Sunday, December 30, 2012

ನಾವು ಹೇಳುವುದಾದರೂ ಯಾರಿಗೇ? :(


ಸ್ವಪ್ನ ಸಾರಸ್ವತದಲ್ಲಿ ಒಂದು ಮಾತಿದೆ, ನಾಗ್ಡೋ ಬೇತಾಳ ಹೇಳುವುದು ‘ಮಾತುಗಳು ಅರ್ಥ ಕಳೆದುಕೊಳ್ಳುತ್ತವೆ! ಶಾಪಗಳು ತಗಲುವುದಿಲ್ಲ, ಅಂಥ ಕಾಲ ಬರುತ್ತದೆ! :( ಹ್ಮ್. ಅಂಥ ಕಾಲ ಬಂದಿದೆ.  ಮೊನ್ನೆ ಡೆಲ್ಲಿ ರೇಪ್ ನಂಥ ಭೀಕರ ದೌರ್ಜನ್ಯ ವಾಗಿರಬಹುದು ಅಥವಾ ಪ್ರತಿ ನಿತ್ಯ ನಡೆಯುತ್ತಿರುವ ಇಂತಹ ಅಮಾನುಷ ಘಟನೆಗಳನ್ನು ನೋಡುತ್ತಿದ್ದಾಗಲೆಲ್ಲಾ ನನಗೆ ಇದೇ ಮಾತು ನೆನಪಿಗೆ ಬರುತ್ತದೆ.

ನಾನು ಸಣ್ಣವಳಾಗಿದ್ದಾಗ, ಅಜ್ಜನ ಊರಿಗೆ ಹೋಗಿದ್ದಾಗ (ಮಂಗಳೂರಿನ ಬಳಿಯ ಪುಟ್ಟ ಹಳ್ಳಿ)  ಬಾಗಿಲುಗಳಿಗೆ ಚಿಲಕವೇ ಹಾಕುತ್ತಿರಲಿಲ್ಲ,  ಮನೆಗಳಲ್ಲಿ ಅಲ್ಮೇರಾ ಇವುಗಳು ಕೂಡ ಮರದ್ದೇ ಆಗಿದ್ದು, ಬೀಗ ಎಂಬುದೆಲ್ಲಾ ನಾನು ನೋಡಿರಲಿಲ್ಲ. ತಾಮ್ರದ ಬಿಂದಿಗೆಗಳು ಹಾಗೇಯೇ ಬಾವಿ ಕಟ್ಟೆಯ ಬಳಿ ಇಟ್ಟು ಬರುತ್ತಿದ್ದರು. ನಾನು ಬೆಂಗಳೂರಿನಿಂದ ಹೋಗುತ್ತಿದ್ದರಿಂದ ನನಗೆ ಇವೆಲ್ಲವೂ ಆಶ್ಚರ್ಯ!  ಅಣ್ಣನನ್ನು ಕೇಳಿದ್ದಕ್ಕೆ, ಯಾರೂ ತೆಗೆದುಕೊಂಡು ಹೋಗುವುದಿಲ್ಲ, ಅಷ್ಟು ನಂಬಿಕೆ ಇದೆ ಎಂದು ಹೇಳುತ್ತಿದ್ದ.  ಆದರೆ ಆಗ ಬೆಂಗಳೂರಿನಲ್ಲಿ ಸ್ವಲ್ಪ ಕಳ್ಳತನದ ಭಯವಿತ್ತು.  ಆದರೂ ಸಿಕ್ಕಿದನ್ನಷ್ಟೇ ಅಂದರೆ, ಕಿಟಕಿಯಲ್ಲಿಟ್ಟ ವಾಚು, ರೇಡಿಯೋ,  ಹೊರಗೆ ಒಣಗಿ ಹಾಕಿದ ಬಟ್ಟೆಗಳು, ಇಂತಹವುಗಳನ್ನೇ ತೆಗೆದುಕೊಂಡು ಹೋಗುತ್ತಿದ್ದರೇ ವಿನಃ ಮನೆಗೆ ನುಗ್ಗಿ, ದೋಚಲು ಅಥವಾ ಮನೆಯವರನ್ನು ಕೊಲೆ ಮಾಡಲು ಭಯವಾಗುತ್ತಿತ್ತು.  ಏಕೆಂದರೆ ಒಂದು ಕೂಗು ಹಾಕಿದ ತಕ್ಷಣ ಅಕ್ಕ, ಪಕ್ಕದ ಮನೆಯವರೆಲ್ಲರೂ ಸೇರಿ, ಕಳ್ಳನನ್ನು ಚಚ್ಚಿ ಹಾಕುತ್ತಿದ್ದರು. ಇನ್ನೂ ಜಿಂಡಾಲ್ ಮುಂತಾದ ಕ್ವಾರ್ಟರ್ಸ್ ಮನೆಗಳಲ್ಲಿ (ಬೆಂಗಳೂರಿನಲ್ಲಿಯೂ ಕೂಡ) ಹೊರಗೆ ಎಲ್ಲಿಗೆ ಹೋಗುವಾಗಲೂ ಚಿಲಕ ಹಾಕುವ ಪದ್ಧತಿ ಇರುತ್ತಿರಲಿಲ್ಲ. ನೆರೆಹೊರೆಯವರಲ್ಲಿ ಅಷ್ಟೊಂದು ನಂಬಿಕೆ ಆಗ. 

ಇನ್ನೂ ಮನೆಯಲ್ಲಿ ಕೆಲಸದವಳನ್ನು ಇಟ್ಟುಕೊಳ್ಳುವ ಪದ್ಧತಿ ಕೂಡ ಇರಲಿಲ್ಲ. ಮನೆಯವರೇ ಮಕ್ಕಳಾದಿಯಾಗಿ ಎಲ್ಲರೂ ಸೇರಿಕೊಂಡು ಮನೆಕೆಲಸವನ್ನೆಲ್ಲಾ ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿನ ದೊಡ್ಡವರು ಎಲ್ಲಿಗಾದರೂ ಹೋಗುವುದಾದರೆ, ಮಕ್ಕಳು ಶಾಲೆಯಿಂದ ಬಂದ ಮೇಲೆ ಪಕ್ಕದ ಮನೆಯವರು ನೋಡಿಕೊಳ್ಳುತ್ತಿದ್ದರು.  ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು.  ಎಲ್ಲರಲ್ಲಿಯೂ ಒಂದು ಬದ್ಧತೆ ಇತ್ತು.  ಸಹಕಾರವಿತ್ತು. ಕಿತ್ತಾಡಿದರೂ ಅದು ಆ ಕ್ಷಣಕಷ್ಟೇ ಆಗಿರುತ್ತಿತ್ತು. ನಂತರ ಒಂದಿಷ್ಟು ದಿವಸಗಳಾದ ಮೇಲೆ, ಯಾವುದೋ ಜಾತ್ರೆಯೋ, ಹಬ್ಬವೋ ಬಂದಾಗ ಮತ್ತೆ ಒಂದಾಗುತ್ತಿದ್ದರು. ಮಕ್ಕಳು ಕೂಡ ಹೊಡೆದಾಡಿಕೊಂಡರೂ, ಒಂದಷ್ಟು ಕ್ಷಣಗಳಾದ ಮೇಲೆ ಮತ್ತೆ ಒಂದುಗೂಡಿ ಆಡುತ್ತಿದ್ದರು. ಇಲ್ಲಿ ಅವರು ಶ್ರೀಮಂತರು, ನಾವು ಬಡವರು, ಅವರು ಓದಿದವರು, ನಾವು ಅನಕ್ಷರಸ್ಥರು ಎಂಬ ಭೇಧ ಭಾವ ಇರುತ್ತಿರಲಿಲ್ಲ. ಮಕ್ಕಳು ಮನೆಯಲ್ಲಿ ಗಲಾಟೆ ಮಾಡದಿದ್ದರೇ ಸೈ, ಹೊರಗೆ ಹೋಗಿ ಆಡಿಕೊಳ್ಳಲಿ ಎಂಬುದಷ್ಟೇ ದೊಡ್ಡವರು ಯೋಚಿಸುತ್ತಿದ್ದರು. ಅಣ್ಣ ಒಮ್ಮೆ ಕೆಟ್ಟ ಪದವನ್ನು ಕಲಿತು ಬಂದಾಗ ಅಮ್ಮ ಬಾಸುಂಡೆ ಬರುವಂತೆ ಬಾರಿಸಿದ್ದು ನನಗೆ ಈಗಲೂ ನೆನಪಿದೆ.  ಅಮ್ಮ ಒಂದಕ್ಷರವೂ ಪಕ್ಕದ ಮನೆಯ ಹುಡುಗನಿಗೆ ಬೈದಿರಲಿಲ್ಲ. ನಮ್ಮ ಮನೆಯಲ್ಲಿ ಇಷ್ಟು ಸಂಸ್ಕಾರವಿದ್ದು ನೀನು ಕಲಿತಿದ್ದು ಹೇಗೆ? ಎಂಬುದಷ್ಟೇ ಅವಳ ಪ್ರಶ್ನೆಯಾಗಿತ್ತು! ಅಷ್ಟೇ ಕೊನೆ, ಅಣ್ಣ ಇವತ್ತಿಗೂ ಎಷ್ಟೇ ಕೋಪ ಬಂದರೂ, ಕೆಟ್ಟ ಪದಗಳನ್ನು ಉಪಯೋಗಿಸುವುದಿಲ್ಲ. ಅವನಿಗೆ ಹೊಡೆದದ್ದು ನೋಡಿದ ನನಗೇ ಬುದ್ಧಿ ಕಲಿಯಲು ಅಷ್ಟೇ ಸಾಕಿತ್ತು!

ಬಾಯಿ ಮಾತಿನ ಆಧಾರದ ಮೇಲೆ ಅಪ್ಪ, ಅವರ ಕಸಿನ್ ಒಬ್ಬನಿಗೆ ತಾವು ಕೆಲಸ ಮಾಡುತ್ತಿದ್ದ ಜಾಗದಲ್ಲೇ ಕೆಲಸ ಕೊಡಿಸಿದ್ದರು.  ಆತ ಕಲೆಕ್ಟ್ ಮಾಡಿದ ಹಣವನ್ನೆಲ್ಲಾ ಸರಿಯಾಗಿ ಬ್ಯಾಂಕ್ ಗೆ ಕಟ್ಟದೇ, ಸ್ನೇಹಿತನ ಮಾತು ಕೇಳಿ ಹಣವನ್ನು ಹಾಳು ಮಾಡಿಕೊಂಡು ಓಡಿ ಹೋದ.  ಅಪ್ಪ ಕಷ್ಟ ಪಟ್ಟು, ಬಡ್ಡಿ, ಚಕ್ರಬಡ್ಡಿ ಎಂದು ಸಾಲ ತಂದು ಮಾತು ಉಳಿಸಿಕೊಂಡಿದ್ದರು.  ಹಾಗೆಯೇ ಯಾವುದೇ ಸಹಿ ಮಾಡಿಸಿಕೊಳ್ಳದೇ ಸಾಲ ಕೊಟ್ಟಿದ್ದವರಿಗೂ ಕೂಡಾ ತಮ್ಮೆಲ್ಲಾ ಶಕ್ತಿ ಮೀರಿ (ಹೆಂಡತಿ, ಮಕ್ಕಳಿಗೆ ತೊಂದರೆಯಾದರೂ ಕೂಡ), ಹಣ ತೀರಿಸಿದ್ದರು. ನಾನು ಆಗ ಬಹಳ ಸಣ್ಣವಳು.  ನನಗೇ ತಿಳಿದಂತೆ, ಅಪ್ಪ ತನ್ನನ್ನು ಈ ಸ್ಥಿತಿಗೆ ತಂದಿಟ್ಟ ತನ್ನ ತಮ್ಮನನ್ನು ಒಮ್ಮೆಯೂ ಬೈದುಕೊಂಡಿರಲಿಲ್ಲ. ಅಪಾರವಾಗಿ ನೊಂದಿದ್ದರು. ಅಮ್ಮ ಕೂಡ ನಾನು ಹಿಂದೆ ಮಾಡಿದ ಯಾವುದೋ ಕರ್ಮ ಎಂದೇ ನೊಂದುಕೊಳ್ಳುತ್ತಿದ್ದಳು ಹೊರತು ಅದನ್ನು ಲೋಕದ ಮೇಲೆ ತೀರಿಸಿಕೊಂಡಿರಲಿಲ್ಲ. ಇದೇ ಚಿಂತೆಯಲ್ಲಿ ಅನಾರೋಗ್ಯದಿಂದ ತೀರಿಕೊಂಡ ನಂತರ, ಉಳಿದಿದ್ದ ಅಲ್ಪಸ್ವಲ್ಪ ಸಾಲವನ್ನು ಅಣ್ಣ ತೀರಿಸಿದ್ದ. ಅಪ್ಪನಿಗೆ ಅವರು ಕೊಟ್ಟಿದ್ದಾರೆ ಎಂಬ ಯಾವುದೇ ಪ್ರೂಫ್ ಇಲ್ಲದಿದ್ದರೂ ಮಾತು ಮುಖ್ಯವಾಗಿತ್ತು. ಅಷ್ಟರಮಟ್ಟಿಗಿನ ಬದ್ಧತೆ ಎಲ್ಲರಲ್ಲಿಯೂ ಇತ್ತು.   ಅವರು ಮಾಡಿದ್ದು ಅವರಿಗೇ ಎಂದಷ್ಟೇ ಹೇಳಿ ತನ್ನೆಲ್ಲಾ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದ ಅಮ್ಮ, ಈಗಲೂ ತನ್ನ ಆ ಮೈದುನನನ್ನು (ತನ್ನಿಡೀ ಬದುಕೇ ಆತನಿಂದ ಹಾಳಾಗಿದ್ದರೂ!) ಮಾತನಾಡಿಸುತ್ತಾಳೆ ಎಂದರೆ ಎಂಥವರಿಗಾದರೂ ಆಶ್ಚರ್ಯವಾಗಬಹುದು.

ಹಾಗಾದರೇ ಹೆಣ್ಣಿನ ಮೇಲೆ ಈ ಹಿಂದೆ ದೌರ್ಜನ್ಯ ಆಗುತ್ತಿರಲಿಲ್ಲವೇ?  ರಾಮಾಯಣ, ಮಹಾಭಾರತ ಕಾಲದಿಂದಲೂ ಹೆಣ್ಣಿನ ಮೇಲೆ ಈ ತರಹದ ಹಿಂಸೆ / ದೌರ್ಜನ್ಯ ನಡೆಯುತ್ತಿತ್ತು. ಆದರೆ ನಮಗೆ ತಿಳಿಯುತ್ತಿರಲಿಲ್ಲ. ತಿಳಿದರೂ, ನಮಗೆಲ್ಲಾ ದ್ರೌಪದಿಯನ್ನು ಕೆಣಕಿದ ದುರ್ಯೋಧನ, ದುಶ್ಯಾಸನ, ಕೀಚಕರ ಗತಿ ಹೀಗಾಯಿತು, ಹೆಣ್ಣನ್ನು ಕೆಣಕಿದರೆ ಹೀಗಾಗುವುದು ಎಂಬ ನೀತಿ ಪಾಠ ಮನೆ, ಮನೆಯಲ್ಲೂ ನಡೆಯುತ್ತಿತ್ತು.  ಪ್ರತಿ ವರ್ಷ ಹೋಳಿಹುಣ್ಣಿಮೆಯಂದು ಕಾಮದಹನ ನಡೆದಾಗ ಹೇಳುತ್ತಿದ್ದ ಎಷ್ಟೋ ವಾಕ್ಯಗಳು ಆಗ  (ಕಾಮಣ್ಣ ಮಕ್ಕಳೇ, ಕಾಳೇ, ಸೂಳೇ ಮಕ್ಕಳೇ... ಅರ್ಧರ್ಧ ನೆನಪಿದೆ) ನನಗೆ (ಚಿಕ್ಕವಳಿದ್ದದ್ದರಿಂದ) ಅರ್ಥವಾಗದಿದ್ದರೂ, ಯುವಕರಿಗೆ ನೀತಿಪಾಠವಾಗಿರುತ್ತಿತ್ತು. ಸಮಾಜದಲ್ಲಿ ನಾವು ಹೇಗಿರಬೇಕು? ಎಂಬುದನ್ನು ಸೂಚ್ಯವಾಗಿ, ಸೂಕ್ಷ್ಮವಾಗಿ ತಿಳಿಸುತ್ತಿದ್ದರು. ದೇವಸ್ಥಾನಗಳಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು, ಮೈಮೇಲೆ ಬರುವ ದೇವರು, ದೆವ್ವ ಎಲ್ಲವೂ ನೀತಿ ಹೇಳುತ್ತಿತ್ತೇ ಹೊರತು ಕೆಟ್ಟದ್ದು ಮಾಡಿ ಎಂದೆಲ್ಲೂ ಹೇಳುತ್ತಿರಲಿಲ್ಲ.  ಹಾಗೂ ಎಲ್ಲರೂ ಭಯಭಕ್ತಿಯಿಂದಲೇ ಇವೆಲ್ಲಾ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ, ಕೆಟ್ಟದು ಮಾಡಿದರೆ ದೇವರು ಶಿಕ್ಷೆ ಕೊಡುತ್ತಾನೆ ಎಂಬ ಭಯವಿತ್ತು. ಏನೇ ದೌರ್ಜನ್ಯಗಳು ಬೆಳಕಿಗೆ ಬರುವಷ್ಟು ದಿನಗಳು ಮಾತ್ರ ಅಪರಾಧಿಗಳು ಸುರಕ್ಷಿತರಾಗಿರುತ್ತಿದ್ದರು. ಸಿಕ್ಕಿ ಬೀಳುವೆನೆಂಬ ಭಯ, ಜೊತೆಗೆ ಹೀಗೆ ಮಾಡಿದೆನೆಂಬ  ಗಿಲ್ಟ್  ಅವರಿಗೆ ಕಾಡುತ್ತಿರುತ್ತಿತ್ತು.  ಹೀಗೆಲ್ಲಾ ಪೈಶಾಚಿಕ ಕೃತ್ಯ ನಡೆಸಿ, ಆರಾಮಾಗಿ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವಂಥ ಕ್ರೂರ ಮನಸ್ಥಿತಿ ಇರಲಿಲ್ಲ!

ಇನ್ನೂ ಶಾಲೆಗಳಲ್ಲಂತೂ ದಿನಕ್ಕೊಂದು ಕಥೆ, ಅದರ ನೀತಿ ಪಾಠವನ್ನು ನಾವು ಬರೆದುಕೊಂಡು ಹೋಗಬೇಕಿತ್ತು. ಚೆನ್ನಾಗಿ ಓದುತ್ತಿದ್ದವರೇ ಶಾಲಾ ಲೀಡರ್ ಗಳಾಗುತ್ತಿದ್ದರು. ತಂಟೆ ಮಾಡಿದವರಿಗೆ, ಸೋಮಾರಿತನ ಮಾಡುವವರಿಗೆ ಬಾರು ಕೋಲಿನಿಂದ ಅಂಗೈಗೆ ಪೆಟ್ಟು  ಬೀಳುತ್ತಿತ್ತು.  ಪ್ರತಿ ಬಾರಿಯು ಮೊದಲಿಗನಾಗಿ ಬಂದು, ಒಮ್ಮೆ ಯಾವುದೇ ಕಾರಣಕ್ಕಾಗಿ, ಆ ಸ್ಥಾನದಿಂದ ಕೆಳಗಿಳಿದರೆ, ನಿರ್ದಾಕ್ಷಿಣ್ಯವಾಗಿ ಆತನ ಲೀಡರ್ ಷಿಪ್ ಕಿತ್ತುಕೊಳ್ಳಲಾಗುತಿತ್ತು. ಯಾವುದೇ ರೀತಿಯ ವಶೀಲಿ ನಡೆಯುತ್ತಿರಲಿಲ್ಲ. ಹುಡುಗಿಯರು ಒಟ್ಟಿಗೆ ಕುಳಿತರೆ, ಹುಡುಗರು ಒಟ್ಟಿಗೆ ಕುಳಿತರೆ ಗಲಾಟೆಯಾಗುವುದೆಂದು, ಒಬ್ಬ ಹುಡುಗ, ಒಬ್ಬ ಹುಡುಗಿ ಹೀಗೆ. ಪಕ್ಕದಲ್ಲಿ ಕೂಡಿಸುತ್ತಿದ್ದರು. ಹೈಸ್ಕೂಲುಗಳಲ್ಲಿಯೂ ಹೀಗೆ ಇರುತ್ತಿತ್ತು. ಯಾರಾದರೂ ತಪ್ಪು ಮಾಡಿದರೆ, ಸರಿ ಮಾಡಿದವ / ದವಳ ಕಾಲ ಕೆಳಗೆ ತೂರಿಸುತ್ತಿದ್ದರು.  ಇಂಥ ಶಿಕ್ಷೆಗಳಿಗೆಲ್ಲಾ ಹುಡುಗ, ಹುಡುಗಿ ಎಂಬ ಭೇಧ ಭಾವ ಇರುತ್ತಿರಲಿಲ್ಲ. ಪಕ್ಕದಲ್ಲಿ ಕೂತಾಕ್ಷಣ, ಲೈಂಗಿಕ ಬಯಕೆಗಳಾಗಲೀ, ತೀಟೆಗಳಾಗಲೀ, ದೈಹಿಕವಾಗಿ ಬಯಸುತ್ತಿದ್ದದ್ದಾಗಲೀ, ಇವ್ಯಾವುದೂ ಕಾಡುತ್ತಿರಲಿಲ್ಲ. ಶಿಕ್ಷಕ / ಶಿಕ್ಷಕಿಯರನ್ನು ಕಂಡರೆ ಆರಾಧನಾ ಭಾವ ಇರುತ್ತಿತ್ತೇ ಹೊರತು ಲೈಂಗಿಕ ಆಸೆಗಳು ಅರಳುತ್ತಿರಲಿಲ್ಲ. ಮದುವೆಯಾಗದೇ ಇವೆಲ್ಲವೂ ತಪ್ಪು ಎನ್ನುವ ಭಾವ ಹೆಚ್ಚು ಕಡಿಮೆ ಎಲ್ಲರಲ್ಲಿಯೂ ಇತ್ತು.  ಲೈಂಗಿಕ ಶೋಷಣೆಗೆ ಹೆಣ್ಣು ಮಕ್ಕಳು, ತಮ್ಮ ಮನೆಯವರಿಂದಲೇ, ದೊಡ್ಡವರಿಂದಲೇ ಬಲಿಯಾಗುತ್ತಿದ್ದರೇ ಹೊರತು, ಮತ್ತೊಬ್ಬ ಸಹಪಾಠಿ ಮಾಡುತ್ತಿದ್ದದ್ದು ಅತಿ ವಿರಳ. ಯಾವುದೇ ಶಾಲಾ ದಿನಾಚರಣೆಗಳೂ ಸುಮ್ಮನೇ ಕಾಟಾಚಾರಕ್ಕೆ ಮಾಡುತ್ತಿರಲಿಲ್ಲ. ನನಗೆ ಈಗಲೂ ವಿಶ್ವ ವಿನೂತನ ಹಾಡು ನಿನ್ನೆ, ಮೊನ್ನೆ ಹಾಡಿದಂತಿದೆ. ಅಷ್ಟು ತಲ್ಲೀನರಾಗಿ ಹಾಡುತ್ತಿದ್ದೆವು. ಭಗತ್ ಸಿಂಗ್, ಅಜಾದ್ ಇವರೆಲ್ಲರ ಹೆಸರು ಕೇಳಿದರೆ ಮೈಮನವೆಲ್ಲಾ ರೋಮಾಂಚನವಾಗುತ್ತಿತ್ತು.

ಮಾಧ್ಯಮಗಳು ಗಮನವನ್ನು ಕೊಡುತ್ತಿರಲಿಲ್ಲವೋ? ಘಟನೆಗಳೇ ನಡೆಯುತ್ತಿರಲಿಲ್ಲವೋ? (ನಾನು ಚಿಕ್ಕವಳಿದ್ದರಿಂದ ಓದುತ್ತಿರಲಿಲ್ಲವೋ?) ಒಟ್ಟಿನಲ್ಲಿ ಇಷ್ಟೊಂದು ರೇಪ್ ಘಟನೆಗಳು ನಮ್ಮ  ಗಮನಕ್ಕೆ ಬರುತ್ತಿರಲಿಲ್ಲ. ಇನ್ನೂ ಸಿನೆಮಾಗಳಾಗಬಹುದು, ಪುಸ್ತಕಗಳಾಗಬಹುದು ಯಾವುದೇ ಕಲಾ ಮಾಧ್ಯಮಗಳಲ್ಲಿಯೂ ಅಪರಾಧಿಗಳ ಅಂತ್ಯ ಭೀಕರವಾಗಿರುತ್ತಿತ್ತು. ಆತ ಚಿತ್ರದುದ್ದಕ್ಕೂ ಎಷ್ಟೇ ಕಷ್ಟ ಪಟ್ಟರೂ, ಯಾವುದೇ ತಪ್ಪು ಮಾಡದ ನಾಯಕನೇ ಅಂತ್ಯದಲ್ಲಿ ಗೆಲ್ಲುತ್ತಿದ್ದ! ಪ್ರತಿಯೊಬ್ಬರೂ ತಮ್ಮನ್ನು ನಾಯಕನ ಪಾತ್ರದಲ್ಲಿಯೇ ಗುರುತಿಸಿಕೊಳ್ಳುತ್ತಿದ್ದರು. ಆ ಮೂಲಕ ನೀಚ ಕೆಲಸಗಳನ್ನು ಮಾಡಿದ ವಿಲನ್ ನನ್ನು ಕೊಚ್ಚಿ ಕೊಲ್ಲುತ್ತಿದ್ದರು. ಬಲಾತ್ಕಾರಕ್ಕೆ ಒಳಗಾಗುವ ನಾಯಕನ ತಂಗಿ, ಆ ಕಾಮುಕನನ್ನು ಕೊಲ್ಲುವ ನಾಯಕ! ಒಂದೇ, ಎರಡೇ!  ನಮ್ಮ ಚಿತ್ರ ನಟಿ ತಾರಾ ಎಷ್ಟು ಚಿತ್ರಗಳಲ್ಲಿ ಬಲಾತ್ಕಾರಕ್ಕೊಳಗಾಗಿ ಸತ್ತಿಲ್ಲ?!  ಉಪ್ಪಾ ತಿಂದ ಮೇಲೆ ನೀರ ಕುಡಿಯಲೇ ಬೇಕು ಎನ್ನುತ್ತಿದ್ದ ಚಿತ್ರರಂಗ ಇದ್ದಕಿದ್ದಂತೆ ತಪ್ಪು ಮಾಡದವ್ರು ಯಾರವ್ರೇ? ಅಂತಾ ಹಾಡಲು ಶುರು ಮಾಡಿತು. ಸಮಾಜದಿಂದ ಚಿತ್ರಗಳು ತಯಾರಾಗುತ್ತವೆಯೋ? ಚಿತ್ರಗಳಿಂದ ಸಮಾಜ ಪ್ರಭಾವಿತವಾಗುತ್ತದೆಯೋ? ಅರಿಯದು! ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಯಿತು.  ನಮ್ಮ ಟಿವಿ ಧಾರಾವಾಹಿಗಳಿಂದ ಹಿಡಿದು ಚಲನಚಿತ್ರಗಳವರೆಗೂ ಎಲ್ಲದರಲ್ಲಿಯೂ ಮೌಲ್ಯಗಳು ಕುಸಿಯಿತು.

ಹಾಗಾದರೇ ಇಷ್ಟೆಲ್ಲಾ ಇದ್ದದ್ದು ಹಠಾತ್ತಾಗಿ ಬದಲಾಗಿದ್ದು ಹೇಗೆ?  ನಾವೇಕೇ ಇಷ್ಟು ಕ್ರೂರಿಗಳಾಗಿದ್ದೇವೆ?  ನಮ್ಮೆಲ್ಲರಿಗೂ ಏನಾಗುತ್ತಿದೆ?  ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುತ್ತಿರುವುದು ಏನನ್ನೂ?  ಏನನ್ನೂ ನಾವು ಸೂಚಿಸುತ್ತಿದ್ದೇವೆ? ಬೆಳಿಗ್ಗೆ ೧೦ ರಿಂದ ೫ ಗಂಟೆಯವರೆಗೂ ಕೆಲಸ, ನಂತರ ಏನಾದರೂ ಹವ್ಯಾಸ, ಹಾಡು, ಹಸೆ, ಹರಿಕಥೆ, ದೇವಸ್ಥಾನ, ನೆರೆಹೊರೆಯವರು ಎಂದಿದ್ದ ಹಿರಿಯರು, ಶಾಲೆಗೆ ಹೋಗಿ ಬಂದು, ರಾತ್ರಿಯ ತನಕ ಆಡುತ್ತಿದ್ದ ಮಕ್ಕಳು, ಒಟ್ಟಿನಲ್ಲಿ ಎಲ್ಲರಲ್ಲೂ ಸಮಾಧಾನದ ಸ್ಥಿತಿ ಇರುತ್ತಿತ್ತು.  ಹಣದ ಕೊರತೆ ಇದ್ದರೂ ಕೂಡ ಯಾರಲ್ಲೂ ಒತ್ತಡವಿರುತ್ತಿರಲಿಲ್ಲ.  ಇದ್ದಕಿದ್ದಂತೆ ಗ್ಲೋಬಲೈಸೇಷನ್ ಎಂದು ಅಥವಾ ಐಟಿ, ಬಿಟಿ, ಬಿಪಿಒ ಉದ್ಯಮಗಳು ಶುರುವಾದ ಮೇಲಂತೂ ಇದ್ದಕ್ಕಿದ್ದಂತೆ, ಮನೆ-ಮಠಗಳ, ಸಮಾಜದ ಸ್ಥಿತಿ ಬದಲಾಗಿಬಿಟ್ಟಿತು. ಚೈನಾ ವಸ್ತುಗಳು ಕಡಿಮೆ ಕ್ವಾಲಿಟೀ, ಕಡಿಮೆ ಹಣಕ್ಕೆ ಸ್ಪರ್ಧೆ ಕೊಡಲು ಶುರುವಾದೊಡನೆಯೇ, ನಾವು ಕೂಡ ಕಡಿಮೆ ಕ್ವಾಲಿಟೀ ವಸ್ತುಗಳನ್ನು ಉತ್ಪಾದಿಸಲು ಶುರು ಮಾಡಿದೆವು! ಎಲ್ಲರ ಬಳಿಯೂ ಹಣ ಓಡಾಡತೊಡಗಿತು. ಮಕ್ಕಳಾದಿಯಾಗಿ ಎಲ್ಲರಲ್ಲೂ ಒತ್ತಡ, ಧಾವಂತ. ಯಾರಿಗೂ ನಾವು ಏನು ಮಾಡುತ್ತಿದ್ದೇವೆ?  ಯಾವುದರ ಹಿಂದೆ ಓಡುತ್ತಿದ್ದೇವೆ? ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ. ಒಟ್ಟಿನಲ್ಲಿ ಹಿಂದೆ, ಮುಂದೆ, ಅಕ್ಕ, ಪಕ್ಕ ಎಲ್ಲೂ ನೋಡಬೇಡಾ, ನಿಲ್ಲಬೇಡಾ, ಓಡು, ಅಷ್ಟೇ ಎಂದು ಹಿರಿಯರು ಕಿರಿಯರಿಗೆ ಬೋಧನೆ ಮಾಡಲಾರಂಭಿಸಿದರು. ಕಿರಿಯರು ಓಡಲಾರಂಭಿಸಿದರು.

ಹವ್ಯಾಸಗಳಿಂದ ಹಿಡಿದು ಪ್ರತಿಯೊಂದು ವಿದ್ಯೆಯೂ ಕಲಿಯಲೂ / ಕಲಿಸಲೂ ಹಣ ಮಾಡುವ ದಂಧೆಯಾಯಿತು.   ಸಂಬಂಧಗಳಿಂದ ಹಿಡಿದು ಎಲ್ಲಾ ವಿಷಯಗಳಲ್ಲೂ ಗುಣಮಟ್ಟ ಕಡಿಮೆ ಆಯಿತು. ಹಣದ ಹೊರತು ಎಲ್ಲಾ ವಿಷಯಗಳಲ್ಲಿಯೂ ಜನರು ರಾಜಿಯಾಗತೊಡಗಿದರು. ಮಾತುಗಳಿಗಂತೂ ಬೆಲೆಯೇ ಇಲ್ಲವಾಯಿತು. ಮಕ್ಕಳು ಉಸಿರು ಕಟ್ಟಿ ಪಾಠವಷ್ಟೇ ಓದಿ, ಅಂಕಗಳನಷ್ಟೇ ತೆಗೆದು, ಲಕ್ಷಾಂತರ ರೂಪಾಯಿ ಸಂಬಳ ತರುವ ಕೆಲಸ ಸೇರಲಾರಂಭಿಸಿದರು. ಬೆಳಿಗ್ಗೆ ೫ ಗಂಟೆಗೆದ್ದರೆ, ರಾತ್ರಿ ೧೧ ಗಂಟೆಯ ತನಕವೂ ಮಕ್ಕಳಿಗೆ ತಮ್ಮಷ್ಟಕ್ಕೆ ತಾವು ಜೀವಿಸುವ ಹಕ್ಕೇ ಇಲ್ಲವಾಯಿತು. ನಿದ್ದೆಯಲ್ಲಿಯೂ ಕೂಡ ಅಪ್ಪ, ಅಮ್ಮಂದಿರ ಕನಸುಗಳನ್ನೇ ಮಕ್ಕಳು ಕಾಣುವಂತಾದರು. ಮಕ್ಕಳಾದಿಯಾಗಿ ಎಲ್ಲರೂ ರೇಸುಕುದುರೆಗಳಾದರು. ಎಲ್ಲರಿಗೂ ಎಲ್ಲ ಕಡೆಯಿಂದ ಒತ್ತಡ. ಎಲ್ಲದರ ಬೆಲೆ ಹೆಚ್ಚಾಯಿತು. ಸಂಬಂಧಗಳಿಗೆ ಬೆಲೆ ಕಡಿಮೆ ಆಯಿತು. ಬುದ್ಧಿವಂತರು ಎರಡೆರಡು ಕೆಲಸ ಮಾಡುವವರಾದರು. ಹಣ ಬಿಸಾಕಿದರೆ ಮನೆ ಕೆಲಸದವಳು ಸಿಗುತ್ತಾಳೆ ಎಂಬ ಮನೋಭಾವ, ಅವಿದ್ಯಾವಂತ ಬಡವರು ಇನ್ನೊಂದಿಷ್ಟು ಹೆಚ್ಚಿಗೆ ಬಡವರಾದರು. ಅವರಲ್ಲಿ ಆತಂಕ, ಗೊಂದಲ, ನಿರಾಸೆ, ಕಿರಿಕಿರಿ, ಈ ಬುದ್ಧಿವಂತರ ಮೇಲೆ ಸಿಟ್ಟು! ಹೆಚ್ಚಾಯಿತು. ಒಟ್ಟಿನಲ್ಲಿ ಈ ಎಲ್ಲಾ ಬದಲಾವಣೆಗಳಿಂದ ಎಲ್ಲವನ್ನೂ, ಎಲ್ಲರನ್ನೂ ಉಡಾಫೆಯಿಂದ ನೋಡುವ ಮನಸ್ಥಿತಿ ಉಂಟಾಯಿತು. ಅಕ್ಕಪಕ್ಕದ ಮನೆಯ ಅಥವಾ ನಮ್ಮ ಮನೆಯವರ ಸಮಸ್ಯೆಗಳಿಗೆ ತಲೆ ಬಿಸಿ ಯಾರು ಮಾಡಿಕೊಳ್ಳುತ್ತಾರೆ? ಎನ್ನುವ ಬೇಜವಾಬ್ದಾರಿ ಶುರುವಾಯಿತು.

ಇಲ್ಲಿ ಯುವಕ / ಯುವತಿಯರ ಮನಸ್ಥಿತಿಯ ಬಗ್ಗೆ ಕೂಡ ಮಾತಾಡಲೇ ಬೇಕು. ಅಪ್ಪ, ಅಮ್ಮಂದಿರು ಕೊಡುವ ಸಾವಿರಾರು ರೂಪಾಯಿಗಳ ಪಾಕೆಟ್ ಮನಿ, ಅದನ್ನು ಖರ್ಚು ಮಾಡಲು ಬೇಕಾದಷ್ಟು ಹಾದಿಗಳು, ಇವತ್ತು ಯಾರಿಗಾದರೂ ಆಕರ್ಷಿತರಾಗುವುದು, ನಾಳೆ ಐ ಲವ್ ಯೂ, ನಾಡಿದ್ದು ಡೇಟಿಂಗ್, ಅಪ್ಪ, ಅಮ್ಮ ಹುಡುಕಿದ ಹುಡುಗ ಅಕಸ್ಮಾತ್ ತನ್ನ ಹುಡುಗನಿಗಿಂತ ‘ಬೆಲೆ’ ಬಾಳುವವನಾಗಿದ್ದರೆ, ಇವನಿಗೆ ಗುಡ್ ಬೈ!, ನೊಂದ ಯುವಕರ ಮನಸ್ಥಿತಿ ಹೀಗೆ - ಸಿಕ್ಕಿದ ಎಲ್ಲಾ ಹುಡುಗಿಯರನ್ನು ‘ಮಜಾ’ ಮಾಡಿ ಕೈಕೊಡುವುದು! ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ ಯಾವುದಕ್ಕೂ ಅರ್ಥವೇ ಗೊತ್ತಿರದ ಸ್ಥಿತಿ.  ಬುದ್ಧಿ ಹೇಳಲು ಅಪ್ಪ ಅಮ್ಮಂದಿರಿಗೆ ಪುರುಸೊತ್ತಿಲ್ಲ! ಕೇಳುವ ತಾಳ್ಮೆ ಯುವ ಜನಾಂಗಕ್ಕಿಲ್ಲ! ಯಾರಿಗೂ ಯಾವುದರ ಭಯವೂ ಇಲ್ಲ!  ಇನ್ನೂ ಶಾಲಾ ಮಕ್ಕಳನ್ನು ಕಂಡರಂತೂ ಶಿಕ್ಷಕರೇ ಹೆದರಬೇಕು. ಬುದ್ಧಿ ಮಾತು ಕೇಳದಿದ್ದರೆ ನಮ್ಮ ಮಕ್ಕಳನ್ನು ಹೊಡೀರಿ, ಬಡೀರಿ ಎನ್ನುತ್ತಿದ್ದ ಅಪ್ಪ, ಅಮ್ಮಂದಿರೆಲ್ಲಿ?  ಮಕ್ಕಳು ಹೋಮ್ ವರ್ಕ್ ಮಾಡಿಲ್ಲ ಎಂದು ಶಿಕ್ಷಕರು ಬುದ್ಧಿ ಮಾತು ಹೇಳ ಹೊರಟರೆ, ಅವರ ಮೇಲೆ ಕೇಸು ಹಾಕುವ ಅಪ್ಪ, ಅಮ್ಮಂದಿರೆಲ್ಲಿ? ಮಕ್ಕಳು ಎಷ್ಟೇ ತಪ್ಪು ಮಾಡಿದರೂ ಅವರಿಗೆ ಪೋಷಕರಾಗಲೀ, ಶಿಕ್ಷಕರಾಗಲೀ ಶಿಕ್ಷೆ ನೀಡುವಂತಿಲ್ಲ! ಆಗ ಪೈಶಾಚಿಕ ಪ್ರವೃತ್ತಿ ಬಲಿಯದೇ ಇನ್ನೇನಾಗುತ್ತದೆ? ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬ ಗಾದೆ ಮಾತು ನಮಗೇಕೆ ಮರೆತು ಹೋಯಿತು? ನಾವು ಮಾಡುವ ಕೆಲಸದಲ್ಲಿನ ಆತ್ಮ ತೃಪ್ತಿಗಿಂತ ತಿಂಗಳ ಕೊನೆಗೆ ಸಿಗುವ ಸಂಬಳ ಹೆಚ್ಚಾಯಿತಲ್ಲವೇ? ಎಲ್ಲರ ಮನಸ್ಥಿತಿಯೂ ಹೀಗೆ ಆಗಿಬಿಟ್ಟಿದೆಯಲ್ಲವೇ? 

ಇಂತಹ ಒಂದು ಘಟನೆ ನಡೆದ ಕೂಡಲೇ ಪರಿಹಾರ ಕಂಡುಹಿಡಿಯುವುದನ್ನು ಬಿಟ್ಟು, ಸಮಸ್ಯೆಯ ಮೂಲವೆಲ್ಲಿದೆ? ಎಂಬುದನ್ನು ಹುಡುಕುವುದನ್ನು ಬಿಟ್ಟು, ಪ್ರತಿಯೊಬ್ಬರಿಗೂ ತಮ್ಮ, ತಮ್ಮ ಒತ್ತಡಗಳನ್ನು ಹೊರಹಾಕುವುದೇ ಮುಖ್ಯವಾಗಿರುವಾಗ! ಪ್ರತಿಯೊಬ್ಬರೂ ತಮ್ಮ, ತಮ್ಮ ಅನುಭವಗಳ ಮೂಸೆಯಲ್ಲಿಯೇ ಮತ್ತೊಬ್ಬರನ್ನು ಜಡ್ಜ್ ಮಾಡುತ್ತಿರುವಾಗ! ಪ್ರತಿಯೊಬ್ಬರಿಗೂ ತಾವು ಮಾತನಾಡುವುದು ಶೋ ಆಫ್ ಆಗಿರುವಾಗ, ಬದಲಾವಣೆ ಆಗುವುದೆಲ್ಲಿಂದ?! ಗಂಡೊಬ್ಬ ತಪ್ಪು ಮಾಡಿದರೇ, ಇಡೀ ಗಂಡು ಜನಾಂಗವನ್ನು ನಾಶ ಮಾಡಲು ಪಣ ತೊಡುವ ಹೆಂಗಸರು, ಹೆಣ್ಣೊಬ್ಬಳಿಂದ ಆದ ಅನಾಹುತಕ್ಕೆ, ಇಡೀ ಹೆಣ್ಣು ಕುಲವನ್ನೇ ಬಲಾತ್ಕಾರ ಮಾಡುವ ಗಂಡಸರು, ತಮ್ಮ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ತಮ್ಮ ಹಿತಕ್ಕಾಗಿ, ಸುಮ್ಮನೇ ಸುಳ್ಳು ರೇಪ್ ಕೇಸುಗಳನ್ನು ಹಾಕುವ ತಾಯಂದಿರು ಒಂದು ಕಡೆ, ತಮ್ಮ ಲೈಂಗಿಕ ತೃಷೆಗಾಗಿ ಮಗಳನ್ನು ಬಿಡದಾ ಅಪ್ಪಂದಿರು ಒಂದು ಕಡೆ, ತಾಯ್ತಂದೆಯರ ಒತ್ತಡ ತಡೆಯಲಾರದೇ ಮಕ್ಕಳು ಮಾಡಿಕೊಳ್ಳುವ ಆತ್ಯಹತ್ಯೆಗಳು, ವಿದೇಶ ಪಯಣಕ್ಕಾಗಿ ಅಪ್ಪ, ಅಮ್ಮಂದಿರನ್ನು ವೃದ್ಧಾಶ್ರಮಕ್ಕೋ ಅಥವಾ ಒಂಟಿಯಾಗಿ ಕೊಲೆಯಾಗಲೂ ಬಿಟ್ಟು ಹೋಗುವ ಮಕ್ಕಳು, ಇವೆಲ್ಲಕ್ಕೂ ಪರಿಹಾರ ಹೇಗೆ? ಬೇಲಿಯೇ ಎದ್ದು ಹೊಲ ಮೇಯ್ದರೇ? 

ಇನ್ನೂ ಜನಧ್ವನಿಯಾಗಿ, ನೊಂದವರಿಗೆ ಬೆನ್ನೆಲುಬು ಆಗಿ ನಾವಿದ್ದೇವೆ ಎಂದು ನಿಲ್ಲಬೇಕಾದ ಮಾಧ್ಯಮಗಳು ಕೂಡ ತಾ ಮುಂದೇ, ನಾ ಮುಂದೇ ಎಂದು ತಮ್ಮ ತಮ್ಮ ಹೆಚ್ಚುಗಾರಿಕೆಯನ್ನೂ ಸುದ್ಧಿ ನೀಡುವುದರಲ್ಲೇ ನಿರತರಾಗಿರುವಾಗ?!, ರಾಜಕೀಯ ಪಕ್ಷಗಳು ಇಂತಹ ವಿಷಯಗಳ ಮೂಲಕ ಒಬ್ಬರ ಮೇಲೊಬ್ಬರು ಕೆಸರೆರಚಿ, ತಮ್ಮ ಬೇಳೆ ಬೇಯಿಸಿಕೊಳ್ಳುವುದರಲ್ಲೇ ಆಸಕ್ತರಾಗಿರುವಾಗ?!, ವಕೀಲರು ಇಂತಹ ಕೇಸುಗಳಲ್ಲಿ ಹೇಗೆ ವಾದ ಮಾಡಿ ಅಪರಾಧಿಗಳನ್ನು ಗೆಲ್ಲಿಸಬಹುದು? ಎಂಬ ತಮ್ಮ ಜಾಣ್ಮೆಯ ಪ್ರದರ್ಶನ ಮಾಡುತ್ತಿರುವಾಗ?! ಮಠ, ದೇವಸ್ಥಾನಗಳು ತಮ್ಮ ಶ್ರೀಮಂತಿಕೆಯನ್ನು, ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುವುದರಲ್ಲೇ ಮಗ್ನರಾಗಿರುವಾಗ?! ಸಿನೆಮಾಗಳು, ಟಿವಿ ಧಾರವಾಹಿಗಳು, ಪುಸ್ತಕಗಳು ನಾವೆಷ್ಟು ದುಡ್ಡು ಮಾಡುತ್ತಿದ್ದೇವೆ? ಎಂದು ತಮ್ಮ ಟಿಆರ್ ಪಿ ಹೆಚ್ಚಿಸುವ ಪ್ರಯತ್ನದಲ್ಲಿಯೇ ತೊಡಗಿರುವಾಗ?!
ನಾವು ಹೇಳುವುದಾದರೂ ಯಾರಿಗೇ?

ಇನ್ನೂ ರೇಪಿಸ್ಟ್ ಗಳಿಗೆ ಕೊಡುವ ಮರಣದಂಡನೆಯಿಂದ ಏನೂ ಪ್ರಯೋಜನವಿಲ್ಲ! ತಮ್ಮ ಆತ್ಮಸಾಕ್ಷಿಗೆ ಹೆದರದ ಅವರು, ಇನ್ನೆಂಥ ಶಿಕ್ಷೆಗೆ ಹೆದರಿಯಾರು? ಈ ಹಿಂದೆಯಾದರೆ ದೇವರು ಎನ್ನುವ ಭಯದಿಂದ ಹಿಡಿದು ಎಲ್ಲವೂ ಭಯದಿಂದಲೇ ನಡೆಯುತ್ತಿತ್ತು. ಎಲ್ಲರೂ ತಮ್ಮ ಆತ್ಮಗಳಿಗೆ ಹೆದರುತ್ತಿದ್ದರು. ಈಗಿರುವ ಉಡಾಫೆ ಸ್ಥಿತಿಯಿಂದ ಅಪರಾಧಿಗಳಲ್ಲಿ ಭಯವಿಲ್ಲ. ತದ್ವಿರುದ್ದವಾಗಿ ಯಾವ ತಪ್ಪನ್ನೂ ಮಾಡದೇ ಧೈರ್ಯವಾಗಿರಬೇಕಾಗಿದ್ದ ಮುಗ್ಧರಲ್ಲಿ ಭಯವಿದೆ. ಆತ್ಮಪ್ರಜ್ಞೆಯಿಲ್ಲದ ವ್ಯಕ್ತಿಗಳಿಂದ ತುಂಬಿಹೋಗುತ್ತಿರುವ ಸಮಾಜವೂ ಮತ್ತಷ್ಟು ಹಾಳಾಗುತ್ತಿದೆ.  ಭಯದಿಂದ ಯಾವ ಕೆಲಸವನ್ನು ನಾವು ಮಾಡಲು / ಮಾಡಿಸಲು ಸಾಧ್ಯವಿಲ್ಲ. ಆದರೆ ಇಂತಹ ವಿಷಯಗಳಲ್ಲಿ ಎಲ್ಲರಲ್ಲೂ ಸೀರಿಯಸ್ ನೆಸ್ ಬಂದರೆ, ಎಲ್ಲರೂ ಸೆನ್ಸಿಬಲ್ ಆದರೆ, ಎಲ್ಲರೂ ತಮ್ಮ, ತಮ್ಮ ಆತ್ಮದೊಳಗೆ ಸಂಚರಿಸಲು ಶುರು ಮಾಡಿದರೆ.... ಸ್ವಲ್ಪವಾದರೂ ಪ್ರಯೋಜನವಾಗಬಹುದು.  ದುಡ್ಡಿಂದಲೇ ಎಲ್ಲವೂ ಅಲ್ಲ! ಅನ್ನುವ ಮನಸ್ಥಿತಿ ಉಂಟಾದರೆ, ಮಾತುಗಳಿಗೂ ಬೆಲೆ ಇದೆ ಎನ್ನುವುದು ಅರ್ಥವಾದರೆ, ಮಕ್ಕಳಿಗೆ ನಾವು ಕಲಿಸಬೇಕಿರುವುದು ಮೌಲ್ಯಗಳು ಎಂಬುದರ ಅರಿವಾದರೆ, ಸ್ವಾರ್ಥವಿಲ್ಲದೇ ನಾನು ಏನಾದರೂ ಸಮಾಜಕ್ಕೆ ಒಳಿತು ಮಾಡಬೇಕೆಂಬ ಮನಸ್ಥಿತಿ ಉಂಟಾದರೇ..... ಸ್ವಲ್ಪವಾದರೂ ಹದಗೆಟ್ಟಿರುವ ಈ ಸಮಾಜವನ್ನು ನಾವೆಲ್ಲರೂ ಸರಿಪಡಿಸಬಹುದು. ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡದೇ, ಮನೆ ಮನಗಳಲ್ಲಿ ಬದಲಾವಣೆ ತರಬೇಕಾದ ಜರೂರು ಈ ಹೊತ್ತಿಗಿದೆ.

Thursday, November 29, 2012

ಸಿನೆಮಾಗಳನ್ನು ಓದುವುದು!


ಚಿಕ್ಕಂದಿನಿಂದ ನಾನು ಸಿನೆಮಾಗಳನ್ನು ನೋಡಿದಕ್ಕಿಂತ ಪುಸ್ತಕಗಳನ್ನು ಓದಿದ್ದೇ ಹೆಚ್ಚು.  ಸಿನೆಮಾಗಳನ್ನು ನೋಡುವುದು ಒಳ್ಳೆಯದಲ್ಲ, ಪುಸ್ತಕಗಳನ್ನು ಓದುವುದು ಒಳ್ಳೆಯ ಹವ್ಯಾಸ ಎನ್ನುವಂತಹ ವಾತಾವರಣದಲ್ಲಿದ್ದ ನನಗೆ ಸಿನೆಮಾಗಳು ಎಂದರೆ ಅಷ್ಟಕಷ್ಟೆ.  ಬೆಂಗಳೂರಿಗೆ ಯಾರಾದರೂ ನೆಂಟರು ಬಂದರೆ ಅವರೊಟ್ಟಿಗೆ ಕನ್ನಡ ಸಿನೆಮಾಗಳಿಗೆ ಹೋಗಿ ಬಂದರೆ ಮುಗಿಯಿತು. ನಾಟಕಗಳನ್ನಂತೂ ನೋಡಿಯೇ ಇಲ್ಲವೆನ್ನುವಷ್ಟು ಕಡಿಮೆ.  ಸಿನೆಮಾಗಳು ಮನರಂಜನೆಗಾಗಿ ಮಾತ್ರ ಎಂದೇ ತಿಳಿದಿದ್ದೆ ನಾನು.  ಪುಸ್ತಕಗಳನ್ನು ಓದಿದಾಗ ಸಿಕ್ಕಂಥ ಒಳನೋಟಗಳು, ಅವುಗಳು ಬೀರಿದ ಪ್ರಭಾವಗಳು, ಚಿಂತನೆಗಳು, ಎಂದಿಗೂ ನನಗೆ ಸಿನೆಮಾಗಳನ್ನು ನೋಡಿದಾಗ ಸಿಕ್ಕಿಲ್ಲ. ಒಬ್ಬಳೇ ಕುಳಿತು, ಪುಸ್ತಕಗಳನ್ನು ಓದುತ್ತಾ, ಅವುಗಳಲ್ಲಿನ ದೃಶ್ಯಗಳನ್ನು, ಪಾತ್ರಧಾರಿಗಳನ್ನು ಕಲ್ಪಿಸುತ್ತಾ, ಯೋಚಿಸುತ್ತಾ, ಅವು ನನ್ನೊಳಗೆ ದೃಶ್ಯಗಳನ್ನು ಮೂಡಿಸುವಾಗ, ಅದನ್ನು ನೋಡುತ್ತಾ ಖುಷಿ ಪಡುತ್ತಿದ್ದೆ.  ಸಿನೆಮಾಗಳಲ್ಲಿಯಾದರೋ ಈ ಮೊದಲೇ ಯಾರದೋ ಕಲ್ಪನೆಯಲ್ಲಿ ದೃಶ್ಯಗಳು ಚಿತ್ರಿತಗೊಂಡಿರುವುದರಿಂದ, ಅದನ್ನು ಕುರಿತು ಅಲೋಚಿಸುವುದೇನು? ಕಲ್ಪಿಸಿಕೊಳ್ಳುವುದೇನು?  ಇದು ನನ್ನ ಸಮಸ್ಯೆ. ಹೀಗಾಗಿ ನಾನು ನೋಡಿರುವ ಯಾವುದೇ ಸಿನೆಮಾಗಳು, ನಾನು ಓದಿರುವ ಪುಸ್ತಕಗಳಷ್ಟು ಪ್ರಭಾವವನ್ನು ನನ್ನ ಮೇಲೆ ಬೀರಿಲ್ಲ.

ಇನ್ನೂ ಕನ್ನಡ ಸಿನೆಮಾಗಳೋ, ನಮ್ಮ ಥಿಯೇಟರ್ ಗಳಲ್ಲಿ ತುಂಬಾ ದಿವಸಗಳು ಇದ್ದರೆ ಮಾತ್ರ ಒತ್ತಾಯಕ್ಕೆ ಹೋಗಿಬರುತ್ತಿದ್ದದ್ದಷ್ಟೆ. ‘ಮುಂಗಾರು ಮಳೆ’ ಸಿನೆಮಾವನ್ನು ನಾನು ನೋಡಿದ್ದು, ‘ಸುಧಾ’ ವಾರಪತ್ರಿಕೆಯಲ್ಲಿ ಯೋಗರಾಜ್ ಭಟ್ಟರ ಸಿನೆಮಾ ಮೇಕಿಂಗ್ ಬಗೆಗಿನ ಆರ್ಟಿಕಲ್ ಓದಿ, ಅವರ ಬರಹದ ಶೈಲಿಯಿಂದ ಪ್ರಭಾವಿತಳಾಗಿ! ಟೈಟಲ್ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಎಷ್ಟೋ ಕನ್ನಡ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದ್ದರೂ ನಾನು ನೋಡೇ ಇಲ್ಲ. ಎಷ್ಟೋ ಬಾರಿ ಟಿವಿಗಳಲ್ಲಿ ಬರೇ ಸಿನೆಮಾದ ಬಗ್ಗೆಯೇ ಬಂದಾಗ ಬೇಜಾರಾಗಿ ಟಿವಿ ಆರಿಸಿದ್ದು ಕೂಡ ಉಂಟು. ಇನ್ನೂ ನಮ್ಮ ಕನ್ನಡದ ಹೆಸರಾಂತ ನಟರ ಸಿನೆಮಾಗಳನ್ನು ನೋಡಿದಾಗ ಇಷ್ಟು ಸಿಲ್ಲಿ ಸಿನೆಮಾಗಳನ್ನು ಏಕೆ ಮಾಡುತ್ತಾರೆ? ಕಥೆ ಓದಿರುವುದಿಲ್ಲವೇ? ಸಿನೆಮಾದ ಬಗ್ಗೆ ಏನೂ ಗೊತ್ತಿಲ್ಲದ ನನಗೇ ಇದರ ಹುಳುಕುಗಳು ಕಂಡುಬರುವುದಾದರೆ, ಇವರಿಗೆ ಇದರ ಅರಿವೇಕೆ ಆಗುವುದಿಲ್ಲಾ? ಇವರೆಲ್ಲಾ ಏಕೆ ಹೀಗೆ? ಕನ್ನಡದಲ್ಲಿ ಪ್ರಜ್ಞಾವಂತ ಸಿನೆಮಾ ನೋಡುಗರಿಲ್ಲವೇ? ಇಷ್ಟೇ ನನ್ನ ಆಲೋಚನೆಗಳು. ನಂತರ ನನಗ್ಯಾಕೆ? ಎಂದು ಮರೆತುಬಿಡುತ್ತಿದ್ದೆ.

ಸಂವಾದ.ಕಾಮ್ ನ ರೂವಾರಿಯಾದ ಶೇಖರ್ ಪೂರ್ಣರವರನ್ನು ಭೇಟಿಯಾಗುವವರೆಗೂ ನನ್ನ ಆಲೋಚನೆಗಳು ಇಷ್ಟಕ್ಕೆ ಸೀಮಿತವಾಗಿದ್ದವು. ಅವರು ಸಿನೆಮಾಗಳನ್ನು ವಿಮರ್ಶಿಸುವ ರೀತಿ, ಶೈಲಿ, ಒಂದು ಸಿನೆಮಾವನ್ನು ಒಡೆದು, ಕಟ್ಟಬೇಕು ಎನ್ನುವ ಅವರ ಮಾತು ನನ್ನ ಮೇಲೆ ಪ್ರಭಾವ ಬೀರಿತು. ಅವರು ಹೇಳಿದ ಬಹಳಷ್ಟು ಮಾತುಗಳು ಅರ್ಥವಾಗದಿದ್ದರೂ!, ‘ಸಿನೆಮಾಗಳನ್ನು ಓದುವುದು’ ಎಂಬ ಪರಿಕಲ್ಪನೆಯೇ ನನ್ನಲ್ಲಿ ಕುತೂಹಲವನ್ನುಂಟು ಮಾಡಿತು. ನಾನು ಇವರ ಹಾಗೇ ಎಲ್ಲಾ ಸಿನೆಮಾಗಳನ್ನು ನೋಡಿಯೇಬಿಡಬೇಕೆಂಬ ಆಸೆ ಕೂಡ ಮೂಡಿಸಿತು. ನಮ್ಮ ಸಿನೆಮಾದಲ್ಲಿನ ವಸ್ತು (ಕಂಟೆಂಟ್) ಪ್ರತಿಯೊಬ್ಬರನ್ನೂ ಚಿಂತನೆಗೀಡಾಗುವಂತೆ ಮಾಡಬೇಕು. ಸಿನೆಮಾ ನೋಡಿ, ವಾಪಾಸ್ಸು ಹೋಗುವಾಗ ಈ ವಿಷಯ ಜನರನ್ನು ಕಾಡಬೇಕು. ವಾದಗಳಾಗಬೇಕು, ಚರ್ಚೆಗಳಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಇದೆಲ್ಲವನ್ನೂ ದಾಖಲಿಸಬೇಕು. ಟೆಕ್ಸ್ಟ್ ಕ್ರಿಯೇಟ್ ಮಾಡಬೇಕು! ಇದು ಅವರ ಆಶಯವಾಗಿತ್ತು.  ಈ ಎಲ್ಲಾ ಅವರ ಮಾತುಗಳನ್ನು ಕೇಳುತ್ತಾ, ಚರ್ಚಿಸುತ್ತಾ ಹೋದಂತೆ ಇದೆಲ್ಲವೂ ನಮ್ಮೆಲ್ಲರ ಆಶಯವಾಗಿ ಬದಲಾಗಿತ್ತು.  ಸಿನೆಮಾದ ಗಂಧಗಾಳಿಯೂ ಇಲ್ಲದ ನನಗೆ ಇದರಿಂದಾಗಿ ಕಥೆಯೊಂದು ಚಿತ್ರಕಥೆಯಾಗಿ, ಸಿನೆಮಾ ಆಗುವಲ್ಲಿನ ಪ್ರಕ್ರಿಯೆಯ ಬಗ್ಗೆ ಅತ್ಯಂತ ಆಸಕ್ತಿ ಮೂಡಿತು. ಕೂತಲ್ಲಿ, ನಿಂತಲ್ಲಿ  ಓದಿದ ಕಥೆಗಳೆಲ್ಲವನ್ನೂ ಚಿತ್ರಕಥೆ ಮಾಡಬಹುದೇ ಎಂದು ಆಲೋಚಿಸಲು ಮನವು ತೊಡಗಿತು. 

ಪುಸ್ತಕಗಳನ್ನು ಓದುವಾಗ, ಹೇಗೆ ಕಲ್ಪನೆಯಲ್ಲಿ ನಾವು ಓದುತ್ತಿರುವ ವಿಷಯಗಳ ದೃಶ್ಯಗಳನ್ನು ಮೂಡಿಸಿಕೊಳ್ಳುತ್ತಾ ಹೋಗುತ್ತೇವೆಯೋ ಹಾಗೆಯೇ ನಿರ್ದೇಶಕನೊಬ್ಬ ತನಗೆ ಹೊಳೆದ / ಓದಿದ / ಬರೆದ ಕಥೆಯೊಂದನ್ನು, ತನ್ನ ಕಲ್ಪನೆಯಲ್ಲಿಯೇ ದೃಶ್ಯಗಳಾಗಿ ಮೂಡಿಸಿ, ಚಿತ್ರಕಥೆಯನ್ನು ಬರೆದು, ಅದನ್ನು ದೃಶ್ಯರೂಪವಾಗಿಸಿ ನಮ್ಮ ಮುಂದಿಡುತ್ತಾನೆ. ಕಥೆ ಬರೆಯುವಾಗ, ಅದನ್ನು ಚಿತ್ರಕಥೆಯಾಗಿಸುವಲ್ಲಿ ಎಡವದ ನಿರ್ದೇಶಕ, ಅದನ್ನು ತೆರೆಯ ಮೇಲೆ ದೃಶ್ಯಗಳಾಗಿ ಮೂಡಿಸುವ ಪ್ರಕ್ರಿಯೆಗಳಲ್ಲಿನ ಇತಿಮಿತಿಗಳಿಂದ ಹಲವು ಬಾರಿ ಎಡವಲು ಬಹುದು, ತನ್ನ ಕಲ್ಪನೆಯಂತೆಯೇ ಮೂಡಿಸಲು ಕಷ್ಟವಾಗಬಹುದು ಅಥವಾ ಕಲ್ಪನೆಗಿಂತ ಇನ್ನೂ ಚೆನ್ನಾಗೇ ಮೂಡಿಸಬಹುದು!  ಇದು ಆತನ ಚಾಕಚಕ್ಯತೆಯನ್ನು ಅವಲಂಬಿಸಿರುತ್ತದೆ. ಕಥೆಯೊಂದು, ಚಿತ್ರಕಥೆಯಾಗಿ, ನಂತರ ಸಿನೆಮಾ ಆಗುವುದರಿಂದ, ಈ ಕಲಾಪ್ರಕ್ರಿಯೆಯಲ್ಲಿ ನಿರ್ದೇಶಕ ಮುಖ್ಯವಾದರೂ ಕೂಡ, ಇದೊಂದು ಟೀಮ್ ವರ್ಕ್. ನಿರ್ದೇಶಕನ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಛಾಯಾಗ್ರಾಹಕನಿಂದ ಹಿಡಿದು, ಎಡಿಟರ್ ತನಕ ಪ್ರತಿಯೊಬ್ಬರೂ ಕಷ್ಟಪಡುತ್ತಾರೆ.  ಬರಹಗಾರ / ಕಥೆಗಾರ ತನ್ನ ಕಲ್ಪನೆಯನ್ನು ಬರೆಯುವಷ್ಟು ಸುಲಭವಾಗಿ ನಿರ್ದೇಶಕ ಚಿತ್ರಿಸಲಾರ.  ಬರಹಗಾರನಿಗಿರುವಷ್ಟು ಸ್ವಾತಂತ್ರ್ಯವಾಗಲೀ, ಕಲ್ಪನಾವಿಸ್ತಾರವಾಗಲೀ, ನಿರ್ದೇಶಕನಿಗೆ ಸಾಧ್ಯವಿಲ್ಲ. ಸಿನೆಮಾ ನಿರ್ಮಾಣ ಎಂಬುದು ದುಬಾರಿ ಕಲಾಪ್ರಕಾರವಾದ್ದರಿಂದ ನಿರ್ದೇಶಕ ಬಹಳಷ್ಟು ಬಾರಿ ತನ್ನ ಕಲ್ಪನೆಯೊಂದಿಗೆ ರಾಜಿಯಾಗಬೇಕಾಗುತ್ತದೆ. ಹಾಗಾಗೀ ಸಿನೆಮಾ ನಿರ್ದೇಶಿಸುವುದು, ಬರೆಯುವುದಕ್ಕಿಂತಲೂ ಅತ್ಯಂತ ಕಷ್ಟದ ಕೆಲಸ!  

ಸಿನೆಮಾ ಎಂಬುದು ನಮ್ಮ ಸಂಸ್ಕೃತಿಯಲ್ಲಿ ಕಾಲಾನುಕಾಲದಿಂದ ಹಾಸುಹೊಕ್ಕಾಗಿವೆ ಹಾಗೂ ಬೇರೆ ಎಲ್ಲಾ ಕಲಾಪ್ರಕಾರಗಳಿಗಿಂತ ಹೆಚ್ಚು ಜನರನ್ನು ತಟ್ಟುತ್ತವೆ.  ಸಿನೆಮಾ ನೋಡಲು ಬರುವ ವೀಕ್ಷಕರು, ಹಣ ಕೊಟ್ಟು ಬರುವುದರಿಂದ ಗ್ರಾಹಕರು ಕೂಡ ಆಗುತ್ತಾರೆ. ಸಿನೆಮಾ ನಿರ್ಮಾಣವು ದುಬಾರಿಯೂ ಹಾಗೂ ವೀಕ್ಷಕರು ಗ್ರಾಹಕರೂ ಆಗುವುದರಿಂದ ಇದೊಂದು ದೊಡ್ಡ ಉದ್ಯಮವಾಗಿದೆ.  ಹಾಗಾಗಿ ನಮ್ಮ ಹೆಚ್ಚಿನ ಸಿನೆಮಾಗಳು ಹಣ ಮಾಡುವ ದಂಧೆಯಾಗಿಬಿಟ್ಟಿವೆ. ಸಿನೆಮಾ ಒಂದು ಕಲಾಪ್ರಕಾರ ಎಂಬುದನ್ನು ಮರೆತಿರುವ ನಿರ್ಮಾಪಕರು, ಹೆಸರಾಂತ ನಾಯಕನಟನಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು (ಕಥೆಯನ್ನು ಕೂಡ ಕೇಳದೆ!) ಖರ್ಚು ಮಾಡಲು ರೆಡಿ ಇರುತ್ತಾರೆ. ವೀಕ್ಷಕರಿಗೆ ಕಥೆಯನ್ನು ದೃಶ್ಯವಾಗಿಸುತ್ತಿದ್ದೇವೆ ಎಂಬ ಕಲ್ಪನೆಯೇ ಇರದಂತೆ, ಹಣಕ್ಕಾಗಿಯೇ ಸಿನೆಮಾಗಳು ನಿರ್ಮಾಣಗೊಳ್ಳುತ್ತಿವೆ. ಹೀಗಾಗಿ ಚಲನಚಿತ್ರಗಳ ಗುಣಮಟ್ಟ ಸೊರಗುತ್ತಿವೆ. ಇದಕೆಲ್ಲಾ ಯಾರು ಕಾರಣ? ಸಿನೆಮಾವನ್ನು ಉದ್ದಿಮೆಯಾಗಿ ನೋಡುತ್ತಿರುವ ನಿರ್ಮಾಪಕರೇ? ಗುಣಮಟ್ಟದಲ್ಲಿ ರಾಜಿಯಾಗುತ್ತಿರುವ ನಿರ್ದೇಶಕರೇ?  ತಮ್ಮ ಹೆಸರನ್ನು ಬಳಸಿಕೊಳ್ಳಲು ಅನುವು ಮಾಡಿಕೊಟ್ಟು, ಹಣ ಮಾಡುತ್ತಿರುವ ನಾಯಕನಟರೇ? ತಮ್ಮ ನಾಯಕನಟನಿಗಾಗಿಯೇ ಚಿತ್ರವನ್ನು ನೋಡುತ್ತಿರುವ ವೀಕ್ಷಕರೇ? ಬದಲಾವಣೆ ಯಾರಲ್ಲಿ ತರುವುದು?  ನಿಜ! ಇದು ಕೂಡ ಒಂದು ಟೀಮ್ ವರ್ಕ್. ಸಿನೆಮಾವು ಉನ್ನತ ಕಲಾಪ್ರಕಾರ ಎಂಬುದರ ಅರಿವು ಎಲ್ಲರಲ್ಲಿಯೂ ಮೂಡಬೇಕು. ಆ ನಿಟ್ಟಿನಲ್ಲಿ ಸಂವಾದ.ಕಾಮ್ ರವರ ಕೆಲವು ಕಾರ್ಯಕ್ರಮಗಳು ಶ್ಲಾಘನೀಯ.

ಇವುಗಳಲ್ಲೊಂದು ‘ಸಿನೆಮಾ ಓದುವುದು!’. ಪುಸ್ತಕವೊಂದನ್ನು ಓದುತ್ತಾ, ಓದುತ್ತಾ ಕಲ್ಪನೆಯಲ್ಲಿ ನಾವು ಹೇಗೆ ಅವುಗಳನ್ನು ದೃಶ್ಯಗಳನ್ನಾಗಿಸಿಕೊಳ್ಳುತ್ತೇವೆಯೋ, ಆ ದೃಶ್ಯಗಳು ನಮಗೊಂದು ಒಳನೋಟಗಳನ್ನು ಹೇಗೆ ಕೊಡುತ್ತವೆಯೋ? ಹಾಗೆಯೇ, ಸಿನೆಮಾಗಳ ದೃಶ್ಯಗಳನ್ನು ನೋಡುತ್ತ, ನೋಡುತ್ತಾ, ಕಲ್ಪನೆಯಲ್ಲಿ ಅವು ಕೊಡುವ ಒಳಾರ್ಥಗಳನ್ನು ಓದುವುದು!  ಪುಸ್ತಕಗಳನ್ನು ಓದುವುದರಿಂದ, ಆ ಮೂಲಕ ಅವು ಕೊಡುವ ಒಳನೋಟಗಳನ್ನು ಅರ್ಥ ಮಾಡಿಕೊಳ್ಳುತ್ತಾ, ನಮ್ಮ ಜ್ಞಾನವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತೇವೆಯೋ ಹಾಗೆಯೇ ಸಿನೆಮಾಗಳನ್ನು ನೋಡುತ್ತಾ, ಅವುಗಳ ಒಳಾರ್ಥಗಳಿಂದ ನಮ್ಮ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಲು ಸಾಧ್ಯ! ಪುಸ್ತಕಗಳು ಬೀರುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಭಾವವನ್ನು ಸಿನೆಮಾಗಳು ಕೂಡ ಬೀರಬಲ್ಲುದು. ಸಾಲು ಸಾಲಾಗಿ ಕನ್ನಡ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸೋಲುತ್ತಿರುವ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ.  ‘ಸಿನೆಮಾಗಳನ್ನು ಓದುವುದರ’ ಮೂಲಕ ಪ್ರಜ್ಞಾವಂತ ವೀಕ್ಷಕರು ಹುಟ್ಟಿಕೊಳ್ಳುತ್ತಾರೆ. ಎಲ್ಲಿ ಪ್ರಜ್ಞಾವಂತ ವೀಕ್ಷಕರು ಇರುತ್ತಾರೋ, ಆಗ ಸಿನೆಮಾ ನಿರ್ಮಾಣದ ತಂಡಗಳು ಕೂಡ ಪ್ರಜ್ಞಾವಂತರಾಗಿಯೇ ಕೆಲಸ ಮಾಡಬೇಕಾದ ಅಗತ್ಯ ಹುಟ್ಟಿಕೊಳ್ಳುತ್ತದೆ. ಈ ಮೂಲಕ ನಮ್ಮ  ಸಿನೆಮಾಗಳು ಕೂಡ ಅತ್ಯುತ್ತಮ ಕಲಾಪ್ರಕಾರವಾಗಿ ನಮ್ಮ ಸಂಸ್ಕೃತಿಯಲ್ಲಿ ನೆಲೆ ನಿಲ್ಲುತ್ತವೆ. ಈ ಆಶಯದಲ್ಲಿಯೇ ಸಂವಾದ.ಕಾಮ್ ಹಾಗೂ ಗೆಳೆಯರು, ತಾವು ಓದಿದ ಸಿನೆಮಾಗಳನ್ನು, ಪುಸ್ತಕದ ಮೂಲಕ ಮುಂದಿಡುತ್ತಿದ್ದಾರೆ.  ಅವರು ಅದನ್ನು ಹೇಗಾದರೂ ಓದಿರಲಿ,  ಅವರು ಓದಿದ್ದು ನಮಗರ್ಥವಾಗದಿದ್ದರೂ, ಅಥವಾ ಅದೇ ಸಿನೆಮಾಗಳನ್ನು ನಾವು ನೋಡುವಾಗ, ಅವರು ಬರೆದಿರುವುದಕ್ಕಿಂತ ಭಿನ್ನವಾಗಿಯೇ ನಾವು ಓದಿಕೊಂಡರೂ, ‘ಸಿನೆಮಾಗಳನ್ನು ಓದಲು ಸಾಧ್ಯ!’ ಎಂಬುದು ನಮಗೆಲ್ಲರಿಗೂ ಅರ್ಥವಾದರೆ, ಅವರ ಈ ಪ್ರಯತ್ನಕ್ಕೊಂದು ಜಯ.  


Sunday, November 11, 2012

ದೀಪಾವಳಿಯ ಸಂಭ್ರಮ


ದೀಪಾವಳಿ ಎಂದೊಡನೆಯೇ ನನಗೆ ಮೊದಲು ನೆನಪಾಗುವುದು ದೀಪಾವಳಿ ವಿಶೇಷಾಂಕ ಹಾಗೂ ಎಣ್ಣೆಸ್ನಾನ. ಮನೆ ತುಂಬಾ ಮಕ್ಕಳಿದ್ದರಿಂದ, ಗಲಾಟೆ ಆಗುತ್ತದೆಯೆಂದು ಅಮ್ಮ ಮೊದಲೇ ಒಂದು ರೂಲ್ ಮಾಡಿಟ್ಟಿದ್ದಳು.  ದೊಡ್ಡವರಿಗೆ ಅಂದರೆ ನನ್ನ ಅಣ್ಣಂದಿರಿಗೆ ಎಲ್ಲದಕ್ಕೂ ಪ್ರಾಮುಖ್ಯತೆ ಹೆಚ್ಚು.   ದೊಡ್ಡ ಅಣ್ಣಂದಿರಿಗೆ ಅಮ್ಮನ ರೂಲ್ ನಿಂದಾಗಿ ಮೊದಲಿಗೆ ವಿಶೇಷಾಂಕ ಓದಲು ಸಿಗುತ್ತಿತ್ತು. ಅಕ್ಕ ಸ್ವಲ್ಪ ಬಜಾರಿ. ಹಾಗಾಗಿ ಅವಳಿಗಂತೂ ಯಾವ ರೂಲ್ ಕೂಡ ಅನ್ವಯ ಆಗುತ್ತಿರಲಿಲ್ಲ.  ಆದರೆ ಮಿಕ್ಕೆಲ್ಲಕ್ಕೂ ಬಜಾರಿತನವನ್ನು ಉಪಯೋಗಿಸಿಕೊಳ್ಳುತ್ತಿದ್ದ ಅಕ್ಕ, ಪುಸ್ತಕಗಳ ತಂಟೆಗೆ ಮಾತ್ರ ಬರುತ್ತಿರಲಿಲ್ಲ.  ಇನ್ನೂ  ಕೊನೆಯ ಅಣ್ಣನಿಗೂ, ನನಗೂ ವಯಸ್ಸಿನ ಅಂತರ ಸ್ವಲ್ಪ ಕಡಿಮೆಯಾದ್ದರಿಂದ ಅವನ ದೊಡ್ಡತನಕ್ಕೆ ನನ್ನ ಬಳಿ ಬೆಲೆ ಇರಲಿಲ್ಲ. ಎಣ್ಣೆಸ್ನಾನಕ್ಕೆ ಬೇಗ ಎದ್ದವರೂ ಮಿಕ್ಕೆಲ್ಲರ ಸ್ನಾನ ಆಗುವವರೆಗೆ ಪುಸ್ತಕವನ್ನು ಯಾವುದೇ ಅಡಚಣೆ ಇಲ್ಲದೆ ಓದಲಾಗುತ್ತಿತ್ತು.  ನನಗೂ, ಕೊನೆಯ ಅಣ್ಣನಿಗೂ ಬೇಗ ಏಳುವುದರಿಂದ ಹಿಡಿದು ಎಣ್ಣೆ ಹಚ್ಚುವಾಗಿನ ಸಂಭ್ರಮ, ಸ್ನಾನ ಎಲ್ಲದರಲ್ಲಿಯೂ ಸ್ಪರ್ಧೆ ಇರುತ್ತಿತ್ತು.  ಅಮ್ಮ ಈ ರಂಪರಾಮಾಯಣವೇ ಬೇಡವೆಂದು ಇಬ್ಬರಿಗೂ ಒಟ್ಟಿಗೆ ಎಣ್ಣೆ ಹಚ್ಚಿ, ನೆನೆಯಲು ಬಿಡುತ್ತಿದ್ದಳು. ಇಬ್ಬರೂ ಎಣ್ಣೆ ಹಚ್ಚಿದ ನಂತರ ಮೈ ಮೇಲೆಲ್ಲಾ ಜಾಮಿಟ್ರಿಯ ಚಿತ್ರಗಳನ್ನು ಬರೆದುಕೊಂಡು ಸಂಭ್ರಮಿಸುತಿದ್ದೆವು.  ನಂತರ ಬಿಸಿ ನೀರಿನ ಸ್ನಾನ!

ಆಗ ಬೆಂಗಳೂರಿನಲ್ಲಿ ನೀರಿಗೆ ಕೊರತೆಯಿರಲಿಲ್ಲ. ನಾವಿದ್ದದ್ದು ಮೆಜೆಸ್ಟಿಕ್ ನ ವಠಾರವೊಂದರಲ್ಲಿ. ದಿನದ ೨೪ ಗಂಟೆಗಳೂ! ನೀರು ಕೊಳಾಯಿಗಳಲ್ಲಿ ಬರುತ್ತಲೇ ಇತ್ತು. ನೀರು ತುಂಬುವ ಹಬ್ಬವೆಂದು ಅಕ್ಕಪಕ್ಕದ ಮನೆಯವರೆಲ್ಲರೂ ಸೇರಿ ಹಿಂದಿನ ದಿವಸವೇ ಬೀದಿಗಳಿಂದ ಹಿಡಿದು, ಇಡೀ ಮನೆ, ಬಚ್ಚಲು ಮನೆ ಎಲ್ಲವನ್ನೂ ತೊಳೆದು, ಹಂಡೆಯನ್ನು ಅತ್ಯಂತ ಚಂದದಲ್ಲಿ ತೊಳೆದು ನೀರು ತುಂಬಿಸಲಾಗುತ್ತಿತ್ತು. ಬಡವ ಬಲ್ಲಿದ ಬೇಧವಿಲ್ಲದೆ ಎಲ್ಲರೂ ಅತ್ಯಂತ ಖುಷಿಯಿಂದ ಬೀದಿ ತೊಳೆಯುವುದರಲ್ಲಿ ಪಾಲ್ಗೊಳ್ಳುತ್ತಿದ್ದರು. ಸೂರ್ಯೋದಯಕ್ಕೂ ಮುನ್ನಾ ಸ್ನಾನ ಆಗಬೇಕಾದದ್ದರಿಂದ (ನರಕಾಸುರನ ಕಥೆಯಲ್ಲಿದೆ ಅಂತೆ),  ಮೊದಲ ಹಂಡೆ ಬಿಸಿ ನೀರು ‘ಬಂಗಾರದ ನೀರು’ ಎಂದು ಅಮ್ಮ ಮೊದಲೇ ಹುರಿದುಂಬಿಸಿ, ನನಗೂ ಮತ್ತೂ ಕೊನೆ ಅಣ್ಣನಿಗೂ ಇದರಲ್ಲಿಯೂ ಸ್ಪರ್ಧೆ! ಅಂತೂ ಇಂತೂ ಇಬ್ಬರನ್ನು ಒಟ್ಟಿಗೆ ಕೂಡಿಸಿ ನೀರೆರೆಯಲು ಆರಂಭಿಸುತ್ತಿದ್ದಳು ಅಮ್ಮ.  ಆಕೆ ಇಡೀ ತಲೆಗೂದಲು ಕೈಗೆ ಬರುವಂತೆ ಸೀಗೆಕಾಯಿ ಹಾಕಿ ಉಜ್ಜಿ, ಉಜ್ಜಿ, ರಪ, ರಪ ಎಂದು ಕೈ ಅಡ್ಡ ಇಟ್ಟು ಚೊಂಬಿನಿಂದ ನೀರನ್ನು ತಲೆಯ ಮೇಲೆ ಹಾಕುತ್ತಿದ್ದ ಶೈಲಿಗೆ ಕಣ್ಣುಗಳಲ್ಲಿ ಸೀಗೆಕಾಯಿ ಹೋಗಿ ಕಣ್ಣುರಿಯಲು ಆರಂಭವಾಗುತ್ತಿತ್ತು. ಆದರೂ ಆ ಚಳಿಗೆ ತಲೆಯ ಮೇಲೆ ಬಿಸಿನೀರು ಬೀಳುತ್ತಿದ್ದದ್ದು, ಎಷ್ಟು ಹಂಡೆ ನೀರು ಖಾಲಿಯಾದರೂ ಎದ್ದೇಳಲು ಮನಸ್ಸೇ ಬರುತ್ತಿರಲಿಲ್ಲ. ಕೊನೆಗೆ ನೀರು ಹಾಕಿ, ಹಾಕಿ ಸೋತ ಅಮ್ಮನೇ ನಮ್ಮನ್ನು ಕಳಿಸಬೇಕಿತ್ತು! ಆಕೆ ಉಜ್ಜುವಾಗ ಉರಿಯಾಗಿ ನಾವೇನಾದರೂ ಸ್ವಲ್ಪ ನಕಾರ ಮಾಡಿದರೆ, ತನ್ನ ತವರು ಮನೆಯ ದೀಪಾವಳಿಯ ಸಂಭ್ರಮ, ತನ್ನ ಅಪ್ಪ ಬಾವಿಯಲ್ಲಿ ನೀರು ಸೇದಿ ಹಾಕುತ್ತಿದ್ದದ್ದು, ತನ್ನ ಅಮ್ಮ ಹಾಕುತ್ತಿದ್ದ ಕುದಿಯುತ್ತಿತ್ತು ಎಂದೇ ಹೇಳಬಹುದಾದಷ್ಟು ಬಿಸಿನೀರು ಎಲ್ಲವನ್ನೂ ಹೇಳುತ್ತಾ ಕೊನೆಗೆ ಆಕೆಯ ದೊಡ್ಡಪ್ಪ ಈ ಸಮಯದಲ್ಲಿ ಬಂದರೆ ತನಗಾಗುತ್ತಿದ್ದ ಭಯ, ಆತ ತಲೆ, ಮೈ ಉಜ್ಜುತ್ತಿದ್ದ ಶೈಲಿ, ಅದರಿಂದ ಮೈಕೈ ಎಲ್ಲವೂ ಕೆಂಪಾಗಿ ಉರಿಯುತ್ತಿದ್ದದ್ದು ಇದೆಲ್ಲವನ್ನು ಪ್ರತಿ ವರ್ಷವೂ ಆಕೆ ಹೇಳಿ, ಹೇಳಿ, ನಮಗದು ಬಾಯಿ ಪಾಠವಾಗಿಬಿಡುತ್ತಿತ್ತು. ಈಗ ಆಕೆಯ ಮೈಯಲ್ಲಿ ಕಸುವಿಲ್ಲ, ಬಹುಶಃ ಆಕೆ ಮನಸ್ಸು ಮಾಡಿದರೂ, ಸಮಯವಿಲ್ಲದ ನಮಗೆ, ದೂರದೇಶದಲ್ಲಿರುವ ಅಣ್ಣನಿಗೆ?! ನಮ್ಮಲ್ಲಿ ತಾಳ್ಮೆಯಿಲ್ಲ. ಎಲ್ಲವೂ ನೆನಪು ಮಾತ್ರ. ಆದರೂ ಅಮ್ಮ ಈಗಲೂ ಎಣ್ಣೆ ಸ್ನಾನ ಮಾಡಿಕೊಳ್ಳಲು ಹಠ ಮಾಡುವ ಮೊಮ್ಮಕ್ಕಳಿಗೆ, ತನ್ನ ತವರುಮನೆ ಕತೆ ಹೇಳದೇ ಬಿಡಳು. ಅವರಿಗೂ ಆ ಕತೆ ಬಾಯಿಪಾಠವಾಗುತ್ತಿದೆ.

ಸ್ನಾನ ಮಾಡಿದ ಕೂಡಲೇ ಓಡಿ ಹೋಗಿ ಒಂದೇ ಒಂದು ಬಿಜಲಿ ಪಟಾಕಿ ಹಚ್ಚುವುದು. ಇಡೀ ವಠಾರದಲ್ಲಿ ಎಲ್ಲಾ ಗೆಳೆಯರಿಗೂ ಸ್ಪರ್ಧೆ, ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಯಾರು ಪಟಾಕಿ ಹಚ್ಚುವರು ಅವರಿಗೊಂದು ಹೆಮ್ಮೆ!  ಮೊದಮೊದಲಿಗೆ ಅಪ್ಪನ ಸಂಬಳ ಚೆನ್ನಾಗಿದ್ದಾಗ ಡಬ್ಬ, ಡಬ್ಬ ಪಟಾಕಿ ತರುವುದು ಆತನಿಗೊಂದು ಖಯಾಲಿ.  ಇಡೀ ವಠಾರಕ್ಕೆ ನಮ್ಮ ಮನೆಯಲ್ಲಿಯೇ ಹೆಚ್ಚಿನ ಪಟಾಕಿ ತರುತ್ತಿದ್ದದ್ದು. ಕರಾವಳಿಯಿಂದ ಬಂದ ಅಮ್ಮನಿಗೆ ಪಟಾಕಿ ಹೊಡೆಯುವುದು ಅಷ್ಟೊಂದು ಇಷ್ಟವಿಲ್ಲದ್ದು, ಪದ್ಧತಿಯಿಲ್ಲದಕ್ಕೋ ಅಥವಾ ಹಣ ಸುಖಾಸುಮ್ಮನೇ ದಂಡವಾಗುತ್ತಿದೆ ಎನ್ನುವ ಸಂಕಟಕ್ಕೋ, ಅಪ್ಪ ಕುಡಿದು ಪಟಾಕಿ  ಹಚ್ಚುತ್ತಾರೆ ಎನ್ನುವ ನೋವಿಗೋ ಅಪ್ಪ, ಅಮ್ಮನಿಗೆ ಈ ವಿಷಯದಲ್ಲಿ ಸ್ವಲ್ಪ ಕಿರಿಕ್ ಆಗುತ್ತಿತ್ತು.  ಜಗಳ ಇಷ್ಟವಿಲ್ಲದ ಅಮ್ಮ ಇದಕ್ಕೆ ಕಂಡುಕೊಂಡ ಉಪಾಯವೆಂದರೆ, ದೀಪಾವಳಿಯ ೩ ರಾತ್ರಿಗಳು ಕೂಡಾ ಮನೆಮಂದಿಯನ್ನೆಲ್ಲಾ ಕರೆದುಕೊಂಡು ಹೊಸದಾಗಿ ರಿಲೀಸ್ ಆದ ಸಿನೆಮಾಗಳಿಗೆ ಹೋಗುವುದು.  ಆದರೂ ಸಿನೆಮಾಕ್ಕೆ ಹೋಗಿ ಬಂದು, ಕುಡಿದು, ಅದೇ ಮತ್ತಿನಲ್ಲಿ ವಠಾರದ ಮಂದಿಯನ್ನೆಲ್ಲಾ ಎಬ್ಬಿಸಿ, ಪಟಾಕಿ ಹಚ್ಚುತ್ತಿದ್ದ ಅಪ್ಪ!  ಈಗಲೂ ನನಗೆ ಪಟಾಕಿ ಎಂದರೆ ಕಣ್ಮುಂದೆ ಬರುವುದು ಅಪ್ಪ ತರುತ್ತಿದ್ದ ಸಾವಿರ ಪಟಾಕಿಗಳ ಸರಮಾಲೆ, ನಮ್ಮ ಮನೆಯ ಬಳಿ ಇಟ್ಟರೆ ವಠಾರದ ಅರ್ಧಕ್ಕೂ ಅದರ ಉದ್ಧ, ಅದರ ಶಬ್ಧ! ಇಷ್ಟನ್ನು ಬಿಟ್ಟರೆ ನಾನು ತೀರಾ ಚಿಕ್ಕವಳಿದ್ದರಿಂದ ಇದ್ಯಾವುದೂ ನನ್ನ ಗಮನಕ್ಕೆ ಬರುತ್ತಲೇ ಇರಲಿಲ್ಲ. ಈಗ ಹಿಂದಿರುಗಿ ನೋಡಿದಾಗ ನಾನು ಅಪ್ಪನ ಕಾಲದಲ್ಲಿ ಅಷ್ಟೊಂದು ಪಟಾಕಿ ಹೊಡೆದದ್ದು ಇಲ್ಲವೆನ್ನಬೇಕು. ಅಣ್ಣಂದಿರೇ ಹೆಚ್ಚು ಮಜಾ ಅನುಭವಿಸಿದ್ದರು.

ಅಪ್ಪನಿಗೆ ಆತನ ಸಂಬಂಧಿಕರು ಮೋಸ ಮಾಡಿ, ಅದೇ ಕೊರಗಿನಲ್ಲಿ ತೀರಿಕೊಂಡರು.  ಆತ ತೀರಿಕೊಂಡ ನಂತರ ಸಣ್ಣ ವಯಸ್ಸಿಗೆ ದುಡಿಯಲು ಶುರು ಮಾಡಿದ ಅಣ್ಣಂದಿರು ಕೊಡುತ್ತಿದ್ದ ೫ ರೂಪಾಯಿಗಳು, ನಮಗೆ ಅತ್ಯಮೂಲ್ಯವಾಗಿ ಕಾಣಿಸುತಿತ್ತು. ಅಕ್ಕ ಹಾಗೂ ನಾನು, ನಮಗೆ ಪಟಾಕಿ ಬೇಡವೆಂದು ೫ ರೂಪಾಯಿಗಳಲ್ಲಿ ನಮಗೆ ಬೇಕಾದ ಸರ, ಕ್ಲಿಪ್, ಬಳೆ ಇತ್ಯಾದಿಗಳನ್ನು ಕೊಂಡುಕೊಳ್ಳುತ್ತಿದ್ದೆವು. ಒಮ್ಮೆ ದೀಪಾವಳಿಯ ಹಿಂದಿನ ದಿವಸ, ಕ್ಲಿಪ್ ತರಲು ಹೋದಾಗ, ಏನಾಯಿತೋ ಏನೋ ಗೊತ್ತಿಲ್ಲ, ಬಳೆ ಅಂಗಡಿಯಲ್ಲಿ ಒಂದರ ಮೇಲೊಂದು ಪೇರಿಸಿಟ್ಟಿದ್ದ ಗಾಜಿನ ಬಳೆಗಳು ಕೆಳಗೆ ಬಿದ್ದು ಚೂರುಚೂರಾಗಿಬಿಟ್ಟಿತ್ತು. ಅದರ ಪಕ್ಕದಲ್ಲೇ ಇದ್ದ ನನಗೆ ‘ಶುಕ್ರವಾರ ಬೇರೆ, ಸಂಜೆಯ ಹೊತ್ತು, ಜೊತೆಗೆ ದೀಪಾವಳಿ! ಬಳೆಗಳಿಗೆ ಒರಗಿ ಬೀಳಿಸಿಬಿಟ್ಟೆಯಾ? ಎಂದೂ ಎರ್ರಾಬಿರ್ರಿ ಅಂಗಡಿಯವಳ ಕೈಯಲ್ಲಿ ಬೈಸಿಕೊಂಡು, ನಾನಲ್ಲವೆಂದೂ ಹೇಳಿದರೂ ಆಕೆ ನಂಬದೆ, ಅಲ್ಲಿಂದ ಓಡಿಸಿಬಿಟ್ಟಿದ್ದಳು.  ಅದೇ ನೋವಿನಲ್ಲಿ ಮತ್ತೊಂದು ಅಂಗಡಿಗೆ ಹೋಗಿ ಕ್ಲಿಪ್, ಬಳೆಗಳನ್ನು ಮನೆಗೆ ತಂದು, ಚಿಲ್ಲರೆ ನೋಡಿದಾಗ, ಆತ ೧೦ ರೂಪಾಯಿಗಳನ್ನು ನನಗೆ ಹೆಚ್ಚಿಗೆ ವಾಪಸ್ಸು ಕೊಟ್ಟಿದ್ದು ನೋಡಿ, ಬೇರೆಯವರ ಹಣ ಇಟ್ಟುಕೊಳ್ಳಬಾರದೆಂದು ಯೋಚಿಸಿ (ಎಷ್ಟೇ ಆಸೆಯಾದರೂ!), ಆತನಿಗೆ ವಾಪಾಸು ಕೊಟ್ಟಿದ್ದು, ಅಮ್ಮ ಕಲಿಸಿದ ನಿಯತ್ತಾಗಿತ್ತು. ಅದೊಂದು ಸಾರ್ಥಕತೆಯನ್ನು ಕೊಟ್ಟಿತ್ತು. 

ಇನ್ನೂ ಅಣ್ಣನ ಪಾಲಾದ ೫ ರೂಪಾಯಿಗೆ ತರುತ್ತಿದ್ದ ಪಟಾಕಿ, ನಮ್ಮಿಬ್ಬರಿಗೆ ಸಾಕಾಗುತ್ತಿತ್ತು. ಇಬ್ಬರೂ ಬೆಳ್ಳಂಬೆಳಗ್ಗೆ ಹಣ ಹಿಡಿದು, ಚಿಕ್ಕ ಲಾಲ್ ಬಾಗ್ ಗೆ ಹೋಗಿ, ಯಾವುದನ್ನೂ ಕೊಂಡುಕೊಂಡರೆ ಹೆಚ್ಚಿನ ಪಟಾಕಿ ದೊರೆಯುವುದು ಎಂಬುದನ್ನೆಲ್ಲಾ ಯೋಚಿಸಿ, ಚರ್ಚಿಸಿ, ಆಟಮ್ ಬಾಂಬ್ ಗಳೆಲ್ಲಾ ಆತನಿಗೆ, ಸುರುಸುರುಬತ್ತಿ ಅಂಥವೆಲ್ಲಾ ನನಗೆ ಎಂದು ನಿರ್ಧರಿಸಿ ತರುವಷ್ಟರಲ್ಲಿ ಮಧ್ಯಾಹ್ನವಾಗಿರುತ್ತಿತ್ತು. ಒಂದೇ ದಿವಸ ಹೊಡೆದು ಮುಗಿಸಿದರೆ ಇನ್ನೂ ಉಳಿದ ೨ ದಿವಸಗಳಿಗೆ ಏನು ಮಾಡುವುದು? ಎಂದು ಅಣ್ಣ ಇಷ್ಟಿಷ್ಟೇ ಪಟಾಕಿ ಹೊಡೆಯುತ್ತಿದ್ದ. ಸರ ಪಟಾಕಿ ತಂದು ಅದನ್ನು ಬಿಡಿಸಿಟ್ಟುಕೊಂಡು ಒಂದೊಂದೇ ಪಟಾಕಿ ಹೊಡೆಯುತ್ತಿದ್ದೆವು. ಆದರೂ ಅರ್ಧ ಗಂಟೆಯಲ್ಲಿ ನಮ್ಮಲ್ಲಿರುವ ಪಟಾಕಿ ಮುಗಿದು ಬಿಡುತ್ತಿತ್ತು. ಇನ್ನುಳಿದ ಸಮಯವನ್ನೇನು ಮಾಡುವುದು? ನಮ್ಮ ವಠಾರದ ಹಿಂದೆ ಒಂದಷ್ಟು ಶ್ರೀಮಂತ ಹಿಂದಿಯವರ ಮನೆಗಳಿದ್ದವು.  ಅವರ ಮನೆಯ ಮುಂದೆ ಆಚೀಚೆ ಒಂದಷ್ಟು ಹೊತ್ತು ಸುಳಿದಾಡುವುದು, ಅವರು ಪಟಾಕಿ ಹೊಡೆಯುವಾಗ ನಿಂತು ನೋಡುವುದು, ಅವರಿಗೆ ಕರುಣೆ ಉಕ್ಕಿ ಬಂದು ಕೊಟ್ಟರೆ ನಾವು ಕೂಡ ಹೊಡೆಯುವುದು, ಇಲ್ಲವಾದರೆ ಠುಸ್ ಆದ ಅವರ ಪಟಾಕಿಗಳೆಲ್ಲವನ್ನೂ ಆರಿಸಿ ತಂದು, ಅದರ ಮದ್ಧನ್ನು ಒಂದು ಪೇಪರಿಗೆ ನಿಧಾನವಾಗಿ ಸುರಿದು, ಆ ಪೇಪರ್ ಗೆ ಬೆಂಕಿ ಹಚ್ಚಿ ಮಜಾ ನೋಡುವುದು!  ಒಮ್ಮೆಯಂತೂ ಹೀಗೆ ಪೇಪರ್ ಗೆ ಸುರಿದ ಮದ್ಧು ಹೆಚ್ಚಾಗಿ, ಅಣ್ಣನ ಮುಖದ ಹತ್ತಿರದವರೆಗೆ ಬೆಂಕಿ ಬಂದು, ಭಯವಾಗಿತ್ತು.  ಪುಣ್ಯಕ್ಕೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ. ಈಗ ಪಟಾಕಿ ಹೊಡೆಯುವ ಮನೆಗಳ ಮುಂದೆ, ಮಕ್ಕಳು ಸುಳಿದಾಡುತ್ತಿದ್ದರೆ ಏಕೋ ಏನೋ, ಆ ಮುಖಗಳಲ್ಲಿ ನನಗೆ, ನನ್ನ ಹಾಗೂ ಅಣ್ಣನ ಮುಖಗಳೇ ಕಾಣಿಸುತ್ತವೆ.  ನಮ್ಮ ಮನೆಯಲ್ಲಿರುವ ಪಟಾಕಿಗಳನ್ನು ಒಂದಿಷ್ಟೂ ಹೆಚ್ಚಿಗೆ ಕೊಟ್ಟು ಕಳುಹಿಸುವಾಗ, ಮನಕ್ಕೆ ತೃಪ್ತಿ ದೊರೆಯುತ್ತದೆ.

ವಠಾರದ ಮಕ್ಕಳೆಲ್ಲರಿಗೂ ರಜೆಯಾದ್ದರಿಂದ ನಮ್ಮನ್ನು ಹೇಳುವವರು, ಕೇಳುವವರು ಯಾರೂ ಇರುತ್ತಿರಲಿಲ್ಲ.  ಅಲ್ಲೊಂದು ಮೂಲೆಯಲ್ಲಿ ಅಜ್ಜಿ, ತಾತ ಇಬ್ಬರೇ ಮನೆ ಮಾಡಿಕೊಂಡಿದ್ದರು. ಅವರಿಗೆ ಮಕ್ಕಳಿರಲಿಲ್ಲ.  ತಾತನಿಗೆ ಏಳಲು ಕೂಡ ಆಗುತ್ತಿರಲಿಲ್ಲ. ಮಲಗೇ ಇದ್ದರೂ, ತಾತನ ರೋಷಕ್ಕೇನೂ ಕಡಿಮೆ ಇರಲಿಲ್ಲ. ಮಕ್ಕಳು ಆಟ ಆಡಿದರೂ, ಬೈಯುವುದು, ಕೂಗಿಕೊಳ್ಳುವುದು ಎಲ್ಲವನ್ನೂ ಮಾಡುತ್ತಿದ್ದರು.  ಹಾಗಾಗಿ ದೀಪಾವಳಿ ಬಂದರೆ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಚಟ ಎಲ್ಲಾ ಮಕ್ಕಳಿಗೂ! ಅವರ ಮನೆಯ ಮುಂದೆ ಬೇಕಂತಲೇ ಈರುಳ್ಳಿ ಬಾಂಬುಗಳನ್ನು ಇಟ್ಟು ಹೊಡೆಯುವುದು, ಆಚೀಚೆ ಪೋಲೀಸರು ಓಡಾಡುವ ಸಮಯದಲ್ಲಿ ಸೆಗಣಿಯಲ್ಲಿ ಪಟಾಕಿ ಇಟ್ಟು ಹೊಡೆಯುವುದು, ಡಬ್ಬದೊಳಗೆ ಪಟಾಕಿ ಇಟ್ಟು ಹೊಡೆಯುವುದು, ಒಂದೇ, ಎರಡೇ, ಇದೆಲ್ಲವೂ ತಪ್ಪು ಎಂಬುದೂ ನಮಗೆ ತಿಳಿದಿರಲಿಲ್ಲಾ.  ಯಾರೂ ಎಷ್ಟು ಕಿತಾಪತಿ ಮಾಡಿ ಪಟಾಕಿ ಹೊಡೆಯುತ್ತಾರೋ ಎಂಬುದಷ್ಟೇ ಮುಖ್ಯವಾಗಿತ್ತು.  ನಾವು ಮಕ್ಕಳು ಎಷ್ಟೇ ಕಿತ್ತಾಟ ಮಾಡಿಕೊಂಡರೂ, ನಮ್ಮ ಈ ಕಿತಾಪತಿ ವಿಷಯಗಳು ದೊಡ್ಡವರ ಬಳಿ ಹೋಗುತ್ತಿರಲಿಲ್ಲ. ಅಜ್ಜಿ ಬಂದು ದೂರುವಾಗ ನಾವೆಲ್ಲರೂ ಒಗ್ಗಟ್ಟಿನಿಂದ ನಮಗೇನೂ ತಿಳಿಯದು ಎಂಬಂತೆ ಮುಖ ಮಾಡಿಕೊಂಡು ಮುಗ್ಧರಂತೆ ನಿಲ್ಲುತ್ತಿದ್ದದ್ದು, ದೊಡ್ಡವರಿಗೆ ಪಾಪ! ಆಕೆಗೆ ಮಕ್ಕಳಿಲ್ಲದ ಹೊಟ್ಟೆ ಉರಿಗೆ, ಈ ಮಕ್ಕಳ ಮೇಲೆ ದ್ವೇಷ ಸಾಧಿಸುತ್ತಾಳೆ! ಎಂಬಷ್ಟು ಅಜ್ಜಿ ತಪ್ಪಿತಸ್ಥೆಯಾಗಿಬಿಡುತ್ತಿದ್ದಳು. ಈಗಿನ ಮಕ್ಕಳೆಲ್ಲರಿಗೂ ಈ ಪಟಾಕಿ, ಮಕ್ಕಳ ಗುಂಪು, ಆಟ ಎಲ್ಲವೂ ವಿಡಿಯೋಗಳ ಒಳಗಿನ ಕ್ಲಿಪ್ಪಿಂಗ್ಸ್ ಗಳಂತೆ, ಜೊತೆಗೆ ಶಾಲೆಯಲ್ಲಿ ಹೇಳಿ ಕೊಡುವ ಪಟಾಕಿಯಿಂದಾಗುವ ಪರಿಸರ ಹಾನಿ, ಅರ್ಥವಾಗುತ್ತದೆಯೋ ಇಲ್ಲವೋ, ಟೀಚರ್ಸ್ ಗಳನ್ನು ಮೆಚ್ಚಿಸಬೇಕೆನ್ನುವ ಹಂಬಲ, ಎಲ್ಲಕ್ಕಿಂತ ಹೆಚ್ಚಾಗಿ ಬಿಪಿಒ ಕಂಪೆನಿಗಳು, ಸಾಫ್ಟ್ ವೇರ್ ಕಂಪೆನಿಗಳು ನಮ್ಮ ಹಬ್ಬಗಳಿಗೆ ನೀಡದ ರಜೆಗಳು (ಅಮೇರಿಕಾದಲ್ಲಿ ರಜೆ ಇದ್ದರೆ ಮಾತ್ರ ಇಲ್ಲಿಯವರಿಗೂ ಇರುವ ರಜೆ!), ಈ ಎಲ್ಲಾ ಥ್ರಿಲ್ ಗಳನ್ನು ಕಡಿಮೆ ಮಾಡುತ್ತಿವೆ ಎಂದರೆ ತಪ್ಪಾಗಲಾರದು. ಈಗ ದೀಪಾವಳಿ ಎಂದರೆ ಮತ್ತೊಂದು ರಜೆಯಷ್ಟೇ!

Monday, October 29, 2012

ಉತ್ಸವ - ಭಾಗ ೧


ತುಮಕೂರಿನ ಬಳಿಯೊಂದು ಪುಟ್ಟ ಹಳ್ಳಿ, ಅಲ್ಲೊಂದು ಪುಟ್ಟದೊಂದು ಗುಡಿ. ಈ ಗುಡಿಯ ಆಡಳಿತ, ಪೂಜೆ, ಕೆಲಸ, ಕಾರ್ಯಗಳೆಲ್ಲವನ್ನೂ ಪುಟ್ಟ ಕುಟುಂಬ ವರ್ಗವೊಂದು ನೋಡಿಕೊಳ್ಳುತ್ತದೆ.  ಈ ಕುಟುಂಬ ವರ್ಗವು ರಾಮಾನುಜಚಾರ್ಯರ ಅನುನಾಯಿಗಳಾದ ಆಳ್ವಾರುಗಳಿಗೆ ಸೇರಿದ್ದು.  ಇವರನ್ನು ಸಾತಾನಿ ವೈಷ್ಣವರೆಂದು ಕೂಡ ಕರೆಯಲಾಗುವುದು.  ಈ ಗುಡಿಯಲ್ಲಿ ಯಾವುದೇ ಉದ್ಭವ ಮೂರ್ತಿಯಿಲ್ಲ. ತಿರುಪತಿ ವೆಂಕಟರಮಣ ತಮ್ಮ ದೈವವೆಂದು ಹಾಗೂ ಅಲ್ಲಿಗೆ ಯಾವತ್ತಿಗೂ ಹೋಗಿ ಬರಲು ಸಾಧ್ಯವಿಲ್ಲವೆಂದು, ಅಲ್ಲಿಂದ ತಂದ ಕಲ್ಲೊಂದನ್ನು ಇಲ್ಲಿ ಪ್ರತಿಷ್ಠಾಪಿಸಿ, ಕಳ್ಳ ಒಕ್ಕಲು ಮಾಡಿಕೊಂಡಿರುವರು! ರಂಗನಾಥನ ಗುಡಿಯೆಂದು ಹಳ್ಳಿಯಲ್ಲಿ ಪ್ರಸಿದ್ಧಿ.  ಆ ಗುಡಿಯಿರುವ ಜಾಗದ ಮಾಲೀಕರು ಲಿಂಗಾಯಿತರು! ತಮ್ಮ ಕಾಲದ ನಂತರ ಮಕ್ಕಳು ಗಲಾಟೆ ಮಾಡಿ, ಗುಡಿಯನ್ನು ಎಬ್ಬಿಸಿದರೆ ತೊಂದರೆಯಾಗುವುದೆಂದು, ತಾವಿದ್ದ ಕಾಲದಲ್ಲಿಯೇ, ರಿಜಿಸ್ಟ್ರೇಷನ್ ಮಾಡಿಸಲೆಂದು ಹಟ ಮಾಡಿ, ದೇವಸ್ಥಾನದ ಟ್ರಸ್ಟಿಗೆ ಇತ್ತೀಚೆಗೆ ಈ ಜಾಗವನ್ನು ಬಿಟ್ಟುಕೊಟ್ಟಿರುವರು. 

ಜಾಗ ತಮ್ಮದಾದ ಮೇಲೆ, ಇಲ್ಲಿ ಹಬ್ಬ, ಹುಣ್ಣಿಮೆಗಳನ್ನು ಆಚರಿಸದಿದ್ದಲ್ಲಿ, ದೇವರು ಕೋಪ ಮಾಡಿಕೊಳ್ಳುವುದಿಲ್ಲವೇ?! ತಮ್ಮ ದೇವರನ್ನು ಕೂಡ ಪ್ರಖ್ಯಾತಿಗೊಳಿಸಬೇಕಲ್ಲವೇ?! ಇತ್ಯಾದಿ ಜಿಜ್ಞಾಸೆಗಳಿಂದ ಹಾಗೂ ಈಗ ಎಲ್ಲೆಡೆ ನಡೆಯುವಂತೆ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ನಡೆಸಲು ತೀರ್ಮಾನವಾಯಿತು, ಆ ದೇವಸ್ಥಾನದ ಮೇಲೆ ಹಕ್ಕಿರುವ ಹತ್ತಿಪ್ಪತ್ತು ಕುಟುಂಬ ವರ್ಗದವರೆಲ್ಲರನ್ನೂ ಭೇಟಿ ಮಾಡಿ, ಇದು ನಿಮ್ಮ ಕುಟುಂಬದ ದೇವರೆಂದು ಇದಕ್ಕೆ ತಮ್ಮ ಶಕ್ತಾನುಸಾರ ಬೆಂಬಲ ವ್ಯಕ್ತಪಡಿಸಬೇಕೆಂದು ಮನದಟ್ಟುಪಡಿಸಲಾಯಿತು. ಬೇರೆ ಬೇರೆ ಊರಿನಲ್ಲಿ ನೆಲೆಸಿದ್ದು, ಒಂದೇ ಕುಟುಂಬ ವರ್ಗಕ್ಕೆ ಸೇರಿದವರಾದರೂ, ಬಂದು ಹೋಗುವ ಬಳಕೆಯಿಲ್ಲದ ಕಾರಣ, ದೂರವೇ ಆಗಿರುವ ಕುಟುಂಬದವರೆಲ್ಲರನ್ನೂ, ಈ ಕಾರಣದಿಂದ ಒಟ್ಟುಗೂಡಿಸಿ, ಈ ದೇವರಿಗೆ ಅವರು ಹರಕೆ ಹೊತ್ತಿದ್ದಕ್ಕೆ, ಮಗಳಿಗೆ ಮದುವೆ ಆಯಿತು ಎಂದೂ, ಇವರು ಯಾವುದೇ ಶುಭ ಕೆಲಸಕ್ಕೂ ಮುನ್ನ ಈ ದೇವಸ್ಥಾನಕ್ಕೆ ಬಂದು ಹೋಗುವರು, ಹಾಗಾಗಿಯೇ ಇವರಿಗೆ ಒಳ್ಳೆದಾಯಿತು ಎಂದೂ, ದೇವಸ್ಥಾನಕ್ಕೂ, ತಮಗೂ ಸಂಬಂಧವೇ ಇಲ್ಲದಂತಿದ್ದ ಒಂದೇ ಕುಟುಂಬಕ್ಕೆ ಸೇರಿದವರಿಗೆಲ್ಲರಿಗೂ ವಿವರಿಸಿ, ಹಣ ಸಂಗ್ರಹಿಸಿದ್ದಾಯಿತು.  

ಉತ್ಸವ ಮೂರ್ತಿ (ರಂಗನಾಥ) ಯನ್ನು ಪ್ರತಿಷ್ಠಾಪಿಸುವ ದಿವಸ ನಡೆದ ಉತ್ಸವ ಹೀಗಿತ್ತು.  ಮೂರ್ತಿಯನ್ನು ಶುದ್ಧಗೊಳಿಸಿ, ಎಲ್ಲಾ ತರಹದ ಮೈಲಿಗೆಯನ್ನು ತೊಳೆದು, ಶುಚಿ ಮಾಡಿ, ಪೂಜಿಸಿ, ಅಭಿಷೇಕ ಮಾಡಿ, ನಂತರ ಇಡೀ ಹಳ್ಳಿಯಲ್ಲಿ ಈ ದೇವರ ಮೂರ್ತಿಯ ಮೆರವಣಿಗೆ.  ಈ ಮೆರವಣಿಗೆಗಾಗಿ ಕೊಳದಪ್ಪಲೆ ಬಾಳೆಹಣ್ಣಿನ ರಸಾಯನ ತಯಾರು ಮಾಡುತ್ತಾರೆ. ಪ್ರಸಾದಕೆಂದು ಅಲ್ಲ! ಮೆರವಣಿಗೆ ಶುರುವಾದಾಗ ಬಹುಶಃ ಕೊರಗ ಜಾತಿಯ (?!) ಜನರು ಸುಮಾರು ೭, ೮ ಮಂದಿ ಟಮಟೆ ಬಾರಿಸಲು ತೊಡಗುತ್ತಾರೆ. ಇವರನ್ನು ಯಾವುದೋ ಹಳ್ಳಿಯಿಂದ ಉತ್ಸವಕೆಂದೇ ಕರೆಸಲಾಗಿತ್ತು.  ಟಮಟೆ ಬಾರಿಸುತ್ತಾ, ಬಾರಿಸುತ್ತಾ, ಅವರಲ್ಲೇ ೩ ಮಂದಿ ವಿಶೇಷ ವಸ್ತ್ರಧಾರಿಗಳಾಗಿ ಕೈಯಲೊಂದು ಖಡ್ಗ, ಗುರಾಣಿ ಹಿಡಿದು ಆವೇಶಭರಿತರಾಗುತ್ತಾರೆ.  ಈ ಮೂವರಿಗೊಬ್ಬ ನಾಯಕ, ಆತನ ಕೈಯಲೊಂದು ಎಲೆಗಳಿರುವ ಸಣ್ಣ ಗಿಡದ ಕೊಂಬೆ (ಎಕ್ಕದ್ದೋ / ಹಲಸಿನದ್ದೋ?! ತಿಳಿಯಲಿಲ್ಲ).  ಆತ ಇವರನ್ನು ಎಂಥದೋ ಭಾಷೆಯಲ್ಲಿ ನಿಯಂತ್ರಿಸುತ್ತಿರುತ್ತಾನೆ. ಆಗಾಗ ಆ ಕೊಂಬೆಯಿಂದ ಹೊಡೆಯುತ್ತಿರುತ್ತಾನೆ.

ಮುಂದೆ ಟಮಟೆ ಬಾರಿಸುವವರು, ಅವರ ಹಿಂದೆ ಈ ಆವೇಶ ಭರಿತರಾದ ಮೂವರು, ಅವರ ಆವೇಶವನ್ನುನಿರ್ದೇಶಿಸುವ ನಾಯಕ, ಅವರ ಹಿಂದೆ ಈ ಬಾಳೆಹಣ್ಣಿನ ರಸಾಯನ ತಿನ್ನಿಸಲು ಉತ್ಸವದ ರೂವಾರಿ ಅಥವಾ ಉತ್ಸಾಹಿ ಯುವಕರು, ಅವರ ಹಿಂದೆ ದೇವಸ್ಥಾನ ಆಡಳಿತ ಮಂಡಲಿಯ ಮುಖ್ಯಸ್ಥರು, ನಂತರ ಉತ್ಸವ ಮೂರ್ತಿಯ ಪಲ್ಲಕ್ಕಿ, ಇದರ ಹಿಂದೆ ಭಕ್ತರು! ಹೀಗೆ ಮೆರವಣಿಗೆ ಮುನ್ನಡೆಯುತ್ತದೆ. ಈ ಕೈಯಲ್ಲಿ ಖಡ್ಗ, ಗುರಾಣಿ ಹಿಡಿದು ಟಮಟೆಯ ಶಬ್ಧಕ್ಕೆ ಆವೇಶಭರಿತರಾದ ಮೂವರು, ಹನುಮಂತನ ಹಾಗೆ ಮುಖ ಮಾಡುತ್ತಾ, ಸುತ್ತ ನೆರೆದಿರುವವರನ್ನೂ ಹೆದರಿಸುತ್ತಾ, ರಸಾಯನ ನೋಡಿದ ಕೂಡಲೇ, ಅದಕ್ಕೆ ಬಾಯಿ ಹಾಕುತ್ತಾ (ಕೈಯಲ್ಲಿ ಮುಟ್ಟಲಾರರು) ಮುಂದೆ, ಮುಂದೆ ಹೋಗುತ್ತಿರುತ್ತಾರೆ. ಕೈಯಲೊಂದು ತಪ್ಪಲೆ ರಸಾಯನ ಹಿಡಿದು, ಇವರನ್ನು ಆಟವಾಡಿಸುತ್ತಾ, ಅವರಂತೆಯೇ ತಾನು ಕೂಡ ಕುಣಿಯುತ್ತಾ, ಸ್ವಲ್ಪ, ಸ್ವಲ್ಪ ರಸಾಯನವನ್ನು ಕೈಯಲ್ಲಿ ತಿನ್ನಿಸುವುದು ಉತ್ಸವದ ರೂವಾರಿಯ ಕೆಲಸ! ಸ್ವಲ್ಪ ಹೆಚ್ಚಿಗೆ ಇವರನ್ನು ಆಟವಾಡಿಸಿದ ತಪ್ಪಿಗಾಗಿ (ಆ ವ್ಯಕ್ತಿ ಬೇಕೆಂದೇ ಮಾಡಿದ್ದೋ? ತಿಳಿಯಲಿಲ್ಲ),  ರೊಚ್ಚಿಗೆದ್ದ ಆ ಮೂವರಲ್ಲಿ ಒಬ್ಬ, ಈತನನ್ನು ಹಿಡಿದು, ಬೀಳಿಸಿ, ಹೊಡೆದು, ಮೂರ್ಚೆ ಹೋಗಿದ್ದ! ಸಿಟ್ಟಾದ ನಾಯಕ ನಾವಿನ್ನೂ ಮುಂದುವರೆಯುವುದಿಲ್ಲವೆಂದು ಮುಷ್ಕರ ಹೂಡಿದ ಕಾರಣ, ದೇವಸ್ಥಾನದ ಮುಖ್ಯಸ್ಥರು ಎಲ್ಲರ ಕ್ಷಮೆ ಕೇಳಿ, ನಂತರ ಮೆರವಣಿಗೆ ಮೊದಲಿನ ಹಾಗೇ ಮುಂದುವರೆಯಿತು.  

ಇಡೀ ಹಳ್ಳಿಯಲೊಂದು ಸುತ್ತು ಹಾಕಿದ ಉತ್ಸವ ಮೂರ್ತಿಗಳ ಮೆರವಣಿಗೆ, ಹಳ್ಳಿಯಲ್ಲಿದ್ದ ಎಲ್ಲಾ ದೇವಸ್ಥಾನಗಳನ್ನು ದರ್ಶಿಸಿ, ಪೂಜೆ ಮಾಡಿಸಿಕೊಂಡು ತನ್ನ ಸ್ವಸ್ಥಾನಕ್ಕೆ ಮರಳುತ್ತಿತ್ತು. ಆಗ ನಡೆದ ವೈಚಿತ್ರ್ಯವೆಂದರೆ, ಉತ್ಸವ ಮೂರ್ತಿಗಳ ಪಲ್ಲಕ್ಕಿ, ಸುಮಾರು ೨೦ ಮಂದಿ ಅದನ್ನು ಹೊತ್ತಿದ್ದರು ಕೂಡ ಇದ್ದಕ್ಕಿದ್ದಂತೆ ಹಿಂದಕ್ಕೆ ಎಳೆಯತೊಡಗಿತು.  ಯಾರಿಗೂ ಏನೂ ಅರ್ಥವಾಗಲಿಲ್ಲ. ಎಷ್ಟೇ ಕಷ್ಟ ಪಟ್ಟರೂ ಪಲ್ಲಕ್ಕಿಯನ್ನು ಹೊತ್ತವರಿಗೆ ಮುನ್ನಡೆಯಲಾಗಲಿಲ್ಲ.  ಆಗ  ಹಳ್ಳಿಯ ಜನರಲ್ಲಿ ಯಾರೋ ಒಬ್ಬರು, ಅಲ್ಲೊಂದು ಈಶ್ವರನ ಪುಟ್ಟಗುಡಿಯಿದೆ ಎಂದು, ಬಹುಶಃ ಅಲ್ಲಿಗೆ ಹೋಗಬೇಕೆಂದು ಸೂಚಿಸಿದರು. ಪಲ್ಲಕ್ಕಿ ಅತ್ತ ಸಲೀಸಾಗಿ ನಡೆಯಿತು.  ಅಲ್ಲಿ ಪೂಜಿಸಿಕೊಂಡು ಬಂದ ಮೇಲೆ ಉತ್ಸವ ದೇವರ ಪಲ್ಲಕ್ಕಿ , ತನ್ನ ದೇವಸ್ಥಾನಕ್ಕೆ ಯಾವುದೇ ಅಡಚಣೆಯಿಲ್ಲದೆ ಮರಳಿತು.

ದೇವಸ್ಥಾನದ ಮುಂಭಾಗದಲ್ಲಿ ಬಟ್ಟೆಯೊಂದನ್ನು ಹಾಸಿ, ಉಳಿದಿದ್ದ ರಸಾಯನವನ್ನೆಲ್ಲಾ (ಸುಮಾರು ೧೦, ೧೫ ಕೆಜಿ ಬಾಳೆಹಣ್ಣಿದ್ದಿರಬಹುದು!) ಅದರ ಮೇಲೆ ಸುರಿದರು.  ಈ ಆವೇಶ ಭರಿತ ಮೂವರು (ಮೆರವಣಿಗೆ ಸಮಯದಲ್ಲಿ ಮೂರು ಸಲ ತಂಡದ ಮಂದಿ ಬದಲಾಗಿದ್ದರು) ಓಡಿ ಬಂದು, ಅಲ್ಲಿದ್ದ ರಸಾಯನವನ್ನೆಲ್ಲಾ ಬಾಯಿ ತುಂಬಾ ಮುಕ್ಕಿ (ಪೂರ್ತಿ ಖಾಲಿ ಆಯಿತು), ಸೀದಾ ದೇವಸ್ಥಾನದ ಒಳಗೆ ಓಡಿ, ಮೂರ್ಚೆ ಹೋದರು! ಈ ಮೂವರಲ್ಲಿ ಒಬ್ಬಾತನಿಗೆ ಸುಮಾರು ೭೦ ವರ್ಷ ವಯಸ್ಸಾಗಿದ್ದು, ಆತ ಕೂಡ ಕೆಜಿಗಟ್ಟಲೆ ರಸಾಯನ ತಿಂದದ್ದು ಆಶ್ಚರ್ಯ ಪಡಬೇಕಾದದ್ದೇ! ನಂತರ ಅವರ ತಲೆಗೆ ತಣ್ಣೀರು ತಟ್ಟಿ ಶುಶ್ರೂಷೆ ನಡೆಸಲಾಯಿತು.  ಪ್ರಜ್ಞೆ ಬಂದ ನಂತರ ಬಟ್ಟೆ ಬದಲಾಯಿಸಿ, ತಮ್ಮ ಕೆಲಸಕ್ಕೆ ತಕ್ಕ ಕಾಣಿಕೆ ಪಡೆದು, ಇಷ್ಟು ಹೊತ್ತಿನ ತನಕ ನಡೆದದ್ದಕ್ಕೂ, ತಮಗೂ ಸಂಬಂಧವೇ ಇಲ್ಲದಂತೆ ಅವರು ಹೊರಟರು. ಉತ್ಸವ ಮುಗಿಯಿತು. ಮೂರ್ತಿಗಳು ಪ್ರತಿಷ್ಠಾಪಿತಗೊಂಡವು. ಉತ್ಸವ ಮುಗಿದ ನಂತರ ಈ ಜನರು ದೇವಸ್ಥಾನದ ಒಳಗೆ ಹೋಗಬಾರದು.

ಉತ್ಸವದಂದು ನೆರೆದಿದ್ದವರೆಲ್ಲರಿಗೂ (ಜಾತಿ ಭೇಧವಿಲ್ಲದೆ) ಊಟೋಪಚಾರದ ವ್ಯವಸ್ಥೆ. ದೇವಸ್ಥಾನದ ಕುಟುಂಬ ವರ್ಗದವರಿಗೆ ಮೊದಲು ಬಡಿಸಬೇಕೋ? ಹಳ್ಳಿಯ ಜನರಿಗೆ ಮೊದಲು ಬಡಿಸಬೇಕೋ? ಎಂಬ ಚರ್ಚೆ ನಡೆಯುವಷ್ಟರಲ್ಲಿಯೇ, ಊಟಕ್ಕೆ ಬಹು ತಡವಾಗಿದ್ದ ಕಾರಣ, ಸ್ಥಳ ಸಿಕ್ಕಲೆಲ್ಲಾ, ಎಲ್ಲಾ ಜನರು ಕುಳಿತರು. ಬೇರೆ ಜಾತಿಯ / ‘ಕೀಳು’ ಜಾತಿಯ ಅಥವಾ ಹಾಕಿದ್ದ ಬಟ್ಟೆ ನೀಟಾಗಿಲ್ಲದೆ ಕೀಳಾಗಿ ಕಾಣಿಸಿದ್ದೋ ಗೊತ್ತಿಲ್ಲ, ಅಂಥ ಮಕ್ಕಳನ್ನು ಮಾತ್ರ ಬೆದರಿಸಿ, ಎಬ್ಬಿಸಿ, ಓಡಿಸಿ, ಕುಟುಂಬ ವರ್ಗದ ಜನ ಊಟಕ್ಕೆ ಮೊದಲ ಪಂಕ್ತಿಗೆ ಕುಳಿತರು. ಕೊಳಕು, ಕೊಳಕಾಗಿದ್ದ ದೊಡ್ಡವರು ಮಾತ್ರ ಭಂಡತನದಿಂದ ಪಾಯಸದೂಟ ಮಾಡಲು ಕುಳಿತೇ ಇದ್ದರು. ಇರಿಸು ಮುರಿಸು ಮಾಡಿಕೊಂಡು ಎಲ್ಲರೂ ಅವರ ಜೊತೆಯಲ್ಲಿಯೇ ಊಟಕ್ಕೆ ಕುಳಿತರು.  ಹಳ್ಳಿಯ ಜನಕ್ಕೆ ಮುದ್ದೇ ಮಾಡಿಸಬೇಕು, ಅನ್ನದಿಂದ ಪೂರೈಸೊಲ್ಲ ಎನ್ನುವ ಒಮ್ಮತದ ಅಭಿಪ್ರಾಯ ಬರುವ ಹೊತ್ತಿಗೆ ಎಲ್ಲರ ಊಟಾ ಮುಗಿದಿತ್ತು.  ಬೇರೆ ಜಾತಿಯವರು ಮೊದಲಿಗೆ ಕುಳಿತದಕ್ಕೆ, ನಾವು ಊಟ ಮಾಡುವುದಿಲ್ಲ, ಫಲಾಹಾರ ಮಾತ್ರ ಎಂದು ಒಂದಷ್ಟು ಜನ ಬಾಳೆಹಣ್ಣು (ರಸಾಯನ ಮಾಡಲು ತಂದು, ಉಳಿದಿದ್ದ :-), ಹಣ್ಣಿಗೆ ದೋಷವಿಲ್ಲ ಅಲ್ಲವೇ?  ) ತಿಂದು ಮುಗಿಸಿದರು.  ಅಡುಗೆ ವ್ಯವಸ್ಥೆ ಸರಿಯಿಲ್ಲವೆಂದು ಇನ್ನೊಂದಷ್ಟು ಜನ ದೂರಿದರು. ಅಂತೂ ಇಂತೂ ಉತ್ಸವ ಮುಗಿಯಿತು.  

ಉತ್ಸವ ನಡೆದ ಮೇಲೆ ಬಂದ ಮೊದಲ ದಸರಾಹಬ್ಬವನ್ನು ಆಚರಿಸದಿದ್ದರೆ ಹೇಗೆ?  ವಿಜಯದಶಮಿಯ ದಿನ ಮತ್ತೆ ಉತ್ಸವ ಹೊರಟಿತು. ಈ ಬಾರಿ ಓಲಗ ಊದುವವರು ಬಂದರು.  ಓಲಗ ಶುರುವಾದ ನಂತರ ಉತ್ಸವ ಮೂರ್ತಿಯನ್ನು ಹೊತ್ತು ಹಳ್ಳಿಯ ಹಾದಿ ಬೀದಿಗಳಲೆಲ್ಲಾ ಮೆರವಣಿಗೆ ಬಂತು.  ಶಿವನ ದೇವಸ್ಥಾನದಲ್ಲಿಯೂ, ಕಾಳಿಯ (ದೇವಿಯ) ದೇವಸ್ಥಾನದಲ್ಲಿಯೂ ಈ ಉತ್ಸವ ದೇವರ ಪೂಜೆ ನಡೆಯಿತು.  ಹಣೆಗೆ ದೊಡ್ಡದಾಗಿ ವಿಭೂತಿ ಬಳಿದುಕೊಂಡು, ತಾವು ಲಿಂಗಾಯಿತರೆಂದು ಜಗಜ್ಜಾಹೀರುಗೊಳಿಸುತ್ತಿದ್ದ ಮಂದಿಯು ಕೂಡ, ಅಷ್ಟೇ ಭಯಭಕ್ತಿಯಿಂದ, ಈ ‘ರಂಗನಾಥ’ ದೇವರಿಗೆ ಹಣ್ಣುಕಾಯಿ ಮಾಡಿಸಿದರು. ನೆಲಕ್ಕೆ ಅಪ್ಪಳಿಸಿದ ತೆಂಗಿನಕಾಯಿಯನ್ನು, ‘ಕೀಳು ಜಾತಿಯ ಜನರು ಮಾತ್ರ ಆರಿಸಿಕೊಂಡು ತಿನ್ನಬೇಕು, ನಾವೆಲ್ಲಾ ಅಲ್ಲಾ! ಎಂದು ಜೋರು ಮಾಡುತ್ತಿದ್ದ ಅಜ್ಜಿಯೊಬ್ಬರು, ಚೂರುಚೂರಾಗಿ ಕೆಳಗೆ ಬಿದ್ದಿರುವ ಕಾಯಿಯನ್ನು ಆಸೆಕಂಗಳಿಂದ ನೋಡುತ್ತಿದ್ದ ವೈಷ್ಣವರ ಮಗುವೊಂದು, ‘ನಾವು ತಿನ್ನಬಾರದಂತೆ? ಆದರೆ ಈಗ ನೋಡಿ, ನಾಯಿಯೊಂದು ತಿನ್ನುತ್ತಿದೆ! ಇದೀಗ ನಿಮ್ಮ ದೇವರಿಗೆ ಅಪಮಾನವಾದಂತಲ್ಲವೇ? ಎಂದು ವಾದಿಸುತ್ತಿದ್ದ ೧೨ ವರ್ಷ ವಯಸ್ಸಿನ ಪೋರನ ಹೊಟ್ಟೆಉರಿ ಒಂದು ಕಡೆ, ಇದ್ಯಾವುದೋ ತಮಗೆ ಸಂಬಂಧಿಸಿದಲ್ಲವೆಂಬಂತೆ, ಭಕ್ತಿ ಪರವಶರಾಗಿದ್ದ ಆತನ ಅಪ್ಪ, ಅಮ್ಮ!  

ನಂತರ ಮೆರವಣಿಗೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಬನ್ನಿಮಂಟಪದ ಕಡೆಗೆ ತೆರಳಿತು.  ತೆಂಗಿನ ಸೋಗೆ ಹಾಕಿ ಮಾಡಿದ್ದ ಚಪ್ಪರ, ಅದರಡಿಯಲ್ಲಿ ಹಾಸಿದ್ದ ಬಟ್ಟೆ ಮೇಲೆ ಉತ್ಸವ ದೇವರು ಕುಳಿತರು. ಅದಕ್ಕಾಗಿ ಇದ್ದ ಛತ್ರಿಯಡಿ, ಭಕ್ತರು ಅದನ್ನು ಹಿಡಿದು, ತಾವೇ ನಿಂತರು.  ಚಪ್ಪರದಡಿ ಒಂದು ಗುಳಿ ಈ ಮೊದಲೇ ತೋಡಿಟ್ಟಿದ್ದರು.  ಪಕ್ಕದಲ್ಲೇ ಬಾಳೇ ಗಿಡವೊಂದನ್ನು, ಅದಕ್ಕೆ ಬನ್ನಿ ಮರದ ಟೊಂಗೆಗಳನ್ನು ಕಟ್ಟಿಟ್ಟಿದ್ದರು.  ಈ ಬಾಳೆಗಿಡವನ್ನು ತೋಡಿಟ್ಟಿದ್ದ ಗುಳಿಯಲ್ಲಿ ನೆಟ್ಟರು.  ದೇವಸ್ಥಾನದ ಮುಖ್ಯಸ್ಥರು ಕತ್ತಿಯನ್ನು ಪೂಜೆ ಮಾಡಿ ಒಂದೇ ಏಟಿಗೆ ಬಾಳೇಗಿಡವನ್ನು ಕಡಿದರು. ಅದು ನೆಲಕ್ಕೆ ಒರಗುವ ಮುನ್ನವೇ, ಅದರಲ್ಲಿದ್ದ ಬನ್ನಿ ಎಲೆಗಳಿಗೆ ಕಿತ್ತಾಟ ನಡೆದು (ಬನ್ನೀ ಎಲೆಗಳು ನೆಲಕ್ಕೆ ಬೀಳುವ ಮುನ್ನವೇ ಪಡೆದರೆ, ಅದು ಚಿನ್ನವಂತೆ!), ಸಿಕ್ಕಿದವರಿಗೇ ಸೀರುಂಡೆ ಎಂದಂತೆ, ಸಿಕ್ಕಷ್ಟು ಹಳ್ಳಿಯವರೆಲ್ಲರೂ ತೆಗೆದುಕೊಂಡರು.  ಮನೆಗೆ ತೆರಳಿದ ನಂತರ ಅದನ್ನು ಹಿರಿಯರಿಗಿತ್ತು, ಅವರಿಗೆ ನಮಸ್ಕರಿಸಿ, ಬನ್ನಿ ಕೊಡ್ತೇವೆ, ಬಂಗಾರ ನೀಡಿ ಎಂದರೆ, ಕಿರಿಯರ ಬಾಳು ಬಂಗಾರವಂತೆ! 

(ಮುಂದುವರಿಯುವುದು)

Monday, October 15, 2012

ಇಂಗ್ಲೀಷ್ ಭಾಷೆಯ ದಾಳಿಯಿಂದ ಸೊರಗುತ್ತಿರುವ ಇನ್ನಿತರ ಭಾಷೆಗಳು - ಇಂಗ್ಲೀಷ್ ವಿಂಗ್ಲೀಷ್


ಶಶಿ - ಅತ್ಯಂತ ಸಾಮಾನ್ಯ ಹೆಣ್ಣು ಮಗಳು. ಅತ್ತೆ, ಗಂಡ, ಮಕ್ಕಳಿಗೆ ರುಚಿಯಾದ ಅಡುಗೆ ಮಾಡಿ, ಅವರಿಗೆ ಉಣಬಡಿಸುವುದರಲ್ಲಿಯೇ ಸಾರ್ಥಕ್ಯ ಕಂಡವಳು.  ಜೊತೆಗೊಂದಿಷ್ಟು ಪುಡಿಕಾಸು ಸಂಪಾದಿಸಲು, ತನಗೆ ಗೊತ್ತಿರುವಂಥ ವಿದ್ಯೆಯಾದ ಅಡುಗೆಯಿಂದಲೇ, ಮದುವೆ ಮುಂತಾದ ಸಮಾರಂಭಗಳಿಗೆ ಲಡ್ಡು ತಾನೇ ಕೈಯಾರೆ ತಯಾರಿಸಿ, ಅಲ್ಲಿಗೆ ಹೋಗಿ ಕೊಟ್ಟು ಬರುವಂಥವಳು.  ಆ ಹಣವನ್ನು ಆಪದ್ಧನವೆಂದು ಕಾದಿರಿಸುವವಳೇ ಹೊರತು, ತನ್ನ ಬಟ್ಟೆಬರೆ, ಅಲಂಕಾರಗಳಿಗೆ ಖರ್ಚು ಮಾಡುವಂಥವಳಲ್ಲ!  ಒಟ್ಟಿಗೆ ಬಾಳುವುದಕ್ಕೆ ಸಂಗಾತಿ ಪರಿಪೂರ್ಣನಾಗಿರಬೇಕಿಲ್ಲ, ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಸಾಕು ಎಂಬುದು ಇವಳ ತತ್ವ. ಮಕ್ಕಳನ್ನು ಬೆಳೆಸುವಲ್ಲಿಯೂ ಆಕೆ ನಿರಾಳ. ಟೀನೇಜ್ ಮಗಳು ತುಂಡುಬಟ್ಟೆ ಹಾಕಿಕೊಂಡು, ಕಾಫೀ ಡೇ ಹೋಗುವುದನ್ನು ಅತೀ ಸಾಮಾನ್ಯ ವಿಷಯದಂತೆ ಸ್ವೀಕರಿಸುವಷ್ಟು, ತನ್ನ ಮುಂದೆಯೇ ತನ್ನ ಗಂಡ, ಪರ ನಾರಿಯನ್ನು ಹಗ್ ಮಾಡುವುದನ್ನು ಒಪ್ಪಿಕೊಳ್ಳುವಷ್ಟು, ಆಧುನಿಕ ಮನೋಧರ್ಮ ಇವಳಲ್ಲಿದೆ.  ಗೇ, ಲೆಸ್ಬಿಯನ್ ಸಂಬಂಧಗಳನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡುವಂಥ ಸುಶಿಕ್ಷಿತ ಮನೋವರ್ಗದ ನಡುವೆ, ಅವರದು ಹೃದಯವಲ್ಲವೇ? ಅವರು ಕೂಡ ಪ್ರೀತಿಸಲು, ಬದುಕಲು ಅರ್ಹರು ಎನ್ನುವಂಥ, ಗಂಡ, ಮಕ್ಕಳ ಆಧುನಿಕ ಮನಸ್ಸನ್ನು ಯಾವುದೇ ತಂಟೆ, ತಕರಾರಿಲ್ಲದೆ ಒಪ್ಪಿಕೊಳ್ಳುವಂಥ ವಿಶಾಲ ಮನಸ್ಸು ಈಕೆಯದು. ಈ ಆಧುನಿಕ ಜಗತ್ತಿನಲ್ಲಿ ಇದ್ದು ಕೂಡ ಇರದಂಥವಳು. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು, ಭಾವನೆಗಳನ್ನು ವ್ಯಕ್ತ ಪಡಿಸಲು ಭಾಷೆಯ ಹಂಗೇಕೆ? ತಾವೇ ಅವರ ಜಾಗದಲ್ಲಿ ನಿಂತು ನೋಡಿದರೆ ಅವರು ಅರ್ಥವಾಗುತ್ತಾರೆ ಎನ್ನುವ ಮನೋಭಾವದವಳು.  ಆದರೆ ಈಕೆಯನ್ನು, ಈಕೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಗಂಡ ಮತ್ತು ಮಗಳು, ಈಕೆಯದು ಗೊಡ್ಡು ಸ್ವಭಾವವೆಂದು, ಈ ಜಗತ್ತಿನಲ್ಲಿ ಬದುಕಲು ಕೂಡ ಅನರ್ಹವೆಂದೂ, ಇಂಗ್ಲೀಷ್ ಭಾಷೆ ಬರದ ಈಕೆ ಅಡುಗೆಮನೆಯಲಿರಷ್ಟೇ ಲಾಯಕ್ಕೆಂದೂ, ಸಮಯ ಸಿಕ್ಕಾಗಲೆಲ್ಲಾ ಪರಿಹಾಸ್ಯ ಮಾಡುವ ಗಂಡ, ಅದನ್ನು ತನ್ನ ಉಪಯೋಗಕ್ಕೆ ಬಳಸಿಕೊಳ್ಳುವ ಮಗಳು, ಇವರೀರ್ವರ ಅಪಹಾಸ್ಯದಿಂದ ನೋವಾದರೂ, ಸಂಕಟವಾದರೂ, ತೋರಿಸಿಕೊಳ್ಳದ ಸಂಯಮಿ.  

ಹೀಗಿದ್ದ ಶಶಿಗೆ ಅಕಸ್ಮಾತ್ತಾಗಿ ಅಮೇರಿಕಾಗೆ ಒಂಟಿಯಾಗಿ ಹೋಗುವ ಸಂದರ್ಭ ಒದಗಿಬರುತ್ತದೆ.  ಅದುವರೆವಿಗೂ ಒಬ್ಬಂಟಿಯಾಗಿ ಎಲ್ಲಿಗೂ ಹೋಗಿರದಿದ್ದ ಈಕೆ, ತನ್ನ ಜಗತ್ತನ್ನು ಬಿಟ್ಟು ಹೋಗುವುದರ ಸಂಕಟದ ಜೊತೆಗೆ, ಒಂಟಿಯಾಗಿ ಭಾಷೆ ಬರದ ನಾಡಿನಲ್ಲಿ ಬದುಕುವುದು ಹೇಗೆ? ಎಂಬ ಕಳವಳ ಕಾಡತೊಡಗುತ್ತದೆ.  ಇಂಗ್ಲೀಷ್ ಭಾಷೆಯ ಅರಿವಿಲ್ಲದೆ ತನ್ನ ಜಗತ್ತನ್ನು ಸಂಭಾಳಿಸುತ್ತಿದ್ದ ಈಕೆಗೆ, ಅಮೇರಿಕಾದಲ್ಲಿ ಇಂಗ್ಲೀಷ್ ಬರದೇ ಇರುವುದು ಬಹು ದೊಡ್ಡ ತೊಡಕಾಗಿಬಿಡುತ್ತದೆ.  ಅದಕ್ಕೆ ಪೂರಕವಾಗಿ ಕಾಫಿ ಶಾಪ್ ಒಂದರಲ್ಲಿ ನಡೆಯುವ ಘಟನೆ, ಆಕೆಯ ಆತ್ಮವಿಶ್ವಾಸಕ್ಕೆ ಧಕ್ಕೆ ತಂದುಬಿಡುತ್ತದೆ.  ೪ ವಾರಗಳಲ್ಲಿ ಇಂಗ್ಲೀಷ್ ಕಲಿಸುವ ಕೋರ್ಸಿಗೆ ಸೇರುವ ಶಶಿ, ಅಲ್ಲಿ ಇವಳಂತೆಯೇ ಭಾಷೆಯ ತೊಡಕಿನಿಂದ ತೊಂದರೆ ಅನುಭವಿಸಿ, ಇಂಗ್ಲೀಷ್ ಕಲಿಯಲು ಬರುವ ಇನ್ನಿತರರು, ತನ್ನ ಕಾಲ ಮೇಲೆ ತಾನು ನಿಲ್ಲಲು ಸಹಾಯ ಮಾಡಿರುವ ಇವಳ ಅಡುಗೆ ಬಗ್ಗೆ ಇವಳಿಗೆ ಪ್ರೀತಿಯಿದ್ದರೂ, ಗಂಡ ಮತ್ತು ಮಗಳು ಅಪಹಾಸ್ಯ ಮಾಡಿ, ಅದರ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿರುವ ಶಶಿಗೆ, ನೀನೊಬ್ಬಳು ಉದ್ಯಮಿ ಎಂದು ಅರಿವು ಮೂಡಿಸುವ ಆಕೆಯ ಟೀಚರ್, ನಿನ್ನ ಅಡುಗೆ ಕೆಲಸ ಕಲೆಯೆಂದೂ ಅಭಿಮಾನ ಮೂಡಿಸುವ, ಇವಳಂತೆಯೇ ಅಡುಗೆಯನ್ನೇ ತನ್ನ ಕೆಲಸ ಮಾಡಿಕೊಂಡಿರುವ ಫ್ರೆಂಚ್ ಗೆಳೆಯ, ಆತ ಇವಳತ್ತ ಆಕರ್ಷಿತನಾಗುವುದು, ಭಾಷೆ ಬರದಿದ್ದರೂ, ತಮ್ಮ ತಮ್ಮ ಭಾಷೆಗಳಲ್ಲಿಯೇ ತಮ್ಮೆಲ್ಲಾ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದು, ಇವರಿಬ್ಬರ ನಡುವೆ ನಡೆಯುವಂಥ ಘಟನೆಗಳು, ಈಕೆಯನ್ನು ಹೆಜ್ಜೆಹೆಜ್ಜೆಗೂ ಹುರಿದುಂಬಿಸುವ, ಅಮೇರಿಕಾದಲ್ಲೇ ಹುಟ್ಟಿ, ಬೆಳೆದಿರುವ ಅಕ್ಕನ ಮಗಳು, ಇವಳಲ್ಲಿ ಆತ್ಮವಿಶ್ವಾಸ ಚಿಗುರುವಂತೆ ಮಾಡುವುದು. ತನ್ನ ಬಗ್ಗೆ ತನಗೆ ಪ್ರೀತಿಯುಂಟುವಂತೆ ಮಾಡಿದ ಫ್ರೆಂಚ್ ಗೆಳೆಯನನ್ನು ಆಯ್ಕೆ ಮಾಡುತ್ತಾಳಾ? ಅಥವಾ ತನ್ನ ಹಿಂದಿನ ಜೀವನಕ್ಕೆ ಮರಳುತ್ತಾಳಾ? ಇದು ಇಂಗ್ಲೀಷ್ ವಿಂಗ್ಲೀಷ್ ಚಿತ್ರದ ಕ್ಲೈಮಾಕ್ಸ್.

ಭಾರತದಲ್ಲೇ ನೆಲೆಸಿರುವಂಥ ಆಧುನಿಕ ಸುಶಿಕ್ಷಿತ ವರ್ಗದ ಮನಸ್ಥಿತಿ ಹಾಗೂ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮನಸ್ಥಿತಿ ಚಿತ್ರದಲ್ಲಿ ಚೆಂದವಾಗಿ ನಿರೂಪಿತಗೊಂಡಿದೆ. ಅಮೇರಿಕಾದಲ್ಲಿದ್ದರೂ, ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು, ನಡವಳಿಕೆಯಾಗಬಹುದು, ಸಂಭೋದನೆಯಾಗಬಹುದು, ಭಾರತದ ಸಂಸ್ಕೃತಿ, ಭಾಷೆಯನ್ನು ಮರೆಯದ  ಅನಿವಾಸಿ ಭಾರತೀಯರು,  ಅಲ್ಲಿಯೇ ಜನಿಸಿ, ಅಮೇರಿಕನ್ ಸಿಟಿಜನ್ ಶಿಪ್ ಪಡೆದು, ಬೆಳೆದಿರುವ ಅವರ ಮಕ್ಕಳು ಕೂಡ ಭಾರತೀಯ ಸಂಸ್ಕೃತಿಯಂತೆಯೇ ಬದುಕಲು ಆಸೆ ಪಡುವುದು, ಮತ್ತೊಂದು ಕಡೆ ಭಾರತದಲ್ಲಿಯೇ ಜನಿಸಿ, ಅಮೇರಿಕಾದ ಗಂಧಗಾಳಿ ಇಲ್ಲದೆ ಇಲ್ಲಿಯೇ ಬೆಳೆದಿದ್ದರೂ, ಉಡುಗೆ, ತೊಡುಗೆ, ಊಟ ಉಪಚಾರ, ಭಾಷೆಯ ಉಚ್ಚಾರ ಎಲ್ಲದರಲ್ಲೂ ಅಮೇರಿಕನರನ್ನು ಅನುಕರಿಸಲು ಪ್ರಯತ್ನ ಪಡುವುದು ಎಲ್ಲೋ ಒಂದು ಕಡೆ ನಮ್ಮ ಭಾರತೀಯ ಸಂಸ್ಕೃತಿ ಬೆಳೆಯುತ್ತಿದೆಯಲ್ಲಾ ಎನ್ನುವ ಆಸೆಯನ್ನು ಬಿತ್ತಿದರೂ, ಇಲ್ಲಿ, ಭಾರತದಲ್ಲಿ,  ಆಧುನಿಕ ಮನೋಭಾವವೆಂದರೆ ಅಮೇರಿಕನವರದ್ದು ಮಾತ್ರ ಎಂದು ಮಕ್ಕಳಾದಿಯಾಗಿ ಎಲ್ಲರೂ ಒಪ್ಪಿಕೊಳ್ಳುವುದು, ಇಲ್ಲವೇ ನೀನು ಬದುಕಲು ಅನರ್ಹ ಅಥವಾ ಅಡುಗೆ ಮನೆಗಷ್ಟೇ ಲಾಯಕ್ಕು ಎಂಬುದು ನಮ್ಮಲ್ಲಾಗುತ್ತಿರುವ ಸಂಕುಚಿತ ಭಾವನೆಯನ್ನು ಹಾಗೂ ಹೀಗೆ ಇರದಿದ್ದವರು ಕೀಳರಿಮೆಗೆ ಒಳಗಾಗುವ, ಇಂಥವರೆಲ್ಲರೂ ತಮ್ಮ ಚಿಪ್ಪಿನೊಳಗೆ ಹುದುಗಿಬಿಡುವಂಥ ಅಪಾಯವನ್ನು, ತನ್ಮೂಲಕ ನಮ್ಮ ಸಮಾಜದ ಬೆಳವಣಿಗೆ ಕುಂಠಿತವಾಗಬಹುದೇನೋ ಎನ್ನುವ ಆತಂಕವನ್ನು ಎತ್ತಿ ತೋರಿಸುತ್ತದೆ.  ಕೇರಳದಲ್ಲಿ ನೆಲೆಸಲು ಮಲೆಯಾಳಂ, ತಮಿಳುನಾಡಿನಲ್ಲಿ ನೆಲೆಸಲು ತಮಿಳು, ಕನ್ನಡನಾಡಿನಲ್ಲಿ ನೆಲೆಸಲು ಕನ್ನಡ (?!) ಬೇಕು ಎಂಬುದನ್ನು ಬಿಟ್ಟು, ಇಂಗ್ಲೀಷ್ ಭಾಷೆ ಮಾತ್ರ ಮುಖ್ಯ, ಇನ್ನುಳಿದ ಭಾಷೆಗಳೆಲ್ಲವೂ ನಗಣ್ಯ ಎನ್ನುವ ಮನೋಭಾವ ಭಾರತೀಯರಲ್ಲಿ ಮಾತ್ರವಲ್ಲ, ಫ್ರೆಂಚ್, ಆಫ್ರಿಕನ್, ಚೈನೀಸ್, ಪಾಕೀಸ್ತಾನೀಯರು ಎಲ್ಲರಲ್ಲೂ ಮೂಡುತ್ತಿದೆ ಎನ್ನುವುದು ಕೂಡ ಆತಂಕದ ವಿಷಯವೇ ಆಗಿದೆ. ಚಿತ್ರದ ನಾಯಕಿಯಾದ ಶಶಿ ಒಂದು ಕಡೆ ಹೇಳುವ ಮಾತು, "ನನಗೆ ಪ್ರೀತಿಗಿಂತಲೂ ಒಂದಿಷ್ಟೂ ಗೌರವ ಬೇಕು!"  ಈ ಮಾತು ನಮಗೆಲ್ಲರಿಗೂ ಭಾಷೆಯ ವಿಷಯದಲ್ಲಿ ಪಾಠವಾದರೆ, ನಮ್ಮ ನಮ್ಮ ಭಾಷೆಗಳ ಮೇಲೆ ನಮಗೆ ಪ್ರೀತಿಗಿಂತಲೂ, ಗೌರವ ಮೂಡಿದರೆ ಬಹುಶಃ ಅಳಿಯುತ್ತಿರುವ ಎಲ್ಲಾ ಭಾಷೆಗಳೂ ಉಳಿಯುವುದು.

ಮಿಕ್ಕಿದಂತೆ, ಶ್ರೀದೇವಿಯ ನಟನೆ ಹಾಗೂ ಅದಕ್ಕೆ ಪೂರಕವಾದ ಇನ್ನಿತರರ ನಟನೆ ನಿಜಕ್ಕೂ ಪ್ರಶಂಸನೀಯ. ‘ಶಶಿ’ ಪಾತ್ರದ ಪರಕಾಯ ಪ್ರವೇಶ, ಶ್ರೀದೇವಿಗೆ ಶ್ರೀದೇವಿಯೇ ಸಾಟಿ.  ಈ ಹಿಂದಿನ ಚಿತ್ರಗಳಲ್ಲಿ ಬಳುಕುವ ಬಳ್ಳಿಯಂತಿದ್ದ ಸುಂದರಿ ಶ್ರೀದೇವಿ, ಈ ಚಿತ್ರದಲ್ಲಿ ಆಹಾರವಿಲ್ಲದೆ ಸೊರಗಿದಂತಾಗಿರುವುದನ್ನು ನೋಡಲು ಅಸಹನೀಯವಾಗಿದ್ದರೂ, ‘ಶಶಿ’ ಪಾತ್ರಕ್ಕೆ ಆಕೆ ಹೀಗೆ ಸೊರಗಿದಂತಿರುವುದೇ ಸರಿ ಎಂದೆನಿಸುತ್ತದೆ. ಇಂಗ್ಲೀಷ್ ಭಾಷೆಯ ದಾಳಿಯಿಂದಾಗಿ ಮಿಕ್ಕೆಲ್ಲಾ ಭಾಷೆಗಳು ಸೊರಗಿರುವುದನ್ನು ಪರೋಕ್ಷವಾಗಿ ಸೂಚಿಸುತ್ತಿದೆಯೇನೋ ಎಂದೆನಿಸುತ್ತದೆ!   ಅಮಿತಾಭ್ ಅವರದೂ ಅತಿಥಿ ಪಾತ್ರವಾದರೂ, ಸಿಕ್ಕ ಐದು ನಿಮಿಷಗಳಲ್ಲಿಯೇ ಮನಸೆಳೆದು ಬಿಡುತ್ತಾರೆ.  ಫ್ರೆಂಚ್ ಪಾತ್ರಧಾರಿಯ ನಿಶ್ಯಬ್ದ ತುಟಿಯಂಚಿನ ನಗೆ ಇಡೀ ಚಿತ್ರಕೊಂದು ಮೆರುಗು ನೀಡುತ್ತದೆ.  

Friday, October 12, 2012

‘ಹಲಗೆ ಬಳಪ’ ಓದಿದ ಮೇಲೆ


All my best thoughts were stolen by the ancients!  - Ralph Waldo Emerson.  ಜೋಗಿ ಅವರ ಹಲಗೆ ಬಳಪ ಓದುತ್ತಾ, ಓದುತ್ತಾ ನನಗೆ, ಅದರಲ್ಲಿದ್ದ ಈ ವಾಕ್ಯ ಮಾತ್ರ ಸಿಕ್ಕಾಪಟ್ಟೆ ಮನಸ್ಸಿಗೆ ಹಿಡಿಸಿಬಿಡ್ತು.  ಹೊಸ ಬರಹಗಾರರಿಗೆ ಜೋಗಿಯವರ ಪಾಠಗಳು ಬರೆಯಲು ಪ್ರೇರೇಪಿಸುತ್ತೋ ಇಲ್ಲವೋ ಗೊತ್ತಿಲ್ಲ! ಓದಲಂತೂ ಬಹಳ ಖುಷಿ ಕೊಡುತ್ತದೆ. ಎಲ್ಲರ ಮೊದಲ ಬರಹಗಳ ಅನುಭವವನ್ನು ಓದುತ್ತಾ, ನಾನೇ ಅವರಾಗಿ, ಈ ಎಲ್ಲಾ ಅನುಭವಗಳೂ, ನನಗೂ ಆಗಿತ್ತಲ್ಲಾ?  ನನಗೇಕೆ ಬರೆಯೋಕೆ ಆಗಿಲ್ಲ? ಎನ್ನುವ ಕಳವಳದ ಜೊತೆಜೊತೆಗೆ ಓಹ್! ಇವರಂಥವರಿಗೂ ಕೂಡಾ ಹೀಗೆಲ್ಲಾ ಗೊಂದಲ / ಆತಂಕ ಆಗಿತ್ತಾ? ಹಾಗಿದ್ದರೆ ನಾನು ಕೂಡ ಒಳ್ಳೆಯ ಬರಹಗಾರ್ತಿಯಾಗಬಲ್ಲೆ! ಎನ್ನುವ ಹುಮ್ಮಸ್ಸನ್ನು ಕೂಡ ಹುಟ್ಟಿಸಿತು. ಹಲಗೆ ಬಳಪದ ಪುಟಪುಟವೂ ಅರೆರೆ! ಎಷ್ಟು ಚಂದ ಬರೆದಿದ್ದಾರೆ? ಎಂದು ಸಂತೋಷಿಸುತ್ತಾ,  ನನ್ನ ಆಲೋಚನೆಗಳು ಬಹು ಮಟ್ಟಿಗೆ ಈ ಲೇಖಕರನ್ನು ಹೋಲುತ್ತವೆ, ಹೇ, ನನಗೂ ಕೂಡ ಇಂಥ ಅನುಭವ ಆಗಿದೆಯಲ್ಲಾ? ಎಂದೆಲ್ಲಾ ನನ್ನನ್ನು ನಾನೇ ಅವರೊಂದಿಗೆ ಹೋಲಿಸಿಕೊಳ್ಳುತ್ತಾ, ಓಹ್! ಇಷ್ಟೊಂದು ಪುಸ್ತಕಗಳನ್ನು ಓದಿದ್ದಾರಾ? ಎಂದು ಆಶ್ಚರ್ಯ ಪಡುತ್ತಾ, ಪುಸ್ತಕಗಳನ್ನು ಓದಲು ಇಷ್ಟು ಸೀರಿಯಸ್ ನೆಸ್ ಬೇಕಾಗುತ್ತಾ? ಎಂದು ಚಿಂತಿಸುತ್ತಾ, ಕವನಗಳನ್ನು ಬರೆಯುವುದು ಇಷ್ಟು ಸುಲಭವೇ? ಎಂದು ನಿಡುಸುಯ್ಯುತ್ತಾ, ನಾಟಕಗಳನ್ನು ನಾನೆಂದಿಗೂ ಓದಿಯೇ ಇಲ್ಲ, ಓದಬೇಕು ಎಂದು ಆಲೋಚಿಸುತ್ತಾ, ಒಂದೇ ಉಸಿರಿಗೆ ಪೂರ್ತಿ ಪುಸ್ತಕ ಓದಿದೆ.  ನಂತರಾ, ಮತ್ತೊಮ್ಮೆ, ಮಗದೊಮ್ಮೆ ಎಂದು ೨, ೩ ಬಾರಿ ಓದಿದ್ದಾಯಿತು! ಈಗ ತಲೆಯ ತುಂಬಾ ಪದಗಳ, ವಾಕ್ಯಗಳ ಮೆರವಣಿಗೆ! ಅಲ್ಲಲ್ಲಾ ಜಾತ್ರೆ! 

ಇದನ್ನು ತಕ್ಷಣ ಬ್ಲಾಗ್ ನಲ್ಲಿ ಇಳಿಸಿಬಿಟ್ಟರೆ, ಮನಸ್ಸಿಗೆ ಒಂದಷ್ಟು ನೆಮ್ಮದಿಯಾಗಬಹುದೇನೋ ಎಂದು ಬರೆಯಲು ಕುಳಿತೆ. ಆದರೆ ಬರೆಯಲು ಕುಳಿತರೆ ಮಾತ್ರ ಒಂದಕ್ಷರವೂ ನಿನ್ನ ತಲೆಯಲ್ಲಿ ಮೂಡಲೊಲ್ಲೆ ಎನ್ನುವ ಹಠ ಯಾಕೆ ಮಾಡುತ್ತವೋ? ನನಗೆ ಅಕ್ಷರಗಳ ಮೇಲೆ ಸಿಟ್ಟು! ಆದರೆ ಅಕ್ಷರ ಪ್ರೀತಿ ಇದ್ದರೆ ಮಾತ್ರ ಒಳ್ಳೆ ಬರಹಗಾರನಾಗಬಹುದೆಂಬ ಅದ್ರಲ್ಲಿದ್ದ ಮತ್ತೊಬ್ಬ ಲೇಖಕರ ಕಿವಿಮಾತು! ಹಾಗೂ ಹೀಗೂ ಅಕ್ಷರಗಳ ಮೇಲೆ ಪ್ರೀತಿ ಹುಟ್ಟಿಸಿಕೊಂಡು ಬರೆಯಲು ಕುಳಿತರೆ ಏನು ಬರೆಯೋದು? ಯಾವುದರ ಬಗ್ಗೆ ಬರೆಯೋದು? ಮತ್ತೆ ಗೊಂದಲ ಶುರು.  ಕವನ ಬರೆಯೋದಾ? ಕಥೆಯನ್ನೋ? ಬರೆಯೋದಕ್ಕೆ ಶುರು ಮಾಡಿ, ಆಮೇಲೆ ತನ್ನಷ್ಟಕ್ಕೆ ನಿಮ್ಮ ಪ್ರಕಾರ ಯಾವುದೆಂದು ತಿಳಿಯುತ್ತದೆ ಎಂಬುದನ್ನು ‘ಹಲಗೆ ಬಳಪ’ದಲ್ಲಿ ಓದಿದ ನೆನಪಾಗಿ, ಕವನ ಕಷ್ಟ, ಕಥೆಯನ್ನು ಬರೆಯೋಣ ಎಂದು ತೀರ್ಮಾನಿಸಿದೆ.  ಈಗ ಯಾರ ಕಥೆ ಬರೆಯೋದು? ನನ್ನ ಕಥೆಯನ್ನೇ?! ಅಕ್ಕಪಕ್ಕದವರದ್ದೇ? ‘ಹಲಗೆ ಬಳಪ’ ದಲ್ಲಿ ಜೋಗಿಯವರ ‘ಮುದ್ದಣ ಮೇಷ್ಟ್ರು’ ಲೇಖಕ ಯಾವತ್ತೂ ಔಟ್ ಸೈಡರ್ ಆಗಬಾರದು, ಒಳಗಿದ್ದು ಬರೆಯಬೇಕು! ಅಕ್ಕಪಕ್ಕದವರ ಪಾತ್ರದ ಒಳಹೊಕ್ಕು ಬರೆಯುವುದು ತೀರಾ ಕಷ್ಟ! ಏನು ಮಾಡುವುದು?  ಒಟ್ಟಿನಲ್ಲಿ ಬರೆಯಬೇಕು ಎಂಬ ಒತ್ತಡವಂತೂ ಇದೆ.  ಹಾಗಾದರೆ ಅಕ್ಕಪಕ್ಕದವರ ಕಥೆ ಬರೆಯಲು ನನ್ನ ಕೈಯಲ್ಲಿ ಸಾಧ್ಯವಿಲ್ಲ. ನನ್ನದೇ ಕಥೆ ಬರೆಯೋದು ಒಳ್ಳೆಯದು.  ಈಗ ಮತ್ತೆ ತಲೆ ತುಂಬಾ ಪ್ರಶ್ನೆಗಳು? ಎಲ್ಲಿಂದ ಶುರು ಮಾಡುವುದು? ಬಾಲ್ಯದಿಂದಲೇ?  ಕೆಲಸದ ಅನುಭವಗಳೇ? ಕಾಲೇಜಿನದೇ? ಮೊದಲ ಪ್ರೇಮ ವೈಫಲ್ಯದ ಬಗ್ಗೆಯೇ? ಬಗೆಹರಿಯದ ಸಮಸ್ಯೆ ಇದು.  ಕೊನೆಗೂ ಸಮಸ್ಯೆಗೊಂದು ಪರಿಹಾರ ಥಟ್ ಅಂತ ಹೊಳೆಯಿತು.  ನನ್ನಲ್ಲಿ ಓದಿನ ಅಭಿರುಚಿ ಶುರು ಆದದ್ದು ಹೇಗೆ?  ಹಾ! ವಿಷಯ ಸಿಕ್ಕಿತು. ಈಗ ಪದಗಳು ಕೂಡ ಸಿಕ್ಕಿದರೆ?! ಬರೆಯುವ ಕೆಲಸ ಸುಲಭ. 

ಮನೆ ತುಂಬಾ ಮಕ್ಕಳು. ಅಪ್ಪನಿಗಾದರೋ ಒಳ್ಳೆಯ ಕೆಲಸವಿರಲಿಲ್ಲ. ಹೊಟ್ಟೆ ತುಂಬಾ ತಿನ್ನಲು ಕೂಡ ಕಷ್ಟ. ತನ್ನ ತಾಯಿಯ ಮನೆಯಲ್ಲಿ ಓದಿನ ಬೆಲೆ ಅರಿತಿದ್ದ ಅಮ್ಮ ಎಂದಿಗೂ ಪುಸ್ತಕಗಳನ್ನು ಕೊಡಿಸಲು ಯೋಚಿಸುತ್ತಿರಲಿಲ್ಲ.  ಆಕೆಗೆ ಮಂಕುತಿಮ್ಮನ ಕಗ್ಗದಿಂದ ಹಿಡಿದು ಸುಮಾರಷ್ಟು ಸ್ತ್ರೋತ್ರಗಳು ಬಾಯಿಪಾಠವಾಗಿತ್ತು.  ಹಾಗಾಗಿ ಮನೆಗೆ ದಿನಪತ್ರಿಕೆ, ಸುಧಾ, ತರಂಗ, ಮಯೂರ, ಕಸ್ತೂರಿ, ಚಂದಮಾಮ ತರುವುದನ್ನೂ ತಪ್ಪಿಸುತ್ತಿರಲಿಲ್ಲ. ನಾನು ಮನೆಯಲ್ಲಿ ಕೊನೆಯವಳು.  ಮಕ್ಕಳು ಕಿತ್ತಾಡಬಾರದೆಂದು ಮನೆಯಲ್ಲಿ ದೊಡ್ಡವರು ಹೇಳಿದಂತೆ ಕೇಳಬೇಕೆಂದು ಅಮ್ಮನ ರೂಲ್ ಆಗಿತ್ತು. ಸುಧಾ, ತರಂಗ ತರಲು ಸಣ್ಣವಳಾದ ನಾನೇ ಹೋಗಬೇಕಿತ್ತು.  ಆದರೆ ಅದನ್ನು ಮೊದಲು ಓದುವ ಹಕ್ಕು ಮಾತ್ರ ಅಣ್ಣಂದಿರದಾಗಿತ್ತು.  ಪುಸ್ತಕವನ್ನು ತಂದು ಅಣ್ಣನ ಕೈಗೆ ಕೊಡುವಷ್ತರಲ್ಲಿ ಜೀವ ಬಾಯಿಗೆ ಬಂದಷ್ಟು ಸಂಕಟವಾಗಿಬಿಡ್ತಿತ್ತು.  ಅದಕ್ಕೆ ನಾನು ಕಂಡುಕೊಂಡ ಉಪಾಯವೆಂದರೆ ಅಂಗಡಿಯಿಂದ ಮನೆಗೆ ಬರುವಷ್ಟರಲ್ಲಿ, ನನಗೆ ಬೇಕಾದ ಅಂಕಣಗಳೆಲ್ಲವನ್ನೂ ರಸ್ತೆಯಲ್ಲಿ ಓದುತ್ತಾ ಬರುವುದು!  ಹೀಗೆ ಓದುತ್ತಾ ಬರುವಾಗ ಲೆಕ್ಕವಿಲ್ಲದಷ್ಟು ಬಾರಿ ಜನರಿಗೆ ಢಿಕ್ಕಿ ಹೊಡೆದು, ಅವರ ಕೈಯಲ್ಲಿ ಬೈಸಿಕೊಂಡು ಬರುತ್ತಿದ್ದೆ.  ಮನೆಯ ಬಳಿಯೇ ಪುಟ್ಟದೊಂದು ಲೈಬ್ರರಿ ಇತ್ತು.  ಅದರ ಓನರ್ ನ ಮಗ ನನ್ನ ಶಾಲೆಯಲ್ಲಿ ಸಹಪಾಠಿ.  ಹಾಗಾಗಿ ಅಲ್ಲಿಯೇ ಕುಳಿತು ಎಷ್ಟೋ ಪುಸ್ತಕಗಳನ್ನು ಓದುತ್ತಿದ್ದೆ. ಇನ್ನೂ ಯುಗಾದಿ ಹಾಗೂ ದೀಪಾವಳಿ ಸಮಯದಲ್ಲಿ ಬರುತ್ತಿದ್ದ ಸುಧಾ ವಿಶೇಷಾಂಕಗಳು! ಬೆಳಿಗ್ಗೆ ಬೇಗ ೪ ಗಂಟೆಗೆ ಎದ್ದು ಮೊದಲಿಗೆ ಯಾರು ಅಭ್ಯಂಜನ ಸ್ನಾನ ಮಾಡುವರೋ, ಅವರಿಗೆ ಆ ವಿಶೇಷಾಂಕ ಓದುವ ಹಕ್ಕು - ಅಮ್ಮನ ರೂಲ್!  ನನಗೂ, ಕೊನೆ ಅಣ್ಣನಿಗೂ ಬೇಗ ಏಳುವ ಸ್ಪರ್ಧೆ! ಪೆಚ್ಚು ಮುಖ ಹಾಕಿಕೊಳ್ಳುವ ನನ್ನನ್ನು ನೋಡಿ, ’ಹೋಗಲಿ ಬಾ! ಒಟ್ಟಿಗೆ ಓದೋಣ’ ಎನ್ನುತ್ತಿದ್ದ ಅಣ್ಣಾ. ಮಿಕ್ಕೆಲ್ಲಾ ದಿವಸಗಳಲ್ಲಿ ಇಷ್ಟೇ ದೋಸೆ ತಿನ್ನಬೇಕೆಂಬ ರೂಲ್ ಇದ್ದ ನಮಗೆ, ಅಂದು ಮಾತ್ರ ಎಷ್ಟು ಬೇಕಾದರೂ ದೋಸೆ ತಿನ್ನುವ ಅದೃಷ್ಟ. ದೋಸೆ ಮೆಲ್ಲುತ್ತಾ, ವಿಶೇಷಾಂಕವನ್ನು ಓದುತ್ತಾ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ! 

ನನಗೂ, ನನ್ನ ಕೊನೆಯ ಅಣ್ಣನಿಗೂ ೨ ವರ್ಷಗಳ ಅಂತರ. ನಾವಿಬ್ಬರೂ ಸ್ನೇಹಿತರಂತೆಯೇ ಬೆಳೆದವರು. ಶಾಲೆಗೆ ರಜೆ ಶುರುವಾದಾಗ ಅಣ್ಣನ ಒಂದೊಂದೇ ಹುಚ್ಚು ಪ್ರಕಟವಾಗುತ್ತಿತ್ತು.  ಆತನಿಗೆ ಕರಾಟೆಯ ಹುಚ್ಚು ಬಹಳ. ಅದಕ್ಕಾಗಿ ದೇಹವನ್ನು ಹುರಿಗೊಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದ. ಅದರಲ್ಲೊಂದು ಬೆಳ್ಳಂಬೆಳಿಗ್ಗೆ ೪ ಗಂಟೆಗೆ ಕಬ್ಬನ್ ಪಾರ್ಕಿಗೆ ಜಾಗಿಂಗ್ ಹೋಗುವುದು.  ಅಕ್ಕಪಕ್ಕದ ಗೆಳೆಯರನ್ನೆಲ್ಲ ಹುರಿದುಂಬಿಸಿ, ನನ್ನನ್ನು ಕೂಡ ಎಳೆದುಕೊಂಡು ೪ ಗಂಟೆಗೆ ಹೋಗುತ್ತಿದ್ದ.  ನಾನಾದರೋ ಈ ಆಟ / ಎಕ್ಸರ್ಸೈಸ್ ಮುಂತಾದವುಗಳಲ್ಲಿ ಬಲು ಸೋಮಾರಿ.  ಹಾಗೂ ಹೀಗೂ ೭ ಗಂಟೆಯಾದೊಡನೆ, ಕಬ್ಬನ್ ಪಾರ್ಕಿನ ಸೆಂಟ್ರಲ್ ಲೈಬ್ರರಿ ನನ್ನನ್ನು ಸೆಳೆದುಕೊಂಡುಬಿಡುತ್ತಿತ್ತು. ಅಣ್ಣನಿಗೆ ನನಗಿಂತಲೂ ಓದುವ ಹಂಬಲ ಬಹಳ. ಆಗ ಅಲ್ಲಿ ಮನೆಗೆ ತರಲು ಕೂಡ ಪುಸ್ತಕಗಳನ್ನು ಕೊಡುತ್ತಿದ್ದರೆಂಬ ನೆನಪು. ನಾವಿಬ್ಬರೂ ಆಗ ೪,೫ ಕ್ಲಾಸಿನಲ್ಲಿದ್ದವರು. ಆ ವಯಸ್ಸಿನಲ್ಲಿ, ಅರ್ಥವಾಗುತ್ತಿತ್ತೋ, ಇಲ್ಲವೋ,  ಸೆಂಟ್ರಲ್ ಲೈಬ್ರರಿಯಲ್ಲಿ ನಾವಿಬ್ಬರೂ ಎಡತಾಕುತ್ತಿದ್ದದ್ದು ಮಾತ್ರ ಪತ್ತೇದಾರಿ ಕಾದಂಬರಿಗಳಿಗಾಗಿ.  ಅಲ್ಲಿಯೇ ಕುಳಿತು ಪತ್ತೇದಾರಿ ಕಾದಂಬರಿಗಳನ್ನು ಓದಿ (ಮನೆಗೆ ತರಲು ಅಮ್ಮನ ಭಯ), ಮಕ್ಕಳ ಪುಸ್ತಕಗಳನ್ನು ಮನೆಗೆ ತರುತ್ತಿದ್ದೆವು.  ಕಬ್ಬನ್ ಪಾರ್ಕಿನಲ್ಲಿರುವ ಮಯೂರ ಹೋಟೇಲ್ ನ ಜೋಕಾಲಿಯಲ್ಲಿ ಕುಳಿತು, ಪುಸ್ತಕಗಳನ್ನು ಓದಿದ ನೆನಪು ಇಂದಿಗೂ ಆಹ್ಲಾದಕರ.  ಹೀಗೆ ಒಮ್ಮೆ ಪತ್ತೆದಾರಿ ಸೆಕ್ಷನ್ ನಲ್ಲಿ, ಪುಸ್ತಕಗಳನ್ನು ಹುಡುಕುತ್ತಿರುವಾಗ, ವೃದ್ಧರೊಬ್ಬರು ನಾವು ಏನನ್ನು ಹುಡುಕುತ್ತಿದ್ದೇವೆ? ಎಂದು ವಿಚಾರಿಸಿ, ನಮ್ಮ ಉತ್ತರ ತಿಳಿದು, ತಲೆಗೊಂದು ಮೊಟಕಿ, "ಪತ್ತೇದಾರಿ ಪುಸ್ತಕಗಳನ್ನು ಈ ವಯಸ್ಸಿನಲ್ಲಿ ಓದುತ್ತೀರಾ?" ಎಂದು ಬೈದ ಮೇಲೆ, ನಾವೇನೋ ಅಪರಾಧ ಮಾಡುತ್ತಿದ್ದೇವೆ ಎಂಬ ಭಾವ ಮೂಡಿ ಅಂದಿನಿಂದ ನನ್ನ ಪತ್ತೇದಾರಿ ಕಾದಂಬರಿಗಳ ಓದುವಿಕೆಗೊಂದು ಪುಲ್ ಸ್ಟಾಪ್. ಆದರೂ ಸೆಂಟ್ರಲ್ ಲೈಬ್ರರಿ, ಅಲ್ಲಿನ ವಾತಾವರಣ, ಅಲ್ಲಿನ ಪುಸ್ತಕಗಳು ಮಾಡುತ್ತಿದ್ದ ಮೋಡಿ ಎಷ್ಟೇ ನೆನಪಿನಲ್ಲಿಲ್ಲವೆಂದು ನಾನು ಹೇಳಿದರೂ, ಹಾಗೆಯೇ ಕಣ್ಣಮುಂದೆ ಸುಳಿದಾಡುತ್ತದೆ.  

ಈಗಾಗಲೇ ಕಾಲೇಜಿನಲ್ಲಿ ಓದುತ್ತಿದ್ದ ಅಣ್ಣಂದಿರು ತರುತ್ತಿದ್ದ ಯಂಡಮೂರಿಯವರ ಪುಸ್ತಕಗಳು ರೋಚಕತೆ ಉಂಟುಮಾಡುತ್ತಿದ್ದವು, ಬೆಳದಿಂಗಳ ಬಾಲೆಯಂತೂ ಮನಸ್ಸಿನಲ್ಲಿ ಅಚ್ಚಾಗಿಬಿಟ್ಟಿತ್ತು. ಅದರಲ್ಲಿನ ಪದಬಂಧ, ಆಕೆ ಕೇಳುವ ಪ್ರಶ್ನೆಗಳೆಲ್ಲವನ್ನೂ, ಪುಸ್ತಕದಲ್ಲಿ ಬರೆದುಕೊಂಡು ಅದನ್ನು ನಾವೇ ‘ರೇವಂತ್’ ನಂತೆ ಬಗೆಹರಿಸುತ್ತಿದ್ದ ಪರಿ, ಓಹ್! ಈಗ ನೆನಪಿಸಿಕೊಂಡರೂ, ನಗೆಯೊಂದು ಮುಖದಲ್ಲಿ ಮೂಡುತ್ತದೆ. ಬೆಳಿಗ್ಗೆ ತಿಂಡಿ ತಿನ್ನುವಾಗಲೂ, ಊಟ ಮಾಡುವಾಗಲೂ ಈ ಪುಸ್ತಕವಂತೂ ಕೈಯಲಿದ್ದೇ ಇರುತ್ತಿತ್ತು. ಎಷ್ಟು ಸಲ ಓದಿದರೂ ಬೋರ್ ಆಗುತ್ತಿರಲಿಲ್ಲ.  ಹಾಗಾಗಿ ಈ ಕಥೆ ಚಲನಚಿತ್ರವಾಗಿ ಮೂಡಿ ಬಂದಾಗ, ಕುತೂಹಲಕೆಂದು ಹೋದವಳಿಗೆ ಅರ್ಧಕ್ಕೆ ಎದ್ದು ಬರಬೇಕೆಂದು ಅನಿಸಿಬಿಟ್ಟಿತ್ತು.  ಅನಂತನಾಗ್ ಆ ಪಾತ್ರಕ್ಕೆ ಸೂಕ್ತ ಎನಿಸಿದರೂ, ನನ್ನ ಕಲ್ಪನೆಯಲ್ಲಿನ ‘ಬೆಳದಿಂಗಳ ಬಾಲೆ’ ಯ ಪಾತ್ರಗಳು, ಮುಖ್ಯವಾಗಿ ‘ನಾಯಕಿ’ ಹಾಗೂ ಆಕೆಯ ‘ಧ್ವನಿ’ ಗೂ ಹಾಗೂ ಚಲನಚಿತ್ರದ ನಾಯಕಿಯ ಧ್ವನಿಗೂ ಸ್ವಲ್ಪವೂ ಹೋಲಿಕೆಯಿರಲಿಲ್ಲ. ಚಿತ್ರ ನೋಡಿ ಭ್ರಮನಿರಸನವಾಗಿಬಿಟ್ಟಿತ್ತು. ‘ಗುಲಾಬಿ ಟಾಕೀಸ್’ ಚಿತ್ರ ನೋಡಿದ ಮೇಲೆ, ಇತ್ತೀಚೆಗೆ ನಾನು ವೈದೇಹಿಯವರ ‘ಗುಲಾಬಿ ಟಾಕೀಸ್’ ಕಥೆ ಓದಿದೆ.  ಚಿತ್ರಕ್ಕೂ, ಕಥೆಗೂ ಸ್ವಲ್ಪವೂ ಹೋಲಿಕೆಯಿಲ್ಲವೆಂದೆನಿಸಿ ಬೇಸರವಾಯಿತು.  ಪುಸ್ತಕಗಳನ್ನು ಓದುತ್ತಾ, ಕಲ್ಪನೆಯಲ್ಲಿ ಆಯಾ ಪಾತ್ರಗಳನ್ನು ಸೃಷ್ಟಿಸುತ್ತಾ, ಕಲ್ಪನೆಯಲ್ಲಿಯೇ ಪುಸ್ತಕದ ದೃಶ್ಯಾವಳಿಗಳನ್ನು ನೋಡುವುದು ಸಿನೆಮಾಗಳಿಗಿಂತ ನನಗೆ ಹೆಚ್ಚು ಖುಷಿ ನೀಡುತ್ತದೆ. ಬಾಲ್ಯದಲ್ಲಿ ಮೋಡಿ ಮಾಡಿದ ಮತ್ತೊಂದು ಪುಸ್ತಕ ಪೂರ್ಣ ಚಂದ್ರ ತೇಜಸ್ವಿಯವರ ‘ಕರ್ವಾಲೋ’  ಒಂದೊಂದು ಪಾತ್ರಗಳು ಕಣ್ಣ ಮುಂದೆ ಜೀವಂತ, ಪ್ರೊಫೆಸರ್, ಮಂದಣ್ಣ, ಹಾರುವ ಓತಿ, ಅಲ್ಲಿನ ಪರಿಸರ, ಜೇನು ತೆಗೆಯುವ ಪ್ರಸಂಗ, ‘ಕಿವಿ’ ಯ ತರಲೆಗಳು, ಸುಮಾರು ೧೦೦, ೨೦೦ ಬಾರಿ ಆ ಪುಸ್ತಕವನ್ನು ಓದಿರಬಹುದೇನೋ?  ಪ್ರತಿ ವಾಕ್ಯಗಳು ಬಾಯಿಪಾಠವಾಗಿಬಿಟ್ಟಿತ್ತು.  ಆದರೂ ಅದನ್ನು ಓದುವಾಗೆಲ್ಲಾ ಆಗಷ್ಟೇ ನಮ್ಮ ಮುಂದೆ ಘಟನೆಗಳು ನಡೆದವೇನೋ? ಎನ್ನುವ ಭಾವ. ಮತ್ತೊಂದು ಪುಸ್ತಕ - ಬಹುಶಃ ತ್ರಿವೇಣಿಯವರದೇನೋ ಗೊತ್ತಿಲ್ಲ, ಅದರಲ್ಲಿನ ನಾಯಕಿ, ಆಕೆಗೆ ಮಲತಾಯಿ, ನಾಯಕಿಗೆ ಹುಚ್ಚು ಹಿಡಿಯುವುದು, ನಾಯಕನ ಹೆಸರು ರಾಜಶೇಖರ(?) ಆತ ಅವಳನ್ನು ಮಾನಸಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟ್ರೀಟ್ ಮೆಂಟ್ ಕೊಡಿಸುವುದು, ಹೀಗೆ ಇದು ಕೂಡ ಮನಸ್ಸಿನಲ್ಲಿ ಅಚ್ಚೊತ್ತಿತ್ತು.  ಮನೆಗೆ ಬಂದ ನೆಂಟರೆಲ್ಲರೂ ನೀವು ಶಾಲೆಯ ಪುಸ್ತಕಗಳನ್ನು ಬಿಟ್ಟು, ಕಥೆ, ಕಾದಂಬರಿಗಳನ್ನು ಓದಲೇಕೆ ಬಿಡುತ್ತೀರಿ? ಎಂದು ಅಮ್ಮನಿಗೆ ಆಕ್ಷೇಪಿಸುತ್ತಿದ್ದರೂ, ಅಮ್ಮ ಮಾತ್ರ ನಮಗೆ ತಡೆಯನ್ನೊಡ್ಡುತ್ತಿರಲಿಲ್ಲ. 

ಹೀಗೆ ಪತ್ತೇದಾರಿ ಕಾದಂಬರಿಗಳಿಂದ ಶುರುವಾದ ನನ್ನ ಓದುವ ಚಟ, ಯಂಡಮೂರಿ, ತ್ರಿವೇಣಿ, ತೇಜಸ್ವಿಯವರಿಂದ ಆಕರ್ಷಿತಗೊಂಡು, ಗಂಭೀರ ಓದಿನತ್ತ ತಿರುಗಿದ್ದು ಭೈರಪ್ಪನವರ ‘ಪರ್ವ’ ಓದಿದ ನಂತರ.  ‘ಪರ್ವ’ ಓದಿದ ನಂತರ ನಾನು ಒಂದೆರಡು ತಿಂಗಳು ನಾನೇ ಆಗಿರಲಿಲ್ಲ. ಉಸಿರು ಕಟ್ಟಿದಂತೆ ಭೈರಪ್ಪನವರ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿ, ಒಮ್ಮೆಗೇ ಭೈರಪ್ಪನವರ ಎಲ್ಲಾ ಪುಸ್ತಕಗಳನ್ನು ಓದಬೇಡಾ, ಹುಚ್ಚು ಹಿಡಿದೀತು! ಎಂದು ಗೆಳೆಯನೊಬ್ಬನ ಕೈಲಿ ಬುದ್ಧಿ ಹೇಳಿಸಿಕೊಂಡಿದ್ದೆ.  ‘ಹಲಗೆ ಬಳಪ’ ದಲ್ಲಿ ರಾಘವೇಂದ್ರ ಜೋಷಿಯವರು ಬರೆದಂತೆ ನನಗೆ ಬರೆದವರಾರು? ಎಂಬುದು ಎಂದಿಗೂ ಮುಖ್ಯವಾಗಿರಲಿಲ್ಲ. ನನಗೆ ಪುಸ್ತಕಗಳ ಶೀರ್ಷಿಕೆ ಕೂಡ ನೆನಪಿರುತ್ತಿರಲಿಲ್ಲ. ಇಂದಿಗೂ ಕೂಡ.  ಯಾವುದೇ ಪುಸ್ತಕವಾದರೂ ನಡೆದೀತು, ಓದಲಷ್ಟೇ ಬೇಕಿತ್ತು. ಈಗಲೂ ಕೂಡ ಯಾರಾದರೂ ಆ ಪುಸ್ತಕ ಓದಿದ್ದೀರಾ? ಈ ಪುಸ್ತಕ ಓದಿದ್ದೀರಾ? ಎಂದು ಕೇಳಿದರೆ ತಕ್ಷಣ ನನಗೆ ನೆನಪಾಗುವುದಿಲ್ಲ. ಓದಿಲ್ಲವೆಂದುಕೊಂಡು ಮನೆಗೆ ತಂದು ಓದಲು ಶುರು ಮಾಡಿದಾಗ ಅರೆ! ಓದಿದ್ದೆ ಎಂಬ ಅರಿವಾಗುತ್ತದೆ.   ಇತ್ತೀಚೆಗೆ ಗೆಳೆಯನೊಬ್ಬ ತಾನು ಬರೆದವರು ಯಾರು ಎಂಬುದನ್ನು ತಿಳಿದುಕೊಂಡ ನಂತರವೇ ಪುಸ್ತಕವನ್ನು ಓದಲು ಶುರು ಮಾಡುವುದು ಎಂದಾಗ, ನನಗೂ ಕೂಡ ಜ್ಞಾನೋದಯವಾಗಿ ನೆನಪಿನಲ್ಲಿಟ್ಟುಕೊಳ್ಳಲು ಶುರು ಮಾಡಿದ್ದೇನೆ. ಪುಸ್ತಕವೊಂದನ್ನು ಓದಲು ಶುರು ಮಾಡಿದರೆ ಉಸಿರುಗಟ್ಟಿದಂತೆ ಓದುವುದು ನನ್ನ ಅಭ್ಯಾಸ.  ತಿಂಡಿ ತಿನ್ನುವಾಗ, ಊಟ ಮಾಡುವಾಗ ಎಲ್ಲ ಸಮಯದಲ್ಲಿಯೂ ಅದನ್ನು ಓದಿ ಮುಗಿಸಿದ ಮೇಲೆ ಸಮಾಧಾನ. ಅಕಸ್ಮಾತ್ ಎಲ್ಲಿಯಾದರೂ ಇದಕ್ಕೆ ಅಡಚಣೆ ಆಯಿತೋ ಅಥವಾ ಆ ಪುಸ್ತಕದ ಭಾವ ನನ್ನೊಳಗೆ ಇಳಿಯಲಿಲ್ಲವೋ, ನಂತರ ಆ ಪುಸ್ತಕವನ್ನು ಪೂರ್ತಿಯಾಗಿ ಓದಲಾಗುವುದೇ ಇಲ್ಲ. ಈ ಓದುವ ಕ್ರಮ ತಪ್ಪೋ, ಏನೋ ಎನ್ನುವ ಅಳುಕು ಮನದ ಮೂಲೆಯಲ್ಲಿತ್ತು. ಅದು ‘ಹಲಗೆ ಬಳಪ’ ಓದಿದ ನಂತರ ಮರೆಯಾಯಿತು.

Wednesday, October 3, 2012

ಭ್ರಮೆ!


ಭ್ರಮೆ ಹರಿಯಿತು!
ಮನ ಮಸುಕಾಯಿತು
ಓದಿದ್ದೆಷ್ಟೋ, ಬರೆದಿದ್ದೆಷ್ಟೋ
ಗುಲಾಮನಾದರೂ
ದೊರೆಯಲಿಲ್ಲ ಮುಕುತಿ
ಅನುಭವ ದಕ್ಕಲಿಲ್ಲ

ಸಂಬಂಧ ತೆಳುವಾಯಿತು
ಮಾತು ಬಡವಾಯಿತು
ಹಣ್ಣೆಲೆ ಮಾಗಲಿಲ್ಲ
ಚಿಗುರು ಬೆಳೆಯಲಿಲ್ಲ
ಓದಿಗೂ, ಪ್ರಬುದ್ಧತೆಗೂ
ಬಂಧ ಮೂಡಲಿಲ್ಲ

ಆಗಸ ಬಿಸಿಯಾಯಿತು
ನಳನಳಿಸುತ್ತಿದ್ದ
ಕಾಯಿ ಬಾಡಿತು
ತಂಪಾದ ಇಳೆ
ಬೀಸಿದ ಬಿರುಗಾಳಿಗೆ
ಕಾದು ಕೆಂಪಾಯಿತು

ಕತ್ತಲೆ ಕವಿಯಿತು
ಅರಮನೆಯಲ್ಲೀಗ
ಮೌನ ಮೆರವಣಿಗೆ
ಸೃಷ್ಟಿಸಿದವರಾರು?
ಅಳಿಸಿದವರಾರು?
ಅರಿವು ಮೂಡಲಿಲ್ಲ

Wednesday, September 26, 2012

ಬರ್ಫಿ - ಚಿತ್ರ ವಿಮರ್ಶೆ


ಬರ್ಫಿ - ಆತನೊಬ್ಬ ಕಿವುಡ, ಮೂಗ, ಅವಿದ್ಯಾವಂತ ಹಾಗೂ ಬಡವ. ಇವನ ತಾಯಿ ಈತ ಹುಟ್ಟಿದಾಗಲೇ ಸಾಯುತ್ತಾಳೆ.  ಅಪ್ಪನೇ ಅಮ್ಮನೂ ಆಗಿ ಇವನನ್ನು ಸಾಕುತ್ತಾನೆ.  ಇಷ್ಟೆಲ್ಲಾ ಇದ್ದರೂ ಇವನಲ್ಲಿ ತುಂಟತನಕ್ಕೇನೂ ಕೊರತೆಯಿಲ್ಲ. ತುಂಬಿದ ಜೀವಂತಿಕೆ ಇವನಲ್ಲಿ! ಪದಗಳಲ್ಲಿ ಮಾತನಾಡದಿದ್ದರೂ, ತಾನಾಡಬೇಕೆಂದಿರುವುದನ್ನು ತುಸು ಹೆಚ್ಚೇ ಈತನ ಕಣ್ಣು, ಮೂಗು, ಇನ್ನಿತರ ದೇಹದ ಅಂಗಾಂಗಗಳೆಲ್ಲವೂ ಮಾತನಾಡುತ್ತವೆ. ಸಿಕ್ಕಾಪಟ್ಟೆ ವಾಚಾಳಿ! ರಜೆಗೆಂದು ಇವನ ಊರಿಗೆ ಬಂದ ವಿದ್ಯಾವಂತೆ, ಸುಂದರಿ ಹುಡುಗಿಯೊಬ್ಬಳು, ಈತನ ತುಂಟತನಕ್ಕೆ,  ಈತನಲ್ಲಿನ ಜೀವಂತಿಕೆಗೆ ಮಾರುಹೋಗಿ, ಈಗಾಗಲೇ ಬೇರೊಬ್ಬನೊಟ್ಟಿಗೆ ನಿಶ್ಚಿತಾರ್ಥವಾಗಿದ್ದರೂ, ಈತನನ್ನು ಪ್ರೀತಿಸಲು ಶುರು ಮಾಡುತ್ತಾಳೆ.  ಇಬ್ಬರ ನಡುವೆ ಪ್ರೀತಿ ಅಂಕುರಿಸುತ್ತದೆ. ಮಾತಿಲ್ಲ, ಕಥೆಯಿಲ್ಲ. ಆದರೂ ಇಬ್ಬರೂ ಒಬ್ಬರನ್ನೊಬ್ಬರು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇವಳ ತಾಯಿ, ಇವಳಲ್ಲಿನ ಬದಲಾವಣೆಯನ್ನು ಗುರುತಿಸಿ, ಪ್ರೀತಿ ಮಾಡು ತಪ್ಪಿಲ್ಲ, ಆದರೆ ಮದುವೆ ಮಾತ್ರ ನಿಶ್ಚಿತಾರ್ಥವಾದ  (ಶ್ರೀಮಂತ,  ವಿದ್ಯಾವಂತ ಜೊತೆಗೆ ಈತನಂತೆ ಅಂಗವಿಕಲನಲ್ಲ!) ಹುಡುಗನೊಟ್ಟಿಗೆ ಆಗುವುದು ಒಳ್ಳೆಯದು ಎಂದು ಬುದ್ಧಿಮಾತು ಹೇಳುತ್ತಾಳೆ.  ನಿಶ್ಯಬ್ಧವಾಗಿ ಇಬ್ಬರೂ ಪ್ರೀತಿಸುತ್ತಿದ್ದೀರಿ, ಕೊನೆಗೆ, ನಿಮ್ಮಿಬ್ಬರ ನಡುವಿನ ಈ ನಿಶ್ಯಬ್ದವೇ ನಿಮ್ಮ ಪ್ರೀತಿಯನ್ನು ನುಂಗಿ ಹಾಕುತ್ತದೆ ಎಂಬ ತಾಯಿಯ ಮಾತಿಗೆ ಮರುಳಾಗದಿದ್ದರೂ, ತಂದೆತಾಯಿಯನ್ನು ವಿರೋಧಿಸುವಷ್ಟು ಧೈರ್ಯ ಇಲ್ಲದವಳು ಇವಳು!  ಸಮಾಜದಲ್ಲಿ ಮೇಲು ಸ್ತರದಲ್ಲಿ ಜೀವಿಸಲು ಈತನಲ್ಲಿ ಯಾವುದೇ ಅರ್ಹತೆಗಳು ಇಲ್ಲವೆಂದು ನಂಬಿರುವ ಈ ಹುಡುಗಿಯ ತಂದೆ ತಾಯಿಯ ಬಳಿಯೇ ಹೋಗಿ,  ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ, ಮದುವೆ ಮಾಡಿಕೊಡಿ ಎಂದು ಬೇರೊಬ್ಬರ ಕೈಯಲ್ಲಿ ಬರೆಸಿ ತಂದ ಪತ್ರವನ್ನು ನೀಡುವಷ್ಟು ಧಾರ್ಷ್ಟ್ಯ ಈತನಿಗೆ! ಆಕೆಯ ತಾಯಿ ಬಹು ಜಾಣತನದಲ್ಲಿ ಭಿಕ್ಷೆ ಕೇಳಲು ಬಂದವನೆಂದು ಗಂಡನಲ್ಲಿ ಮರೆಮಾಚುವುದು, ಆಕೆಯ ಮನೆಯಲ್ಲಿನ ವಾತಾವರಣ, ಆಕೆಯ ತಂದೆತಾಯಿಯಷ್ಟು ಸುರಕ್ಷಿತವಾಗಿ ತನಗೆ ನೋಡಿಕೊಳ್ಳಲು ಅಸಾಧ್ಯ ಎಂಬ ಸತ್ಯದ ಅರಿವು, ಆಕೆ ಯಾರನ್ನಾದರೂ ಮದುವೆಯಾಗಲಿ, ಖುಷಿಯಾಗಿದ್ದರೆ ಸಾಕು ಎಂಬ ಮನಸ್ಸು, ತನ್ನ ಪ್ರೀತಿಯನ್ನು ತ್ಯಾಗ ಮಾಡುವಂತೆ ಮಾಡಿಬಿಡುತ್ತದೆ.  ಹಾಗೂ ಆಕೆಯಲ್ಲಿ ಒಳ್ಳೆಯ ಸ್ನೇಹಿತೆಯನ್ನು ಕಾಣಲು ಶುರುಮಾಡಿಬಿಡುತ್ತಾನೆ. ಈಗ ಕಥೆಗೊಂದು ತಿರುವು.  ಅಲ್ಲೊಬ್ಬಳು ಬುದ್ಧಿಮಾಂದ್ಯತೆಯಿರುವ ಹುಡುಗಿ, ಚಿಕ್ಕಂದಿನಿಂದಲೂ ಇವನ ಹಾಗೂ ಆಕೆಯ ನಡುವೆ ಸ್ನೇಹವಿರುತ್ತದೆ.  ಆಕೆಗೊಬ್ಬ ಶ್ರೀಮಂತ ತಾತ.  ಆತ ತೀರಿಹೋದಾಗ, ಇವಳ ಹೆಸರಿಗೆ ಆಸ್ತಿಯೆಲ್ಲವನ್ನೂ ಬರೆದಿರುತ್ತಾನೆ.  ತಾತ ತೀರಿಕೊಂಡ ಮೇಲೆ, ಅಪ್ಪ, ಅಮ್ಮ ಇದ್ದರೂ ಕೂಡ ಅನಾಥಳಾಗುತ್ತಾಳೆ ಇವಳು! ಕಥೆಗೆ ಮತ್ತೊಂದು ತಿರುವು! ಇವನ ತಂದೆ ಕಿಡ್ನಿ ತೊಂದರೆಯಿಂದಾಗಿ ಆಸ್ಪತ್ರೆ ಸೇರುತ್ತಾನೆ. ಈತ ದುಡ್ಡಿಗಾಗಿ ಬ್ಯಾಂಕ್ ದರೋಡೆ ಮಾಡಲು ವಿಫಲನಾಗಿ, ಈ ಬುದ್ಧಿಮಾಂದ್ಯ ಹುಡುಗಿಯನ್ನು ಕಿಡ್ನ್ಯಾಪ್ ಮಾಡುತ್ತಾನೆ.  ಇವಳಲ್ಲಿನ ಮುಗ್ಧತೆಗೆ ಸೋಲುತ್ತಾನೆ.  ತಾತ ತೀರಿಹೋದ ಮೇಲೆ ಅನಾಥ ಪ್ರಜ್ಞೆ ಅನುಭವಿಸುತ್ತಿದ್ದ ಇವಳಿಗೆ ಆಸರೆಯಾಗುತ್ತಾನೆ.  ಹಾ! ಪ್ರೀತಿ ಎಂದರೆ ಹೀಗಿರಬೇಕು ಎನ್ನುವುದಕ್ಕೆ ಇಬ್ಬರೂ ಮಾದರಿಯಾಗುತ್ತಾರೆ. ಗಂಡನನ್ನು ಬಿಟ್ಟು ಬಂದ ಮೊದಲನೇ ನಾಯಕಿ ಮತ್ತೆ ಈತನ ಜೀವನದಲ್ಲಿ ಪ್ರವೇಶ ಪಡೆಯುತ್ತಾಳೆ, ಬುದ್ಧಿಮಾಂದ್ಯತೆಯಿದ್ದರೂ ಪ್ರೀತಿ, ಅಸೂಯೆಗೇನೂ ಕೊರತೆಯಿಲ್ಲ ಇವಳಲ್ಲಿ! ಈತ ಈಗ ಏನು ಮಾಡುತ್ತಾನೆ? ಇದು ಚಿತ್ರದ ಕ್ಲೈಮಾಕ್ಸ್.  

ಆಧುನಿಕ ಅಮ್ಮಂದಿರ ಮನೋಭಾವ ಈ ಚಿತ್ರದಲ್ಲಿ ಚೆಂದವಾಗಿ ನಿರೂಪಿತಗೊಂಡಿದೆ.  ಹಿಂದೆಲ್ಲಾ ಪ್ರೀತಿ ಮಾಡುವುದೇ ತಪ್ಪು, ಅದರಲ್ಲೂ ಅಂಗವಿಕಲ, ಬಡವನನ್ನು ಪ್ರೀತಿ ಮಾಡುವುದು ಅಪರಾಧ, ನಿಶ್ಚಿತಾರ್ಥ ಆದ ಮೇಲೆ ಮದುವೆಯಾದಂತೆಯೇ, ಇನ್ಯಾರನ್ನೂ ಆಕೆ ತಲೆ ಎತ್ತಿ ನೋಡಲು ಕೂಡ ಒಲ್ಲದು!ಎಂಬ ಮನಸ್ಥಿತಿಯಿಂದ, ಪ್ರೀತಿ ಮಾಡು, ತಪ್ಪೇನಿಲ್ಲ, ಜೀವನ ಪೂರ್ತಿ ಅದನ್ನೊಂದು ಸುಂದರ ನೆನಪಾಗಿಟ್ಟುಕೋ, ಆದರೆ ಮದುವೆ ಮಾತ್ರ ಪ್ರಾಕ್ಟಿಕಲ್ ಆಗಿ ಯೋಚಿಸಿ, ನಿನಗೆ ಎಲ್ಲಾ ರೀತಿಯಲ್ಲೂ ಅನುರೂಪನಾದ ಗಂಡನ್ನು ಮಾಡಿಕೋ ಎಂದು ಅಮ್ಮ, ಮಗಳಿಗೆ ತಾನು ಕೂಡ ಹಾಗೇ ಮಾಡಿದ್ದು, ಹಾಗಾಗಿ ಇವತ್ತಿಗೂ ನನ್ನ ಜೀವನ ಸುಂದರವಾಗಿದೆ ಎಂದು ಬುದ್ಧಿ ಹೇಳುತ್ತಾಳೆ.  ಇದನ್ನು ಮಗಳು ಒಪ್ಪದಿದ್ದರೂ ವಿರೋಧವನ್ನು ಕೂಡ ಮಾಡುವುದಿಲ್ಲ. ಈ ಹಿಂದೆ ನಿಶ್ಚಿತಾರ್ಥವಾದ ಹುಡುಗನನ್ನೇ ಮದುವೆಯಾಗುತ್ತಾಳೆ.  ಆದರೆ ಜೀವನ ಅವಳದು ತೀರಾ ಯಾಂತ್ರೀಕೃತವಾಗಿಬಿಡುತ್ತದೆ.  ಗಂಡ, ಹೆಂಡತಿ ಇಬ್ಬರೂ ಕಿವುಡ, ಮೂಗರಲ್ಲದಿದ್ದರೂ ಇಬ್ಬರ ನಡುವೆ ನಿಶ್ಯಬ್ಧ ನೆಲೆಸಿಬಿಡುತ್ತದೆ.  ಈಗಾಗಲೇ ಬರ್ಫಿಯೊಟ್ಟಿಗೆ ಖುಷಿ ಎಂದರೇನು ಎನ್ನುವುದನ್ನು ಕಂಡುಕೊಂಡ ಇವಳಿಗೆ ಬದುಕು ಅಸಹನೀಯವಾಗಿಬಿಡುತ್ತದೆ.  ಅಮ್ಮ ತನ್ನನ್ನು ಟ್ರಾಪ್ ಮಾಡಿದಳು ಎಂಬುದು ಅರ್ಥವಾಗುತ್ತದೆ.  ಯಾವುದೇ ರೀತಿಯ ಕೊರಗಿಲ್ಲದೆ, ಯೋಚಿಸದೆ, ಆರಾಮವಾಗಿ ಗಂಡನನ್ನು ಬಿಟ್ಟು ಬಂದುಬಿಡುತ್ತಾಳೆ. ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು, ಅಪ್ಪ, ಅಮ್ಮನನ್ನು ಎದುರಿಸಿಯಾದರೂ ಪ್ರೀತಿ ಮಾಡಿದವನನ್ನೇ ಮದುವೆಯಾಗಬೇಕು, ಮದುವೆಯಾದರೆ ಮುಗಿಯಿತು, ಇನ್ಯಾವ ಕಾರಣಕ್ಕೂ ಇದು ಬೇರ್ಪಡದ ಸಂಬಂಧ, ಎಂಥ ಸಂದರ್ಭ ಬಂದರೂ ಹೊಂದಿಕೊಂಡು ಹೋಗಬೇಕು,  ಬೇರೆ ಗಂಡನ್ನು ಮದುವೆಯಾದ ಮೇಲೆ ಈ ಹಿಂದೆ ಪ್ರೀತಿಸಿದ ಗಂಡನ್ನು ಯಾವ ಕ್ಷಣದಲ್ಲೂ ನೆನಪಿಗೆ ತಂದುಕೊಳ್ಳುವುದು ಅಕ್ಷಮ್ಯ ಅಪರಾಧ ಎನ್ನುವ ಕಾಲಘಟ್ಟದಿಂದ, ಪ್ರೀತಿ ಯಾರನ್ನೂ / ಎಂಥವರನ್ನೂ ಬೇಕಾದರೂ ಮಾಡಬಹುದು, ಆದರೆ ಮದುವೆಯಾಗುವಾಗ ಮಾತ್ರ ಸೂಕ್ತ ಗಂಡನ್ನು, ಅಪ್ಪ ಅಮ್ಮ ಆರಿಸಿದ ಗಂಡನ್ನು ಮದುವೆ ಮಾಡಿಕೋ, ಮದುವೆಯಾದ ಮೇಲೆ ಇಷ್ಟ ಆಗಲಿಲ್ಲವೇ? ಬಿಟ್ಟು ಬಂದುಬಿಡು, ಎನ್ನುವ ಮನೋಭಾವ ಹುಟ್ಟಿಕೊಂಡಿದೆ ಎಂಬುದು ಯೋಚಿಸಬೇಕಾದ ವಿಷಯ. ಆಧುನಿಕ ಜಗತ್ತಿನಲ್ಲಿ ಆದ್ಯತೆಗಳು ಬದಲಾಗುತ್ತಿವೆ, ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವುದನ್ನು ಚಿತ್ರ ಸೂಚ್ಯವಾಗಿ ತೋರಿಸುತ್ತದೆ. ಅದರಲ್ಲೂ ಸುಶಿಕ್ಷಿತ?! ಯುವ ವರ್ಗ ಇಂತಹ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗದಿರುವಂಥ ಗೊಂದಲದ ವಾತಾವರಣ ಸೃಷ್ಠಿಯಾಗುತ್ತಿದೆ. ಇದಕ್ಕೆ ಆಧುನಿಕ ಮನೋಭಾವದ ಅಪ್ಪ / ಅಮ್ಮಂದಿರು ಕಾರಣವಾಗುತ್ತಿದ್ದಾರೆ. ಒಂದು ಕಡೆ ಹಣಕ್ಕಾಗಿ ಮಗಳನ್ನು ಸಾಯಿಸಿಬಿಡಲು ನಿರ್ಧರಿಸುವ ಅಪ್ಪ / ಅಮ್ಮ , ಮದುವೆಯಾಗಲು ಪ್ರೀತಿ ಮುಖ್ಯವಲ್ಲ ಎನ್ನುವ ಮನೋಭಾವದ ಅಪ್ಪ / ಅಮ್ಮಂದಿರ ಮಧ್ಯದಲ್ಲಿ ಯುವ ವರ್ಗ ಮೂಕವಾಗುತ್ತಿದೆ, ಸರಿಯಾದ ವೇಳೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗದೆ, ಹತಾಶರಾಗುತ್ತಿದ್ದಾರೆ, ಇಷ್ಟೆಲ್ಲದರ ನಡುವೆಯೂ ಯಾವುದೇ ಲೆಕ್ಕಾಚಾರವಿಲ್ಲದೆ, ಮುಗ್ಧತೆಯಿಂದ (ಬುದ್ಧಿಮಾಂದ್ಯರಂತೆ ಕಂಡರೂ) ಜೀವನವನ್ನು ಪ್ರೀತಿಸುವವರಿಗೆ ನೆಮ್ಮದಿ ಇರುತ್ತದೆ, ಸುಖವಾಗಿರುತ್ತಾರೆ ಎಂಬ ಸಂದೇಶದ ಜೊತೆಜೊತೆಗೆ ಪ್ರಸ್ತುತ ಸಮಾಜದಲ್ಲಿ ಸಂಬಂಧಗಳು ತೀರಾ ತೆಳುವಾಗುತ್ತಿದೆಯೇ? ಎಂಬ ಚಿಂತೆಯನ್ನು ಚಿತ್ರವು ಹುಟ್ಟು ಹಾಕುತ್ತದೆ.

ರಣಬೀರ್ ಕಪೂರ್ ಹಾಗೂ ಪ್ರಿಯಾಂಕ ಚೋಪ್ರಾ ಇಬ್ಬರ ಜೀವಮಾನ ಶ್ರೇಷ್ಠ ನಟನೆ.  ಇವರಿಬ್ಬರಿಗೆ ಸರಿಯಾದ ಸಾಥ್ ನೀಡಿರುವುದು ಇಲಿಯಾನ. ಚಾರ್ಲಿ ಚಾಪ್ಲಿನ್ ಚಿತ್ರಗಳಿಂದ ಪ್ರಭಾವಿತಗೊಂಡಂತೆ ಕಂಡುಬಂದರೂ, ಚಾರ್ಲಿ ಚಾಪ್ಲಿನ್ ಚಿತ್ರದ ಅಂತ್ಯದಲ್ಲಿ ವೀಕ್ಷಕರನ್ನು ಕಾಡುವಂಥ ವಿಷಾದ, ಈ ಚಿತ್ರದಲ್ಲಿ ಕಾಡುವುದಿಲ್ಲ. ಇಡೀ ಚಿತ್ರದುದ್ದಕ್ಕೂ ರಣಬೀರ್ ತನ್ನ ನಟನೆಯಿಂದ ಎಲ್ಲರ ಮನಸೆಳೆದುಬಿಡುತ್ತಾರೆ. ಇಂತಹ ಒಬ್ಬ ಪ್ರೇಮಿ ನನಗೆ ಬೇಕು ಎನ್ನುವ ಭಾವ ಮನದಲ್ಲಿ ಮೂಡಿಸಿಬಿಡುತ್ತಾರೆ. ಸ್ವಲ್ಪ ಮಟ್ಟಿಗೆ ಸದ್ಮಾ ಹಾಗೂ ಚಾರ್ಲಿ ಚಾಪ್ಲಿನ್ ಚಿತ್ರಗಳ ಛಾಯೆಯಿದ್ದರೂ ಹಾಗೂ  ಬೇರೆ ಚಿತ್ರಗಳನ್ನು ಕಾಪಿ ಮಾಡಿದ್ದಾರೆಯೋ ಅಥವಾ ಕದ್ದಿದ್ದಾರೆಯೋ ಅಥವಾ ಪ್ರಭಾವಿತಗೊಂಡಿದ್ದಾರೆಯೋ? ಒಟ್ಟಿನಲ್ಲಿ ಎಲ್ಲೂ ಕೂಡ ಈ ಹಿಂದೆ ನಾವು ಈ ಚಿತ್ರಗಳನ್ನು ನೋಡಿದ್ದೇವೆ ಎಂಬುದು ಚಿತ್ರಕಥೆಯ ಓಘದಲ್ಲಿ ನಮಗೆ ಭಾಸವಾಗುವುದೇ ಇಲ್ಲ.  ಅಷ್ಟರಮಟ್ಟಿಗೆ ನಟನೆ, ಚಿತ್ರಕಥೆಯ ನಿರೂಪಣೆ, ನಿರ್ದೇಶನ ಯಶಸ್ವಿಯಾಗಿದೆ.  ಇನ್ನೂ, ಈ ಯಾವುದೇ ಚಿತ್ರಗಳನ್ನು ನೋಡದ ಪ್ರೇಕ್ಷಕನಿಗೆ ಅದ್ಭುತ ಚಿತ್ರವೊಂದು ಅನಾವರಣಗೊಂಡಂತಾಗಿದೆ.  

Wednesday, September 5, 2012

ಶಿಕ್ಷಕರ ದಿನಾಚರಣೆ

ಇವತ್ತು ಶಿಕ್ಷಕರ ದಿನಾಚರಣೆ. ಸೆಪ್ಟೆಂಬರ್ ೫ ಅಂದ ತಕ್ಷಣ ನನಗೆ ಮೊದಲು ನೆನಪಾಗೋದು ನಮ್ಮ ನಾಯಿ ಟಾಮಿ ಸತ್ತಿದ್ದು ಇದೇ ದಿನದಂದು. ನಾನು ತುಂಬಾ ಚಿಕ್ಕವಳಿದ್ದೆ. ೨ ನೇ ಕ್ಲಾಸೋ, ೩ನೇ ಕ್ಲಾಸೋ ಇರಬೇಕು. ಅಮ್ಮ ಎಬ್ಬಿಸಿ, ಟಾಮಿ ಸತ್ತು ಹೋಯಿತು ಅಂದಾಗ, ಹೋಗಮ್ಮ ಅಂತೇನೋ ಹೇಳಿ ಮತ್ತೆ ಮಲಗಿದ್ದೆ. ಅಣ್ನಂದಿರೆಲ್ಲರೂ ತುಂಬಾ ಅತ್ತಿದ್ದರಂತೆ. ಅಮ್ಮ ಅದಕ್ಕೆ ಇವಳಿಗೆ ಸ್ವಲ್ಪ ಕೂಡ ಫೀಲಿಂಗ್ ಇಲ್ಲವಲ್ಲ ಎಂದು ತಮಾಷೆ ಮಾಡಿದ್ದಳು. ನನ್ನದೊಂದು ಪುಟ್ಟ ಡೈರಿ ಇತ್ತು. ಅದ್ರಲ್ಲಿ ಶಿಕ್ಶಕರ ದಿನಾಚರಣೆಯಂದು ಟಾಮಿ ಸತ್ತಿದೆ, ನನಗೆ ತುಂಬಾ ಬೇಜಾರಾಗಿದೆ ಎಂದೇನೋ ಬರೆದುಕೊಂಡಿದ್ದೆ. ಅದಕ್ಕೆ ನಾನು ನನಗೂ ತುಂಬಾ ಬೇಜಾರಾಗಿದೆ, ಆದರೆ ನಿಮ್ಮ ತರಹ ಹೇಳಿಕೊಳ್ಳೊಕೆ ಬರೊಲ್ಲ ಅಂತಾ ಹೇಳಿದ್ದಕ್ಕೆ ಎಲ್ಲರೂ ಸಿಕ್ಕಾಪಟ್ಟೆ ಜೋರಾಗಿ ನಕ್ಕಿದ್ದರು. ಅವರಿಗೆ ತಮಾಷೆಯಾಗಿ ಕಂಡಿದ್ದರೂ, ನನಗೆ ತುಂಬಾ ಅವಮಾನವಾಗಿತ್ತು. ಹಾಗಾಗಿ ಅಂದಿನಿಂದ ಇಂದಿನವರೆಗೂ ಶಿಕ್ಷಕರ ದಿನಾಚರಣೆಯಂದು ಟಾಮಿಯ ನೆನಪು ಬಹಳ ಕಾಡುತ್ತದೆ

ನಾನು ಮೂರು ಸ್ಕೂಲ್ ಗಳಲ್ಲಿ ಓದಿದ್ದು, ಮನೆ ಹತ್ತಿರವೆಂದು ಪ್ರೈಮರಿ, ಅಣ್ನ ಜೊತೆ ಇರ್ತಾನೆ ಎಂದು ಮಿಡಲ್ ಸ್ಕೂಲ್, ಆಗ ತಾನೇ ಶುರುವಾಗಿದ್ದ ಹೈಸ್ಕೂಲ್ ನಲ್ಲಿ ಸೇರಲೇಬೇಕೆಂದು ಮಿಡಲ್ ಸ್ಕೂಲಿನ ಪ್ರಾಧ್ಯಾಪಕಿಯರ ಒತ್ತಾಯದಿಂದ ವಾಣಿ ಸ್ಕೂಲಿನಲ್ಲಿ ಹೈಸ್ಕೂಲ್ ಸೀಟ್ ತಪ್ಪಿ, ಕೊನೆಗೆ ಗಾಂಧಿನಗರದ ಕಾರ್ಪೋರೇಷನ್ ಸ್ಕೂಲಿಗೆ ಸೇರಬೇಕಾಯಿತು. ಏನು ಮಾತಾಡಿದರೆ ತಪ್ಪಾಗುವುದೋ ಎಂಬ ಸಂಕೋಚದಿಂದ ನನ್ನೊಳಗೆ ನಾನು ಹುದುಗಿ ಹೋಗಿದ್ದರಿಂದ, ನನಗೆ ಪ್ರೈಮರಿ ಶಾಲೆಯ ನೆನಪೇ ಇಲ್ಲ. ಈಗಾಗಲೇ ಅಣ್ಣಂದಿರೆಲ್ಲರೂ ಮಿಡಲ್ ಸ್ಕೂಲ್ ನಲ್ಲಿ ಕ್ಲಾಸಿಗೆ ಫಸ್ಟ್, ಸ್ಕೂಲಿಗೆ ಫಸ್ಟ್ ಬಂದು ತಮ್ಮಮ್ಮ ಛಾಪನ್ನು ಮೂಡಿಸಿಬಿಟ್ಟಿದ್ದರಿಂದ, ನಾನು ಎಷ್ಟೇ ಚೆನ್ನಾಗಿ ಓದಿದರೂ, ಓಹ್! ಅವರ ತಂಗಿ ಅಲ್ವೆ? ಅದಕ್ಕೆ ಇಷ್ಟು ಚಂದ ಓದ್ತಾಳೆ ಅನ್ನುವ ಸರ್ಟಿಫಿಕೇಟ್ ಸಿಕ್ಕಿಬಿಡ್ತಿತ್ತು. 

೫ನೇ ಕ್ಲಾಸಿನಲ್ಲಿ ಯಾವಾಗಲೂ ಫಸ್ಟ್ ಬರ್ತಿದ್ದ ನಾನು, ಒಮ್ಮೆ ಸೆಕಂಡ್ ಬಂದಾಗ ಸ್ನೇಹಿತೆಯೊಬ್ಬಳ ಬಳಿ, ಮೂರನೇ ಪರೀಕ್ಷೆಗೆ ಮೂರನೆಯವಳಾಗಿ ಬಂದರೆ ಮುಗೀತು ಎಂದು ತಮಾಷೆ ಮಾಡುತ್ತಿದ್ದಾಗ, ಕೇಳಿಸಿಕೊಂಡ ರಾಧಾ ಮಿಸ್ (ಆಕೆಯೇ ಪ್ರಿನ್ಸಿಪಾಲ್ ಕೂಡ) (ಈಗ ಗೊತ್ತಾಗುತ್ತೆ, ಮಿಸ್ / ಮೇಡಮ್ ವ್ಯತ್ಯಾಸ! ;-) ) ಕರೆದು ಸಿಕ್ಕಾಪಟ್ಟೆ ಬೈದಿದ್ದು ಇವತ್ತಿಗೂ ನೆನಪಿದೆ. ಅದೇ ಕೊನೆ, ಆಮೇಲೆ ಮಿಡಲ್ ಸ್ಕೂಲ್ ಮುಗಿಯುವವರೆಗೂ ನಾನೆಂದಿಗೂ ಸೆಕಂಡ್ ಕೂಡ ಬರಲಿಲ್ಲ.ಮತ್ತೊಬ್ಬ ಟೀಚರ್ ಅಹಲ್ಯಾ ಮಿಸ್, ಅವರದು ಸ್ವಲ್ಪ ಉಬ್ಬು ಹಲ್ಲು! ಅವರಿಗೆ ಸ್ಪಷ್ಟವಾಗಿ ‘ಷ’ ಹೇಳಲಾಗುತ್ತಿರಲಿಲ್ಲ. ‘ಅಷ್ಟೆ’ ಹೇಳಲು ‘ಅಟ್ಟೆ’ ಹೇಳುತ್ತಿದ್ದರು. ‘ಮರದ ಬಾಯಿ ಆಗಿದ್ದರೆ ಯಾವಾಗಲೋ ಒಡೆದು ಹೋಗ್ತಿತ್ತು, ಚರ್ಮ ಆಗಿದ್ದಕ್ಕೆ ಉಳಿದುಕೊಂಡಿದೆ ಅಟ್ಟೆ’. ಇದು ಅವರು ದಿನಕ್ಕೊಮ್ಮೆ ತರಗತಿಯಲ್ಲಿ ಹೇಳಲೇಬೇಕಾದ ಮಾತು. ಒಮ್ಮೆ ಅವರ ಈ ಮಾತನ್ನು ನಾನು ಅವರದೇ ಸ್ಟೈಲ್ ನಲ್ಲಿ ಮಿಮಿಕ್ರಿ ಮಾಡಿ ತೋರಿಸುತ್ತಿದ್ದೆ. ಹಿಂದೆ ತಿರುಗಿ ನೋಡಿದರೆ ಅಹಲ್ಯಾ ಮಿಸ್! ರೂಮಿಗೆ ಕರೆದು ಮುದ್ದು ಮಾಡಿ, ನಿನ್ನ ಅಣ್ಣಂದಿರು ಎಷ್ಟು ಒಳ್ಳೆಯವರು. ಒಂದು ದಿವಸಕ್ಕೂ ಹೀಗೆ ಮಾಡಿಲ್ಲ, ನೀನು ಹೀಗೆ ಮಾಡಬಹುದಾ? ಶಿಕ್ಷಕರು ಅಪ್ಪ, ಅಮ್ಮನ ತರಹ, ಗೌರವ ಕೊಡಬೇಕು ಎಂದಿದ್ದರು. ಆದರೆ ಮನೆಯಲ್ಲಿ ಅಣ್ಣಂದಿರು ಯಾವಾಗಲೂ ಅವರಿಗೆ ಹೀಗೆ ತಮಾಷೆ ಮಾಡ್ತಿದ್ದದ್ದು ಹೇಳಲು ಬಾಯೇ ಬಂದಿರಲಿಲ್ಲ. ಆದರೂ ಆಕೆ ಬುದ್ಧಿ ಹೇಳಿದ ರೀತಿಗೆ ನಾನವರ ಅಭಿಮಾನಿ ಆಗಿಬಿಟ್ಟೆ. ಮತ್ತೊಬ್ಬರು ವಿಜಯಲಕ್ಷ್ಮಿ ಮಿಸ್. ನನಗೆ ಅವರ ಜೊತೆಗಿನ ಒಡನಾಟ ಅಷ್ಟಿಲ್ಲದಿದ್ದರೂ, ಅಣ್ಣಂದಿರಿಗೆ ಅವರನ್ನು ಕಂಡರೆ ಇಷ್ಟವಾಗಿದ್ದರಿಂದ, ನನಗೂ ಕೂಡ ಅವರನ್ನು ಕಂಡರೆ ಪ್ರೀತಿ ಇತ್ತು. ಹಾಗೆಯೇ ಅವರಿಗೂ ಕೂಡ. ಅಕ್ಕನ ಮದುವೆ ಆದ ಮೇಲೆ ನನ್ನ ಶಾಲೆಯ ಶಿಕ್ಷಕರಿಗೆಂದು ಅಮ್ಮ ಕೊಟ್ಟ ಮೈಸೂರ್ ಪಾಕ್ ಅನ್ನು ದಾರಿಯುದ್ದಕ್ಕೂ ನಾನೇ ತಿನ್ನುತ್ತಾ ಹೋಗಿ, ಈ ಮೂವರು ಟೀಚರ್ಸ್ ಗೆ ಮಾತ್ರ ಉಳಿದದ್ದನ್ನು ಕೊಟ್ಟಿದ್ದೆ!

ಹೈಸ್ಕೂಲ್ ನಲ್ಲಿ ಅಕ್ಕ ಈಗಾಗಲೇ ಬಜಾರಿ / ಓದುವುದಿಲ್ಲ ಎಂದು ಕುಖ್ಯಾತಿ ಪಡೆದದ್ದರಿಂದ, ಅವಳ ತಂಗಿಯೆಂದೂ ನನ್ನ ಮೇಲೆ ಯಾವಾಗಲೂ ಹೆಚ್ಚಿನ ಕಣ್ಣು ಎಲ್ಲಾ ಶಿಕ್ಷಕರಿಗೂ ಇರುತ್ತಿತ್ತು. ೮ ನೇ ತರಗತಿಗೆ ಸ್ಕೂಲಿಗೆ ಮೊದಲಿಗಳಾಗಿ ಬಂದ ಮೇಲೆ ಸ್ವಲ್ಪ ಮಟ್ಟಿನ ಹೆಸರನ್ನು ಪಡೆದೆ. ಇಲ್ಲಿ ನಾಲ್ಕು ಶಿಕ್ಷಕರೂ ನನ್ನ ಮೇಲೆ ಸಿಕ್ಕಾಪಟ್ಟೆ ಪ್ರಭಾವ ಬೀರಿದ್ದರು. ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ಬದಲಾಯಿಸಿಕೊಂಡದ್ದರಿಂದ, ನನ್ನ ಇಷ್ಟದ ಗಣಿತ, ಇಂಗ್ಲೀಷ್ ನಿಂದಾಗಿ ಕಬ್ಬಿಣದ ಕಡಲೆಯಾಗಿತ್ತು. ಬ್ರಿಡ್ಜ್ ಕೋರ್ಸ್ ನಲ್ಲಿ ಧೈರ್ಯ ಮಾಡಿ ಗಣಿತದ ಟೀಚರ್ ನನ್ನು ನನಗೇನೂ ಅರ್ಥವಾಗುತ್ತಿಲ್ಲವೆಂದು ಕೇಳಿ, ಕನ್ನಡ ಬರದಿದ್ದರೂ (ಆಕೆ ಮುಸ್ಲಿಮ್) ಕಷ್ಟ ಪಟ್ಟು ನನಗೆ ಅರ್ಥ ಪಡಿಸಿದ್ದು ನನಗೆ ಮತ್ತೆ ಗಣಿತದ ಮೇಲೆ ಆಸಕ್ತಿ ಮೂಡಲು ಕಾರಣವಾಗಿತ್ತು. ಮತ್ತೊಬ್ಬಾಕೆ ಸೈನ್ಸ್ ಟೀಚರ್. ಸೈನ್ಸ್ ಎಕ್ಸಿಬಿಷನ್ ಗಾಗಿ ಚಂದ ಓದುವವರನ್ನೆಲ್ಲಾ (ನಾನು ಕೂಡ! ) ಆಯ್ಕೆ ಮಾಡಿಕೊಂಡು, ನಮ್ಮೆಲ್ಲರ ಕೈಯಲ್ಲಿ ವಾಯು ಮಾಲಿನ್ಯದ ಬಗ್ಗೆ ದೊಡ್ಡದೊಂದು ಬೇತಾಳದಂಥ ಮಾಡೆಲ್ ಮಾಡಿಸಿದ್ದು, ಕನ್ನಡದಲ್ಲಿ ವಿವರಿಸಲು ನನ್ನನ್ನು ಆಯ್ಕೆ ಮಾಡಿದ್ದು, ಕೊನೆಗೆ ಅತಿಥಿಗಳು ಬರುವಾಗ ಇಂಗ್ಲೀಷ್ ನಲ್ಲಿ ವಿವರಿಸಲು ತರಬೇತಿ ಪಡೆದಿದ್ದ ನನ್ನ ಸಹಪಾಠಿ ಎಲ್ಲವನ್ನೂ ಮರೆತಿದ್ದು, ಕೊನೆಗೆ ನಾನೇ ಇಂಗ್ಲೀಷಿನಲ್ಲೂ ಕೂಡ ವಿವರಿಸಿ, ಕರ್ನಾಟಕಕ್ಕೆ ಎರಡನೇ ಪ್ರೈಜ಼್ ಪಡೆದದ್ದು, ಎಲ್ಲವೂ ಹಸಿರು. ಹಾಗಾಗಿ ಇಂದಿಗೂ ಕೂಡ ಪರಿಸರದ ಬಗ್ಗೆ ಕಾಳಜಿ ಇರಲು ನೆರವಾದ ಕೌಸರ್ ಬೇಗಂ ಮಿಸ್, ಮತ್ತೊಬ್ಬ ಟೀಚರ್ ನೋಡಲು ಸಿನೆಮಾ ತಾರೆ ಲಕ್ಷ್ಮಿಯ ಹಾಗೇ, ಬಹು ಚೆಂದ. ಆಕೆಯ ಮಾತುಗಳಂತೂ ಮುತ್ತಿನಂತೆ, ಧ್ವನಿಯಂತೂ ಬಹಳ ಚೆಂದ. ನಮ್ಮ ಕ್ಲಾಸ್ ಟೀಚರ್ ಅವರು. ಅವರು ಹೇಳಿದ ಮಾತುಗಳೆಲ್ಲವೂ ನನಗೆ ವೇದವಾಕ್ಯ. ಎಷ್ಟು ಚಂದ ಇದ್ದರೋ, ಅಷ್ಟೇ ಚೆಂದ ಪಾಠ ಕೂಡ ಮಾಡುತ್ತಿದ್ದರು. ಅವರು ಒಂದು ದಿವಸ ಕ್ಲಾಸಿಗೆ ಬರದಿದ್ದರೆ ನನಗೆ ಅಂದೆಲ್ಲಾ ಬೇಸರ. ಇಂತಹ ಟೀಚರ್, ಹತ್ತನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆ ನಡೆಯುತ್ತಿರುವಾಗ, ಸರಸರನೆ ಒಳಬಂದು, ಬಾಗಿಲು ಮುಚ್ಚಿ, ೨೦ ಮಾರ್ಕ್ ಗಳ ಆಬ್ಜೆಕ್ಟಿವ್ ಟೈಪ್ ಉತ್ತರಗಳನ್ನು, ನನ್ನ ಪೇಪರ್ ಸರ್ರೆಂದು ಕಸಿದು, ಅದ್ರಲ್ಲಿನ ಉತ್ತರಗಳನ್ನು ಎಲ್ಲರಿಗೂ ಡಿಕ್ಟೇಟ್ ಮಾಡಿ, ಬಂದ ರಭಸದಲ್ಲಿಯೇ ಹೊರ ಹೋದಾಗ, ಅವರ ಮೇಲೆ ಅದುವರೆವಿಗೂ ಇದ್ದ ಪ್ರೀತಿ ಮಾಯವಾಗಿತ್ತು. ಆಕೆಯ ಹೆಸರು ಕೂಡ ಈಗ ನನಗೆ ನೆನಪಿಲ್ಲ. 

ಇನ್ನೂ ಕಾಲೇಜಿನ ದಿವಸಗಳಲ್ಲಿಯಂತೂ ನನ್ನ ಜೀವನದ ಗತಿಯನ್ನು ಬದಲಿಸಿದ ಒಬ್ಬ ಲೆಕ್ಚರರ್, ಕಾಲೇಜಿನಲ್ಲಿ ಸ್ಟೈಕ್ ಮಾಡಿಸಿದೆನೆಂದು, ನನಗೆ ಕಡಿಮೆ ಮಾರ್ಕ್ಸ್ ಕೊಟ್ಟು, ರ್ಯಾಂಕ್ ಕಡಿಮೆ ಆಗುವಂತೆ ನೋಡಿಕೊಂಡ ಮತ್ತೊಬ್ಬ ಲೆಕ್ಚರರ್, ನನ್ನನ್ನು ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳಲು (ಸ್ಪೂರ್ತಿಗಾಗಿ) ಹೇಳಿ, ನಾನು ಕಾಲೇಜಿಗೆ ರಜೆ ಹಾಕಿದಂದು ಚಡಪಡಿಸುತ್ತಿದ್ದ, ನನಗೆ ಲೈನ್ ಹೊಡೆಯುತ್ತಿದ್ದ ಮತ್ತೊಬ್ಬ ಲೆಕ್ಚರರ್ (ಆಗ ತಾನೇ ಕಾಲೇಜು ಮುಗಿಸಿ ಬಂದಿದ್ದರು), ಮರೆತೆನೆಂದರೂ ಮರೆಯಲಿ ಹೇಗೆ? ಆದರೂ ನನಗೆ ಈ ಎಲ್ಲಾ ಟೀಚರ್ ಗಳಿಗಿಂತಲೂ ಜೀವನ ಪಾಠ ಕಲಿಸಿದ್ದು ಹೆಚ್ಚು. ಎಲ್ಲರನ್ನೂ ಸ್ವಾಭಾವಿಕವಾಗಿ ತುಂಬಾ ನಂಬಿಬಿಡುವ ನನಗೆ, ಹಾಗೆಲ್ಲ ನಂಬಬೇಡವೆಂದು ಬುದ್ಧಿ ಕಲಿಸಿ ಹೋದ ಸಂಬಂಧಿಕರು / ಸ್ನೇಹಿತರು ಬಹಳಷ್ಟು. ನಾವು ಜೊತೆಗಿದ್ದೇವೆ ಎಂದು ಪ್ರೀತಿಸಲು ಕಲಿಸಿದ ಗೆಳೆಯರು, ಇವೆಲ್ಲದರ ಜೊತೆಗೆ ನಾನು ಓದಿದ / ಓದುತ್ತಿರುವ ಪುಸ್ತಕಗಳು ನನ್ನನ್ನು ಬಹುವಾಗಿ ತಿದ್ದಿವೆ, ಬುದ್ಧಿ ಹೇಳಿವೆ, ನನ್ನನ್ನು ನಾನು ಅರ್ಥೈಸಿಕೊಳ್ಳುವಂತೆ ಪ್ರೇರೇಪಿಸಿವೆ. ನನ್ನೆಲ್ಲಾ ಕ್ರಿಯೆಗಳನ್ನೂ ಚಿಂತನೆಗೆ ಒಳಪಡಿಸುವಂತೆ ಮಾಡಿವೆ. ನಾ ಹೇಗಿದ್ದೆ? ಹೇಗಾದೆ? ಇವೆಲ್ಲಕ್ಕೂ ನಾನು ಬದುಕಿನಲ್ಲಿ ಕಲಿತ ಪಾಠವೇ ಕಾರಣ. ಈ ಪಾಠ ಕಲಿಯಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಈ ಶಿಕ್ಷಕರ ದಿನಾಚರಣೆಯ ಮೂಲಕ ನನ್ನ ಕೃತಜ್ಞತೆಗಳು :-)


Wednesday, August 29, 2012

ನನ್ನ ಮನಸ್ಸು


ಸ್ವಭಾವತಃ ಭಾವುಕವಾಗಿ ಯೋಚಿಸುವ ನನಗೆ ನನ್ನ ಸುತ್ತಮುತ್ತಲಿನವರ ಸ್ವಾರ್ಥ, ತಾವು ಮೇಲೆರಲು ಮತ್ತೊಬ್ಬರನ್ನು ತುಳಿಯುವ ಬಯಕೆ, ಹಣ ಬದುಕಿನಲ್ಲಿ ಏನೇನೆಲ್ಲವನ್ನು ಮಾಡಬಲ್ಲುದು, ರಾಜಕೀಯ, ಆಸೆ, ಅಸೂಯೆ, ಇವೆಲ್ಲವನ್ನೂ ನೋಡಿ ನೋಡಿ ರೋಸಿ ಹೋಗಿದ್ದೆ. ನನ್ನೆಲ್ಲಾ ಅನಿಸಿಕೆಗಳನ್ನು, ಕೊರಗುಗಳನ್ನು ಹಂಚಿಕೊಳ್ಳಲು ಸ್ನೇಹಿತರ್ಯಾರು ಇರಲಿಲ್ಲ. ಈ ರೀತಿಯ ಬದುಕಿನ ಏಕತಾನತೆಯಿಂದ ಬೇಸತ್ತ ನಾನು ಈ ಇಂಟರ್ ನೆಟ್ ಸಂಪರ್ಕಕ್ಕೆ ಬಂದಿದ್ದು ಆಕಸ್ಮಿಕ. ಸಂಬಂಧಿಕರೊಬ್ಬರು ತಾನು ಯಾವಾಗಲೂ ಸಂಪದ ಎಂಬ ಬ್ಲಾಗ್ ನಲ್ಲಿ (ಫೇಸ್ ಬುಕ್ ನ ಕನ್ನಡ ಮಾದರಿ) ಬರೆಯುವುದಾಗಿಯೂ ಹೇಳಿದಾಗ ಕುತೂಹಲಕ್ಕೆಂದು ನೋಡಿದ್ದು ನಾನು. ಆ ಸಮಯದಲ್ಲಿ ಮಂಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ರ ಸ್ವಘೋಷಿತ ಸಂಸ್ಕೃತಿಯ ರಕ್ಷಣಾ ದಾಳಿಯಾಗಿತ್ತು. ಸಂಪದದಲ್ಲಿ ಯಾರೋ ಪುರುಷ ಮಹಾಶಯನೊಬ್ಬ ಮಂಗಳೂರು ಪಬ್ ದಾಳಿಯನ್ನು ಸಮರ್ಥಿಸುತ್ತಾ, ನಮ್ಮ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂದು ಬೊಬ್ಬೆ ಹೊಡೆಯುತ್ತಾ, ಹೆಣ್ಣು ಮಕ್ಕಳನ್ನು ಅತ್ಯಂತ ಕೀಳಾಗಿ, ಅಶ್ಲೀಲ ಮಾತುಗಳಿಂದ ತೆಗಳುವಾಗ, ರೊಚ್ಚಿಗೆದ್ದು ಅದಕ್ಕೆ ಕಮೆಂಟಿಸಿದ್ದು ನಾನು! ಸಂಪದದಲ್ಲಿ ಅದುವರೆವಿಗೂ ಮಹಿಳೆಯರು ಯಾರೂ ಅಷ್ಟೊಂದು ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ಅದರಲ್ಲೂ ಈ ರೀತಿಯ ಅಶ್ಲೀಲ ಬೈಗುಳಗಳನ್ನು ಎದುರಿಸುವವರಂತೂ ಇರಲೇ ಇಲ್ಲ. ಹಾಗಾಗಿ ನನ್ನ ಆ ಒಂದು ಕಮೆಂಟ್ ಹಾಗೂ ನನ್ನ ‘ಇಂಚರ’ ಎಂಬ ಹೆಸರು?! ಬಹುಶಃ ಇತರ ಸಂಪದಿಗರನ್ನು ಆಕರ್ಷಿಸಿತು. ನಾವೆಲ್ಲರೂ ಒಟ್ಟಾಗಿ ಆ ಮನುಷ್ಯನನ್ನು ಸಂಪದದಿಂದ ಹೊರಗೆ ಹಾಕಿದ್ದೆವು. ನಾನು ಸಂಪದಕ್ಕೆ ಬಂದದ್ದು ಹೀಗೆ. ಆಗ ನನಗೆ ಈ ಸೋಷಿಯಲ್ ನೆಟ್ ವರ್ಕಿಂಗ್ ಬಗ್ಗೆ ಆಗಲೀ ಅಂಥವಾ ಬ್ಲಾಗ್ ಗಳ ಬಗ್ಗೆಯಾಗಲೀ ಸ್ವಲ್ಪವೂ ತಿಳಿದಿರಲಿಲ್ಲ. ಫೇಸ್ ಬುಕ್, ಗೂಗಲ್ ಪ್ಲಸ್ ಇವ್ಯಾವುದೂ ಕೂಡ ಇರಲಿಲ್ಲ. ನನ್ನ ಬರವಣಿಗೆಯಂತೂ ಸೊನ್ನೆ. ಚಿಕ್ಕಂದಿನಿಂದಲೂ ಪುಸ್ತಕಗಳನ್ನು ಓದುವ ಗೀಳಿತ್ತು ಬಿಟ್ಟರೆ, ಯಾವುದೇ ಕವನಗಳಾಗಲೀ ಅಥವಾ ಸಣ್ಣ ಪುಟ್ಟ ಕಥೆಗಳನ್ನಾಗಲೀ ನಾನು ಬರೆದಿರಲಿಲ್ಲ. ಬರೆಯುವ ಪ್ರಯತ್ನ ಕೂಡ ಮಾಡಿರಲಿಲ್ಲ. ಇನ್ನಿತರ ಸಂಪದಿಗರ ಲೇಖನಗಳಿಗೆ ಪ್ರತಿಕ್ರಿಯಿಸುತ್ತಾ ನಾನು ಕೂಡ ಚುಟುಕು ಚುಟುಕಾಗಿ ಬರೆಯಲು ಶುರು ಮಾಡಿದೆ. ಅದಕ್ಕೆ ಸಿಗುತ್ತಿದ್ದ ಖುಷಿ ಖುಷಿಯ ಪ್ರತಿಕ್ರಿಯೆಗಳು ನನಗೆ ಆಸ್ಕರ್ ಅವಾರ್ಡ್ ನಂತೆ ಭಾಸವಾಗುತ್ತಿತ್ತು. ಸ್ಪೂರ್ತಿಯಿಂದ ಇನ್ನಷ್ಟು ಬರಹಗಳನ್ನು, ಅದಕ್ಕೆ ಲೇವಡಿ ಮಾಡುವವರಿಗೆ ಚುರುಕಾಗಿ, ಪ್ರೀತಿ ತೋರಿಸುವವರಿಗೆ ಇನ್ನಷ್ಟು ಪ್ರೀತಿ, ಪ್ರಶ್ನಿಸುವವರಿಗೆ ತಮಾಷೆಯ ಉತ್ತರಗಳು... ಓಹ್! ನಾನು ನಾನಾಗೇ ಇರಲಿಲ್ಲ. ನನ್ನ ಲೋಕ ಬೇರೆಯಾಗಿತ್ತು. ಖುಷಿ, ಖುಷಿ, ಖುಷಿ ಇಷ್ಟೇ ನನ್ನ ದಿನಚರಿ. ಹೊಗಳಿಕೆಗೆ ಮಣಿಯದವರಾರು? ಹೀಗಾಗಿ ಸಂಪದದಲ್ಲಿ ಬರೆಯುವುದೇ (ಬಹಳಷ್ಟು ಪ್ರತಿಕ್ರಿಯೆಗಳು ಬರುವುದರಿಂದ) ನನಗೆ ಖುಷಿ ಎನಿಸಿಬಿಟ್ಟಿತು. ಜೊತೆಗೆ ಹುಟ್ಟು ಸೋಮಾರಿಯಾದ ನಾನು ನನ್ನದೇ ಆದ ಹೊಸದೊಂದು ಬ್ಲಾಗ್ ತೆರೆಯಲು ಮನಸ್ಸು ಮಾಡಲಿಲ್ಲ. 

ಈ ಬರಹಗಳು, ಮತ್ತೊಬ್ಬರ ಬರಹಗಳಿಗೆ ನನ್ನ ಪ್ರತಿಕ್ರಿಯೆಗಳು, ಹೀಗೆ ಸಮಾನಮನಸ್ಕರೊಂದಿಷ್ಟು ಜನ ಆತ್ಮೀಯರಾದರು. ಮನೆಯವರಂತೆಯೇ ಭಾಸವಾಗಿಬಿಟ್ಟರು. ಯಾವುದೇ ರೀತಿಯ ಕನಸುಗಳಿಲ್ಲದೆ, ಗುರಿಯಿಲ್ಲದೆ ಹಾಯಾಗಿದ್ದ ನನಗೆ, ಗೆಳೆಯರ ಕನಸುಗಳನ್ನು ಕೇಳಿದಾಗ ಅರೆ! ನನಗೆ ಈ ರೀತಿಯ ಯಾವುದೇ ಗುರಿ ಇಲ್ಲದಿರುವುದಕ್ಕೆ ಬೇಸರ ಶುರುವಾಗಿದೆಯೇ? ಎಂಬ ಪ್ರಶ್ನೆ, ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಬೇಕೆನ್ನುವ ಆಶಯ, ಯಾವ ಕಲಾತ್ಮಕ ಚಟುವಟಿಕೆ ಶುರು ಮಾಡಲಿ? ಎಂಬ ಚಿಂತೆ, ಎಲ್ಲವೂ ಒಟ್ಟೊಟ್ಟಿಗೆ ದಾಳಿ ಮಾಡತೊಡಗಿದವು. ಸಮಾನಮನಸ್ಕರೆಲ್ಲರೂ ಸೇರಿ ಒಟ್ಟಿಗೆ ಯಾವುದಾದರೊಂದು ಪ್ರಾಜೆಕ್ಟ್ ಶುರು ಮಾಡೋಣವೆಂದು ಪ್ರಾರಂಭಿಸಿ, ನಂತರ ಟೀಮ್ ವರ್ಕ್ ನಲ್ಲಿ ಎಲ್ಲರೂ ಸೋತು, ಪ್ರಾಜೆಕ್ಟ್ ಕೂಡ ಮೂಲೆ ಸೇರಿತು. ಮನೆಯವರಂತೆಯೇ ಕಂಡಿದ್ದ ಸ್ನೇಹಿತರಲ್ಲೂ ಸ್ವಾರ್ಥ ಕಂಡಾಗ, ಅವರೆಲ್ಲರೂ ನನ್ನನ್ನು ಭಾವುಕಳೆಂದು, ಯಾವುದೇ ಕೆಲಸಕ್ಕೆ ಪ್ರಯೋಜನವಿಲ್ಲವೆಂದು ಹೀಯಾಳಿಸಿದಾಗ, ಮತ್ತೊಬ್ಬ ಆತ್ಮೀಯ ಸ್ನೇಹಿತ ಈ ಪ್ರಾಜೆಕ್ಟ್ ನಿಂದಾಗಿ ಕಾರಣವೇ ಕೊಡದೇ ದೂರ ಹೋದಾಗ, ಅರಳಿದ್ದ ಮನ ಮತ್ತೆಂದಿಗೂ ಅರಳಲಾರೆನೆಂಬಂತೆ ಮುದುಡಿತು. ಮತ್ತೆ ಏಕಾಂಗಿಯಾದೆ. ಈ ಎಲ್ಲಾ ಬ್ಲಾಗ್ ಪ್ರಪಂಚಗಳಿಂದ ದೂರವಾದೆ. ಒಂದಷ್ಟು ದಿನಗಳು ಅತ್ತೆ, ಕೊರಗಿದೆ, ಸೊರಗಿದೆ, ನಾನು ಕೂಡ ಪ್ರೊಫೆಷನಲ್ ಎಂದು ತೋರಿಸಿಕೊಳ್ಳಲು ಪರಿಚಯದವರೊಬ್ಬರ ಸಹಾಯದಿಂದ ಕಿರು ಚಿತ್ರವೊಂದನ್ನು ಶುರು ಮಾಡಿದೆ. ಅದು ಕೂಡ ಅವರ ಮನಸ್ಸಿಲ್ಲದ ಮನಸ್ಸಿನಿಂದಾಗಿಯೋ ಅಥವಾ ನಿಜವಾಗಿಯೂ ಚಿತ್ರ ಚೆಂದ ಬಂದಿಲ್ಲವೋ? ನಾನಂತೂ ಈ ವಿಷಯದಲ್ಲಿ ತೀರಾ ಅನನುಭವಿ, ಆ ಕಿರುಚಿತ್ರ ಎಡಿಟಿಂಗ್ ಹಂತದಲ್ಲಿಯೇ ನಿಂತು ಹೋಯಿತು. ಸ್ನೇಹಿತರನೇಕರು ನಿನ್ನ ಭಾವುಕತೆಯೇ ನಿನ್ನ ದೌರ್ಬಲ್ಯವೆಂದು, ನೀನೇನನ್ನು ಸಾಧಿಸಲಾರೆಯೆಂದು ಹೀಯಾಳಿಸಿದಾಗ ಮೇಲೇರಲಾರೆಯೆಂಬಂತೆ ತೀರಾ ಒಳಕ್ಕಿಳಿದುಬಿಟ್ಟೆ. ನಾನು ಯಾವುದಕ್ಕೂ ಪ್ರಯೋಜನವಿಲ್ಲವೆಂದು, ನನ್ನ ಬದುಕಿಗೆ ಅರ್ಥವಿಲ್ಲದಂತಾಗಿದೆಯೆಂದು ಕೊರಗು ಶುರುವಾಯಿತು. ನಾನು ಯಾವಾಗಲೂ ಹೀಗೆ, ತೀರಾ ನನ್ನೊಳಗೆ ನಾನಿಳಿದುಬಿಟ್ಟಾಗ, ನನ್ನನ್ನು ನಾನೇ ವಿಶ್ಲೇಷಿಸಿಕೊಂಡು, ನನ್ನ ಒಪ್ಪುತಪ್ಪುಗಳೆಲ್ಲವನ್ನೂ ನಾನೇ ನನ್ನೊಳಗೆ ಸರಿ ಮಾಡಿಕೊಂಡು ಮತ್ತೆ ಉತ್ಸಾಹದಿಂದ ಮತ್ತೊಂದು ಬದುಕಿಗೆ ಸಜ್ಜಾಗಿಬಿಡುತ್ತೇನೆ. ಈ ಸಲವೂ ಹೀಗೆ, ಶುರುವಾಯಿತು ಕಮಾಡಿಟಿ ಟ್ರೇಡಿಂಗ್ (ಇದನ್ನು ಮತ್ತೊಮ್ಮೆ ಬರೆಯುತ್ತೇನೆ) ಹಾಗೂ ಅದರಲ್ಲಿನ ಏಕತಾನತೆಯಿಂದ ಹೊರಬರಲು (ದಿನವಿಡೀ ಆನ್ಲೈನ್ ಇರಬೇಕಾದ ಕಾರಣ) ಫೇಸ್ ಬುಕ್ ಪಯಣ. ಹಾ! ಮರೆತೆ! ವೈದೇಹಿಯವರ ಅಲೆಗಳಲ್ಲಿ ಅಂತರಂಗ ಕೂಡ ಮತ್ತೆ ನಾನು ಎದ್ದು ನಿಲ್ಲಲು ಸಹಕಾರ ಕೊಟ್ಟಿತು. 

ಫೇಸ್ ಬುಕ್ ನಲ್ಲಿ ಗೆಳತಿಯೊಬ್ಬಳು ಪರಿಚಯಿಸಿದ ಅಂತಃಪುರದ ಗುಂಪು. ಈಗಾಗಲೇ ಇಂತಹದೊಂದು ಗುಂಪಿನಿಂದ ನೊಂದಿದ್ದ ನನಗೆ, ಮತ್ತೆ ಇದ್ಯಾವುದೂ ಬೇಡವಾಗಿತ್ತು. ಆದರೂ ಈ ಮನಸ್ಸು ಬಿಡಬೇಕಲ್ಲಾ?! ಅವರೆಲ್ಲರು ಭೇಟಿಯಾಗಲು ನಿರ್ಧರಿಸಿದಾಗ, ನೀನು ಕೂಡ ಹೋಗು ಎಂದು ಪ್ರೇರೇಪಿಸಿತು. ಭೇಟಿಯಾದಾಗ ಒಂದಿಷ್ಟು ಅಳುಕು, ಅಸಡ್ಡೆ, ಸಂಕೋಚ ಎಲ್ಲವೂ ಇದ್ದರೂ, ಪರಿಚಯಿಸಿಕೊಂಡಾಗ ಎಲ್ಲರೂ ತೋರಿದ ಆತ್ಮೀಯತೆ, ನಾನು ಕಳೆದುಕೊಂಡಿದ್ದನ್ನು ಮತ್ತೆ ಪಡೆದೆ ಎಂಬಂತೆ ಭಾಸವಾಯಿತು. ಅಂದಿನಿಂದ ತುಸು ಹೆಚ್ಚೇ ಅಂತಃಪುರಕ್ಕೆ ಭೇಟಿ ನೀಡತೊಡಗಿದೆ. ಇದರಿಂದ ಅವರೆಲ್ಲರ ಬ್ಲಾಗ್ಸ್, ವಿಚಾರಧಾರೆಗಳನ್ನು ಓದುವ ಅವಕಾಶವಾಯಿತು. ಓದಿದಾಗ ಹಲವು ಬಾರಿ ಅರೆ! ಇದು ನನ್ನನಿಸಿಕೆಯೂ ಹೌದು, ನಾನು ಕೂಡ ಹೀಗೆ ಬರೆಯಬೇಕೆಂದುಕೊಂಡಿದ್ದೆ, ಇವೆಲ್ಲವೂ ನನ್ನನ್ನು ಕೂಡ ಅವರಿಗೆ ಕಾಡಿದಷ್ಟೇ ಕಾಡಿದ್ದವು, ನನ್ನ ಭಾವುಕತೆ ನನ್ನ ದೌರ್ಬಲ್ಯವಲ್ಲ, ಬರಹಗಾರ್ತಿಯೊಬ್ಬಳಿಗೆ ಇರಬೇಕಾದ ಅಂಶ ಇದೊಂದು ಎಂಬುದು ಮನದಟ್ಟಾಯಿತು. ಮುಖ್ಯವಾಗಿ ಉಷಾ ಕಟ್ಟೆಮನೆಯವರ ಮೌನ ಕಣಿವೆಯಂತೂ ಹಗಲು ರಾತ್ರಿ ನನ್ನನ್ನು ಕಾಡತೊಡಗಿತು. ಭಾವುಕತೆಯಿದ್ದರೆ ಮಾತ್ರ ಯಾವ ವಿಷಯವನ್ನಾಗಲೀ ವಿಶ್ಲೇಷಿಸಿ ಬರೆಯಲು ಸಾಧ್ಯ ಎಂದೆನಿಸತೊಡಗಿತು. ಇಲ್ಲದಿದ್ದರೆ ನಮ್ಮ ಬರಹ ತೀರಾ ಸಪ್ಪೆಯಾಗಿ, ಯಾಂತ್ರಿಕವಾಗಿಬಿದುತ್ತದೆಯೆಂದು ಅನಿಸತೊಡಗಿತು. ಮನಸ್ಸಿನಿಂದ ಯೋಚಿಸಿ ಬರೆಯುವಾಗ ಅದು ಬಹಳಷ್ಟು ಜನರನ್ನು ತಲುಪುತ್ತದೆಯೆಂದು ತೋರಿತು. ಇದೆಲ್ಲಕ್ಕೆ ಕಲಶಪ್ರಾಯವೆಂಬಂತೆ ಅಗ್ನಿ ಶ್ರೀಧರ್ ಅವರ ಪುಸ್ತಕ ಆಧುನಿಕ ಮಾಂತ್ರಿಕರ ಜಾಡಿನಲ್ಲಿ ತೀರಾ ನನ್ನನ್ನು ಕಾಡಿತು. ಅದರಲ್ಲಿನ ವಿಚಾರಧಾರೆಗಳೆಲ್ಲವೂ ನನ್ನ ತಲೆಯಲ್ಲಿ ಹಲವು ಬಾರಿ ಬಂದಿದ್ದರೂ ಕೂಡ, ಅದನ್ನು ಪ್ರಕಟಿಸಿದರೆ ಎಲ್ಲಿ ಹಾಸ್ಯಸ್ಪದವಾಗುವುದೋ ಎಂದು ಮುಚ್ಚಿಟ್ಟಿದ್ದೆ. ಹಾ! ನನ್ನಂತೆಯೇ ಯೋಚಿಸುವವರು ಹಲವರಿದ್ದಾರೆ. ನನ್ನ ಭಾವುಕತೆ ಕ್ಷುಲ್ಲಕವೇನಲ್ಲ ಎಂದೆನಿಸಿ ಮನಸ್ಸಿಗೆ ಉಲ್ಲಾಸ ಮೂಡಿತು. ಆತ್ಮವಿಶ್ವಾಸ ಮೈದೋರಿತು. ನನ್ನದೇ ಒಂದು ಬ್ಲಾಗ್ ಶುರು ಮಾಡಿದೆ. ಅಲ್ಲಿ ಇಲ್ಲಿ ಬರೆದಿದ್ದ ಬರಹಗಳೆಲ್ಲವನ್ನೂ ಒಂದೇ ದಿವಸ ತಂದು ಇದರಲ್ಲಿ ಹಾಕಿದೆ. ಅದರಲ್ಲಿ ನನ್ನ ಮನ ಕಲಕಿದ / ಯೋಚಿಸಲು ಪ್ರೇರೇಪಿಸಿದ ಒಂದಷ್ಟು (ಈಗ ಬರಹದ ಶೈಲಿ ತೀರಾ ಕೆಟ್ಟದಾಗಿದೆ ಎಂದೆನಿಸಿದರೂ, ಹೆತ್ತವರಿಗೆ ಹೆಗ್ಗಣ ಮುದ್ದು! :-) ) ಬರಹಗಳನ್ನು ಅಂತಃಪುರದಲ್ಲಿ ಎಲ್ಲಾ ಸಖಿಯರ ಅವಗಾಹನೆಗಿಟ್ಟೆ. 

ಅಂತಃಪುರದ ಸಖಿ ಹಾಗೂ ವಿ.ಕ.ದಲ್ಲಿರುವ ಶ್ರೀದೇವಿ ಕಳಸದ ಅವರು ನನ್ನ ಬ್ಲಾಗ್ ಅನ್ನು ಬ್ಲಾಗಿಲರು ಕಾಲಮಿನಲ್ಲಿ ಪ್ರಕಟಿಸುವರೆಂಬುದನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಹಿಂದಿನ ದಿನ ಸರಿ ರಾತ್ರಿಯ ತನಕ ಅಂತಃಪುರದಲ್ಲಿ ಒಬ್ಬರನ್ನೊಬ್ಬರು ಕೀಟಲೆ ಮಾಡುತ್ತಾ ಇರುವಾಗಲೂ ಆಕೆ ಒಂದಿಷ್ಟು ಹಿಂಟ್ ಕೂಡ ಕೊಟ್ಟಿರಲಿಲ್ಲ. ಇಂತಹದೊಂದು ಸರ್ಪೈಸ್ ಗಾಗಿ ಕಾಯುವ ನನಗೆ, ನನ್ನ ಜೀವನದಲ್ಲಿ ಯಾರೂ ಕೂಡ ಇಂತಹ ಸುಂದರ ಸರ್ಪೈಸ್ ಕೊಟ್ಟಿರಲಿಲ್ಲ. ನಿಜಕ್ಕೂ ನನಗಿದೊಂದು ದೊಡ್ಡ ಉಡುಗೊರೆ. ಇದರೊಂದಿಗೆ ನನ್ನಲ್ಲೂ ಕೂಡ ಬರಹಗಾರ್ತಿ ಇದ್ದಾಳೇನೋ ಎನ್ನುವ ಕೌತುಕ, ಇದೆಲ್ಲದರ ಜೊತೆಗೆ ಪತ್ರಿಕೆಯಲ್ಲಿ ನನ್ನದೊಂದು ಬರಹ ಬಂದ ಮೇಲೆ ಇನ್ನಷ್ಟು ಬರೆಯಲು ಉತ್ಸಾಹ, ಆದರೆ ಅಷ್ಟು ಸುಲಭವೇನಲ್ಲ ಎನ್ನುವ ಮನಸ್ಸಿನ ಎಚ್ಚರಿಕೆ, ಹೆಚ್ಚಿದ ಜವಾಬ್ದಾರಿ ಎಲ್ಲವೂ ಸೇರಿ ಕಲಸುಮೆಲೋಗರವಾಗಿ ಇದೆಲ್ಲವನ್ನೂ ಬರೆದುಬಿಟ್ಟರೆ ನನ್ನ ತಳಮಳ ಕಡಿಮೆಯಾಗಬಹುದು ಎಂದು ಎಲ್ಲವನ್ನೂ ದಾಖಲಿಸಿದ್ದೇನೆ :-) ಒಂದೊಂದಾಗಿ ನನ್ನ ಅನುಭವಗಳೆಲ್ಲವನ್ನೂ, ಪ್ರಚಲಿತ ವಿದ್ಯಮಾನಗಳ ಬಗೆಗಿನ ನನ್ನ ಅನಿಸಿಕೆಗಳನ್ನು ಬರೆಯಬೇಕೆಂದು ಕೂಡ ನಿರ್ಧರಿಸಿದ್ದೇನೆ. ತೀರಾ ಆಲಸಿಯಾದ ನಾನು ಏನೆಲ್ಲವನ್ನೂ ಬರೆಯಬಲ್ಲೆನೋ? ಅಥವಾ ನಿಲ್ಲಿಸಿಯೇಬಿಡುತ್ತೇನೆಯೋ ಗೊತ್ತಿಲ್ಲ. ಸದ್ಯಕ್ಕಂತೂ ಪತ್ರಿಕೆಯಲ್ಲಿ ನನ್ನ ಬ್ಲಾಗ್ ಬಗ್ಗೆ ಬಂದಿದೆ ಎನ್ನುವ ಹೆಮ್ಮೆ, ಹುಮ್ಮಸ್ಸಿದೆ. ಎಷ್ಟು ದಿವಸಗಳು ಹೀಗೆ? ನೋಡೋಣ.

Monday, August 27, 2012

ಈ ಪಂಚ ಕನ್ಯೆಯರನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

ಬೆಳಿಗ್ಗೆ ಎದ್ದ ಕೂಡಲೇ ಅಮ್ಮ ಸುಮಾರು ಶ್ಲೋಕಗಳನ್ನು ಹೇಳಿಕೊಡ್ತಿದ್ದಳು. ಅವುಗಳ ಅರ್ಥದ ಬಗ್ಗೆ ಯಾರೂ ತಲೆಕೆಡಿಸಿಕೊಳ್ತಾರೆ. ಅವಳು ಹೇಳಿಕೊಡ್ತಿದ್ದಳು. ನಾವು ಹೇಳಿ ಸ್ನಾನಕ್ಕೆ ಓಡಿ ಹೋಗ್ತಿದ್ವಿ. ಆಮೇಲಾಮೇಲೆ ಶಾಲೆ, ಕಾಲೇಜು, ಆಟ, ಪಾಠಗಳ ಮಧ್ಯೆ ಇದೆಲ್ಲಾ ಯಾರಿಗೆ ನೆನಪಿರುತ್ತೆ? ಮರತೇ ಹೋಯಿತು. ಮೊನ್ನೆ ಯಾವುದೋ ಪುಸ್ತಕ ಹುಡುಕಲು ಹೋದಾಗ ಅಮ್ಮನ ಈ ಹಳತು ಶ್ಲೋಕದ ಪುಸ್ತಕ ಸಿಕ್ಕಿತು. ಮುಂಜಾನೆ ಎದ್ದು ಹೇಳಲೇ ಬೇಕಾದಂತಹ ಶ್ಲೋಕಗಳು. ಅದ್ರಲ್ಲಿ ಒಂದು 

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ! 
ಪಂಚಕನ್ಯಾಸ್ಮರೇನಿತ್ಯಂ ಮಹಾಪಾತಕ ನಾಶನಂ.

ಆಶ್ಚರ್ಯವಾಯಿತು. ಅಮ್ಮನನ್ನು ಹುಡುಕಿಕೊಂಡು ಹೋದೆ. ಆ ಶ್ಲೋಕ ಕೆಲವರು ಸೀತಾ ಎಂದು ಸೇರಿಸಿ ಹೇಳುತ್ತಾರೆ ಮತ್ತೆ ಕೆಲವರು ಸೀತೆಯ ಬದಲಿಗೆ ಕುಂತೀ ಹೇಳ್ತಾರೆ ಎಂದರು! ನನಗೇ ಈ ಐವರು ಮಹಿಳೆಯರ ಕಥೆಯಲ್ಲಿನ ಸಾಮಾನ್ಯ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಸೀತೆಗಿಂತ ಕುಂತಿಯೇ ಹೆಚ್ಚು ಸೂಕ್ತ ಎನಿಸಿತು. ಈ ಐವರು ಅಂದ್ರೆ ಅಹಲ್ಯಾ, ದ್ರೌಪದೀ, ಕುಂತೀ, ತಾರಾ, ಮಂಡೋದರಿ ಐವರು ಮಹಿಳೆಯರು ಒಬ್ಬನಿಗಿಂತ ಹೆಚ್ಚು ಗಂಡಸರೊಟ್ಟಿಗೆ ದೈಹಿಕ ಸಂಬಂಧವನ್ನು ಇಟ್ಟುಕೊಂಡಿದ್ದವರು! ಅದು ಹೇಗೆ ಮತ್ತೆ ಇವರೆಲ್ಲರೂ ಪಂಚಕನ್ಯೆಯರು?!! ಮತ್ತೆ ಅಮ್ಮನಿಗೆ ಕಾಟ ಕೊಡಲು ಶುರು ಮಾಡಿದೆ. ನಾವು ಚಿಕ್ಕವರಾಗಿದ್ದಾಗಲೂ ನಮ್ಮ ತಲೆ ತಿಂದಿದ್ದ ಪ್ರಶ್ನೆ ಇದು, ಆದರೆ ನಾವು ನಿಮ್ಮ ತರಹ ಪ್ರಶ್ನೆಗಳನ್ನು ಕೇಳ್ತಾ ಇರಲಿಲ್ಲ, ಸಾಕು ಎದ್ದು ಹೋಗೇ ಎಂದು ಹೇಳಿ ಹೋದಳು. 

ಕನ್ಯೆಯರು ಎಂದರೆ ಮದುವೆ ವಯಸ್ಸಿಗೂ ಕೂಡ ಬರದಂತಹ ಕುಮಾರಿಯರು. ಮತ್ತೊಂದು ಅರ್ಥ ತಮ್ಮ ಪಾವಿತ್ರತೆಯನ್ನು ಕಾಪಾಡಿಕೊಂಡಿರುವವರು. ಈ ಐವರೂ ಕುಮಾರಿಯರು ಕೂಡಾ ಅಲ್ಲಾ ಹಾಗೂ ಪರ ಪುರುಷನೊಟ್ಟಿಗೆ ದೈಹಿಕ ಸಂಬಂಧವಿದ್ದವರು. ಅದು ಹೇಗೆ ಮತ್ತೆ ಕನ್ಯೆಯರೆನ್ನುತ್ತಾರೆ? ಸಂದರ್ಭಾನುಸಾರವಾಗಿ ಸಮಯೋಚಿತವಾದ ಹಾಗೂ ಧೀರ ನಿರ್ಧಾರಗಳನ್ನು ಕೈಗೊಂಡಿದ್ದವರು ಈ ಐವರು. ಹಾಗಾಗಿಯೇ ಇಂತಹ ಉನ್ನತ ಪಟ್ಟವನ್ನು ನೀಡಲಾಯಿತೇ? ಅಥವಾ ಪುರುಷ ಪ್ರಧಾನ ಸಮಾಜದಲ್ಲಿ ಈ ಐವರು ಅನುಭವಿಸಿದ್ದು ಅಂತಿಂತಹ ಕಷ್ಟಗಳಲ್ಲ. ಈಗ ಆಗಿದ್ದರೆ ಡೈವೋರ್ಸ್ ಎಂಬ ಸುಲಭದ ಮಾರ್ಗವಿದೆಯಲ್ಲವೇ? ಮದುವೆಯಾಗಿದ್ದರೂ, ಧೀರೋಧಾತ್ತ ಗಂಡಂದಿರಿದ್ದರೂ, ಪರ ಪುರುಷನ ಸಂಘ ಮಾಡಬೇಕಾಯಿತು. ಪುರುಷನ ಉದಾಸೀನತೆಗೆ, ದಬ್ಬಾಳಿಕೆಗೆ, ಮೋಸಕ್ಕೆ, ಮಹತ್ವಾಕಾಂಕ್ಷೆಗೆ, ದುರಾಸೆಗೆ ಬಲಿಯಾದವರು ಇವರು. ಬಹುಶಃ ಅದರಿಂದ ಇವರನ್ನು ಮೇಲಕ್ಕೆ ಕೂರಿಸಿ, ಕಣ್ಣೊರೆಸುವ ತಂತ್ರವಾಯಿತೇ? ಸಂದರ್ಭಕ್ಕನುಗುಣವಾಗಿ ದೈಹಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದು ತಪ್ಪೇನಲ್ಲ ಎನ್ನುವುದು ಈ ಶ್ಲೋಕದಲ್ಲಿ ಸೂಚ್ಯವಾಗುತ್ತಿಲ್ಲವೇ? 

ಮುಂದುವರೆಯುವುದು

(ಸಂಪದದಲ್ಲಿhttp://sampada.net/blog/inchara123/21/01/2011/30071 ಬರೆದು (ವಿಷಯದ ಮೇಲೆ ಹಿಡಿತವಿಲ್ಲದೆ) ಸಿಕ್ಕಾಪಟ್ಟೆ ಗಲಾಟೆ ಆಗಿಬಿಟ್ಟಿತು. ಆಮೇಲೆ ಇದನ್ನು ನಾನು ಮುಂದುವರೆಸಲೇ ಇಲ್ಲ! )

ಸಾವು ?!!!

ಸಾವು ಎಂದೊಡನೆಯೇ ಎಲ್ಲರೂ ಬೆಚ್ಚಿ ಬೀಳ್ತೀವಿ ಅಲ್ವಾ? ಏ, ಬಿಡ್ತು ಅನ್ನು, ಅಶ್ವಿನಿ ದೇವತೆಗಳಿದ್ದಾರೆ, ಅಸ್ತು ಅಂದು ಬಿಡ್ತಾರೆ ಎಂದು ಹೆದರಿಸುತ್ತೇವೆ. ಹುಟ್ಟಿದವರೆಲ್ಲರೂ ಸಾಯಲೇ ಬೇಕು. ಯಾರೂ ಇಲ್ಲಿ ಶಾಶ್ವತವಲ್ಲ. ವಿಜ್ಞಾನ ಎಷ್ಟೇ ಮುಂದುವರಿದಿದೆ ಎಂದರೂ, ನಮಗ್ಯಾರಿಗೂ ಸಾವನ್ನು ಗೆಲ್ಲಲಾಗಿಲ್ಲ. ಸ್ವಲ್ಪ ಮಟ್ಟಿಗೆ ಸಾವನ್ನು ಮುಂದೂಡಬಹುದೇ ಹೊರತು ಸಾಯುವುದೇ ಇಲ್ಲ ಎನ್ನಲಾಗದು. ಇಷ್ಟಿದ್ದರೂ ನಾವೆಲ್ಲರೂ ಹೀಗ್ಯಾಕೆ? ಪ್ರತಿಯೊಂದಕ್ಕೂ ಹುಟ್ಟಿದ ದಿನದಿಂದ ಹಿಡಿದು ಪ್ರತಿಯೊಂದು ಗಳಿಗೆಯನ್ನೂ ನಮ್ಮ ಕ್ಯಾಮೆರಾಗಳಲ್ಲಿ ದಾಖಲಿಸಲು ಇಷ್ಟ ಪಡುವ ನಾವು ಅದೇ ಸಾವನ್ನು ಮಾತ್ರ ಫೋಟೋದಲ್ಲಿ ಹಿಡಿದಿಟ್ಟುಕೊಳ್ಳಲಾರೆವು. ಸಂಭ್ರಮದಿಂದ ಕಳಿಸಿಕೊಡಲಾರೆವು. ನಮ್ಮ ಪ್ರೀತಿ ಪಾತ್ರರು ನರಳುತ್ತಾ ಬಿದ್ದಿದ್ದರೂ, ಜೀವದೊಂದಿಗೆ ಹೋರಾಡುತ್ತಿದ್ದರೂ, ಅವರನ್ನು ಕಳೆದುಕೊಳ್ಳುತ್ತೇವೆಂಬ ಭಯ ನಮ್ಮನ್ನು ಕಾಡುತ್ತಲೇ ಇರುತ್ತದೆ. ನಾವು ಬದುಕಿರುವುದರ ಬಗ್ಗೆ ನಮಗೆ ಗ್ಯಾರಂಟಿಯಿಲ್ಲ. ಆದರೂ ಅವರನ್ನು ಹೇಗಾದರೂ ಮಾಡಿ, ಏನಾದರೂ ಮಾಡಿ ಉಳಿಸಿಕೊಳ್ಳುತ್ತೇವೆಂದು ಪಣ ತೊಡುತ್ತೇವೆ!

ಇದ್ದಾಗ ದ್ವೇಷದಿಂದ, ಜಗಳವಾಡುತ್ತಾ ಕಾಲ ಕಳೆದಿದ್ದ ನಮಗೆ, ಆ ವ್ಯಕ್ತಿಯ ಸಾವು, ಇಲ್ಲದ ಪ್ರೀತಿಯನ್ನು ತಂದುಬಿಡುತ್ತದೆ! ಅವರಿದ್ದಾಗ ನಾವ್ಯಾಕೆ ಅವರಿಗಾಗಿ ಬದಲಾಗಬೇಕು? ನಾನೇ ಸರಿ, ನನ್ನದೇನೂ ತಪ್ಪಿಲ್ಲ, ಬೇಕಿದ್ದರೆ ಅವನೇ ತಗ್ಗಿ ಬರಲಿ, ಸತ್ತರೂ ಸರಿ ಆತನ ಮುಖ ನೋಡೋಲ್ಲ ಎನ್ನುವಂತಹ ಹಟವೇ ನಮಗೆ ಮುಖ್ಯವಾಗಿರುತ್ತದೆ. ಆದರೆ ಆ ವ್ಯಕ್ತಿಯ ಸಾವು, ನಮ್ಮನ್ನು ಚಡಪಡಿಸುವಂತೆ ಮಾಡಿಬಿಡುತ್ತದೆ. ಇದ್ದಕ್ಕಿದ್ದಂತೆ ಆ ವ್ಯಕ್ತಿ ನಮಗೆ ಮಹಾನ್ ವ್ಯಕ್ತಿಯ ಹಾಗೇ ಕಾಣಿಸಿಕೊಳ್ಳುತ್ತಾರೆ. ಅವರ ಗೈರು ಹಾಜರಿ ನಮಗೆ ಎದ್ದು ತೋರುತ್ತದೆ. ಅವರಿಲ್ಲದೆ ನಾವು ಬದುಕಲಾರೆವು ಎನ್ನುವಂತಹ ಸ್ಥಿತಿಯನ್ನು ಉಂಟುಮಾಡುತ್ತದೆ. ಇದಲ್ಲವೇ ವಿಪರ್ಯಾಸ! ಇದ್ದಾಗಲೇ ಸರಿ ಮಾಡಿಕೊಂಡಿದ್ದರೆ?! ಈ ‘ರೆ’ ನಮ್ಮನ್ನು, ನಾವು ಸಾಯುವವರೆಗೂ ಬೆನ್ನು ಹತ್ತುತ್ತದೆ. ಹೋಗಲಿ, ಈ ಸಾವಿಂದ ಪಾಠ ಕಲಿಯುತ್ತೇವೆಯೇ? ಮತ್ತದೇ ಹಠ, ಮತ್ತದೇ ಜಗಳ ಮತ್ತೊಬ್ಬರೊಂದಿಗೆ!

ಹಿಂದಿನ ಕಾಲದಲ್ಲಿಯಾದರೆ, ಅವಿಭಕ್ತ ಕುಟುಂಬ, ಮನೆ ತುಂಬ ಮಕ್ಕಳು, ಮೊಮ್ಮಕ್ಕಳು. ಯಾರಾದರೂ ಅಕಾಲ ಮೃತ್ಯುಗೀಡಾದರೆ, ಉಳಿದವರು ಆ ಮಕ್ಕಳನ್ನು ತಮ್ಮ ಮಕ್ಕಳೊಟ್ಟಿಗೆ ಸಾಕುತ್ತಿದ್ದರು. ಈ ಜನ್ಮದಲ್ಲಿ ಸತ್ತವರ ಋಣ ‘ಇಷ್ಟೇ ಇದ್ದಿದ್ದು’! ಎಂದು ಕ್ಷಣ ಮಾತ್ರದಲ್ಲಿ ಆ ನೋವನ್ನು ಅರಗಿಸಿಕೊಂಡು ಮುಂದಿನ ಕೆಲಸಕ್ಕೆ ತಯಾರಿ ನಡೆಸುತ್ತಿದ್ದರು. ಅಲ್ಲೊಂದು, ಇಲ್ಲೊಂದು ತೀರಾ ತೊಂದರೆಗೊಳಗಾದವರು ಇದ್ದರೆ ಹೊರತು ಅಂತಹ ಅನಾಥ ಪ್ರಜ್ಞೆ ಕಾಡುತ್ತಿರಲಿಲ್ಲ. ಆದರೆ ಈಗ ನಮ್ಮ ಪ್ರೀತಿ ಪಾತ್ರರ ಅಕಾಲ ಮೃತ್ಯು ನಮಗೆ ಎಂತಹ ಶಾಕ್ ನೀಡುತ್ತದೆಯೆಂದರೆ, ಎಷ್ಟೋ ಕುಟುಂಬಗಳು ಆ ವ್ಯಕ್ತಿಯ ಸಾವಿನ ನಂತರ ಬೀದಿಗೆ ಬಂದುಬಿಡುತ್ತವೆ. ಸತ್ತಾಗ ಬಂದು, ಲೊಚಗುಟ್ಟಿ, ಕಣ್ಣೊರೆಸಿಕೊಂಡು ಹೋದವರು, ಆ ವ್ಯಕ್ತಿಯ ಕುಟುಂಬದವರು ಇನ್ನೂ ಬದುಕಿದ್ದಾರೆ ಎನ್ನುವುದನ್ನು ಮರೆತುಬಿಡುತ್ತಾರೆ. ಆ ಇನ್ಯೂರೆನ್ಸ್, ಈ ಇನ್ಶೂರೆನ್ಸ್ ಎಂದು ಕೆಲವರಿಗೆ, ಜೀವನ ನಿರ್ವಹಿಸಲು ತೊಂದರೆಯಾಗದಿದ್ದರೂ, ಸಂಬಂಧಗಳಿಗೆ ಬೆಲೆಯೇ ಇಲ್ಲದಿರುವ ಅಥವಾ ಇದ್ದಾಗ ನಾವು, ನಮ್ಮ ಮಕ್ಕಳು ಎಂದಿರುವ ಕುಟುಂಬಗಳು ಅಕ್ಷರಶಃ ಅನಾಥವಾಗಿಬಿಡುತ್ತವೆ. 

ಅಕಾಲ ಮೃತ್ಯುವನ್ನು ಎದುರಿಸುವುದು ಹಿಂಸೆಯೇ ಸರಿ. ಆದರೆ ಹಣ್ಣು ಹಣ್ಣು ಮುದುಕರು, ಈ ಜೀವನದಲ್ಲಿ ನಮ್ಮ ಕೆಲಸವೆಲ್ಲಾ ಮುಗೀತು, ಇನ್ಯಾಕೆ ಸಾವು ಬರಲಿಲ್ಲವೋ? ಎಂದು ಗೋಳಾಡುತ್ತಿರುವವರು ಅಥವಾ ವರ್ಷಾನುಗಟ್ಟಲೆ ಬಹು ಹಿಂಸೆಯಿಂದ, ಕಿಡ್ನಿ ಫೇಲ್ಯೂರ್, ಲಿವರ್ ಪ್ರಾಬ್ಲಮ್, ಹಾರ್ಟ್ ಪ್ರಾಬ್ಲಮ್ ಎಂದು ಹತ್ತು ಹಲವಾರು ಕಾಯಿಲೆಗಳಿಂದ ನರಳುತ್ತಿರುವವರಿಗೆ ಸಾವು ನಿಜವಾಗಲೂ ಅವರಿಗೆ ಮುಕ್ತಿ ನೀಡುತ್ತದೆ. ಅಯ್ಯೋ! ಅವರು ನರಳುವುದನ್ನು ನೋಡಲಾಗುವುದಿಲ್ಲ, ಬೇಗ ಸಾವು ಬರಬಾರದೇ? ಎಂದು ಕಂಡ ಕಂಡ ದೇವರಿಗೆಲ್ಲಾ ಕೈಮುಗಿದಿರುತ್ತೇವೆ. ಇಷ್ಟೆಲ್ಲಾ ಗೊತ್ತಿದ್ದರೂ ಅವರು ನಿಜವಾಗಲೂ ಸತ್ತೇ ಬಿಟ್ಟಾಗ, ಇಷ್ಟು ಬೇಗ ಸಾವು ಬರಬಾರದಿತ್ತು ಎಂದು ಮತ್ತೆ ಅದೇ ದೇವರಿಗೆ ಶಪಿಸುತ್ತೇವೆ! ನಾವ್ಯಾಕೆ ಹೀಗೆ?

ಸ್ವಲ್ಪ ಎಚ್ಚರಿಕೆ ವಹಿಸಿದರೆ, ಕೆಲವು ಅಪಘಾತಗಳನ್ನು ತಡೆಯಬಹುದು. ಕುಡಿದು, ಗಾಡಿ ಓಡಿಸದಿರುವುದು, ವಿದ್ಯುತ್ ರಿಪೇರಿ ಮಾಡುವಾಗ ಮೈನ್ ಆಫ್ ಮಾಡಲು ಉದಾಸೀನ ಮಾಡದಿರುವುದು ಹೀಗೆ. ಹಾಗೆಯೇ ಎಷ್ಟೋ ಕಾಯಿಲೆಗಳನ್ನು ಕೂಡ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ತಡೆಗಟ್ಟಬಹುದು. ಶುದ್ದ ಆಹಾರ, ಶುದ್ಧ ನೀರು, ಸ್ವಚ್ಛ ವಾತಾವರಣ, ಕ್ರಮಬದ್ಧ ಜೀವನ, ವಾಕಿಂಗ್ ಇವುಗಳಿಂದ ಹತ್ತು ಹಲವಾರು ಕಾಯಿಲೆಗಳು ದೂರವಾಗುತ್ತವೆ. ಇನ್ನೂ ಹೃದಯ, ಕಿಡ್ನಿ, ಲಿವರ್ ಕಾಯಿಲೆಗಳಿಂದ ನರಳುವವರು, ಸರಿಯಾದ ಔಷಧ ಹಾಗೂ ಪಥ್ಯ ಮಾಡಿದರೆ ಯಾವಾಗ ಸಾವು ಬರುತ್ತದಪ್ಪಾ? ಎಂದು ಕಾಯದ ರೀತಿ, ದೇಹವನ್ನು ಬಾಧಿಸದ ರೀತಿ ನೋಡಿಕೊಳ್ಳಬಹುದು. ಇದ್ಯಾವುದನ್ನೂ ಮಾಡದೇ, ಕೇರ್ ಲೆಸ್ ಮಾಡಿ, ಇನ್ನೆಷ್ಟು ದಿವಸಗಳು ಬದುಕಿರ್ತೇವೆ, ಬದುಕಿರ್ತಾರೆ ಬಿಡಿ, ಎಲ್ಲರೂ ಒಂದಲ್ಲ ಒಂದು ದಿವಸ ಹೋಗುವವರೇ ಎಂದು ಉಡಾಫೆ ಮಾತಾಡಿ, ಕೊನೆಗೊಂದು ದಿವಸ ಸಾವು ಕದ ತಟ್ಟಿದಾಗ, ನಾವು ಕಳುಹಿಸಲಾರೆವು ಎಂದು ಹಟ ಮಾಡುವುದಕ್ಕೆ ಏನೆನ್ನೋಣ?

ಇದೆಲ್ಲವನ್ನೂ ಬರೀತಿದ್ದರೂ, ಮನಸ್ಸಿನ ಮೂಲೆಯಲ್ಲಿ ಒಂದು ಅಳುಕು. ಇಷ್ಟೆಲ್ಲಾ ಮಾತನಾಡುವ ನಾನು, ನನ್ನ ಪ್ರೀತಿ ಪಾತ್ರರ ಅಗಲಿಕೆಯನ್ನು ತಡೆದುಕೊಳ್ಳುವೆನೇ? ಊಹು! ಬಹಳ ಕಷ್ಟ. ಆದರೆ ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ. ಇರುವುದು ಒಂದಷ್ಟು ದಿವಸಗಳು. ಅದನ್ನಿಷ್ಟು ಸಹನೀಯ ಬದುಕಾಗಿಸೋಣ. ಸುಂದರವಾಗಿಸೋಣ, ಈ ಹಟ, ದ್ವೇಷ, ಜಗಳ, ಕಾದಾಟ ಬಿಟ್ಟು ಇದ್ದಾಗಲೇ ಸರಿ ಮಾಡಿಕೊಳ್ಳೋಣ. ಸತ್ತ ಮೇಲೆ ಕೊರಗುವುದನ್ನು ಬಿಡೋಣ. ಯಾರಿಗೆ ಗೊತ್ತು? ಇವತ್ತೋ! ನಾಳೆಯೋ! ಸಾವಿಂದ ಕರೆ ಬರಬಹುದು. ಸ್ವೀಕರಿಸಲು ಮಾನಸಿಕರಾಗಿ ಸಿದ್ಧರಾಗೋಣ, ಅಲ್ವೇ? ಏನಂತೀರಿ

ಏಕೆ ಹೀಗಾಯಿತೋ?


ಈ ನಡುವೆ ಮನಸ್ಸಿಗೆ ಸಿಕ್ಕಾಪಟ್ಟೆ ಹಿಂಸೆ. ಯಾವಾಗ ತಲೆ ಒಡೆದು ಚೂರಾಗುತ್ತೋ ಗೊತ್ತಿಲ್ಲ. ಅಷ್ಟು ಟೆನ್ಷನ್ ಆಗುತ್ತೆ. ಇದನ್ನು ಯಾರ ಹತ್ತಿರಾನೂ ಹೇಳಿಕೊಳ್ಳೋದಿಕ್ಕೆ ಆಗೊಲ್ಲ. ತೀರಾ ಅಂದ್ರೆ ತೀರಾ ಒಂಟಿಯಾಗಿದ್ದ ನಾನು ಅಕಸ್ಮಾತ್ತಾಗಿ ನಿನಗೆ ಪರಿಚಯವಾದೆ. ನಿನ್ನ ಪರಿಚಯವಾದ ಮೇಲೆ ನನ್ನ ಕ್ರಿಯೇಟಿವಿಟಿಗೆ ಒಂದರ್ಥ ಬಂದಿದ್ದು. ಅತ್ಯಂತ ಕಡಿಮೆ ಅವಧಿಯಲ್ಲಿ ನನ್ನ ಜೀವವಾದೆ. ಅಪ್ಪ, ಅಮ್ಮನನ್ನು ಕಳೆದುಕೊಂಡು ಅನಾಥಳಾಗಿದ್ದ ನನಗೆ ಆಸರೆಯಾದೆ. ಇಬ್ಬರೂ ಬಹಳ ಕ್ಲೋಸ್ ಆದೆವು. ಯಾವುದೂ ಗುಟ್ಟಿರಬಾರದು, ಮುಕ್ತವಾಗಿ ಮಾತನಾಡಬೇಕೆಂದುಕೊಂಡೆವು. ಇಬ್ಬರನ್ನೂ ಕಳೆದುಕೊಂಡಿದ್ದ ನನಗೆ, ಯಾವಾಗಲೂ ನಿನ್ನನ್ನು ಕಳೆದುಕೊಳ್ಳುವ ಭಯ ಕಾಡುತ್ತಲೇ ಇತ್ತು. ನಿನಗದನ್ನೂ ಹೇಳುತ್ತಲೂ ಇದ್ದೆ. ಆದರೆ ನೀನು ಮಾತ್ರ ಜೀವ ಹೋದರೂ ನಿನ್ನ ಕೈ ಬಿಡಲಾರೆನೆಂದು ಹೇಳುತ್ತಿದ್ದಾಗ ಆ ಕಣ್ಣುಗಳಲ್ಲಿನ ಕಾಂತಿಗೆ ನಾನು ಮಾರುಹೋಗಿದ್ದೆ. ನೀನು ಜೊತೆಯಿದ್ದಾಗ ಇಡೀ ಜಗತ್ತನ್ನೇ ಗೆಲ್ಲಬಲ್ಲನೆಂಬ ಹುರುಪಿತ್ತು. ಅಹಂ ಇತ್ತು. ನಮ್ಮಿಬ್ಬರ ಸಂಬಂಧದಲ್ಲಿ ಒಂದಿನಿತೂ ಕಪಟವಿರಲಿಲ್ಲ. ಒಂದು ಗಳಿಗೆಯೂ ಮಾತನಾಡದೇ ಇರಲಾರೆವು ಎಂಬಂತಿದ್ದ ನಮ್ಮ ಈ ಸಂಬಂಧ, ಸುಮಾರು ೩-೪ ತಿಂಗಳುಗಳಿಂದ ಮಾತನಾಡದೇ ಇರುವಂತಾಗಿದ್ದು ನನಗೀಗಲೂ ನಂಬಲು ಸಾಧ್ಯವಿಲ್ಲ. 

ಬಡತನದಲ್ಲೇ ಬೆಳೆದ ನನಗೆ ನಿನ್ನ ಕಷ್ಟ ಚೆನ್ನಾಗಿ ಅರ್ಥವಾಗುತ್ತಿತ್ತು. ನೀನು ನಿನ್ನ ಗುರಿಸಾಧನೆಗಾಗಿ ಕಷ್ಟ ಪಡುವುದನ್ನು ನನಗೆ ನೋಡಲಾಗುತ್ತಿರಲಿಲ್ಲ. ಹಾಗಾಗೀ ನಿನಗೆ ಅವಕಾಶ ಕೊಡಿಸುವೆನೆಂದೆನೇ ಹೊರತು ನಿನ್ನ ಸ್ವಾಭಿಮಾನಕ್ಕೆ ಧಕ್ಕೆ ತರಲೆಂದಲ್ಲ. ಪ್ರತಿಭೆ ಇದ್ದರೆ ಮಾತ್ರ ಅವಕಾಶವು ಸಿಗುವುದು ಎನ್ನುವುದನ್ನು ನೀನ್ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ. ಇಂತಹ ಒಂದು ಅವಕಾಶಕ್ಕಾಗಿ ಹಲವರು ತಮ್ಮ ಸ್ವಾಭಿಮಾನಕ್ಕೆ ಎಳ್ಳು ನೀರು ಬಿಟ್ಟು ಅಂಗಲಾಚಿ, ಬೇಡಿ ದೊರಕಿಸಿಕೊಳ್ಳುತ್ತಾರೆ. ಆದರೆ ನಮ್ಮ ಮನೆ ಬಾಗಿಲಿಗೆ ಅವಕಾಶ ಹುಡುಕಿಕೊಂಡು ಬಂದಿತ್ತು. ಅದು ನಿನಗೆ ಅವಮಾನವೆಂದೇಕೇ ಭಾವಿಸಿದೆ. ಇದೊಂದರಿಂದಲೇ ನಿನ್ನ ಉದ್ಧಾರವೆಂದು ನನಗೆ ಯಾವತ್ತಿಗೂ ಅನಿಸಿಲ್ಲ. ನೀನು ಅಂದುಕೊಂಡಿದ್ದನ್ನೂ ಸಾಧಿಸಿಯೇ ಸಾಧಿಸುತ್ತಿ ಅನ್ನುವ ಭರವಸೆ ನನಗಿತ್ತು. ನೀನು ಏನೆಂದು ಅರ್ಥ ಮಾಡಿಕೊಂಡೆಯೋ? ನನಗರ್ಥವಾಗದೇ ಹೋಯಿತು. ಒಬ್ಬರನ್ನೊಬ್ಬರು ಬಹಳ ಅರ್ಥ ಮಾಡಿಕೊಂಡಿದ್ದೇವೆಂದು ಬೀಗುತ್ತಿದ್ದ ನಮಗೆ, ನಾವು ಅಪರಿಚಿತರಾಗೇ ಇದ್ದೆವು! ಒಂದೇ ಒಂದು ಬಾರಿ, ನೀನು ನನ್ನೊಂದಿಗೆ ಮಾತನಾಡಿದ್ದರೆ ನನಗೆ ಸಾಕಾಗಿತ್ತು. ಇನ್ನೆಂದಿಗೂ ನಿನ್ನ ದಾರಿಯಲ್ಲಿ ಅಡ್ಡ ಬರುತ್ತಿರಲಿಲ್ಲ. ನೀನು ನನಗೆ ಆ ಅವಕಾಶವನ್ನು ಕೊಡಲಿಲ್ಲ. 

ಮುಂದೇನು? ನನಗೂ ಗೊತ್ತಿಲ್ಲ :-(

ನಮ್ಮನೆ ಕೆಲಸದವಳು!

ಮನೆ ಕೆಲಸದವಳು ಕೆಲಸ ಬಿಟ್ಟಿದ್ದು, ನನಗೂ ಅಮ್ಮನಿಗೂ ತಲೆನೋವಾಗಿತ್ತು. ಎಲ್ಲಾ ಕೆಲಸಗಳನ್ನು ಇಬ್ಬರೇ ಮಾಡಿಕೊಳ್ಳುತ್ತಿದ್ದೆವು. ಆಗೊಬ್ಬಳು ಕೆಲಸಕ್ಕೆ ಸೇರಿಕೊಂಡಳು. ನೋಡಲು ಬಹಳ ನೀಟಾಗಿದ್ದಳು. ಮನದಲ್ಲಿ ಇವಳಿಗೆ ಮನೆಕೆಲಸಕ್ಕೆ ಬರುವಂತಹ ಅನಿವಾರ್ಯತೆ ಏನಿರಬಹುದು? ಅನ್ನೋ ಕುತೂಹಲ ನನಗೆ. ಇಷ್ಟು ದಿನಗಳಲ್ಲಿ ಗಂಡ ಸರಿಯಿಲ್ಲ, ಅದೂ, ಇದೂ ಅಂತಾ ಕೇಳಿರುವ ನನಗೆ, ಇವಳ ಮನೆ, ಕಷ್ಟದ ಕಥೆ ಏನಿರಬಹುದು? ಅನ್ನೋ ಕುತೂಹಲ. ಮದುವೆಯಾಗಿದೆ. ಮೂವರು ಗಂಡು ಮಕ್ಕಳು ಅಂದಳು. ದೊಡ್ಡವನಿಗೆ ೯ ವರ್ಷ, ಮಧ್ಯದವನು ೭, ಚಿಕ್ಕವನಿನ್ನೂ ೪ ವರ್ಷ ಅಂದಳು. ನಾನದಕ್ಕೆ ಎರಡು ಗಂಡುಮಕ್ಕಳಿದ್ದರಲ್ವೇ? ಮತ್ಯಾಕೆ ಮೂರನೆಯದು? ಅಂದೆ. ಅದಕ್ಕೆ ಅವಳು ’ಏನಕ್ಕಾ? ಹೀಗಂತೀರಿ? ಹೆಣ್ಣು ಮಕ್ಕಳು ಮನೆಗೆ ಬೇಡವೇ?! ಅಂದಳು. ಓ! ಹೆಣ್ಣು ಮಕ್ಕಳು ಬೇಕು ಅನ್ನೋರು ಇದ್ದಾರೆ ಅಂತಾ ಅಂದುಕೊಂಡು, ಗಂಡನಿಗೇನು ಕೆಲಸ? ಅಂದೆ. ಅವನದೊಂದು ಸ್ವಂತ ಲೇತಿಂಗ್ ಮೇಶಿನ್ ಇದೆ. ಜೊತೆಗೆ ಬೇರೆಯವರ ಅಂಗಡಿಗೂ ಹೋಗಿ ಕೆಲಸ ಮಾಡಿಕೊಡ್ತಾರೆ ಅಂತಂದಳು. ತಿಂಗಳಿಗೆ ಸುಮಾರು ರೂ. ೧೫,೦೦೦ ದುಡೀತಾರೆ! ಅಂದಳು. ಮಕ್ಕಳು ಇನ್ನೂ ಚಿಕ್ಕವರು ಅಂತಾ ಹೇಳ್ತೀದ್ದೀ. ಗಂಡನಿಗೆ ಇಷ್ಟು ಸಂಪಾದನೆಯಾಗುತ್ತೆ. ಮತ್ತೆ ಬೇರೆಯವರ ಮನೆಕೆಲಸಕ್ಕೆ ಬಂದು, ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಲ್ವೇ? ಅದೂ ಕೂಡ ಮನೆಕೆಲ್ಸಕ್ಕೆ ಬರ್ತಾ ಇದ್ದೀಯಾ, ಗಂಡ ಬೈಯೊಲ್ವಾ? ಅಥವಾ ಗಂಡ ಏನಾದ್ರೂ ಕುಡಿಯೋ ಚಟ ಅಂತಾ ಸಂಪಾದಿಸಿದ್ದು ಹಾಳು ಮಾಡ್ತಾನಾ? ಅಂತಂದೆ. ಅಯ್ಯೋ! ಅಕ್ಕಾ, ನಾನು ಓದಿರೋದು ೬ ನೇ ಕ್ಲಾಸಿನ ತನಕ ವಷ್ಟೇ. ಅಪ್ಪ, ಅಮ್ಮ ನಾನು ಚಿಕ್ಕವಳಿದ್ದಾಗಲೇ ತೀರಿ ಹೋದರು. ಆಗ ಅಣ್ಣನ ಮಕ್ಕಳನ್ನು ನೋಡಿಕೊಳ್ಳಲೆಂದು ನನ್ನನ್ನು ಸ್ಕೂಲ್ ಬಿಡಿಸಿಬಿಟ್ಟರು. ನನಗಿನ್ನಾವ ಕೆಲಸ ಸಿಗುತ್ತೆ? ಮತ್ತೆ ಮನೆ ಕೆಲಸ ಮಾಡೋದು ಅಂದರೆ ಕೀಳಿನ ಕೆಲಸ ಅಂತಾ ಯಾಕೆ ಹೇಳ್ತೀರಾ? ನಾನು ನನಗೆ ಏನಾದರೂ ಒಡವೆ ಮಾಡಿಸಿಕೊಳ್ಳಬೇಕಾಗಿ ಬಂದರೆ ಗಂಡನ ಹತ್ತಿರ ಕೇಳುವುದು ಎಷ್ಟು ಸರಿ? ಅಂದಳು. ನಾನದಕ್ಕೆ ಓ! ಒಡವೆ ಮಾಡಿಸಿಕೊಳ್ಳೋಕೋಸ್ಕರ, ಮತ್ತೊಬ್ಬರ ಮನೆಯ ಕೆಲಸ ಮಾಡ್ತಿದ್ದೀಯಾ? ಅಂತಂದೆ. ಅದಕ್ಕೆ ‘ಅಷ್ಟೇ ಅಲ್ಲಾ ಅಕ್ಕಾ. ಈಗ ನೋಡಿ, ಸಂಜೆ ಮನೆಗೆ ಹೋದಾಗ ಮಕ್ಕಳಿಗೆ ಏನಾದರೂ ತಿಂಡಿ ತೊಗೊಂಡು ಹೋಗಬಹುದಾ? ನನ್ನ ದುಡ್ಡು ಅನ್ನೋದು ಎಷ್ಟು ಖುಷಿ ಕೊಡುತ್ತೆ ಗೊತ್ತಾ? ಏನೋ ಕಷ್ಟಕಾಲ ಅಂತಾ ಬಂದುಬಿಡ್ತು ಅಥವಾ ಮಕ್ಕಳ ಸ್ಕೂಲ್ ಫೀಸ್ ಕಟ್ಟಬೇಕಾಗಿ ಬಂತು, ಆಗ ನಾನು ಈ ಹಣವನ್ನು ನನ್ನ ಗಂಡನಿಗೆ ಕೊಡಬಹುದಾ? ಅಂದಳು. ಮತ್ತೆ ನನ್ನ ಕುತೂಹಲವಿನ್ನೂ ಇಂಗಿರಲಿಲ್ಲ. ‘ಈ ತಿಂಗಳ ಸಂಬಳ ಗಂಡನಿಗೆ ಹೋಗಿ ಕೊಟ್ಟೆಯಾ? ಅಂದೆ. ಇಲ್ಲಾ, ಅವರು ಕೇಳಲಿಲ್ಲಾ, ನಾನು ಕೊಡಲಿಲ್ಲ. ಈಗ ದುಡೀತಾ ಇದ್ದಾರೆ, ಮುಂದೆ ಕಷ್ಟ ಬಂದಾಗ ಇದೇ ಹಣವನ್ನು ಉಳಿತಾಯ ಮಾಡಿರ್ತೀನಿ. ಅಂದಳು. ನನಗೆ ತಿಳಿದಿರುವ ಎಲ್ಲಾ ವಿದ್ಯಾವಂತ, ಅಸಹಾಯಕ ಹೆಣ್ಣು ಮಕ್ಕಳೊಟ್ಟಿಗೆ, ಮನವು ಇವಳನ್ನು ಹೋಲಿಸತೊಡಗಿತು.

ಮೌನ ಮಾತಾದಾಗ!


ನಿನಗೆ ರಿಜೆಕ್ಷನ್ ಬಗ್ಗೆ ಗೊತ್ತಿದೆಯಾ?  ಇಲ್ಲದಿದ್ದರೆ ಒಮ್ಮೆ ಓದಿನೋಡು. ಒಂದು ಸಲ ವ್ಯಕ್ತಿ, ಯಾರಿಂದಾದ್ರೂ ಅವಳ/ನ ತಪ್ಪಿಲ್ಲದೆ, ರಿಜೆಕ್ಟ್ ಆಗಿಬಿಟ್ಟರೆ especially emotionally rejection  ಅನುಭವಿಸಿಬಿಟ್ಟರೆ, ಅವರಿಗೆ ಅದರಿಂದ ಮೇಲೇಳಲು ಸಾಧ್ಯವಿಲ್ಲವೇ ಇಲ್ಲ.  ಅದು ನನಗೆ ನನ್ನ ಅತಿ ಸಣ್ಣ ವಯಸ್ಸಿನಿಂದ ಆಗಿದೆ.  ಜೀವ ಭಯಕ್ಕಿಂತ ಹೆಚ್ಚಾಗಿ ಪ್ರತಿ ಕ್ಷಣವೂ ನಾನು ರಿಜೆಕ್ಷನ್ ಪದಕ್ಕೆ ಹೆದರುತ್ತೇನೆ.  ಹಾಗಾಗಿಯೇ ನಾನು ಅಷ್ಟು ಸರಿ / ತಪ್ಪು ಅಂತಾ ಯೋಚಿಸುವುದು.  ನಾನು ರಿಜೆಕ್ಟ್ ಆಗಿಬಿಡುವುದರಿಂದ / ಆಗಿರುವುದರಿಂದ ನನಗೆ ನಾನು ಯಾವಾಗಲೂ ತಪ್ಪಿತಸ್ಥ ಸ್ಥಾನಕ್ಕೆ ಬಂದುಬಿಡುತ್ತೇನೆ. ಅಂದರೆ ನಾನೇನೋ ತಪ್ಪು ಮಾಡಿರಬೇಕು. ಅದಕ್ಕೆ ಇವರು ನನ್ನಿಂದ ದೂರ ಹೋಗಿಬಿಡ್ತಾರೆ ಅಂತಾ ಅನ್ನಿಸಿಬಿಡುತ್ತೆ. ಆಗ ಮತ್ತಷ್ಟು ಎಚ್ಚರಿಕೆಯಿಂದ ಇರಲು ಪ್ರಯತ್ನಿಸುತ್ತೇನೆ. ಪ್ರತಿಯೊಂದು ಹೆಜ್ಜೆಯನ್ನು ಇನ್ನಷ್ಟು ಹುಷಾರಾಗಿ ಇಡಲು ಬಯಸುತ್ತೇನೆ.  ಆಗಲೂ ಕೂಡ ನನ್ನಿಂದ ದೂರ ಹೋದಾಗ ಇನ್ನಷ್ಟು ಭಯ, ಇದು ನನಗಾಗಿರುವ ಭೀಕರ ಅಥವಾ ಭಯಂಕರ ಅನುಭವ.ಇದರಿಂದ ಒಂದಷ್ಟು ಜನರನ್ನು ಅವರು ನನ್ನನ್ನು ರಿಜೆಕ್ಟ್ ಮಾಡುವ ಮೊದಲೇ ನಾನು ಮಾಡಿಬಿಡುತ್ತೇನೆ.  ನನಗೆ ಯಾರ ತಪ್ಪು ಕಾಣೊಲ್ಲ ಅಂತಲ್ಲ.  ಕಂಡರೂ ಕಾಣದಂತೆ ಹೆಚ್ಚಾಗಿ ಇರುವುದು ಆ ವ್ಯಕ್ತಿಗಳು ನನ್ನಿಂದ ದೂರ ಹೋಗಿಬಿಟ್ಟರೆ ಎನ್ನುವ ಕಾರಣದಿಂದ ಅಷ್ಟೆ.  ಇಷ್ಟೆಲ್ಲಾ ಯೋಚಿಸಿದರೂ, ಹೆದರಿದರೂ ನಾನು ಅತ್ಯಂತ ಪ್ರೀತಿಸುತ್ತಿದ್ದವರು ಎಲ್ಲರೂ ನನ್ನನ್ನು ರಿಜೆಕ್ಟ್ ಮಾಡಿದ್ದು ನನಗೆ ಸಿಕ್ಕಾ ಪಟ್ಟೆ ನೋವು ಕೊಟ್ಟ ವಿಷಯ.  ಮತ್ತೆ ಇನ್ನೊಂದು ವಿಷಯ ಅಂದ್ರೆ ನನಗೆ ಎಲ್ಲರೂ ಬೇಕು, ಜಗಳವಾಡೋದು ನಾವು ವಿಷಯದ ಜೊತೆಗೆ ಮಾತ್ರ, ವ್ಯಕ್ತಿಯ ಜೊತೆಗಲ್ಲ ಅನ್ನೋದು ನನ್ನ ಒಪಿನಿಯನ್.  ಆದ್ರೆ ಎಲ್ಲರೂ ನನ್ನ ಜೊತೆ ಅರ್ಗ್ಯು ಮಾಡೋವಾಗಲೋ ಅಥವಾ ನನಗೆ ವಿರುದ್ಧ ಮಾತನಾಡಬೇಕಾದಾಗಲೂ ನಾನು ಅಷ್ಟು ಮುಖ್ಯನೇ ಅಲ್ಲ ಅನ್ನೋ ತರಹ ನನ್ನನ್ನು ರಿಜೆಕ್ಟ್ ಮಾಡಿಬಿಡ್ತಾರೆ. ಆ ನೋವು ನನಗೆ ತಡೆಯೋಕ್ಕಾಗದಿಲ್ಲ.  

ಹೀಗೆ ನನ್ನ ಪಾಡಿಗೆ ಒಂಟಿಯಾಗಿದ್ದಾಗ ನಿನ್ನ ಪರಿಚಯವಾಗಿದ್ದು ನಿಧಿ ಸಿಕ್ಕಷ್ಟು ಸಂತೋಷವಾಯಿತು.  ನನ್ನ ಮೂಕ ಧ್ವನಿಗೆ ನೀ ಜೀವ ಕೊಟ್ಟಿದ್ದೆ. ಇಬ್ಬರೂ ಸಕತ್ ಕ್ಲೋಸ್ ಆದೆವು.  ನಿನ್ನ ಕನಸುಗಳನ್ನು ಹಂಚಿಕೊಳ್ಳುವಾಗ, ನಿನ್ನ ದುಡ್ಡಿನ ಕಷ್ಟ ಹೇಳಿಕೊಂಡಾಗ ಏನಾದರೂ ಸಹಾಯ ಮಾಡಬೇಕು. ಅದು ಖಂಡಿತವಾಗಿಯೂ ಕರುಣೆಯಿಂದಲ್ಲ.  ನಿನ್ನ ಟ್ಯಾಲೆಂಟಿಗೆ ಯಾರು ಬೆಲೆ ಕೊಟ್ಟಿಲ್ಲ ಅಂತ ಅನ್ನಿಸುತ್ತಿತ್ತು.  ನನಗಂತೂ ಯಾವ ಕನಸುಗಳೂ ಇಲ್ಲ.  ಹಾಗಾಗಿ ನಿನ್ನ ಕನಸುಗಳನ್ನು ಸಾಕಾರ ಮಾಡಲು ನಿನ್ನೊಟ್ಟಿಗೆ ಬಂದೆ ಹೊರತು ಇನ್ನಾವ ಕೆಟ್ಟ ಉದ್ದೇಶವೂ ಇರಲಿಲ್ಲ. ಇದರಲ್ಲಿ ನಾನು ಲೀಡರ್ ಆಗುವ ಅಥವಾ ಭಾಗವಹಿಸುವ ಯಾವುದೇ ಮನಸ್ಸು ಇರಲಿಲ್ಲ.  ನಿನ್ನ ಕನಸುಗಳೂ ನೆರವೇರಿ, ನಿನಗಾಗುವ ಸಂತೋಷದಲ್ಲಿ ನನ್ನನ್ನು ನಾನು ಕಂಡುಕೊಳ್ಳುವ ಪ್ರಯತ್ನವಷ್ಟೇ ಆಗಿತ್ತು. ಎಂದೂ ಮಾತನಾಡಿಸದ ನಿನ್ನ ಮನೆಯವರು ನನ್ನನ್ನು ಮಾತನಾಡಿಸುವಾಗ ಮನದಲ್ಲೆಲ್ಲೋ ಅನುಮಾನ ಸುಳಿದರೂ ‘ಮಗ ಸೆಟಲ್ ಆಗಬೇಕೆಂಬ ಮನಸ್ಸು ಯಾವ ತಂದೆ, ತಾಯಂದಿರಿಗಿರುವುದಿಲ್ಲ. ನಾನೇ ಸರಿಯಿಲ್ಲವೆಂದು ಬೈದುಕೊಂಡುಬಿಡುತ್ತಿದ್ದೆ.  ಆದರೆ ನಿನಗಿಂತ ನಿನ್ನ ಮನೆಯವರೇ ಹೆಚ್ಚು ಹತ್ತಿರವಾಗಿದ್ದು ಮಾತ್ರ ಆಶ್ಚರ್ಯ.  

ನಿನ್ನ ಜೊತೆ ಇರುವ ಅವಕಾಶ ಸಿಗುತ್ತೆ / ಮನೆಯಲ್ಲಿ ಹೇಳಲು ಒಂದು ನೆಪವಿರುತ್ತೆ ಅಂತಾನೇ ನಾನು ಮೊದಲಿಗೆ ಈ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು.  ನಿನ್ನ ಕನಸುಗಳು ಅದು ನನ್ನೊಟ್ಟಿಗೆ ಸಾಕಾರಗೊಳ್ಳುವ ಕಾಲ ಬಂದೇ ಬಿಟ್ಟಿತು ಎಂದು ಹಿಗ್ಗಿ ಹೀರೇಕಾಯಿ ಆಗಿಬಿಟ್ಟೆ.  ನಿನಗಿಂತಲೂ ಹೆಚ್ಚಿನ ಆಸಕ್ತಿಯಿಂದ ಈ ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡೆ.  ನನ್ನ ಮನೆಯವರೆಲ್ಲರ ಕೆಂಗಣ್ಣಿಗೂ ಗುರಿಯಾದೆ.  ಅದೇನದು? ಯಾವಾಗಲೂ ಮನೆಯಿಂದ ಹೊರಗಿರುವುದು? ಅವನನ್ನು ಕಂಡರೆ ನನಗಾಗುವುದಿಲ್ಲವೆಂದು ಮೊದಲಬಾರಿಗೆ ಅಮ್ಮ ಸಿಡಿಮಿಡಿಗುಟ್ಟಿದಾಗ, ಎಂದೂ ಹೆಚ್ಚು ಮಾತನಾಡದ ನಾನು ಅಂದು ಭೂಮಿ, ಆಕಾಶ ಒಂದು ಮಾಡಿದ್ದೆ.  ಅಮ್ಮನಿಗೆ ಆಶ್ಚರ್ಯ, ಸಂಕಟ, ನೊವು ಎಲ್ಲವೂ ಬಹುಶಃ ಒಟ್ಟಿಗೆ ಅನುಭವವಾಗಿತ್ತೇನೋ? ಅಂದಿನಿಂದ ಪೂರ್ತಿ ಮೌನಿಯಾಗಿಬಿಟ್ಟಳು.  ಆ ಘಟನೆಯಾದ ಮೇಲೆ ಇನ್ನೂ ಹೆಚ್ಚಿನ ಆಸಕ್ತಿಯಿಂದ ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡೆ. ಇದು ನನಗೆ ನನ್ನ ಆತ್ಮ ಗೌರವದ ಪ್ರಶ್ನೆಯಾಗಿಬಿಟ್ಟಿತು.  ನನ್ನ ಗೆಳೆಯ ವೇಸ್ಟ್ ಬಾಡಿಯಲ್ಲ.  ಅವನಲ್ಲಿ ಟ್ಯಾಲೆಂಟ್ ಇದೆ ಎಂದು ಸಾರಿ ಸಾರಿ ಜಗತ್ತಿಗೆಲ್ಲಾ ಗೊತ್ತಾಗುವಂತೆ ಮಾಡಬೇಕಾದ ಅನಿವಾರ್ಯತೆಯನ್ನು ಹುಟ್ಹಾಕಿಬಿಡ್ತು.  

ಇದುವರೆವಿಗೂ ಹೆಚ್ಚಿನ ಪ್ರಾಜೆಕ್ಟ್ ಗಳನ್ನು ನೀನು ಅರ್ಧ ಅರ್ಧಕ್ಕೆ ಏನೇನೋ ಸಿಲ್ಲಿ ಕಾರಣ ಕೊಟ್ಟು ಬಿಟ್ಟುಬಿಡುತ್ತಿದ್ದೆ.  ಅದು ಹಾಗಲ್ಲ ಎಂದು ನಾನು ಹೇಳಿದರೆ ವಾದ ಮಾಡುತ್ತಿದ್ದೆ. ನಾನು ನಿನ್ನ ಜೊತೆ ಟೀಮ್ ನಲ್ಲಿದ್ದರೆ ನೀನು ಇದನ್ನು ಬಿಡದಂತೆ ನೋಡಿಕೊಳ್ಳಬಹುದು. ನೀನು ಜಗಳವಾಡಿದರೂ, ಬೈದರೂ ನಾನಾದ್ರೆ ಸಹಿಸಿಕೊಳ್ಳಬಹುದು.  ನಿನ್ನ ಪ್ರತಿಭೆ ಜಗತ್ತಿಗೆ ಗೊತ್ತಾಗಿಬಿಟ್ಟರೆ ಆಮೇಲೆ ನಿನ್ನ ಈ ಸ್ವಭಾವ (ಹೊಂದಾಣಿಕೆಯಿಲ್ಲದ) ವನ್ನು ಜಗತ್ತು ಒಪ್ಪಿಕೊಂಡುಬಿಡುತ್ತದೆ. ಹಾಗಾಗಿ ನಾನು ಈ ಟೀಮ್ ನಲ್ಲಿ, ನನಗೆ ನೀನು ಎಷ್ಟೋ ಅವಮಾನಗಳನ್ನು ಮಾಡಿದರೂ ಸಹಿಸಿಕೊಂಡು ಇರಬೇಕೆಂದೇ ನಾನು ಪ್ರಾಜೆಕ್ಟ್ ಗೆ ಬರೋಕೆ ಪ್ರೇರೇಪಿಸಿದ್ದು. ನಿಧಾನವಾಗಿ ಒಂದೊಂದೇ ವಿಷಯಗಳು ನಿನ್ನ ಬಗ್ಗೆ ತಿಳಿಯುತ್ತಾ ಬಂತು.  ನನ್ನ ಹತ್ತಿರ ಹೇಳಿದ ಮಾತುಗಳನ್ನೆಲ್ಲಾ  ನೀನು ನನ್ನ ಗೆಳತಿಯರ ಬಳಿ ಕೂಡ ಹೇಳುತ್ತಿದ್ದೆ ಎಂದು ಗೊತ್ತಾದಾಗ, ನನಗಾದ ನೋವನ್ನು ನಾ ಯಾರಲ್ಲಿ ಹೇಳಿಕೊಳ್ಳಲಿ? ಎಲ್ಲಾ ಹುಡುಗಿಯರು ನಿನಗೆ ಒಂದೇ ರೀತಿ ಹಾಗೂ ನನ್ನನ್ನು ಕೂಡ ನೀನು ಅದೇ ಸ್ಥಾನದಲ್ಲಿ ಇರಿಸಿದ್ದೆ ಎಂಬುದರ ಅರಿವಾದಾಗ ಆದ ಸಂಕಟವೆಷ್ಟು?  ನಿನ್ನ ಗೆಳೆತನ ಬಿಡದಷ್ಟು ಇಲ್ಲಿ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ನಿನ್ನನ್ನು ಬಿಟ್ಟುಬಿಡುವುದು ಸುಲಭವಾಗಿದ್ದರೂ, ಮನೆಯಲ್ಲಿ ನನಗದು ಪ್ರೆಸ್ಟೀಜ್ ವಿಷಯವಾಗಿತ್ತು.  ಹಾಗಾಗಿಯೇ ನಿನ್ನನ್ನು ಬದಲಾಯಿಸಲು ಪ್ರಯತ್ನಿಸಿದೆ. ನಿನಗದು ಇಷ್ಟವಾಗಲಿಲ್ಲವೇನೋ?

ಇನ್ನೂ ಪ್ರಾಜೆಕ್ಟ್ ವಿಷಯ, ನಾನು ಬಂದಿದ್ದೇ  ನಿನಗಾಗಿ ಅನ್ನೋದನ್ನು ಹೇಳಿದ್ದೀನಿ.  ಆಮೇಲಾಮೇಲೆ ಅದು ನನ್ನ ಪ್ರೆಸ್ಟೀಜ್ ವಿಷಯವಾಯಿತು. ನೀನು ನನ್ನ ಗೆಳತಿಯ ಹತ್ತಿರ ಇವಳು ಪ್ರಾಜೆಕ್ಟ್ ನಲ್ಲಿರುವ ತನಕ ನಾನು ಬರುವುದಿಲ್ಲ ಎಂದೆಯಂತೆ.  ನನಗೆ ಮಾತನಾಡಲು ಕೂಡ ಅವಕಾಶ ಕೊಡದೆ ನೀನು ಹೀಗೆ ಮಾಡಿದ್ದು ಯಾಕೆ ಎಂಬುದು ನನಗೆ ಈಗ ಕಾಡುತ್ತಿದೆ.  ನಾನು ಪ್ರಾಜೆಕ್ಟ್ ಗೆ ಮುಖ್ಯ ಅಂತಾ ನನಗನ್ನಿಸಿಯೇ ಇಲ್ಲ.  ನಿನ್ನ ಬಗ್ಗೆ ಕನ್ಸರ್ನ್ ಇರುವುದು ಪ್ರಾಜೆಕ್ಟ್ ಗಾಗಿ ಅನ್ನೋದಿಕ್ಕಿಂತ ಹೆಚ್ಚಾಗಿ ಅಯ್ಯೋ ನಿನ್ನ  ಆ ಒಂದು ತಪ್ಪು ಅಥವಾ ವೀಕ್ ನೆಸ್ ನಿಂದಾಗಿ ಒಳ್ಳೆಯ ಅವಕಾಶವನ್ನು ಬಿಟ್ಟುಬಿಡ್ತಾ ಇದ್ದೀಯಾ ಅನ್ನೋದಷ್ಟೆ. ನಾನಾದರೆ ಅಡ್ಜಸ್ಟ್ ಮಾಡಿಕೊಳ್ಳಬಹುದು, ಬೇರೆಯವರಾದ್ರೆ ಆಗೊಲ್ಲ ಅಂತ ಅಷ್ಟೆ.  ಅದನ್ನು ಕೂಡ ಯೋಚಿಸಿ, ಯೋಚಿಸಿ ಬಿಟ್ಟೇ ಬಿಟ್ಟಿದ್ದೀನಿ.  ಅವರವರಿಗೆ ಅವರವರ ತಪ್ಪುಗಳು ಗೊತ್ತಾಗಬೇಕೇ ಹೊರತು ಮತ್ತೊಬ್ಬರಿಂದ ತಿದ್ದುವುದು ಸಾಧ್ಯವಿಲ್ಲ ಅನ್ನೋದು ಅರ್ಥವಾಗಿದೆ. 

ನೀನು ಇಲ್ಲದೆ ಬದುಕುವುದಕ್ಕೆ ಆಗೊಲ್ಲ ಅನ್ನುವಂತಹ ಸಂಬಂಧ ನಮ್ಮದಾಗಿರಲಿಲ್ಲ. ಆದರೆ ನೀನೂ ಕೂಡ ಇದ್ದರೆ ಈ ಬಾಳು ಸೊಗಸು ಎನ್ನುವಂತಹದಾಗಿತ್ತು ಎಂದು ನಂಬಿದ್ದೆ. ಬಹಳಷ್ಟು ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದೀನಿ.  ನನ್ನ ಕೈಲಾದಷ್ಟು ಪ್ರಾಜೆಕ್ಟ್ ಗಾಗಿ ನಾನು ಕೆಲಸ ಮಾಡಿದ್ದೀನಿ.  ನಾವು ನಾವು ನಮ್ಮನ್ನೇ ಪರಿಶೀಲಿಸಿ ನೋಡಿಕೊಂಡಾಗ, ವಿಮರ್ಶಿಸಿ ಕೊಂಡಾಗ ನಮಗೆ ಗೊತ್ತಾಗುತ್ತದೆ ನಾವೇನು ಪ್ರಾಜೆಕ್ಟ್ ಗಾಗಿ ಮಾಡಿದ್ದೀವಿ ಅನ್ನೋದು.  ಸೋ ನನ್ನ ಟೈಮ್ ಗೂ ಬೆಲೆಯಿದೆ ಹಾಗೆಯೇ ನಿನ್ನ ಟೈಮ್ ಗೂ ಕೂಡ ನಾನು ಬೆಲೆ ಕೊಟ್ಟಿದ್ದೀನಿ ಅನ್ನೋದು ನನ್ನ ಅಭಿಪ್ರಾಯ.  ಅಕಸ್ಮಾತ್ ನಿನ್ನ ಟೈಮ್ ವೇಸ್ಟ್ ಮಾಡಿದ್ದರೆ ಕ್ಷಮೆಯಿರಲಿ.  ನೀನೇ ಅಲ್ಟಿಮೇಟ್ ಅಂತಾ ನಾನ್ಯಾವತ್ತೂ ಅಂದುಕೊಂಡಿಲ್ಲ. ಈ ಪ್ರಾಜೆಕ್ಟ್ ನೀನು ಇಲ್ಲದಿದ್ರೂ ನಡೆಯುತ್ತೆ ನನಗದು ಗೊತ್ತು. ಆದರೆ  ನಿನಗೆ ಇದಕ್ಕಿಂತ ಹೆಚ್ಚಿನ / ಒಳ್ಳೆಯ

ಅವಕಾಶ ನಿನ್ನನ್ನು ನೀನು ಪ್ರೂವ್ ಮಾಡೋಕೆ ಸಿಗೊಲ್ಲ ಅಂತಾ ಅಷ್ಟೆ ನನ್ನ ಕಳಕಳಿ.  ಅದಕ್ಕೋಸ್ಕರ ಎಲ್ಲ ರೀತಿಯ ಪ್ರಯೋಗಗಳನ್ನು ಮಾಡಿದೆ. ಕೊನೆಗೆ ಎಮೋಷನಲ್ ಬ್ಲಾಕ್ ಮೇಲ್ ಕೂಡ ಮಾಡಿದೆ. ನಿನಗದು ಟಾರ್ಚರ್ ಅನ್ನಿಸಿರುತ್ತೆ.  ಆದರೆ ನಿಜವಾಗಿಯೂ ನಿನಗೆ ಅರಿವಾದಾಗ ನಾನು ನಿನ್ನ ಕೈಗೆ ಸಿಗದಂತೆ ಬಹಳ ದೂರ ಹೋಗಿರ್ತೀನಿ. ಇಷ್ಟು ಕೂಡ ಮಾತನಾಡಿದ್ದು ಮುಂದೆ, ಮುಂದೆ ಇದು  ನಿನ್ನ  ಕೆಲಸಕ್ಕೆ ಅಫೆಕ್ಟ್ ಆಗದಿರಲಿ ಎನ್ನುವ ಉದ್ಧೇಶವಷ್ಟೇ.  

ಗುಡ್ ಬೈ :-(

ಹುಡುಗರು ಬುದ್ಧಿವಂತರಾಗುತ್ತಿದ್ದಾರೆ - ಸೈಡ್ ಪ್ಲೀಸ್, ಸೈಡ್ ಪ್ಲೀಸ್



ಹುಡುಗರು ಬುದ್ಧಿವಂತರಾಗುತ್ತಿದ್ದಾರೆ - ಸೈಡ್ ಪ್ಲೀಸ್, ಸೈಡ್ ಪ್ಲೀಸ್. ನಾವೇನೂ ಕಡಿಮೆಯಿಲ್ಲ, ಹೇಗಾದರೂ ಮಾಡಿ ಹಳ್ಳದಲ್ಲೀ ಬೀಳಿಸಿಯೇ ಬೀಳಿಸುತ್ತೀವಿ ಎಂಬಂತಹ ಹುಡುಗಿಯರು ;-) ಇದು ಪಂಚರಂಗಿಯ ತಿರುಳುಗಳು.

ಮಧ್ಯಮ ವರ್ಗದವರ ಗೊಂದಲಗಳು, ಫಾರೀನ್ ಕನಸುಗಳು, ಹುಟ್ಟಿದಂದಿನಿಂದ ಶುರುವಾಗುವ ಟೆನ್ಷನ್ ಗಳು, ಮಕ್ಕಳ ಬದುಕನ್ನು ಅಪ್ಪ, ಅಮ್ಮಂದಿರೇ ಬದುಕುತ್ತಾರೆ, ಮಕ್ಕಳು ಹುಟ್ಟುವುದೇ ತಮ್ಮ ಕನಸುಗಳನ್ನು ನೆರವೇರಿಸಲು ಎಂದು ಭಾವಿಸಿರುವ ಈಗಿನ ಎಲ್ಲಾ ಮಧ್ಯಮ ವರ್ಗಗಳ ಕುಟುಂಬದ ಕಥೆ ‘ಪಂಚರಂಗಿ’. ಒಂದು ಕಡೆ ಹೀರೋಯಿನ್ ಅಕ್ಕ ಪಿಯುಸಿ ಫೈಲ್ ಆದರೂ ಫಾರೀನಿನಲ್ಲಿ ನೆಲೆಸಿರುವ ಹುಡುಗನನ್ನು ಮದುವೆಯಾಗುವ ಕನಸು ಕಾಣುವ ಹಾಗೂ ಅದಕ್ಕಾಗಿ ಇಂಗ್ಲೀಷ್ ಭಾಷೆಯನ್ನು ರಾಪಿಡೆಕ್ಸ್ ಪುಸ್ತಕದಿಂದ ಕಲಿಯುತ್ತಿರುವ ಹುಡುಗಿ! ಈಕೆಯನ್ನು ಮದುವೆಯಾಗಲು ಬರುವ ನಾಯಕನ ಅಣ್ಣ ಪಕ್ಕಾ ಮಧ್ಯಮವರ್ಗದ ಮಕ್ಕಳ ನಕಲು! ತಾನು ಪ್ರೀತಿಸಿದ್ದರೂ, ಅದನ್ನು ಅಪ್ಪ ಅಮ್ಮಂದಿರಿಗೆ ಹೇಳಲು ಹೆದರುವವನು, ಇಷ್ಟವಿಲ್ಲದಿದ್ದರೂ ಅವರಿಗಾಗಿಯೇ ವಿದೇಶದಲ್ಲಿ ನೆಲೆಸಿರುವವನು, ಅಪ್ಪ, ಅಮ್ಮನಿಗಾಗಿಯೇ ತನ್ನೆಲ್ಲಾ ಕನಸುಗಳನ್ನು ಮುಚ್ಚಿಟ್ಟುಕೊಂಡು ಬದುಕಿದ್ದರೂ ಸತ್ತಿರುವವನು. ಇಂತಹದಕ್ಕೆಲ್ಲಾ ರೆಬೆಲ್ ಆದ ನಾಯಕ ಮನೆಯಲ್ಲಿ ತಿರಸ್ಕೃತನಾದವನು.

ಮುಂಗಾರು ಮಳೆಯಲ್ಲಿ ಚಿತ್ರದ ಆರಂಭದಲ್ಲಿಯೇ ಹಳ್ಳದಲ್ಲಿ ಬೀಳುವ ನಾಯಕ ಪಟ್ಟ ಪರಿಪಾಡಲು ನೋಡಿದ ಪಂಚರಂಗಿಯ ‘ನಾಯಕ’ ಇಲ್ಲಿ ತಪ್ಪಿಸಿಕೊಂಡು ಓಡಾಡುತ್ತಾನೆ. ನಾಯಕಿ ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಆ ಬಲೆಯೊಳಗೆ ಸಿಲುಕಲು ಇಷ್ಟವಿರದ ಮಹಾನ್ ಪಲಾಯನವಾದಿ‘ಗಳು’ . ಲೈಫ್ ಇಷ್ಟೇನೇ ಎನ್ನುವುದು ಇವನ ಫಿಲಾಸಫಿ. ಜೀವನವೇ ಈತನಿಗೆ ಮಹಾನ್ ಬೋರು‘ಗಳು’.ನಗುವುದ ಮರೆತಿವೆ ಹೃದಯಗಳು, ಒಂದು ಒಳ್ಳೆ ನಗುವಿಗೆ ಮೀನಿಂಗ್‌ಫುಲ್ ಬದುಕಿಗೆ ಎಲ್ಲೈತಪ್ಪ ಇಲ್ಲಿ ಜಾಗಗಳು? ಇದು ಈತನ ಪ್ರಶ್ನೆಗಳು! ಇದಕ್ಕೆಲ್ಲಾ ಕಾರಣ ಹಿರಿಯರು‘ಗಳು’ ಎಂದು ದೂಷಿಸುತ್ತಲೇ ಕೂರುವುದು ಈತನ ಕೆಲಸ‘ಗಳು’. ವಿರುದ್ಧ ಧ್ರುವಗಳು ಆಕರ್ಷಿತವಾಗಿಯೇ ಆಗುತ್ತವೆ ಎಂಬಂತೆ ಆಶಾವಾದಿ ನಾಯಕಿ. ಅವಳಿಗೆ ಲೈಫ್ ಎಂದರೆ ‘ಹೀಗೇನೇ’!. ಜೀವನವನ್ನು ಎಂಜಾಯ್ ಮಾಡಬೇಕು, ಮನಸ್ಸಿಗೆ ಹಿಡಿಸದ ವಿಷಯಗಳನ್ನು ನೋಡದಂತಿರಬೇಕು, ಅದಕ್ಕೆ ಕೊರೊಗೋದು ಯಾಕೆ? ಯಾರನ್ನಾದ್ರೂ ದೂಷಿಸಬೇಕು ಯಾಕೆ? ಎನ್ನುವುದು ಇವಳ ಪಾಲಿಸಿ. ಇವರಿಬ್ಬರ ನಡುವಿನ ಪ್ರೀತಿಯ ದೃಶ್ಯಾವಳಿಯ ಒಂದು ಘಟನೆಯ ಚಿತ್ರಣ ‘ಪಂಚರಂಗಿ’. 

ಈ ಎರಡು ಜೋಡಿಗಳನ್ನು ನೋಡಿದಾಗ ನಮ್ಮ ಮನೆಯಲ್ಲೇ ಇಂತಹದ್ದು ನಡೆಯುತ್ತಿವೆ ಎಂದನ್ನಿಸಿದರೂ ಮೆಚ್ಚುಗೆ ಪಡೆಯುವುದು ಮತ್ತೊಂದು ಜೋಡಿ - ಕೆಲಸದವಳು ಹಾಗೂ ಬಸ್ ಡ್ರೈವರ್ ನ ನಡುವಿನ ಪ್ರೀತಿ! ಈ ಮಧ್ಯಮ ವರ್ಗದವರಿಗೆ ಇರುವಂತಹ ಗೊಂದಲಗಳು, ಟೆನ್ಷನ್ ಗಳು ಯಾವುವೂ ಇವರನ್ನು ಕಾಡುವುದಿಲ್ಲ. ಅವನು ಹಿಂಜರಿಯದೇ ಇವಳಿಗೆ ಪ್ರೊಪೋಸ್ ಮಾಡಿಬಿಡುತ್ತಾನೆ. ಇವಳು ಒಪ್ಪಿಕೊಂಡುಬಿಡುತ್ತಾಳೆ. ಮದುವೆ ಕೂಡ ಆಗಿಬಿಡುತ್ತಾರೆ. ಈಕೆಯ ಅಣ್ಣ ‘ನನಗೆ ಒಂದು ಮಾತು ಹೇಳಿದ್ದರೆ, ನಾನೇ ಮದುವೆ ಮಾಡ್ತಿದ್ದೆ’ ಎನ್ನುವ ಮಾತು ಅವರು ಬದುಕಿನತ್ತ ನೋಡುವ ದೃಷ್ಟಿಯನ್ನು ತೆರೆದಿಟ್ಟು ಬಿಡುತ್ತದೆ. ನಾಯಕಿಯ ಅಕ್ಕ ಇಂಗ್ಲೀಷ್ ಕಲಿಯಲು ತಂದಿಟ್ಟುಕೊಂಡಿರುವ ರಾಪಿಡೆಕ್ಸ್ ಪುಸ್ತಕವನ್ನು ಓದಿ ಇಂಗ್ಲೀಷ್ ಕಲಿಯುವ ಈ ಕೆಲಸದವಳು, ಅಕ್ಕ ತಂಗಿಯರ ಜಗಳವನ್ನು ನಿರ್ಲಿಪ್ತವಾಗಿ ನೋಡುವ ಬಗೆ, ಬಸ್ ಡ್ರೈವರ್ ನ ಜೊತೆ ನಡೆಯುವ ಸಂಭಾಷಣೆಗಳು ಎಲ್ಲವೂ ಅವಳನ್ನು ಚಿತ್ರದ ಹೈಲೈಟ್ ಮಾಡಿಬಿಡುತ್ತವೆ.

ಚಿತ್ರದ ಮತ್ತೊಂದು ಮುಖ್ಯ ಪಾತ್ರ ಅನಂತನಾಗ್ ರವರದ್ದು. ಅಲೆಮಾರಿಯ ಪಾತ್ರ. ಈ ಪಾತ್ರಕ್ಕೆ ಅವರೇ ಸೂಕ್ತ ಅನ್ನಿಸಿಬಿಡುತ್ತದೆ. ಒಂದು ದೃಶ್ಯದಲ್ಲಿ ದಿಗಂತ್ ವರ್ಸಸ್ ಅನಂತನಾಗ್ ಸಂಭಾಷಣೆ (‘ಗಳು’ ‘ಗಳು’) ಬಹಳ ಚೆನ್ನಾಗಿ ಮೂಡಿಬಂದಿದೆ. ಮತ್ತೊಮ್ಮೆ ಈ ದೃಶ್ಯವನ್ನು ನೋಡಬೇಕೆಂದು ಮನ ಬಯಸುತ್ತದೆ. ಚಿತ್ರದ ಹಾಡುಗಳಂತೂ ಬಹಳ ಚೆನ್ನಾಗಿವೆ. ಶ್ರೇಯಾ ಘೋಷಾಲ್ ಹಾಡಿರುವ ‘ನಿನ್ನಯ ಒಲವಿನ’ ಬಹಳ ಇಂಪಾಗಿದೆ. ಚಿತ್ರದ ಪ್ರತಿಯೊಂದು ಡೈಲಾಗ್ ಗಳೂ ಒಂದೊಂದು ಕಥೆಯನ್ನು ಹೇಳುತ್ತವೆ. ಮುಂಗಾರು ಮಳೆ ತರಹ, ಮನಸಾರೆ ತರಹ, ಗಾಳಿ ಪಟ ತರಹ ಇದೆ ಅನ್ನಬಾರದೆಂದು

ಭಟ್ಟರು ಹುಷಾರಾಗಿ ಮೊದಲೇ ಟೈಟಲ್ ಸಾಂಗ್ ನಲ್ಲಿ ‘ಅರೆರೆರೆ ಪಂಚರಂಗಿ, ಅದೇ ಮೋಡ, ಅದೇ ಬಾನು, ಆದರೆ ಸೋನೆ ಬೇರೆ, ಸೋನೆಯ ಗಂಧ ಬೇರೆ ಎಂದು ಹೇಳಿಸಿಬಿಟ್ಟಿದ್ದಾರೆ. 

ಹೆಚ್ಚಾಗಿ ಕನ್ನಡದ ಕಮರ್ಷಿಯಲ್ ಸಿನೆಮಾಗಳು ಶುರುವಿನಲ್ಲೇ ಮಾತಾಡಿ, ಕೊನೆಗೊಂದು ಕ್ಲೈಮಾಕ್ಸ್ ಕೊಟ್ಟು ಮಧ್ಯದಲ್ಲಿ ತುಂಬಿಸುವ ಕೆಲಸ ಮಾಡುತ್ತವೆ. ಇತ್ತೀಚೆಗೆ ಬರುತ್ತಿರುವ ಎಲ್ಲಾ ಸಿನೆಮಾಗಳು ಮಧ್ಯಂತರದ ನಂತರ ಬಹಳ ಎಳೆದಂತೆ ಭಾಸವಾಗಿಬಿಡುತ್ತವೆ. ಆದರೆ ‘ಪಂಚರಂಗಿ’ಯಲ್ಲಿ ಆರಂಭದಲ್ಲಿ ಏನೂ ಅರ್ಥವಾಗದ್ದು, ಮಧ್ಯಂತರದಲ್ಲಿ ಸ್ವಲ್ಪ ಏನೋ ಇದೆ ಅಂತಾ ಅನ್ನಿಸಿ, ಅದು ಏನು? ಅನ್ನೋದು ಕ್ಲೈಮಾಕ್ಸ್ ನಲ್ಲಿ ಗೊತ್ತಾಗುತ್ತದೆ. ಅದುವರೆವಿಗೂ ಭಟ್ಟರು ಏನು ಹೇಳೋದಿಕ್ಕೆ ಹೊರಟಿದ್ದಾರೆ ಅನ್ನೋದು ಅಷ್ಟಾಗಿ ಅರ್ಥವಾಗುವುದೇ ಇಲ್ಲ. ಇದಕ್ಕೆಲ್ಲಾ ಉತ್ತರಗಳು ಪಂಚರಂಗಿಯ ಕೊನೆಯ ೨೦ ನಿಮಿಷಗಳು. ಹಾಗಾಗಿ ಪಂಚರಂಗಿಯ ಕಥೆ ಶುರುವಾಗೋದು ಕ್ಲೈಮಾಕ್ಸ್ ನಲ್ಲಿ ಎಂದು ಹೇಳಬಹುದೇನೋ? ಕಮರ್ಶಿಯಲ್ ಸಿನೆಮಾ ಎಂಬುದನ್ನು ಮೀರಿ ಬೆಳೆಯುತ್ತಿದ್ದಾರೆ ಭಟ್ಟರು ಎನ್ನುವುದನ್ನು ಪಂಚರಂಗಿ ಹೇಳುತ್ತದೆ. ಇದೊಂದು ತರಹದ ಆರ್ಟ್ ಹಾಗೂ ಕಮರ್ಷಿಯಲ್ ನಡುವಿನ ಬ್ರಿಡ್ಜ್ ಸಿನೆಮಾ ಎನ್ನಬಹುದೇನೋ?

ಕವಲು - ನನ್ನನಿಸಿಕೆ

ಭೈರಪ್ಪನವರ ಪ್ರತಿ ಕಾದಂಬರಿಗಳಲ್ಲೂ ಈ ಲೈಂಗಿಕ ಅತೃಪ್ತಿ, ವಿವಾಹ ಬಾಹಿರ, ಅನೈತಿಕ ಸಂಬಂಧಗಳು ಎದ್ದು ಕಾಣುತ್ತವೆ. ಇದು ತೀರಾ ‘ಅತಿರೇಕ’ ಆಯಿತು, ಹೀಗೆಲ್ಲಾ ನಿಜವಾಗಲೂ ನಡೆಯುತ್ತಾ? ಎಂದೆಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡರೂ, ಮನಸ್ಸಿನ ಒಂದು ಮೂಲೆಯಲ್ಲಿ ‘ನಿಜ’. ಗಂಡು ಹೆಣ್ಣಿನ ಒಡಕುಗಳಿಗೆ ಈ ಲೈಂಗಿಕ ಅತೃಪ್ತಿ ಎಂಬುದು ಅತ್ಯಂತ ಮುಖ್ಯ ಕಾರಣ ಎಂದು ಕೂಡ ಮೂಡುತ್ತದೆ. ‘ಅಂಚು’ ವಿನಲ್ಲಿ ಇಡೀ ಪುಟ ಪುಟದಲ್ಲೂ ‘ಶೂನ್ಯ’ ಎಂಬ ಭಾವ ಕಾಡುವ ಹಾಗೆ, ‘ಕವಲು’ ನಲ್ಲಿ ಪ್ರತಿ ಪುಟ ಪುಟದಲ್ಲೂ ‘ಸೆಕ್ಸ್’ ವಿಜೃಂಭಿಸುತ್ತದೆ. ತೀರಾ ಅಸಹ್ಯ ಹುಟ್ಟುವಷ್ಟು ಬಾರಿ ಗಂಡು-ಹೆಣ್ಣು ಭೇಟಿಯಾಗುವುದೇ ಸೆಕ್ಸ್ ಎಂಬ ಕಾರಣಕ್ಕೇ?! ಇದರಾಚೆಗೆ ಇನ್ನ್ಯಾವ ಕಾರಣಗಳೂ ಅಥವಾ ಸಂಬಂಧಗಳು ಇರಬಾರದೇ? ಇರುವುದಿಲ್ಲವೇ? ಎಂದೆನಿಸಿಬಿಡುತ್ತದೆ. ಇದರಿಂದಾಗಿ ಭೈರಪ್ಪನವರು ಏನು ಹೇಳಲು ಹೊರಟಿದ್ದಾರೆ ಎಂಬುದು ಗೋಚರವಾಗುವುದೇ ಇಲ್ಲ. ಹಾಗಾಗಿಯೇ ‘ಕವಲು’ ತೀರಾ ಪೇಲವ ಹಾಗೂ ಸಿನಿಮೀಯವಾಗಿದೆ ಎಂದೆನಿಸುತ್ತದೆ. ನಾಲ್ಕೈದು ಪಾತ್ರಗಳು, ಅವುಗಳ ನಡುವೆ ನಡೆಯುವ ಘರ್ಷಣೆಗಳು, ತಪ್ಪು ಮಾಡಿದವರಿಗೆ ಶಿಕ್ಷೆಯಾಗುವುದು, ಒಳ್ಳೆಯವರಿಗೆ ಒಳ್ಳೆಯದಾಗುವುದು, ಇವೆಲ್ಲಕ್ಕೂ ಒಂದು ಲಾಜಿಕಲ್ ಕ್ಲೈಮಾಕ್ಸ್, ಇದನ್ನು ಓದಿ ಮುಗಿಸಿದಾಗ ಹಿಂದಿ ಚಲನಚಿತ್ರವೊಂದನ್ನು ನೋಡಿದಂತೆ ಭಾಸವಾಗುವುದು ಸುಳ್ಳಲ್ಲ! ‘ಕವಲು’ ಕೃತಿ ಹಾಗೂ ಇದರ ಬಗ್ಗೆ ಪೇಪರ್ ಗಳಲ್ಲಿ, ಬ್ಲಾಗ್ ಗಳಲ್ಲಿ ಬಂದಂತಹ ವಿಮರ್ಶೆಗಳನ್ನು ಓದಿದಾಗ, ಯಾರೂ ಭೈರಪ್ಪನವರ ಆಲೋಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ನನಗನ್ನಿಸಿತು. ಬಹುಶಃ ಮೊದಲಿಗೆ ವಿಮರ್ಶೆಗಳನ್ನು ಓದಿ, ನಂತರ ‘ಕವಲು’ ಓದಿದ ಕಾರಣವೋ ಏನೋ, ಈ ವಿಭಿನ್ನ ದೃಷ್ಟಿಕೋನ! 

ಯಾವಾಗಲೂ ಭೈರಪ್ಪನವರ ಕಾದಂಬರಿಗಳಲ್ಲಿ ಪಾತ್ರಗಳು ಒಂದು ಇಮೇಜ್ ಅನ್ನು ಕಟ್ಟಿಕೊಡುತ್ತವೆ. ನಾವು ಆ ಇಮೇಜ್ ಗಳಲ್ಲೇ ಇಡೀ ಕಾದಂಬರಿಯನ್ನು ಓದಿಕೊಂಡು ಹೋಗುತ್ತೇವೆ. ನಮಗೆ ಅದರಲ್ಲಿನ ಪಾತ್ರಗಳು ಬರೇಯ ಪಾತ್ರಗಳಾಗೇ ಉಳಿಯುವುದಿಲ್ಲ. ನಮ್ಮ ನಿಮ್ಮ ನಡುವೆ ಇರುವ ಹಾಗೇ ತೋರುತ್ತದೆ. ಕೆಲವೊಮ್ಮೆ ನಾವೇ ಆ ಪಾತ್ರಗಳಾದಂತೆ ಭಾಸವಾಗಿಬಿಡುತ್ತದೆ!. ಭೈರಪ್ಪನವರು ಅವರ ಕಾದಂಬರಿಗಳಲ್ಲಿ ತಾವೇ ಪಾತ್ರವಾಗಿ ಬರೆಯುತ್ತಾ ಹೋಗುತ್ತಾರೆ. ಹಾಗಾಗಿಯೇ ಅವರಿಗೆ ‘ಮಂಗಳೆ’ ‘ಇಳಾ’ ಯೂ ಸರಿ, ‘ಜಯಕುಮಾರ’ ‘ವಿನಯ’ ನೂ ಸರಿ ಎನಿಸುತ್ತದೆ. ಭೈರಪ್ಪನವರ ಕಾದಂಬರಿಗಳಲ್ಲಿ ಹೆಚ್ಚಾಗಿ ಯಾವಾಗಲೂ ಶೋಷಣೆಗೊಳಗಾದ / ಆಗುವ ‘ಅಬಲೆ’ ಹೆಣ್ಣು, ಶಕ್ತಿಯ ಪ್ರತೀಕದಂತೆ, ‘ಸಬಲೆ’ಯಂತೆ ಬಿಂಬಿತವಾಗುತ್ತಾಳೆ. ಹಾಗಾಗಿಯೇ ಇವರು ಸ್ತ್ರೀ ಪರ ‘ವಾದಿ’ ಎನಿಸುತ್ತಾರೆ. ಆದರೆ ‘ಕವಲು’ ನಲ್ಲಿ ಕಥೆ ಶುರುವಾಗುವುದು ‘ಸಬಲೆ’ ಹೆಣ್ಣಿನಿಂದ! ಇಲ್ಲಿ ಸಬಲೆ ಹೆಣ್ಣು (ಮಂಗಳಾ / ಇಳಾ) ಎಷ್ಟೇ ಕಾನೂನು / ಕಟ್ಟಳೆಗಳನ್ನು ತಮ್ಮ ಉಪಯೋಗಕ್ಕೆ ಬಳಸಿಕೊಂಡರೂ ಕೊನೆಗೆ ಶೋಷಿತರಾಗುವುದು, ‘ಅಬಲೆ’ಯರಾಗುವುದು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ! ಈ ಕಾದಂಬರಿಯಲ್ಲೂ ಕೂಡ ನನಗೆ ಭೈರಪ್ಪನವರು ‘ಸ್ತ್ರೀ ಪರ’ ಎಂದೇ ತೋರುತ್ತದೆ. ಭೈರಪ್ಪನವರು ಕೂಡ ಒಬ್ಬ ಫೆಮಿನಿಸ್ಟ್ ಎಂದೇ ಹೇಳಬಹುದು. 

ತಮ್ಮನ್ನು ತಾವೇ ಮಹಿಳಾವಾದಿಗಳೆಂದು ಕರೆದುಕೊಳ್ಳುವವರಿಗೆ ನನ್ನ ಪ್ರಶ್ನೆ "ಫೆಮಿನಿಸ್ಮ್’ ಎಂದರೇನು? ಪ್ರಸ್ತುತ ಸಮಾಜದಲ್ಲಿ ಸ್ತ್ರೀವಾದ ಎಂಬುದನ್ನು ಹೆಚ್ಚಿನ ಸ್ತ್ರೀವಾದಿಗಳು ತಪ್ಪಾಗಿ ಅರ್ಥೈಸಿಕೊಳ್ತಿದ್ದಾರೇನೋ ಎಂದೆನಿಸುತ್ತದೆ. ಇಲ್ಲಿ ಮಂಗಳೆಯ ‘ಬರಿ ಹಣೆ’, ಬರಿ ಕಿವಿ, ಬಳೆ ಇಲ್ಲ, ಸಲ್ವಾರ್ ಕಮೀಜ್, ವೈಧ್ಯವ್ಯ ಅಥವಾ ಸೂತಕದ ಕಳೆ ಹಾಗೂ ವೈಜಯಂತಿಯ ಕುಂಕುಮ, ಮಲ್ಲಿಗೆಹೂವು ಇವೆಲ್ಲವೂ ಈ ಕಾದಂಬರಿಯಲ್ಲಿ ಇದ್ದರೂ ಅದನ್ನು ಡಿಬೇಟ್ ಮಾಡಿ ಎಲ್ಲಾ ಸ್ತ್ರೀ ವಾದಿಗಳು ತಮಗೆ ಅದು ಅನ್ವಯಿಸಿದ್ದೆಂದು ಬೈಯುವುದು ಅನಾವಶ್ಯಕ! ಇದು ಒಂದು ಹೆಣ್ಣನ್ನು ಹೀಗೆ ಇರಬೇಕು, ಎಂದು ಜಯಕುಮಾರ್ ನೋಡುವ ಚಿತ್ರಣ ಅಷ್ಟೆ. ಈ ವಿಷಯಕ್ಕೆ ಹೆಚ್ಚಿನ ಗಮನ ಕೊಡುವ ಅವಶ್ಯಕತೆಯೇ ಇಲ್ಲ. ಮಂಗಳೆ, ಇಳಾ ಇವರೆಲ್ಲರೂ ಸ್ವಘೋಷಿತ ಮಹಾನ್ ಸ್ತ್ರೀವಾದಿಗಳು. ಎಲ್ಲಾ ಸ್ತ್ರೀ ಪರ ಕಾನೂನುಗಳನ್ನು ಅರೆದು ಕುಡಿದಿದ್ದೇವೆ, ಇದರ ಮೂಲಕ ಗಂಡಸರನ್ನು ಆಟ ಆಡಿಸಿ ಗೆಲ್ಲುತ್ತೇವೆ ಎನ್ನುವಂತಹವರು. ಇವರಿಗೆಲ್ಲಾ ತಾವು ಫೆಮಿನಿಸ್ಟ್ಸ್ ಎಂದು ಕರೆದುಕೊಳ್ಳುವ ಹಂಬಲವಷ್ಟೆ. ಸಮಾಜದಲ್ಲಿ ಸ್ತ್ರೀವಾದಿಗಳೆಂದು ಕರೆದುಕೊಂಡರೆ ಸಿಗುವ ಪ್ರತಿಷ್ಠೆ / ಕೀರ್ತಿಗಾಗಿ ಅದರ ಮುಖವಾಡ ಹಾಕಿಕೊಂಡಿರುವವರು. ಆದರೆ ಆಂತರ್ಯದಲ್ಲಿ ಎಲ್ಲಿಯೂ ಫೆಮಿನಿಸ್ಮ್ ಅನ್ನುವುದು ಇವರಲ್ಲಿ ಕಾಣುವುದೇ ಇಲ್ಲ. ತಮ್ಮ ಸ್ವಾರ್ಥಕ್ಕಾಗಿ ಈ ಕಾನೂನುಗಳನ್ನು ಬಳಸಿಕೊಳ್ಳುವಂತಹವರು. ಇವರನ್ನು ನಿಜವಾಗಿಯೂ ಮೋಸ ಮಾಡುವುದು ಯಾರು? ಅದೇ ಮುಖವಾಡ ಹಾಕಿಕೊಂಡಂತಹ ಹಾಗೂ ಅದೇ ಸ್ತ್ರೀ ಪರ ಕಾನೂನುಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಂತಹ, ಈ ಮೂಲಕ ಸ್ತ್ರೀಯರನ್ನು ಶೋಷಣೆ ಮಾಡುವ ‘ಸ್ತ್ರೀವಾದಿ’ಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಲಂಚ ತೆಗೆದುಕೊಳ್ಳುವ ಪೋಲೀಸ್ ಅಧಿಕಾರಿಣಿ, ಫೀಸ್ ತೆಗೆದುಕೊಳ್ಳುವ ಸ್ನೇಹಿತೆ ಲಾಯರ್ , ಕೆಲಸ ಮಾಡಿಸಿಕೊಂಡು ರೇಪ್ ಮಾಡುವ ಮತ್ತೊಬ್ಬ ಸ್ತ್ರೀವಾದಿ ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ಈ ಸ್ವಘೋಷಿತ ಸ್ತ್ರೀವಾದಿಗಳು (ಇಳಾ, ಮಂಗಳೆ), ಇಷ್ಟೆಲ್ಲಾ ಸ್ತ್ರೀ ಪರ ಕಾನೂನುಗಳು ಇದ್ದರೂ ಗೆಲ್ಲಲಾಯಿತೇ? ಕೊನೆಗೂ ಇವರನ್ನು ಗಂಡಸರು ತಮ್ಮ ಹಣ / ಜಾಣತನದಿಂದ ಇದೇ ಕಾನೂನಿನ ಹುಳುಕುಗಳನ್ನು ಹಿಡಿದು ಶೋಷಣೆ ಮಾಡುತ್ತಾರೆ (೨ನೇ ಮದುವೆಯಾಗುವುದು ಸಲ್ಲ, ಹಾಗೇ ಹೀಗೇ). ಇದು ಮೇಲ್ನೋಟಕ್ಕ ಗೊತ್ತಾಗುವುದೇ ಇಲ್ಲ. ನಮ್ಮ ದೇಶದಲ್ಲಿ ಭ್ರಷ್ಟಚಾರ ಇರುವ ತನಕ ಯಾವುದೇ ಕಾನೂನು ಕಟ್ಟಳೆ ಮಾಡಿದರೂ ಯಾರೂ ಬೇಕಾದರೂ ತಪ್ಪಿಸಿಕೊಂಡುಬಿಡಬಹುದೆಂದು ಸೂಚ್ಯವಾಗಿ ಭೈರಪ್ಪನವರು ಹೇಳುತ್ತಾರೆ. 

‘ಕವಲು’ ನಲ್ಲಿ ನನಗೆ ನಿಜವಾದ ಫೆಮಿನಿಸ್ಟ್ ಅನ್ನಿಸಿದ್ದು ‘ವೈಜಯಂತಿ’. ಕುಂಕುಮ, ಮಲ್ಲಿಗೆ ಹೂವು ಮುಡಿದಾಕ್ಷಣ ಆಕೆ ಫೆಮಿನಿಸ್ಟ್ ಅಲ್ಲಾ ಎನ್ನುವುದು ನನಗೆ ಹಾಸ್ಯಾಸ್ಪದವಾಗಿ ತೋರುತ್ತದೆ. ತನ್ನ ಹುಳುಕುಗಳನ್ನು ಎಲ್ಲಿಯೂ ಗಂಡನಿಗೆ ಬಿಟ್ಟುಕೊಡದ ಈಕೆ ಮನೆಯಲ್ಲಿ, ಫ್ಯಾಕ್ಟರಿಯಲ್ಲಿ, ಮಗಳನ್ನು ಬೆಳೆಸುವಲ್ಲಿ ಎಲ್ಲೆಲ್ಲಿಯೂ ಕಾಣಿಸಿಬಿಡುತ್ತಾಳೆ. ಗಂಡನಿಗೆ ಇದು ತಿಳಿಯುವುದೇ ಇಲ್ಲ. ಜಯಕುಮಾರ್ ನನ್ನು ಮಂಗಳೆ ಗಿಂತ ಹೆಚ್ಚಾಗಿ ಶೋಷಣೆ ಮಾಡುವುದು ನನ್ನ ಪ್ರಕಾರ ವೈಜಯಂತಿ. ಈಕೆಯ ಮುಂದೆ ಅವನು ಡಮ್ಮಿಯಾಗಿಬಿಡ್ತಾನೆ. ಅವನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ. ಹಾಗಾಗಿಯೇ ಆಕೆ ಸತ್ತ ನಂತರ, ಆತನ ಫ್ಯಾಕ್ಟರಿ ಮುಚ್ಚಿ ಹೋಗಿಬಿಡುತ್ತದೆ. ಇದೇ ವೈಜಯಂತಿ ಬದುಕಿದ್ದರೆ ಫ್ಯಾಕ್ಟರಿ ಚೆನ್ನಾಗಿ ಇರುತ್ತಿತ್ತು, ಮಗಳನ್ನು ಚೆನ್ನಾಗಿ ಓದಿಸುತ್ತಿದ್ದಳು, ಜಯಕುಮಾರ್ ಇಷ್ಟು ಹಾಳಾಗುತ್ತಿರಲಿಲ್ಲ ಎಂಬಂತಹ ಶಾಶ್ವತ ಫೀಲಿಂಗ್ ಅನ್ನು ಹುಟ್ಟಿಸಿಬಿಡುತ್ತಾಳೆ. ಈ ಮೂಲಕ ನಿಜವಾದ ಫೆಮಿನಿಸ್ಮ್ ಅನ್ನು ಎತ್ತಿ ಹಿಡಿಯುತ್ತಾಳೆ. ಜಯಕುಮಾರ್ ನ ಜೀವನದ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ನೆನಪಾಗಿ ಕಾಡುತ್ತಾಳೆ. ಆತ ಎರಡನೇ ಮದುವೆಯಾದರೂ, ಇವಳ ನೆನಪಿನಲ್ಲೇ ಕೊರಗುವಂತೆ ಮಾಡಿಬಿಡುತ್ತಾಳೆ.

ಊರು ಕೇರಿ - ಡಾ.ಸಿದ್ದಲಿಂಗಯ್ಯನವರ ಆತ್ಮಕಥನ



ಡಾ.ಸಿದ್ದಲಿಂಗಯ್ಯನವರ ಊರು ಕೇರಿ - ಆತ್ಮಕಥನ ಓದ್ತಿದ್ದೆ. ಬಹಳ ಚೆನ್ನಾಗಿದೆ. ಅದರಲ್ಲಿನ ಒಂದು ಪುಟ ನನ್ನ ಗಮನವನ್ನು ಬಹಳ ಸೆಳೆಯಿತು. ಅದು ಹೀಗಿದೆ

ಶ್ರೀರಾಮಪುರದಲ್ಲಿ ಕನ್ನಡಿಗರು ಮತ್ತು ತಮಿಳರು ಒಟ್ಟಿಗೆ ಜೀವನ ಮಾಡುತ್ತಾರೆ. ಪಂಡಿತ ಶಿವಮೂರ್ತಿ ಶಾಸ್ತ್ರಿಗಳು, ವಾಟಾಳ್ ನಾಗರಾಜರ ಭಾಷಣಗಳಿಂದ ಪ್ರೇರಿತರಾದ ಜನ ಹೋರಾಟಕ್ಕಿಳಿದರು. ಬೆಂಗಳೂರಿನಿಂದ ಮುಂಬೈ ಕಡೆಗೆ ಹೋಗುತ್ತಿದ್ದ ರೈಲನ್ನು ತಡೆಯುವ ಚಳುವಳಿಯನ್ನು ಹಮ್ಮಿಕೊಂಡರು. ಈ ರೈಲು ತಡೆ ಚಳುವಳಿಗೆ ಸಾವಿರಾರು ಜನ ಸೇರಿದರು. ಮಹಾಜನ್ ವರದಿ ಜಾರಿಯಾಗಲಿ ಎಂಬುದು ಜನರ ಪ್ರಧಾನ ಘೋಷಣೆ ಆಗಿತ್ತು. ಪ್ರಾಣವನ್ನಾದರೂ ಕೊಟ್ಟೇವು, ಬೆಳಗಾವಿಯನ್ನು ಕೊಡುವುದಿಲ್ಲ ಎಂದು ಜನ ಒಕ್ಕೊರಲಿನಿಂದ ಕೂಗುತ್ತಿದ್ದರು. ಆ ದಿನದ ಚಳುವಳಿಯ ಮುಖ್ಯ ನಾಯಕರು ಐದು ಜನ ರೈಲು ಹಳಿಗಳ ಮೇಲೆ ಅಡ್ಡಲಾಗಿ ಮಲಗಿಬಿಟ್ಟರು. ರೈಲು ಬರುವ ಸದ್ದು ಕೇಳಿಸಿತು. ರೈಲು ಹಳಿಗಳ ಎರಡೂ ಪಕ್ಕದಲ್ಲಿ ನೆರೆದಿದ್ದ ಜನರ ಹೃದಯ ಹೊಡೆದುಕೊಳ್ಳತೊಡಗಿತು. ಘೋಷಣೆ ಮುಗಿಲು ಮುಟ್ಟಿದವು. ರೈಲು ಬರುವುದು ಕಾಣತೊಡಗಿತು. ಜನರ ಆತಂಕ ಹೇಳತೀರದು. ಹಳಿಗಳ ಮೇಲೆ ಮಲಗಿದ್ದವರಲ್ಲಿ ಒಬ್ಬರು ದೂರದಲ್ಲಿ ರೈಲು ಕಾಣುತ್ತಿದ್ದಂತೆ ಪ್ರಾಣಭೀತಿಯಿಂದ ಮೆಲ್ಲಗೆ ಎದ್ದು ಪಕ್ಕಕ್ಕೆ ಬಂದು ಬೆವರು ಒರೆಸಿಕೊಳ್ಳತೊಡಗಿದರು. ಇನ್ನೇನು ರೈಲು ಬಂದೇಬಿಟ್ಟಿತ ಎನ್ನುವಷ್ಟರಲ್ಲಿ ಇನ್ನು ಮೂವರು ಎದ್ದು ಬಂದು ಜನರಲ್ಲಿ ಸೇರಿಕೊಂಡರು. ರೈಲು ಹಳಿಗಳ ಮೇಲೆ ಉಳಿದವರೊಬ್ಬರೇ. ಅವರು ಮಹಾಜನ್ ವರದಿ ಜಾರಿಯಾಗಲಿ ಎಂದು ಕೂಗುತ್ತಾ ಅವರೊಬ್ಬರೇ ಮಲಗಿದ್ದರು. ಕರುಣೆಯಿಲ್ಲದ ರೈಲು ಅವರ ಮೇಲೆ ಹರಿಯಿತು. ಜನ ಕಣ್ಣೀರು ಹಾಕಿದರು. ಆ ದಿನ ರೈಲು ತಡೆ ಹೋರಾಟದಲ್ಲಿ ಬಲಿಯಾದವರು ಗೋವಿಂದರಾಜು. ಅವರು ತಮಿಳರು. ರೈಲು ಹಳಿಗಳ ಮೇಲೆ ಮಲಗಿದ್ದು ರೈಲು ಬರುತ್ತಿದ್ದಂತೆ ಎದ್ದು ಓಡಿದ ನಾಲ್ಕು ಜನ ಅಚ್ಚ ಕನ್ನಡಿಗರು.