Sunday, February 24, 2013

ಪ್ರೇಮವೇ ದೈವ, ಪ್ರೇಮವೇ ಜೀವ ಎನ್ನುವ ಗೊಂಬೆಗಳ ಲವ್


ಸಿನೆಮಾ ಆಗಬಹುದು, ಸಾಹಿತ್ಯ ಆಗಬಹುದು, ನಾಟಕ ಆಗಬಹುದು ಈ ಯಾವುದೇ ಕಲಾ ಮಾಧ್ಯಮಗಳೂ ಕೂಡ ವೀಕ್ಷಕರಿಗೆ ಒಂದೊಂದು ರೀತಿಯಲ್ಲಿ ಕಥೆ ಹೇಳುತ್ತಾ ಹೋಗುತ್ತವೆ. ಕಥಾವಸ್ತುವಿನಲ್ಲಿ ಹೊಸತನವಿಲ್ಲದಿದ್ದರೂ, ನಮಗೆ ಇಷ್ಟವಾಗುವುದು ಅದರ ನಿರೂಪಣೆಯಲ್ಲಿ.  ಮಹಾಭಾರತ ಕಥೆಯನ್ನು ಚಿಕ್ಕಂದಿನಿಂದ ಕೇಳಿದ್ದರೂ ಕೂಡ, ಭೈರಪ್ಪನವರ ‘ಪರ್ವ’ ಓದಿದಾಗ ನಮಗೆ ಇಡೀ ಕಥಾವಸ್ತುವೇ ಹೊಸದಂತೆ ಕಾಣುವುದು ಸುಳ್ಳಲ್ಲ. ಪ್ರತಿಯೊಬ್ಬ ಕಲಾವಿದ ಕೂಡ ತನಗೆ ಒಗ್ಗುವ ಕಲಾಪ್ರಕಾರದಲ್ಲಿ ವೀಕ್ಷಕರಿಗೆ ತನ್ನ ಕಲ್ಪನೆಯನ್ನು, ತನ್ನ ಅನುಭವಗಳನ್ನು ಉಣಬಡಿಸಲು ಪ್ರಯತ್ನಿಸುತ್ತಾನೆ. ಅದರ ರುಚಿ ಪ್ರತಿಯೊಬ್ಬರಿಗೂ ಇಷ್ಟವಾದರೆ ಆತ ಗೆದ್ದಂತೆ! ಆದರೆ ಹಾಗಾಗಲು ಬಹಳ ಕಷ್ಟ,  ಒಬ್ಬರಿಗೆ ಸಕ್ಕರೆ ಕಡಿಮೆಯಾದಂತೆ, ಮತ್ತೊಬ್ಬರಿಗೆ ಉಪ್ಪು ಹೆಚ್ಚಾದಂತೆ.... ಹೀಗೆ...  ಲೋಕೋಭಿನ್ನರುಚಿಃ :-)  
   
ಎಲ್ಲಾ ಪಶು, ಪಕ್ಷಿ, ಪ್ರಾಣಿಗಳಲ್ಲಿಯೂ ಅಮ್ಮನಿಗೊಂದು ವಿಶಿಷ್ಠ ಸ್ಥಾನವಿದೆ.  ನಮ್ಮನ್ನು ಹೆತ್ತು, ಪೊರೆಯುವ ಆಕೆ, ತನಗೆ ಎಷ್ಟೇ ಕಷ್ಟವಿದ್ದರೂ, ತನ್ನ ಮಕ್ಕಳ ಕಣ್ಣಲ್ಲಿ ಖುಷಿಯನ್ನು ಕಾಣಬಯಸುವವಳು, ಆ ಖುಷಿಯನ್ನು ಕಂಡೂ ತನ್ನೆಲ್ಲಾ ದುಃಖ ದುಮ್ಮಾನಗಳನ್ನು ಮರೆಯುವವಳು ‘ಅಮ್ಮ’. ಹಾಗೆಂದೇ ‘ಕೆಟ್ಟ ಮಗನಿರಬಹುದು, ಕೆಟ್ಟ ತಾಯಿಯೆಂದಿಗೂ ಇರಲು ಸಾಧ್ಯವಿಲ್ಲ’ ಎಂಬ ಮಾತುಗಳಿಂದ ಹಿಡಿದು ತಾಯಿಗಿಂತ ಬೇರೆ ದೇವರಿಲ್ಲ, ಬೇರೆ ಬಂಧುವಿಲ್ಲ ಎಂಬ ಮಾತುಗಳೂ ತಾಯಿಯ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ.  ನಮ್ಮ ಸಿನೆಮಾಗಳಲ್ಲಿಯೂ ಕೂಡ ಗಂಡು, ಹೆಣ್ಣಿನ ಪ್ರೇಮ ತೋರಿಸುವಂತೆಯೇ, ತಾಯಿಯ ವಾತ್ಸಲ್ಯದ ಕುರಿತಾಗಿ ಬೇಕಾದಷ್ಟು ಸಿನೆಮಾಗಳು ಬಂದಿವೆ.  ಅಮ್ಮ ನೀನೇನೇ ಅಂದರೂ ನೀ ನನ್ನ ದೇವರು ಎಂಬ ‘ಅಣ್ಣಯ್ಯ’ ಚಿತ್ರದಿಂದ ಹಿಡಿದು, ಮೈ ಮದರ್ ಇಂಡಿಯಾ ಎಂಬ ಕಲಿಯುಗ ಭೀಮ ಚಿತ್ರದವರೆಗೂ, ಅಮ್ಮ ಎಂದರೆ ಏನೋ ಹರುಷವೂ, ಅಮ್ಮ ನೀನು ನಕ್ಕರೆ ಎಂಬ ಹಾಡುಗಳಿಂದ ಹಿಡಿದು,  ಸಾವೇ ಬಂದರೂ, ಮಣ್ಣೇ ಆದರೂ ತಾಯಿ ಪ್ರೀತಿಗೆಂದೂ ಕೊನೆ ಇಲ್ಲ, ತಾಯೀನೇ ಎಲ್ಲಾ ಎಂಬ ಜೋಗಿ ಚಿತ್ರದ ಹಾಡಿನ ತನಕ ತಾಯಿಯ ಮಹಿಮೆಯನ್ನು ಸಾರುವ ಅನೇಕಾನೇಕ ಚಿತ್ರಗಳು ಬಂದಿವೆ.  ಬಾಕ್ಸ್ ಆಫೀಸಿನಲ್ಲಿ ಗೆದ್ದಿವೆ. ಈ ನಿಟ್ಟಿನಲ್ಲಿ ಕಥಾವಸ್ತು ಹಳತಾದರೂ ಕೂಡ, ಈ ‘ಅಮ್ಮ’ ಎಂಬ ಎಮೋಷನ್ ಬಳಸಿಯೇ ಹೊಸತನದಲ್ಲಿ ನಿರೂಪಿತವಾಗಿರುವ ಚಿತ್ರ ‘ಗೊಂಬೆಗಳ ಲವ್’. 

ಸಾಹಿತ್ಯದಲ್ಲಿಯಾದರೆ ನಾವು ನಮ್ಮ ಕಲ್ಪನೆಗಳನ್ನು ಪುಂಖಾನುಪುಂಖವಾಗಿ ಪುಟಗಟ್ಟಲೆ ಹರಿಯಬಿಡಬಹುದು. ಓದುಗರಿಗೆ ಕೂಡ ತಮಗೆ ಸಮಯವಿದ್ದಾಗ, ತಮ್ಮ ಕಲ್ಪನೆಯಲ್ಲಿ ದೃಶ್ಯಗಳನ್ನು ಮೂಡಿಸಿಕೊಂಡು ಓದಬಹುದು. ನಾಟಕಗಳಲ್ಲಿ ಪಾತ್ರಗಳು ವೀಕ್ಷಕರ ಕಣ್ಣಮುಂದಿರುತ್ತವೆ. ಪಾತ್ರಗಳ ಮಾತುಗಳಲ್ಲಿಯೇ ಇಡೀ ಸನ್ನಿವೇಶವನ್ನು ತೋರಿಸಬೇಕಾಗುತ್ತದೆ. ಮಾತುಗಳಲ್ಲಿಯೇ ಅರಮನೆ ಕಟ್ಟುವುದು ನಾಟಕಗಳಿಗೆ ಅವಶ್ಯ. ಆದರೆ ಸಿನೆಮಾಗಳಿಗೆ ನಾಟಕಗಳಂತೆ ಇತಿಮಿತಿಯಿಲ್ಲ, ಸಾಹಿತ್ಯಗಳಂತೆ ಸಮಯವಿಲ್ಲ.  ಸಿನೆಮಾಗಳು ದೃಶ್ಯಗಳನ್ನು ಚಿತ್ರಿಸುವುದರ ಮೂಲಕ ಕಥೆಯನ್ನು ಹೇಳಬೇಕು. ಇದು ಪ್ಲಸ್ ಪಾಯಿಂಟ್ ಹಾಗೂ ನೆಗೆಟಿವ್ ಪಾಯಿಂಟ್ ಕೂಡ. ಸಿನೆಮಾಗಳಲ್ಲಿ ‘ಸ್ವಗತ’ವನ್ನು ಚಿತ್ರಿಸುವುದು ಅತ್ಯಂತ ಕಷ್ಟಕರ. ಹಾಗಾಗಿಯೇ ಅನೇಕ ಪಾತ್ರಗಳ ಸೃಷ್ಠಿ ಅವಶ್ಯವಾಗುತ್ತದೆ. ಜೊತೆಗೆ ಚಿತ್ರಕಥೆಯಲ್ಲಿ ಬಿಗಿಯಿರಬೇಕಾಗುತ್ತದೆ ಹಾಗೂ ಇದೆಲ್ಲವೂ ಅತ್ಯಂತ ಹಣ ಖರ್ಚಿನ ಬಾಬತ್ತು. ಉದಾಹರಣೆಗೆ ಹೇಳುವುದಾದರೆ ಮುಂಗಾರು ಮಳೆಯಲ್ಲಿ ಗಣೇಶನೊಟ್ಟಿಗಿದ್ದ ಮೊಲದ ಮೂಲಕ ತನ್ನೆಲ್ಲಾ ಸ್ವಗತವನ್ನು ಆತ ಅದರೊಟ್ಟಿಗೆ ಹಂಚಿಕೊಳ್ಳುವುದು ಅಥವಾ ಕಠಾರಿವೀರ (ಉಪೇಂದ್ರ) ಚಿತ್ರದಲ್ಲಿ ಚಿತ್ರಿಸಿರುವ ಸ್ವರ್ಗ....ಹೀಗೆ.   ‘ಗೊಂಬೆಗಳ ಲವ್’ ಚಿತ್ರದ ಬಗ್ಗೆ ಮಾತಾಡುವುದಾದರೆ ಇಡೀ ಚಿತ್ರದ ಕಥಾನಿರೂಪಣೆಯ ಅತ್ಯಂತ ಪ್ರಮುಖ ಘಟ್ಟಗಳಲ್ಲಿ ದೃಶ್ಯಗಳನ್ನು ಸಿಂಬಾಲಿಕ್ ಆಗಿ ನಿರೂಪಿಸಿರುವುದು ಚಿತ್ರದ ಮುಖ್ಯ ಹೈಲೈಟ್. ತಮ್ಮ ಸೀಮಿತ ಬಜೆಟ್ಟಿನಲ್ಲಿ, ಹೊಸ ತಂಡದೊಂದಿಗೆ ಇಂತಹ ಚಿತ್ರವೊಂದನ್ನು ಅತ್ಯುತ್ತಮ ರೀತಿಯಲ್ಲಿ ನಿರ್ದೇಶಿಸಿದ ನಿರ್ದೇಶಕ ಸಂತೋಷ್ ಅವರನ್ನು ಇದಕ್ಕಾಗಿ ಅಭಿನಂದಿಸಲೇಬೇಕು.

ಇತ್ತೀಚಿನ ದಿನಗಳಲ್ಲಿ ದುನಿಯಾ ‘ಸೂರಿ’ ಅವರನ್ನು ಬಿಟ್ಟರೆ, ದೃಶ್ಯಗಳನ್ನು ಅತ್ಯಂತ ಚೆಂದದಲ್ಲಿ ನಿರೂಪಿಸಿದವರು ‘ಸಂತೋಷ್’ ಎಂದರೆ ತಪ್ಪಾಗಲಾರದು. ನಿರ್ದೇಶಕ ‘ಸಂತೋಷ್’ ದೃಶ್ಯ ರೂಪಕಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದ್ದಾರೆ.  ಚಿತ್ರ ಶುರುವಾಗುವುದೇ ಅತ್ಯಂತ ವಿಶಿಷ್ಠ ರೀತಿಯಲ್ಲಿ.  ಮನೆಯ ದೇವರ ಫೋಟೋಗೆಂದು ತರಿಸುವ ಹೂವು ಕೆಳಗೆ ಬಿದ್ದು (ಗೇಟಿನ ಬಳಿ) ಗಲೀಜಾಗಿದೆಯೆಂದು, ತರಾತುರಿಯಲ್ಲಿ ತನ್ನ ಕೆಲಸಕ್ಕೆಂದು ಹೊರಡುತ್ತಿರುವ ಪೋಲೀಸ್ ಪೇದೆಯೊಬ್ಬಳು, ತನಗಾಗಿ ಕಾಯುತ್ತಿರುವ ತನ್ನ ಮೇಲಾಧಿಕಾರಿಯ ಬೈಗುಳವನ್ನು ಕೇಳುತ್ತಲೇ ಅದನ್ನು ಹಿಸುಕಿ, ಮುದ್ದೆ ಮಾಡಿ ಎಸೆದು ಹೋಗುತ್ತಾಳೆ.  ಮೊಳಕ್ಕೆ ೩೦ ರೂಪಾಯಿ ಎಂದು ಮಂಗಳಮುಖಿಯೊಬ್ಬಳು, ಹೂವು ಹೊಸದಾಗಿಯೇ ಇದೆಯೆಂದು, ಅದನ್ನು ಸ್ವಲ್ಪ ಸರಿ ಮಾಡಿಕೊಂಡು ಮುಡಿದುಕೊಂಡು ಹೋಗುತ್ತಾಳೆ.  ಪೋಲೀಸ್ ಪೇದೆ ಮೃದು ಸ್ವಭಾವದವಳಾಗಿದ್ದರೂ, ತನ್ನ ವೃತ್ತಿಯ ಕಾರಣ ಕಠೋರ ಹೃದಯಿಯಂತೆ ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ಹಾಗೂ ಮಂಗಳಮುಖಿಯ ದೇಹ ಗಂಡಾಗಿದ್ದರೂ, ತನ್ನ ವೃತ್ತಿಗಾಗಿ ಹೆಂಗಸಂತೇ ಕಾಣಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಒಂದೆರಡು ನಿಮಿಷಗಳಲ್ಲಿಯೇ ಸಣ್ಣ ಕಥೆಯಂತೆ ಮನಸ್ಸಿಗೆ ಮುಟ್ಟಿಬಿಡುತ್ತದೆ. ಈ ಮಹಿಳಾ ಪೋಲೀಸ್ ಕೇಳುವ ‘ಬದುಕೆಂದರೇನು?’ ಎಂಬಲ್ಲಿಂದ ಚಿತ್ರವು ಒಂದು ಥ್ರಿಲ್ಲರ್ ನಂತೆ ಕಾಣಿಸಿಕೊಳ್ಳತೊಡಗುತ್ತದೆ. ಆಕೆಯ ಈ ಪ್ರಶ್ನೆಗೆ ಚಿತ್ರವು ಉತ್ತರ ಹೇಳುವ ಪ್ರಯತ್ನ ಶುರು ಮಾಡುತ್ತದೆ.

ಹುಡುಗಿ ಮುನಿಸಿಕೊಂಡಿದ್ದಾಳೆಂದು ಹುಡುಗ ಆಕೆಯನ್ನು ಅನುನಯಿಸುತ್ತಿದ್ದಾಗ, ಹಾದು ಹೋಗುವ ಐಸ್ ಕ್ರೀಮ್ ಗಾಡಿ, ಪರೋಕ್ಷವಾಗಿ ಹುಡುಗ ಐಸ್ ಹಚ್ಚುತ್ತಿದ್ದಾನೆಂದು ಹೇಳಿದಂತೆ ಅನಿಸುತ್ತದೆ.  ಹಾಗೆಯೇ ಮತ್ತೊಂದು ದೃಶ್ಯದಲ್ಲಿ ಕೋಪಗೊಂಡಿರುವ ಪ್ರೇಮಿಗಳು, ಮನಸ್ಸಿನಲ್ಲಿ ಪ್ರೀತಿ ಇದ್ದರೂ ಕೂಡ ತಮ್ಮ ಅಹಂ ಬಿಟ್ಟು ಮಾತಾಡಲೊಲ್ಲರು. ಆಗ ಈಕೆಯನ್ನು ಉರಿಸಲೆಂದು, ತಮಟೆಯವಳಿಗೆ ಹಣ ಕೊಟ್ಟು ಟಪ್ಪಾಂಗುಚ್ಚಿ ಡಾನ್ಸ್ ಮಾಡುವ ನಾಯಕ,  ತನ್ನ ಅಹಂ ಬಿಡಲೊಲ್ಲದ ನಾಯಕಿ, ಈತನ ನೃತ್ಯಕ್ಕೆ ಶಿಳ್ಳೆ ಹಾಕಿ, ಆತನನ್ನೇ ಉರಿಸುವ ನಾಯಕಿ, ಅಪ್ಪ ಮದುವೆಗೆ ವಿರೋಧ ಮಾಡುತ್ತಾನೆಂದು ಓಡಿ ಹೋಗುವ ಹವಣಿಕೆಯಲ್ಲಿರುವ ಪ್ರೇಮಿಗಳ ಪ್ರಯತ್ನಕ್ಕೆ ನಾಯಕಿಯ ತಾಯಿ ಕಣ್ಣೀರು ಸುರಿಸಿ ಹಾಳುಮಾಡುವಾಗ, ಹಿಂಬದಿಯಲ್ಲಿ ತೋರಿಸುವ ಹುಚ್ಚನೊಬ್ಬನ ಬಡಬಡಿಕೆ, ತಾಳ್ಮೆಯಿಂದ ಅದನ್ನು ಕೇಳಿಸಿಕೊಳ್ಳುತ್ತಿರುವ ಮನೆಯವನು, ಅವನನ್ನು ಕಡಿವಾಣ ಹಾಕಿ ಬಂಧಿಸುವುದು ಕೂಡ ಪರೋಕ್ಷವಾಗಿ ಓಡಿಹೋಗಿ ಮದುವೆ ಮಾಡಿಕೊಳ್ಳುವ ಪ್ರೇಮಿಗಳ (ಭವಿಷ್ಯದ ಯೋಚನೆ ಇಲ್ಲದೆ) ಹುಚ್ಚುತನವನ್ನು, ಅದನ್ನು ತಡೆಹಾಕುವುದನ್ನು ಸೂಚಿಸುವುದು. ಮಗಳನ್ನು ಮದುವೆಯಾಗಿ ಓಡಿ ಹೋದ ಎಂದು ಊರೆಲ್ಲಾ ಅಪ್ಪ ಹುಡುಕುತ್ತಿದ್ದರೆ, ಒಂದೇ ಒಂದು ಶಾಟ್ ನಲ್ಲಿ ೩ ಟೀ ಕಪ್ ಗಳನ್ನು ತೋರಿಸುವ ಮೂಲಕ ಆತ ಮನೆಯಲ್ಲಿದ್ದಾನೆ ಎನ್ನುವುದಿರಬಹುದು, ಪ್ರೇಮಿಗಳಿಬ್ಬರೂ ಒಂದಾಗುವಾಗ ತೋರಿಸುವ ೨   ಕಪ್ ಗಳ ಮಿಲನ ಹೀಗೆ.... ಬಹಳಷ್ಟು ಪ್ರಮುಖ ದೃಶ್ಯಗಳು ಕಥೆ ಹೇಳುತ್ತಿರುವಾಗ, ಹಿಂಬದಿಯಲ್ಲಿ ಮತ್ತೊಂದು ದೃಶ್ಯದ ಮೂಲಕ (ಪಿಕ್ಚರ್ ಇನ್ ಪಿಕ್ಚರ್) ಸಿಂಬಾಲಿಕ್ ಆಗಿ ಹೇಳುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.

ಅದುವರೆವಿಗೂ ಬರೀ ಪ್ರೇಮಿಗಳ ಕಥೆಯಂತೆ ಭಾಸವಾಗುತ್ತಿದ್ದ ಚಿತ್ರಕಥೆ, ಮಧ್ಯಂತರದ ನಂತರ ಊಹಿಸಲು ಸಾಧ್ಯವಿಲ್ಲದಂತೆ ಬದಲಾಗಿಬಿಡುತ್ತದೆ.  ಪಂಡರೀಬಾಯಿ ನಂತರ ತೆರವಾದ ಕನ್ನಡ ಚಿತ್ರರಂಗದ ‘ಅಮ್ಮ’ನ ಸ್ಥಾನಕ್ಕೆ ‘ಶೃತಿ’ ಚೆಂದ ಕಾಣಬಹುದೇನೋ?! ಎನ್ನುವಷ್ಟು ಪರಿಣಾಮಕಾರಿಯಾಗಿ ನಟಿ ‘ಶೃತಿ’ ಅಮ್ಮನ ಪಾತ್ರಕ್ಕೆ ನೈಜತೆ ತುಂಬಿದ್ದಾರೆ. ನಾಯಕಿಯ ಅಣ್ಣನ ಪಾತ್ರಧಾರಿ ಶಾರೂಖ್ ಖಾನ್ ನಂತೆ ನಟಿಸುವುದು, ನಾಯಕಿಯ, ನಾಯಕನ ನಟನೆಯಲ್ಲಿ ಕಂಡುಬರುವ ಅಸಹಜ ನಟನೆ, ದೃಶ್ಯಗಳನ್ನು ನಿರೂಪಿಸುವಾಗ ಎಲ್ಲೂ ಕಾಣಿಸದಿರುವ ಇತರ ಜನರು ಅಥವಾ ಪಾತ್ರಗಳು, ಪ್ರೇಮಿಗಳ ನಡುವೆ ದೇಹಕ್ಕಿಂತ ಮನಸ್ಸೇ ಹೆಚ್ಚು ಏಕೆ ಮಾತಾಡುತ್ತದೆ? ಎಂಬುದು ಅದುವರೆವಿಗೂ ಹೊಳೆಯದೇ ಇದ್ದದ್ದು ಅಥವಾ ಪೋಲೀಸ್ ಇನ್ಸ್ ಪೆಕ್ಟರ್ ಮಹಿಳಾ ಪೋಲೀಸ್ ಗೆ ತಂದುಕೊಡುವ ಇಡ್ಲಿ ಪಾಕೆಟ್ ನ ಅರ್ಥ (ನನಗೇ ಈ ದೃಶ್ಯ ಯಾಕೆ ಅಂತಾ ಅರ್ಥವಾಗಿರಲೇ ಇಲ್ಲ)  ಥಟ್ ಅಂತಾ ತಲೆಗೆ ಹೊಳೆಯುತ್ತದೆ. ಈ ಎಲ್ಲಕ್ಕೂ ಒಂದು ತಾರ್ಕಿಕ ಕಾರಣ / ಉತ್ತರ ಮಧ್ಯಂತರದ ನಂತರ ವೀಕ್ಷಕರಿಗೆ ಸಿಗುತ್ತದೆ. ಮೃದು ಹೃದಯಿ ಪೋಲೀಸ್ ಪೇದೆ, ಹಣ, ಅಧಿಕಾರವಿದ್ದರೂ ನಿಸ್ಸಹಾಯಕನಾಗುವ ಪೋಲೀಸ್ ಇನ್ಸ್ ಪೆಕ್ಟರ್, ನಮಗ್ಯಾಕೆ ಜವಾಬ್ದಾರಿ? ಎಂದು ಸಹಾಯಕ್ಕೆ ಒದಗದ ನೆರೆಹೊರೆಯವರು, ಅಂತಃಕರಣ ಅವಶ್ಯವಾಗಿರಬೇಕಾದ ವೈದ್ಯರ ಹಣದಾಸೆ, ಎಷ್ಟೋ ವರ್ಷಗಳ ನಂತರ ಬಯಸಿ, ಬಯಸಿ, ಹುಟ್ಟಿದ ಮಗು ಅಂಗವಿಕಲನೆಂದು ಗೊತ್ತಾದ ತಕ್ಷಣವೇ ಆಚೆಗೆಸೆ ಎಂದು ಹೇಳುವ ತಂದೆ, ಹೆಂಡತಿಯನ್ನು ಕೆಲಸಕ್ಕೆ ಕಳುಹಿಸಿ, ಆಕೆಯನ್ನು ಅನುಮಾನ ಪಡುವ ಗಂಡ, ಮಾತೆತ್ತಿದರೆ ಹೊಡಿ, ಬಡಿ ಎಂದು ಹೇಳುವ ಗೆಳೆಯ, ಗಂಡಸರೆಲ್ಲರೂ ಸರಿ ಇಲ್ಲ ಎಂದು ಹೇಳುವ ಗೆಳತಿ ಇವರೆಲ್ಲರ ನಡುವೆಯೇ ಬದುಕಲು ಪ್ರೇಮವೇ ದೈವ, ಪ್ರೇಮವೇ ಜೀವ ಎಂದು ಸಾರುವ ತಾಯಿ, ತನ್ನ ಅಂಗವಿಕಲ ಮಗುವಿಗಾಗಿಯೇ, ಆ ಮಗುವಿನ ಖುಷಿಗಾಗಿಯೇ ತನ್ನೀಡಿ ಬದುಕನ್ನು ಮೀಸಲಿಡುವುದು, ‘ನೀವು ಹೊರಗಡೆ ಏಟು ತಿಂದರೆ, ನಾವು ಒಳಗಡೆ ತಿನ್ನುತ್ತಿರುತ್ತೇವೆ ಕಣೋ’ ಎಂದು ನಾಯಕನಿಗೆ ತಮಗೂ ನೋವಾಗುತ್ತಿರುತ್ತದೆ ಎಂದು ಸೂಕ್ಷ್ಮವಾಗಿಯೇ ಬುದ್ಧಿ ಹೇಳುವ ನಾಯಕಿ (ಹುಡುಗಿಯರೆಲ್ಲಾ ಮೋಸಗಾರ್ತಿಯರು ಎಂದಾಗ), ಪ್ರೀತಿಯಿಂದಲೇ ಎಲ್ಲರನ್ನು ಗೆಲ್ಲಬಹುದು ಎನ್ನುವ ಹುಮ್ಮಸ್ಸಿರುವ ನಾಯಕ, ಒಟ್ಟಿನಲ್ಲಿ ಪ್ರೀತಿ / ಪ್ರೇಮ ಬದುಕಿನಲ್ಲಿ ಇಲ್ಲವೆಂದರೆ  ನಾವೆಲ್ಲರೂ ಬದುಕಿದ್ದು ಕೂಡ ಜೀವಚ್ಛವಗಳಂತೆ ಎನ್ನುವ ಚಿತ್ರದ ಅಂತ್ಯ ಬದುಕಲು ಮನುಷ್ಯನಿಗೆ ಬೇಕಿರುವುದು ಒಂದಿಷ್ಟು ಪ್ರೀತಿ ಎಂದು ಆ ಮಹಿಳಾ ಪೋಲೀಸ್ ಬಿಕ್ಕಿಬಿಕ್ಕಿ ಅಳುವ ಮೂಲಕ ಕೊನೆಯಾಗುತ್ತದೆ.. ಬದುಕಿನಲ್ಲಿ ಎಷ್ಟೇ ಕಷ್ಟವಿರಲಿ, ಪ್ರೀತಿಯಿದ್ದರೆ ಎಲ್ಲವನ್ನೂ ನಗುನಗುತ್ತಲೇ ಗೆಲ್ಲಬಹುದು ಎನ್ನುವುದು ಈ ಚಿತ್ರದ ನೀತಿಪಾಠವಾಗುತ್ತದೆ.

Tuesday, February 12, 2013

ಡ್ರಾಮ ಚಿತ್ರ


ಮುಂಗಾರುಮಳೆ, ಗಾಳಿಪಟ ಚಿತ್ರಗಳಿಂದ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರುಗಳ ಮನ ಗೆದ್ದ ಭಟ್ಟರು, ತಮ್ಮ ಚಿತ್ರಗಳು ಯಾವ ಸೆಂಟರುಗಳಲ್ಲಿ ಓಡಿಲ್ಲವೋ ಆ ಸೆಂಟರುಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮುಂದಿನ ಚಿತ್ರಗಳಲ್ಲಿ ಸಂಭಾಷಣೆ ಬದಲಾಯಿಸುತ್ತಾರೇನೋ ಅನ್ನೋ ಡೌಟು! ;-)  ಮನಸಾರೆ ಮೂಲಕ ಉತ್ತರ ಕರ್ನಾಟಕದವರನ್ನು, ಪಂಚರಂಗಿ ಮೂಲಕ ಮಂಗಳೂರಿನವರನ್ನು ಸೆಳೆದ ಭಟ್ಟರ ‘ಡ್ರಾಮಾ’ ಈ ಬಾರಿ ಮಂಡ್ಯದ ಜನರಿಗಾಗಿ.  ಮಂಡ್ಯದ ಗಂಡು ಅಂಬರೀಶ್ ಚಿತ್ರದ ಸೂತ್ರಧಾರ, ನಾಯಕ ಮತ್ತದೇ ಮಂಡ್ಯದ ಯಶ್! ಜೊತೆಗೆ ಮಂಡ್ಯದ ಭಾಷೆ!  ಆದರೂ ಅಂಬರೀಶ್ ಅವರ ಡೈಲಾಗ್ ಡೆಲಿವರಿ, ರಾಜು ತಾಳಿಕೋಟಿಯವರನ್ನು ನೆನಪಿಗೆ ತರಿಸುತ್ತದೆ, ಯಶ್ ರ ನಟನೆ ನೋಡಿದಾಗ, ಈ ಪಾತ್ರ ಗಣೇಶ್ ಗೆ ಹೆಚ್ಚು ಸೂಕ್ತವಾಗುತ್ತಿತ್ತೇನೋ? ಎಂದೆನಿಸುತ್ತದೆ. ಇಡೀ ‘ಡ್ರಾಮಾ’ ದುದ್ದಕ್ಕೂ ರಾರಾಜಿಸುವುದು ಮಾತ್ರ ನೀನಾಸಂ ಸತೀಶ್, ತಮ್ಮ ಮುಂದಿನ ಚಿತ್ರವಾದ ‘ಲುಸಿಯಾ’ ಗೆ ಈ ಮೂಲಕ ತಳಹದಿ ಹಾಕಿಕೊಂಡಿದ್ದಾರೆ.  ಸುಚೇಂದ್ರ ಪ್ರಸಾದ್ ಅವರಿಗೆ ಬಹಳ ದಿನಗಳ ನಂತರ ಅದ್ಭುತ ಪಾತ್ರ! ಅವರ ಬಾಯಲ್ಲಿ ಶುದ್ಧ ಕನ್ನಡ ಕೇಳಲು ಇಷ್ಟವಾದರೂ, ವೀಕ್ಷಕರಿಗೆ ಅದು ತಲುಪದೇ ಇರುವುದು ಅವರ ಪಾತ್ರರಚನೆಯಲ್ಲಿನ ದೋಷ! ಅಂಬರೀಶ್ ಸೂತ್ರಧಾರನಾಗಿ (ವಯಸ್ಸಿಗೆ ತಕ್ಕಂಥ ಪಾತ್ರ) ಚೆಂದ ಕಾಣುತ್ತಾರೆ. ಭಟ್ಟರು ತಮ್ಮ ಈ ಹಿಂದಿನ ಯಶಸ್ಸಿನ ಎಲ್ಲಾ ಸೂತ್ರಗಳನ್ನು ‘ಡ್ರಾಮಾ’ ದಲ್ಲೂ ಬಳಸಿದ್ದಾರೆ. ಕಥೆಯೇ ಇಲ್ಲದ ಒಳ್ಳೇ ಚಿತ್ರಕಥೆ, ಇಷ್ಟವಾಗುವ ಕಲರ್ ಫುಲ್ ಛಾಯಾಗ್ರಹಣ, ಕೆಲಕಾಲ ಮಾತ್ರ ಪಡ್ಡೇ ಹುಡುಗರಿಗೆ ಇಷ್ಟವಾಗುವ  ಭಟ್ಟರ ಹಾಡುಗಳು, ನಿಧಾನವಾಗಿ ಮೋಡಿ ಮಾಡುವ ಕಾಯ್ಕಿಣಿಯ ಹಾಡುಗಳು! ಹೊರಗೆ ಬಂದ ನಂತರ ನಾವೇನು ನೋಡಿದೆವು? ಎಂಬುದನ್ನು ಮರೆತು ಹೋದರೂ, ಥಿಯೇಟರಿನಲ್ಲಿ ಕೂತಷ್ಟು ಕಾಲ ನಗಿಸುವ ಭಟ್ಟರ ಡೈಲಾಗ್ ಗಳು! ಹ್ಮ್....... ಟೈಮ್ ಪಾಸ್ ಚಿತ್ರ! :-)

ನಮಗೇನಾಗಿದೆ?


ಇತ್ತೀಚಿನ ‘ಡೆಲ್ಲಿ ಅತ್ಯಾಚಾರ’ ಪ್ರಕರಣ ಇಡೀ ಭಾರತದಲ್ಲಿ ಒಂದು ದೊಡ್ಡ ಸಂಚಲನವನ್ನುಂಟು ಮಾಡಿತು. ಅಂದು ಮುಂಬೈನಲ್ಲಿ ‘ಕಸಬ್’ ಸಿಕ್ಕಸಿಕ್ಕವರನ್ನು ಕೊಂದದ್ದಕಿಂತಲೂ, ತಾಜ್ ಹೋಟೇಲ್ ನಲ್ಲಿ ಆದ ಉಗ್ರರ ದಾಳಿಗಿಂತಲೂ, ಒಂದಿಷ್ಟು ಹೆಚ್ಚಿನ ‘ಸುದ್ಧಿ’ಯನ್ನು ಈ ಭೀಕರ ಕೃತ್ಯ ಮಾಡಿತು! ಇಂತಹ ನಾಚಿಕೆಗೇಡಿನ ಕೃತ್ಯ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂಬುದರಿಂದ ಹಿಡಿದು, ಅವರ ಪುರುಷತ್ವದ ಹರಣವಾಗಬೇಕು, ಅವರ ‘ಆಯುಧ’ವನ್ನು ನಿಷ್ಕ್ರಿಯಗೊಳಿಸಬೇಕು ಎನ್ನುವವರೆಗೂ ಆಕ್ರೋಶದ ಮಾತುಗಳು ಕೇಳಿಬಂದವು.  ಈ ಪ್ರಕರಣ ಅತ್ಯಂತ ಅಸಹ್ಯ, ಭೀಭತ್ಸ, ಪೈಶಾಚಿಕ ಹಾಗೂ ಅಮಾನವೀಯ ಎಂಬುದರಲ್ಲಿ ಎರಡು ಮಾತಿಲ್ಲ! ಆದರೆ ಇಂತಹದೊಂದು ರೇಪ್ ಪ್ರಕರಣ ಇದೇ ಮೊದಲ ಬಾರಿಗೆ ಆದಂತೆ ಬಿಂಬಿಸಿದ್ದು ಮಾತ್ರ ಅಸಹನೀಯ! 

ಹಿಂದೆ ಕೂಡ ಹೆಣ್ಣಿನ ಮೇಲೆ ದೌರ್ಜನ್ಯವಿತ್ತು. ನಮಗ್ಯಾರಿಗೂ ಗೊತ್ತಾಗುತ್ತಿರಲಿಲ್ಲ. ‘ಹೆಣ್ಣಿನ ಮೇಲೆ’ ಮಾತ್ರ! ಎಂದು ಹೇಳುವುದಕ್ಕಿಂತ    ಸಮಾಜದಲ್ಲಿ ದುರ್ಬಲ ವರ್ಗಗಳ ಮೇಲಿನ ದೌರ್ಜನ್ಯ ಎಂದಿಗೂ ಇತ್ತು, ಇಂದಿಗೂ ಇದೆ! ನಾನು ಚಿಕ್ಕವಳಿದ್ದಾಗ ‘ರೂಪ’ ಎಂಬಾಕೆಯನ್ನು ಸತಿ ಸಹಗಮನ ಮಾಡಿದ  ಕ್ರೂರ ಘಟನೆ ನನಗೆ ಇಂದಿಗೂ ಮನದಲ್ಲಿ ಅಚ್ಚೊತ್ತಿದೆ.  ಎಷ್ಟೋ ಮನೆಗಳಲ್ಲಿ ಇವತ್ತಿಗೂ ಕೂಡ ನಡೆಯುವ ಹಿಂಸೆ, ಹೊರಗೆ ಯಾರಿಗೂ ಗೊತ್ತಾಗುವುದೇ ಇಲ್ಲ. ಹೆಣ್ಣಿನ ಮೇಲೆ ಮಾತ್ರವಲ್ಲ, ಗಂಡಿನ ಮೇಲೆಯೂ ಕೂಡ ಇಂತಹುದ್ದೇ ಲೈಂಗಿಕ ಶೋಷಣೆಗಳು, ಮಕ್ಕಳ ಮೇಲೆ, ಎಲ್ಲ ದುರ್ಬಲರ ಮೇಲೂ ನಡೆಯುತ್ತಲೇ ಇದೆ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಹೀಗೆ ಮನೆಯವರೇ ಲೈಂಗಿಕ ಶೋಷಣೆ ಮಾಡುತ್ತಾರೆ. ಅದು ಡೆಲ್ಲಿ ರೇಪ್ ಗಿಂತಲೂ ಭೀಕರ! ಮನೆಯವರೇ ಹೀಗೆ ಮಾಡಿದರೆ, ಮುಂದೆ ಯಾರನ್ನೂ ನಂಬಲಾಗುವುದು? ಹಿಂಸೆಯಲ್ಲಿನ ಪ್ರಮಾಣ ಹೆಚ್ಚು ಕಡಿಮೆಯಾಗಿರಬಹುದೇ ಹೊರತು, ಹಿಂಸೆ ಹಿಂಸೆಯೇ. ನಮ್ಮ ಅರಿವಿಗೆ, ಬೆಳಕಿಗೆ ಬಂದದಷ್ಟೇ ನಮಗೆ ತಿಳಿಯುವುದು. ಮೊದಲಿಗೆ ಯಾವುದೇ ‘ಜವಾಬ್ದಾರಿ’ ಇಲ್ಲದೇ, ಕೇವಲ, ತಮ್ಮ ಮಾಧ್ಯಮಗಳ ಹೆಚ್ಚುಗಾರಿಕೆ ತೋರಿಸಿಕೊಳ್ಳಲಷ್ಟೇ ತಾ ಮುಂದೆ, ನಾ ಮುಂದೆ ಎಂದು ಇಂಥ ‘ಗಂಭೀರ’ ವಿಷಯಗಳನ್ನು ತೋರಿಸುವ ಮೀಡಿಯಾಗಳ ಬಗ್ಗೆಯೇ ನನ್ನ ಧಿಕ್ಕಾರವಿದೆ. 

ಈಗ ಮಾಧ್ಯಮಗಳು ತಮ್ಮ, ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲಷ್ಟೇ ಈ ತರಹದ ಸೆನ್ಸಿಟಿವ್ ಇಶ್ಯೂಗಳನ್ನು ಮೊದಲಿಗೆ ಹೆಡ್ ಲೈನ್ಸ್, ಸೆನ್ಶೇಷನಲ್ ಎಂದು ತೋರಿಸುತ್ತವೆ! ಅದರಲ್ಲೂ ಮುಖ್ಯವಾಗಿ ರೇಡಿಯೋ, ಟಿವಿಯವರು ನಡೆದುಕೊಳ್ಳುವ ರೀತಿ ನೋಡಿದರೆ ಅಸಹ್ಯವಾಗುತ್ತದೆ. ಮೊನ್ನೆ ಎಫ್ ಎಮ್ ೧೦೪ ಚಾನೆಲ್ ನಲ್ಲಿ ಹಾಡುಗಳ ಮಧ್ಯೆ, ಮಧ್ಯೆ ರೇಡಿಯೋ ಜಾಕಿ ಒಬ್ಬಳು ಈ ರೇಪ್ ವಿಷಯ ಮಾತನಾಡುತ್ತಿದ್ದಳು! ‘ಡೆಲ್ಲಿ ರೇಪ್’ ಬಗ್ಗೆ ನಿಮ್ಮ ಒಪಿನಿಯನ್ ತಿಳಿಸಿ ಎಂದು ಆಕೆ ಹಾಕಿದ ಹಾಡು ಯಾವುದೋ ಸೆಕ್ಸಿ ಐಟಮ್ ಸಾಂಗ್! ಇಂಥ ಗಂಭೀರ, ಸೆನ್ಸಿಟಿವ್ ವಿಷಯವನ್ನು ಹಾಡುಗಳ ಮಧ್ಯೆ ಚರ್ಚಿಸುವುದು! ಎಲ್ಲಿ? ಹೇಗೆ? ಎಷ್ಟು ಮಾತನಾಡಬೇಕು ಎಂಬುದರ ಅರಿವಿಲ್ಲ ಇವರ್ಯಾರಿಗೂ?! ಮುಖ್ಯವಾಗಿ ಇಂತಹ ವಿಷಯಗಳನ್ನು, ಇಂತಹವರು ಹೀಗೆ ಬೇಕಾಬಿಟ್ಟಿ ಮಾತನಾಡುವುದನ್ನು ನಿಷೇಧಿಸಬೇಕು. ಇವರಿಂದ ವಿಷಯದ ಗಂಭೀರತೆ ಹಾಳಾಗಿಬಿಡುತ್ತದೆ. 

ಇಷ್ಟೇ ಅಲ್ಲಾ, ಇಷ್ಟೆಲ್ಲಾ ಆದ ಮೇಲೂ ಅದರಿಂದ ಅಪರಾಧಿಗೆ ಸಿಕ್ಕ ಪನಿಶ್ ಮೆಂಟ್ ಏನು? ಯಾರಿಗೂ ಗೊತ್ತಾಗೊಲ್ಲ. ಯಾಕೆಂದರೆ ಅಪರಾಧಿ ಸಿಕ್ಕು, ಆತನ ಅಪರಾಧಗಳು ಕೋರ್ಟಿನಲ್ಲಿ ರುಜುವಾತಾಗುವಷ್ಟರಲ್ಲಿ, ಬಹುಶಃ ವಿಕ್ಟಿಮ್ ಗೂ ಕೂಡ ಅಪರಾಧ ಏನಾಗಿತ್ತು? ಅನ್ನುವುದು ಮರೆತೇ ಹೋಗಿರುತ್ತದೆಯೇನೋ? ಅಥವಾ ಗೆದ್ದೆ ಎಂದು ಬೀಗಲು ಆಗದಷ್ಟು ಮಾನಸಿಕ ತೊಂದರೆಗಳಿಗೀಡಾಗಿರುತ್ತಾರೆ :(.  ಆಕೆ ಒಮ್ಮೆ ‘ರೇಪ್’ ದೈಹಿಕವಾಗಿ ಅನುಭವಿಸಿದ್ದರೆ, ಪದೇ, ಪದೇ ಮಾಧ್ಯಮಗಳಲ್ಲಿ, ಕೋರ್ಟ್ ಗಳಲ್ಲಿ, ನಮ್ಮೆಲ್ಲರ ಬಾಯಿಗಳಲ್ಲಿ ಎಷ್ಟು ಬಾರಿ ‘ರೇಪ್’ ಆಗುತ್ತಾಳೋ?  ಆ ನೋವಿಗೆ ನಮ್ಮಲ್ಲಿ ಉತ್ತರವಿದೆಯೇ?  ನಾವು ಕೂಡ ಅಷ್ಟೇ. ಎಲ್ಲಾ ಚಾನೆಲ್ ಗಳನ್ನು ನೋಡುವುದು, ಬಾಯಿಗೆ ಬಂದಂತೆ ಮಾತನಾಡಿಕೊಳ್ಳುವುದು, ಒಂದಿಷ್ಟು ದಿವಸಗಳು ಕೂಗಾಡುವುದು, ಹಾರಾಡುವುದು ಅಷ್ಟೇ.  ಪ್ರಕರಣದ ಕಾವು ಆರಿದ ನಂತರ, ನಮ್ಮ ಕೆಲಸ, ನಮ್ಮ ಪಾಡು. ಇದರ ಬಗ್ಗೆಯೂ ನನ್ನನ್ನು ಒಳಗೊಂಡಂತೆ ಎಲ್ಲರ ಮೇಲೂ ನನಗೆ ತಿರಸ್ಕಾರವಿದೆ.  

ಇಂತಹ ಪ್ರಕರಣಗಳು ಘಟಿಸಿದೊಡನೆಯೇ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು, ಸ್ವಹಿತಕ್ಕಾಗಿ ಪ್ರಯತ್ನ ಶುರು ಮಾಡಿಬಿಡುತ್ತಾರೆ. ಮಂಗಳೂರಿನ ಪಬ್ ಪ್ರಕರಣದಲ್ಲಿ ಸಂಸ್ಕೃತಿ ಎಂದು ಬೊಬ್ಬೆ ಹೊಡೆದ ಮುತಾಲಿಕ್ ಮತ್ತು ಸಂಘಟಿಗರು, ಅವರಿಗೆ ಪಿಂಕ್ ಚೆಡ್ಡಿಗಳನ್ನು ಕಳಿಸುವ ಮೂಲಕ ನಾವೇನೋ ಸಾಧಿಸಿದೆವು ಎಂದು ಬೀಗಿದ ರೇಣುಕಾ ಚೌಧರಿ ಮುಂತಾದವರು ಇಂತಹ ಘಟನೆಗಳು ನಡೆದಾಗ, ತಮಗೆ ಸಂಬಂಧವೇ ಇಲ್ಲದಂತೆ ನಟಿಸುವಾಗ ಅವರ ಬಗ್ಗೆ ಹೇಸಿಗೆಯಾಗುತ್ತದೆ. ಇಂತಹ ಅತ್ಯಾಚಾರಗಳು ನಡೆದ ಕೂಡಲೇ, ಆ ದೌರ್ಜನ್ಯಕ್ಕೊಳಗಾದ ಹೆಣ್ಣನ್ನು ಇನ್ನೊಂದಿಷ್ಟು ನೋಯಿಸುವ, ಇಡೀ ಹೆಣ್ಣು ಕುಲವನ್ನೇ ಅಶ್ಲೀಲವಾಗಿ ನೋಡುವ ಗಂಡಸರು, ಇಡೀ ಗಂಡಸರನ್ನೆಲ್ಲಾ ಅಪರಾಧಿಗಳಂತೆ, ಅವರಿಗೆಲ್ಲಾ ಶಿಕ್ಷೆ ಆಗಬೇಕು ಎಂದು ಕುದಿಯುವ ಹೆಂಗಸರು! ಇಲ್ಲಿ ಒಬ್ಬರ ತಪ್ಪು, ಇಡೀ ಒಂದು ಸಮುದಾಯದ ತಪ್ಪಾಗಿ ಬಿಂಬಿತವಾಗಿಬಿಡುತ್ತದೆ. ಇಲ್ಲಿ ಒಂದು ಒಳ್ಳೆಯ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ, ನಮ್ಮ ಪೀಳಿಗೆ ಮುಂದುವರಿಯಲು ನಮಗೆ ಗಂಡು, ಹೆಣ್ಣು, ಇಬ್ಬರೂ ಬೇಕು ಎಂಬುದನ್ನೇ ನಾವು ಮರೆತಂತಿದ್ದೇವೆ. ನಮ್ಮ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಿಡಿದು, ಇಡೀ ಸಮಾಜದ ಸಮಸ್ಯೆಗೆ ಇದೇ ಪರಿಹಾರ ಎಂಬಂತೆ ಮಾತನಾಡಲು ತೊಡಗುತ್ತೇವೆ. 

ಇನ್ನೂ ನಾವು ಸಮಾಜದ ಅಂಗವೆಂದು, ನಮ್ಮಿಂದಲೇ ಸಮಾಜವೆಂದು ತಿಳಿಯದ ಕೆಲವು ತಟಸ್ಥ ಮಂದಿಗಳಿದ್ದಾರೆ. ಇವರು ತಮ್ಮ ಸುರಕ್ಷಿತ ವಲಯವನ್ನು ಬಿಟ್ಟು ಬರಲೊಲ್ಲರು! ತಮ್ಮ ಮನೆಯಲ್ಲಿ ಕಸ ಬಿದ್ದಿದ್ದರೆ, ಪಕ್ಕದ ಮನೆಗೆ ಎಸೆದು ಸುಮ್ಮನಾಗುವಂಥವರು! ಅದೃಷ್ಟವಶಾತ್ ನಾವು, ನಮ್ಮ ಮನೆಯವರು ಇಂಥ ದುರ್ಘಟನೆಗಳಿಗೆ ಈಡಾಗಿಲ್ಲ ಎಂದರಿಯದ ಇವರು, ಪರಿಸ್ಥಿತಿಯ ಸೂಕ್ಷ್ಮತೆ ಅರಿಯದೆ, ಯಾವುದಕ್ಕೂ ಬೆಂಬಲ ಕೊಡದವರು. ವೈಯಕ್ತಿಕ ಸಮಸ್ಯೆಗೂ, ಸಾಮಾಜಿಕ ಪಿಡುಗಿಗೂ ವ್ಯತ್ಯಾಸ ತಿಳಿಯದವರು ಇವರು! ನಾವು, ನಮ್ಮ ಮನೆ, ನಮ್ಮ ಮಕ್ಕಳು, ನಮ್ಮ ಮಕ್ಕಳನ್ನು ಸಂಸೃತಿ, ಸಂಸ್ಕಾರ ಎಂದು ಚೆಂದದಲ್ಲಿ ಬೆಳೆಸುತ್ತಿದ್ದೇವೆ ಎನ್ನುವ ಹುಂಬತನದಲ್ಲಿರುವವರು.   ಆದರೆ ಇದೇ ನಮ್ಮ ಮಕ್ಕಳು ಸಮಾಜಕ್ಕೆ ತೆರೆದುಕೊಂಡಾಗ ಇಂತಹ ಪ್ರಕರಣಗಳನ್ನು ಡೈಜೆಸ್ಟ್ ಮಾಡಿಕೊಳ್ಳುವುದಾದರೂ ಹೇಗೆ? ನಮ್ಮ ಮಕ್ಕಳಿಗೆ ನಾವು ಎಂತಹ ಕ್ರೂರ ಕೆಲಸ ಮಾಡಿದರೂ, ನಿನಗೇನು ಶಿಕ್ಷೆ ಆಗದು ಎಂಬುದನ್ನು ನಾವು ಈ ಮೂಲಕ ಹೇಳಿಕೊಡುತ್ತಿಲ್ಲವೇ? ನಾವು ಎಷ್ಟೇ ನಮ್ಮ ಮಕ್ಕಳನ್ನು ಹುಷಾರಾಗಿ ನೋಡಿಕೊಂಡರೂ, ನಮಗೆ ಅರಿವಿಲ್ಲದಂತೆ ನಮ್ಮ ಮಕ್ಕಳು ಸಮಾಜದಲ್ಲಿನ ಒಳಿತು ಕೆಡಕುಗಳತ್ತಾ ಆಕರ್ಷಿತರಾಗುವುದಿಲ್ಲವೇ? ನಮ್ಮಿಂದಲೇ ಸಮಾಜ ಅಲ್ಲವೇ? ಇದಾವುದನ್ನೂ ಯೋಚಿಸದೇ, ನೀನೇನೂ ಬೇಕಿದ್ರೂ ಮಾಡಿಕೋ?  ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಾ ತಮ್ಮ ಸ್ವಹಿತ, ತಮ್ಮ ಸ್ವಾರ್ಥ, ತಮ್ಮ ಏಳಿಗೆ, ಉದ್ದಾರ ನೋಡಿಕೊಳ್ಳುವವರು. ಇವರಿಗೆ ಇಂತಹ ಪ್ರಕರಣಗಳೂ ಯಾವುದೂ ಕೂಡ ಬಾದಿಸದು.

ಹಾಗಾದರೆ ನಾವು ಮಾಡಬೇಕಾದುದೇನು? ಪ್ರತಿಯೊಬ್ಬ ಮನುಷ್ಯನೂ ವೈಯಕ್ತಿಕ ಹಿತಾಸಕ್ತಿಯನ್ನು ಬಿಟ್ಟು, ಸಮಾಜಕ್ಕಾಗಿ, ತಮ್ಮ ಮುಂದಿನ ಪೀಳಿಗೆಗಾಗಿ, ಇಂತಹ ಪ್ರಕರಣಗಳಾದಾಗ ಒಗ್ಗಟ್ಟಿನಿಂದ ಒಮ್ಮನಸಿನಿಂದ ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಅಲ್ಲಿ ಅಂದೂ ರೇಪ್ ಆದಾಕೆಯನ್ನು ಬಸ್ಸಿನಿಂದ ಹೊರಗೆ ಎಸೆದಾಗ, ಯಾರೊಬ್ಬರೂ! ಆಕೆಯನ್ನು ರಕ್ಷಿಸಿಕೊಳ್ಳಲು ಅಂದರೆ, ಆಸ್ಪತ್ರೆಗೆ ಸೇರಿಸಲು ಬರಲಿಲ್ಲವೆಂದರೆ.....? ಎಷ್ಟು ನೋವಾಗಬಹುದು? ಹೇಳಿ, ನಮ್ಮನೆಯವರು ಈ ತರಹದ ಘಟನೆಗಳಲ್ಲಿ ಸಿಕ್ಕಿಕೊಂಡಾಗಲೇ ನಮಗೆ ಆ ನೋವಿನ ಅನುಭವ ಆಗಬೇಕೆ? ಅಷ್ಟು ಕ್ರೂರಿಗಳೇ ನಾವು? ವೋಟುದಾರರಿಂದ ಹಿಡಿದು ರಾಜಕೀಯ ಪಕ್ಷಗಳ ತನಕವೂ ಹಾಗೂ ಪೋಲೀಸ್ ವ್ಯವಸ್ಥೆಯಿಂದ ಹಿಡಿದು ಕೋರ್ಟುಗಳವರೆಗೂ, ಪ್ರತಿಯೊಬ್ಬರೂ ಸ್ವಾರ್ಥವನ್ನು ಮರೆತು, ಸ್ವಹಿತವನ್ನು ಬಿಟ್ಟು, ಯಾವುದೇ ಹಿಡನ್ ಅಜೆಂಡಾ ಇಲ್ಲದೆ ಕೆಲಸ ಮಾಡುವ ಅವಶ್ಯಕತೆ ಈಗ ಅತ್ಯಗತ್ಯ. 

ನಿಜವಾಗಿಯೂ ಜನರಿಗೆ ನ್ಯಾಯ ಒದಗಿಸಬೇಕೆಂಬ ಅರಿವಿದ್ದರೆ, ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯಕ್ರಮಗಳನ್ನು ನಿರೂಪಿಸಲಿ.  ಇಂತಹ ಘಟನೆಗಳು ನಡೆದಾಗ, ಆ ದಿವಸ ಮನರಂಜನಾ ಕಾರ್ಯಕ್ರಮಗಳನ್ನು ನಿಲ್ಲಿಸಿ, ‘ಸೆನ್ಸಿಬಲ್’ ಆಗಿ ಮಾತನಾಡುವವರನ್ನು, ನಿಜವಾದ ಕಾಳಜಿ ಇರುವವರನ್ನು ಕರೆಸಿ, ಚರ್ಚಿಸಲಿ. ಅದನ್ನು ಫಾಲೋ ಅಪ್ ಮಾಡಿ ತೀರ್ಪು ಸಿಗುವ ತನಕ ಹೋರಾಡಲಿ. ‘ನೊಂದವರಿಗೆ’ ಆ ಸಮಯದಲ್ಲಿ ಅವಶ್ಯವಾಗಿ ಬೇಕಾದಂಥ ಎಲ್ಲಾ ಸಹಾಯಗಳನ್ನು ಮಾಡಲಿ.  ಜನರನ್ನು ಒಗ್ಗೂಡಿಸಲಿ, ಧನಸಹಾಯದಿಂದ ಹಿಡಿದು ಮಾನಸಿಕವಾಗಿ ನಾವಿದ್ದೇವೆ ಎಂಬ ಭರವಸೆಯನ್ನು ಅವರಲ್ಲಿ ಉಂಟು ಮಾಡಲಿ, ನಾನು ಒಂಟಿಯಲ್ಲ! ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆಯೋ, ಇಲ್ಲವೋ, ನನ್ನೊಂದಿಗೆ ಇಡೀ ಸಮಾಜ ನಿಂತಿದೆ ಎಂಬ ನಂಬಿಕೆ ಇಂತಹ ಪ್ರಕರಣಗಳಲ್ಲಿ ನೊಂದವರಿಗೆ ಸಿಕ್ಕಿಬಿಟ್ಟರೆ, ಅವರಿಗಾಗುವ ಸಮಾಧಾನ, ಅವರಿಗೆ ಮುನ್ನುಗ್ಗಲು ಸಿಗುವ ಧೈರ್ಯ, ಇಡೀ ಸಮಾಜಕ್ಕೆ ಸಿಕ್ಕ ಜಯ. ಅಲ್ಲವೇ? 

ಅದರೊಟ್ಟಿಗೆ ಪದೇ, ಪದೇ ಇಂತಹ ಪ್ರಕರಣಗಳು ಜರುಗುತ್ತಿರುವುದು ಏಕೆ? ಎಂಬುದನ್ನು ಕೂಲಂಕುಷವಾಗಿ ಪರೀಶೀಲಿಸಬೇಕಾದ ಅಗತ್ಯವಿದೆ.  ಇಂತಹ ಕ್ರೂರ, ಆಕ್ರಮಣಕಾರಿ ಮನಸ್ಥಿತಿ ಉಂಟಾಗಲು ಕಾರಣಗಳೇನು?  ಹೆಣ್ಣನ್ನು ತುಳಿಯುವುದೇ ಮೂಲ ಉದ್ದೇಶವೇ? ಅಪರಾಧಿಗಳು ಚಿಕ್ಕವರಿದ್ದಾಗ ಏನಾದರೂ ಶೋಷಣೆಗೆ ಒಳಗಾಗಿದ್ದಾರೆಯೇ?  ಅಥವಾ ಬೇರೆ ಇನ್ನೇನಾದರೂ ಕಾರಣಗಳಿವೆಯೇ ಎಂಬುದನ್ನು ತಿಳಿದುಕೊಂಡರೆ, ಮೂಲದಲ್ಲಿಯೇ ತಿದ್ದಲು ಆಗಬಹುದೇನೋ? ಒಟ್ಟಿನಲ್ಲಿ ಸಂಘಜೀವಿ ಮನುಷ್ಯ ನಾನಾ ಕಾರಣಗಳಿಂದ ಒಂಟಿಯಾಗುತ್ತಿದ್ದಾನೆ!  ಹಣಕ್ಕಾಗಿ, ಐಷಾರಾಮದ ಜೀವನಕ್ಕಾಗಿ ಸ್ವಾರ್ಥಿಯಾಗುತ್ತಿದ್ದಾನೆ. ನಂಬಿಕೆ, ಪ್ರೀತಿ, ವಿಶ್ವಾಸ, ಸಂಘಟನೆ ಎಲ್ಲವೂ ಅರ್ಥ ಕಳೆದುಕೊಳ್ಳುತ್ತಿದೆ. ಕಾನೂನು ಸುವ್ಯವಸ್ಥೆಯಿಂದ ಹಿಡಿದು ಪ್ರತಿಯೊಂದು ಸಿಸ್ಟಮ್ ಗಳಲ್ಲಿಯೂ ನಿಷ್ಟಾವಂತ ಜನರು ಕಡಿಮೆಯಾಗುತ್ತಿದ್ದಾರೆ. ಹುಳುಕುಗಳೇ ರಾರಾಜಿಸುತ್ತಿದ್ದಾವೆ. ಒಂದಷ್ಟು ಹಣ ಚೆಲ್ಲಿದರೆ ಸಾಕು! ಪಾರಾಗಬಹುದು ಎನ್ನುವ ಮನೋಭಾವ, ಎಂತಹ ಕ್ರೂರ ಕೆಲಸಕ್ಕೂ ಅಡಿಯಿಡುವಂತೆ ಮಾಡುತ್ತಿದೆ. ನಮ್ಮ ಮಕ್ಕಳಿಗೆ ಸಮಾಜದಲ್ಲಿ ಇಂಥ ವಾತಾವರಣ ಇದ್ದರೆ ಅವರೇನು ಕಲಿಯುತ್ತಾರೆ?  ಎಲ್ಲರೂ ಯೋಚಿಸಬೇಕಾದ ವಿಷಯ. ಹಾ! ಒಮ್ಮತದಿಂದ, ಒಗ್ಗಟ್ಟಿನಿಂದ ಗಂಡು, ಹೆಣ್ಣು, ಬಡವ ಬಲ್ಲಿದ ಭೇಧವಿಲ್ಲದೇ ಮಾಡಬೇಕಾದ ಕೆಲಸ.