Wednesday, May 20, 2020

ಮೈಕೋ ಬಾಷ್

ಮೈಕೋ ಬಾಷ್ ನಲ್ಲಿ ೯೦ ರ ದಶಕದಲ್ಲಿ ಕಮರ್ಷಿಯಲ್ ಡಿಪ್ಲೋಮಾ ಕೋರ್ಸ್ ಮಾಡಿದವರನ್ನು ಒಂದು ವರ್ಷದ ಟ್ರೇನಿಂಗ್  ಎಂದು ಸೇರಿಸಿಕೊಳ್ಳುತ್ತಿದ್ದರು.‌ ಆ ಸಮಯದಲ್ಲಿ ಚೆನ್ನಾಗಿ ಕೆಲಸ ಮಾಡಿದವರಿಗೆ ಗ್ರೇಡಿಂಗ್ ಕೊಟ್ಟು, ಅವಕಾಶವಿದ್ದರೆ permanent ಕೆಲಸ ಕೂಡ ಕೊಡುತ್ತಿದ್ದರು. ಸರ್ಕಾರಿ ಸಂಬಳಕ್ಕಿಂತ ಎರಡು ಪಟ್ಟು ಜಾಸ್ತಿ ಸಂಬಳ, ತಿಂಡಿ, ಊಟದ ವ್ಯವಸ್ಥೆ, ಹೋಗಲು ಬರಲು ಬಸ್, ಇನ್ನೇನು ಬೇಕು? ಈ ಟ್ರೇನಿಂಗ್ ಗಾಗಿ ಸೇರುವವರಲ್ಲಿ ಹೆಚ್ಚಿನವರು ತುಂಬಾ ಬಡವರಿರುತ್ತಿದ್ದರು. ಡಿಪ್ಲೋಮಾ ಕೋರ್ಸ್ ಮಾಡಿ, ಟ್ರೇನಿಂಗ್ ಗೆ ಸೇರುವವರಿಗೆ ಹೆಚ್ಚಂದ್ರೆ ೧೮ ವರ್ಷವಷ್ಟೆ ಆಗಿರುತ್ತಿತ್ತು. ಇವರನ್ನೆಲ್ಲಾ ನೋಡಿಕೊಳ್ಳೋಕೆ ಟ್ರೇನಿಂಗ್ ಸೆಂಟರ್ ಇತ್ತು. ಅದರ ಹೆಸರೇ MVC (MICO Vocational Centre)

ಪ್ರತಿ ವರ್ಷ ಸುಮಾರು ೨೦ ಜನರು ಆಯ್ದ ಕಾಲೇಜುಗಳಿಂದ ಮೈಕೋದಲ್ಲಿ ಪರೀಕ್ಷೆ ಬರೆದು ಸೆಲೆಕ್ಟ್ ಆಗಿ ಈ ಟ್ರೇನಿಂಗ್ ಸೆಂಟರ್ ಗೆ ಸೇರುತ್ತಿದ್ದರು. ಇದರ ಪ್ರಯೋಜನ ಪಡೆದು, ಜೀವನದಲ್ಲಿ ಮುಂದೆ ಬಂದವರಲ್ಲಿ ನಾನು ಕೂಡ ಒಬ್ಬಳು. ನಮಗೆಲ್ಲಾ ಪ್ರತಿ ತಿಂಗಳಿಗೊಮ್ಮೆ ಬೇರೆ ಬೇರೆ ಕೆಲಸ ಕಲಿಯಲು , ಬೇರೆ ಬೇರೆ ಡಿಪಾರ್ಟ್ಮೆಂಟ್ ಗೆ shuffle ಮಾಡಿ ಹಾಕುತ್ತಿದ್ದರು. ಅಲ್ಲಿ ಚೆನ್ನಾಗಿ ಕೆಲಸ ಮಾಡಿ, ಆಯಾ Incharge ಗಳ ಬಳಿಯಿಂದ ಒಳ್ಳೆಯ ಗ್ರೇಡಿಂಗ್ ತೊಗೊಳ್ಳೋದು ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ! ಇವನ್ನೆಲ್ಲಾ ನೋಡಿಕೊಳ್ಳೋಕೆ ಅಂತಾ ನಮಗೆಲ್ಲಾ ಒಬ್ಬರು ಮೆಂಟರ್ ಕೂಡ ಇದ್ದರು. ನಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಅವರು ಅಲ್ಲಿಯ  Technical Libraryಯನ್ನು ಕೂಡ ನೋಡಿಕೊಳ್ಳುತ್ತಿದ್ದರು.

ನಾವು ಯಾವುದೇ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿರಲಿ, ಅಲ್ಲಿ ಯಾವುದೇ ಸಮಸ್ಯೆಯಾದರೂ ನಾವು ಅಪ್ರೋಚ್ ಮಾಡ್ತಾ ಇದ್ದದ್ದು ಸತ್ಯನಾರಾಯಣ ಸರ್ (ನಮ್ಮ ಮೆಂಟರ್) ಅವರನ್ನೇ. ಎಲ್ಲರೂ ಅವರನ್ನು ಸತ್ಯ ಸರ್ ಅಂತಾ ಕರೀತಿದ್ದರೂ, ನಾನು ಮಾತ್ರ ಸತ್ಯನಾರಾಯಣ ಸರ್ ಅಂತಾ ಪೂರ್ತಿ ಹೆಸರಿನಿಂದ ಕರೀತಿದ್ದೆ. ಯಾಕಂತಾ ಈಗಲೂ ಗೊತ್ತಿಲ್ಲ. ನನಗೆ ಅವರು ನನ್ನ ಮೆಂಟರ್ ಅನ್ನುವುದಕ್ಕಿಂತ ಅವರು ಟೆಕ್ನಿಕಲ್ ಲೈಬ್ರರಿ ನೋಡಿಕೊಳ್ಳುತ್ತಿದ್ದುದು ಅತ್ಯಂತ ಆಕರ್ಷಕ ವಿಷಯವಾಗಿತ್ತು. ಅಲ್ಲಿದ್ದ ಪುಸ್ತಕಗಳಂತೂ ನನ್ನನ್ನು ಯಾವಾಗಲೂ ಸೆಳೆಯುತ್ತಿತ್ತು.

ನನ್ನ ಓದುವ ಹುಚ್ಚು ತಿಳಿದ ನಂತರ, "ಯಾವಾಗ ಬೇಕಿದ್ದರೂ ಬಾ" ಅಂತಾ ಹೇಳಿದ್ದರು‌. ನನಗೆ ಕನ್ನಡ ಪುಸ್ತಕಗಳನ್ನು ಓದುವಷ್ಟು ಸಲೀಸಾಗಿ ಇಂಗ್ಲೀಷ್ ಓದೋಕಾಗಲ್ಲ (ಈಗಲೂ ಅಷ್ಟೆ) ಆದರೆ ಅಲ್ಲಿದ್ದದ್ದು ಬರೀ ಇಂಗ್ಲೀಷ್ ಪುಸ್ತಕಗಳೇ. ಇದು ಓದು, ಅದು ಓದು ಅಂತಾ ಅಲ್ಲಿದ್ದ ಅನೇಕ ಸೈಕಾಲಜಿ ಸ್ಟಡೀಸ್ ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ನನಗೆ Autobiography ಪುಸ್ತಕಗಳ ಹುಚ್ಚು ಹಿಡಿಸಿದವರಂತೂ ಅವರೇ. ನಾವಿಬ್ಬರೂ ಗಂಟೆಗಟ್ಟಲೆ ಎಷ್ಟೋ ಜನರ autobiography ಬಗ್ಗೆ ಚರ್ಚೆ ನಡೆಸಿದ್ದೇವೆ.‌ ಮನುಷ್ಯ ಸ್ವಭಾವದ ಬಗ್ಗೆ, ಈ ಮೈಂಡ್ ಗೇಮ್ ಬಗ್ಗೆ, ಯಾವ ಸಂದರ್ಭಗಳಲ್ಲಿ ಮನುಷ್ಯರು ಹೇಗೆ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಎಲ್ಲಾ ತುಂಬಾ ಹೊತ್ತು ಮಾತಾಡುತ್ತಿದ್ದೆವು.

ಒಂದು ದಿವಸ ಬೆಳಿಗ್ಗೆ ಅಲ್ಲಿ ಕುಳಿತಿದ್ದಾಗ,ಟ್ರೈನಿಯೊಬ್ಬಳು ಯಾವುದೋ ಕೆಲಸಕ್ಕೆ ಒಳಗೆ ಬಂದಳು. ಇವರು "ಹೇ, ಇವತ್ತು ತುಂಬಾ ಚಂದ ಕಾಣ್ತಿದ್ದೀಯಾ" ಅಂತಾ ಹೇಳಿದ್ರು. ಅವಳು ತುಂಬಾ ಖುಷಿಯಾಗಿ ವಾಪಾಸ್ಸು ಹೋದಳು. ನಾನು "ಅವಳು ಇವತ್ತು ಅಷ್ಟೇನೂ ಚೆನ್ನಾಗಿ ಕಾಣ್ತಿರಲಿಲ್ಲ, ಸುಮ್ನೆ ಹತ್ತಿಸಿದ್ದು ಯಾಕೆ?" ಅಂತಾ ಕೇಳಿದ್ದಕ್ಕೆ ಅವರು ಹೇಳಿದ ಮಾತುಗಳು ಇವತ್ತಿಗೂ ನೆನಪಿನಲ್ಲಿದೆ. "ನೋಡು ರೂಪ್ಸ್, ಅಲ್ಲಿ ಅವಳು ಚಂದ ಕಾಣಿಸ್ತಿದ್ದಳೋ, ಇಲ್ವೋ ಅದಲ್ಲ ಮುಖ್ಯ, ನನ್ನ ಒಂದು ಮಾತಿನಿಂದ ಇವತ್ತೆಲ್ಲಾ ಅವಳು ಖುಷಿಯಾಗಿರ್ತಾಳೆ, ಆ ಖುಷಿ ಅವಳ ಮುಖದಲ್ಲಿ ಪ್ರತಿಫಲಿಸುತ್ತದೆ, ಅದು ಕೆಲಸದಲ್ಲಿ ಕೂಡ ಕಾಣಿಸುತ್ತದೆ. ಅದು " ಚಂದ" ಅಲ್ವಾ? ಅದೇ ನೀನು ಯಾರಿಗಾದರೂ ಚೆನ್ನಾಗಿರುವವರಿಗೆ "ಯಾಕೆ ಹೀಗಿದ್ದೀರಿ? ಹುಷಾರಿಲ್ವಾ? ಅಂತಾ ಕೇಳಿ ನೋಡು. ಸಂಜೆ ಆಗುವ ಹೊತ್ತಿಗೆ ಆತನಿಗೆ ಜ್ವರ ನಿಜವಾಗಿಯೂ ಬಂದಿಲ್ಲ ಅಂದ್ರೆ ಆಮೇಲೆ ಮಾತಾಡು" ಅಂದಿದ್ರು. ಹೌದಲ್ವಾ? ಅನ್ನಿಸಿತ್ತು.

ಈ ತರಹದ ಎಷ್ಟೋ ಸಣ್ಣ ಸಣ್ಣ ಪಾಸಿಟಿವ್ ವಿಷಯಗಳನ್ನು ಅಂದ್ರೆ ಎಷ್ಟೇ ಕಷ್ಟವಿದ್ದರೂ ನಗ್ತಾ ನಗ್ತಾ ಇರೋದು, ಪಾಸಿಟಿವ್ ಆಗಿ ಯೋಚಿಸೋದು, ಹೀಗೆ.....  ನನ್ನ ಜೀವನದಲ್ಲಿ ಅಳವಡಿಸಿಕೊಂಡದ್ದು ನಾನು ಅವರಿಂದಾಗಿಯೇ.  ಮೊನ್ನೆ ನಾನು‌ ಫೇಸ್ಬುಕ್ ನಲ್ಲಿ ಡಿಪಿ ಬದಲಾಯಿಸಿದಾಗ, ಯಾರೋ ಫೇಸ್ಬುಕ್ ಫ್ರೆಂಡ್ ಒಬ್ಬರೂ ಹೇಳಿದ್ರು. "ನೀವು ಎಲ್ಲಾ ಫೋಟೋಗಳಲ್ಲಿ ನಗ್ತಾನೇ ಇರ್ತೀರಾ, ನಿಮ್ಮ ಜೊತೆಯಲ್ಲಿದ್ದೋರು ಸೀರಿಯಸ್ ಆಗಿದ್ರೂ ಕೂಡ" ಅಂತಾ. ನಗು ಮುಖ ಅಂದ್ರೆ ನಂಗಿಷ್ಟ. ಯಾರಿಗೆ ಆಗಲಿ ನಾನು ವಿಷ್ ಮಾಡೋದು ಕೂಡ "ಸದಾ ಖುಷಿಯಿಂದಿರಿ" ಅಂತಾನೇ ಎಂದು ಉತ್ತರಿಸಿದ್ದೆ. ಅದು ಕೂಡ ಸತ್ಯನಾರಾಯಣ ಸರ್ ಮತ್ತು ನನ್ನ ಕಾಲೇಜಿನ ರವೀಂದ್ರ ಸರ್  ಹೇಳಿಕೊಟ್ಟ ಪಾಠವೇ ಅದು.

ಮೈಕೋ ಬಿಟ್ಟೆ, ಜೀವನದ ಹಾದಿಯೇ ಬದಲಾಯಿತು, ನಾಲ್ಕೈದು ವರ್ಷಗಳ ಹಿಂದೆ ಸತ್ಯನಾರಾಯಣ ಸರ್ ನ ಯಾರದೋ ಮದುವೆಯಲ್ಲಿ ಭೇಟಿಯಾಗಿದ್ದೆ. ನಾನು ಮನೆ ಕಟ್ಟಿರುವ ಕಥೆ ಕೇಳಿ ಸಂತೋಷಪಟ್ಟಿದ್ದರು. ನಮ್ಮ ಮನೆಗೆ ನೀವು ಬರಲೇಬೇಕು ಅಂತಾ ಫೋರ್ಸ್ ಮಾಡಿದ್ದೆ. ಹು ಅಂದಿದ್ರು. ನನ್ನ ಈ ಅಭ್ಯುದಯಕ್ಕೆ ನೀವು ಕೂಡ ಬಹು ಮುಖ್ಯ ಪಾತ್ರ ವಹಿಸಿದ್ದೀರಿ ಅಂದಾಗ ಅವರ ಕಣ್ಣಲ್ಲಿ ಕಂಡ ಮಿಂಚು ನನಗಿನ್ನೂ ನೆನಪಿನಲ್ಲಿದೆ. ಆದರೆ ಅವರ ಫೋನ್ ನಂಬರ್ ಕಳೆದುಹೋಯಿತು. ಮತ್ತೆ ನಾನು ಭೇಟಿಯಾಗಲೂ ಇಲ್ಲಾ. ಇವತ್ತು ಅವರು ಹೃದಯಾಘಾತದಿಂದ ತೀರಿಕೊಂಡರಂತೆ! ಅವರಿದ್ದಾಗಲೇ ನಾನಿದನ್ನೆಲ್ಲಾ ಬರೀಬೇಕಿತ್ತು! :( ಯಾಕೋ ಗೊತ್ತಿಲ್ಲ, ಬರೆಯಲಿಲ್ಲ! ಇವತ್ತು ಈ ಕ್ಷಣ ಅವರಿಗೆ ಈ ಮೂಲಕ ಶ್ರದ್ಧಾಂಜಲಿ ಸಲ್ಲಿಸಬೇಕಂತ ಅನ್ನಿಸಿತು.

ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಅಂದರೆ ನಾನು ಹೋಗಿ ನೋಡೋಕಾಗಲ್ಲ ಅಂತಾ ಗೆಳೆಯನೊಬ್ಬ ವಿಡಿಯೋ ಕಾಲ್ ಮಾಡಿ, ಅವರ ಮುಖ ತೋರಿಸಿದ! ಅವರು ಬದುಕಿದ್ದಾಗ ಹೋಗಿ ಬರಬೇಕಿತ್ತು! ತುಂಬಾ ಮಾತಾಡಬೇಕಿತ್ತು ಅನ್ನೋ ಕೊರಗು ಶಾಶ್ವತವಾಗಿ ಉಳಿದುಬಿಡ್ತು! :(

Tuesday, May 5, 2020

ಥಪ್ಪಡ್ - ಸ್ತ್ರೀವಾದವೇ? ಸಂಬಂಧಗಳ ದ್ವಂದ್ವವೇ?



ಮೂವೀಗಳಲ್ಲಿ ಸ್ತ್ರೀವಾದ / Feminism ಅಂತಂದ್ರೆ ನನಗೆ ಯಾವಾಗಲೂ ತಕ್ಷಣಕ್ಕೆ ನೆನಪಾಗೋದು ಎರಡು ಚಿತ್ರಗಳು. ಮೀನಾಕ್ಷಿ ಶೇಷಾದ್ರಿ ನಟಿಸಿರುವ ದಾಮಿನಿ ಮತ್ತು ಸ್ಮಿತಾ ಪಾಟೀಲ್ ನಟಿಸಿರುವ ಭೂಮಿಕಾ. ಪುಸ್ತಕ ಅಂದ್ರೆ ನೆನಪಾಗೋದು ಭೈರಪ್ಪನವರ ಕಾದಂಬರಿ `ಕವಲು'. ಮುಗ್ಧ ಮನಸ್ಸಿನ ಹೆಣ್ಣುಮಗಳೊಬ್ಬಳು ತನ್ನ ಮನೆಯಲ್ಲಿಯೇ ತನ್ನ ಮೈದುನ ಮತ್ತು ಆತನ ಗೆಳೆಯರು ಕೆಲಸದವಳ ಮೇಲೆ ಮಾಡಿದ ಅತ್ಯಾಚಾರದ ವಿರುದ್ಧ ಹೋರಾಡುವ ಕಥೆ `ದಾಮಿನಿ', ಎಷ್ಟೆಲ್ಲಾ ಕಷ್ಟ ಅನುಭವಿಸಬೇಕಾಗಿ ಬಂದರೂ ಕೂಡ, ತಾನು ಸುಳ್ಳು ಹೇಳೋಲ್ಲ ಅಂತಾ ಗಟ್ಟಿಯಾಗಿ ನಿಲ್ತಾಳೆ ಅವಳು. ನನಗೆ `ದಾಮಿನಿ' ಯ ನಾಯಕಿ ನಿಜವಾದ ಫೆಮಿನಿಸ್ಟ್ ಅಂತನ್ನಿಸ್ತಾಳೆ.

ಮತ್ತೊಂದು ಚಿತ್ರ ಭೂಮಿಕಾ - ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗಲೆಲ್ಲಾ ಬೇರೊಂದು ಗಂಡನ್ನು ಮದುವೆಯಾಗುತ್ತಾ ಹೋಗುತ್ತಾಳೆ. ಈ ಚಿತ್ರದ ಕ್ಲೈಮಾಕ್ಸ್ ಡೈಲಾಗ್ ಮಾತ್ರ ಮನಸ್ಸಿಗೆ ಹಿಂಸೆ ಮಾಡಿಬಿಡುತ್ತೆ. . ಆಕೆ ಮನೆ ಬಿಟ್ಟು ಹೋಗುವಾಗ, ಆಕೆಯ ಗಂಡನ ಮೊದಲ ಹೆಂಡತಿ ಇವಳಿಗೆ ಬುದ್ಧಿ ಹೇಳ್ತಾಳೆ "ಮನೆ ಬಿಟ್ಟು ಹೋಗಬೇಡ, ಹಾಸಿಗೆಗಳು ಬದಲಾಗಬಹುದು, ಅಡುಗೆ ಮನೆಗಳು ಬದಲಾಗಬಹುದು, ಗಂಡಸರ ಮುಖವಾಡಗಳು ಬದಲಾಗಬಹುದು, ಆದರೆ ಗಂಡಲ್ಲ"! ಅಂತಾ. ಆದರೂ ಇವಳು ಮನೆ ಬಿಟ್ಟು ಹೊರ ಬರ್ತಾಳೆ. ಈ ಚಿತ್ರದ ಬಗ್ಗೆ ಇನ್ನೂ ಡಿಟೇಲಾಗಿ ಬರೀಬೇಕು.. ಇನ್ನೊಮ್ಮೆ ಬರೀತೀನಿ.

ಇನ್ನೂ ಭೈರಪ್ಪನವರ `ಕವಲು' ಕಾದಂಬರಿಯಲ್ಲಿ ರಚಿತವಾಗಿದ್ದ ಒಂದಷ್ಟು ಸ್ತ್ರೀ ವಾದಿಗಳ ಪಾತ್ರಗಳೊಂದಿಗೆ ತಮ್ಮನ್ನು ತಾವು ಹೋಲಿಸಿ ನೋಡಿ ಬಹಳಷ್ಟು ಕಾದಂಬರಿಗಾರ್ತಿಯರು, ಭಾಷಣಗಾರ್ತಿಯರು, ಭೈರಪ್ಪನವರ ವಿರುದ್ಧ ತಿರುಗಿಬಿದ್ದಿದ್ದರು. ತಮ್ಮನ್ನು ತಾವೇ ಸ್ತ್ರೀವಾದಿಗಳೆಂದು ಕರೆದುಕೊಳ್ಳುವ, ಈ ನನಗೆ ಅದರಲ್ಲಿಯ ಮುಖ್ಯ ಪಾತ್ರವಾಗಿದ್ದ ವೈಜಯಂತಿಯೇ ಫೆಮಿನಿಸ್ಟ್ ಅಂತನ್ನಿಸ್ತಾಳೆ ಹೊರತು ಉಳಿದೆಲ್ಲಾ ಪಾತ್ರಗಳು psedo feminists ರೀತಿ ಕಾಣುತ್ತದೆ. ಈ ಕಾದಂಬರಿ ಬಗ್ಗೆ ನಾನು ಈಗಾಗಲೇ ಬರೆದಿದ್ದೀನಿ.

ಥಪ್ಪಡ್ ಚಲನಚಿತ್ರ ನೋಡ್ತಾ, ನೋಡ್ತಾ ಇವೆಲ್ಲಾ ನೆನಪಾಗ್ತಾ ಹೋಯಿತು. ಒಂದೇ ಒಂದು ಥಪ್ಪಡ್ ತಾನೇ? ಅಡ್ಜಸ್ಟ್ ಮಾಡಿಕೊಂಡು ಹೋಗು, ಅಂತಾ ಎಲ್ಲಾ ಹೆಣ್ಣಿನ ಪಾತ್ರಗಳು ಒತ್ತಾಯಿಸುವುದು ನಾಯಕಿಯನ್ನು ಹೊರತು ಯಾರೂ ಕೂಡ ತಪ್ಪು ಮಾಡಿದ ಗಂಡನ್ನು ಎಚ್ಚರಿಸುವ ಕೆಲಸ ಮಾಡುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಪ್ರಗತಿಪರ ಕ್ರಾಂತಿಕಾರಿಯಾದ ನಾಯಕಿಯ ತಂದೆ ಕೂಡ ಮೌನವಾಗಿ ನಾಯಕಿಯ ಗಂಡನನ್ನೇ ಸಪೋರ್ಟ್ ಮಾಡ್ತಾನೆ. ತನ್ನದೇ ನಿರ್ಧಾರ ಮನೆಯಲ್ಲಿ ನಡೆಯಬೇಕು ಎಂದು ಹಠ ಮಾಡುವ ಅಪ್ಪನೊಬ್ಬ, ಆತನ ವಿರುದ್ಧ ಸಿಟ್ಟಿಗೆದ್ದು, ಮನೆಯಿಂದ ಹೊರನಡೆಯುವ ಮಗನೊಟ್ಟಿಗೆ, ತಾನು ಕೂಡ ಮಗನೊಟ್ಟಿಗೆ ಇರ್ತೇನೆ ಎಂದು ಹೊರನಡೆಯುವ ಅಮ್ಮ! ಕಡೆಗೆ ಅದೇ ಮಗ, ಥೇಟ್ ತನ್ನ ಗಂಡನಂತೆಯೇ ಆತನ ಹೆಂಡತಿಯೊಂದಿಗೆ ನಡೆದುಕೊಂಡಾಗ, ಅಮ್ಮ ಒದ್ದಾಡೋದು, ತಾನು ಮಗನನ್ನು ಸರಿಯಾಗಿ ಬೆಳೆಸಲಿಲ್ಲವೇನೋ? ಎಂಬ ಗಿಲ್ಟ್ ಅನುಭವಿಸೋದು, ಇಂತಹ `ಇಗೋ' ಗಳೆಲ್ಲವೂ ಬಹುಶಃ ಜೀನ್ ಗಳಲ್ಲಿರುತ್ತದೆಯೇನೋ? ಎಂಬ ಭಾವ ಮೂಡಿಸಿಬಿಡುತ್ತದೆ.

ಚಿತ್ರದ ಪ್ರತಿ ಪಾತ್ರಗಳು ದ್ವಂದತೆಯಿಂದ ತುಂಬಿ ತುಳುಕಾಡುತ್ತಿವೆ. ಒಂದೇ ಏಟು, ಆದರೆ ಆ ಏಟಿನಿಂದ ಎಷ್ಟೊಂದು ಜನರ ಮನಸ್ಥಿತಿಗಳ ಅನಾವರಣವಾಗಿಬಿಡುತ್ತದೆ. ಪ್ರತ್ಯಕ್ಷವಾಗಿ ತೋರಿಸುವ ಒಂದು ಏಟು, ಪ್ರತಿಯೊಂದು ಪಾತ್ರಗಳಿಗೂ ಪರೋಕ್ಷವಾಗಿ ಏಟು ಕೊಡುತ್ತಾ, ಅವರನ್ನು ಎಚ್ಚರಿಸುತ್ತಾ ಹೋಗುತ್ತದೆ. ಬಹಳಷ್ಟು ಅಪರಾಧಗಳು ನಡೆಯೋದು ಕ್ಷಣ ಮಾತ್ರದಲ್ಲಿಯೇ. ಹಾಗಂತಾ ಅದನ್ನು ಒಪ್ಪಿಕೊಂಡು ಬಿಡಲು ಸಾಧ್ಯವೇ?

ಸ್ತ್ರೀಯರ ಪರ ಕೋರ್ಟಿನಲ್ಲಿ ಹೋರಾಡಿ, ಕೇಸ್ ಗಳನ್ನು ಗೆದ್ದು, ಪ್ರಸಿದ್ಧಿ ಪಡೆದಿರುವ ಸ್ತ್ರೀ ವಾದಿ ವಕೀಲೆ ಸ್ವತಃ ತನ್ನ ಮನೆಯಲ್ಲಿ ಶೋಷಿತೆ! ಆದರೆ ಆಕೆ ತನ್ನ ಸಂಕಟವನ್ನು, ತನ್ನ ಒಂಟಿತನವನ್ನು ಮರೆಮಾಚಲು ಉಪಯೋಗಿಸುವುದು ಮತ್ತೊಬ್ಬ ಅಮಾಯಕ ಹುಡುಗನನ್ನು! ಕಡೆಗೆ ಆ ಹುಡುಗನಿಗೆ ಏನನ್ನಿಸಬಹುದು ಎಂದೂ ಕೂಡ ಯೋಚಿಸದೇ, ಅವನನ್ನು ಒಂಟಿಯಾಗಿ ಬಿಟ್ಟು ಹೊರಟುಬಿಡುವುದಿದೆಯಲ್ವಾ? ಅದು ತುಂಬಾ ಹಿಂಸೆ ಮಾಡಿಬಿಡುತ್ತದೆ. ತನ್ನ ಜೀವನದಲ್ಲಿ ಮುಂದಕ್ಕೆ ಒಳ್ಳೆಯ ಗಂಡು ಸಿಗದಿದ್ದರೆ ಎಂದು ಒಂಟಿಯಾಗಿರಲು ನಿರ್ಧರಿಸುವ ವಿಧವೆಯ ಮನಸ್ಥಿತಿ ಅಷ್ಟೊಂದು ಕಾಡದಿದ್ದರೂ, ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿರುವ ತನ್ನ ಮಗಳಿಗೆ ಆ ಗಂಡು ಒಳ್ಳೆಯವನು ಎಂದು ನಿರ್ಧರಿಸುವ ಆಕೆಯ ಮನಸ್ಥಿತಿ ಆಶ್ಚರ್ಯವೆನಿಸುತ್ತದೆ!

ತನ್ನ ಹೆಂಡತಿಗೆ ತಾನು ಯಾವತ್ತೂ ಬೇರೆ ಗಂಡಸರಂತೆ ಹೊಡೆದು, ಬಡಿದು ಮಾಡಿಲ್ಲ, ಆಕೆಗೆ ಸ್ವಾತಂತ್ರ್ಯ ಕೊಟ್ಟಿದ್ದೇನೆ ಎಂದು ಬೀಗುವ ಪ್ರಗತಿಪರ ಕ್ರಾಂತಿಕಾರಿ ಗಂಡನೊಬ್ಬ! ಆದರೆ ನೀನು ಹೊಡೆದು ಬಡಿದು ಮಾಡಿಲ್ಲದಿರಬಹುದು, ಆದರೆ ಅದನ್ನೇ ನೀನು ನನಗೆ ನೀಡಿರುವ ಸ್ವಾತಂತ್ರ್ಯ ಎಂದುಕೊಳ್ಳಬೇಡ, ನಾನು ಈ ಸಂಸಾರ ನಡೆಯಲು ಬಹಳಷ್ಟು ಕಾಂಪ್ರೊಮೈಸ್ ಮಾಡಿಕೊಂಡಿದ್ದೇನೆ ಎಂದು ತಣ್ಣಗೆ ಕಪಾಳ ಮೋಕ್ಷ ಮಾಡುವ ಆತನ ಹೆಂಡತಿ! ಅವನು ತನ್ನ ಹೆಂಡತಿಯ ಅಂತರಾಳ ತಿಳಿದು, ಕಳೆದು ಹೋದ ಕಾಲದಲ್ಲಿ ಆಕೆಗಿದ್ದ ಆಸೆಯನ್ನು ಈ ಕಾಲದಲ್ಲಿ ಪೂರೈಸಲು ಪ್ರಯತ್ನ ಪಟ್ಟರೆ, ಆತನ ಹೆಂಡತಿಗೆ ಅದರಿಂದ ಖುಷಿಯಾಗಬಹುದೇ? ಕಾಲ ಮಿಂಚಿಹೋದ ಮೇಲೆ, ಬದಲಾದರೇನು ಪ್ರಯೋಜನ? ಎಂದೆನ್ನಿಸುವುದಿಲ್ಲವೇ?

ಇನ್ನೂ ನಾಯಕಿಯ ಪಾತ್ರ ಅತ್ಯಂತ ಕ್ಲಾರಿಟಿಯುಳ್ಳದ್ದು. ಆಕೆಯನ್ನು ಯಾರೂ ಬಲವಂತ ಮಾಡಿರದಿದ್ದರೂ, ತಾನಾಗಿಯೇ ಹೌಸ್ ವೈಫ್ ಆಗಿರಲು ಒಪ್ಪಿಕೊಂಡಿರುವುದು, ಕಡೆಗೆ ಎಲ್ಲರೂ ಬಲವಂತ ಮಾಡಿದರೂ, ಹೌಸ್ ವೈಫ್ ಆಗಿರಲು ಒಪ್ಪಿಕೊಳದಿರುವುದು! ಸಿಂಪಲ್. ಒಂದೇ ಏಟಾಗಿರಬಹುದು, ಆದರೆ ಅವನು ಹೊಡೆಯಬಾರದು. ನಾನು ಕಾಂಪ್ರೊಮೈಸ್ ಮಾಡಿಕೊಳ್ಳೋಲ್ಲ, ಯಾಕೆ ಮಾಡಿಕೊಳ್ಳಬೇಕು? ಅವನು ತನ್ನ ಕೆಲಸವನ್ನು ಪ್ರೀತಿಸುತ್ತಿದ್ದ, ನಾನು ನನ್ನ ಕೆಲಸವನ್ನು. ನನ್ನ ಕೆಲಸ್ಸಕ್ಕೆ ಗೌರವ ಸಿಗದಿದ್ದ ಮೇಲೆ, ಖುಷಿಯಾಗಿರುವಂತೆ ನಟಿಸುತ್ತಾ ನನ್ನ ಕೈಲಿ ಅಲ್ಲಿರೋಕೆ ಸಾಧ್ಯವಿಲ್ಲ ಅಂತಾ ಆಕೆ ಬಿಡಿಸಿ ಹೇಳುವಾಗ, ಹೌದಲ್ವಾ? ಅಂತಾನೇ ಅನ್ನಿಸೋದು. ಹೊರಗಿನವರೊಂದಿಗೆ ಅರೆ ಕ್ಷಣ ಭೇಟಿ ಮಾಡುವಾಗ ನಟಿಸಿ ವಾಪಾಸ್ಸ್ಸು ಬಂದುಬಿಡಬಹುದು, ಆದರೆ ಮನೆಯಲ್ಲಿ ಸದಾಕಾಲ ಇರುವಾಗ ನಟಿಸಲು ಸಾಧ್ಯವೇ? ಯಾವ ಸಂಬಂಧವನ್ನೂ ನಟನೆ ಮಾಡುತ್ತಾ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸದಾಕಾಲ ನಟಿಸುತ್ತಾ ಒಟ್ಟಿಗಿದ್ದು, ಒಳಗೊಳಗೆ ಹಿಂಸೆ ಪಡುವುದಕ್ಕಿಂತ, ದೂರವಿದ್ದು ವಿಶ್ವಾಸವನ್ನು ಉಳಿಸಿಕೊಳ್ಳುವುದೇ ಒಳ್ಳೆಯದು ಎಂದನಿಸುತ್ತದೆ. ಇಲ್ಲಿ ನಾಯಕಿಗೆ ದುಃಖವಾಗಬಹುದು, ಆದರೆ ಗಿಲ್ಟ್ ಕಾಡೋಲ್ಲ, ಉಳಿದಂತೆ ಎಲ್ಲಾ ಪಾತ್ರಗಳು ಈ ಘಟನೆಯಿಂದ ಬದಲಾದರೂ, ಬದಲಾದಂತೆ ತೋರಿದರೂ, ಗಿಲ್ಟ್ ಮಾತ್ರ ಅವರನ್ನು ಬಿಡೋಲ್ಲ.

ಈ ಚಿತ್ರದಲ್ಲಿ ಚಂದದ ಜೋಡಿಯೆಂದರೆ ನಾಯಕಿಯ ತಮ್ಮ ಮತ್ತು ಆತನ ಗೆಳತಿಯದ್ದು. ಆತನ ಗೆಳತಿ ಹೇಳುವ ಮಾತು "Let’s grow together” ಸಂಬಂಧಕ್ಕೆ ಬೇಕಾದದ್ದು ಏನು? ಎಂಬುದನ್ನು ಚಂದವಾಗಿ, ಚೊಕ್ಕವಾಗಿ ಹೇಳಿಬಿಡುತ್ತದೆ. ಗಂಡು, ಹೆಣ್ಣಿನ ಸಂಬಂಧಗಳು ಯಾವಾಗಲೂ ಒಟ್ಟಿಗೆ ಒಂದಷ್ಟು ಕಳೆದುಕೊಳ್ಳುತ್ತಾ, ಒಂದಷ್ಟು ಪಡೆಯುತ್ತಾ, ಒಟ್ಟಿಗೆ ಬೆಳೆಯಬೇಕು. ಆಗಲೇ ಆ ಸಂಬಂಧಕ್ಕೊಂದು ಅರ್ಥ, ಆ ಬಾಂಧವ್ಯಕ್ಕೊಂದು ಬೆಲೆ. ಅಂತಹ ಸಂಸಾರ ಖುಷಿಯಾಗಿರುತ್ತದೆ ಅನ್ನೋದನ್ನು ತೋರಿಸಿಕೊಡುತ್ತದೆ.