Monday, August 27, 2012

ಏಕೆ ಹೀಗಾಯಿತೋ?


ಈ ನಡುವೆ ಮನಸ್ಸಿಗೆ ಸಿಕ್ಕಾಪಟ್ಟೆ ಹಿಂಸೆ. ಯಾವಾಗ ತಲೆ ಒಡೆದು ಚೂರಾಗುತ್ತೋ ಗೊತ್ತಿಲ್ಲ. ಅಷ್ಟು ಟೆನ್ಷನ್ ಆಗುತ್ತೆ. ಇದನ್ನು ಯಾರ ಹತ್ತಿರಾನೂ ಹೇಳಿಕೊಳ್ಳೋದಿಕ್ಕೆ ಆಗೊಲ್ಲ. ತೀರಾ ಅಂದ್ರೆ ತೀರಾ ಒಂಟಿಯಾಗಿದ್ದ ನಾನು ಅಕಸ್ಮಾತ್ತಾಗಿ ನಿನಗೆ ಪರಿಚಯವಾದೆ. ನಿನ್ನ ಪರಿಚಯವಾದ ಮೇಲೆ ನನ್ನ ಕ್ರಿಯೇಟಿವಿಟಿಗೆ ಒಂದರ್ಥ ಬಂದಿದ್ದು. ಅತ್ಯಂತ ಕಡಿಮೆ ಅವಧಿಯಲ್ಲಿ ನನ್ನ ಜೀವವಾದೆ. ಅಪ್ಪ, ಅಮ್ಮನನ್ನು ಕಳೆದುಕೊಂಡು ಅನಾಥಳಾಗಿದ್ದ ನನಗೆ ಆಸರೆಯಾದೆ. ಇಬ್ಬರೂ ಬಹಳ ಕ್ಲೋಸ್ ಆದೆವು. ಯಾವುದೂ ಗುಟ್ಟಿರಬಾರದು, ಮುಕ್ತವಾಗಿ ಮಾತನಾಡಬೇಕೆಂದುಕೊಂಡೆವು. ಇಬ್ಬರನ್ನೂ ಕಳೆದುಕೊಂಡಿದ್ದ ನನಗೆ, ಯಾವಾಗಲೂ ನಿನ್ನನ್ನು ಕಳೆದುಕೊಳ್ಳುವ ಭಯ ಕಾಡುತ್ತಲೇ ಇತ್ತು. ನಿನಗದನ್ನೂ ಹೇಳುತ್ತಲೂ ಇದ್ದೆ. ಆದರೆ ನೀನು ಮಾತ್ರ ಜೀವ ಹೋದರೂ ನಿನ್ನ ಕೈ ಬಿಡಲಾರೆನೆಂದು ಹೇಳುತ್ತಿದ್ದಾಗ ಆ ಕಣ್ಣುಗಳಲ್ಲಿನ ಕಾಂತಿಗೆ ನಾನು ಮಾರುಹೋಗಿದ್ದೆ. ನೀನು ಜೊತೆಯಿದ್ದಾಗ ಇಡೀ ಜಗತ್ತನ್ನೇ ಗೆಲ್ಲಬಲ್ಲನೆಂಬ ಹುರುಪಿತ್ತು. ಅಹಂ ಇತ್ತು. ನಮ್ಮಿಬ್ಬರ ಸಂಬಂಧದಲ್ಲಿ ಒಂದಿನಿತೂ ಕಪಟವಿರಲಿಲ್ಲ. ಒಂದು ಗಳಿಗೆಯೂ ಮಾತನಾಡದೇ ಇರಲಾರೆವು ಎಂಬಂತಿದ್ದ ನಮ್ಮ ಈ ಸಂಬಂಧ, ಸುಮಾರು ೩-೪ ತಿಂಗಳುಗಳಿಂದ ಮಾತನಾಡದೇ ಇರುವಂತಾಗಿದ್ದು ನನಗೀಗಲೂ ನಂಬಲು ಸಾಧ್ಯವಿಲ್ಲ. 

ಬಡತನದಲ್ಲೇ ಬೆಳೆದ ನನಗೆ ನಿನ್ನ ಕಷ್ಟ ಚೆನ್ನಾಗಿ ಅರ್ಥವಾಗುತ್ತಿತ್ತು. ನೀನು ನಿನ್ನ ಗುರಿಸಾಧನೆಗಾಗಿ ಕಷ್ಟ ಪಡುವುದನ್ನು ನನಗೆ ನೋಡಲಾಗುತ್ತಿರಲಿಲ್ಲ. ಹಾಗಾಗೀ ನಿನಗೆ ಅವಕಾಶ ಕೊಡಿಸುವೆನೆಂದೆನೇ ಹೊರತು ನಿನ್ನ ಸ್ವಾಭಿಮಾನಕ್ಕೆ ಧಕ್ಕೆ ತರಲೆಂದಲ್ಲ. ಪ್ರತಿಭೆ ಇದ್ದರೆ ಮಾತ್ರ ಅವಕಾಶವು ಸಿಗುವುದು ಎನ್ನುವುದನ್ನು ನೀನ್ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ. ಇಂತಹ ಒಂದು ಅವಕಾಶಕ್ಕಾಗಿ ಹಲವರು ತಮ್ಮ ಸ್ವಾಭಿಮಾನಕ್ಕೆ ಎಳ್ಳು ನೀರು ಬಿಟ್ಟು ಅಂಗಲಾಚಿ, ಬೇಡಿ ದೊರಕಿಸಿಕೊಳ್ಳುತ್ತಾರೆ. ಆದರೆ ನಮ್ಮ ಮನೆ ಬಾಗಿಲಿಗೆ ಅವಕಾಶ ಹುಡುಕಿಕೊಂಡು ಬಂದಿತ್ತು. ಅದು ನಿನಗೆ ಅವಮಾನವೆಂದೇಕೇ ಭಾವಿಸಿದೆ. ಇದೊಂದರಿಂದಲೇ ನಿನ್ನ ಉದ್ಧಾರವೆಂದು ನನಗೆ ಯಾವತ್ತಿಗೂ ಅನಿಸಿಲ್ಲ. ನೀನು ಅಂದುಕೊಂಡಿದ್ದನ್ನೂ ಸಾಧಿಸಿಯೇ ಸಾಧಿಸುತ್ತಿ ಅನ್ನುವ ಭರವಸೆ ನನಗಿತ್ತು. ನೀನು ಏನೆಂದು ಅರ್ಥ ಮಾಡಿಕೊಂಡೆಯೋ? ನನಗರ್ಥವಾಗದೇ ಹೋಯಿತು. ಒಬ್ಬರನ್ನೊಬ್ಬರು ಬಹಳ ಅರ್ಥ ಮಾಡಿಕೊಂಡಿದ್ದೇವೆಂದು ಬೀಗುತ್ತಿದ್ದ ನಮಗೆ, ನಾವು ಅಪರಿಚಿತರಾಗೇ ಇದ್ದೆವು! ಒಂದೇ ಒಂದು ಬಾರಿ, ನೀನು ನನ್ನೊಂದಿಗೆ ಮಾತನಾಡಿದ್ದರೆ ನನಗೆ ಸಾಕಾಗಿತ್ತು. ಇನ್ನೆಂದಿಗೂ ನಿನ್ನ ದಾರಿಯಲ್ಲಿ ಅಡ್ಡ ಬರುತ್ತಿರಲಿಲ್ಲ. ನೀನು ನನಗೆ ಆ ಅವಕಾಶವನ್ನು ಕೊಡಲಿಲ್ಲ. 

ಮುಂದೇನು? ನನಗೂ ಗೊತ್ತಿಲ್ಲ :-(

No comments:

Post a Comment