Wednesday, May 20, 2020

ಮೈಕೋ ಬಾಷ್

ಮೈಕೋ ಬಾಷ್ ನಲ್ಲಿ ೯೦ ರ ದಶಕದಲ್ಲಿ ಕಮರ್ಷಿಯಲ್ ಡಿಪ್ಲೋಮಾ ಕೋರ್ಸ್ ಮಾಡಿದವರನ್ನು ಒಂದು ವರ್ಷದ ಟ್ರೇನಿಂಗ್  ಎಂದು ಸೇರಿಸಿಕೊಳ್ಳುತ್ತಿದ್ದರು.‌ ಆ ಸಮಯದಲ್ಲಿ ಚೆನ್ನಾಗಿ ಕೆಲಸ ಮಾಡಿದವರಿಗೆ ಗ್ರೇಡಿಂಗ್ ಕೊಟ್ಟು, ಅವಕಾಶವಿದ್ದರೆ permanent ಕೆಲಸ ಕೂಡ ಕೊಡುತ್ತಿದ್ದರು. ಸರ್ಕಾರಿ ಸಂಬಳಕ್ಕಿಂತ ಎರಡು ಪಟ್ಟು ಜಾಸ್ತಿ ಸಂಬಳ, ತಿಂಡಿ, ಊಟದ ವ್ಯವಸ್ಥೆ, ಹೋಗಲು ಬರಲು ಬಸ್, ಇನ್ನೇನು ಬೇಕು? ಈ ಟ್ರೇನಿಂಗ್ ಗಾಗಿ ಸೇರುವವರಲ್ಲಿ ಹೆಚ್ಚಿನವರು ತುಂಬಾ ಬಡವರಿರುತ್ತಿದ್ದರು. ಡಿಪ್ಲೋಮಾ ಕೋರ್ಸ್ ಮಾಡಿ, ಟ್ರೇನಿಂಗ್ ಗೆ ಸೇರುವವರಿಗೆ ಹೆಚ್ಚಂದ್ರೆ ೧೮ ವರ್ಷವಷ್ಟೆ ಆಗಿರುತ್ತಿತ್ತು. ಇವರನ್ನೆಲ್ಲಾ ನೋಡಿಕೊಳ್ಳೋಕೆ ಟ್ರೇನಿಂಗ್ ಸೆಂಟರ್ ಇತ್ತು. ಅದರ ಹೆಸರೇ MVC (MICO Vocational Centre)

ಪ್ರತಿ ವರ್ಷ ಸುಮಾರು ೨೦ ಜನರು ಆಯ್ದ ಕಾಲೇಜುಗಳಿಂದ ಮೈಕೋದಲ್ಲಿ ಪರೀಕ್ಷೆ ಬರೆದು ಸೆಲೆಕ್ಟ್ ಆಗಿ ಈ ಟ್ರೇನಿಂಗ್ ಸೆಂಟರ್ ಗೆ ಸೇರುತ್ತಿದ್ದರು. ಇದರ ಪ್ರಯೋಜನ ಪಡೆದು, ಜೀವನದಲ್ಲಿ ಮುಂದೆ ಬಂದವರಲ್ಲಿ ನಾನು ಕೂಡ ಒಬ್ಬಳು. ನಮಗೆಲ್ಲಾ ಪ್ರತಿ ತಿಂಗಳಿಗೊಮ್ಮೆ ಬೇರೆ ಬೇರೆ ಕೆಲಸ ಕಲಿಯಲು , ಬೇರೆ ಬೇರೆ ಡಿಪಾರ್ಟ್ಮೆಂಟ್ ಗೆ shuffle ಮಾಡಿ ಹಾಕುತ್ತಿದ್ದರು. ಅಲ್ಲಿ ಚೆನ್ನಾಗಿ ಕೆಲಸ ಮಾಡಿ, ಆಯಾ Incharge ಗಳ ಬಳಿಯಿಂದ ಒಳ್ಳೆಯ ಗ್ರೇಡಿಂಗ್ ತೊಗೊಳ್ಳೋದು ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ! ಇವನ್ನೆಲ್ಲಾ ನೋಡಿಕೊಳ್ಳೋಕೆ ಅಂತಾ ನಮಗೆಲ್ಲಾ ಒಬ್ಬರು ಮೆಂಟರ್ ಕೂಡ ಇದ್ದರು. ನಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಅವರು ಅಲ್ಲಿಯ  Technical Libraryಯನ್ನು ಕೂಡ ನೋಡಿಕೊಳ್ಳುತ್ತಿದ್ದರು.

ನಾವು ಯಾವುದೇ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿರಲಿ, ಅಲ್ಲಿ ಯಾವುದೇ ಸಮಸ್ಯೆಯಾದರೂ ನಾವು ಅಪ್ರೋಚ್ ಮಾಡ್ತಾ ಇದ್ದದ್ದು ಸತ್ಯನಾರಾಯಣ ಸರ್ (ನಮ್ಮ ಮೆಂಟರ್) ಅವರನ್ನೇ. ಎಲ್ಲರೂ ಅವರನ್ನು ಸತ್ಯ ಸರ್ ಅಂತಾ ಕರೀತಿದ್ದರೂ, ನಾನು ಮಾತ್ರ ಸತ್ಯನಾರಾಯಣ ಸರ್ ಅಂತಾ ಪೂರ್ತಿ ಹೆಸರಿನಿಂದ ಕರೀತಿದ್ದೆ. ಯಾಕಂತಾ ಈಗಲೂ ಗೊತ್ತಿಲ್ಲ. ನನಗೆ ಅವರು ನನ್ನ ಮೆಂಟರ್ ಅನ್ನುವುದಕ್ಕಿಂತ ಅವರು ಟೆಕ್ನಿಕಲ್ ಲೈಬ್ರರಿ ನೋಡಿಕೊಳ್ಳುತ್ತಿದ್ದುದು ಅತ್ಯಂತ ಆಕರ್ಷಕ ವಿಷಯವಾಗಿತ್ತು. ಅಲ್ಲಿದ್ದ ಪುಸ್ತಕಗಳಂತೂ ನನ್ನನ್ನು ಯಾವಾಗಲೂ ಸೆಳೆಯುತ್ತಿತ್ತು.

ನನ್ನ ಓದುವ ಹುಚ್ಚು ತಿಳಿದ ನಂತರ, "ಯಾವಾಗ ಬೇಕಿದ್ದರೂ ಬಾ" ಅಂತಾ ಹೇಳಿದ್ದರು‌. ನನಗೆ ಕನ್ನಡ ಪುಸ್ತಕಗಳನ್ನು ಓದುವಷ್ಟು ಸಲೀಸಾಗಿ ಇಂಗ್ಲೀಷ್ ಓದೋಕಾಗಲ್ಲ (ಈಗಲೂ ಅಷ್ಟೆ) ಆದರೆ ಅಲ್ಲಿದ್ದದ್ದು ಬರೀ ಇಂಗ್ಲೀಷ್ ಪುಸ್ತಕಗಳೇ. ಇದು ಓದು, ಅದು ಓದು ಅಂತಾ ಅಲ್ಲಿದ್ದ ಅನೇಕ ಸೈಕಾಲಜಿ ಸ್ಟಡೀಸ್ ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ನನಗೆ Autobiography ಪುಸ್ತಕಗಳ ಹುಚ್ಚು ಹಿಡಿಸಿದವರಂತೂ ಅವರೇ. ನಾವಿಬ್ಬರೂ ಗಂಟೆಗಟ್ಟಲೆ ಎಷ್ಟೋ ಜನರ autobiography ಬಗ್ಗೆ ಚರ್ಚೆ ನಡೆಸಿದ್ದೇವೆ.‌ ಮನುಷ್ಯ ಸ್ವಭಾವದ ಬಗ್ಗೆ, ಈ ಮೈಂಡ್ ಗೇಮ್ ಬಗ್ಗೆ, ಯಾವ ಸಂದರ್ಭಗಳಲ್ಲಿ ಮನುಷ್ಯರು ಹೇಗೆ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಎಲ್ಲಾ ತುಂಬಾ ಹೊತ್ತು ಮಾತಾಡುತ್ತಿದ್ದೆವು.

ಒಂದು ದಿವಸ ಬೆಳಿಗ್ಗೆ ಅಲ್ಲಿ ಕುಳಿತಿದ್ದಾಗ,ಟ್ರೈನಿಯೊಬ್ಬಳು ಯಾವುದೋ ಕೆಲಸಕ್ಕೆ ಒಳಗೆ ಬಂದಳು. ಇವರು "ಹೇ, ಇವತ್ತು ತುಂಬಾ ಚಂದ ಕಾಣ್ತಿದ್ದೀಯಾ" ಅಂತಾ ಹೇಳಿದ್ರು. ಅವಳು ತುಂಬಾ ಖುಷಿಯಾಗಿ ವಾಪಾಸ್ಸು ಹೋದಳು. ನಾನು "ಅವಳು ಇವತ್ತು ಅಷ್ಟೇನೂ ಚೆನ್ನಾಗಿ ಕಾಣ್ತಿರಲಿಲ್ಲ, ಸುಮ್ನೆ ಹತ್ತಿಸಿದ್ದು ಯಾಕೆ?" ಅಂತಾ ಕೇಳಿದ್ದಕ್ಕೆ ಅವರು ಹೇಳಿದ ಮಾತುಗಳು ಇವತ್ತಿಗೂ ನೆನಪಿನಲ್ಲಿದೆ. "ನೋಡು ರೂಪ್ಸ್, ಅಲ್ಲಿ ಅವಳು ಚಂದ ಕಾಣಿಸ್ತಿದ್ದಳೋ, ಇಲ್ವೋ ಅದಲ್ಲ ಮುಖ್ಯ, ನನ್ನ ಒಂದು ಮಾತಿನಿಂದ ಇವತ್ತೆಲ್ಲಾ ಅವಳು ಖುಷಿಯಾಗಿರ್ತಾಳೆ, ಆ ಖುಷಿ ಅವಳ ಮುಖದಲ್ಲಿ ಪ್ರತಿಫಲಿಸುತ್ತದೆ, ಅದು ಕೆಲಸದಲ್ಲಿ ಕೂಡ ಕಾಣಿಸುತ್ತದೆ. ಅದು " ಚಂದ" ಅಲ್ವಾ? ಅದೇ ನೀನು ಯಾರಿಗಾದರೂ ಚೆನ್ನಾಗಿರುವವರಿಗೆ "ಯಾಕೆ ಹೀಗಿದ್ದೀರಿ? ಹುಷಾರಿಲ್ವಾ? ಅಂತಾ ಕೇಳಿ ನೋಡು. ಸಂಜೆ ಆಗುವ ಹೊತ್ತಿಗೆ ಆತನಿಗೆ ಜ್ವರ ನಿಜವಾಗಿಯೂ ಬಂದಿಲ್ಲ ಅಂದ್ರೆ ಆಮೇಲೆ ಮಾತಾಡು" ಅಂದಿದ್ರು. ಹೌದಲ್ವಾ? ಅನ್ನಿಸಿತ್ತು.

ಈ ತರಹದ ಎಷ್ಟೋ ಸಣ್ಣ ಸಣ್ಣ ಪಾಸಿಟಿವ್ ವಿಷಯಗಳನ್ನು ಅಂದ್ರೆ ಎಷ್ಟೇ ಕಷ್ಟವಿದ್ದರೂ ನಗ್ತಾ ನಗ್ತಾ ಇರೋದು, ಪಾಸಿಟಿವ್ ಆಗಿ ಯೋಚಿಸೋದು, ಹೀಗೆ.....  ನನ್ನ ಜೀವನದಲ್ಲಿ ಅಳವಡಿಸಿಕೊಂಡದ್ದು ನಾನು ಅವರಿಂದಾಗಿಯೇ.  ಮೊನ್ನೆ ನಾನು‌ ಫೇಸ್ಬುಕ್ ನಲ್ಲಿ ಡಿಪಿ ಬದಲಾಯಿಸಿದಾಗ, ಯಾರೋ ಫೇಸ್ಬುಕ್ ಫ್ರೆಂಡ್ ಒಬ್ಬರೂ ಹೇಳಿದ್ರು. "ನೀವು ಎಲ್ಲಾ ಫೋಟೋಗಳಲ್ಲಿ ನಗ್ತಾನೇ ಇರ್ತೀರಾ, ನಿಮ್ಮ ಜೊತೆಯಲ್ಲಿದ್ದೋರು ಸೀರಿಯಸ್ ಆಗಿದ್ರೂ ಕೂಡ" ಅಂತಾ. ನಗು ಮುಖ ಅಂದ್ರೆ ನಂಗಿಷ್ಟ. ಯಾರಿಗೆ ಆಗಲಿ ನಾನು ವಿಷ್ ಮಾಡೋದು ಕೂಡ "ಸದಾ ಖುಷಿಯಿಂದಿರಿ" ಅಂತಾನೇ ಎಂದು ಉತ್ತರಿಸಿದ್ದೆ. ಅದು ಕೂಡ ಸತ್ಯನಾರಾಯಣ ಸರ್ ಮತ್ತು ನನ್ನ ಕಾಲೇಜಿನ ರವೀಂದ್ರ ಸರ್  ಹೇಳಿಕೊಟ್ಟ ಪಾಠವೇ ಅದು.

ಮೈಕೋ ಬಿಟ್ಟೆ, ಜೀವನದ ಹಾದಿಯೇ ಬದಲಾಯಿತು, ನಾಲ್ಕೈದು ವರ್ಷಗಳ ಹಿಂದೆ ಸತ್ಯನಾರಾಯಣ ಸರ್ ನ ಯಾರದೋ ಮದುವೆಯಲ್ಲಿ ಭೇಟಿಯಾಗಿದ್ದೆ. ನಾನು ಮನೆ ಕಟ್ಟಿರುವ ಕಥೆ ಕೇಳಿ ಸಂತೋಷಪಟ್ಟಿದ್ದರು. ನಮ್ಮ ಮನೆಗೆ ನೀವು ಬರಲೇಬೇಕು ಅಂತಾ ಫೋರ್ಸ್ ಮಾಡಿದ್ದೆ. ಹು ಅಂದಿದ್ರು. ನನ್ನ ಈ ಅಭ್ಯುದಯಕ್ಕೆ ನೀವು ಕೂಡ ಬಹು ಮುಖ್ಯ ಪಾತ್ರ ವಹಿಸಿದ್ದೀರಿ ಅಂದಾಗ ಅವರ ಕಣ್ಣಲ್ಲಿ ಕಂಡ ಮಿಂಚು ನನಗಿನ್ನೂ ನೆನಪಿನಲ್ಲಿದೆ. ಆದರೆ ಅವರ ಫೋನ್ ನಂಬರ್ ಕಳೆದುಹೋಯಿತು. ಮತ್ತೆ ನಾನು ಭೇಟಿಯಾಗಲೂ ಇಲ್ಲಾ. ಇವತ್ತು ಅವರು ಹೃದಯಾಘಾತದಿಂದ ತೀರಿಕೊಂಡರಂತೆ! ಅವರಿದ್ದಾಗಲೇ ನಾನಿದನ್ನೆಲ್ಲಾ ಬರೀಬೇಕಿತ್ತು! :( ಯಾಕೋ ಗೊತ್ತಿಲ್ಲ, ಬರೆಯಲಿಲ್ಲ! ಇವತ್ತು ಈ ಕ್ಷಣ ಅವರಿಗೆ ಈ ಮೂಲಕ ಶ್ರದ್ಧಾಂಜಲಿ ಸಲ್ಲಿಸಬೇಕಂತ ಅನ್ನಿಸಿತು.

ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಅಂದರೆ ನಾನು ಹೋಗಿ ನೋಡೋಕಾಗಲ್ಲ ಅಂತಾ ಗೆಳೆಯನೊಬ್ಬ ವಿಡಿಯೋ ಕಾಲ್ ಮಾಡಿ, ಅವರ ಮುಖ ತೋರಿಸಿದ! ಅವರು ಬದುಕಿದ್ದಾಗ ಹೋಗಿ ಬರಬೇಕಿತ್ತು! ತುಂಬಾ ಮಾತಾಡಬೇಕಿತ್ತು ಅನ್ನೋ ಕೊರಗು ಶಾಶ್ವತವಾಗಿ ಉಳಿದುಬಿಡ್ತು! :(

Tuesday, May 5, 2020

ಥಪ್ಪಡ್ - ಸ್ತ್ರೀವಾದವೇ? ಸಂಬಂಧಗಳ ದ್ವಂದ್ವವೇ?



ಮೂವೀಗಳಲ್ಲಿ ಸ್ತ್ರೀವಾದ / Feminism ಅಂತಂದ್ರೆ ನನಗೆ ಯಾವಾಗಲೂ ತಕ್ಷಣಕ್ಕೆ ನೆನಪಾಗೋದು ಎರಡು ಚಿತ್ರಗಳು. ಮೀನಾಕ್ಷಿ ಶೇಷಾದ್ರಿ ನಟಿಸಿರುವ ದಾಮಿನಿ ಮತ್ತು ಸ್ಮಿತಾ ಪಾಟೀಲ್ ನಟಿಸಿರುವ ಭೂಮಿಕಾ. ಪುಸ್ತಕ ಅಂದ್ರೆ ನೆನಪಾಗೋದು ಭೈರಪ್ಪನವರ ಕಾದಂಬರಿ `ಕವಲು'. ಮುಗ್ಧ ಮನಸ್ಸಿನ ಹೆಣ್ಣುಮಗಳೊಬ್ಬಳು ತನ್ನ ಮನೆಯಲ್ಲಿಯೇ ತನ್ನ ಮೈದುನ ಮತ್ತು ಆತನ ಗೆಳೆಯರು ಕೆಲಸದವಳ ಮೇಲೆ ಮಾಡಿದ ಅತ್ಯಾಚಾರದ ವಿರುದ್ಧ ಹೋರಾಡುವ ಕಥೆ `ದಾಮಿನಿ', ಎಷ್ಟೆಲ್ಲಾ ಕಷ್ಟ ಅನುಭವಿಸಬೇಕಾಗಿ ಬಂದರೂ ಕೂಡ, ತಾನು ಸುಳ್ಳು ಹೇಳೋಲ್ಲ ಅಂತಾ ಗಟ್ಟಿಯಾಗಿ ನಿಲ್ತಾಳೆ ಅವಳು. ನನಗೆ `ದಾಮಿನಿ' ಯ ನಾಯಕಿ ನಿಜವಾದ ಫೆಮಿನಿಸ್ಟ್ ಅಂತನ್ನಿಸ್ತಾಳೆ.

ಮತ್ತೊಂದು ಚಿತ್ರ ಭೂಮಿಕಾ - ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗಲೆಲ್ಲಾ ಬೇರೊಂದು ಗಂಡನ್ನು ಮದುವೆಯಾಗುತ್ತಾ ಹೋಗುತ್ತಾಳೆ. ಈ ಚಿತ್ರದ ಕ್ಲೈಮಾಕ್ಸ್ ಡೈಲಾಗ್ ಮಾತ್ರ ಮನಸ್ಸಿಗೆ ಹಿಂಸೆ ಮಾಡಿಬಿಡುತ್ತೆ. . ಆಕೆ ಮನೆ ಬಿಟ್ಟು ಹೋಗುವಾಗ, ಆಕೆಯ ಗಂಡನ ಮೊದಲ ಹೆಂಡತಿ ಇವಳಿಗೆ ಬುದ್ಧಿ ಹೇಳ್ತಾಳೆ "ಮನೆ ಬಿಟ್ಟು ಹೋಗಬೇಡ, ಹಾಸಿಗೆಗಳು ಬದಲಾಗಬಹುದು, ಅಡುಗೆ ಮನೆಗಳು ಬದಲಾಗಬಹುದು, ಗಂಡಸರ ಮುಖವಾಡಗಳು ಬದಲಾಗಬಹುದು, ಆದರೆ ಗಂಡಲ್ಲ"! ಅಂತಾ. ಆದರೂ ಇವಳು ಮನೆ ಬಿಟ್ಟು ಹೊರ ಬರ್ತಾಳೆ. ಈ ಚಿತ್ರದ ಬಗ್ಗೆ ಇನ್ನೂ ಡಿಟೇಲಾಗಿ ಬರೀಬೇಕು.. ಇನ್ನೊಮ್ಮೆ ಬರೀತೀನಿ.

ಇನ್ನೂ ಭೈರಪ್ಪನವರ `ಕವಲು' ಕಾದಂಬರಿಯಲ್ಲಿ ರಚಿತವಾಗಿದ್ದ ಒಂದಷ್ಟು ಸ್ತ್ರೀ ವಾದಿಗಳ ಪಾತ್ರಗಳೊಂದಿಗೆ ತಮ್ಮನ್ನು ತಾವು ಹೋಲಿಸಿ ನೋಡಿ ಬಹಳಷ್ಟು ಕಾದಂಬರಿಗಾರ್ತಿಯರು, ಭಾಷಣಗಾರ್ತಿಯರು, ಭೈರಪ್ಪನವರ ವಿರುದ್ಧ ತಿರುಗಿಬಿದ್ದಿದ್ದರು. ತಮ್ಮನ್ನು ತಾವೇ ಸ್ತ್ರೀವಾದಿಗಳೆಂದು ಕರೆದುಕೊಳ್ಳುವ, ಈ ನನಗೆ ಅದರಲ್ಲಿಯ ಮುಖ್ಯ ಪಾತ್ರವಾಗಿದ್ದ ವೈಜಯಂತಿಯೇ ಫೆಮಿನಿಸ್ಟ್ ಅಂತನ್ನಿಸ್ತಾಳೆ ಹೊರತು ಉಳಿದೆಲ್ಲಾ ಪಾತ್ರಗಳು psedo feminists ರೀತಿ ಕಾಣುತ್ತದೆ. ಈ ಕಾದಂಬರಿ ಬಗ್ಗೆ ನಾನು ಈಗಾಗಲೇ ಬರೆದಿದ್ದೀನಿ.

ಥಪ್ಪಡ್ ಚಲನಚಿತ್ರ ನೋಡ್ತಾ, ನೋಡ್ತಾ ಇವೆಲ್ಲಾ ನೆನಪಾಗ್ತಾ ಹೋಯಿತು. ಒಂದೇ ಒಂದು ಥಪ್ಪಡ್ ತಾನೇ? ಅಡ್ಜಸ್ಟ್ ಮಾಡಿಕೊಂಡು ಹೋಗು, ಅಂತಾ ಎಲ್ಲಾ ಹೆಣ್ಣಿನ ಪಾತ್ರಗಳು ಒತ್ತಾಯಿಸುವುದು ನಾಯಕಿಯನ್ನು ಹೊರತು ಯಾರೂ ಕೂಡ ತಪ್ಪು ಮಾಡಿದ ಗಂಡನ್ನು ಎಚ್ಚರಿಸುವ ಕೆಲಸ ಮಾಡುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಪ್ರಗತಿಪರ ಕ್ರಾಂತಿಕಾರಿಯಾದ ನಾಯಕಿಯ ತಂದೆ ಕೂಡ ಮೌನವಾಗಿ ನಾಯಕಿಯ ಗಂಡನನ್ನೇ ಸಪೋರ್ಟ್ ಮಾಡ್ತಾನೆ. ತನ್ನದೇ ನಿರ್ಧಾರ ಮನೆಯಲ್ಲಿ ನಡೆಯಬೇಕು ಎಂದು ಹಠ ಮಾಡುವ ಅಪ್ಪನೊಬ್ಬ, ಆತನ ವಿರುದ್ಧ ಸಿಟ್ಟಿಗೆದ್ದು, ಮನೆಯಿಂದ ಹೊರನಡೆಯುವ ಮಗನೊಟ್ಟಿಗೆ, ತಾನು ಕೂಡ ಮಗನೊಟ್ಟಿಗೆ ಇರ್ತೇನೆ ಎಂದು ಹೊರನಡೆಯುವ ಅಮ್ಮ! ಕಡೆಗೆ ಅದೇ ಮಗ, ಥೇಟ್ ತನ್ನ ಗಂಡನಂತೆಯೇ ಆತನ ಹೆಂಡತಿಯೊಂದಿಗೆ ನಡೆದುಕೊಂಡಾಗ, ಅಮ್ಮ ಒದ್ದಾಡೋದು, ತಾನು ಮಗನನ್ನು ಸರಿಯಾಗಿ ಬೆಳೆಸಲಿಲ್ಲವೇನೋ? ಎಂಬ ಗಿಲ್ಟ್ ಅನುಭವಿಸೋದು, ಇಂತಹ `ಇಗೋ' ಗಳೆಲ್ಲವೂ ಬಹುಶಃ ಜೀನ್ ಗಳಲ್ಲಿರುತ್ತದೆಯೇನೋ? ಎಂಬ ಭಾವ ಮೂಡಿಸಿಬಿಡುತ್ತದೆ.

ಚಿತ್ರದ ಪ್ರತಿ ಪಾತ್ರಗಳು ದ್ವಂದತೆಯಿಂದ ತುಂಬಿ ತುಳುಕಾಡುತ್ತಿವೆ. ಒಂದೇ ಏಟು, ಆದರೆ ಆ ಏಟಿನಿಂದ ಎಷ್ಟೊಂದು ಜನರ ಮನಸ್ಥಿತಿಗಳ ಅನಾವರಣವಾಗಿಬಿಡುತ್ತದೆ. ಪ್ರತ್ಯಕ್ಷವಾಗಿ ತೋರಿಸುವ ಒಂದು ಏಟು, ಪ್ರತಿಯೊಂದು ಪಾತ್ರಗಳಿಗೂ ಪರೋಕ್ಷವಾಗಿ ಏಟು ಕೊಡುತ್ತಾ, ಅವರನ್ನು ಎಚ್ಚರಿಸುತ್ತಾ ಹೋಗುತ್ತದೆ. ಬಹಳಷ್ಟು ಅಪರಾಧಗಳು ನಡೆಯೋದು ಕ್ಷಣ ಮಾತ್ರದಲ್ಲಿಯೇ. ಹಾಗಂತಾ ಅದನ್ನು ಒಪ್ಪಿಕೊಂಡು ಬಿಡಲು ಸಾಧ್ಯವೇ?

ಸ್ತ್ರೀಯರ ಪರ ಕೋರ್ಟಿನಲ್ಲಿ ಹೋರಾಡಿ, ಕೇಸ್ ಗಳನ್ನು ಗೆದ್ದು, ಪ್ರಸಿದ್ಧಿ ಪಡೆದಿರುವ ಸ್ತ್ರೀ ವಾದಿ ವಕೀಲೆ ಸ್ವತಃ ತನ್ನ ಮನೆಯಲ್ಲಿ ಶೋಷಿತೆ! ಆದರೆ ಆಕೆ ತನ್ನ ಸಂಕಟವನ್ನು, ತನ್ನ ಒಂಟಿತನವನ್ನು ಮರೆಮಾಚಲು ಉಪಯೋಗಿಸುವುದು ಮತ್ತೊಬ್ಬ ಅಮಾಯಕ ಹುಡುಗನನ್ನು! ಕಡೆಗೆ ಆ ಹುಡುಗನಿಗೆ ಏನನ್ನಿಸಬಹುದು ಎಂದೂ ಕೂಡ ಯೋಚಿಸದೇ, ಅವನನ್ನು ಒಂಟಿಯಾಗಿ ಬಿಟ್ಟು ಹೊರಟುಬಿಡುವುದಿದೆಯಲ್ವಾ? ಅದು ತುಂಬಾ ಹಿಂಸೆ ಮಾಡಿಬಿಡುತ್ತದೆ. ತನ್ನ ಜೀವನದಲ್ಲಿ ಮುಂದಕ್ಕೆ ಒಳ್ಳೆಯ ಗಂಡು ಸಿಗದಿದ್ದರೆ ಎಂದು ಒಂಟಿಯಾಗಿರಲು ನಿರ್ಧರಿಸುವ ವಿಧವೆಯ ಮನಸ್ಥಿತಿ ಅಷ್ಟೊಂದು ಕಾಡದಿದ್ದರೂ, ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿರುವ ತನ್ನ ಮಗಳಿಗೆ ಆ ಗಂಡು ಒಳ್ಳೆಯವನು ಎಂದು ನಿರ್ಧರಿಸುವ ಆಕೆಯ ಮನಸ್ಥಿತಿ ಆಶ್ಚರ್ಯವೆನಿಸುತ್ತದೆ!

ತನ್ನ ಹೆಂಡತಿಗೆ ತಾನು ಯಾವತ್ತೂ ಬೇರೆ ಗಂಡಸರಂತೆ ಹೊಡೆದು, ಬಡಿದು ಮಾಡಿಲ್ಲ, ಆಕೆಗೆ ಸ್ವಾತಂತ್ರ್ಯ ಕೊಟ್ಟಿದ್ದೇನೆ ಎಂದು ಬೀಗುವ ಪ್ರಗತಿಪರ ಕ್ರಾಂತಿಕಾರಿ ಗಂಡನೊಬ್ಬ! ಆದರೆ ನೀನು ಹೊಡೆದು ಬಡಿದು ಮಾಡಿಲ್ಲದಿರಬಹುದು, ಆದರೆ ಅದನ್ನೇ ನೀನು ನನಗೆ ನೀಡಿರುವ ಸ್ವಾತಂತ್ರ್ಯ ಎಂದುಕೊಳ್ಳಬೇಡ, ನಾನು ಈ ಸಂಸಾರ ನಡೆಯಲು ಬಹಳಷ್ಟು ಕಾಂಪ್ರೊಮೈಸ್ ಮಾಡಿಕೊಂಡಿದ್ದೇನೆ ಎಂದು ತಣ್ಣಗೆ ಕಪಾಳ ಮೋಕ್ಷ ಮಾಡುವ ಆತನ ಹೆಂಡತಿ! ಅವನು ತನ್ನ ಹೆಂಡತಿಯ ಅಂತರಾಳ ತಿಳಿದು, ಕಳೆದು ಹೋದ ಕಾಲದಲ್ಲಿ ಆಕೆಗಿದ್ದ ಆಸೆಯನ್ನು ಈ ಕಾಲದಲ್ಲಿ ಪೂರೈಸಲು ಪ್ರಯತ್ನ ಪಟ್ಟರೆ, ಆತನ ಹೆಂಡತಿಗೆ ಅದರಿಂದ ಖುಷಿಯಾಗಬಹುದೇ? ಕಾಲ ಮಿಂಚಿಹೋದ ಮೇಲೆ, ಬದಲಾದರೇನು ಪ್ರಯೋಜನ? ಎಂದೆನ್ನಿಸುವುದಿಲ್ಲವೇ?

ಇನ್ನೂ ನಾಯಕಿಯ ಪಾತ್ರ ಅತ್ಯಂತ ಕ್ಲಾರಿಟಿಯುಳ್ಳದ್ದು. ಆಕೆಯನ್ನು ಯಾರೂ ಬಲವಂತ ಮಾಡಿರದಿದ್ದರೂ, ತಾನಾಗಿಯೇ ಹೌಸ್ ವೈಫ್ ಆಗಿರಲು ಒಪ್ಪಿಕೊಂಡಿರುವುದು, ಕಡೆಗೆ ಎಲ್ಲರೂ ಬಲವಂತ ಮಾಡಿದರೂ, ಹೌಸ್ ವೈಫ್ ಆಗಿರಲು ಒಪ್ಪಿಕೊಳದಿರುವುದು! ಸಿಂಪಲ್. ಒಂದೇ ಏಟಾಗಿರಬಹುದು, ಆದರೆ ಅವನು ಹೊಡೆಯಬಾರದು. ನಾನು ಕಾಂಪ್ರೊಮೈಸ್ ಮಾಡಿಕೊಳ್ಳೋಲ್ಲ, ಯಾಕೆ ಮಾಡಿಕೊಳ್ಳಬೇಕು? ಅವನು ತನ್ನ ಕೆಲಸವನ್ನು ಪ್ರೀತಿಸುತ್ತಿದ್ದ, ನಾನು ನನ್ನ ಕೆಲಸವನ್ನು. ನನ್ನ ಕೆಲಸ್ಸಕ್ಕೆ ಗೌರವ ಸಿಗದಿದ್ದ ಮೇಲೆ, ಖುಷಿಯಾಗಿರುವಂತೆ ನಟಿಸುತ್ತಾ ನನ್ನ ಕೈಲಿ ಅಲ್ಲಿರೋಕೆ ಸಾಧ್ಯವಿಲ್ಲ ಅಂತಾ ಆಕೆ ಬಿಡಿಸಿ ಹೇಳುವಾಗ, ಹೌದಲ್ವಾ? ಅಂತಾನೇ ಅನ್ನಿಸೋದು. ಹೊರಗಿನವರೊಂದಿಗೆ ಅರೆ ಕ್ಷಣ ಭೇಟಿ ಮಾಡುವಾಗ ನಟಿಸಿ ವಾಪಾಸ್ಸ್ಸು ಬಂದುಬಿಡಬಹುದು, ಆದರೆ ಮನೆಯಲ್ಲಿ ಸದಾಕಾಲ ಇರುವಾಗ ನಟಿಸಲು ಸಾಧ್ಯವೇ? ಯಾವ ಸಂಬಂಧವನ್ನೂ ನಟನೆ ಮಾಡುತ್ತಾ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸದಾಕಾಲ ನಟಿಸುತ್ತಾ ಒಟ್ಟಿಗಿದ್ದು, ಒಳಗೊಳಗೆ ಹಿಂಸೆ ಪಡುವುದಕ್ಕಿಂತ, ದೂರವಿದ್ದು ವಿಶ್ವಾಸವನ್ನು ಉಳಿಸಿಕೊಳ್ಳುವುದೇ ಒಳ್ಳೆಯದು ಎಂದನಿಸುತ್ತದೆ. ಇಲ್ಲಿ ನಾಯಕಿಗೆ ದುಃಖವಾಗಬಹುದು, ಆದರೆ ಗಿಲ್ಟ್ ಕಾಡೋಲ್ಲ, ಉಳಿದಂತೆ ಎಲ್ಲಾ ಪಾತ್ರಗಳು ಈ ಘಟನೆಯಿಂದ ಬದಲಾದರೂ, ಬದಲಾದಂತೆ ತೋರಿದರೂ, ಗಿಲ್ಟ್ ಮಾತ್ರ ಅವರನ್ನು ಬಿಡೋಲ್ಲ.

ಈ ಚಿತ್ರದಲ್ಲಿ ಚಂದದ ಜೋಡಿಯೆಂದರೆ ನಾಯಕಿಯ ತಮ್ಮ ಮತ್ತು ಆತನ ಗೆಳತಿಯದ್ದು. ಆತನ ಗೆಳತಿ ಹೇಳುವ ಮಾತು "Let’s grow together” ಸಂಬಂಧಕ್ಕೆ ಬೇಕಾದದ್ದು ಏನು? ಎಂಬುದನ್ನು ಚಂದವಾಗಿ, ಚೊಕ್ಕವಾಗಿ ಹೇಳಿಬಿಡುತ್ತದೆ. ಗಂಡು, ಹೆಣ್ಣಿನ ಸಂಬಂಧಗಳು ಯಾವಾಗಲೂ ಒಟ್ಟಿಗೆ ಒಂದಷ್ಟು ಕಳೆದುಕೊಳ್ಳುತ್ತಾ, ಒಂದಷ್ಟು ಪಡೆಯುತ್ತಾ, ಒಟ್ಟಿಗೆ ಬೆಳೆಯಬೇಕು. ಆಗಲೇ ಆ ಸಂಬಂಧಕ್ಕೊಂದು ಅರ್ಥ, ಆ ಬಾಂಧವ್ಯಕ್ಕೊಂದು ಬೆಲೆ. ಅಂತಹ ಸಂಸಾರ ಖುಷಿಯಾಗಿರುತ್ತದೆ ಅನ್ನೋದನ್ನು ತೋರಿಸಿಕೊಡುತ್ತದೆ.





Saturday, January 21, 2017

ಕರ್ನಾಟಕದಲ್ಲಿ ಯಾರಿದ್ದಾರೆ ಅಂತಹವರು?

ಕರ್ನಾಟಕದಲ್ಲಿ ನಡೆಯುತ್ತಿರುವ ತೊಂದರೆಗಳಿಗೆಲ್ಲಾ ಮುಖ್ಯ ಕಾರಣ ಇಲ್ಲಿ ಧೀಮಂತ ನಾಯಕರುಗಳಿಲ್ಲದಿರುವುದು. ಹಾಗೂ ಇಲ್ಲಿಯ ರಾಜಕಾರಣಿಗಳಿಗೆ ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಆಚರಣೆಗಳ ಮೇಲೆ ನಮ್ಮದಿದು ಎಂಬ ಪ್ರೀತಿ ಇಲ್ಲದಿರುವುದು. ಇವರೆಲ್ಲರಿಗೂ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿದೆ. ಸಕ್ರಿಯ ರಾಜಕಾರಣಕ್ಕೆ ಬರುವ ಮುಕ್ಕಾಲು ಪಾಲು ಜನರಿಗೆ ರಾಜಕೀಯ ಎಂಬುದು ಜನಸೇವೆ ಎಂಬುದಕ್ಕಿಂತ ತಮಗೆ ಮತ್ತು ತಮ್ಮ ಕುಟುಂಬ ವರ್ಗಕ್ಕಾಗಿ ಹಣ, ಆಸ್ತಿ ಸಂಪಾದನೆ ಮಾಡವುದೇ ಮೂಲ ಗುರಿಯಾಗಿದೆ.

ಕರ್ನಾಟಕದೊಳಗೆ ಒಂದಿಡೀ ಭಾರತವಿದೆ. ಉತ್ತರ ಕರ್ನಾಟಕದ ಸಂಸ್ಕೃತಿ ಬೇರೆ, ಬೆಂಗಳೂರಿನದೇ ಬೇರೆ, ದಕ್ಷಿಣ ಕನ್ನಡದ್ದು ಮತ್ತೊಂದು ರೀತಿ, ತುಮಕೂರು, ಚಿತ್ರದುರ್ಗ ಮುಂತಾದ ಕಡೆಯೇ ಬೇರೆ ರೀತಿ ಹೀಗೆ .... ಆಹಾರ ಪದ್ಧತಿಯಿಂದ ಹಿಡಿದು ವಸ್ತ್ರ ಧರಿಸುವುದರವರೆಗೂ ಎಲ್ಲದರಲ್ಲಿಯೂ ವೈವಿಧ್ಯವಿದೆ. ಅದರಲ್ಲೂ ಬೆಂಗಳೂರು ಸಿಲಿಕಾನ್ ಸಿಟಿಯಾದ ನಂತರ, ಬೇರೆ, ಬೇರೆ ಕಡೆಗಳಿಂದ ಬಂದು ನೆಲೆಸುವವರು ಹೆಚ್ಚಾಗಿ ಇಲ್ಲಿನ ಮೂಲ ನಿವಾಸಿಗಳು ಮೂಲೆಗುಂಪಾಗಿದ್ದಾರೆ. ಬೆಂಗಳೂರು ಮೆಟ್ರೊ ಸಿಟಿಯಾಗಿ, ಅದರ ಸುತ್ತಮುತ್ತ ಇರುವ ಜಿಲ್ಲೆಗಳ ಮೇಲೂ ಇದರ ಪ್ರಭಾವವಾಗಿ ಎಲ್ಲರ ಮೂಲ ಸಂಸ್ಕೃತಿ ಮಾರ್ಪಾಡಾಗಿದೆ. ಒಟ್ಟಿನಲ್ಲಿ ಎಲ್ಲಾ ಜನರೂ ಇಲ್ಲಿ ನೆಲೆಸುವಂತಾಗಿ ಕರ್ನಾಟಕದ ಜನರ ಸಂಸ್ಕೃತಿ ಒಂದು ರೀತಿಯ ಖಿಚಡಿಯಂತಾಗಿದೆ.

ಇನ್ನೂ ಶಾಲೆಗಳ ಪರಿಸ್ಥಿತಿ ನೋಡಿ. ಕನ್ನಡ ಕಡ್ಡಾಯ ಮಾಡಿದ ಕಾರಣ, ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸಲೆಂದೇ, ಕಷ್ಟವೋ, ಸುಖವೋ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಹಳ್ಳಿಗಳಲ್ಲಿರುವ ಸರ್ಕಾರೀ ಶಾಲೆಗಳು ಕೂಡ ಮಕ್ಕಳಿಲ್ಲದೆ ಬಣಗುಡುತ್ತಿದ್ದರೆ, ಖಾಸಗಿ ಶಾಲೆಗಳು ಮಾತ್ರ ತುಂಬಿ ತುಳುಕಾಡುತ್ತಿವೆ. ಸರ್ಕಾರಿ ಶಾಲೆಗಳಲ್ಲಾದರೂ ಬಿ ಎಡ್ ಮಾಡಿರುವ, ಪ್ರವೇಶ ಪರೀಕ್ಷೆ ಪಾಸ್ ಮಾಡಿ, ಆಯ್ಕೆಯಾಗಿರುವ ಶಿಕ್ಷಕರಿರುತ್ತಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಕೊಡುವ ಕಡಿಮೆ ಸಂಬಳಕ್ಕೆ, ಕೈಗೆ ಸಿಗುವ ಎಲ್ಲರೂ ಕೂಡ ಶಿಕ್ಷಕರೇ! ಹೀಗಿರುವಾಗ ಅವರಾದರೂ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಭಾಷೆಯ ಬಗ್ಗೆ ಪ್ರೀತಿ ಹೇಗೆ ಮೂಡಿಸಿಯಾರು? ಶಾಲಾ ಮಂಡಳಿಯವರು ಶಾಲೆಗಳಲ್ಲಿ ಕ್ರಿಸ್ ಮಸ್ ಆಚರಣೆ, ಹಾಲೋವಿನ್ ಆಚರಣೆ ಮಾಡುವುದನ್ನೇ ದೊಡ್ಡದೆಂದು ಮಕ್ಕಳಲ್ಲಿ ಬಿಂಬಿಸಿದರೆ, ಮಕ್ಕಳಿಗಾದರೂ ನಮ್ಮ ಹಬ್ಬಗಳ ಮಹತ್ವ ಯಾರೂ ಹೇಳಿಕೊಡುತ್ತಾರೆ? ನಮ್ಮ ಮಕ್ಕಳಿಗೆ ನಮ್ಮ ಹಬ್ಬಗಳ ಆಚರಣೆಗಳು ಕೀಳರಿಮೆ ಮೂಡಿಸಿ, ಕ್ರಿಸ್ಮಸ್ ಮುಂತಾದ ಹಬ್ಬಗಳು ಆಕರ್ಷಣೆ ಉಂಟು ಮಾಡುತ್ತಿವೆ.

ಕರ್ನಾಟಕದಲ್ಲಿ ಜಾಗತೀಕರಣ ಉಂಟು ಮಾಡಿದ ಸಮಸ್ಯೆ ಇದು. ಇದಕ್ಕೆ ಹತ್ತಾರು ಸಣ್ಣ ಪುಟ್ಟ ಪ್ರತಿಭಟನೆಗಳನ್ನು ಮಾಡಿದರೆ ಪ್ರಯೋಜನವಿಲ್ಲ. ಸಮರೋಪಾದಿಯಲ್ಲಿ ಕೆಲಸಗಳನ್ನು ಮಾಡಬೇಕಿದೆ. ಮುಖ್ಯವಾಗಿ ಮಕ್ಕಳ ಶಿಕ್ಷಣದಲ್ಲಿ ಮಾರ್ಪಾಡು ತರಬೇಕಿದೆ. ಬೇರೆಯವರದೆಲ್ಲವೂ ಶ್ರೇಷ್ಠ ಎಂಬ ಕೀಳರಿಮೆಯ ಮನೋಭಾವವನ್ನು ಹೋಗಲಾಡಿಸಬೇಕಿದೆ. ಮನೆಗಳಲ್ಲಿ, ಶಾಲೆಗಳಲ್ಲಿ, ಕಚೇರಿಗಳಲ್ಲಿ, ಒಟ್ಟಿನಲ್ಲಿ ಎಲ್ಲಾ ಕಡೆ ನಮ್ಮ ಸಂಸ್ಕೃತಿಯನ್ನು ಮತ್ತೊಮ್ಮೆ ಹೊಸದಾಗಿ ಪರಿಚಯಿಸಬೇಕಿದೆ. ಆದರೆ ಇವೆಲ್ಲಾ ನಡೆಯುವುದು ಮತ್ತೆ ಬರಹದ ಶುರುವಿಗೆ ಬಂದು ನಿಲ್ಲುತ್ತದೆ. ಇದಕ್ಕೆಲ್ಲಾ ಬೇಕಿರುವುದು ಇಚ್ಛಾಶಕ್ತಿಯುಳ್ಳ, ಧೀಮಂತ ವ್ಯಕ್ತಿತ್ವದ ನಾಯಕರುಗಳು. ಕರ್ನಾಟಕದಲ್ಲಿ ಯಾರಿದ್ದಾರೆ ಅಂತಹವರು?

Wednesday, April 20, 2016

PF ರಾಮಾಯಣ! ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನೌಕರರ ಮಹಾಭಾರತ!


೧೯೫೨ರಲ್ಲಿ ಕಾರ್ಮಿಕರ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಭವಿಷ್ಯ ನಿಧಿ ಮತ್ತು ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು. ವಯಸ್ಸಿದ್ದಾಗ ಕೆಲಸ ಮಾಡಿ ಹೇಗೋ ಬದುಕು ಸಾಗಿಸುವ ಜನರು, ತಮ್ಮ ವೃದ್ಧಾಪ್ಯದಲ್ಲಿ ನೆಮ್ಮದಿಯಿಂದಿರಲಿ ಎಂಬುವುದು ಈ ಯೋಜನೆಯ ಮೂಲ ಉದ್ಧೇಶ. ನಮ್ಮ ಭಾರತದಲ್ಲಿ ಕಾರ್ಮಿಕರಿಗೆ ಒತ್ತಾಯಿಸದಿದ್ದರೆ ಅಥವಾ ರೂಲ್ ಮಾಡದಿದ್ದರೆ, ತಮ್ಮ ಭವಿಷ್ಯಕ್ಕಾಗಿ, ಯಾವುದಾದರೂ ಅನಪೇಕ್ಷಿತ ಖರ್ಚುಗಳು ಬಂದಾಗ, ಬದುಕು ದುರ್ಬರವಾಗಿಬಿಡುತ್ತದೆ ಎಂಬ ಕಾರಣದಿಂದ ಈ ಭವಿಷ್ಯ ನಿಧಿ, ವಿಮಾ ಮತ್ತು ಪಿಂಚಣಿ ಯೋಜನೆಯನ್ನು ಜಾರಿಗೆ ತಂದರು. ಕಾರ್ಮಿಕರ ವೇತನದಿಂದ ಒಂದಷ್ಟು ಹಣವನ್ನು ಕಡಿತಗೊಳಿಸಿ, ಅಷ್ಟೇ ಹಣವನ್ನು ಕೈಗಾರಿಕೆಗಳ ಮಾಲೀಕರು ಕೂಡ ಸೇರಿಸಿ, ಈ ನಿಧಿಯನ್ನು ಕೂಡಿಡುವುದು. ಈ ಹಣ ಆ ಕೆಲಸಗಾರರ ಭವಿಷ್ಯದಲ್ಲಿ ಬರಬಹುದಾದ ಬಳಕೆಗಾಗಿಯಷ್ಟೆ ಹೊರತು ದೈನಂದಿನ ಆಗುಹೋಗುಗಳ ಖರ್ಚಿಗೆ ಬಳಸಲಲ್ಲ. 

ಪ್ರತಿ ತಿಂಗಳು ಕಾರ್ಮಿಕರ ವೇತನದಿಂದ ೧೨% ಹಣವನ್ನು ಕಡಿತ ಮಾಡಿ, ಜೊತೆಗೆ ಅಷ್ಟೇ ೧೨% ಹಣವನ್ನು ಅವರು ದುಡಿಯುತ್ತಿರುವ ಫ್ಯಾಕ್ಟರಿಗಳ ಮಾಲೀಕರು ಸೇರಿಸಿ, ಒಟ್ಟು ವೇತನದ ಶೇಕಡ ೨೪% ಹಣವನ್ನು ಭವಿಷ್ಯ ನಿಧಿಯಲ್ಲಿ ಕೂಡಿಡಬೇಕಾಗುತ್ತದೆ. ಇದರಲ್ಲಿ ಕಾರ್ಮಿಕರ ವೇತನದಿಂದ ಕಡಿತವಾದ ೧೨% ಹಣ ಸಂಪೂರ್ಣವಾಗಿ ಭವಿಷ್ಯ ನಿಧಿಯಲ್ಲಿಯೇ ಸಂಗ್ರಹವಾದರೆ, ಮಾಲೀಕರು ನೀಡುವ ೧೨% ಹಣದಲ್ಲಿ ಶೇಕಡ ೮.೩೩% ಕಾರ್ಮಿಕರ ಪಿಂಚಣಿ ಯೋಜನೆಗೆ, ಶೇಕಡ .೫೦% ಕಾರ್ಮಿಕರ ವಿಮಾ ಯೋಜನೆಗೆ, ಉಳಿದ ಹಣ ಭವಿಷ್ಯ ನಿಧಿಗೆ ಸಂಗ್ರಹವಾಗುತ್ತದೆ. ಅಂದರೆ ಈ ಭವಿಷ್ಯ ನಿಧಿಗೆಂದು (ಪಿಎಫ್) ಮಾಲೀಕರು ನೀಡುವ ಹಣ ಕೇವಲ ಶೇಕಡ ೩.೧೭% ಅಷ್ಟೆ. ಮಾಲೀಕರು ಪಿಂಚಣಿ ಯೋಜನೆಗೆಂದು ನೀಡುವ ಶೇಕಡ ೮.೩೩% ಜೊತೆಗೆ ಕೇಂದ್ರ ಸರ್ಕಾರವೂ ಕೂಡ ಶೇಕಡ ೧.೧೬% ಹಣವನ್ನು ಪಿಂಚಣಿಗೆಂದು ನೀಡುತ್ತದೆ. ಇಲ್ಲಿ ನಾವು ಮೂರು ಸಂಗತಿಗಳನ್ನು ಗಮನಿಸಬೇಕು.


ಮೊದಲನೆಯದು, ವಿಮಾ ಯೋಜನೆ (Employees Deposit Linked Insurance Scheme). ಮಾಲೀಕರು ನೀಡುವ ೧೨% ಹಣದಲ್ಲಿ ಶೇಕಡ ೦.೫% ರಷ್ಟನ್ನು ಈ ಯೋಜನೆಯ ಅಡಿಯಲ್ಲಿ ಸಂಗ್ರಹಿಸುತ್ತಾರೆ. ಉದ್ಯೋಗ ಮಾಡುತ್ತಿರುವಾಗಲೇ ವ್ಯಕ್ತಿ ತೀರಿಕೊಂಡರೆ, ಆ ವ್ಯಕ್ತಿಯ ಕುಟುಂಬ ವರ್ಗದವರಿಗೆ ಈ ಹಣವನ್ನು ನೀಡುತ್ತಾರೆ. ಸಾಯುವ ಸಮಯದಲ್ಲಿ ಆತನಿಗೆ ದೊರೆಯುತ್ತಿದ್ದ ತಿಂಗಳ ವೇತನದ (ಗರಿಷ್ಟ ಮೊತ್ತ ರೂ ೧೫೦೦೦) ಮೂವತ್ತು ಪಟ್ಟು ಮತ್ತು ಬೋನಸ್ ರೂಪದಲ್ಲಿ ಸುಮಾರು ೧.೫ ಲಕ್ಷ ರೂಗಳನ್ನು ಸೇರಿಸಿ ನೀಡುತ್ತಾರೆ. ಉದಾಹರಣೆಗೆ ಆತ ತೀರಿಕೊಳ್ಳುವ ಸಮಯದಲ್ಲಿ ಆತನ ಮಾಸಿಕ ವೇತನ ೧೫೦೦೦ ರೂಗಳಾಗಿದ್ದರೆ, ರೂ ೧೫೦೦೦ ‌x ೩೦ = ೪,೫೦,೦೦೦ + ಬೋನಸ್ ೧,೫೦,೦೦೦ ಸೇರಿ ಒಟ್ಟು ಆರು ಲಕ್ಷ ರೂ.ಗಳು ಆತನ ಕುಟುಂಬ ವರ್ಗಕ್ಕೆ ಸೇರುತ್ತದೆ. ಈ ಹಣವು ಆತ ತೀರಿಕೊಂಡ ನಂತರವೂ ಆತನನ್ನು ಅವಲಂಬಿಸಿರುವವರು ತಮ್ಮ ಜೀವನವನ್ನು ಸುಗಮವಾಗಿ ನಡೆಸಲು ಸಹಾಯಕವಾಗಿದೆ.


ಎರಡನೆಯದು, ಪಿಂಚಣಿ ಯೋಜನೆ (Employees Pension Scheme, 1995) - ಇದು ಶುರುವಾದದ್ದು ೧೯೯೫ ರಲ್ಲಿ. ಮಾಲೀಕರು ಪಿ ಎಫ್ ಎಂದು ನೀಡುವ ಶೇಕಡ ೧೨% ಹಣದಲ್ಲಿ, ಶೇಕಡ ೮.೩೩% ರಷ್ಟು ಹಣವನ್ನು ಯೋಜನೆಗೆಂದು ಸಂಗ್ರಹಿಸುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಶೇಕಡ ೧.೧೬% ಹಣವನ್ನು ನೀಡುತ್ತದೆ. ಅಂದರೆ ಒಟ್ಟು ಕಾರ್ಮಿಕರ ವೇತನದ ೯.೪೯ % ಹಣ ಪಿಂಚಣಿ ಯೋಜನೆಗಾಗಿ ಇಡುತ್ತಾರೆ. ಈ ಹಣವನ್ನು ನಿವೃತ್ತಿ ಹೊಂದಿದ ಕಾರ್ಮಿಕರಿಗೆ ನೀಡಲಾಗುವುದು. ಇದಕ್ಕಾಗಿ ೧೯೯೫ರ ಮುಂಚಿನಿಂದ ಕೆಲಸ ಮಾಡುತ್ತಿದ್ದವರಿಗೆ ಒಂದು ರೀತಿಯ ನಿಯಮಗಳು, ನಂತರ ಉದ್ಯೋಗಕ್ಕೆ ಸೇರಿದವರಿಗೆ ಮತ್ತೊಂದು ರೀತಿಯ ನಿಯಮಗಳಿವೆ. ನಿವೃತ್ತಿ ಹೊಂದುವ ಸಮಯದಲ್ಲಿ ಆತ ಪಡೆಯುತ್ತಿದ್ದ ೧೨ ತಿಂಗಳ ವೇತನದ ಸರಾಸರಿ ಲೆಕ್ಕ ಹಾಕಿ, ಆತ ಎಷ್ಟು ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಎಂಬುದರೊಟ್ಟಿಗೆ ಗುಣಿಸಿ, ಅದನ್ನು ೭೦ರಲ್ಲಿ ಭಾಗಿಸಿ, ಆ ಹಣವನ್ನು ತಿಂಗಳು, ತಿಂಗಳು ಪಿಂಚಣಿಯಾಗಿ ನೀಡುತ್ತಾರೆ. ಅಕಸ್ಮಾತ್ ಈತ ತೀರಿಕೊಂಡರೆ, ಈತನಿಗೆ ೨೫ ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳಿದ್ದರೆ, ಅವರಿಗೆ ಹಾಗೂ ಈತನ ಪತ್ನಿಗೆ ಈ ಪಿಂಚಣಿ ಹಣ ದೊರೆಯುತ್ತದೆ. 

ಮೂರನೆಯದು, ಇವೆರಡು ಯೋಜನೆಗೆಳಿಗೆ ಅಂದರೆ ಪಿಂಚಣಿ ಮತ್ತು ವಿಮಾ ಯೋಜನೆಗೆ ಕಾರ್ಖಾನೆಯ ಮಾಲೀಕರು ನೀಡಿದ ಹಣವನ್ನು ಕಳೆದು, ಉಳಿದ ಹಣ ಮಾತ್ರ ಅಂದರೆ ಸುಮಾರು ಶೇಕಡ ೩.೧೭ ರಷ್ಟು ಮಾತ್ರ ಭವಿಷ್ಯ ನಿಧಿಗೆಂದು ಹೋಗುತ್ತದೆ. ಈ ಭವಿಷ್ಯ ನಿಧಿಯಲ್ಲಿ ಕಾರ್ಮಿಕರ ವೇತನದಲ್ಲಿ ಕಳೆದ ಶೇಕಡ ೧೨% ಮತ್ತು ಕಾರ್ಖಾನೆಯ ಮಾಲೀಕರು ನೀಡುವ ಶೇಕಡ ೩.೧೭ ರಷ್ಟು ಅಂದರೆ ಒಟ್ಟು ವೇತನದ ಶೇಕಡ ೧೫.೧೭% ರಷ್ಟು ಭವಿಷ್ಯನಿಧಿಯಲ್ಲಿ ಸಂಗ್ರಹವಾಗುತ್ತದೆ. ಇದಕ್ಕೆ ಕಾಲಾನುಕಾಲಕ್ಕೆ ಕೇಂದ್ರ ಸರ್ಕಾರವು ಬಡ್ಡಿಯನ್ನು ಸೇರಿಸಿ, ಕಾರ್ಮಿಕರು ನಿವೃತ್ತಿ ಹೊಂದುವ ಕಾಲದಲ್ಲಿ ನೀಡುತ್ತಾರೆ. ಇಲ್ಲಿ ಕೂಡ ಈ ಹಣವನ್ನು ಆಪತ್ಕಾಲದಲ್ಲಿ ಬಳಸಲು ಅನುಕೂಲಗಳು ಹಾಗೂ ಅನೇಕ ನಿಯಮಗಳು ಇವೆ. ತಮ್ಮ ಮಕ್ಕಳ ಮದುವೆಗೆ, ವಿದ್ಯಾಭ್ಯಾಸಕ್ಕೆ, ಆರೋಗ್ಯ ಸಮಸ್ಯೆಗಳಿಗೆ, ಮನೆ ಕಟ್ಟಲು..... ಮುಂಗಡವಾಗಿ ಪಡೆಯಬಹುದಾಗಿದೆ (ನಿಯಮಗಳಿಗನುಸಾರವಾಗಿ). ಇದನ್ನು ಸಾಲವೆಂದು ಹೇಳುವುದು ತಪ್ಪಾಗುವುದು. ಇದು ಮುಂಗಡ ಹಣವಷ್ಟೆ. ಇದನ್ನು ವಾಪಾಸ್ಸು ತೀರಿಸಬೇಕೆಂಬ ನಿಯಮವಾಗಲೀ, ಇದಕ್ಕೆ ಬಡ್ಡಿ ನೀಡಬೇಕೆಂಬ ರೂಲ್ ಆಗಲೀ ಇಲ್ಲ.


ಈ ಯೋಜನೆಯನ್ನು ಕಾಲಾನುಕಾಲಕ್ಕೆ ಕೇಂದ್ರ ಸರ್ಕಾರವು ಆಯಾ ಕಾಲದ ಪರಿಸ್ಥಿತಿಗನುಗುಣವಾಗಿ ಪರಿಷ್ಕರಿಸುತ್ತಿರುತ್ತದೆ. ಇದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಸಾಮಾನ್ಯ ಜನರೇ ಹೆಚ್ಚು ತುಂಬಿರುವ ದೇಶದಲ್ಲಿ, ಆ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಅವಶ್ಯಕ. ಆ ನಿಟ್ಟಿನಲ್ಲಿ ಈ ಬಾರಿಯ ಕೇಂದ್ರ ಸರ್ಕಾರ ಒಂದಷ್ಟು ನಿಯಮಗಳನ್ನು ಬದಲಾಯಿಸಿತು. ಅವುಗಳಲ್ಲಿ ಮುಖ್ಯವಾದವು Universal Account Number (UAN) - ದೇಶದಾದ್ಯಂತ ಒಬ್ಬ ವ್ಯಕ್ತಿಗೆ ಒಂದೇ ನಂಬರ್ ನೀಡುತ್ತದೆ. ಆತ ಉದ್ಯೋಗ ಬದಲಾಯಿಸಿದರೂ ಕೂಡ ಈ ನಂಬರ್ ಮಾತ್ರ ಬದಲಾಗುವುದಿಲ್ಲ. ಹಾಗಾಗಿ ಪದೇ, ಪದೇ ಹೊಸ ಅಕೌಂಟ್ ಗಳನ್ನು ಮಾಡುವ ತಲೆಬಿಸಿ ಇರುವುದಿಲ್ಲ. ಜೊತೆಗೆ ಆ ನಂಬರ್ ಬಳಸಿ, ಆನ್ಲೈನ್ ನಲ್ಲಿಯೇ ತನ್ನ ಬಳಿ ಪಿ ಎಫ್ ಹಣ ಎಷ್ಟಿದೆ? ಎಂಬ ಲೆಕ್ಕಾಚಾರವನ್ನು ನೋಡಿಕೊಳ್ಳಬಹುದು. ಇದಕ್ಕಾಗಿ ಪದೇ, ಪದೇ ಪಿ ಎಫ್ ಆಫೀಸಿಗೆ ತಿರುಗಾಡುವ ಅವಶ್ಯಕತೆ ಇರುವುದಿಲ್ಲ.


ಇನ್ನುಳಿದಂತೆ ಜನರು ಗಲಾಟೆ ಮಾಡುತ್ತಿರುವ ರೂಲ್ ಗಳಲ್ಲಿ ಹಳೆಯ ರೂಲ್ ಗಳು ಏನಿದ್ದವು? ಹೊಸ ರೂಲ್ ಗಳು ಏನು? ಹಳೆಯ ರೂಲ್ - ಈ ಹಿಂದೆ ಪಿ ಎಫ್ ಸೌಲಭ್ಯವಿದ್ದ ಉದ್ಯೋಗಿ, ೬೦ ದಿನಗಳ ಕಾಲ ನಿರುದ್ಯೋಗಿಯಾಗಿದ್ದರೆ, ಆಗ ತನ್ನ ಪಿ ಎಫ್ ಹಣವನ್ನು (ಕಾರ್ಮಿಕನ ಹಣ + ಮಾಲೀಕನ ಹಣ + ಬಡ್ಡಿ) ಪೂರ್ತಿ ತೆಗೆಯುವ ಸೌಲಭ್ಯವಿತ್ತು. ಹಾಗೂ ಹಾಗೆ ಪೂರ್ತಿ ಹಣ ತೆಗೆದ ಕೂಡಲೇ ಆತನ ಅಕೌಂಟ್ ಮುಚ್ಚಿಹೋಗುತ್ತಿತ್ತು. ನಿವೃತ್ತಿಯ ವಯಸ್ಸನ್ನು ೫೫ ವರ್ಷಗಳಿಗೆ ನಿಗದಿಗೊಳಿಸಲಾಗಿತ್ತು. ಅಕಸ್ಮಾತ್ ಉದ್ಯೋಗಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದರೂ ಕೂಡ, ಆತನಿಗೆ ಸಂಪೂರ್ಣ ಹಣವನ್ನು ಪಡೆಯುವ ಅವಕಾಶವಿತ್ತು. ಆತನಿಗೆ ೫೪ ವರ್ಷ ವಯಸ್ಸಾಗಿದ್ದರೆ ಅಥವಾ ನಿವೃತ್ತಿ ಹೊಂದುವ ಒಂದು ವರ್ಷಕ್ಕೆ ಮುನ್ನವೇ ಪಿಎಫ್ ನಲ್ಲಿ ಸಂಗ್ರಹವಾಗಿರುವ ಶೇಕಡ ೯೦% ರಷ್ಟನ್ನು ಆತ ತೆಗೆಯಬಹುದಿತ್ತು. 


ಬದಲಾಗಿದ್ದ ರೂಲ್ - ಪಿ ಎಫ್ ಸೌಲಭ್ಯವಿದ್ದ ಉದ್ಯೋಗಿ, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಬೇರೆಲ್ಲೂ ಕೆಲಸಕ್ಕೆ ಸೇರದಿದ್ದರೆ ಆತನಿಗೆ ಪಿಎಫ್ ಹಣವನ್ನು ಸಂಪೂರ್ಣವಾಗಿ ಪಡೆಯುವಂತಿಲ್ಲ. ಕೇವಲ ಆತನ ವೇತನದಲ್ಲಿ ಕಡಿತಗೊಂಡ ಹಣ ಮತ್ತು ಅದಕ್ಕೆ ನೀಡುವ ಬಡ್ಡಿಯನ್ನು ಆತ ತೆಗೆದುಕೊಳ್ಳಬಹುದು. ಮಾಲೀಕ ನೀಡಿದ ಹಣ ಅಂದರೆ ಶೇಕಡ ೩.೧೭% ರಷ್ಟು ಹಣವನ್ನು ಆತ ತನಗೆ ೫೮ ವರ್ಷಗಳಾಗುವ ತನಕ ಪಡೆಯುವಂತಿಲ್ಲ. ಹಾಗಾಗಿ ಆತನ ಅಕೌಂಟ್ ಸಂಪೂರ್ಣವಾಗಿ ಮುಚ್ಚಲಾಗದು. ಹಾಗಾಗಿ ಆತನ ಪಿಎಫ್ ಹಣ ಬೆಳೆಯುತ್ತಲೇ ಇರುತ್ತದೆ. ನಿಜವಾಗಿ ಹೇಳಬೇಕೆಂದರೆ ಸಾಮಾನ್ಯ ಜನರಿಗೆ ತಮ್ಮ ನಿವೃತ್ತಿಯ ಸಮಯದಲ್ಲಿ ಒಂದಿಷ್ಟಾದರೂ ನೆಮ್ಮದಿಯಾಗಿರಲು ಇದೊಂದು ಆಕರ್ಷಕ ಕೊಡುಗೆಯಾಗಿತ್ತು. ಪಿ ಎಫ್ ಹಣವನ್ನು ಪಡೆಯಲೆಂದು ಇದ್ದ ನಿವೃತ್ತಿಯ ವಯಸ್ಸನ್ನು ಈಗ ೫೮ ವರ್ಷಗಳಿಗೆ ಏರಿಸಲಾಗಿರುವುದರಿಂದ ಪಿಎಫ್ ನ ಶೇಕಡ ೯೦% ರಷ್ಟು ಹಣವನ್ನು ಕೂಡ ತನ್ನ ೫೭ ನೇ ವಯಸ್ಸಿನಲ್ಲಿ ಪಡೆಯಬಹುದು (ಈ ಹಿಂದೆ ಇದ್ದ ೫೪ ವರ್ಷಗಳ ಬದಲು - ಕೇವಲ ಮೂರು ವರ್ಷಗಳ ಏರಿಕೆಯಷ್ಟೆ). ಹಾಗೂ ಈ ಎಲ್ಲಾ ನಿಯಮಗಳು ಆಗಸ್ಟ್ ಒಂದು, ೨೦೧೬ ರಿಂದ ಜಾರಿಗೆ ಬರುತ್ತಿತ್ತು. ಅದುವರೆವಿಗೂ ಜನರ ಅಭಿಪ್ರಾಯಗಳನ್ನು ತಿಳಿಯಲು ಕೇಂದ್ರ ಸರ್ಕಾರ ಕಾದು ನೋಡುತ್ತಿತ್ತು. ಮತ್ತು ಒಂದು ವಿಷಯವೇನೆಂದರೆ, ನಿಷ್ಕ್ರಿಯಗೊಂಡಿರುವ ಖಾತೆಗಳಿಗೂ ಕೂಡ ಬಡ್ಡಿಯನ್ನು ನೀಡಲು ಕೇಂದ್ರ ಸರ್ಕಾರವು ನಿರ್ಧರಿಸಿದ್ದು, ಈ ನಿರ್ಣಯದಿಂದ ಸುಮಾರು ಒಂಭತ್ತು ಕೋಟಿ ಜನರಿಗೆ ಅನುಕೂಲವಾಗಲಿದೆ. ೨೦೧೧ ರಿಂದ ಇಂತಹ ಖಾತೆಗಳಿಗೆ ಬಡ್ಡಿ ನೀಡುವುದನ್ನು ಆಗಿನ ಕೇಂದ್ರಸರ್ಕಾರ ನಿಲ್ಲಿಸಿತ್ತು!



ಇಷ್ಟೆಲ್ಲಾ ಇದ್ದರೂ ಗಲಭೆಯಾದದ್ದು ಹೇಗೆ? ಯಾಕೆ? ಅದು ಕೂಡ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಮಾತ್ರವೇಕೆ? ಇದು ಸಂಶಯಕ್ಕೆ ಕಾರಣವಾಗುತ್ತಿದೆ. ಇಲ್ಲಿ ಕಾಂಗ್ರೆಸ್ ಆಡಳಿತವಾಗಿದ್ದು, ಕೇಂದ್ರದಲ್ಲಿನ ಮೋದಿ ಸರ್ಕಾರದ ವಿರುದ್ಧ ತಪ್ಪು ಅಭಿಪ್ರಾಯ ಬರುವಂತೆ ಮಾಡಲೆಂದೇ ಹೀಗೆಲ್ಲಾ ಗಲಭೆಯನ್ನು ಸುಮ್ಮನೆ ಹುಟ್ಟು ಹಾಕಲಾಯಿತೇ? ನಿನ್ನೆ, ಮೊನ್ನೆ ಗಾರ್ಮೆಂಟ್ಸ್ ನೌಕರರ ಮುಷ್ಕರವೆಂಬುದು ಯಾರಿಗೂ ಕೂಡ ತಿಳಿದಿರಲಿಲ್ಲವೇಕೇ? ಪೋಲೀಸ್ ರಿಗೆ ಒಂದಿಷ್ಟಾದರೂ ಸುಳಿವು ಸಿಗಬೇಕಿತ್ತಲ್ಲವೇ? ಗಲಭೆಯಾಗುತ್ತಿದ್ದಾಗಲೂ ರಾಜ್ಯದ ಸಚಿವರುಗಳು ಯಾಕೆ ಯಾವುದೇ ಹೇಳಿಕೆಗಳನ್ನು ನೀಡಲಿಲ್ಲ? ಅಲ್ಲಿ ಹೋರಾಟ ಮಾಡುತ್ತಿದ್ದ ಯಾರಿಗೂ ಕೂಡ ಪಿಎಫ್ ನ ಬದಲಾದ ರೂಲ್ ಗಳಿಗೆ ಮಾಹಿತಿಯೇ ಇರಲಿಲ್ಲ. ಹಾಗಿರುವಾಗ ಅವರನ್ನು ಸಂತೈಸುವುದು ರಾಜ್ಯ ಸರ್ಕಾರದ ಆ ಸಮಯದ ಗುರಿಯಾಗಬೇಕಿತ್ತಲ್ಲವೇ? ರಾಜ್ಯದ ಬೊಕ್ಕಸಕ್ಕೆ ಇದರಿಂದಾದ ನಷ್ಟವೆಷ್ಟು? ಅದನ್ನು ತುಂಬಿಸುವ ಬಗೆ ಹೇಗೆ? ಕೇಂದ್ರ ಸರ್ಕಾರದ ನೀತಿಗಳು ಸರಿಯಾಗಿಲ್ಲದಿದ್ದಲ್ಲಿ, ಅದನ್ನು ಕೇಂದ್ರದ ಸಚಿವರ ಗಮನಕ್ಕೆ ತರಬೇಕಾದದ್ದು ಯಾರ ಹೊಣೆ? ಈ ವಿಷಯದಲ್ಲಿ ರಾಜ್ಯ ಕಾರ್ಮಿಕ ಸಚಿವರ ಜವಾಬ್ದಾರಿಗಳೇನು? ಭದ್ರತಾ ವೈಫಲ್ಯಕ್ಕೆ ಕಾರಣವನ್ನು ಯಾರು ಹೊರುತ್ತಾರೆ? ಎರಡು ದಿನಗಳಲ್ಲಿ ಜನ ಸಾಮಾನ್ಯರಿಗೆ ಆದ ತೊಂದರೆಯನ್ನು ಯಾರು ಪರಿಹರಿಸುತ್ತಾರೆ? ಇವಕ್ಕೆಲ್ಲಾ ಉತ್ತರಗಳು ರಾಜ್ಯ ಸರ್ಕಾರದ ಬಳಿ ಇದೆಯೇ? ಆದರೆ ಬೆಂಗಳೂರಿನಲ್ಲಿ ಆದ ಗಲಭೆಯ ಕಾರಣವೋ ಅಥವಾ ಮುಂಬರುವ ಚುನಾವಣೆಗಳಲ್ಲಿ ಇದೇ ವಿಷಯ ತಪ್ಪಾಗಿ ಹರಡಬಾರದೆಂದೋ ಈಗ ಕೇಂದ್ರ ಸರ್ಕಾರ, ಮತ್ತೆ ಹಳೆಯ ನಿಯಮಗಳಿಗೆ ಮರಳಿದೆ. ಭವಿಷ್ಯ ನಿಧಿಯ ಹೆಸರು ಸಾರ್ಥಕವಾಗಬಹುದಾಗಿದನ್ನು ಹಾಳು ಮಾಡಿದ ಕೀರ್ತಿ ಬೆಂಗಳೂರಿನ ಗಾರ್ಮೆಂಟ್ಸ್ ನೌಕರರದ್ದು ಎಂದರೆ ತಪ್ಪಾಗಲಾರದು.






Wednesday, January 20, 2016

ರೋಹಿತ್ ಬದುಕು / ಸಾವಿನ ಸುತ್ತ ಅಸಹ್ಯ ರಾಜಕೀಯ

ರೋಹಿತ್ ವೆಮುಲಾ - ಆತನ ವಯಸ್ಸು ಸುಮಾರು ೨೭ ವರ್ಷ, ಸಮಾಜ ವಿಜ್ಙಾನದಲ್ಲಿ ರಿಸರ್ಚ್ ಸ್ಕಾಲರ್, ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಓದು, ವಿದ್ಯಾರ್ಥಿ ಸಂಘಟನೆಗಳಲ್ಲಿ ಹುರುಪಿನಲ್ಲಿ ಪಾಲ್ಗೊಳ್ಳುತ್ತಿದ್ದವ..... ಇಷ್ಟೆಲ್ಲಾ ಇದ್ದರೂ ಆತ ಆತ್ಮಹತ್ಯೆ ಮಾಡಿಕೊಂಡದ್ದು ಏಕೆ?

೨೦೧೦ ರಲ್ಲಿ ಫೇಸ್ ಬುಕ್ಕಿಗೆ ಪ್ರವೇಶ ಪಡೆದ ಅವನು ಮೊದಮೊದಲಿಗೆ ಸಿನೆಮಾ ವಿಡಿಯೋ ತುಣುಕುಗಳನ್ನು, ಹೊಸ ವರ್ಷದ ಶುಭಾಶಯಗಳನ್ನು ಹಾಕಿಕೊಳ್ಳುತ್ತಿದ್ದವ, ನಂತರ ಪ್ರೀತಿ, ಪ್ರೇಮದ ಬಗೆಗಿನ ಪೋಸ್ಟ್ ಗಳು, ಹೆಣ್ಣುಮಕ್ಕಳನೆಲ್ಲಾ ಮೋಸ ಮಾಡುವ ಕ್ಯಾಟಗೆರಿಗೆ ಸೇರಿಸಿ ತಮಾಷೆ ಮಾಡುವಂತಹ ಪೋಸ್ಟ್ ಗಳನ್ನು ಹಾಕುತ್ತಿದ್ದವ, ತೀರಾ ಇತ್ತೀಚಿನ ಪೋಸ್ಟ್ ಗಳಲ್ಲಿ ಕೇವಲ ರಾಜಕೀಯಕ್ಕೆ ಸಂಬಂಧ ಪಟ್ಟ ಪೋಸ್ಟ್ ಗಳನ್ನೇ ಹಾಕಿಕೊಂಡಿರುವುದು ತಿಳಿಯುತ್ತದೆ. ಆತನ ತಂದೆ ಆಸ್ಪತ್ರೆಯೊಂದರಲ್ಲಿ ವಾಚ್ ಮ್ಯಾನ್, ತಾಯಿ ಟೇಲರ್. ಕಡು ಬಡತನದಿಂದ ಬಂದವ ಪಿಹೆಚ್ ಡಿ ಮಾಡಲು ವಿಶ್ವವಿದ್ಯಾಲಯಕ್ಕೆ ಸೇರುವುದು ಹರ ಸಾಹಸವೇ ಸರಿ. ಫೇಸ್ ಬುಕ್ಕಿನಲ್ಲಿ ಆತನ ಮನೆಯ ಫೋಟೋಗಳು, ಷೆಡ್ ನಂತಹ ಮನೆ, ಅದರ ಅಡುಗೆ ಮನೆ, ಅಪ್ಪನ ಯೂನಿ ಫಾರ್ಮ್ ನೇತಾಕಿರುವ ಹಗ್ಗ, ಅಮ್ಮನ ಹೊಲಿಗೆ ಯಂತ್ರದ ಫೋಟೋ, ಇವೆಲ್ಲವುಗಳ ಬಗ್ಗೆ ಅತ್ಯಂತ ಭಾವುಕನಾಗಿ ಬರೆದಿರುವ ರೀತಿ ನೋಡಿದಾಗ ಯಾರಿಗಾದರೂ ಆತನ ಭಾವುಕತೆ ಬಗ್ಗೆ ಅರ್ಥವಾಗುತ್ತದೆ. ತಾನಿದ್ದ ಹಾಸ್ಟೆಲಿನಲ್ಲಿ ವಿವೇಕಾನಂದರ ಫೋಟೋ ಮತ್ತು ಸಂದೇಶವನ್ನು ಹಾಕಿಕೊಂಡಿದ್ದವ, ಇದ್ದಕಿದ್ದಂತೆ ಇತ್ತೀಚೆಗೆ ವಿವೇಕಾನಂದರ ಬಗ್ಗೆ ಕೆಟ್ಟದಾಗಿ ಬರೆದದ್ದನ್ನು ನೋಡಿದರೆ ಈತನದು ಚಂಚಲ ಮನಸ್ಥಿತಿ ಎಂದು ತಿಳಿಯುತ್ತದೆ. ತನ್ನ ಡೆತ್ ನೋಟ್ ಕೂಡ ಕಾವ್ಯಾತ್ಮಕವಾಗಿ ಬರೆದಿದ್ದಾನೆಯೇ ಹೊರತು ತನ್ನ ಮನೆಯವರ ಬಗ್ಗೆ ಕಿಂಚಿತ್ತೂ ಕೂಡ ಯೋಚಿಸಿಲ್ಲ. ಮನಸ್ಸು ದುರ್ಬಲಗೊಂಡು, ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗುತ್ತದೆ. ಆತನ ಫೇಸ್ ಬುಕ್ ಡೈರಿ ಓದಿದಾಗ ಅಮಾಯಕ ಹುಡುಗನೊಬ್ಬನನ್ನು ನಮ್ಮ ರಾಜಕೀಯ ವ್ಯವಸ್ಥೆ (ಎಡ, ಬಲ, ದಲಿತ ಭೇದವಿಲ್ಲದೆ) ತುಳಿದದ್ದು ಅರ್ಥವಾಗುತ್ತದೆ. ಆತನ ಸಾವಿಗೆ ಇಡೀ ರಾಜಕೀಯ ವ್ಯವಸ್ಥೆ ಒಂದು ರೀತಿಯಲ್ಲಿ ಕಾರಣವಾದರೆ, ಅವನ ಅತಿ ಹೆಚ್ಚಿನ ಭಾವುಕತನ ಕೂಡ ಆತ್ಮಹತ್ಯೆಗೆ ಪ್ರೇರೇಪಿಸಿದೆ

ಅವನ ಮೊದಮೊದಲ ಪೋಸ್ಟ್ ಗಳಲ್ಲಿ ಆಡಮ್, ಈವ್ ಇವರನ್ನೆಲ್ಲಾ ಅಪಹಾಸ್ಯ ಮಾಡುತ್ತಾ, ಹೋಲಿ ಗ್ರಂಥಗಳಿಗೆಲ್ಲಾ ತಮಾಷೆ ಮಾಡಿದ್ದಾನೆ. ತೀರಾ ಇತ್ತೀಚೆಗಷ್ಟೆ ಹಿಂದೂ ದೇವರುಗಳ ಬಗ್ಗೆ ತಮಾಷೆ ಮಾಡಿದ್ದಾನೆ. ಬಹಳಷ್ಟು ಕಡೆ ತಾನು ಯಾವ ದೇವರನ್ನು ನಂಬುವುದಿಲ್ಲ, ಯಾವ ಧರ್ಮಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಶ್ರೀ ಅಬ್ದುಲ್ ಕಲಾಮ್ ಅವರು ಸಾಯಿಬಾಬಾನ ಪಾದದ ಬಳಿ ಕುಳಿತು ಮಾತಾಡಿದರು ಎಂಬ ಕಾರಣಕ್ಕಾಗಿ, ಅವರನ್ನು ಇನ್ನು ಮುಂದೆ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಕೂಡ ಹೇಳಿದ್ದಾನೆ. ಆತ ಮೊದಮೊದಲಿಗೆ ಕಾಂಗ್ರೆಸ್ ಪಕ್ಷದಲ್ಲಿನ ವಂಶ ಪಾರಂಪರ್ಯ ಆಡಳಿತದ ಬಗ್ಗೆ ಆಕ್ರೋಶ ತೋರಿಸುತ್ತಾ, ರಾಹುಲ್ ಗಾಂಧಿಯ ಬಗ್ಗೆ ತಮಾಷೆ ಮಾಡುತ್ತಾ, ನಮ್ಮ ಮುಂದಿನ ಪ್ರಧಾನಿ ರಾಹುಲ್ ಗಾಂಧಿಯಾದರೆ ದೇಶದ ಭವಿಷ್ಯವೇನು? ಎಂದು ಚಿಂತಿಸುತ್ತಾ, ಕಾಂಗ್ರೆಸ್ ಪಕ್ಷದ ಅನೇಕ ರಾಜಕಾರಣಿಗಳು ಹೈದರಾಬಾದಿನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಕ್ಕೆ ಕಿರಿಕಿರಿ ವ್ಯಕ್ತ ಪಡಿಸುತ್ತಾ, ಈ ರಾಜಕಾರಣಿಗಳು ವಿಶ್ವವಿದ್ಯಾಲಯದ ಪರಿಸರವನ್ನು ತಮ್ಮ ಕಪ್ಪು ಹಣದಿಂದ ಹಾಳು ಮಾಡುತ್ತಾರೆ, ಇಂತಹವರಿಂದ ವಿದ್ಯಾರ್ಥಿಗಳನ್ನು ರಕ್ಷಿಸಬೇಕು ಎಂದೆಲ್ಲಾ ಬರೆದುಕೊಂಡಿದ್ದಾನೆ! ಇವನಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಅತೀವ ಅಸಹನೆ ಇದ್ದದ್ದು, ಇದ್ದಕಿದ್ದಂತೆ ಈ ಎರಡು ವರ್ಷಗಳಿಂದ ಬಿಜೆಪಿ ವಿರುದ್ಧ, ಮೋದಿಯವರ ವಿರುದ್ಧ ತಿರುಗಿದೆ! ಮೊದಮೊದಲಿಗೆ ಆಪ್ ಮತ್ತು ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದ್ದ ಇವನು, SFI ಯನ್ನು ಬೆಂಬಲಿಸಿದ್ದಾನೆ. ಆಮೇಲೆ SFI ಬಗ್ಗೆ ಕೂಡ ಅಸಹನೆ ಮೂಡಿ ಅಂಬೇಡ್ಕರ್ ಸಂಘಟನೆಯ ಜೊತೆಗೆ ಗುರುತಿಸಿಕೊಂಡಿದ್ದಾನೆ. ತಾನೇಕೆ SFI ಅವರನ್ನು ವಿರೋಧಿಸಿ, ಅಂಬೇಡ್ಕರ್ ಸಂಘಟನೆಗೆ ಸೇರಿದೆ ಎಂದು ಕೂಡ ವಿವರಿಸಿದ್ದಾನೆ. ಈ ವಿಷಯವಾಗಿ ಅನೇಕ ಸಹಪಾಠಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾನೆ. ಕೆಲ ಗೆಳೆಯರಂತೂ ಕೇವಲ ಪುಸ್ತಕಗಳನ್ನು ಓದಿ ಸಿದ್ಧಾಂತಗಳ ಬಗ್ಗೆ, ಹೋರಾಟಗಳ ಬಗ್ಗೆ ಮಾತಾಡಬೇಡ ಎಂದು ಕೂಡ ತಿಳಿ ಹೇಳಿದ್ದಾರೆ. ಇವನು ಈ ASA ಗೆ ಸೇರುವ ಹಂತದಲ್ಲಿ ಬಿಜೆಪಿ, ಮೋದಿ, ABVP ಯ ಬಗ್ಗೆ ಹೀಯಾಳಿಸಿ ಬರೆಯಲು ಶುರು ಮಾಡಿದ್ದಾನೆ.

ಅಂತಹ ಸಮಯದಲ್ಲಿಯೇ ಬಾಬ್ರಿ ಮಸೀದಿಯ ಘಟನೆ ಬಗ್ಗೆ ಮುಸ್ಲಿಮರ ಪರವಾಗಿ, ಯಾಕೂಬ್ ಮೆನನ್ ಗಲ್ಲಿಗೇರುವ ಸಮಯದಲ್ಲಿ ಆತನ ಪರ ವಾದಿಸಿ, ಭಾರತದ ಪ್ರಜಾಪ್ರಭುತ್ವಕ್ಕೆ ಕಪ್ಪು ದಿನವೆಂದು ಘೋಷಿಸಿದ್ದಾನೆ. ಭಗತ್ ಸಿಂಗ್ ನನ್ನು ಆರಾಧಿಸುತ್ತಿದ್ದ ಈ ರೋಹಿತ್, ಯಾಕೂಬ್ ಮೆನನ್ ಪರ ಹೇಗೆ ವಾದಿಸಿದ? ಎಂಬುದೇ ಆಶ್ಚರ್ಯ! ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳೊಂದಿಗೆ ಈ ವಿಷಯವಾಗಿ ವಾಗ್ವಾದವಾಗಿದೆ. ಎಬಿವಿಪಿ ಕಾರ್ಯಕರ್ತನೊಬ್ಬ ಇವರ ASA ಗುಂಪಿನ ಬಗ್ಗೆ ಫೇಸ್ ಬುಕ್ಕಿನಲ್ಲಿ ಕೆಟ್ಟದಾಗಿ ಸ್ಟೇಟಸ್ ಹಾಕಿಕೊಂಡಿರುವುದನ್ನು ನೋಡಿ, ಎಲ್ಲರೂ ಹಾಸ್ಟೆಲ್ಲಿನಲ್ಲಿದ್ದ ಅವನ ರೂಮಿಗೆ ನುಗ್ಗಿ, ಆತನಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡಿದ್ದಾರೆ. ಮರುದಿವಸ ಆತ ಹೋಗಿ ತನ್ನ ಮೇಲೆ ಇವರೆಲ್ಲರೂ ದೈಹಿಕ ಹಲ್ಲೆ ನಡೆಸಿದ್ದಾರೆಂದು ಕಂಪ್ಲೇಂಟ್ ನೀಡಿದ್ದಾನೆ. (ಇದರ ಸತ್ಯಾಸತ್ಯತೆ ತಿಳಿದಿಲ್ಲ, ಈತನ ಪೋಸ್ಟ್ ಪ್ರಕಾರ ಈತ ನಿರಪರಾಧಿ) ಇದು ನಡೆದದ್ದು ಜುಲೈ / ಆಗಸ್ಟ್ ೨೦೧೫ ರಲ್ಲಿ. ಆ ಸಮಯದಲ್ಲಿ ಈ ಘಟನೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ, ಧಾಂಧಲೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂತ್ರಿಯೊಬ್ಬರು ಶ್ರೀಮತಿ ಸ್ಮೃತಿ ಇರಾನಿಯವರಿಗೆ ಪತ್ರ ಬರೆದಿದ್ದಾರೆ. ಶ್ರೀಮತಿ ಸ್ಮೃತಿ ಇರಾನಿಯವರು ಈ ಹುಡುಗರ ಮೇಲೆ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ ಎಂಬುದಕ್ಕೆ ಆಧಾರಗಳು ಈತನ ಫೇಸ್ ಬುಕ್ಕಿನಲ್ಲಂತೂ ಇಲ್ಲ. ನಂತರ ನಡೆದ ಮೀಟಿಂಗ್ ಗಳಲ್ಲಿ ಐದು ಜನ ವಿದ್ಯಾರ್ಥಿಗಳನ್ನು ಹಾಸ್ಟೆಲಿನಿಂದ ಹೊರ ಹಾಕಲು ನಿರ್ಧರಿಸಲು ಸುಮಾರು ಆರು ತಿಂಗಳು ತೆಗೆದುಕೊಂಡಿದ್ದಾರೆ. ಕೊನೆಗೆ ಡಿಸೆಂಬರ್ ನಲ್ಲಿ ಹಾಸ್ಟೆಲ್ ನಿಂದ ಹೊರಹಾಕಿದ್ದಾರೆ. ಈ ಐವರು ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿಯೇ ನಿರಶನ ಶುರು ಮಾಡಿದ್ದಾರೆ. ಇದ್ದಕಿದ್ದಂತೆ ಒಂದು ದಿವಸ ಆತನ ಸ್ನೇಹಿತನ ರೂಮಿಗೆ ಹೋಗಿ ಪತ್ರವೊಂದನ್ನು ಬರೆದಿಟ್ಟು ರೋಹಿತ್ ವೆಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

೨೦೧೦ರಿಂದ ಆತನ ಸಾಮಾಜಿಕ ಕಳಕಳಿಯ ಪೋಸ್ಟ್ ಗಳು ಇದ್ದಕಿದ್ದಂತೆ ಕೇವಲ ಅಂಬೇಡ್ಕರ್ ಮಯವಾದದ್ದು ಏಕೆ? ಭಗತ್ ಸಿಂಗ್ ನನ್ನು ಆರಾಧಿಸುತ್ತಿದ್ದ ಅವನು ಮುಸ್ಲಿಮರ ಪರ ಸಹಾನುಭೂತಿ ಬೆಳೆಸಿಕೊಂಡದ್ದು ಏಕೆ? ಆಪ್ ಪಕ್ಷದ ಪರ ಇದ್ದವನು, ಇದ್ದಕಿದ್ದಂತೆ ಆ ಪಕ್ಷದ ಬಗ್ಗೆ ಮಾತಾಡುವುದು ಬಿಟ್ಟಿದ್ದು ಏಕೆ? ಕಾಂಗ್ರೆಸ್ ಪಕ್ಷದ ವಿರುದ್ಧ, ರಾಹುಲ್ ಗಾಂಧಿಯ ವಿರುದ್ಧ ಕೆಂಡ ಕಾರುತ್ತಿದ್ದ ಅವನು, ಮೋದಿ ಪ್ರಧಾನಿಯಾದ ಮೇಲೆ ಮೋದಿಯವರನ್ನು ವಿರೋಧಿಸಲು ಏಕೆ ಶುರು ಮಾಡಿದ? ಆತನ ಮುಗ್ಧತೆಯನ್ನು, ಅಸಹಾಯಕತೆಯನ್ನು ಅಥವಾ ಆತನ ಜಾತಿಯನ್ನು, ಆರ್ಥಿಕ ಪರಿಸ್ಥಿತಿಯನ್ನು ಯಾವುದಾದರೂ ಪಕ್ಷಗಳು ದಾಳವಾಗಿ ಬಳಸಿಕೊಂಡವೇ? ಎಲ್ಲವೂ ರಾಜಕೀಯ ವಿಷಯಗಳಾಗಿಯೇ ಬದಲಾಗುತ್ತಿರುವ ಈ ಹೊತ್ತಿನಲ್ಲಿ, ಎಲ್ಲವನ್ನೂ ಜಾತೀಯ ವಾದಗಳಿಂದಲೇ ಗುರುತಿಸುತ್ತಿರುವ ಈ ಕಾಲದಲ್ಲಿ, ಕಣ್ಣಿಗೆ ಕಂಡದ್ದು, ಕಾಣದ್ದು ಎಲ್ಲವನ್ನೂ ಈತ ನಂಬಿ ಮೋಸ ಹೋದನೇ? ಈತನ ಆರ್ಥಿಕ ಅಥವಾ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದಾಗ, ಈತನಿಗೆ ಬೆಂಬಲವಾಗಿ ನಿಂತಿರುವವರು ಯಾರೂ ಇಲ್ಲ ಎಂಬುದು ತಿಳಿಯುತ್ತದೆ. ಹಾಗಾಗಿಯೇ ಏಳು ತಿಂಗಳಿನಿಂದ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಘಟನೆಗಳು ಆತನನ್ನು ಹತಾಶೆಗೆ ದೂಡಿರಬಹುದಲ್ಲವೇ? ಆತನ ಪೋಸ್ಟ್ ಗಳನ್ನು ಲೈಕ್ ಮಾಡಿರುವವರು ಕೂಡ ಬಹಳ ಕಡಿಮೆ. ಆದರೆ ಆತ ಕೇವಲ ಹೈದರಾಬಾದ್ ವಿಶ್ವವಿದ್ಯಾಲಯದ ವಿಷಯಗಳನ್ನು ಮಾತ್ರ ಹಂಚಿಕೊಳ್ಳುತ್ತಿರಲಿಲ್ಲ. ದೇಶದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಆತನ ಗಮನವಿತ್ತು. ಕಲ್ಬುರ್ಗಿಯವರ ಸಾವಿನಿಂದ ಹಿಡಿದು ಲೂಸಿಯಾ ಸಿನೆಮಾದವರೆಗೆ, ದೆಹಲಿಯ ಅತ್ಯಾಚಾರದ ಘಟನೆಯಿಂದ ಹಿಡಿದು ದೇಶದ ಈಶಾನ್ಯ ಭಾಗದಲ್ಲಿ ನಡೆದ ಭೂಕಂಪಗಳ ಬಗ್ಗೆ, ಪ್ರತಿಯೊಂದರ ಬಗ್ಗೆಯೂ ತನಗನ್ನಿಸಿದನ್ನು ಬರೆಯುತ್ತಿದ್ದ.

ಆದರೆ ಆತನ ಕೊನೆಯ ಪತ್ರದಲ್ಲಿ ಬರೆದಂತೆ ವಿಜ್ಙಾನದ ಬರಹಗಾರ ಆಗಬೇಕೆಂದಿತ್ತು ಎಂಬುದು ತುಸು ಆಶ್ಚರ್ಯವಾಗಿ ಕಾಣುತ್ತದೆ. ಏಕೆಂದರೆ ಪ್ರಚಲಿತ ಸುದ್ಧಿಗಳಿಗೆ ಕೊಟ್ಟಷ್ಟು ಮಹತ್ವ ಆತ ವಿಜ್ಙಾನದ ವಿಷಯಗಳ ಬಗ್ಗೆ ನೀಡಿಲ್ಲ. ಪ್ರಕೃತಿಯಿಂದ ಮನುಷ್ಯ ದೂರವಾಗಿದ್ದಾನೆ ಎಂದು ತನ್ನ ಪತ್ರದಲ್ಲಿ ದೂರುವ ಈತ, ಪ್ರಕೃತಿಯನ್ನು ಪ್ರೀತಿಸುತ್ತಿದ್ದ ಎಂಬುದು ಕೂಡ ಈತನ ಫೇಸ್ ಬುಕ್ಕಿನಲ್ಲಿ ಕಾಣುವುದಿಲ್ಲ. ವೋಟಿನ ಲೆಕ್ಕಾಚಾರದಲ್ಲಿಯೇ ಮನುಷ್ಯರನ್ನು ಅಳೆಯುತ್ತಾರೆಯೇ ಹೊರತು ಅವರ ಬುದ್ಧಿಮತ್ತೆಯ ಅವಶ್ಯಕತೆ ರಾಜಕೀಯಕ್ಕಾಗಲೀ, ಶಿಕ್ಷಣಕ್ಕಾಗಲೀ, ಬೀದಿಯಲ್ಲಾಗಲೀ, ಬದುಕು / ಸಾವುಗಳಲ್ಲಾಗಲೀ ಇಲ್ಲ. ಮನುಷ್ಯ ಕೇವಲ ಅಂಕಿ ಅಂಶಗಳಾಗಿಯೇ ಉಳಿದುಬಿಟ್ಟಿದ್ದಾನೆ, ವಸ್ತುವಾಗಿ ಬಿಟ್ಟಿದ್ದಾನೆ ಎಂದು ಬೇಸರಿಸಿದ್ದಾನೆ. ನಮ್ಮ ಪ್ರೀತಿ, ಪ್ರೇಮ ಎಲ್ಲವನ್ನೂ ನಾವೇ ಕಟ್ಟಿಕೊಂಡಿದ್ದೇವೆ, ನಮ್ಮ ಭಾವನೆಗಳೆಲ್ಲವೂ ಎರವಲು ಪಡೆದಿರುವುದು, ನಮ್ಮ ನಂಬಿಕೆಗಳೆಲ್ಲಕ್ಕೂ ಬಣ್ಣ ಬಳಿಯಲಾಗಿದೆ, ನಮ್ಮ ಪ್ರಾಮಾಣಿಕತೆಗಿಂತ ಹೆಚ್ಚಿನ ಬೆಲೆ ಕೃತಕತೆಗೆ ಸಿಗುತ್ತದೆ. ನನ್ನ ಹುಟ್ಟೇ ಒಂದು ದುರಂತ ಆಕಸ್ಮಿಕ. ನಾನು ಇಂದಿಗೂ ಚಿಕ್ಕಂದಿನಿಂದ ಕಾಡುತ್ತಿದ್ದ ಒಂಟಿತನದಿಂದ ಹೊರಬಂದಿಲ್ಲ ಎಂದು ಕೊರಗಿದ್ದಾನೆ. ಬದುಕನ್ನು ಅತ್ಯಂತ ಪ್ರೀತಿಸಿದ ನಾನು ಈ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ, ಪ್ರೀತಿ, ಪ್ರೇಮ, ನೋವು, ಸಾವು, ಬದುಕು ಇವೆಲ್ಲವನ್ನೂ ಅರ್ಥೈಸುವಲ್ಲಿ ಬಹುಶಃ ಎಡವಿದೆ ಎಂದು ಪಶ್ಚಾತ್ತಾಪ ಪಟ್ಟಿದ್ದಾನೆ. ಕೆಲವರಿಗೆ ಅವರ ಬದುಕೇ ಒಂದು ಶಾಪವಾಗಿರುತ್ತದೆ. ಈ ಸಮಯದಲ್ಲಿ ನಾನು ಖಾಲಿಯಾಗಿದ್ದೇನೆ ಹೊರತು ಬೇಸರಗೊಂಡಿಲ್ಲ, ಹಾಗಾಗಿಯೇ ಇಂತಹ ಕೆಲಸ ಮಾಡಿದ್ದೇನೆ, ನನ್ನ ಸಾವಿಗೆ ನಾನೇ ಕಾರಣ, ಇನ್ಯಾರೂ ಅಲ್ಲಾ ಎಂದು ಹೇಳಿದ್ದಾನೆ. ಅಪ್ಪಿತಪ್ಪಿಯೂ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ, ತನ್ನ ಜಾತಿಯ ಬಗ್ಗೆ ಅಥವಾ ರಾಜಕೀಯ ಪಕ್ಷಗಳ ಬಗ್ಗೆ ಏನನ್ನೂ ಬರೆದಿಲ್ಲ.


ಇವೆಲ್ಲವನ್ನೂ ನೋಡಿದಾಗ ಏನನ್ನಿಸುತ್ತದೆ? ಒಳಗೊಳಗೆ ಒಂಟಿತನದಿಂದ ಕೊರಗುತ್ತಿದ್ದ ಇವನು, ತನ್ನ ಯಾವ ಕೆಲಸಗಳಿಗೂ ಸರಿಯಾದ ಬೆಂಬಲ ಸಿಗದೆ ಹತಾಶನಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸ್ವಭಾವತಃ ಭಾವುಕತೆ ಹೆಚ್ಚಿರುವವರು ಒಳಗೊಳಗೆ ಕೊರಗುವುದು, ಖಿನ್ನತೆಯಿಂದ ಬಳಲುವುದು ಹೆಚ್ಚು. ಅಂತಹವರು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲರು. ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಇಂತಹ ವ್ಯಕ್ತಿಗಳಿಗೆ ಸಾಧ್ಯವಿಲ್ಲ. ವಿಜ್ಙಾನ ಆಸಕ್ತಿಯ ವಿಷಯವಾಗಿದ್ದು, ರಾಜಕೀಯವೆಂದರೆ ಹೇಸಿಗೆ ಪಡುತ್ತಿದ್ದ ವ್ಯಕ್ತಿ, ತನ್ನ ಬದುಕಿನೊಂದಿಗೆ ರಾಜಕೀಯ ಆಟವಾಡಿದ್ದು, ತಾನು ದಾಳವಾಗಿದ್ದು ಕಂಡಾಗ ನೋವಾಗಿರಬಹುದು. ಆತನ ಬದುಕಿನಲ್ಲಿ ರಾಜಕೀಯ ಆಟವಾಡಿದ್ದರೆ, ಈಗ ಆತನ ಸಾವನ್ನು ಕೂಡ ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸುತ್ತಿರುವವರನ್ನು ನೋಡಿದಾಗ ಎಂತಹವರಿಗಾದರೂ ಆಕ್ರೋಶ ಉಕ್ಕದಿರದು. ಬಹುಶಃ ಆತನಿಗೇನಾದರೂ ಜೀವವಿದ್ದು, ಎಲ್ಲಿಯೋ ನಿಂತು ತನ್ನ ಸಾವಿನೊಂದಿಗೂ ರಾಜಕೀಯದಾಟ ಆಡುತ್ತಿರುವವರನ್ನು ನೋಡಿದರೆ, ಆತನಿಗೆಷ್ಟು ನೋವಾಗುತ್ತದೆಯೋ? ಇವರೆಲ್ಲರನ್ನೂ ನೋಡುತ್ತಿದ್ದರೆ ಹೇಸಿಗೆ ಹುಟ್ಟುತ್ತಿದೆ. ವೋಟ್ ಬ್ಯಾಂಕಿಗಾಗಿ ನಮ್ಮ ದೇಶದ ಭವಿಷ್ಯದ ಕನಸುಗಾರರನ್ನು ಚಿವುಟುತ್ತಿರುವ ಇಂತಹವರನ್ನು ಜಾತಿ, ಮತ, ಪಕ್ಷ ಭೇದವಿಲ್ಲದೆ ಖಂಡಿಸಬೇಕಿದೆ. ನಮ್ಮ ದೇಶದ ನಿಜವಾದ ಭಯೋತ್ಪಾದಕರು ಈತನ ಸಾವಿನಲ್ಲಿ ತಮಗೆಷ್ಟು ಲಾಭವಿದೆ? ಎಂದು ಲೆಕ್ಕ ಹಾಕುತ್ತಿರುವ ಈ ಮಂದಿಗಳು! ಇವರನ್ನು ಸಾಮಾನ್ಯ ನಾಗರೀಕರು ಬಡಿದು, ಉರುಳಿಸದಿದ್ದಲ್ಲಿ ಇನ್ನೆಷ್ಟು ಇಂತಹ ಸಾವು, ನೋವುಗಳನ್ನು ನಾವು, ನಮ್ಮ ಮಕ್ಕಳು ನೋಡಬೇಕಿದೆಯೋ? 

ರೋಹಿತ್ ಗೆ ರಾಹುಲ್ ಗಾಂಧಿಯನ್ನು ಕಂಡರಾಗುತ್ತಿರಲಿಲ್ಲ. ಈಗ ಅದೇ ರಾಹುಲ್ ಗಾಂಧಿ ಅಲ್ಲಿಗೆ ಹೋಗಿ ಮೊಸಳೆ ಕಣ್ಣೀರು ಸುರಿಸುವುದನ್ನು ಕಂಡಿದ್ದರೆ, ಫೇಸ್ ಬುಕ್ಕಿನಲ್ಲಿ ಎಷ್ಟು ಪೋಸ್ಟ್ ಗಳನ್ನು ಹಾಕುತ್ತಿದ್ದನೇನೋ? ಆತನ ಸಾವಿನಿಂದ ಇವರೆಲ್ಲರ ಮುಖವಾಡಗಳು ಕಳಚಿಬಿದ್ದಿದ್ದು ನಮಗೆ ಕಂಡರೆ, ಆತನಿಗೆ ಬದುಕಿದ್ದಾಗಲೇ ಇವರ ಮುಖವಾಡಗಳು ಕಳಚಿ ಬಿದ್ದದ್ದನ್ನು ನೋಡಿ ಮನ ನೊಂದು ಹೀಗೆ ಮಾಡಿಕೊಂಡಿರಬೇಕು. ವಿಶ್ವವಿದ್ಯಾಲಯಗಳ ಆವರಣದಲ್ಲಿ ಎಳ್ಳಷ್ಟು ಕೂಡ ರಾಜಕೀಯ ಕಾಲಿಡದಂತೆ, ರಾಜಕಾರಣಿಗಳು ಬರದಂತಹ ವಾತಾವರಣ ತುರ್ತಾಗಿ ನಿರ್ಮಾಣವಾಗಬೇಕು. ಈತನ ಸಾವನ್ನು ರಾಷ್ಟ್ರದ ದುರಂತವೆಂಬಂತೆ ಬಿಂಬಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಸ್ವಯಂ ಘೋಷಿತ ದಲಿತೋದ್ಧಾರಕರನ್ನು, ಸಮಾಜವಾದಿಗಳನ್ನು, ಬುದ್ಧಿಜೀವಿಗಳನ್ನು ಖಂಡಿಸುವ ಕೆಲಸ ಸಾಮಾನ್ಯ ಜನರು ಮಾಡಬೇಕಿದೆ. ಸಮಾಜವನ್ನು ಉದ್ಧರಿಸುವೆವು ಎಂಬ ಮುಖವಾಡ ತೊಟ್ಟು, ದಲಿತರ ಶೋಷಣೆ ಎಂಬ ಅಡಿಬರಹದಲ್ಲಿ ತಾವೇ ಜನರ ಶೋಷಣೆ ಮಾಡುತ್ತಿರುವವರ ವಿರುದ್ಧ ಜಾತಿ, ಮತ ಭೇಧವಿಲ್ಲದೆ ಎಲ್ಲರೂ ಎದ್ದು ನಿಲ್ಲಬೇಕಿದೆ. ಕರ್ನಾಟಕದ ಸ್ವಯಂ ಘೋಷಿತ ಹೋರಾಟಗಾರರಂತೂ ಕರ್ನಾಟಕದಲ್ಲಾಗುವ ಯಾವುದೇ ಆಗು ಹೋಗುಗಳಿಗೂ ತಲೆ ಕೆಡಿಸಿಕೊಳ್ಳದೆ, ಕರ್ನಾಟಕದ ಹೊರಗೆ ಏನೇ ಆದರೂ ಬೊಬ್ಬೆ ಹೊಡೆಯುವುದನ್ನು ನೋಡುತ್ತಿದ್ದರೆ, ಕರ್ನಾಟಕವೆಲ್ಲಿದೆ? ಎಂಬುದನ್ನು ಹುಡುಕುವಂತಹ ಪರಿಸ್ಥಿತಿ ಬಂದೊದಗಿದೆ.


ನಮ್ಮ ಕರ್ನಾಟಕ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈತರೆಲ್ಲರೂ ದುರ್ಬಲ ಮನಸ್ಥಿತಿಯುಳ್ಳವರು, ಅದಕ್ಕಾಗಿಯೇ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಅವರಿಗಿಂತಲೂ ಈ ಹುಡುಗನ ಸಾವು ಅತ್ಯಂತ ದಾರುಣವಾದದ್ದು, ಏಕೆಂದರೆ ಈ ಹುಡುಗ `ದಲಿತ' ಎಂದು ಹೇಳುವುದನ್ನು ನೋಡಿದರೆ, ಇಂತಹವರು ನಮ್ಮ ರಾಜ್ಯಕ್ಕೆ ಸಲಹೆಗಾರರಾಗಿ ಬೇಕಾ? ಎಂದನ್ನಿಸುವುದಿಲ್ಲವೇ? ಜಾತ್ಯಾಧಾರಿತವಾಗಿ ಇವರು ಎಲ್ಲಾ ಸಮಸ್ಯೆಗಳನ್ನು ತೂಕ ಹಾಕುವುದನ್ನು ನೋಡಿದಾಗ, ನಮ್ಮ ಕರ್ನಾಟಕಕ್ಕೆ ಎಂತಹ ದಾರುಣ ಸ್ಥಿತಿ ಬಂದೊದಗಿದೆ ಎಂದನ್ನಿಸಿಬಿಡುತ್ತದೆ. ಕರ್ನಾಟಕದಲ್ಲಿ ಸಮಸ್ಯೆಗಳಾಗುವುದು, ನೋವಾಗುವುದು, ಸಂಕಟವಾಗುವುದು ಕೇವಲ ಅಹಿಂದದವರಾಗಿದ್ದರೆ ಮಾತ್ರ, ಉಳಿದ ಜನರೆಲ್ಲರೂ ಸುಖ, ಸಮೃದ್ಧಿಯಿಂದ ಬದುಕುತ್ತಿದ್ದಾರೆ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ಅವರ ಸಲಹೆಗಾರರು, ಆ ಸಲಹೆಗಾರರ ಬೆಂಬಲಿಗರು ನಂಬಿರುವುದು ನಮ್ಮ ದುರಂತ. ಇಂತಹ ಪೊಳ್ಳು ಆಡಳಿತ ಪಕ್ಷವನ್ನು ವಿರೋಧಿಸದೇ, ತಮ್ಮದೇ ಲೋಕದಲ್ಲಿರುವ ವಿರೋಧ ಪಕ್ಷಗಳನ್ನು ನೋಡಿದಾಗ, ಕರ್ನಾಟಕಕ್ಕೆ ಭವಿಷ್ಯವಿದೆಯೇ? ಇಂತಹ ಆಡಳಿತಗಾರರ ನಡುವೆ ನಮ್ಮ ಮಕ್ಕಳ ಗತಿಯೇನು? ಒಬ್ಬ ರೋಹಿತ್ ಸಮಾಜದ ಈ ಅವ್ಯವಸ್ಥೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ನಾವು, ನಮ್ಮ ಮಕ್ಕಳು?! ಏನು ಮಾಡಬೇಕು? ಆಡಳಿತ ಪಕ್ಷಕ್ಕಂತೂ ಜಾಣ ಕುರುಡು / ಕಿವುಡುತನ ಬಂದಿದೆ. ಆದರೆ ವಿರೋಧ ಪಕ್ಷಗಳೇಕೆ ನಿದ್ದೆ ಮಾಡುತ್ತ ಕುಳಿತಿವೆ? ಎದುರಿಗೆ ಭಕ್ಷ್ಯಭೋಜನಗಳಿದ್ದರೂ, ಕುಂಭಕರ್ಣನಂತೆ ಮಲಗಿರುವ ವಿರೋಧಪಕ್ಷಗಳನ್ನು ಎಬ್ಬಿಸುವುದು ಹೇಗೆ? ಎಬ್ಬಿಸುವವರು ಯಾರು?


Wednesday, April 8, 2015

ವಾಸ್ತು ಪ್ರಕಾರ - ಒಂದು ಹರಟೆ

ಚಿಕ್ಕಂದಿನಲ್ಲಿ ಸಿನೆಮಾಗಳನ್ನು ನೋಡುವುದು ಕೇವಲ ಟೈಮ್ ಪಾಸ್ ಅಥವಾ ಮನರಂಜನೆಗಾಗಿ ಮಾತ್ರ ಎಂಬ ಅಭಿಪ್ರಾಯವಿತ್ತು.  ಹಾಗಾಗಿ ಅದರಲ್ಲಿ ಲಾಜಿಕ್ ಹುಡುಕುವ ಕೆಲಸವನ್ನೇ ಮಾಡುತ್ತಿರಲಿಲ್ಲ. ಕಥೆಗೆ ಪೂರಕವಾಗಿ ನಟನೆ, ಹಾಡು, ಸಂಗೀತ ಎಲ್ಲವೂ ಇದ್ದರಾಯಿತು ಎಂಬುದಷ್ಟೇ ಆಗಿದ್ದ ಮನಸ್ಥಿತಿ. ನಂತರ ಹೀಗೆ ಒಂದಷ್ಟು ಜನರ ಪರಿಚಯವಾದ ನಂತರ ಚಿತ್ರವನ್ನು ಕೇವಲ ನೋಡುವುದಷ್ಟೇ ಅಲ್ಲ, ಅದರಲ್ಲಿ ಅರ್ಥವನ್ನು ಹುಡುಕಬೇಕು, ಅವು ಏನನ್ನೋ ಹೇಳುತ್ತಿರುತ್ತವೆ, ಅವನ್ನು ಅರ್ಥೈಸಬೇಕು, ಅರ್ಥ ಮಾಡಿಕೊಳ್ಳಬೇಕು ಎಂದೆಲ್ಲಾ ಅವರು ಹೇಳಿದಾಗ, ನಾನು ಸಿನೆಮಾ ನೋಡುವ ದೃಷ್ಟಿಯೇ ಬದಲಾಗಿಬಿಟ್ಟಿತು.  ಇರುವ, ಇಲ್ಲದಿರುವ ಅರ್ಥವನ್ನೆಲ್ಲಾ ಹುಡುಕಿ, ಹುಡುಕಿ, ಸುಮ್ಮನೆ ಸಿನೆಮಾ ನೋಡುವ ಅಭ್ಯಾಸವೇ ತಪ್ಪಿ ಬಿಟ್ಟಿತು.  ಒಂದು ರೀತಿಯಲ್ಲಿ ಮನರಂಜನೆ ಕಳೆದು ಹೋಗಿ, ತಲೆಯಲ್ಲಿ ಆಲೋಚನೆಗಳು ಹೆಚ್ಚಾಗಿದ್ದಂತೂ ಸುಳ್ಳಲ್ಲ.

 ‘ಬೌದ್ಧಿಕ ದಾಸ್ಯದಲ್ಲಿ ಭಾರತ’ ಪುಸ್ತಕದಲ್ಲಿ ಪಾಶ್ಚಾತ್ಯರ ಹಾಗೂ ಭಾರತೀಯರ ಕಲಾ ಸಂಸ್ಕೃತಿಯ ಬಗ್ಗೆ ಒಂದಷ್ಟು ಮಾತುಗಳಿವೆ. ಪಾಶ್ಚಾತ್ಯರಿಗೆ ಸಂಗೀತ, ಚಿತ್ರಕಲೆ, ಕಥೆ, ಕಾವ್ಯಗಳೆಲ್ಲ ಕೇವಲ ಆಸ್ವಾದನೆ ಮಾಡಿ ಸಂತೋಷ ಪಡಬೇಕಾದ ವಿಷಯಗಳಾಗಿ ಕಾಣುವುದಿಲ್ಲ.  ಅವು ಅರ್ಥ ಮಾಡಿಕೊಳ್ಳಬೇಕಾದ ವಿಷಯಗಳು.  ಹಾಗಾಗಿ ಕಲಾವಿಮರ್ಶೆ ಎಂಬುದು ಅವರಲ್ಲಿ ಆದ್ಯ ಸ್ಥಾನವನ್ನು ಪಡೆದುಕೊಂಡಿದೆ.  ಕಲೆ ಎನ್ನುವುದು ಜೀವನದ ಅರ್ಥದ ಹುಡುಕಾಟವಾಗಿದೆ.  ಒಂದು ಕಲೆಯನ್ನು ಆಸ್ವಾದಿಸುವುದೆಂದರೆ ಅದರ ಅರ್ಥವನ್ನು, ಉದ್ದೇಶವನ್ನು ತಿಳಿದುಕೊಳ್ಳುವುದು ಎಂದೇ ಅವರು ಭಾವಿಸುತ್ತಾರೆ.  ಏನನ್ನು ತಿಳಿಸಲಿಕ್ಕಾಗಿ ಈ ಕಲಾಕೃತಿಯನ್ನು ರಚಿಸಲಾಗಿದೆ? ಕಲಾಕಾರನು ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದಾನೆ? ಎಲ್ಲಿ ಎಡವಿದ್ದಾನೆ? ಅವನ ಉದ್ದೇಶವನ್ನು ಹೇಗೆ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು? ಇತ್ಯಾದಿಗಳನ್ನು ಕಲಾವಿಮರ್ಶೆ ಒಳಗೊಳ್ಳುತ್ತದೆ. 

ಕಲಾಕೃತಿಯೆಂಬುದರ ಮೂಲಕ ಕಲಾಕಾರನು ಏನನ್ನೋ ತಿಳಿಸಬೇಕು, ಇಲ್ಲದಿದ್ದಲ್ಲಿ ಕಲಾಕೃತಿಗೆ ಅದೊಂದು ನ್ಯೂನತೆ ಎಂಬ ಭಾವನೆ ಅವರಲ್ಲಿದೆ.  ಅವರೆಲ್ಲರ ಪ್ರಕಾರ ವ್ಯಕ್ತಿಯೊಬ್ಬನು ಏನನ್ನೋ ತಿಳಿಸುವ, ಸಂಕೇತಿಸುವ ಹಂಬಲವಿಲ್ಲದೇ ರಚಿಸಿದ್ದು ಕಲಾಕೃತಿಯಾಗಲಾರದು.  ಇದನ್ನೇ ‘ಕಲಾಕಾರನ ಅಭಿವ್ಯಕ್ತಿ’ ಎನ್ನಲಾಗುತ್ತದೆ.  ಆದರೆ ಈ ಕಲಾಕಾರರಿಗೆ ಹಾಗೂ ವಿಮರ್ಶಕರಿಗೆ ತಾವು ಕಲಾಕೃತಿಗಳಲ್ಲಿ ಯಾವ ಅರ್ಥವನ್ನು ಹುಡುಕಬೇಕು? ಯಾವ ಪ್ರಶ್ನೆಯನ್ನು ಇಟ್ಟುಕೊಂಡು, ಏಕಾಗಿ ಕಲೆಯನ್ನು ರಚಿಸಬೇಕು ಅಥವಾ ವಿಮರ್ಶೆಯನ್ನು ಮಾಡಬೇಕು? ಎಂಬುದರ ಬಗ್ಗೆ ಒಮ್ಮತವಿನ್ನೂ ಮೂಡದೇ, ವಿಭಿನ್ನ ಪಂಥಗಳು, ಬಗೆಹರಿಯದ ಚರ್ಚೆಗಳು ಇದಕ್ಕೆ ಸಂಬಂಧಿಸಿ ಹುಟ್ಟಿಕೊಂಡಿವೆ.

ಭಾರತೀಯ ಸಾಂಪ್ರದಾಯಿಕ ಕಲಾ ಪ್ರಕಾರಗಳ ಸಂದರ್ಭದಲ್ಲಿ ಇಂಥ ಹುಡುಕಾಟಕ್ಕೆ ಪ್ರಸ್ತುತತೆಯೇನು? ಎಂಬ ಪ್ರಶ್ನೆಗೆ ಉತ್ತರವಿದ್ದಂತಿಲ್ಲ.  ಭಾರತೀಯ ಕಲೆಗಳಿಗೆ ಸಂಬಂಧಿಸಿ ರಸಸೃಷ್ಟಿ ಹಾಗೂ ರಸಾಸ್ವಾದನೆ ಎಂಬ ಪರಿಕಲ್ಪನೆ ಇದೆ.  ಆದರೆ ಇದನ್ನು ಅಲ್ಲಗಳೆದು ‘ಕಲಾಕಾರನು ಏನನ್ನೋ ತಿಳಿಸುವುದಕ್ಕಾಗಿ ಕಲೆಯನ್ನು ರಚಿಸಬೇಕು ಅಥವಾ ಅವನು ಏನನ್ನು ಅಭಿವ್ಯಕ್ತಿ ಮಾಡುತ್ತಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ರಸಿಕನ ಉದ್ದೇಶ’ ಎಂಬುದಾಗಿ ಯಾರಾದರೂ ಪ್ರತಿಪಾದಿಸಿದರೆ ಅದು ಉಳಿದವರಿಗಿರಲಿ, ಹೇಳಿದವನಿಗೇ ಅರ್ಥವಾಗುತ್ತದೆ ಅಂತ ಅನ್ನಿಸುವುದಿಲ್ಲ. ಅಂದರೆ ನಮ್ಮ ಕಲಾಪ್ರಕಾರಗಳಲ್ಲಿ ಅರ್ಥ ಕಂಡುಹಿಡಿಯುವುದೇ ಅರ್ಥಹೀನ ಕೆಲಸವಾಗಬಹುದು (ಬೌದ್ಧಿಕ ದಾಸ್ಯದಲ್ಲಿ ಭಾರತ, ಪುಟ ೮೨).

ಕಲಾವಿಮರ್ಶೆಯ ಬಗ್ಗೆ ಈ ಪುಸ್ತಕದಲ್ಲಿ ಬರೆದದ್ದನ್ನು ಓದಿದಾಗ, ಅರೆ! ಹೌದಲ್ಲಾ?  ನಾವು ಚಿಕ್ಕಂದಿನಲ್ಲಿ ಚಿತ್ರಗಳನ್ನು ಹೀಗೆಯೇ ಎಂಜಾಯ್ ಮಾಡುತ್ತಿದ್ದದ್ದು. ರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದಿದ್ದರೂ ಕೂಡ ಕೆಟ್ಟ ಪಾತ್ರಕ್ಕೆ ಬೈಯುತ್ತಾ, ಒಳ್ಳೆಯ ಪಾತ್ರವನ್ನು ನಾವೇ ಆ ಪಾತ್ರವಾಗಿ ಸಂಭ್ರಮಿಸುತ್ತಾ, ಆ ಪಾತ್ರಕ್ಕೆ ತೊಂದರೆಯಾದಾಗ ನಾವು ಕೂಡ ಅದರೊಡನೆ ಅಳುತ್ತಾ, ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಯಂತೆಯೇ ಭಾವಿಸುತ್ತಿದ್ದೆವು.  ಆ ಮೂಲಕ ಚಿತ್ರದಲ್ಲಿ ತಲ್ಲೀನತೆಯನ್ನು ಪಡೆಯುತ್ತಿದ್ದೆವು.  ಆ ಘಳಿಗೆಗೆ ನಮ್ಮೆಲ್ಲಾ ನೋವನ್ನು ಮರೆಯುತ್ತಿದ್ದೆವು.  ನಾವು ಪಾಶ್ಚಾತ್ಯರನ್ನು ಅನುಕರಿಸುತ್ತಾ, ಅರ್ಥ ಹುಡುಕಾಡುವ ಗೋಜಿನಲ್ಲಿ, ಆ ಮುಗ್ಧತೆಯನ್ನು / ರಸಾಸ್ವಾದನೆಯನ್ನು ಕಳೆದುಕೊಂಡುಬಿಟ್ಟೆವೇ? ಎಂಬುದು ಕಾಡತೊಡಗಿತು. ಇನ್ನು ಮುಂದೆ, ಯಾವುದೇ ಚಿತ್ರವನ್ನು ನೋಡುವಾಗಲೂ ಅದನ್ನು ಎಂಜಾಯ್ ಮಾಡುವುದಷ್ಟೇ ನನ್ನ ಕೆಲಸ, ಅರ್ಥ ಹುಡುಕುವುದಲ್ಲ ಎಂಬ ಸ್ಪಷ್ಟತೆಯನ್ನು ಕಂಡುಕೊಂಡು! ಹೋಗಿ ನೋಡಿದ ಮೊದಲ ಚಿತ್ರ ‘ವಾಸ್ತು ಪ್ರಕಾರ’.

ಬಹಳ ನಿರೀಕ್ಷೆ ಮೂಡಿಸಿದ್ದ ‘ಬೆಂಕಿಪಟ್ಣ’ ಎರ್ರಾಬಿರ್ರಿ ಸೋತದ್ದು, ‘ವಾಸ್ತು ಪ್ರಕಾರ’ ದ ಮೇಲಿನ ನಿರೀಕ್ಷೆಯನ್ನು ಇನ್ನೂ ಹೆಚ್ಚು ಮಾಡಿತ್ತು ಎಂದರೆ ತಪ್ಪಾಗಲಾರದು.  ಆದರೆ ‘ವಾಸ್ತು ಪ್ರಕಾರ’ ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ, ಯೋಗರಾಜ್ ಭಟ್ಟರ ಮೇಲೆ ಪ್ರೇಕ್ಷಕರಿಗಿರುವ ನಂಬಿಕೆಯಿಂದಾಗಿ ಮಿಶ್ರ ಪ್ರತಿಕ್ರಿಯೆಗಳು ಎಲ್ಲೆಡೆ ವ್ಯಕ್ತವಾದವು.  ನೋಡದೇ ಮಾತಾಡಬಾರದು ಎಂದು ಚಿತ್ರವನ್ನು ನೋಡಿದ್ದಾಯಿತು.  ಚಿತ್ರ ಚೆನ್ನಾಗಿದೆಯೇ? ಇಲ್ಲವೇ?  ಭಟ್ಟರ ಚಿತ್ರಗಳ ಮಾಮೂಲಿಯಾಗಿ ಇರುವ ಎಲ್ಲಾ ಅಂಶಗಳು (ಮುಂಗಾರು ಮಳೆಯನ್ನು ಸೇರಿಸಿ) ಈ ಚಿತ್ರದಲ್ಲೂ ಇವೆ.  ಚಿತ್ರದ ಶುರುವಿನಲ್ಲಿಯೇ ಫೈಟಿಂಗ್, ನಂತರ ಒಂದು ಕಲರ್ ಫುಲ್ ಹಾಡು, ನೃತ್ಯ, ಉಡಾಫೆ ನಾಯಕ (ಈ ಬಾರಿ ಇಬ್ಬರೂ!), ವಯಸ್ಸು ಬೆಳೆದಿದ್ದರೂ ಅನುಭವದ ಕೊರತೆಯಿರುವ, ಚೆಲ್ಲುಚೆಲ್ಲಾಗಿ ಆಡುವ ನಾಯಕಿ, ಬಿಸ್ಲೇರಿ ನೀರಿನಂತಹ ಭಟ್ಟರ ಕಂಗ್ಲೀಷ್ ಹಾಡುಗಳು, ಕಾಡಿನ ಝರಿ ನೀರಿನಂತಹ ತಂಪಾದ ಜಯಂತ್ ಕಾಯ್ಕಿಣಿಯವರ ಹಾಡುಗಳು, ಪ್ರೀತಿಯಲ್ಲಿ ಬೀಳೊಲ್ಲವೆನ್ನುತ್ತಲೇ ಪ್ರೀತಿಯ ಒಂದೆರಡು ದೃಶ್ಯಗಳು, ನಾಯಕ, ನಾಯಕಿ ಜಗಳವಾಡಿದ ವಿರಹದ, ಕೋಪದ, ಕಣ್ಣೀರಿನ ದೃಶ್ಯಗಳು. ಅತಿ ಮುಖ್ಯವಾಗಿ ರೇಡಿಯೋ ನಾಟಕದ ಹಾಗೆಯೇ ಕೇಳಿಸುವ ಉದ್ದದ ಡೈಲಾಗ್ ಗಳು! ಅದೇ ಅನಂತ ನಾಗ್, ಸುಧಾ ಬೆಳವಾಡಿ....... 

ಹಾಗಿದ್ದರೆ ಹೊಸದೇನಿಲ್ಲವೇ? ಇದೆ. ಈ ಬಾರಿ ನಾಯಕನ ಬದಲು ಸಹನಾಯಕನ ಬಾಯಲ್ಲಿ ಉದ್ದುದ್ದದ ಡೈಲಾಗ್ಸ್, ನಾಯಕಿಗಿಂತ ನಾಯಕಿಯ ಅಮ್ಮನಿಗೆ ನಟಿಸಲು ಸಿಕ್ಕಿರುವ ಅವಕಾಶ, ಮೊದಲ ಬಾರಿಗೆ ಭಟ್ಟರ ಚಿತ್ರದಲ್ಲೊಬ್ಬ ಖಳನಾಯಕಿ, ವಿದೇಶಿ ಲೊಕೇಷನ್, ಮುಖ್ಯವಾಗಿ ಪ್ರಸ್ತುತ ಸಮಾಜದಲ್ಲಿ ಮಧ್ಯಮ ವರ್ಗದವರನ್ನು ಕಾಡುತ್ತಿರುವ ಸಮಸ್ಯೆಗೊಂದು ಪರಿಹಾರ / ಸಂದೇಶ ಕೊಡಲು ಯತ್ನಿಸಿದ್ದಾರೆ. ಮನೆಗಳ ಗೋಡೆ ಬೀಳಿಸುವುದಕ್ಕಿಂತ, ಸಂಸಾರದಲ್ಲಿ ಸಾಮರಸ್ಯಕ್ಕಾಗಿ ಮನಗಳ ನಡುವೆ ಗೋಡೆ ಕಟ್ಟಿಕೊಳ್ಳಬೇಡಿ ಎಂದು ಸಾರಿದ್ದಾರೆ.  ಹಾಗಿದ್ದರೆ ಎಲ್ಲವೂ ಇದೆ.  ಚಿತ್ರ ಚೆನ್ನಾಗಿರಬೇಕು ಎನ್ನುತ್ತೀರಾ? ಊಹೂ, ಎಲ್ಲವೂ ಇದ್ದರೂ ಚಿತ್ರದಲ್ಲಿ ಏನೂ ಇಲ್ಲವೆಂದೇ ಭಾಸವಾಗುತ್ತದೆ.  

ಚಿತ್ರವೊಂದರ ಪ್ಲಸ್ ಪಾಯಿಂಟ್ ಇರುವುದು ಕಿವಿ ಮುಚ್ಚಿ ಕುಳಿತುಕೊಂಡರೂ ಚಿತ್ರದ ಕಥೆ ಅರ್ಥವಾಗುವುದರಲ್ಲಿ! ಆದರೆ ‘ವಾಸ್ತುಪ್ರಕಾರ’ ದಲ್ಲಿ ಕಣ್ಮುಚ್ಚಿ ಕುಳಿತರೂ ಚಿತ್ರ ಅರ್ಥವಾಗುತ್ತದೆ. ಕಣ್ಣು ಬಿಟ್ಟು ನೋಡುವಂತಹ ಯಾವುದೇ ಅಂಶಗಳೂ ಚಿತ್ರದಲ್ಲಿಲ್ಲ.  ಜಗ್ಗೇಶ್ ತನ್ನ ಎಂದಿನ ಲವಲವಿಕೆಯಲ್ಲಿ ನಟಿಸಿಲ್ಲ, ಭಟ್ಟರ ಡೈಲಾಗ್ ಗಳಲ್ಲಿ ಏಕತಾನತೆ ಇದೆ, ಪಂಚಿಂಗ್ ಇಲ್ಲ. ರಕ್ಷಿತ್ ಶೆಟ್ಟಿಗಂತೂ ಈ ಪಾತ್ರ ಹೊಂದುವುದೇ ಇಲ್ಲ. ರಕ್ಷಿತ್ ಶೆಟ್ಟಿಯ ಬಾಡಿ ಲಾಂಗ್ವೇಜ್ ಗೂ, ಡೈಲಾಗ್ ಗೂ ಹೊಂದಾಣಿಕೆಯೇ ಆಗುವುದಿಲ್ಲ.  ಬಹುಶಃ ಡೈಲಾಗ್ ಗಳು ಡಬ್ಬಿಂಗ್ ನಲ್ಲಿಯೇ ರಚಿತಗೊಂಡವೋ? ಎಂಬ ಅನುಮಾನ ಹುಟ್ಟಿಸುತ್ತವೆ. ಗಣೇಶ್, ಯಶ್, ದಿಗಂತ್ ಅಥವಾ ಸೃಜನ್ ಲೋಕೇಶ್ ಈ ಪಾತ್ರಕ್ಕೆ ಹೊಂದುತ್ತಿದ್ದರು. ರಕ್ಷಿತ್ ಶೆಟ್ಟಿ ಮತ್ತು ಈಶಾನಿಯ ನಡುವೆ ಕೆಮಿಸ್ಟ್ರಿಯೇ ಇಲ್ಲದಿರುವುದು ಎದ್ದು ಕಾಣುತ್ತದೆ.  ಅನಂತನಾಗ್ ಅವರಿಗಂತೂ ನಟಿಸುವ ಅವಕಾಶವೇ ಇಲ್ಲ. ಅವರು ಕೂಡ ಮುಖದಲ್ಲಿ ಭಾವನೆ ಕಾಣಿಸದಿರಲು / ನಟಿಸದಿರಲು ಶತಾಯಗತಾಯ ಪ್ರಯತ್ನಿಸಿದ್ದಾರೆ. ಇಡೀ ಚಿತ್ರದಲ್ಲಿ ಆರ್ಭಟಿಸುವುದು ಸುಧಾರಾಣಿ, ಚಂದ ಕಾಣುವುದು ಪರೋಲ್, ಟಿ.ಎನ್.ಸೀತಾರಾಂ, ಸುಧಾ ಬೆಳವಾಡಿ ಅವರ ನಟನೆ ನೋಡುವಂತಿದೆ. 

‘ವಾಸ್ತು’ ಎಂಬುದೆಲ್ಲಾ ಸುಳ್ಳು ಎಂಬುದನ್ನು ನಿರೂಪಿಸಲು ಹೊರಟ ಭಟ್ಟರು, ನಿರೂಪಣೆಯಲ್ಲಿ ಎಡವಿದ್ದರಿಂದ, ಪ್ರೇಕ್ಷಕರಿಗೆ ‘ವಾಸ್ತು’ ಕಾಡುವುದೇ ಇಲ್ಲಾ, ಇತ್ತ ಕಡೆ ಪಾತ್ರಗಳು ರಚಿತವಾಗಿವೆಯೇ ಹೊರತು, ಅವುಗಳಿಗೊಂದು ಗೊತ್ತು, ಗುರಿ ಇಲ್ಲದಿರುವುದರಿಂದ, ಅವುಗಳು ಆಡಿದ್ದೇ ಆಟವಾಗಿಬಿಡುತ್ತವೆ.  ಪ್ರೇಕ್ಷಕರಿಗೆ ಮೋಡಿ ಮಾಡುವಲ್ಲಿ ಸೋಲುತ್ತವೆ. ಬಹುಶಃ ಹೊಸಬರು ಈ ಚಿತ್ರವನ್ನು ಹೀಗೆ ನಿರ್ದೇಶಿಸಿದ್ದರೆ, ಚಿತ್ರದ ನೆಗೆಟಿವ್ ಅಂಶಗಳನ್ನು ಮರೆತುಬಿಡಬಹುದಿತ್ತು.  ಆದರೆ ಭಟ್ಟರ ಪ್ರತಿಭೆಗೆ ತಕ್ಕುದಾದ ಸಿನೆಮಾವಲ್ಲವೆಂದೇ ಹೇಳಬಹುದು.  ಕನ್ನಡ ಚಿತ್ರರಂಗದ ನಿರ್ದೇಶಕರು ಇನ್ನಾದರೂ ‘ಚಿತ್ರಕಥೆ’ ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು. ಈ ವಿಷಯದಲ್ಲಿ ಉಡಾಫೆ ಸಲ್ಲದು! ಪ್ರೇಕ್ಷಕರು taken as granted ಆಗಬಾರದು. ಇಂತಹದೊಂದು ಪಾಠ, ಕನ್ನಡ ಚಿತ್ರರಂಗಕ್ಕೆ ಅವಶ್ಯವಾಗಿ ಬೇಕಿತ್ತು.  ಭಟ್ಟರ ಹೆಸರಿನಿಂದಾಗಿ ‘ವಾಸ್ತು ಪ್ರಕಾರ’ ಹಣ ಮಾಡಿಬಿಡಬಹುದು.  ಆದರೆ ಗುಣಮಟ್ಟದ ವಿಷಯದಲ್ಲಿ ಈ ತರಹದ ರಾಜಿ ಸಲ್ಲದು! 

Tuesday, January 6, 2015

ಎಂತಹ ಮಧುರ ಚುಂಬನವಿದು!

ಎಂತಹ ಮಧುರ ಚುಂಬನವಿದು!

ಎಂತಹಾ ಮೃದು, ಮಧುರ ಚುಂಬನ!
ನಾವಿಬ್ಬರೂ ಶಾಶ್ವತವಾಗಿ ಅಗಲುವ ಮುನ್ನಾ!
ಹೃದಯವನ್ನು ಕಲಕಿ ಹಿಂಸಿಸುತ್ತಿರುವ ಸಂಕಟ
ನಿನಗರಿವಾಗಬಾರದೆಂದು ಪಣ ತೊಟ್ಟಿದ್ದೇನೆ
ಈ ನೋವು, ನಿಟ್ಟುಸಿರು, ನರಳಾಟ
ನಿನಗೆ ತಾಕದಿರುವಂತೆ ಪ್ರತಿಜ್ಞೆ ಮಾಡಿದ್ದೇನೆ.
ಅದೃಷ್ಟದ ತಾರೆ ಅವಳೇ, ಅವನ ತೊರೆದ ಮೇಲೆ
ಇನ್ನೂ ಮುಂದಿನ ಬದುಕೆಲ್ಲವೂ ದುಃಖಮಯವೆಂದು
ಅವನಿಗೆ ವಿವರಿಸಲು ಯಾರಿಗಾದರೂ ಸಾಧ್ಯವೇ?
ಇಲ್ಲಾ, ನನ್ನ ಕಣ್ಗಳೇನೂ ಮಿಂಚುತ್ತಿಲ್ಲ;
ನಿರಾಶೆಯ ಕತ್ತಲ ಕೂಪಕ್ಕೆ ತಳ್ಳಲ್ಪಟ್ಟಿದ್ದೇನೆ.
ನಾನೆಂದೂ ನನ್ನ ಅರೆ ಪ್ರೀತಿಗೆ ಬೈಯುವುದಿಲ್ಲ
ನನ್ನ ಪ್ರೀತಿ/ನ್ಯಾನ್ಸಿ ಯನ್ನು ತಡೆಯುವುದಿಲ್ಲ
ಪ್ರೀತಿಯನ್ನು, ಪ್ರೀತಿಯಿಂದಲೇ, ಪ್ರೀತಿಗಾಗಿಯೇ
ಪ್ರೀತಿಸುತ್ತೇನೆ.
ನಾವೆಂದಿಗೂ ಕರುಣೆಯಿಂದ ಪ್ರೀತಿಸಿರಲಿಲ್ಲ.
ನಮ್ಮದೆಂದಿಗೂ ಕುರುಡು ಪ್ರೇಮವಾಗಿರಲಿಲ್ಲ
ಹೃದಯ ನೊಂದು, ಬೇರ್ಪಡುವ, ಮತ್ತೆಂದಿಗೂ
ಭೇಟಿಯಾಗದಂತಹ ಕೆಟ್ಟ ಪ್ರೀತಿಯೂ ಆಗಿರಲಿಲ್ಲ
ನನ್ನ ಮೊಟ್ಟ ಮೊದಲ ಚಂದದ ಪ್ರೀತಿ ನೀನೇ!
ನನ್ನ ಪರಿಪೂರ್ಣ ಆತ್ಮ ಸಂಗಾತಿ ನೀನೇ!
ಜೀವನದುದ್ದಕ್ಕೂ ಸಂತೋಷ, ಶಾಂತಿ, ನೆಮ್ಮದಿ
ಪ್ರೀತಿ, ಪ್ರೇಮ, ಆಯುರಾರೋಗ್ಯ ಐಶ್ವರ್ಯ ನಿನ್ನದಾಗಲಿ
ಎಂತಹ ಅನುರಾಗದ ದೀರ್ಘ ಮಧುರ ಚುಂಬನ!
ಅಯ್ಯೋ! ಶಾಶ್ವತವಾಗಿ ಬೇರ್ಪಡಲೇಬೇಕಲ್ಲಾ!
ಇನ್ನೆಂದಿಗೂ ನಿನ್ನಂತರಾಳವ ಕಲಕುವುದಿಲ್ಲವೆಂದು
ವಾಗ್ಧಾನ ನೀಡುತ್ತೇನೆ.
ಈ ನೋವು, ಸಂಕಟ ನಿನಗೆಂದಿಗೂ ತಿಳಿಯದಿರಲೆಂದು
ಪಣ ತೊಟ್ಟಿದ್ದೇನೆ.

A fond kiss

A fond kiss, and then we sever;
A farewell, and then forever!
Deep in heart-wrung tears I'll pledge thee,
Warring sighs and groans I'll wage thee.
Who shall say that Fortune grieves him,
While the star of hope she leaves him?
Me, nae cheerfu' twinkle lights me;
Dark despair around benights me.
I'll ne'er blame my partial fancy,
Nothing could resist my Nancy;
But to see her was to love her;
Love but her, and love forever.
Had we never lov'd say kindly,
Had we never lov'd say blindly,
Never met--or never parted--
We had ne'er been broken-hearted.
Fare thee well, thou first and fairest!
Fare thee well, thou best and dearest!
Thine be like a joy and treasure,
Peace. enjoyment, love, and pleasure!
A fond kiss, and then we sever;
A farewell, alas, forever!
Deep in heart-wrung tears I'll pledge thee,
Warring sighs and groans I'll wage thee!

Robert Burns

http://www.poemhunter.com/robert-burns/