Monday, August 27, 2012

ಊರು ಕೇರಿ - ಡಾ.ಸಿದ್ದಲಿಂಗಯ್ಯನವರ ಆತ್ಮಕಥನ



ಡಾ.ಸಿದ್ದಲಿಂಗಯ್ಯನವರ ಊರು ಕೇರಿ - ಆತ್ಮಕಥನ ಓದ್ತಿದ್ದೆ. ಬಹಳ ಚೆನ್ನಾಗಿದೆ. ಅದರಲ್ಲಿನ ಒಂದು ಪುಟ ನನ್ನ ಗಮನವನ್ನು ಬಹಳ ಸೆಳೆಯಿತು. ಅದು ಹೀಗಿದೆ

ಶ್ರೀರಾಮಪುರದಲ್ಲಿ ಕನ್ನಡಿಗರು ಮತ್ತು ತಮಿಳರು ಒಟ್ಟಿಗೆ ಜೀವನ ಮಾಡುತ್ತಾರೆ. ಪಂಡಿತ ಶಿವಮೂರ್ತಿ ಶಾಸ್ತ್ರಿಗಳು, ವಾಟಾಳ್ ನಾಗರಾಜರ ಭಾಷಣಗಳಿಂದ ಪ್ರೇರಿತರಾದ ಜನ ಹೋರಾಟಕ್ಕಿಳಿದರು. ಬೆಂಗಳೂರಿನಿಂದ ಮುಂಬೈ ಕಡೆಗೆ ಹೋಗುತ್ತಿದ್ದ ರೈಲನ್ನು ತಡೆಯುವ ಚಳುವಳಿಯನ್ನು ಹಮ್ಮಿಕೊಂಡರು. ಈ ರೈಲು ತಡೆ ಚಳುವಳಿಗೆ ಸಾವಿರಾರು ಜನ ಸೇರಿದರು. ಮಹಾಜನ್ ವರದಿ ಜಾರಿಯಾಗಲಿ ಎಂಬುದು ಜನರ ಪ್ರಧಾನ ಘೋಷಣೆ ಆಗಿತ್ತು. ಪ್ರಾಣವನ್ನಾದರೂ ಕೊಟ್ಟೇವು, ಬೆಳಗಾವಿಯನ್ನು ಕೊಡುವುದಿಲ್ಲ ಎಂದು ಜನ ಒಕ್ಕೊರಲಿನಿಂದ ಕೂಗುತ್ತಿದ್ದರು. ಆ ದಿನದ ಚಳುವಳಿಯ ಮುಖ್ಯ ನಾಯಕರು ಐದು ಜನ ರೈಲು ಹಳಿಗಳ ಮೇಲೆ ಅಡ್ಡಲಾಗಿ ಮಲಗಿಬಿಟ್ಟರು. ರೈಲು ಬರುವ ಸದ್ದು ಕೇಳಿಸಿತು. ರೈಲು ಹಳಿಗಳ ಎರಡೂ ಪಕ್ಕದಲ್ಲಿ ನೆರೆದಿದ್ದ ಜನರ ಹೃದಯ ಹೊಡೆದುಕೊಳ್ಳತೊಡಗಿತು. ಘೋಷಣೆ ಮುಗಿಲು ಮುಟ್ಟಿದವು. ರೈಲು ಬರುವುದು ಕಾಣತೊಡಗಿತು. ಜನರ ಆತಂಕ ಹೇಳತೀರದು. ಹಳಿಗಳ ಮೇಲೆ ಮಲಗಿದ್ದವರಲ್ಲಿ ಒಬ್ಬರು ದೂರದಲ್ಲಿ ರೈಲು ಕಾಣುತ್ತಿದ್ದಂತೆ ಪ್ರಾಣಭೀತಿಯಿಂದ ಮೆಲ್ಲಗೆ ಎದ್ದು ಪಕ್ಕಕ್ಕೆ ಬಂದು ಬೆವರು ಒರೆಸಿಕೊಳ್ಳತೊಡಗಿದರು. ಇನ್ನೇನು ರೈಲು ಬಂದೇಬಿಟ್ಟಿತ ಎನ್ನುವಷ್ಟರಲ್ಲಿ ಇನ್ನು ಮೂವರು ಎದ್ದು ಬಂದು ಜನರಲ್ಲಿ ಸೇರಿಕೊಂಡರು. ರೈಲು ಹಳಿಗಳ ಮೇಲೆ ಉಳಿದವರೊಬ್ಬರೇ. ಅವರು ಮಹಾಜನ್ ವರದಿ ಜಾರಿಯಾಗಲಿ ಎಂದು ಕೂಗುತ್ತಾ ಅವರೊಬ್ಬರೇ ಮಲಗಿದ್ದರು. ಕರುಣೆಯಿಲ್ಲದ ರೈಲು ಅವರ ಮೇಲೆ ಹರಿಯಿತು. ಜನ ಕಣ್ಣೀರು ಹಾಕಿದರು. ಆ ದಿನ ರೈಲು ತಡೆ ಹೋರಾಟದಲ್ಲಿ ಬಲಿಯಾದವರು ಗೋವಿಂದರಾಜು. ಅವರು ತಮಿಳರು. ರೈಲು ಹಳಿಗಳ ಮೇಲೆ ಮಲಗಿದ್ದು ರೈಲು ಬರುತ್ತಿದ್ದಂತೆ ಎದ್ದು ಓಡಿದ ನಾಲ್ಕು ಜನ ಅಚ್ಚ ಕನ್ನಡಿಗರು.

No comments:

Post a Comment