರಾಜಕೀಯ ಪಕ್ಷಗಳ ಬಗ್ಗೆ ಏನನ್ನೂ ಬರೆದಿಲ್ಲ.


ಇವೆಲ್ಲವನ್ನೂ ನೋಡಿದಾಗ ಏನನ್ನಿಸುತ್ತದೆ? ಒಳಗೊಳಗೆ ಒಂಟಿತನದಿಂದ ಕೊರಗುತ್ತಿದ್ದ ಇವನು, ತನ್ನ ಯಾವ ಕೆಲಸಗಳಿಗೂ ಸರಿಯಾದ ಬೆಂಬಲ ಸಿಗದೆ ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸ್ವಭಾವತಃ ಭಾವುಕತೆ ಹೆಚ್ಚಿರುವವರು ಒಳಗೊಳಗೆ ಕೊರಗುವುದು, ಖಿನ್ನತೆಯಿಂದ ಬಳಲುವುದು ಹೆಚ್ಚು. ಅಂತಹವರು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲರು. ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಇಂತಹ ವ್ಯಕ್ತಿಗಳಿಗೆ ಸಾಧ್ಯವಿಲ್ಲ. ವಿಜ್ಙಾನ ಆಸಕ್ತಿಯ ವಿಷಯವಾಗಿದ್ದು, ರಾಜಕೀಯವೆಂದರೆ ಹೇಸಿಗೆ ಪಡುತ್ತಿದ್ದ ವ್ಯಕ್ತಿ, ತನ್ನ ಬದುಕಿನೊಂದಿಗೆ ರಾಜಕೀಯ ಆಟವಾಡಿದ್ದು, ತಾನು ದಾಳವಾಗಿದ್ದು ಕಂಡಾಗ ನೋವಾಗಿರಬಹುದು. ಆತನ ಬದುಕಿನಲ್ಲಿ ರಾಜಕೀಯ ಆಟವಾಡಿದ್ದರೆ, ಈಗ ಆತನ ಸಾವನ್ನು ಕೂಡ ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸುತ್ತಿರುವವರನ್ನು ನೋಡಿದಾಗ ಎಂತಹವರಿಗಾದರೂ ಆಕ್ರೋಶ ಉಕ್ಕದಿರದು. ಬಹುಶಃ ಆತನಿಗೇನಾದರೂ ಜೀವವಿದ್ದು, ಎಲ್ಲಿಯೋ ನಿಂತು ತನ್ನ ಸಾವಿನೊಂದಿಗೂ ರಾಜಕೀಯದಾಟ ಆಡುತ್ತಿರುವವರನ್ನು ನೋಡಿದರೆ, ಆತನಿಗೆಷ್ಟು ನೋವಾಗುತ್ತದೆಯೋ? ಇವರೆಲ್ಲರನ್ನೂ ನೋಡುತ್ತಿದ್ದರೆ ಹೇಸಿಗೆ ಹುಟ್ಟುತ್ತಿದೆ. ವೋಟ್ ಬ್ಯಾಂಕಿಗಾಗಿ ನಮ್ಮ ದೇಶದ ಭವಿಷ್ಯದ ಕನಸುಗಾರರನ್ನು ಚಿವುಟುತ್ತಿರುವ ಇಂತಹವರನ್ನು ಜಾತಿ, ಮತ, ಪಕ್ಷ ಭೇದವಿಲ್ಲದೆ ಖಂಡಿಸಬೇಕಿದೆ. ನಮ್ಮ ದೇಶದ ನಿಜವಾದ ಭಯೋತ್ಪಾದಕರು ಈತನ ಸಾವಿನಲ್ಲಿ ತಮಗೆಷ್ಟು ಲಾಭವಿದೆ? ಎಂದು ಲೆಕ್ಕ ಹಾಕುತ್ತಿರುವ ಈ ಮಂದಿಗಳು! ಇವರನ್ನು ಸಾಮಾನ್ಯ ನಾಗರೀಕರು ಬಡಿದು, ಉರುಳಿಸದಿದ್ದಲ್ಲಿ ಇನ್ನೆಷ್ಟು ಇಂತಹ ಸಾವು, ನೋವುಗಳನ್ನು ನಾವು, ನಮ್ಮ ಮಕ್ಕಳು ನೋಡಬೇಕಿದೆಯೋ? 

ರೋಹಿತ್ ಗೆ ರಾಹುಲ್ ಗಾಂಧಿಯನ್ನು ಕಂಡರಾಗುತ್ತಿರಲಿಲ್ಲ. ಈಗ ಅದೇ ರಾಹುಲ್ ಗಾಂಧಿ ಅಲ್ಲಿಗೆ ಹೋಗಿ ಮೊಸಳೆ ಕಣ್ಣೀರು ಸುರಿಸುವುದನ್ನು ಕಂಡಿದ್ದರೆ, ಫೇಸ್ ಬುಕ್ಕಿನಲ್ಲಿ ಎಷ್ಟು ಪೋಸ್ಟ್ ಗಳನ್ನು ಹಾಕುತ್ತಿದ್ದನೇನೋ? ಆತನ ಸಾವಿನಿಂದ ಇವರೆಲ್ಲರ ಮುಖವಾಡಗಳು ಕಳಚಿಬಿದ್ದಿದ್ದು ನಮಗೆ ಕಂಡರೆ, ಆತನಿಗೆ ಬದುಕಿದ್ದಾಗಲೇ ಇವರ ಮುಖವಾಡಗಳು ಕಳಚಿ ಬಿದ್ದದ್ದನ್ನು ನೋಡಿ ಮನ ನೊಂದು ಹೀಗೆ ಮಾಡಿಕೊಂಡಿರಬೇಕು. ವಿಶ್ವವಿದ್ಯಾಲಯಗಳ ಆವರಣದಲ್ಲಿ ಎಳ್ಳಷ್ಟು ಕೂಡ ರಾಜಕೀಯ ಕಾಲಿಡದಂತೆ, ರಾಜಕಾರಣಿಗಳು ಬರದಂತಹ ವಾತಾವರಣ ತುರ್ತಾಗಿ ನಿರ್ಮಾಣವಾಗಬೇಕು. ಈತನ ಸಾವನ್ನು ರಾಷ್ಟ್ರದ ದುರಂತವೆಂಬಂತೆ ಬಿಂಬಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಸ್ವಯಂ ಘೋಷಿತ ದಲಿತೋದ್ಧಾರಕರನ್ನು, ಸಮಾಜವಾದಿಗಳನ್ನು, ಬುದ್ಧಿಜೀವಿಗಳನ್ನು ಖಂಡಿಸುವ ಕೆಲಸ ಸಾಮಾನ್ಯ ಜನರು ಮಾಡಬೇಕಿದೆ. ಸಮಾಜವನ್ನು ಉದ್ಧರಿಸುವೆವು ಎಂಬ ಮುಖವಾಡ ತೊಟ್ಟು, ದಲಿತರ ಶೋಷಣೆ ಎಂಬ ಅಡಿಬರಹದಲ್ಲಿ ತಾವೇ ಜನರ ಶೋಷಣೆ ಮಾಡುತ್ತಿರುವವರ ವಿರುದ್ಧ ಜಾತಿ, ಮತ ಭೇಧವಿಲ್ಲದೆ ಎಲ್ಲರೂ ಎದ್ದು ನಿಲ್ಲಬೇಕಿದೆ. ಕರ್ನಾಟಕದ ಸ್ವಯಂ ಘೋಷಿತ ಹೋರಾಟಗಾರರಂತೂ ಕರ್ನಾಟಕದಲ್ಲಾಗುವ ಯಾವುದೇ ಆಗು ಹೋಗುಗಳಿಗೂ ತಲೆ ಕೆಡಿಸಿಕೊಳ್ಳದೆ, ಕರ್ನಾಟಕದ ಹೊರಗೆ ಏನೇ ಆದರೂ ಬೊಬ್ಬೆ ಹೊಡೆಯುವುದನ್ನು ನೋಡುತ್ತಿದ್ದರೆ, ಕರ್ನಾಟಕವೆಲ್ಲಿದೆ? ಎಂಬುದನ್ನು ಹುಡುಕುವಂತಹ ಪರಿಸ್ಥಿತಿ ಬಂದೊದಗಿದೆ.


ನಮ್ಮ ಕರ್ನಾಟಕ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈತರೆಲ್ಲರೂ ದುರ್ಬಲ ಮನಸ್ಥಿತಿಯುಳ್ಳವರು, ಅದಕ್ಕಾಗಿಯೇ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಅವರಿಗಿಂತಲೂ ಈ ಹುಡುಗನ ಸಾವು ಅತ್ಯಂತ ದಾರುಣವಾದದ್ದು, ಏಕೆಂದರೆ ಈ ಹುಡುಗ `ದಲಿತ' ಎಂದು ಹೇಳುವುದನ್ನು ನೋಡಿದರೆ, ಇಂತಹವರು ನಮ್ಮ ರಾಜ್ಯಕ್ಕೆ ಸಲಹೆಗಾರರಾಗಿ ಬೇಕಾ? ಎಂದನ್ನಿಸುವುದಿಲ್ಲವೇ? ಜಾತ್ಯಾಧಾರಿತವಾಗಿ ಇವರು ಎಲ್ಲಾ ಸಮಸ್ಯೆಗಳನ್ನು ತೂಕ ಹಾಕುವುದನ್ನು ನೋಡಿದಾಗ, ನಮ್ಮ ಕರ್ನಾಟಕಕ್ಕೆ ಎಂತಹ ದಾರುಣ ಸ್ಥಿತಿ ಬಂದೊದಗಿದೆ ಎಂದನ್ನಿಸಿಬಿಡುತ್ತದೆ. ಕರ್ನಾಟಕದಲ್ಲಿ ಸಮಸ್ಯೆಗಳಾಗುವುದು, ನೋವಾಗುವುದು, ಸಂಕಟವಾಗುವುದು ಕೇವಲ ಅಹಿಂದದವರಾಗಿದ್ದರೆ ಮಾತ್ರ, ಉಳಿದ ಜನರೆಲ್ಲರೂ ಸುಖ, ಸಮೃದ್ಧಿಯಿಂದ ಬದುಕುತ್ತಿದ್ದಾರೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ಅವರ ಸಲಹೆಗಾರರು, ಆ ಸಲಹೆಗಾರರ ಬೆಂಬಲಿಗರು ನಂಬಿರುವುದು ನಮ್ಮ ದುರಂತ. ಇಂತಹ ಪೊಳ್ಳು ಆಡಳಿತ ಪಕ್ಷವನ್ನು ವಿರೋಧಿಸದೇ, ತಮ್ಮದೇ ಲೋಕದಲ್ಲಿರುವ ವಿರೋಧ ಪಕ್ಷಗಳನ್ನು ನೋಡಿದಾಗ, ಕರ್ನಾಟಕಕ್ಕೆ ಭವಿಷ್ಯವಿದೆಯೇ? ಇಂತಹ ಆಡಳಿತಗಾರರ ನಡುವೆ ನಮ್ಮ ಮಕ್ಕಳ ಗತಿಯೇನು? ಒಬ್ಬ ರೋಹಿತ್ ಸಮಾಜದ ಈ ಅವ್ಯವಸ್ಥೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ನಾವು, ನಮ್ಮ ಮಕ್ಕಳು?! ಏನು ಮಾಡಬೇಕು? ಆಡಳಿತ ಪಕ್ಷಕ್ಕಂತೂ ಜಾಣ ಕುರುಡು / ಕಿವುಡುತನ ಬಂದಿದೆ. ಆದರೆ ವಿರೋಧ ಪಕ್ಷಗಳೇಕೆ ನಿದ್ದೆ ಮಾಡುತ್ತ ಕುಳಿತಿವೆ? ಎದುರಿಗೆ ಭಕ್ಷ್ಯಭೋಜನಗಳಿದ್ದರೂ, ಕುಂಭಕರ್ಣನಂತೆ ಮಲಗಿರುವ ವಿರೋಧಪಕ್ಷಗಳನ್ನು ಎಬ್ಬಿಸುವುದು ಹೇಗೆ? ಎಬ್ಬಿಸುವವರು ಯಾರು?