Monday, August 27, 2012

ಅಮು ಮತ್ತು ಪರ್ಜಾನಿಯಾ ಚಿತ್ರಗಳು



ಪುಸ್ತಕಗಳಂತೆಯೇ ನಾನು ನೋಡಬೇಕಾಗಿರುವ ಸಿನೆಮಾಗಳ ಪಟ್ಟಿಯೂ ಬಹಳ ದೊಡ್ಡದೇ ಇದೆ. ಅದರಲ್ಲೂ ವಿವಾದಗಳ ಸುತ್ತ ಚಿತ್ರಣಗೊಂಡಿರುವ ಸಿನೆಮಾಗಳೆಂದರೆ ನನಗೆ ಸ್ವಲ್ಪ ಆಸಕ್ತಿ ಹೆಚ್ಚು. ಭಾರತದಲ್ಲಿ ಕೋಮುಗಲಭೆಯೋ ಅಥವಾ ಜನರಲ್ಲಿ ಆತಂಕ ಹುಟ್ಟಿಸಬಹುದೆಂದೂ ಸರಕಾರ ಬಹಿಷ್ಕರಿಸಿರುವ ಸಿನೆಮಾಗಳು, ಇನ್ನೂ ಕೆಲವು ಸಿನೆಮಾಗಳು ಡಿವಿಡಿಗಾಗಿಯೇ ತಯಾರಾಗಿರುವುದು (ಅಂದರೆ ಮನೆಯಲ್ಲಿ ಕುಳಿತು ಡಿವಿಡಿ ನೋಡುವ ಪ್ರೇಕ್ಷಕ ವರ್ಗಕ್ಕಾಗಿ), ಮತ್ತೆ ಕೆಲವು ಸಿನೆಮಾಗಳು ವಿದೇಶದಲ್ಲಿ ತಯಾರಾಗಿ ಅಲ್ಲಿಯೇ ಪ್ರದರ್ಶಿತಗೊಂಡಿರುವಂತಹದ್ದು (ಮುಖ್ಯವಾಗಿ ಕೊರಿಯಾದ ಸಿನೆಮಾಗಳು). ಇಂತಹ ಸಿನೆಮಾಗಳೆಂದರೆ ನನಗೇನೋ ಆಕರ್ಷಣೆ, ನನ್ನನ್ನು ಬಹುವಾಗಿ ಸೆಳೆಯುತ್ತವೆ. ಅದೇನೂ ಕಾಕತಾಳೀಯವೋ ಗೊತ್ತಿಲ್ಲ, ಈ ವಾರ ನೋಡಿದ ೨ ಸಿನೆಮಾಗಳಲ್ಲಿಯೂ ಸಾಮ್ಯತೆ ಬಹಳವಿತ್ತು. . 

ಒಂದು ಸಿನೆಮಾದಲ್ಲಿ ಇಂದಿರಾಗಾಂಧಿ ಹತ್ಯೆಯಾದಾಗ ನಡೆದ ಕೋಮು ಘರ್ಷಣೆಯ ಸಂದರ್ಭದ ತುಮುಲಗಳನ್ನೂ ಚಿತ್ರಿಸಿದ್ದರೆ, ಇನ್ನೊಂದರಲ್ಲಿ ಗೋಧ್ರಾ ಘಟನೆಯಾದ ಮೇಲೆ ಗುಜರಾತಿನಲ್ಲಿ ನಡೆದ ಕೋಮು ಗಲಭೆಯ ಚಿತ್ರಣ!. ಒಂದರಲ್ಲಿ ತಾಯಿ, ತಮ್ಮ, ತಂದೆಯನ್ನು ಕಳೆದುಕೊಂಡ ಮುಗ್ಧ ಹುಡುಗಿಯ ಮಾನಸಿಕ ಸಂಘರ್ಷ, ಮತ್ತೊಂದರಲ್ಲಿ ಮಗನನ್ನು ಕಳೆದುಕೊಂಡ ತಂದೆ, ತಾಯಿಯ ಸಂಕಟ! ಎರಡು ಸಿನೆಮಾಗಳಲ್ಲೂ ನಮ್ಮ ರಾಜಕಾರಣಿಗಳ ಭ್ರಷ್ಠತೆ, ಪೋಲಿಸ್ ಅಧಿಕಾರಿಗಳ ಅದಕ್ಷತೆ, ಸಾಮಾನ್ಯ ಜನರ ಅಸಹಾಯಕತೆ ಬಹಳ ಮನೋಜ್ನವಾಗಿ ಮೂಡಿಬಂದಿದೆ. ೧೯೮೪ರಲ್ಲಿ ಇಂದಿರಾಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ಮೇಲೆ ನಡೆದ ಕೋಮುಗಲಭೆ, ಸಾವಿರಾರು ಮುಗ್ಧ ಸಿಖ್ ರನ್ನು ಕೊಂದ ಘಟನೆಯ ಸುತ್ತ ನಡೆಯುವ ಚಿತ್ರಣದ ಸಿನೆಮಾದ ಈ ಹೆಸರು ‘ಅಮು’. ಮುಖ್ಯ ಪಾತ್ರದಲ್ಲಿ ನಟಿಸಿರುವ ಕೊಂಕಣ ಸೇನ್ ಈ ಸಿನೆಮಾದಲ್ಲಿ ೨೦ ವರ್ಷ ವಯಸ್ಸಿನ ಯುವತಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿದೇಶದಲ್ಲಿ ತಾಯಿಯೊಂದಿಗೆ ಬೆಳೆಯುವ ಆಕೆ, ತಾನೊಬ್ಬ ದತ್ತು ಮಗಳೆಂದು ತಿಳಿದಾಗ ತನ್ನ ಬೇರುಗಳನ್ನು ತಿಳಿಯಲು ಭಾರತಕ್ಕೆ ಬರುತ್ತಾಳೆ. ಅಲ್ಲಿನ ಸ್ಲಮ್ ವೊಂದಕ್ಕೆ ಭೇಟಿ ನೀಡಿದಾಗ, ಅದೇನೋ ಅಲ್ಲಿನ ಜನರೊಟ್ಟಿಗೆ ಅವಳಿಗೆ ಬಾಂಧವ್ಯ ಬೆಳೆಯುತ್ತದೆ. ಅವಳಿಗೆ ಆ ಸ್ಲಮ್ ನ ಪ್ರತಿಯೊಂದು ಭಾಗವೂ ಚಿರಪರಿಚಿತದಂತೆ ಭಾಸವಾಗುತ್ತದೆ. ಮಗಳನ್ನು ಬಿಟ್ಟಿರಲಾಗದೆ ತಾಯಿ ಕೂಡ ಭಾರತಕ್ಕೆ ಬಂದುಬಿಟ್ಟಾಗ, ಬಾರಿಬಾರಿಗೂ ಅಮ್ಮನನ್ನು ತನ್ನ ಮೂಲದ ಬಗ್ಗೆ ಕೇಳುತ್ತಾಳೆ. ಆದರೆ ಅಮ್ಮನ ನಿರಾಕರಣೆಯಿಂದ ಬೇಸತ್ತ ಅವಳಿಗೆ ಸಹಕಾರ ನೀಡಲು ಗೆಳೆಯನೊಬ್ಬ ದೊರಕುತ್ತಾನೆ. ಆತನ ತಂದೆಯೊಬ್ಬ ಪ್ರತಿಷ್ಠಿತ ಅಧಿಕಾರಿ. ತಾಯಿ ಈಕೆಗೆ ೧೯೮೧ ರಲ್ಲಿ ಸಾಂಕ್ರಮಿಕ ರೋಗದಿಂದಾಗಿ ಹೆತ್ತ ತಂದೆ, ತಾಯಿ ಸತ್ತಿದ್ದರೆಂದು ಹೇಳಿರುತ್ತಾಳೆ. ಆದರೆ ಅದು ಸುಳ್ಳೆಂದು, ಆಗ ಯಾವುದೇ ಸಾಂಕ್ರಮಿಕ ರೋಗವು ಹರಡಿರಲಿಲ್ಲವೆಂದು ಗೆಳೆಯನ ತಂದೆಯಿಂದಾಗಿ ಅಮು ವಿಗೆ ಗೊತ್ತಾಗುತ್ತದೆ. ದತ್ತು ತಾಯಿ ತನಗೇಕೆ ಸುಳ್ಳು ಹೇಳಿದಳೆಂದು ಮಾನಸಿಕ ತುಮುಲಕ್ಕೆ ಒಳಗಾಗುವ ಅಮು, ಸತ್ಯ ಕಂಡು ಹಿಡಿಯಲು ಮುಂದಾಗುತ್ತಾಳೆ. ಹುಡುಕುತ್ತಾ ಹೋದಂತೆ ಸತ್ಯ ತೆರೆಯುತ್ತಾ ಹೋಗುತ್ತದೆ. ಸುಖೀ ಸಿಖ್ ಕುಟುಂಬದಲ್ಲಿ ಹುಟ್ಟಿದ್ದ ಅಮುವಿಗೆ ಕೋಮು ಗಲಭೆಯಾದಾಗ ಸುಮಾರು ೪-೫ ವರ್ಷ, ಆಕೆಗೊಬ್ಬ ೨ ವರ್ಷದ ತಮ್ಮ! ತಮ್ಮ ಪಾಡಿಗೆ ಮನೆಯಲ್ಲಿದ್ದ ಸಿಖ್ ರನ್ನು, ಟ್ರೈನ್ ನಲ್ಲಿದ್ದವರನ್ನೂ, ಗಲಭೆಗೆ ಬೆದರಿ ಅಡಗಿಕೊಂಡಿದ್ದವರನ್ನೂ ದುಷ್ಕರ್ಮಿಗಳು ಹುಡುಕಿ ಹುಡುಕಿ ಸಾಯಿಸುವ ದೃಶ್ಯಗಳು ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ. ಇವರಿಗೆ ಪೋಲಿಸ್ ಹಾಗೂ ಸರ್ಕಾರದ ಸಹಕಾರ! ಗಂಡ ಮತ್ತು ಚಿಕ್ಕ ಮಗನನ್ನು ಕಳೆದುಕೊಂಡ ಅಮು ಳ ತಾಯಿ ಹಾಗೂ ಅಮು ಇಬ್ಬರೂ ಪರಿಶ್ರಿತ ತಾಣದಲ್ಲಿ ಸಮಾಜ ಸೇವಕಿಯೊಬ್ಬಳನ್ನು ಭೇಟಿಯಾಗುತ್ತಾರೆ. ಇವರ ನಡುವೆ ಬಾಂಧವ್ಯವೊಂದು ಬೆಳೆಯುತ್ತದೆ. ಗಂಡ, ಮಗನನ್ನು ಬಚಾವ್ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಖಿನ್ನತೆಯಲ್ಲಿ ಬಳಲುವ ಅಮು ಳ ತಾಯಿ ‘ಅಮು’ ಳನ್ನು ಈ ಸಮಾಜ ಸೇವಕಿಗೆ ಒಪ್ಪಿಸಿ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅಮು ಎಲ್ಲವನ್ನೂ ಮರೆಯಬೇಕೆಂದು ಆಕೆಯ ದತ್ತು ತಾಯಿ ವಿದೇಶಕ್ಕೆ ಹೋಗಿ ನೆಲೆಸುತ್ತಾಳೆ. ಪೂರ್ತಿ ಚಿತ್ರ ನೋಡಿದ ಮೇಲೆ ನನಗೇಕೋ ಈ ಸಿನೆಮಾ ಸ್ವಲ್ಪ ಅಪೂರ್ಣವಾಗಿದೆಯೆಂದೆನಿಸಿತು. ಕಾರಣ ಮಾತ್ರ ಗೊತ್ತಾಗಲಿಲ್ಲ.

ಸುಮಾರು ೨೦೦೦ ಸಿಖ್ ಕುಟುಂಬಗಳು ಅಂದಿನ ಗಲಭೆಯಲ್ಲಿ ನೋವನ್ನನುಭವಿಸಿದ್ದಾರೆಂದು ಈ ಚಲನಚಿತ್ರದಲ್ಲಿ ಹೇಳುತ್ತಾರೆ. ಸರ್ಕಾರದ ಸಹಕಾರ ಈ ದುಷ್ಕರ್ಮಿಗಳಿಗೆ ಇತ್ತೆನ್ನುವ ಕಾರಣಕ್ಕಾಗಿಯೋ ಏನೋ ಗೊತ್ತಿಲ್ಲ, ಭಾರತದಲ್ಲಿ ಈ ಚಿತ್ರವನ್ನು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲು ಸರ್ಕಾರ ನಿಷೇಧಿಸಿತ್ತು!

ಇನ್ನೊಂದು ಚಿತ್ರ ‘ಪರ್ಝಾನಿಯ’. ಇದು ಗೋಧ್ರಾ ಘಟನೆಯ ನಂತರ ಗುಜರಾತಿನಲ್ಲಾದ ಗಲಭೆಯಲ್ಲಿ ನಡೆದ ಸತ್ಯ ಘಟನೆಯಾಧಾರಿತ ನಿರ್ಮಿತವಾದ ಸಿನೆಮಾವಂತೆ. ಈ ಚಿತ್ರದಲ್ಲೂ ಗಲಭೆಗೆ ಪೋಲಿಸ್ ಹಾಗು ಸರ್ಕಾರದ ಸಹಾಯವಿತ್ತು ಎಂದು ತೋರಿಸಿದ್ದಾರೆ. ಬಹುಶಃ ಇದಕ್ಕಾಗಿಯೇ ಏನೋ ಇದನ್ನು ಗುಜರಾತಿನಲ್ಲಿ ನಿಷೇಧಿಸಿದ್ದರಂತೆ. ಬಹುತೇಕ ಮುಸ್ಲಿಮ್ ಜನರೇ ಇರುವ ಕಾಲೋನಿಯಲ್ಲಿ ನೆಲೆಸಿರುವ ಒಂದು ಪಾರ್ಸಿ ಕುಟುಂಬ. ನಸಿರುದ್ದೀನ್ ಷಾ, ಸಾರಿಕಾ ಹಾಗೂ ಇಬ್ಬರು ಪುಟ್ಟ ಮಕ್ಕಳು ಪಾತ್ರಕ್ಕೆ ಜೀವ ತುಂಬಿದ್ದಾರೆ. ಮತ್ತೊಂದು ಪಾತ್ರ ವಿದೇಶಿಯನದು. ಆತ ತನ್ನ ಮನಶ್ಯಾಂತಿಗಾಗಿ ಭಾರತವನ್ನು, ಗಾಂಧೀಜಿಯವರ ಆದರ್ಶಗಳಿಗೆ ಮಾರು ಹೋಗಿ ಗುಜರಾತಿನಲ್ಲಿ ಬಂದು ಬಂದು ನೆಲೆಸಿರುತ್ತಾನೆ. ಈತ ಷಾ ನ ಗೆಳೆಯನಾಗುತ್ತಾನೆ. ಗೋಧ್ರಾ ಘಟನೆಯ ನಂತರ ಉದ್ರೇಕಿತ ಹಿಂದೂ ಜನರು ಮುಸ್ಲಿಮ್ ರನ್ನು ಹುಡುಕಿ ಕೊಲ್ಲುವ ಅನಾಗರೀಕ ವರ್ತನೆ! ಪೋಲಿಸರು ಈ ಕಾಲೋನಿಗೆ ಬಂದು ನಿಮಗೆಲ್ಲರಿಗೂ ರಕ್ಷಣೆ ಕೊಡುತ್ತಿದ್ದೇವೆ, ಯಾರೂ ಕೂಡ ಹೊರಗೆ ಬರಬೇಡಿ ಎಂದು ಹೇಳಿ ಹೋಗಿ, ದುಷ್ಕರ್ಮಿಗಳಿಗೆ ಈ ಕಾಲೋನಿಯನ್ನು ತೋರಿಸುತ್ತಾರೆ!. ಉದ್ರೇಕಿತರ ಅಮಾನವೀಯ ವರ್ತನೆ ನಿಜವಾಗಲೂ ಅಸಹ್ಯ ಬರಿಸುತ್ತದೆ. ಇಡೀ ಕಾಲೋನಿಗೆ ಬೆಂಕಿ ಹಚ್ಚುತ್ತಾರೆ ಹಾಗೂ ಸಾರಿಕಾ ತಾನು ಪಾರ್ಸಿಯೆಂದರೂ ಬಿಡದೆ ಬೆಂಬತ್ತುವವರನ್ನು ನೋಡಿ ಬೆದರಿದ ಆಕೆ ಅಲ್ಲಿಂದ ಓಡಿಹೋಗುವಾಗ ತನ್ನ ಮಗನನ್ನು ಕಳೆದುಕೊಳ್ಳುತ್ತಾಳೆ. ಗಂಡನ ಗೆಳೆಯನೇ ಪೋಲೀಸ್ ಅಧಿಕಾರಿಯಾಗಿದ್ದರೂ, ಆತ ಸರ್ಕಾರದ ಆದೇಶವಿದ್ದ ಕಾರಣ ಇವರಿಗೆ ಸಹಾಯ ಮಾಡುವುದಿಲ್ಲ. ಮನೆ, ಮಗನನ್ನು ಕಳೆದುಕೊಂಡ ದಂಪತಿಗಳು, ತಮ್ಮ ಪುತ್ರಿಯೊಂದಿಗೆ ಸಂತ್ರಸ್ತ್ರರ ತಾಣದಲ್ಲಿ ಬಂದು ನೆಲೆಸುತ್ತಾರೆ. ಈ ಗಲಭೆಗಳನ್ನೆಲ್ಲಾ ನೋಡಿ ಹತಾಷಗೊಂಡ ವಿದೇಶಿಯನಿಗೆ, ಆತನ ಮಾರ್ಗದರ್ಶಿ ಸಂತ್ರಸ್ತ್ರರನ್ನು ಸಂತ್ಯೈಸುವಂತೆ ಹಾಗೂ ಹೇಳಿಕೊಡುತ್ತಾನೆ. ನಿರಾಶ್ರಿತರ ತಾಣದಲ್ಲಿ ತನ್ನ ಗೆಳೆಯನನ್ನು ಕಂಡ ಆತ ಅವರನ್ನು ತನ್ನ ಮನೆಗೆ ಕರೆದು ತರುತ್ತಾನೆ. ಪ್ರತಿ ಬಾರಿಯೂ ಪೋಲೀಸ್ ರಿಂದ ತಮ್ಮ ಮಗನ ದೇಹ ಸಿಕ್ಕಿದೆ ಎಂಬ ಕರೆ ಬಂದಾಗ ಆತಂಕದಲ್ಲಿ ಹೋಗುವ ದಂಪತಿಯೂ, ಮೃತದೇಹ ಮಗನದ್ದಲ್ಲ ಅಂದಾಗ ನಿಟ್ಟುಸಿರುಬಿಡುತ್ತಾ, ಮಗದೊಮ್ಮೆ ತಮ್ಮ ಮಗನೆಲ್ಲಿರಬಹುದೆಂದು ಚಿಂತಿಸುವ ಪರಿ ನಮ್ಮಲ್ಲೂ ಪರ್ಝಾನ್ ಬದುಕಿರಲಿ ಎಂದು ಆಶಿಸುತ್ತದೆ. ಈ ದಂಪತಿಗಳ ಹಾಗೂ ವಿದೇಶಿಯ, ಜೊತೆಗೆ ಸಂತ್ರಸ್ತರ ಇದೆಲ್ಲದರ ನಡುವೆ ಇನ್ನೊಂದು ಕಡೆ ನೊಂದ ಮುಸ್ಲಿಮ್ ಜನರು ಪ್ರತೀಕಾರಕ್ಕಾಗಿ ಹಿಂದೂ ಜನರನ್ನು ಕೊಲ್ಲಲು ಯೋಜಿಸುತ್ತಿದ್ದಾಗ ಆ ಗುಂಪಿನ ನಾಯಕನ ಹೆಂಡತಿ ಹೇಳುವ ಮಾತು, ಹಗೆ ಸಾಧಿಸುವ ಪ್ರತಿಯೊಬ್ಬರಿಗೂ ಪಾಠದಂತಿದೆ! ಆಕೆಯನ್ನು ಹಿಂದೂವೊಬ್ಬ ಕಾಪಾಡಿರುತ್ತಾನೆ. ಅವಳು ತನ್ನ ಗಂಡನಿಗೆ ಮುಗ್ಧರ ವಿರುದ್ಧ ಹಗೆ ತೀರಿಸಿಕೊಳ್ಳುವುದಕ್ಕಿಂತ, ತಮ್ಮನ್ನು ಈ ಸ್ಥಿತಿಗೆ ತಂದವರ ವಿರುದ್ಧ ಸಾಕ್ಷಿ ಹೇಳಲು ಪ್ರೇರೆಪಿಸುತ್ತಾಳೆ. ಅವಳಿಂದಾಗಿ ಎಲ್ಲರೂ ದುಷ್ಕರ್ಮಿಗಳ ವಿರುದ್ಧ ಸಾಕ್ಷಿ ಹೇಳುವಂತಾಗಿ ಅವರು ಶಿಕ್ಷೆ ಅನುಭವಿಸುತ್ತಾರೆ. ಆದರೆ ಈ ದಂಪತಿಗಳಿಗೆ ಮಾತ್ರ ಮಗ ಸಿಗುವುದೇ ಇಲ್ಲ!. 

ಎರಡು ಚಿತ್ರಗಳನ್ನೂ ನೋಡಿದಾಗ ಮನಸ್ಸಿಗೆ ಹಿಂಸೆಯಾದರೂ, ಅದಕ್ಕಿಂತಲೂ ನನಗೆ ಬೇಸರವಾಗಿದ್ದೇನೆಂದರೆ ಎರಡು ಸಿನೆಮಾಗಳಲ್ಲೂ ತಮಗಾಗಿ ಬದುಕುಳಿದಿದ್ದ ಪುತ್ರಿಯ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ. ಕಳೆದುಕೊಂಡ ಜೀವ, ಜೀವನದ ಚಿಂತೆಯಲ್ಲಿ, ನಮಗಾಗಿ ಬದುಕುಳಿದ ಜೀವದ ಬಗ್ಗೆ ನಾವ್ಯಾಕೆ ಕಾಳಜಿ ವಹಿಸುವುದಿಲ್ಲ ಎಂಬುದು ಮನಸ್ಸನ್ನು ಬಹಳ ಕಾಡತೊಡಗಿತು. ‘ಇರದುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ’ ಎಂಬ ಕಹಿ ಸತ್ಯದ ಅರಿವಾಗತೊಡಗಿತು.

No comments:

Post a Comment