Monday, October 29, 2012

ಉತ್ಸವ - ಭಾಗ ೧


ತುಮಕೂರಿನ ಬಳಿಯೊಂದು ಪುಟ್ಟ ಹಳ್ಳಿ, ಅಲ್ಲೊಂದು ಪುಟ್ಟದೊಂದು ಗುಡಿ. ಈ ಗುಡಿಯ ಆಡಳಿತ, ಪೂಜೆ, ಕೆಲಸ, ಕಾರ್ಯಗಳೆಲ್ಲವನ್ನೂ ಪುಟ್ಟ ಕುಟುಂಬ ವರ್ಗವೊಂದು ನೋಡಿಕೊಳ್ಳುತ್ತದೆ.  ಈ ಕುಟುಂಬ ವರ್ಗವು ರಾಮಾನುಜಚಾರ್ಯರ ಅನುನಾಯಿಗಳಾದ ಆಳ್ವಾರುಗಳಿಗೆ ಸೇರಿದ್ದು.  ಇವರನ್ನು ಸಾತಾನಿ ವೈಷ್ಣವರೆಂದು ಕೂಡ ಕರೆಯಲಾಗುವುದು.  ಈ ಗುಡಿಯಲ್ಲಿ ಯಾವುದೇ ಉದ್ಭವ ಮೂರ್ತಿಯಿಲ್ಲ. ತಿರುಪತಿ ವೆಂಕಟರಮಣ ತಮ್ಮ ದೈವವೆಂದು ಹಾಗೂ ಅಲ್ಲಿಗೆ ಯಾವತ್ತಿಗೂ ಹೋಗಿ ಬರಲು ಸಾಧ್ಯವಿಲ್ಲವೆಂದು, ಅಲ್ಲಿಂದ ತಂದ ಕಲ್ಲೊಂದನ್ನು ಇಲ್ಲಿ ಪ್ರತಿಷ್ಠಾಪಿಸಿ, ಕಳ್ಳ ಒಕ್ಕಲು ಮಾಡಿಕೊಂಡಿರುವರು! ರಂಗನಾಥನ ಗುಡಿಯೆಂದು ಹಳ್ಳಿಯಲ್ಲಿ ಪ್ರಸಿದ್ಧಿ.  ಆ ಗುಡಿಯಿರುವ ಜಾಗದ ಮಾಲೀಕರು ಲಿಂಗಾಯಿತರು! ತಮ್ಮ ಕಾಲದ ನಂತರ ಮಕ್ಕಳು ಗಲಾಟೆ ಮಾಡಿ, ಗುಡಿಯನ್ನು ಎಬ್ಬಿಸಿದರೆ ತೊಂದರೆಯಾಗುವುದೆಂದು, ತಾವಿದ್ದ ಕಾಲದಲ್ಲಿಯೇ, ರಿಜಿಸ್ಟ್ರೇಷನ್ ಮಾಡಿಸಲೆಂದು ಹಟ ಮಾಡಿ, ದೇವಸ್ಥಾನದ ಟ್ರಸ್ಟಿಗೆ ಇತ್ತೀಚೆಗೆ ಈ ಜಾಗವನ್ನು ಬಿಟ್ಟುಕೊಟ್ಟಿರುವರು. 

ಜಾಗ ತಮ್ಮದಾದ ಮೇಲೆ, ಇಲ್ಲಿ ಹಬ್ಬ, ಹುಣ್ಣಿಮೆಗಳನ್ನು ಆಚರಿಸದಿದ್ದಲ್ಲಿ, ದೇವರು ಕೋಪ ಮಾಡಿಕೊಳ್ಳುವುದಿಲ್ಲವೇ?! ತಮ್ಮ ದೇವರನ್ನು ಕೂಡ ಪ್ರಖ್ಯಾತಿಗೊಳಿಸಬೇಕಲ್ಲವೇ?! ಇತ್ಯಾದಿ ಜಿಜ್ಞಾಸೆಗಳಿಂದ ಹಾಗೂ ಈಗ ಎಲ್ಲೆಡೆ ನಡೆಯುವಂತೆ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ನಡೆಸಲು ತೀರ್ಮಾನವಾಯಿತು, ಆ ದೇವಸ್ಥಾನದ ಮೇಲೆ ಹಕ್ಕಿರುವ ಹತ್ತಿಪ್ಪತ್ತು ಕುಟುಂಬ ವರ್ಗದವರೆಲ್ಲರನ್ನೂ ಭೇಟಿ ಮಾಡಿ, ಇದು ನಿಮ್ಮ ಕುಟುಂಬದ ದೇವರೆಂದು ಇದಕ್ಕೆ ತಮ್ಮ ಶಕ್ತಾನುಸಾರ ಬೆಂಬಲ ವ್ಯಕ್ತಪಡಿಸಬೇಕೆಂದು ಮನದಟ್ಟುಪಡಿಸಲಾಯಿತು. ಬೇರೆ ಬೇರೆ ಊರಿನಲ್ಲಿ ನೆಲೆಸಿದ್ದು, ಒಂದೇ ಕುಟುಂಬ ವರ್ಗಕ್ಕೆ ಸೇರಿದವರಾದರೂ, ಬಂದು ಹೋಗುವ ಬಳಕೆಯಿಲ್ಲದ ಕಾರಣ, ದೂರವೇ ಆಗಿರುವ ಕುಟುಂಬದವರೆಲ್ಲರನ್ನೂ, ಈ ಕಾರಣದಿಂದ ಒಟ್ಟುಗೂಡಿಸಿ, ಈ ದೇವರಿಗೆ ಅವರು ಹರಕೆ ಹೊತ್ತಿದ್ದಕ್ಕೆ, ಮಗಳಿಗೆ ಮದುವೆ ಆಯಿತು ಎಂದೂ, ಇವರು ಯಾವುದೇ ಶುಭ ಕೆಲಸಕ್ಕೂ ಮುನ್ನ ಈ ದೇವಸ್ಥಾನಕ್ಕೆ ಬಂದು ಹೋಗುವರು, ಹಾಗಾಗಿಯೇ ಇವರಿಗೆ ಒಳ್ಳೆದಾಯಿತು ಎಂದೂ, ದೇವಸ್ಥಾನಕ್ಕೂ, ತಮಗೂ ಸಂಬಂಧವೇ ಇಲ್ಲದಂತಿದ್ದ ಒಂದೇ ಕುಟುಂಬಕ್ಕೆ ಸೇರಿದವರಿಗೆಲ್ಲರಿಗೂ ವಿವರಿಸಿ, ಹಣ ಸಂಗ್ರಹಿಸಿದ್ದಾಯಿತು.  

ಉತ್ಸವ ಮೂರ್ತಿ (ರಂಗನಾಥ) ಯನ್ನು ಪ್ರತಿಷ್ಠಾಪಿಸುವ ದಿವಸ ನಡೆದ ಉತ್ಸವ ಹೀಗಿತ್ತು.  ಮೂರ್ತಿಯನ್ನು ಶುದ್ಧಗೊಳಿಸಿ, ಎಲ್ಲಾ ತರಹದ ಮೈಲಿಗೆಯನ್ನು ತೊಳೆದು, ಶುಚಿ ಮಾಡಿ, ಪೂಜಿಸಿ, ಅಭಿಷೇಕ ಮಾಡಿ, ನಂತರ ಇಡೀ ಹಳ್ಳಿಯಲ್ಲಿ ಈ ದೇವರ ಮೂರ್ತಿಯ ಮೆರವಣಿಗೆ.  ಈ ಮೆರವಣಿಗೆಗಾಗಿ ಕೊಳದಪ್ಪಲೆ ಬಾಳೆಹಣ್ಣಿನ ರಸಾಯನ ತಯಾರು ಮಾಡುತ್ತಾರೆ. ಪ್ರಸಾದಕೆಂದು ಅಲ್ಲ! ಮೆರವಣಿಗೆ ಶುರುವಾದಾಗ ಬಹುಶಃ ಕೊರಗ ಜಾತಿಯ (?!) ಜನರು ಸುಮಾರು ೭, ೮ ಮಂದಿ ಟಮಟೆ ಬಾರಿಸಲು ತೊಡಗುತ್ತಾರೆ. ಇವರನ್ನು ಯಾವುದೋ ಹಳ್ಳಿಯಿಂದ ಉತ್ಸವಕೆಂದೇ ಕರೆಸಲಾಗಿತ್ತು.  ಟಮಟೆ ಬಾರಿಸುತ್ತಾ, ಬಾರಿಸುತ್ತಾ, ಅವರಲ್ಲೇ ೩ ಮಂದಿ ವಿಶೇಷ ವಸ್ತ್ರಧಾರಿಗಳಾಗಿ ಕೈಯಲೊಂದು ಖಡ್ಗ, ಗುರಾಣಿ ಹಿಡಿದು ಆವೇಶಭರಿತರಾಗುತ್ತಾರೆ.  ಈ ಮೂವರಿಗೊಬ್ಬ ನಾಯಕ, ಆತನ ಕೈಯಲೊಂದು ಎಲೆಗಳಿರುವ ಸಣ್ಣ ಗಿಡದ ಕೊಂಬೆ (ಎಕ್ಕದ್ದೋ / ಹಲಸಿನದ್ದೋ?! ತಿಳಿಯಲಿಲ್ಲ).  ಆತ ಇವರನ್ನು ಎಂಥದೋ ಭಾಷೆಯಲ್ಲಿ ನಿಯಂತ್ರಿಸುತ್ತಿರುತ್ತಾನೆ. ಆಗಾಗ ಆ ಕೊಂಬೆಯಿಂದ ಹೊಡೆಯುತ್ತಿರುತ್ತಾನೆ.

ಮುಂದೆ ಟಮಟೆ ಬಾರಿಸುವವರು, ಅವರ ಹಿಂದೆ ಈ ಆವೇಶ ಭರಿತರಾದ ಮೂವರು, ಅವರ ಆವೇಶವನ್ನುನಿರ್ದೇಶಿಸುವ ನಾಯಕ, ಅವರ ಹಿಂದೆ ಈ ಬಾಳೆಹಣ್ಣಿನ ರಸಾಯನ ತಿನ್ನಿಸಲು ಉತ್ಸವದ ರೂವಾರಿ ಅಥವಾ ಉತ್ಸಾಹಿ ಯುವಕರು, ಅವರ ಹಿಂದೆ ದೇವಸ್ಥಾನ ಆಡಳಿತ ಮಂಡಲಿಯ ಮುಖ್ಯಸ್ಥರು, ನಂತರ ಉತ್ಸವ ಮೂರ್ತಿಯ ಪಲ್ಲಕ್ಕಿ, ಇದರ ಹಿಂದೆ ಭಕ್ತರು! ಹೀಗೆ ಮೆರವಣಿಗೆ ಮುನ್ನಡೆಯುತ್ತದೆ. ಈ ಕೈಯಲ್ಲಿ ಖಡ್ಗ, ಗುರಾಣಿ ಹಿಡಿದು ಟಮಟೆಯ ಶಬ್ಧಕ್ಕೆ ಆವೇಶಭರಿತರಾದ ಮೂವರು, ಹನುಮಂತನ ಹಾಗೆ ಮುಖ ಮಾಡುತ್ತಾ, ಸುತ್ತ ನೆರೆದಿರುವವರನ್ನೂ ಹೆದರಿಸುತ್ತಾ, ರಸಾಯನ ನೋಡಿದ ಕೂಡಲೇ, ಅದಕ್ಕೆ ಬಾಯಿ ಹಾಕುತ್ತಾ (ಕೈಯಲ್ಲಿ ಮುಟ್ಟಲಾರರು) ಮುಂದೆ, ಮುಂದೆ ಹೋಗುತ್ತಿರುತ್ತಾರೆ. ಕೈಯಲೊಂದು ತಪ್ಪಲೆ ರಸಾಯನ ಹಿಡಿದು, ಇವರನ್ನು ಆಟವಾಡಿಸುತ್ತಾ, ಅವರಂತೆಯೇ ತಾನು ಕೂಡ ಕುಣಿಯುತ್ತಾ, ಸ್ವಲ್ಪ, ಸ್ವಲ್ಪ ರಸಾಯನವನ್ನು ಕೈಯಲ್ಲಿ ತಿನ್ನಿಸುವುದು ಉತ್ಸವದ ರೂವಾರಿಯ ಕೆಲಸ! ಸ್ವಲ್ಪ ಹೆಚ್ಚಿಗೆ ಇವರನ್ನು ಆಟವಾಡಿಸಿದ ತಪ್ಪಿಗಾಗಿ (ಆ ವ್ಯಕ್ತಿ ಬೇಕೆಂದೇ ಮಾಡಿದ್ದೋ? ತಿಳಿಯಲಿಲ್ಲ),  ರೊಚ್ಚಿಗೆದ್ದ ಆ ಮೂವರಲ್ಲಿ ಒಬ್ಬ, ಈತನನ್ನು ಹಿಡಿದು, ಬೀಳಿಸಿ, ಹೊಡೆದು, ಮೂರ್ಚೆ ಹೋಗಿದ್ದ! ಸಿಟ್ಟಾದ ನಾಯಕ ನಾವಿನ್ನೂ ಮುಂದುವರೆಯುವುದಿಲ್ಲವೆಂದು ಮುಷ್ಕರ ಹೂಡಿದ ಕಾರಣ, ದೇವಸ್ಥಾನದ ಮುಖ್ಯಸ್ಥರು ಎಲ್ಲರ ಕ್ಷಮೆ ಕೇಳಿ, ನಂತರ ಮೆರವಣಿಗೆ ಮೊದಲಿನ ಹಾಗೇ ಮುಂದುವರೆಯಿತು.  

ಇಡೀ ಹಳ್ಳಿಯಲೊಂದು ಸುತ್ತು ಹಾಕಿದ ಉತ್ಸವ ಮೂರ್ತಿಗಳ ಮೆರವಣಿಗೆ, ಹಳ್ಳಿಯಲ್ಲಿದ್ದ ಎಲ್ಲಾ ದೇವಸ್ಥಾನಗಳನ್ನು ದರ್ಶಿಸಿ, ಪೂಜೆ ಮಾಡಿಸಿಕೊಂಡು ತನ್ನ ಸ್ವಸ್ಥಾನಕ್ಕೆ ಮರಳುತ್ತಿತ್ತು. ಆಗ ನಡೆದ ವೈಚಿತ್ರ್ಯವೆಂದರೆ, ಉತ್ಸವ ಮೂರ್ತಿಗಳ ಪಲ್ಲಕ್ಕಿ, ಸುಮಾರು ೨೦ ಮಂದಿ ಅದನ್ನು ಹೊತ್ತಿದ್ದರು ಕೂಡ ಇದ್ದಕ್ಕಿದ್ದಂತೆ ಹಿಂದಕ್ಕೆ ಎಳೆಯತೊಡಗಿತು.  ಯಾರಿಗೂ ಏನೂ ಅರ್ಥವಾಗಲಿಲ್ಲ. ಎಷ್ಟೇ ಕಷ್ಟ ಪಟ್ಟರೂ ಪಲ್ಲಕ್ಕಿಯನ್ನು ಹೊತ್ತವರಿಗೆ ಮುನ್ನಡೆಯಲಾಗಲಿಲ್ಲ.  ಆಗ  ಹಳ್ಳಿಯ ಜನರಲ್ಲಿ ಯಾರೋ ಒಬ್ಬರು, ಅಲ್ಲೊಂದು ಈಶ್ವರನ ಪುಟ್ಟಗುಡಿಯಿದೆ ಎಂದು, ಬಹುಶಃ ಅಲ್ಲಿಗೆ ಹೋಗಬೇಕೆಂದು ಸೂಚಿಸಿದರು. ಪಲ್ಲಕ್ಕಿ ಅತ್ತ ಸಲೀಸಾಗಿ ನಡೆಯಿತು.  ಅಲ್ಲಿ ಪೂಜಿಸಿಕೊಂಡು ಬಂದ ಮೇಲೆ ಉತ್ಸವ ದೇವರ ಪಲ್ಲಕ್ಕಿ , ತನ್ನ ದೇವಸ್ಥಾನಕ್ಕೆ ಯಾವುದೇ ಅಡಚಣೆಯಿಲ್ಲದೆ ಮರಳಿತು.

ದೇವಸ್ಥಾನದ ಮುಂಭಾಗದಲ್ಲಿ ಬಟ್ಟೆಯೊಂದನ್ನು ಹಾಸಿ, ಉಳಿದಿದ್ದ ರಸಾಯನವನ್ನೆಲ್ಲಾ (ಸುಮಾರು ೧೦, ೧೫ ಕೆಜಿ ಬಾಳೆಹಣ್ಣಿದ್ದಿರಬಹುದು!) ಅದರ ಮೇಲೆ ಸುರಿದರು.  ಈ ಆವೇಶ ಭರಿತ ಮೂವರು (ಮೆರವಣಿಗೆ ಸಮಯದಲ್ಲಿ ಮೂರು ಸಲ ತಂಡದ ಮಂದಿ ಬದಲಾಗಿದ್ದರು) ಓಡಿ ಬಂದು, ಅಲ್ಲಿದ್ದ ರಸಾಯನವನ್ನೆಲ್ಲಾ ಬಾಯಿ ತುಂಬಾ ಮುಕ್ಕಿ (ಪೂರ್ತಿ ಖಾಲಿ ಆಯಿತು), ಸೀದಾ ದೇವಸ್ಥಾನದ ಒಳಗೆ ಓಡಿ, ಮೂರ್ಚೆ ಹೋದರು! ಈ ಮೂವರಲ್ಲಿ ಒಬ್ಬಾತನಿಗೆ ಸುಮಾರು ೭೦ ವರ್ಷ ವಯಸ್ಸಾಗಿದ್ದು, ಆತ ಕೂಡ ಕೆಜಿಗಟ್ಟಲೆ ರಸಾಯನ ತಿಂದದ್ದು ಆಶ್ಚರ್ಯ ಪಡಬೇಕಾದದ್ದೇ! ನಂತರ ಅವರ ತಲೆಗೆ ತಣ್ಣೀರು ತಟ್ಟಿ ಶುಶ್ರೂಷೆ ನಡೆಸಲಾಯಿತು.  ಪ್ರಜ್ಞೆ ಬಂದ ನಂತರ ಬಟ್ಟೆ ಬದಲಾಯಿಸಿ, ತಮ್ಮ ಕೆಲಸಕ್ಕೆ ತಕ್ಕ ಕಾಣಿಕೆ ಪಡೆದು, ಇಷ್ಟು ಹೊತ್ತಿನ ತನಕ ನಡೆದದ್ದಕ್ಕೂ, ತಮಗೂ ಸಂಬಂಧವೇ ಇಲ್ಲದಂತೆ ಅವರು ಹೊರಟರು. ಉತ್ಸವ ಮುಗಿಯಿತು. ಮೂರ್ತಿಗಳು ಪ್ರತಿಷ್ಠಾಪಿತಗೊಂಡವು. ಉತ್ಸವ ಮುಗಿದ ನಂತರ ಈ ಜನರು ದೇವಸ್ಥಾನದ ಒಳಗೆ ಹೋಗಬಾರದು.

ಉತ್ಸವದಂದು ನೆರೆದಿದ್ದವರೆಲ್ಲರಿಗೂ (ಜಾತಿ ಭೇಧವಿಲ್ಲದೆ) ಊಟೋಪಚಾರದ ವ್ಯವಸ್ಥೆ. ದೇವಸ್ಥಾನದ ಕುಟುಂಬ ವರ್ಗದವರಿಗೆ ಮೊದಲು ಬಡಿಸಬೇಕೋ? ಹಳ್ಳಿಯ ಜನರಿಗೆ ಮೊದಲು ಬಡಿಸಬೇಕೋ? ಎಂಬ ಚರ್ಚೆ ನಡೆಯುವಷ್ಟರಲ್ಲಿಯೇ, ಊಟಕ್ಕೆ ಬಹು ತಡವಾಗಿದ್ದ ಕಾರಣ, ಸ್ಥಳ ಸಿಕ್ಕಲೆಲ್ಲಾ, ಎಲ್ಲಾ ಜನರು ಕುಳಿತರು. ಬೇರೆ ಜಾತಿಯ / ‘ಕೀಳು’ ಜಾತಿಯ ಅಥವಾ ಹಾಕಿದ್ದ ಬಟ್ಟೆ ನೀಟಾಗಿಲ್ಲದೆ ಕೀಳಾಗಿ ಕಾಣಿಸಿದ್ದೋ ಗೊತ್ತಿಲ್ಲ, ಅಂಥ ಮಕ್ಕಳನ್ನು ಮಾತ್ರ ಬೆದರಿಸಿ, ಎಬ್ಬಿಸಿ, ಓಡಿಸಿ, ಕುಟುಂಬ ವರ್ಗದ ಜನ ಊಟಕ್ಕೆ ಮೊದಲ ಪಂಕ್ತಿಗೆ ಕುಳಿತರು. ಕೊಳಕು, ಕೊಳಕಾಗಿದ್ದ ದೊಡ್ಡವರು ಮಾತ್ರ ಭಂಡತನದಿಂದ ಪಾಯಸದೂಟ ಮಾಡಲು ಕುಳಿತೇ ಇದ್ದರು. ಇರಿಸು ಮುರಿಸು ಮಾಡಿಕೊಂಡು ಎಲ್ಲರೂ ಅವರ ಜೊತೆಯಲ್ಲಿಯೇ ಊಟಕ್ಕೆ ಕುಳಿತರು.  ಹಳ್ಳಿಯ ಜನಕ್ಕೆ ಮುದ್ದೇ ಮಾಡಿಸಬೇಕು, ಅನ್ನದಿಂದ ಪೂರೈಸೊಲ್ಲ ಎನ್ನುವ ಒಮ್ಮತದ ಅಭಿಪ್ರಾಯ ಬರುವ ಹೊತ್ತಿಗೆ ಎಲ್ಲರ ಊಟಾ ಮುಗಿದಿತ್ತು.  ಬೇರೆ ಜಾತಿಯವರು ಮೊದಲಿಗೆ ಕುಳಿತದಕ್ಕೆ, ನಾವು ಊಟ ಮಾಡುವುದಿಲ್ಲ, ಫಲಾಹಾರ ಮಾತ್ರ ಎಂದು ಒಂದಷ್ಟು ಜನ ಬಾಳೆಹಣ್ಣು (ರಸಾಯನ ಮಾಡಲು ತಂದು, ಉಳಿದಿದ್ದ :-), ಹಣ್ಣಿಗೆ ದೋಷವಿಲ್ಲ ಅಲ್ಲವೇ?  ) ತಿಂದು ಮುಗಿಸಿದರು.  ಅಡುಗೆ ವ್ಯವಸ್ಥೆ ಸರಿಯಿಲ್ಲವೆಂದು ಇನ್ನೊಂದಷ್ಟು ಜನ ದೂರಿದರು. ಅಂತೂ ಇಂತೂ ಉತ್ಸವ ಮುಗಿಯಿತು.  

ಉತ್ಸವ ನಡೆದ ಮೇಲೆ ಬಂದ ಮೊದಲ ದಸರಾಹಬ್ಬವನ್ನು ಆಚರಿಸದಿದ್ದರೆ ಹೇಗೆ?  ವಿಜಯದಶಮಿಯ ದಿನ ಮತ್ತೆ ಉತ್ಸವ ಹೊರಟಿತು. ಈ ಬಾರಿ ಓಲಗ ಊದುವವರು ಬಂದರು.  ಓಲಗ ಶುರುವಾದ ನಂತರ ಉತ್ಸವ ಮೂರ್ತಿಯನ್ನು ಹೊತ್ತು ಹಳ್ಳಿಯ ಹಾದಿ ಬೀದಿಗಳಲೆಲ್ಲಾ ಮೆರವಣಿಗೆ ಬಂತು.  ಶಿವನ ದೇವಸ್ಥಾನದಲ್ಲಿಯೂ, ಕಾಳಿಯ (ದೇವಿಯ) ದೇವಸ್ಥಾನದಲ್ಲಿಯೂ ಈ ಉತ್ಸವ ದೇವರ ಪೂಜೆ ನಡೆಯಿತು.  ಹಣೆಗೆ ದೊಡ್ಡದಾಗಿ ವಿಭೂತಿ ಬಳಿದುಕೊಂಡು, ತಾವು ಲಿಂಗಾಯಿತರೆಂದು ಜಗಜ್ಜಾಹೀರುಗೊಳಿಸುತ್ತಿದ್ದ ಮಂದಿಯು ಕೂಡ, ಅಷ್ಟೇ ಭಯಭಕ್ತಿಯಿಂದ, ಈ ‘ರಂಗನಾಥ’ ದೇವರಿಗೆ ಹಣ್ಣುಕಾಯಿ ಮಾಡಿಸಿದರು. ನೆಲಕ್ಕೆ ಅಪ್ಪಳಿಸಿದ ತೆಂಗಿನಕಾಯಿಯನ್ನು, ‘ಕೀಳು ಜಾತಿಯ ಜನರು ಮಾತ್ರ ಆರಿಸಿಕೊಂಡು ತಿನ್ನಬೇಕು, ನಾವೆಲ್ಲಾ ಅಲ್ಲಾ! ಎಂದು ಜೋರು ಮಾಡುತ್ತಿದ್ದ ಅಜ್ಜಿಯೊಬ್ಬರು, ಚೂರುಚೂರಾಗಿ ಕೆಳಗೆ ಬಿದ್ದಿರುವ ಕಾಯಿಯನ್ನು ಆಸೆಕಂಗಳಿಂದ ನೋಡುತ್ತಿದ್ದ ವೈಷ್ಣವರ ಮಗುವೊಂದು, ‘ನಾವು ತಿನ್ನಬಾರದಂತೆ? ಆದರೆ ಈಗ ನೋಡಿ, ನಾಯಿಯೊಂದು ತಿನ್ನುತ್ತಿದೆ! ಇದೀಗ ನಿಮ್ಮ ದೇವರಿಗೆ ಅಪಮಾನವಾದಂತಲ್ಲವೇ? ಎಂದು ವಾದಿಸುತ್ತಿದ್ದ ೧೨ ವರ್ಷ ವಯಸ್ಸಿನ ಪೋರನ ಹೊಟ್ಟೆಉರಿ ಒಂದು ಕಡೆ, ಇದ್ಯಾವುದೋ ತಮಗೆ ಸಂಬಂಧಿಸಿದಲ್ಲವೆಂಬಂತೆ, ಭಕ್ತಿ ಪರವಶರಾಗಿದ್ದ ಆತನ ಅಪ್ಪ, ಅಮ್ಮ!  

ನಂತರ ಮೆರವಣಿಗೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಬನ್ನಿಮಂಟಪದ ಕಡೆಗೆ ತೆರಳಿತು.  ತೆಂಗಿನ ಸೋಗೆ ಹಾಕಿ ಮಾಡಿದ್ದ ಚಪ್ಪರ, ಅದರಡಿಯಲ್ಲಿ ಹಾಸಿದ್ದ ಬಟ್ಟೆ ಮೇಲೆ ಉತ್ಸವ ದೇವರು ಕುಳಿತರು. ಅದಕ್ಕಾಗಿ ಇದ್ದ ಛತ್ರಿಯಡಿ, ಭಕ್ತರು ಅದನ್ನು ಹಿಡಿದು, ತಾವೇ ನಿಂತರು.  ಚಪ್ಪರದಡಿ ಒಂದು ಗುಳಿ ಈ ಮೊದಲೇ ತೋಡಿಟ್ಟಿದ್ದರು.  ಪಕ್ಕದಲ್ಲೇ ಬಾಳೇ ಗಿಡವೊಂದನ್ನು, ಅದಕ್ಕೆ ಬನ್ನಿ ಮರದ ಟೊಂಗೆಗಳನ್ನು ಕಟ್ಟಿಟ್ಟಿದ್ದರು.  ಈ ಬಾಳೆಗಿಡವನ್ನು ತೋಡಿಟ್ಟಿದ್ದ ಗುಳಿಯಲ್ಲಿ ನೆಟ್ಟರು.  ದೇವಸ್ಥಾನದ ಮುಖ್ಯಸ್ಥರು ಕತ್ತಿಯನ್ನು ಪೂಜೆ ಮಾಡಿ ಒಂದೇ ಏಟಿಗೆ ಬಾಳೇಗಿಡವನ್ನು ಕಡಿದರು. ಅದು ನೆಲಕ್ಕೆ ಒರಗುವ ಮುನ್ನವೇ, ಅದರಲ್ಲಿದ್ದ ಬನ್ನಿ ಎಲೆಗಳಿಗೆ ಕಿತ್ತಾಟ ನಡೆದು (ಬನ್ನೀ ಎಲೆಗಳು ನೆಲಕ್ಕೆ ಬೀಳುವ ಮುನ್ನವೇ ಪಡೆದರೆ, ಅದು ಚಿನ್ನವಂತೆ!), ಸಿಕ್ಕಿದವರಿಗೇ ಸೀರುಂಡೆ ಎಂದಂತೆ, ಸಿಕ್ಕಷ್ಟು ಹಳ್ಳಿಯವರೆಲ್ಲರೂ ತೆಗೆದುಕೊಂಡರು.  ಮನೆಗೆ ತೆರಳಿದ ನಂತರ ಅದನ್ನು ಹಿರಿಯರಿಗಿತ್ತು, ಅವರಿಗೆ ನಮಸ್ಕರಿಸಿ, ಬನ್ನಿ ಕೊಡ್ತೇವೆ, ಬಂಗಾರ ನೀಡಿ ಎಂದರೆ, ಕಿರಿಯರ ಬಾಳು ಬಂಗಾರವಂತೆ! 

(ಮುಂದುವರಿಯುವುದು)

Monday, October 15, 2012

ಇಂಗ್ಲೀಷ್ ಭಾಷೆಯ ದಾಳಿಯಿಂದ ಸೊರಗುತ್ತಿರುವ ಇನ್ನಿತರ ಭಾಷೆಗಳು - ಇಂಗ್ಲೀಷ್ ವಿಂಗ್ಲೀಷ್


ಶಶಿ - ಅತ್ಯಂತ ಸಾಮಾನ್ಯ ಹೆಣ್ಣು ಮಗಳು. ಅತ್ತೆ, ಗಂಡ, ಮಕ್ಕಳಿಗೆ ರುಚಿಯಾದ ಅಡುಗೆ ಮಾಡಿ, ಅವರಿಗೆ ಉಣಬಡಿಸುವುದರಲ್ಲಿಯೇ ಸಾರ್ಥಕ್ಯ ಕಂಡವಳು.  ಜೊತೆಗೊಂದಿಷ್ಟು ಪುಡಿಕಾಸು ಸಂಪಾದಿಸಲು, ತನಗೆ ಗೊತ್ತಿರುವಂಥ ವಿದ್ಯೆಯಾದ ಅಡುಗೆಯಿಂದಲೇ, ಮದುವೆ ಮುಂತಾದ ಸಮಾರಂಭಗಳಿಗೆ ಲಡ್ಡು ತಾನೇ ಕೈಯಾರೆ ತಯಾರಿಸಿ, ಅಲ್ಲಿಗೆ ಹೋಗಿ ಕೊಟ್ಟು ಬರುವಂಥವಳು.  ಆ ಹಣವನ್ನು ಆಪದ್ಧನವೆಂದು ಕಾದಿರಿಸುವವಳೇ ಹೊರತು, ತನ್ನ ಬಟ್ಟೆಬರೆ, ಅಲಂಕಾರಗಳಿಗೆ ಖರ್ಚು ಮಾಡುವಂಥವಳಲ್ಲ!  ಒಟ್ಟಿಗೆ ಬಾಳುವುದಕ್ಕೆ ಸಂಗಾತಿ ಪರಿಪೂರ್ಣನಾಗಿರಬೇಕಿಲ್ಲ, ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಸಾಕು ಎಂಬುದು ಇವಳ ತತ್ವ. ಮಕ್ಕಳನ್ನು ಬೆಳೆಸುವಲ್ಲಿಯೂ ಆಕೆ ನಿರಾಳ. ಟೀನೇಜ್ ಮಗಳು ತುಂಡುಬಟ್ಟೆ ಹಾಕಿಕೊಂಡು, ಕಾಫೀ ಡೇ ಹೋಗುವುದನ್ನು ಅತೀ ಸಾಮಾನ್ಯ ವಿಷಯದಂತೆ ಸ್ವೀಕರಿಸುವಷ್ಟು, ತನ್ನ ಮುಂದೆಯೇ ತನ್ನ ಗಂಡ, ಪರ ನಾರಿಯನ್ನು ಹಗ್ ಮಾಡುವುದನ್ನು ಒಪ್ಪಿಕೊಳ್ಳುವಷ್ಟು, ಆಧುನಿಕ ಮನೋಧರ್ಮ ಇವಳಲ್ಲಿದೆ.  ಗೇ, ಲೆಸ್ಬಿಯನ್ ಸಂಬಂಧಗಳನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡುವಂಥ ಸುಶಿಕ್ಷಿತ ಮನೋವರ್ಗದ ನಡುವೆ, ಅವರದು ಹೃದಯವಲ್ಲವೇ? ಅವರು ಕೂಡ ಪ್ರೀತಿಸಲು, ಬದುಕಲು ಅರ್ಹರು ಎನ್ನುವಂಥ, ಗಂಡ, ಮಕ್ಕಳ ಆಧುನಿಕ ಮನಸ್ಸನ್ನು ಯಾವುದೇ ತಂಟೆ, ತಕರಾರಿಲ್ಲದೆ ಒಪ್ಪಿಕೊಳ್ಳುವಂಥ ವಿಶಾಲ ಮನಸ್ಸು ಈಕೆಯದು. ಈ ಆಧುನಿಕ ಜಗತ್ತಿನಲ್ಲಿ ಇದ್ದು ಕೂಡ ಇರದಂಥವಳು. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು, ಭಾವನೆಗಳನ್ನು ವ್ಯಕ್ತ ಪಡಿಸಲು ಭಾಷೆಯ ಹಂಗೇಕೆ? ತಾವೇ ಅವರ ಜಾಗದಲ್ಲಿ ನಿಂತು ನೋಡಿದರೆ ಅವರು ಅರ್ಥವಾಗುತ್ತಾರೆ ಎನ್ನುವ ಮನೋಭಾವದವಳು.  ಆದರೆ ಈಕೆಯನ್ನು, ಈಕೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಗಂಡ ಮತ್ತು ಮಗಳು, ಈಕೆಯದು ಗೊಡ್ಡು ಸ್ವಭಾವವೆಂದು, ಈ ಜಗತ್ತಿನಲ್ಲಿ ಬದುಕಲು ಕೂಡ ಅನರ್ಹವೆಂದೂ, ಇಂಗ್ಲೀಷ್ ಭಾಷೆ ಬರದ ಈಕೆ ಅಡುಗೆಮನೆಯಲಿರಷ್ಟೇ ಲಾಯಕ್ಕೆಂದೂ, ಸಮಯ ಸಿಕ್ಕಾಗಲೆಲ್ಲಾ ಪರಿಹಾಸ್ಯ ಮಾಡುವ ಗಂಡ, ಅದನ್ನು ತನ್ನ ಉಪಯೋಗಕ್ಕೆ ಬಳಸಿಕೊಳ್ಳುವ ಮಗಳು, ಇವರೀರ್ವರ ಅಪಹಾಸ್ಯದಿಂದ ನೋವಾದರೂ, ಸಂಕಟವಾದರೂ, ತೋರಿಸಿಕೊಳ್ಳದ ಸಂಯಮಿ.  

ಹೀಗಿದ್ದ ಶಶಿಗೆ ಅಕಸ್ಮಾತ್ತಾಗಿ ಅಮೇರಿಕಾಗೆ ಒಂಟಿಯಾಗಿ ಹೋಗುವ ಸಂದರ್ಭ ಒದಗಿಬರುತ್ತದೆ.  ಅದುವರೆವಿಗೂ ಒಬ್ಬಂಟಿಯಾಗಿ ಎಲ್ಲಿಗೂ ಹೋಗಿರದಿದ್ದ ಈಕೆ, ತನ್ನ ಜಗತ್ತನ್ನು ಬಿಟ್ಟು ಹೋಗುವುದರ ಸಂಕಟದ ಜೊತೆಗೆ, ಒಂಟಿಯಾಗಿ ಭಾಷೆ ಬರದ ನಾಡಿನಲ್ಲಿ ಬದುಕುವುದು ಹೇಗೆ? ಎಂಬ ಕಳವಳ ಕಾಡತೊಡಗುತ್ತದೆ.  ಇಂಗ್ಲೀಷ್ ಭಾಷೆಯ ಅರಿವಿಲ್ಲದೆ ತನ್ನ ಜಗತ್ತನ್ನು ಸಂಭಾಳಿಸುತ್ತಿದ್ದ ಈಕೆಗೆ, ಅಮೇರಿಕಾದಲ್ಲಿ ಇಂಗ್ಲೀಷ್ ಬರದೇ ಇರುವುದು ಬಹು ದೊಡ್ಡ ತೊಡಕಾಗಿಬಿಡುತ್ತದೆ.  ಅದಕ್ಕೆ ಪೂರಕವಾಗಿ ಕಾಫಿ ಶಾಪ್ ಒಂದರಲ್ಲಿ ನಡೆಯುವ ಘಟನೆ, ಆಕೆಯ ಆತ್ಮವಿಶ್ವಾಸಕ್ಕೆ ಧಕ್ಕೆ ತಂದುಬಿಡುತ್ತದೆ.  ೪ ವಾರಗಳಲ್ಲಿ ಇಂಗ್ಲೀಷ್ ಕಲಿಸುವ ಕೋರ್ಸಿಗೆ ಸೇರುವ ಶಶಿ, ಅಲ್ಲಿ ಇವಳಂತೆಯೇ ಭಾಷೆಯ ತೊಡಕಿನಿಂದ ತೊಂದರೆ ಅನುಭವಿಸಿ, ಇಂಗ್ಲೀಷ್ ಕಲಿಯಲು ಬರುವ ಇನ್ನಿತರರು, ತನ್ನ ಕಾಲ ಮೇಲೆ ತಾನು ನಿಲ್ಲಲು ಸಹಾಯ ಮಾಡಿರುವ ಇವಳ ಅಡುಗೆ ಬಗ್ಗೆ ಇವಳಿಗೆ ಪ್ರೀತಿಯಿದ್ದರೂ, ಗಂಡ ಮತ್ತು ಮಗಳು ಅಪಹಾಸ್ಯ ಮಾಡಿ, ಅದರ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿರುವ ಶಶಿಗೆ, ನೀನೊಬ್ಬಳು ಉದ್ಯಮಿ ಎಂದು ಅರಿವು ಮೂಡಿಸುವ ಆಕೆಯ ಟೀಚರ್, ನಿನ್ನ ಅಡುಗೆ ಕೆಲಸ ಕಲೆಯೆಂದೂ ಅಭಿಮಾನ ಮೂಡಿಸುವ, ಇವಳಂತೆಯೇ ಅಡುಗೆಯನ್ನೇ ತನ್ನ ಕೆಲಸ ಮಾಡಿಕೊಂಡಿರುವ ಫ್ರೆಂಚ್ ಗೆಳೆಯ, ಆತ ಇವಳತ್ತ ಆಕರ್ಷಿತನಾಗುವುದು, ಭಾಷೆ ಬರದಿದ್ದರೂ, ತಮ್ಮ ತಮ್ಮ ಭಾಷೆಗಳಲ್ಲಿಯೇ ತಮ್ಮೆಲ್ಲಾ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದು, ಇವರಿಬ್ಬರ ನಡುವೆ ನಡೆಯುವಂಥ ಘಟನೆಗಳು, ಈಕೆಯನ್ನು ಹೆಜ್ಜೆಹೆಜ್ಜೆಗೂ ಹುರಿದುಂಬಿಸುವ, ಅಮೇರಿಕಾದಲ್ಲೇ ಹುಟ್ಟಿ, ಬೆಳೆದಿರುವ ಅಕ್ಕನ ಮಗಳು, ಇವಳಲ್ಲಿ ಆತ್ಮವಿಶ್ವಾಸ ಚಿಗುರುವಂತೆ ಮಾಡುವುದು. ತನ್ನ ಬಗ್ಗೆ ತನಗೆ ಪ್ರೀತಿಯುಂಟುವಂತೆ ಮಾಡಿದ ಫ್ರೆಂಚ್ ಗೆಳೆಯನನ್ನು ಆಯ್ಕೆ ಮಾಡುತ್ತಾಳಾ? ಅಥವಾ ತನ್ನ ಹಿಂದಿನ ಜೀವನಕ್ಕೆ ಮರಳುತ್ತಾಳಾ? ಇದು ಇಂಗ್ಲೀಷ್ ವಿಂಗ್ಲೀಷ್ ಚಿತ್ರದ ಕ್ಲೈಮಾಕ್ಸ್.

ಭಾರತದಲ್ಲೇ ನೆಲೆಸಿರುವಂಥ ಆಧುನಿಕ ಸುಶಿಕ್ಷಿತ ವರ್ಗದ ಮನಸ್ಥಿತಿ ಹಾಗೂ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮನಸ್ಥಿತಿ ಚಿತ್ರದಲ್ಲಿ ಚೆಂದವಾಗಿ ನಿರೂಪಿತಗೊಂಡಿದೆ. ಅಮೇರಿಕಾದಲ್ಲಿದ್ದರೂ, ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು, ನಡವಳಿಕೆಯಾಗಬಹುದು, ಸಂಭೋದನೆಯಾಗಬಹುದು, ಭಾರತದ ಸಂಸ್ಕೃತಿ, ಭಾಷೆಯನ್ನು ಮರೆಯದ  ಅನಿವಾಸಿ ಭಾರತೀಯರು,  ಅಲ್ಲಿಯೇ ಜನಿಸಿ, ಅಮೇರಿಕನ್ ಸಿಟಿಜನ್ ಶಿಪ್ ಪಡೆದು, ಬೆಳೆದಿರುವ ಅವರ ಮಕ್ಕಳು ಕೂಡ ಭಾರತೀಯ ಸಂಸ್ಕೃತಿಯಂತೆಯೇ ಬದುಕಲು ಆಸೆ ಪಡುವುದು, ಮತ್ತೊಂದು ಕಡೆ ಭಾರತದಲ್ಲಿಯೇ ಜನಿಸಿ, ಅಮೇರಿಕಾದ ಗಂಧಗಾಳಿ ಇಲ್ಲದೆ ಇಲ್ಲಿಯೇ ಬೆಳೆದಿದ್ದರೂ, ಉಡುಗೆ, ತೊಡುಗೆ, ಊಟ ಉಪಚಾರ, ಭಾಷೆಯ ಉಚ್ಚಾರ ಎಲ್ಲದರಲ್ಲೂ ಅಮೇರಿಕನರನ್ನು ಅನುಕರಿಸಲು ಪ್ರಯತ್ನ ಪಡುವುದು ಎಲ್ಲೋ ಒಂದು ಕಡೆ ನಮ್ಮ ಭಾರತೀಯ ಸಂಸ್ಕೃತಿ ಬೆಳೆಯುತ್ತಿದೆಯಲ್ಲಾ ಎನ್ನುವ ಆಸೆಯನ್ನು ಬಿತ್ತಿದರೂ, ಇಲ್ಲಿ, ಭಾರತದಲ್ಲಿ,  ಆಧುನಿಕ ಮನೋಭಾವವೆಂದರೆ ಅಮೇರಿಕನವರದ್ದು ಮಾತ್ರ ಎಂದು ಮಕ್ಕಳಾದಿಯಾಗಿ ಎಲ್ಲರೂ ಒಪ್ಪಿಕೊಳ್ಳುವುದು, ಇಲ್ಲವೇ ನೀನು ಬದುಕಲು ಅನರ್ಹ ಅಥವಾ ಅಡುಗೆ ಮನೆಗಷ್ಟೇ ಲಾಯಕ್ಕು ಎಂಬುದು ನಮ್ಮಲ್ಲಾಗುತ್ತಿರುವ ಸಂಕುಚಿತ ಭಾವನೆಯನ್ನು ಹಾಗೂ ಹೀಗೆ ಇರದಿದ್ದವರು ಕೀಳರಿಮೆಗೆ ಒಳಗಾಗುವ, ಇಂಥವರೆಲ್ಲರೂ ತಮ್ಮ ಚಿಪ್ಪಿನೊಳಗೆ ಹುದುಗಿಬಿಡುವಂಥ ಅಪಾಯವನ್ನು, ತನ್ಮೂಲಕ ನಮ್ಮ ಸಮಾಜದ ಬೆಳವಣಿಗೆ ಕುಂಠಿತವಾಗಬಹುದೇನೋ ಎನ್ನುವ ಆತಂಕವನ್ನು ಎತ್ತಿ ತೋರಿಸುತ್ತದೆ.  ಕೇರಳದಲ್ಲಿ ನೆಲೆಸಲು ಮಲೆಯಾಳಂ, ತಮಿಳುನಾಡಿನಲ್ಲಿ ನೆಲೆಸಲು ತಮಿಳು, ಕನ್ನಡನಾಡಿನಲ್ಲಿ ನೆಲೆಸಲು ಕನ್ನಡ (?!) ಬೇಕು ಎಂಬುದನ್ನು ಬಿಟ್ಟು, ಇಂಗ್ಲೀಷ್ ಭಾಷೆ ಮಾತ್ರ ಮುಖ್ಯ, ಇನ್ನುಳಿದ ಭಾಷೆಗಳೆಲ್ಲವೂ ನಗಣ್ಯ ಎನ್ನುವ ಮನೋಭಾವ ಭಾರತೀಯರಲ್ಲಿ ಮಾತ್ರವಲ್ಲ, ಫ್ರೆಂಚ್, ಆಫ್ರಿಕನ್, ಚೈನೀಸ್, ಪಾಕೀಸ್ತಾನೀಯರು ಎಲ್ಲರಲ್ಲೂ ಮೂಡುತ್ತಿದೆ ಎನ್ನುವುದು ಕೂಡ ಆತಂಕದ ವಿಷಯವೇ ಆಗಿದೆ. ಚಿತ್ರದ ನಾಯಕಿಯಾದ ಶಶಿ ಒಂದು ಕಡೆ ಹೇಳುವ ಮಾತು, "ನನಗೆ ಪ್ರೀತಿಗಿಂತಲೂ ಒಂದಿಷ್ಟೂ ಗೌರವ ಬೇಕು!"  ಈ ಮಾತು ನಮಗೆಲ್ಲರಿಗೂ ಭಾಷೆಯ ವಿಷಯದಲ್ಲಿ ಪಾಠವಾದರೆ, ನಮ್ಮ ನಮ್ಮ ಭಾಷೆಗಳ ಮೇಲೆ ನಮಗೆ ಪ್ರೀತಿಗಿಂತಲೂ, ಗೌರವ ಮೂಡಿದರೆ ಬಹುಶಃ ಅಳಿಯುತ್ತಿರುವ ಎಲ್ಲಾ ಭಾಷೆಗಳೂ ಉಳಿಯುವುದು.

ಮಿಕ್ಕಿದಂತೆ, ಶ್ರೀದೇವಿಯ ನಟನೆ ಹಾಗೂ ಅದಕ್ಕೆ ಪೂರಕವಾದ ಇನ್ನಿತರರ ನಟನೆ ನಿಜಕ್ಕೂ ಪ್ರಶಂಸನೀಯ. ‘ಶಶಿ’ ಪಾತ್ರದ ಪರಕಾಯ ಪ್ರವೇಶ, ಶ್ರೀದೇವಿಗೆ ಶ್ರೀದೇವಿಯೇ ಸಾಟಿ.  ಈ ಹಿಂದಿನ ಚಿತ್ರಗಳಲ್ಲಿ ಬಳುಕುವ ಬಳ್ಳಿಯಂತಿದ್ದ ಸುಂದರಿ ಶ್ರೀದೇವಿ, ಈ ಚಿತ್ರದಲ್ಲಿ ಆಹಾರವಿಲ್ಲದೆ ಸೊರಗಿದಂತಾಗಿರುವುದನ್ನು ನೋಡಲು ಅಸಹನೀಯವಾಗಿದ್ದರೂ, ‘ಶಶಿ’ ಪಾತ್ರಕ್ಕೆ ಆಕೆ ಹೀಗೆ ಸೊರಗಿದಂತಿರುವುದೇ ಸರಿ ಎಂದೆನಿಸುತ್ತದೆ. ಇಂಗ್ಲೀಷ್ ಭಾಷೆಯ ದಾಳಿಯಿಂದಾಗಿ ಮಿಕ್ಕೆಲ್ಲಾ ಭಾಷೆಗಳು ಸೊರಗಿರುವುದನ್ನು ಪರೋಕ್ಷವಾಗಿ ಸೂಚಿಸುತ್ತಿದೆಯೇನೋ ಎಂದೆನಿಸುತ್ತದೆ!   ಅಮಿತಾಭ್ ಅವರದೂ ಅತಿಥಿ ಪಾತ್ರವಾದರೂ, ಸಿಕ್ಕ ಐದು ನಿಮಿಷಗಳಲ್ಲಿಯೇ ಮನಸೆಳೆದು ಬಿಡುತ್ತಾರೆ.  ಫ್ರೆಂಚ್ ಪಾತ್ರಧಾರಿಯ ನಿಶ್ಯಬ್ದ ತುಟಿಯಂಚಿನ ನಗೆ ಇಡೀ ಚಿತ್ರಕೊಂದು ಮೆರುಗು ನೀಡುತ್ತದೆ.  

Friday, October 12, 2012

‘ಹಲಗೆ ಬಳಪ’ ಓದಿದ ಮೇಲೆ


All my best thoughts were stolen by the ancients!  - Ralph Waldo Emerson.  ಜೋಗಿ ಅವರ ಹಲಗೆ ಬಳಪ ಓದುತ್ತಾ, ಓದುತ್ತಾ ನನಗೆ, ಅದರಲ್ಲಿದ್ದ ಈ ವಾಕ್ಯ ಮಾತ್ರ ಸಿಕ್ಕಾಪಟ್ಟೆ ಮನಸ್ಸಿಗೆ ಹಿಡಿಸಿಬಿಡ್ತು.  ಹೊಸ ಬರಹಗಾರರಿಗೆ ಜೋಗಿಯವರ ಪಾಠಗಳು ಬರೆಯಲು ಪ್ರೇರೇಪಿಸುತ್ತೋ ಇಲ್ಲವೋ ಗೊತ್ತಿಲ್ಲ! ಓದಲಂತೂ ಬಹಳ ಖುಷಿ ಕೊಡುತ್ತದೆ. ಎಲ್ಲರ ಮೊದಲ ಬರಹಗಳ ಅನುಭವವನ್ನು ಓದುತ್ತಾ, ನಾನೇ ಅವರಾಗಿ, ಈ ಎಲ್ಲಾ ಅನುಭವಗಳೂ, ನನಗೂ ಆಗಿತ್ತಲ್ಲಾ?  ನನಗೇಕೆ ಬರೆಯೋಕೆ ಆಗಿಲ್ಲ? ಎನ್ನುವ ಕಳವಳದ ಜೊತೆಜೊತೆಗೆ ಓಹ್! ಇವರಂಥವರಿಗೂ ಕೂಡಾ ಹೀಗೆಲ್ಲಾ ಗೊಂದಲ / ಆತಂಕ ಆಗಿತ್ತಾ? ಹಾಗಿದ್ದರೆ ನಾನು ಕೂಡ ಒಳ್ಳೆಯ ಬರಹಗಾರ್ತಿಯಾಗಬಲ್ಲೆ! ಎನ್ನುವ ಹುಮ್ಮಸ್ಸನ್ನು ಕೂಡ ಹುಟ್ಟಿಸಿತು. ಹಲಗೆ ಬಳಪದ ಪುಟಪುಟವೂ ಅರೆರೆ! ಎಷ್ಟು ಚಂದ ಬರೆದಿದ್ದಾರೆ? ಎಂದು ಸಂತೋಷಿಸುತ್ತಾ,  ನನ್ನ ಆಲೋಚನೆಗಳು ಬಹು ಮಟ್ಟಿಗೆ ಈ ಲೇಖಕರನ್ನು ಹೋಲುತ್ತವೆ, ಹೇ, ನನಗೂ ಕೂಡ ಇಂಥ ಅನುಭವ ಆಗಿದೆಯಲ್ಲಾ? ಎಂದೆಲ್ಲಾ ನನ್ನನ್ನು ನಾನೇ ಅವರೊಂದಿಗೆ ಹೋಲಿಸಿಕೊಳ್ಳುತ್ತಾ, ಓಹ್! ಇಷ್ಟೊಂದು ಪುಸ್ತಕಗಳನ್ನು ಓದಿದ್ದಾರಾ? ಎಂದು ಆಶ್ಚರ್ಯ ಪಡುತ್ತಾ, ಪುಸ್ತಕಗಳನ್ನು ಓದಲು ಇಷ್ಟು ಸೀರಿಯಸ್ ನೆಸ್ ಬೇಕಾಗುತ್ತಾ? ಎಂದು ಚಿಂತಿಸುತ್ತಾ, ಕವನಗಳನ್ನು ಬರೆಯುವುದು ಇಷ್ಟು ಸುಲಭವೇ? ಎಂದು ನಿಡುಸುಯ್ಯುತ್ತಾ, ನಾಟಕಗಳನ್ನು ನಾನೆಂದಿಗೂ ಓದಿಯೇ ಇಲ್ಲ, ಓದಬೇಕು ಎಂದು ಆಲೋಚಿಸುತ್ತಾ, ಒಂದೇ ಉಸಿರಿಗೆ ಪೂರ್ತಿ ಪುಸ್ತಕ ಓದಿದೆ.  ನಂತರಾ, ಮತ್ತೊಮ್ಮೆ, ಮಗದೊಮ್ಮೆ ಎಂದು ೨, ೩ ಬಾರಿ ಓದಿದ್ದಾಯಿತು! ಈಗ ತಲೆಯ ತುಂಬಾ ಪದಗಳ, ವಾಕ್ಯಗಳ ಮೆರವಣಿಗೆ! ಅಲ್ಲಲ್ಲಾ ಜಾತ್ರೆ! 

ಇದನ್ನು ತಕ್ಷಣ ಬ್ಲಾಗ್ ನಲ್ಲಿ ಇಳಿಸಿಬಿಟ್ಟರೆ, ಮನಸ್ಸಿಗೆ ಒಂದಷ್ಟು ನೆಮ್ಮದಿಯಾಗಬಹುದೇನೋ ಎಂದು ಬರೆಯಲು ಕುಳಿತೆ. ಆದರೆ ಬರೆಯಲು ಕುಳಿತರೆ ಮಾತ್ರ ಒಂದಕ್ಷರವೂ ನಿನ್ನ ತಲೆಯಲ್ಲಿ ಮೂಡಲೊಲ್ಲೆ ಎನ್ನುವ ಹಠ ಯಾಕೆ ಮಾಡುತ್ತವೋ? ನನಗೆ ಅಕ್ಷರಗಳ ಮೇಲೆ ಸಿಟ್ಟು! ಆದರೆ ಅಕ್ಷರ ಪ್ರೀತಿ ಇದ್ದರೆ ಮಾತ್ರ ಒಳ್ಳೆ ಬರಹಗಾರನಾಗಬಹುದೆಂಬ ಅದ್ರಲ್ಲಿದ್ದ ಮತ್ತೊಬ್ಬ ಲೇಖಕರ ಕಿವಿಮಾತು! ಹಾಗೂ ಹೀಗೂ ಅಕ್ಷರಗಳ ಮೇಲೆ ಪ್ರೀತಿ ಹುಟ್ಟಿಸಿಕೊಂಡು ಬರೆಯಲು ಕುಳಿತರೆ ಏನು ಬರೆಯೋದು? ಯಾವುದರ ಬಗ್ಗೆ ಬರೆಯೋದು? ಮತ್ತೆ ಗೊಂದಲ ಶುರು.  ಕವನ ಬರೆಯೋದಾ? ಕಥೆಯನ್ನೋ? ಬರೆಯೋದಕ್ಕೆ ಶುರು ಮಾಡಿ, ಆಮೇಲೆ ತನ್ನಷ್ಟಕ್ಕೆ ನಿಮ್ಮ ಪ್ರಕಾರ ಯಾವುದೆಂದು ತಿಳಿಯುತ್ತದೆ ಎಂಬುದನ್ನು ‘ಹಲಗೆ ಬಳಪ’ದಲ್ಲಿ ಓದಿದ ನೆನಪಾಗಿ, ಕವನ ಕಷ್ಟ, ಕಥೆಯನ್ನು ಬರೆಯೋಣ ಎಂದು ತೀರ್ಮಾನಿಸಿದೆ.  ಈಗ ಯಾರ ಕಥೆ ಬರೆಯೋದು? ನನ್ನ ಕಥೆಯನ್ನೇ?! ಅಕ್ಕಪಕ್ಕದವರದ್ದೇ? ‘ಹಲಗೆ ಬಳಪ’ ದಲ್ಲಿ ಜೋಗಿಯವರ ‘ಮುದ್ದಣ ಮೇಷ್ಟ್ರು’ ಲೇಖಕ ಯಾವತ್ತೂ ಔಟ್ ಸೈಡರ್ ಆಗಬಾರದು, ಒಳಗಿದ್ದು ಬರೆಯಬೇಕು! ಅಕ್ಕಪಕ್ಕದವರ ಪಾತ್ರದ ಒಳಹೊಕ್ಕು ಬರೆಯುವುದು ತೀರಾ ಕಷ್ಟ! ಏನು ಮಾಡುವುದು?  ಒಟ್ಟಿನಲ್ಲಿ ಬರೆಯಬೇಕು ಎಂಬ ಒತ್ತಡವಂತೂ ಇದೆ.  ಹಾಗಾದರೆ ಅಕ್ಕಪಕ್ಕದವರ ಕಥೆ ಬರೆಯಲು ನನ್ನ ಕೈಯಲ್ಲಿ ಸಾಧ್ಯವಿಲ್ಲ. ನನ್ನದೇ ಕಥೆ ಬರೆಯೋದು ಒಳ್ಳೆಯದು.  ಈಗ ಮತ್ತೆ ತಲೆ ತುಂಬಾ ಪ್ರಶ್ನೆಗಳು? ಎಲ್ಲಿಂದ ಶುರು ಮಾಡುವುದು? ಬಾಲ್ಯದಿಂದಲೇ?  ಕೆಲಸದ ಅನುಭವಗಳೇ? ಕಾಲೇಜಿನದೇ? ಮೊದಲ ಪ್ರೇಮ ವೈಫಲ್ಯದ ಬಗ್ಗೆಯೇ? ಬಗೆಹರಿಯದ ಸಮಸ್ಯೆ ಇದು.  ಕೊನೆಗೂ ಸಮಸ್ಯೆಗೊಂದು ಪರಿಹಾರ ಥಟ್ ಅಂತ ಹೊಳೆಯಿತು.  ನನ್ನಲ್ಲಿ ಓದಿನ ಅಭಿರುಚಿ ಶುರು ಆದದ್ದು ಹೇಗೆ?  ಹಾ! ವಿಷಯ ಸಿಕ್ಕಿತು. ಈಗ ಪದಗಳು ಕೂಡ ಸಿಕ್ಕಿದರೆ?! ಬರೆಯುವ ಕೆಲಸ ಸುಲಭ. 

ಮನೆ ತುಂಬಾ ಮಕ್ಕಳು. ಅಪ್ಪನಿಗಾದರೋ ಒಳ್ಳೆಯ ಕೆಲಸವಿರಲಿಲ್ಲ. ಹೊಟ್ಟೆ ತುಂಬಾ ತಿನ್ನಲು ಕೂಡ ಕಷ್ಟ. ತನ್ನ ತಾಯಿಯ ಮನೆಯಲ್ಲಿ ಓದಿನ ಬೆಲೆ ಅರಿತಿದ್ದ ಅಮ್ಮ ಎಂದಿಗೂ ಪುಸ್ತಕಗಳನ್ನು ಕೊಡಿಸಲು ಯೋಚಿಸುತ್ತಿರಲಿಲ್ಲ.  ಆಕೆಗೆ ಮಂಕುತಿಮ್ಮನ ಕಗ್ಗದಿಂದ ಹಿಡಿದು ಸುಮಾರಷ್ಟು ಸ್ತ್ರೋತ್ರಗಳು ಬಾಯಿಪಾಠವಾಗಿತ್ತು.  ಹಾಗಾಗಿ ಮನೆಗೆ ದಿನಪತ್ರಿಕೆ, ಸುಧಾ, ತರಂಗ, ಮಯೂರ, ಕಸ್ತೂರಿ, ಚಂದಮಾಮ ತರುವುದನ್ನೂ ತಪ್ಪಿಸುತ್ತಿರಲಿಲ್ಲ. ನಾನು ಮನೆಯಲ್ಲಿ ಕೊನೆಯವಳು.  ಮಕ್ಕಳು ಕಿತ್ತಾಡಬಾರದೆಂದು ಮನೆಯಲ್ಲಿ ದೊಡ್ಡವರು ಹೇಳಿದಂತೆ ಕೇಳಬೇಕೆಂದು ಅಮ್ಮನ ರೂಲ್ ಆಗಿತ್ತು. ಸುಧಾ, ತರಂಗ ತರಲು ಸಣ್ಣವಳಾದ ನಾನೇ ಹೋಗಬೇಕಿತ್ತು.  ಆದರೆ ಅದನ್ನು ಮೊದಲು ಓದುವ ಹಕ್ಕು ಮಾತ್ರ ಅಣ್ಣಂದಿರದಾಗಿತ್ತು.  ಪುಸ್ತಕವನ್ನು ತಂದು ಅಣ್ಣನ ಕೈಗೆ ಕೊಡುವಷ್ತರಲ್ಲಿ ಜೀವ ಬಾಯಿಗೆ ಬಂದಷ್ಟು ಸಂಕಟವಾಗಿಬಿಡ್ತಿತ್ತು.  ಅದಕ್ಕೆ ನಾನು ಕಂಡುಕೊಂಡ ಉಪಾಯವೆಂದರೆ ಅಂಗಡಿಯಿಂದ ಮನೆಗೆ ಬರುವಷ್ಟರಲ್ಲಿ, ನನಗೆ ಬೇಕಾದ ಅಂಕಣಗಳೆಲ್ಲವನ್ನೂ ರಸ್ತೆಯಲ್ಲಿ ಓದುತ್ತಾ ಬರುವುದು!  ಹೀಗೆ ಓದುತ್ತಾ ಬರುವಾಗ ಲೆಕ್ಕವಿಲ್ಲದಷ್ಟು ಬಾರಿ ಜನರಿಗೆ ಢಿಕ್ಕಿ ಹೊಡೆದು, ಅವರ ಕೈಯಲ್ಲಿ ಬೈಸಿಕೊಂಡು ಬರುತ್ತಿದ್ದೆ.  ಮನೆಯ ಬಳಿಯೇ ಪುಟ್ಟದೊಂದು ಲೈಬ್ರರಿ ಇತ್ತು.  ಅದರ ಓನರ್ ನ ಮಗ ನನ್ನ ಶಾಲೆಯಲ್ಲಿ ಸಹಪಾಠಿ.  ಹಾಗಾಗಿ ಅಲ್ಲಿಯೇ ಕುಳಿತು ಎಷ್ಟೋ ಪುಸ್ತಕಗಳನ್ನು ಓದುತ್ತಿದ್ದೆ. ಇನ್ನೂ ಯುಗಾದಿ ಹಾಗೂ ದೀಪಾವಳಿ ಸಮಯದಲ್ಲಿ ಬರುತ್ತಿದ್ದ ಸುಧಾ ವಿಶೇಷಾಂಕಗಳು! ಬೆಳಿಗ್ಗೆ ಬೇಗ ೪ ಗಂಟೆಗೆ ಎದ್ದು ಮೊದಲಿಗೆ ಯಾರು ಅಭ್ಯಂಜನ ಸ್ನಾನ ಮಾಡುವರೋ, ಅವರಿಗೆ ಆ ವಿಶೇಷಾಂಕ ಓದುವ ಹಕ್ಕು - ಅಮ್ಮನ ರೂಲ್!  ನನಗೂ, ಕೊನೆ ಅಣ್ಣನಿಗೂ ಬೇಗ ಏಳುವ ಸ್ಪರ್ಧೆ! ಪೆಚ್ಚು ಮುಖ ಹಾಕಿಕೊಳ್ಳುವ ನನ್ನನ್ನು ನೋಡಿ, ’ಹೋಗಲಿ ಬಾ! ಒಟ್ಟಿಗೆ ಓದೋಣ’ ಎನ್ನುತ್ತಿದ್ದ ಅಣ್ಣಾ. ಮಿಕ್ಕೆಲ್ಲಾ ದಿವಸಗಳಲ್ಲಿ ಇಷ್ಟೇ ದೋಸೆ ತಿನ್ನಬೇಕೆಂಬ ರೂಲ್ ಇದ್ದ ನಮಗೆ, ಅಂದು ಮಾತ್ರ ಎಷ್ಟು ಬೇಕಾದರೂ ದೋಸೆ ತಿನ್ನುವ ಅದೃಷ್ಟ. ದೋಸೆ ಮೆಲ್ಲುತ್ತಾ, ವಿಶೇಷಾಂಕವನ್ನು ಓದುತ್ತಾ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ! 

ನನಗೂ, ನನ್ನ ಕೊನೆಯ ಅಣ್ಣನಿಗೂ ೨ ವರ್ಷಗಳ ಅಂತರ. ನಾವಿಬ್ಬರೂ ಸ್ನೇಹಿತರಂತೆಯೇ ಬೆಳೆದವರು. ಶಾಲೆಗೆ ರಜೆ ಶುರುವಾದಾಗ ಅಣ್ಣನ ಒಂದೊಂದೇ ಹುಚ್ಚು ಪ್ರಕಟವಾಗುತ್ತಿತ್ತು.  ಆತನಿಗೆ ಕರಾಟೆಯ ಹುಚ್ಚು ಬಹಳ. ಅದಕ್ಕಾಗಿ ದೇಹವನ್ನು ಹುರಿಗೊಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದ. ಅದರಲ್ಲೊಂದು ಬೆಳ್ಳಂಬೆಳಿಗ್ಗೆ ೪ ಗಂಟೆಗೆ ಕಬ್ಬನ್ ಪಾರ್ಕಿಗೆ ಜಾಗಿಂಗ್ ಹೋಗುವುದು.  ಅಕ್ಕಪಕ್ಕದ ಗೆಳೆಯರನ್ನೆಲ್ಲ ಹುರಿದುಂಬಿಸಿ, ನನ್ನನ್ನು ಕೂಡ ಎಳೆದುಕೊಂಡು ೪ ಗಂಟೆಗೆ ಹೋಗುತ್ತಿದ್ದ.  ನಾನಾದರೋ ಈ ಆಟ / ಎಕ್ಸರ್ಸೈಸ್ ಮುಂತಾದವುಗಳಲ್ಲಿ ಬಲು ಸೋಮಾರಿ.  ಹಾಗೂ ಹೀಗೂ ೭ ಗಂಟೆಯಾದೊಡನೆ, ಕಬ್ಬನ್ ಪಾರ್ಕಿನ ಸೆಂಟ್ರಲ್ ಲೈಬ್ರರಿ ನನ್ನನ್ನು ಸೆಳೆದುಕೊಂಡುಬಿಡುತ್ತಿತ್ತು. ಅಣ್ಣನಿಗೆ ನನಗಿಂತಲೂ ಓದುವ ಹಂಬಲ ಬಹಳ. ಆಗ ಅಲ್ಲಿ ಮನೆಗೆ ತರಲು ಕೂಡ ಪುಸ್ತಕಗಳನ್ನು ಕೊಡುತ್ತಿದ್ದರೆಂಬ ನೆನಪು. ನಾವಿಬ್ಬರೂ ಆಗ ೪,೫ ಕ್ಲಾಸಿನಲ್ಲಿದ್ದವರು. ಆ ವಯಸ್ಸಿನಲ್ಲಿ, ಅರ್ಥವಾಗುತ್ತಿತ್ತೋ, ಇಲ್ಲವೋ,  ಸೆಂಟ್ರಲ್ ಲೈಬ್ರರಿಯಲ್ಲಿ ನಾವಿಬ್ಬರೂ ಎಡತಾಕುತ್ತಿದ್ದದ್ದು ಮಾತ್ರ ಪತ್ತೇದಾರಿ ಕಾದಂಬರಿಗಳಿಗಾಗಿ.  ಅಲ್ಲಿಯೇ ಕುಳಿತು ಪತ್ತೇದಾರಿ ಕಾದಂಬರಿಗಳನ್ನು ಓದಿ (ಮನೆಗೆ ತರಲು ಅಮ್ಮನ ಭಯ), ಮಕ್ಕಳ ಪುಸ್ತಕಗಳನ್ನು ಮನೆಗೆ ತರುತ್ತಿದ್ದೆವು.  ಕಬ್ಬನ್ ಪಾರ್ಕಿನಲ್ಲಿರುವ ಮಯೂರ ಹೋಟೇಲ್ ನ ಜೋಕಾಲಿಯಲ್ಲಿ ಕುಳಿತು, ಪುಸ್ತಕಗಳನ್ನು ಓದಿದ ನೆನಪು ಇಂದಿಗೂ ಆಹ್ಲಾದಕರ.  ಹೀಗೆ ಒಮ್ಮೆ ಪತ್ತೆದಾರಿ ಸೆಕ್ಷನ್ ನಲ್ಲಿ, ಪುಸ್ತಕಗಳನ್ನು ಹುಡುಕುತ್ತಿರುವಾಗ, ವೃದ್ಧರೊಬ್ಬರು ನಾವು ಏನನ್ನು ಹುಡುಕುತ್ತಿದ್ದೇವೆ? ಎಂದು ವಿಚಾರಿಸಿ, ನಮ್ಮ ಉತ್ತರ ತಿಳಿದು, ತಲೆಗೊಂದು ಮೊಟಕಿ, "ಪತ್ತೇದಾರಿ ಪುಸ್ತಕಗಳನ್ನು ಈ ವಯಸ್ಸಿನಲ್ಲಿ ಓದುತ್ತೀರಾ?" ಎಂದು ಬೈದ ಮೇಲೆ, ನಾವೇನೋ ಅಪರಾಧ ಮಾಡುತ್ತಿದ್ದೇವೆ ಎಂಬ ಭಾವ ಮೂಡಿ ಅಂದಿನಿಂದ ನನ್ನ ಪತ್ತೇದಾರಿ ಕಾದಂಬರಿಗಳ ಓದುವಿಕೆಗೊಂದು ಪುಲ್ ಸ್ಟಾಪ್. ಆದರೂ ಸೆಂಟ್ರಲ್ ಲೈಬ್ರರಿ, ಅಲ್ಲಿನ ವಾತಾವರಣ, ಅಲ್ಲಿನ ಪುಸ್ತಕಗಳು ಮಾಡುತ್ತಿದ್ದ ಮೋಡಿ ಎಷ್ಟೇ ನೆನಪಿನಲ್ಲಿಲ್ಲವೆಂದು ನಾನು ಹೇಳಿದರೂ, ಹಾಗೆಯೇ ಕಣ್ಣಮುಂದೆ ಸುಳಿದಾಡುತ್ತದೆ.  

ಈಗಾಗಲೇ ಕಾಲೇಜಿನಲ್ಲಿ ಓದುತ್ತಿದ್ದ ಅಣ್ಣಂದಿರು ತರುತ್ತಿದ್ದ ಯಂಡಮೂರಿಯವರ ಪುಸ್ತಕಗಳು ರೋಚಕತೆ ಉಂಟುಮಾಡುತ್ತಿದ್ದವು, ಬೆಳದಿಂಗಳ ಬಾಲೆಯಂತೂ ಮನಸ್ಸಿನಲ್ಲಿ ಅಚ್ಚಾಗಿಬಿಟ್ಟಿತ್ತು. ಅದರಲ್ಲಿನ ಪದಬಂಧ, ಆಕೆ ಕೇಳುವ ಪ್ರಶ್ನೆಗಳೆಲ್ಲವನ್ನೂ, ಪುಸ್ತಕದಲ್ಲಿ ಬರೆದುಕೊಂಡು ಅದನ್ನು ನಾವೇ ‘ರೇವಂತ್’ ನಂತೆ ಬಗೆಹರಿಸುತ್ತಿದ್ದ ಪರಿ, ಓಹ್! ಈಗ ನೆನಪಿಸಿಕೊಂಡರೂ, ನಗೆಯೊಂದು ಮುಖದಲ್ಲಿ ಮೂಡುತ್ತದೆ. ಬೆಳಿಗ್ಗೆ ತಿಂಡಿ ತಿನ್ನುವಾಗಲೂ, ಊಟ ಮಾಡುವಾಗಲೂ ಈ ಪುಸ್ತಕವಂತೂ ಕೈಯಲಿದ್ದೇ ಇರುತ್ತಿತ್ತು. ಎಷ್ಟು ಸಲ ಓದಿದರೂ ಬೋರ್ ಆಗುತ್ತಿರಲಿಲ್ಲ.  ಹಾಗಾಗಿ ಈ ಕಥೆ ಚಲನಚಿತ್ರವಾಗಿ ಮೂಡಿ ಬಂದಾಗ, ಕುತೂಹಲಕೆಂದು ಹೋದವಳಿಗೆ ಅರ್ಧಕ್ಕೆ ಎದ್ದು ಬರಬೇಕೆಂದು ಅನಿಸಿಬಿಟ್ಟಿತ್ತು.  ಅನಂತನಾಗ್ ಆ ಪಾತ್ರಕ್ಕೆ ಸೂಕ್ತ ಎನಿಸಿದರೂ, ನನ್ನ ಕಲ್ಪನೆಯಲ್ಲಿನ ‘ಬೆಳದಿಂಗಳ ಬಾಲೆ’ ಯ ಪಾತ್ರಗಳು, ಮುಖ್ಯವಾಗಿ ‘ನಾಯಕಿ’ ಹಾಗೂ ಆಕೆಯ ‘ಧ್ವನಿ’ ಗೂ ಹಾಗೂ ಚಲನಚಿತ್ರದ ನಾಯಕಿಯ ಧ್ವನಿಗೂ ಸ್ವಲ್ಪವೂ ಹೋಲಿಕೆಯಿರಲಿಲ್ಲ. ಚಿತ್ರ ನೋಡಿ ಭ್ರಮನಿರಸನವಾಗಿಬಿಟ್ಟಿತ್ತು. ‘ಗುಲಾಬಿ ಟಾಕೀಸ್’ ಚಿತ್ರ ನೋಡಿದ ಮೇಲೆ, ಇತ್ತೀಚೆಗೆ ನಾನು ವೈದೇಹಿಯವರ ‘ಗುಲಾಬಿ ಟಾಕೀಸ್’ ಕಥೆ ಓದಿದೆ.  ಚಿತ್ರಕ್ಕೂ, ಕಥೆಗೂ ಸ್ವಲ್ಪವೂ ಹೋಲಿಕೆಯಿಲ್ಲವೆಂದೆನಿಸಿ ಬೇಸರವಾಯಿತು.  ಪುಸ್ತಕಗಳನ್ನು ಓದುತ್ತಾ, ಕಲ್ಪನೆಯಲ್ಲಿ ಆಯಾ ಪಾತ್ರಗಳನ್ನು ಸೃಷ್ಟಿಸುತ್ತಾ, ಕಲ್ಪನೆಯಲ್ಲಿಯೇ ಪುಸ್ತಕದ ದೃಶ್ಯಾವಳಿಗಳನ್ನು ನೋಡುವುದು ಸಿನೆಮಾಗಳಿಗಿಂತ ನನಗೆ ಹೆಚ್ಚು ಖುಷಿ ನೀಡುತ್ತದೆ. ಬಾಲ್ಯದಲ್ಲಿ ಮೋಡಿ ಮಾಡಿದ ಮತ್ತೊಂದು ಪುಸ್ತಕ ಪೂರ್ಣ ಚಂದ್ರ ತೇಜಸ್ವಿಯವರ ‘ಕರ್ವಾಲೋ’  ಒಂದೊಂದು ಪಾತ್ರಗಳು ಕಣ್ಣ ಮುಂದೆ ಜೀವಂತ, ಪ್ರೊಫೆಸರ್, ಮಂದಣ್ಣ, ಹಾರುವ ಓತಿ, ಅಲ್ಲಿನ ಪರಿಸರ, ಜೇನು ತೆಗೆಯುವ ಪ್ರಸಂಗ, ‘ಕಿವಿ’ ಯ ತರಲೆಗಳು, ಸುಮಾರು ೧೦೦, ೨೦೦ ಬಾರಿ ಆ ಪುಸ್ತಕವನ್ನು ಓದಿರಬಹುದೇನೋ?  ಪ್ರತಿ ವಾಕ್ಯಗಳು ಬಾಯಿಪಾಠವಾಗಿಬಿಟ್ಟಿತ್ತು.  ಆದರೂ ಅದನ್ನು ಓದುವಾಗೆಲ್ಲಾ ಆಗಷ್ಟೇ ನಮ್ಮ ಮುಂದೆ ಘಟನೆಗಳು ನಡೆದವೇನೋ? ಎನ್ನುವ ಭಾವ. ಮತ್ತೊಂದು ಪುಸ್ತಕ - ಬಹುಶಃ ತ್ರಿವೇಣಿಯವರದೇನೋ ಗೊತ್ತಿಲ್ಲ, ಅದರಲ್ಲಿನ ನಾಯಕಿ, ಆಕೆಗೆ ಮಲತಾಯಿ, ನಾಯಕಿಗೆ ಹುಚ್ಚು ಹಿಡಿಯುವುದು, ನಾಯಕನ ಹೆಸರು ರಾಜಶೇಖರ(?) ಆತ ಅವಳನ್ನು ಮಾನಸಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟ್ರೀಟ್ ಮೆಂಟ್ ಕೊಡಿಸುವುದು, ಹೀಗೆ ಇದು ಕೂಡ ಮನಸ್ಸಿನಲ್ಲಿ ಅಚ್ಚೊತ್ತಿತ್ತು.  ಮನೆಗೆ ಬಂದ ನೆಂಟರೆಲ್ಲರೂ ನೀವು ಶಾಲೆಯ ಪುಸ್ತಕಗಳನ್ನು ಬಿಟ್ಟು, ಕಥೆ, ಕಾದಂಬರಿಗಳನ್ನು ಓದಲೇಕೆ ಬಿಡುತ್ತೀರಿ? ಎಂದು ಅಮ್ಮನಿಗೆ ಆಕ್ಷೇಪಿಸುತ್ತಿದ್ದರೂ, ಅಮ್ಮ ಮಾತ್ರ ನಮಗೆ ತಡೆಯನ್ನೊಡ್ಡುತ್ತಿರಲಿಲ್ಲ. 

ಹೀಗೆ ಪತ್ತೇದಾರಿ ಕಾದಂಬರಿಗಳಿಂದ ಶುರುವಾದ ನನ್ನ ಓದುವ ಚಟ, ಯಂಡಮೂರಿ, ತ್ರಿವೇಣಿ, ತೇಜಸ್ವಿಯವರಿಂದ ಆಕರ್ಷಿತಗೊಂಡು, ಗಂಭೀರ ಓದಿನತ್ತ ತಿರುಗಿದ್ದು ಭೈರಪ್ಪನವರ ‘ಪರ್ವ’ ಓದಿದ ನಂತರ.  ‘ಪರ್ವ’ ಓದಿದ ನಂತರ ನಾನು ಒಂದೆರಡು ತಿಂಗಳು ನಾನೇ ಆಗಿರಲಿಲ್ಲ. ಉಸಿರು ಕಟ್ಟಿದಂತೆ ಭೈರಪ್ಪನವರ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿ, ಒಮ್ಮೆಗೇ ಭೈರಪ್ಪನವರ ಎಲ್ಲಾ ಪುಸ್ತಕಗಳನ್ನು ಓದಬೇಡಾ, ಹುಚ್ಚು ಹಿಡಿದೀತು! ಎಂದು ಗೆಳೆಯನೊಬ್ಬನ ಕೈಲಿ ಬುದ್ಧಿ ಹೇಳಿಸಿಕೊಂಡಿದ್ದೆ.  ‘ಹಲಗೆ ಬಳಪ’ ದಲ್ಲಿ ರಾಘವೇಂದ್ರ ಜೋಷಿಯವರು ಬರೆದಂತೆ ನನಗೆ ಬರೆದವರಾರು? ಎಂಬುದು ಎಂದಿಗೂ ಮುಖ್ಯವಾಗಿರಲಿಲ್ಲ. ನನಗೆ ಪುಸ್ತಕಗಳ ಶೀರ್ಷಿಕೆ ಕೂಡ ನೆನಪಿರುತ್ತಿರಲಿಲ್ಲ. ಇಂದಿಗೂ ಕೂಡ.  ಯಾವುದೇ ಪುಸ್ತಕವಾದರೂ ನಡೆದೀತು, ಓದಲಷ್ಟೇ ಬೇಕಿತ್ತು. ಈಗಲೂ ಕೂಡ ಯಾರಾದರೂ ಆ ಪುಸ್ತಕ ಓದಿದ್ದೀರಾ? ಈ ಪುಸ್ತಕ ಓದಿದ್ದೀರಾ? ಎಂದು ಕೇಳಿದರೆ ತಕ್ಷಣ ನನಗೆ ನೆನಪಾಗುವುದಿಲ್ಲ. ಓದಿಲ್ಲವೆಂದುಕೊಂಡು ಮನೆಗೆ ತಂದು ಓದಲು ಶುರು ಮಾಡಿದಾಗ ಅರೆ! ಓದಿದ್ದೆ ಎಂಬ ಅರಿವಾಗುತ್ತದೆ.   ಇತ್ತೀಚೆಗೆ ಗೆಳೆಯನೊಬ್ಬ ತಾನು ಬರೆದವರು ಯಾರು ಎಂಬುದನ್ನು ತಿಳಿದುಕೊಂಡ ನಂತರವೇ ಪುಸ್ತಕವನ್ನು ಓದಲು ಶುರು ಮಾಡುವುದು ಎಂದಾಗ, ನನಗೂ ಕೂಡ ಜ್ಞಾನೋದಯವಾಗಿ ನೆನಪಿನಲ್ಲಿಟ್ಟುಕೊಳ್ಳಲು ಶುರು ಮಾಡಿದ್ದೇನೆ. ಪುಸ್ತಕವೊಂದನ್ನು ಓದಲು ಶುರು ಮಾಡಿದರೆ ಉಸಿರುಗಟ್ಟಿದಂತೆ ಓದುವುದು ನನ್ನ ಅಭ್ಯಾಸ.  ತಿಂಡಿ ತಿನ್ನುವಾಗ, ಊಟ ಮಾಡುವಾಗ ಎಲ್ಲ ಸಮಯದಲ್ಲಿಯೂ ಅದನ್ನು ಓದಿ ಮುಗಿಸಿದ ಮೇಲೆ ಸಮಾಧಾನ. ಅಕಸ್ಮಾತ್ ಎಲ್ಲಿಯಾದರೂ ಇದಕ್ಕೆ ಅಡಚಣೆ ಆಯಿತೋ ಅಥವಾ ಆ ಪುಸ್ತಕದ ಭಾವ ನನ್ನೊಳಗೆ ಇಳಿಯಲಿಲ್ಲವೋ, ನಂತರ ಆ ಪುಸ್ತಕವನ್ನು ಪೂರ್ತಿಯಾಗಿ ಓದಲಾಗುವುದೇ ಇಲ್ಲ. ಈ ಓದುವ ಕ್ರಮ ತಪ್ಪೋ, ಏನೋ ಎನ್ನುವ ಅಳುಕು ಮನದ ಮೂಲೆಯಲ್ಲಿತ್ತು. ಅದು ‘ಹಲಗೆ ಬಳಪ’ ಓದಿದ ನಂತರ ಮರೆಯಾಯಿತು.

Wednesday, October 3, 2012

ಭ್ರಮೆ!


ಭ್ರಮೆ ಹರಿಯಿತು!
ಮನ ಮಸುಕಾಯಿತು
ಓದಿದ್ದೆಷ್ಟೋ, ಬರೆದಿದ್ದೆಷ್ಟೋ
ಗುಲಾಮನಾದರೂ
ದೊರೆಯಲಿಲ್ಲ ಮುಕುತಿ
ಅನುಭವ ದಕ್ಕಲಿಲ್ಲ

ಸಂಬಂಧ ತೆಳುವಾಯಿತು
ಮಾತು ಬಡವಾಯಿತು
ಹಣ್ಣೆಲೆ ಮಾಗಲಿಲ್ಲ
ಚಿಗುರು ಬೆಳೆಯಲಿಲ್ಲ
ಓದಿಗೂ, ಪ್ರಬುದ್ಧತೆಗೂ
ಬಂಧ ಮೂಡಲಿಲ್ಲ

ಆಗಸ ಬಿಸಿಯಾಯಿತು
ನಳನಳಿಸುತ್ತಿದ್ದ
ಕಾಯಿ ಬಾಡಿತು
ತಂಪಾದ ಇಳೆ
ಬೀಸಿದ ಬಿರುಗಾಳಿಗೆ
ಕಾದು ಕೆಂಪಾಯಿತು

ಕತ್ತಲೆ ಕವಿಯಿತು
ಅರಮನೆಯಲ್ಲೀಗ
ಮೌನ ಮೆರವಣಿಗೆ
ಸೃಷ್ಟಿಸಿದವರಾರು?
ಅಳಿಸಿದವರಾರು?
ಅರಿವು ಮೂಡಲಿಲ್ಲ