Monday, August 27, 2012

ಕವಲು - ನನ್ನನಿಸಿಕೆ

ಭೈರಪ್ಪನವರ ಪ್ರತಿ ಕಾದಂಬರಿಗಳಲ್ಲೂ ಈ ಲೈಂಗಿಕ ಅತೃಪ್ತಿ, ವಿವಾಹ ಬಾಹಿರ, ಅನೈತಿಕ ಸಂಬಂಧಗಳು ಎದ್ದು ಕಾಣುತ್ತವೆ. ಇದು ತೀರಾ ‘ಅತಿರೇಕ’ ಆಯಿತು, ಹೀಗೆಲ್ಲಾ ನಿಜವಾಗಲೂ ನಡೆಯುತ್ತಾ? ಎಂದೆಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡರೂ, ಮನಸ್ಸಿನ ಒಂದು ಮೂಲೆಯಲ್ಲಿ ‘ನಿಜ’. ಗಂಡು ಹೆಣ್ಣಿನ ಒಡಕುಗಳಿಗೆ ಈ ಲೈಂಗಿಕ ಅತೃಪ್ತಿ ಎಂಬುದು ಅತ್ಯಂತ ಮುಖ್ಯ ಕಾರಣ ಎಂದು ಕೂಡ ಮೂಡುತ್ತದೆ. ‘ಅಂಚು’ ವಿನಲ್ಲಿ ಇಡೀ ಪುಟ ಪುಟದಲ್ಲೂ ‘ಶೂನ್ಯ’ ಎಂಬ ಭಾವ ಕಾಡುವ ಹಾಗೆ, ‘ಕವಲು’ ನಲ್ಲಿ ಪ್ರತಿ ಪುಟ ಪುಟದಲ್ಲೂ ‘ಸೆಕ್ಸ್’ ವಿಜೃಂಭಿಸುತ್ತದೆ. ತೀರಾ ಅಸಹ್ಯ ಹುಟ್ಟುವಷ್ಟು ಬಾರಿ ಗಂಡು-ಹೆಣ್ಣು ಭೇಟಿಯಾಗುವುದೇ ಸೆಕ್ಸ್ ಎಂಬ ಕಾರಣಕ್ಕೇ?! ಇದರಾಚೆಗೆ ಇನ್ನ್ಯಾವ ಕಾರಣಗಳೂ ಅಥವಾ ಸಂಬಂಧಗಳು ಇರಬಾರದೇ? ಇರುವುದಿಲ್ಲವೇ? ಎಂದೆನಿಸಿಬಿಡುತ್ತದೆ. ಇದರಿಂದಾಗಿ ಭೈರಪ್ಪನವರು ಏನು ಹೇಳಲು ಹೊರಟಿದ್ದಾರೆ ಎಂಬುದು ಗೋಚರವಾಗುವುದೇ ಇಲ್ಲ. ಹಾಗಾಗಿಯೇ ‘ಕವಲು’ ತೀರಾ ಪೇಲವ ಹಾಗೂ ಸಿನಿಮೀಯವಾಗಿದೆ ಎಂದೆನಿಸುತ್ತದೆ. ನಾಲ್ಕೈದು ಪಾತ್ರಗಳು, ಅವುಗಳ ನಡುವೆ ನಡೆಯುವ ಘರ್ಷಣೆಗಳು, ತಪ್ಪು ಮಾಡಿದವರಿಗೆ ಶಿಕ್ಷೆಯಾಗುವುದು, ಒಳ್ಳೆಯವರಿಗೆ ಒಳ್ಳೆಯದಾಗುವುದು, ಇವೆಲ್ಲಕ್ಕೂ ಒಂದು ಲಾಜಿಕಲ್ ಕ್ಲೈಮಾಕ್ಸ್, ಇದನ್ನು ಓದಿ ಮುಗಿಸಿದಾಗ ಹಿಂದಿ ಚಲನಚಿತ್ರವೊಂದನ್ನು ನೋಡಿದಂತೆ ಭಾಸವಾಗುವುದು ಸುಳ್ಳಲ್ಲ! ‘ಕವಲು’ ಕೃತಿ ಹಾಗೂ ಇದರ ಬಗ್ಗೆ ಪೇಪರ್ ಗಳಲ್ಲಿ, ಬ್ಲಾಗ್ ಗಳಲ್ಲಿ ಬಂದಂತಹ ವಿಮರ್ಶೆಗಳನ್ನು ಓದಿದಾಗ, ಯಾರೂ ಭೈರಪ್ಪನವರ ಆಲೋಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ನನಗನ್ನಿಸಿತು. ಬಹುಶಃ ಮೊದಲಿಗೆ ವಿಮರ್ಶೆಗಳನ್ನು ಓದಿ, ನಂತರ ‘ಕವಲು’ ಓದಿದ ಕಾರಣವೋ ಏನೋ, ಈ ವಿಭಿನ್ನ ದೃಷ್ಟಿಕೋನ! 

ಯಾವಾಗಲೂ ಭೈರಪ್ಪನವರ ಕಾದಂಬರಿಗಳಲ್ಲಿ ಪಾತ್ರಗಳು ಒಂದು ಇಮೇಜ್ ಅನ್ನು ಕಟ್ಟಿಕೊಡುತ್ತವೆ. ನಾವು ಆ ಇಮೇಜ್ ಗಳಲ್ಲೇ ಇಡೀ ಕಾದಂಬರಿಯನ್ನು ಓದಿಕೊಂಡು ಹೋಗುತ್ತೇವೆ. ನಮಗೆ ಅದರಲ್ಲಿನ ಪಾತ್ರಗಳು ಬರೇಯ ಪಾತ್ರಗಳಾಗೇ ಉಳಿಯುವುದಿಲ್ಲ. ನಮ್ಮ ನಿಮ್ಮ ನಡುವೆ ಇರುವ ಹಾಗೇ ತೋರುತ್ತದೆ. ಕೆಲವೊಮ್ಮೆ ನಾವೇ ಆ ಪಾತ್ರಗಳಾದಂತೆ ಭಾಸವಾಗಿಬಿಡುತ್ತದೆ!. ಭೈರಪ್ಪನವರು ಅವರ ಕಾದಂಬರಿಗಳಲ್ಲಿ ತಾವೇ ಪಾತ್ರವಾಗಿ ಬರೆಯುತ್ತಾ ಹೋಗುತ್ತಾರೆ. ಹಾಗಾಗಿಯೇ ಅವರಿಗೆ ‘ಮಂಗಳೆ’ ‘ಇಳಾ’ ಯೂ ಸರಿ, ‘ಜಯಕುಮಾರ’ ‘ವಿನಯ’ ನೂ ಸರಿ ಎನಿಸುತ್ತದೆ. ಭೈರಪ್ಪನವರ ಕಾದಂಬರಿಗಳಲ್ಲಿ ಹೆಚ್ಚಾಗಿ ಯಾವಾಗಲೂ ಶೋಷಣೆಗೊಳಗಾದ / ಆಗುವ ‘ಅಬಲೆ’ ಹೆಣ್ಣು, ಶಕ್ತಿಯ ಪ್ರತೀಕದಂತೆ, ‘ಸಬಲೆ’ಯಂತೆ ಬಿಂಬಿತವಾಗುತ್ತಾಳೆ. ಹಾಗಾಗಿಯೇ ಇವರು ಸ್ತ್ರೀ ಪರ ‘ವಾದಿ’ ಎನಿಸುತ್ತಾರೆ. ಆದರೆ ‘ಕವಲು’ ನಲ್ಲಿ ಕಥೆ ಶುರುವಾಗುವುದು ‘ಸಬಲೆ’ ಹೆಣ್ಣಿನಿಂದ! ಇಲ್ಲಿ ಸಬಲೆ ಹೆಣ್ಣು (ಮಂಗಳಾ / ಇಳಾ) ಎಷ್ಟೇ ಕಾನೂನು / ಕಟ್ಟಳೆಗಳನ್ನು ತಮ್ಮ ಉಪಯೋಗಕ್ಕೆ ಬಳಸಿಕೊಂಡರೂ ಕೊನೆಗೆ ಶೋಷಿತರಾಗುವುದು, ‘ಅಬಲೆ’ಯರಾಗುವುದು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ! ಈ ಕಾದಂಬರಿಯಲ್ಲೂ ಕೂಡ ನನಗೆ ಭೈರಪ್ಪನವರು ‘ಸ್ತ್ರೀ ಪರ’ ಎಂದೇ ತೋರುತ್ತದೆ. ಭೈರಪ್ಪನವರು ಕೂಡ ಒಬ್ಬ ಫೆಮಿನಿಸ್ಟ್ ಎಂದೇ ಹೇಳಬಹುದು. 

ತಮ್ಮನ್ನು ತಾವೇ ಮಹಿಳಾವಾದಿಗಳೆಂದು ಕರೆದುಕೊಳ್ಳುವವರಿಗೆ ನನ್ನ ಪ್ರಶ್ನೆ "ಫೆಮಿನಿಸ್ಮ್’ ಎಂದರೇನು? ಪ್ರಸ್ತುತ ಸಮಾಜದಲ್ಲಿ ಸ್ತ್ರೀವಾದ ಎಂಬುದನ್ನು ಹೆಚ್ಚಿನ ಸ್ತ್ರೀವಾದಿಗಳು ತಪ್ಪಾಗಿ ಅರ್ಥೈಸಿಕೊಳ್ತಿದ್ದಾರೇನೋ ಎಂದೆನಿಸುತ್ತದೆ. ಇಲ್ಲಿ ಮಂಗಳೆಯ ‘ಬರಿ ಹಣೆ’, ಬರಿ ಕಿವಿ, ಬಳೆ ಇಲ್ಲ, ಸಲ್ವಾರ್ ಕಮೀಜ್, ವೈಧ್ಯವ್ಯ ಅಥವಾ ಸೂತಕದ ಕಳೆ ಹಾಗೂ ವೈಜಯಂತಿಯ ಕುಂಕುಮ, ಮಲ್ಲಿಗೆಹೂವು ಇವೆಲ್ಲವೂ ಈ ಕಾದಂಬರಿಯಲ್ಲಿ ಇದ್ದರೂ ಅದನ್ನು ಡಿಬೇಟ್ ಮಾಡಿ ಎಲ್ಲಾ ಸ್ತ್ರೀ ವಾದಿಗಳು ತಮಗೆ ಅದು ಅನ್ವಯಿಸಿದ್ದೆಂದು ಬೈಯುವುದು ಅನಾವಶ್ಯಕ! ಇದು ಒಂದು ಹೆಣ್ಣನ್ನು ಹೀಗೆ ಇರಬೇಕು, ಎಂದು ಜಯಕುಮಾರ್ ನೋಡುವ ಚಿತ್ರಣ ಅಷ್ಟೆ. ಈ ವಿಷಯಕ್ಕೆ ಹೆಚ್ಚಿನ ಗಮನ ಕೊಡುವ ಅವಶ್ಯಕತೆಯೇ ಇಲ್ಲ. ಮಂಗಳೆ, ಇಳಾ ಇವರೆಲ್ಲರೂ ಸ್ವಘೋಷಿತ ಮಹಾನ್ ಸ್ತ್ರೀವಾದಿಗಳು. ಎಲ್ಲಾ ಸ್ತ್ರೀ ಪರ ಕಾನೂನುಗಳನ್ನು ಅರೆದು ಕುಡಿದಿದ್ದೇವೆ, ಇದರ ಮೂಲಕ ಗಂಡಸರನ್ನು ಆಟ ಆಡಿಸಿ ಗೆಲ್ಲುತ್ತೇವೆ ಎನ್ನುವಂತಹವರು. ಇವರಿಗೆಲ್ಲಾ ತಾವು ಫೆಮಿನಿಸ್ಟ್ಸ್ ಎಂದು ಕರೆದುಕೊಳ್ಳುವ ಹಂಬಲವಷ್ಟೆ. ಸಮಾಜದಲ್ಲಿ ಸ್ತ್ರೀವಾದಿಗಳೆಂದು ಕರೆದುಕೊಂಡರೆ ಸಿಗುವ ಪ್ರತಿಷ್ಠೆ / ಕೀರ್ತಿಗಾಗಿ ಅದರ ಮುಖವಾಡ ಹಾಕಿಕೊಂಡಿರುವವರು. ಆದರೆ ಆಂತರ್ಯದಲ್ಲಿ ಎಲ್ಲಿಯೂ ಫೆಮಿನಿಸ್ಮ್ ಅನ್ನುವುದು ಇವರಲ್ಲಿ ಕಾಣುವುದೇ ಇಲ್ಲ. ತಮ್ಮ ಸ್ವಾರ್ಥಕ್ಕಾಗಿ ಈ ಕಾನೂನುಗಳನ್ನು ಬಳಸಿಕೊಳ್ಳುವಂತಹವರು. ಇವರನ್ನು ನಿಜವಾಗಿಯೂ ಮೋಸ ಮಾಡುವುದು ಯಾರು? ಅದೇ ಮುಖವಾಡ ಹಾಕಿಕೊಂಡಂತಹ ಹಾಗೂ ಅದೇ ಸ್ತ್ರೀ ಪರ ಕಾನೂನುಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಂತಹ, ಈ ಮೂಲಕ ಸ್ತ್ರೀಯರನ್ನು ಶೋಷಣೆ ಮಾಡುವ ‘ಸ್ತ್ರೀವಾದಿ’ಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಲಂಚ ತೆಗೆದುಕೊಳ್ಳುವ ಪೋಲೀಸ್ ಅಧಿಕಾರಿಣಿ, ಫೀಸ್ ತೆಗೆದುಕೊಳ್ಳುವ ಸ್ನೇಹಿತೆ ಲಾಯರ್ , ಕೆಲಸ ಮಾಡಿಸಿಕೊಂಡು ರೇಪ್ ಮಾಡುವ ಮತ್ತೊಬ್ಬ ಸ್ತ್ರೀವಾದಿ ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ಈ ಸ್ವಘೋಷಿತ ಸ್ತ್ರೀವಾದಿಗಳು (ಇಳಾ, ಮಂಗಳೆ), ಇಷ್ಟೆಲ್ಲಾ ಸ್ತ್ರೀ ಪರ ಕಾನೂನುಗಳು ಇದ್ದರೂ ಗೆಲ್ಲಲಾಯಿತೇ? ಕೊನೆಗೂ ಇವರನ್ನು ಗಂಡಸರು ತಮ್ಮ ಹಣ / ಜಾಣತನದಿಂದ ಇದೇ ಕಾನೂನಿನ ಹುಳುಕುಗಳನ್ನು ಹಿಡಿದು ಶೋಷಣೆ ಮಾಡುತ್ತಾರೆ (೨ನೇ ಮದುವೆಯಾಗುವುದು ಸಲ್ಲ, ಹಾಗೇ ಹೀಗೇ). ಇದು ಮೇಲ್ನೋಟಕ್ಕ ಗೊತ್ತಾಗುವುದೇ ಇಲ್ಲ. ನಮ್ಮ ದೇಶದಲ್ಲಿ ಭ್ರಷ್ಟಚಾರ ಇರುವ ತನಕ ಯಾವುದೇ ಕಾನೂನು ಕಟ್ಟಳೆ ಮಾಡಿದರೂ ಯಾರೂ ಬೇಕಾದರೂ ತಪ್ಪಿಸಿಕೊಂಡುಬಿಡಬಹುದೆಂದು ಸೂಚ್ಯವಾಗಿ ಭೈರಪ್ಪನವರು ಹೇಳುತ್ತಾರೆ. 

‘ಕವಲು’ ನಲ್ಲಿ ನನಗೆ ನಿಜವಾದ ಫೆಮಿನಿಸ್ಟ್ ಅನ್ನಿಸಿದ್ದು ‘ವೈಜಯಂತಿ’. ಕುಂಕುಮ, ಮಲ್ಲಿಗೆ ಹೂವು ಮುಡಿದಾಕ್ಷಣ ಆಕೆ ಫೆಮಿನಿಸ್ಟ್ ಅಲ್ಲಾ ಎನ್ನುವುದು ನನಗೆ ಹಾಸ್ಯಾಸ್ಪದವಾಗಿ ತೋರುತ್ತದೆ. ತನ್ನ ಹುಳುಕುಗಳನ್ನು ಎಲ್ಲಿಯೂ ಗಂಡನಿಗೆ ಬಿಟ್ಟುಕೊಡದ ಈಕೆ ಮನೆಯಲ್ಲಿ, ಫ್ಯಾಕ್ಟರಿಯಲ್ಲಿ, ಮಗಳನ್ನು ಬೆಳೆಸುವಲ್ಲಿ ಎಲ್ಲೆಲ್ಲಿಯೂ ಕಾಣಿಸಿಬಿಡುತ್ತಾಳೆ. ಗಂಡನಿಗೆ ಇದು ತಿಳಿಯುವುದೇ ಇಲ್ಲ. ಜಯಕುಮಾರ್ ನನ್ನು ಮಂಗಳೆ ಗಿಂತ ಹೆಚ್ಚಾಗಿ ಶೋಷಣೆ ಮಾಡುವುದು ನನ್ನ ಪ್ರಕಾರ ವೈಜಯಂತಿ. ಈಕೆಯ ಮುಂದೆ ಅವನು ಡಮ್ಮಿಯಾಗಿಬಿಡ್ತಾನೆ. ಅವನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ. ಹಾಗಾಗಿಯೇ ಆಕೆ ಸತ್ತ ನಂತರ, ಆತನ ಫ್ಯಾಕ್ಟರಿ ಮುಚ್ಚಿ ಹೋಗಿಬಿಡುತ್ತದೆ. ಇದೇ ವೈಜಯಂತಿ ಬದುಕಿದ್ದರೆ ಫ್ಯಾಕ್ಟರಿ ಚೆನ್ನಾಗಿ ಇರುತ್ತಿತ್ತು, ಮಗಳನ್ನು ಚೆನ್ನಾಗಿ ಓದಿಸುತ್ತಿದ್ದಳು, ಜಯಕುಮಾರ್ ಇಷ್ಟು ಹಾಳಾಗುತ್ತಿರಲಿಲ್ಲ ಎಂಬಂತಹ ಶಾಶ್ವತ ಫೀಲಿಂಗ್ ಅನ್ನು ಹುಟ್ಟಿಸಿಬಿಡುತ್ತಾಳೆ. ಈ ಮೂಲಕ ನಿಜವಾದ ಫೆಮಿನಿಸ್ಮ್ ಅನ್ನು ಎತ್ತಿ ಹಿಡಿಯುತ್ತಾಳೆ. ಜಯಕುಮಾರ್ ನ ಜೀವನದ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ನೆನಪಾಗಿ ಕಾಡುತ್ತಾಳೆ. ಆತ ಎರಡನೇ ಮದುವೆಯಾದರೂ, ಇವಳ ನೆನಪಿನಲ್ಲೇ ಕೊರಗುವಂತೆ ಮಾಡಿಬಿಡುತ್ತಾಳೆ.

4 comments:

  1. Replies
    1. ಧನ್ಯವಾದಗಳು :-) ನಿಮ್ಮ ಕಮೆಂಟಿನಿಂದಾಗಿ ನಿಮ್ಮ ಬ್ಲಾಗ್ ಓದುವ ಅವಕಾಶ ಸಿಕ್ಕಿತು!

      Delete
  2. ಮಸ್ತ್ ಬರಹ . ವಿಭಿನ್ನ ದೃಷ್ಟಿ

    ReplyDelete